ಮಂಗಳವಾರ, ಅಕ್ಟೋಬರ್ 13, 2015

೨೦೦೮ ರ ಸಾಲಿನಲ್ಲಿ ನೀಡಿದ ಅರಳು ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸಿದ್ದು ಯಾಕಾಗಿ?

ಸಂಗಾತಿಗಳೆ,
ಅರಳು ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ.
-ಅರುಣ್ ಜೋಳದಕೂಡ್ಲಿಗಿ.

ಇಂದ,
ಅರುಣ್ ಜೋಳದಕೂಡ್ಲಿಗಿ
ಪೋಸ್ಟ್ ಡಾಕ್ಟರಲ್ ಫೆಲೋ
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿದ್ಯಾರಣ್ಯ-೫೮೩೨೭೬
ಹೊಸಪೇಟೆ ತಾ. ಬಳ್ಳಾರಿ ಜಿ.
ಮೊ:೯೯೦೧೪೪೫೭೦೨

ಇವರಿಗೆ,
ಪುಂಡಲೀಕ ಹಾಲಂಬಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ, ಬೆಂಗಳೂರು-೫೬೦೦೧೮


ಮಾನ್ಯರೆ,

ವಿಷಯ: ೨೦೦೮ ರ ಸಾಲಿನಲ್ಲಿ ನೀಡಿದ ಅರಳು ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸುವ ಬಗ್ಗೆ.


ದೇಶವ್ಯಾಪಿ ಕರ್ನಾಟಕದ ಹಿರಿಯ ಸಂಶೋಧಕರಾದ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹನೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದ ಪ್ರಶಸ್ತಿಗಳನ್ನು ಸಾಹಿತಿಗಳು ಚಿಂತಕರು ದೇಶದ್ಯಾಂತ ಹಿಂತಿರುಗಿಸುತ್ತಿದ್ದಾರೆ. ಸತ್ಯಾಗ್ರಹ, ಧರಣಿಯನ್ನು ಒಳಗೊಂಡಂತೆ ಚಳವಳಿಯ ಹಲವು ರೂಪಗಳಲ್ಲಿ ಪ್ರಭುತ್ವದ ನೀತಿಗಳನ್ನು ವಿರೋಧಿಸಿ ಪ್ರಭುತ್ವ ನೀಡಿದ ಗೌರವಗಳನ್ನೂ ಪ್ರಶಸ್ತಿಗಳನ್ನೂ ಬಹಿಷ್ಕರಿಸುವುದೂ ಕೂಡ ಚಳವಳಿಯ ಒಂದು ಕ್ರಮವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ಮತ್ತು ಪ್ರಭುತ್ವದ ಪರವಾದ ಶಕ್ತಿಗಳು ಈ ಕ್ರಮವನ್ನು ಸಮೂಹ ಸನ್ನಿ ಎಂದು ನಕಾರಾತ್ಮಕವಾಗಿ ಸಿನಿಕತೆಯಿಂದ ಟೀಕಿಸುತ್ತಿವೆ. ಆದರೆ ನಿಜದಲ್ಲಿ ಈ ಪ್ರಕ್ರಿಯೆ ಸಮೂಹ ಸನ್ನಿಯಾಗಿರದೆ, ಪ್ರತಿರೋಧವಾಗಿಯೂ ಚಳವಳಿಯ ಭಾಗವಾಗಿಯೂ ನಡೆಯುತ್ತಿದೆ.


ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಕೌಟುಂಬಿಕ ಕಾರಣಕ್ಕಲ್ಲದೆ ಮತೀಯ ಕಾರಣಕ್ಕೆ ನಡೆದಿದೆ ಎಂದು ಸಿ.ಐ.ಡಿ ತಿಳಿಸಿದೆ. ಇಂತಹ ಮತೀಯ ಕಾರಣಕ್ಕಾಗಿಯೇ ದಾದ್ರಿಯಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯ ಹತ್ಯೆ ನಡೆದಿದೆ. ಹೀಗೆ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ಮತೀಯ ಗುಂಪುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ತೋರುವ ದಿವ್ಯ ನಿರ್ಲಕ್ಷವು ಎದ್ದು ಕಾಣುತ್ತಿದೆ. ಉತ್ತರ ಪ್ರದೇಶದ ಲಕ್ನೋ ಸಮೀಪದ ಗೌತಮಬುದ್ಧ ನಗರದಲ್ಲಿ ದಲಿತ ಕುಟುಂಬವನ್ನು ವಿವಸ್ತ್ರಗೊಳಿಸುವ ದರ್ಪವನ್ನು ಪೋಲೀಸ್ ಇಲಾಖೆ ತೋರಿರುವುದು ಅಮಾನವೀಯವಾಗಿದೆ. ಈಚೆಗೆ ದಲಿತ ಸಮುದಾಯದ ಮೇಲೆ ನಿರಂತರ ಹಲ್ಲೆಗಳು ಸರಣಿರೂಪದಲ್ಲಿ ಘಟಿಸುತ್ತಿವೆ. ರಾಜ್ಯ ಮತ್ತು ದೇಶದಲ್ಲಿ ನಿರಂತರವಾಗಿ ಸಾಮಾನ್ಯ ಸುದ್ದಿಯಂತೆ ವರದಿಯಾಗುತ್ತಿರುವ ರೈತರ ಆತ್ಮಹತ್ಯೆಗಳಿಗೆ ನೇರವಾಗಿ ಪ್ರಭುತ್ವದ ರೈತ ವಿರೋಧಿ ನೀತಿಗಳೆ ಕಾರಣವಾಗಿವೆ. ಈ ಬಗೆಯ ಎಲ್ಲಾ ನಡೆಗಳನ್ನು ವಿರೋಧಿಸುವುದು, ಈ ವಿರೋಧದ ಸಂಕೇತವಾಗಿ ಪ್ರಭುತ್ವದ ಪ್ರಶಸ್ತಿಯನ್ನು ಹಿಂತಿರುಗಿಸುವುದು ಚಳವಳಿಯ ಭಾಗವಾಗಿದೆ.

ಇಂತಹ ಚಳವಳಿಯ ಜತೆ ಕೈಜೋಡಿಸುವ ಆಶಯದೊಂದಿಗೆ ಈ ಪ್ರತಿರೋಧದ ಧ್ವನಿಯನ್ನು ದೊಡ್ಡದಾಗಿಸುವ ಮತ್ತು ಜನಾಭಿಪ್ರಾಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಜೀವಪರ ಸಾಹಿತಿಗಳು ಈ ಚಳವಳಿಯ ಜೊತೆಗೂಡುವ ಅಗತ್ಯವಿದೆ. ಹಾಗಾಗಿ ಈ ಚಳವಳಿಯ ಜತೆಗಾರನಾಗುವುದು ಒಬ್ಬ ಲೇಖಕನಾಗಿ ನನ್ನ ಜವಾಬ್ದಾರಿ ಎಂದು ಭಾವಿಸಿ, ವಯಕ್ತಿಕವಾಗಿ ನಾನು ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಸಕಾಲಿಕವಾದದ್ದು ಎನ್ನುವ ಖಚಿತ ನಿಲುವಿನೊಂದಿಗೆ ಈ ಅರಳು ಪ್ರಶಸ್ತಿಯನ್ನು ಹಿಂತಿರುಗಿಸುವ ನಿರ್ಧಾರಕ್ಕೆ ಬಂದಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಬಾರಿಗೆ ೨೦೦೮ ರಲ್ಲಿ ನೃಪತುಂಗ ಪ್ರಶಸ್ತಿಯ ಜೊತೆಗೆ ೩೫ ವರ್ಷದ ಒಳಗಿನ ಯುವ ಸಾಹಿತಿಗಳಿಗೆ ಅರಳು ಪ್ರಶಸ್ತಿ ನೀಡಲು ಆರಂಭಿಸಿತು. ಆಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪ್ರಸಾರಾಂಗವು ೨೦೦೮ ರಲ್ಲಿ ಪ್ರಕಟಿಸಿದ ನನ್ನ ಸಂಶೋಧನೆಯಾದ `ಸಂಡೂರು ಭೂಹೋರಾಟ' ಎನ್ನುವ ಕೃತಿಗೆ ೨೦೦೮ ನೇ ಸಾಲಿನ `ಅರಳು ಸಾಹಿತ್ಯ' ಪ್ರಶಸ್ತಿಯನ್ನು ನೀಡಿತ್ತು. ಮೂಲತಃ ಒಂದು ರೈತ ಹೋರಾಟದ ಕುರಿತ ಸಂಶೋಧನೆಗೆ ಈ ಪ್ರಶಸ್ತಿಯು ಬಂದ ಕಾರಣ, ಪ್ರಭುತ್ವ ಕೊಡಮಾಡಿದ ಪ್ರಶಸ್ತಿಯನ್ನು ಹಿಂತಿರುಗಿಸುವಿಕೆಯೂ ಚಳವಳಿಯ ರೂಪು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಹಿಂತಿರುಗಿಸುವುದು ಹೆಚ್ಚು ಅರ್ಥಪೂರ್ಣ ಎಂದು ಭಾವಿಸಿದ್ದೇನೆ.

ಚೆಕ್ ಸಂಖ್ಯೆ: 096951
CANARA BANK, IFSC:CNRB0000698
ರೂ. ೧೦೦೦೦/- (ಹತ್ತು ಸಾವಿರ ರೂಗಳು ಮಾತ್ರ)

(ಪಲಕ, ನೆನಪಿನ ಕಾಣಿಕೆಯನ್ನು ನಂತರ ಪರಿಷತ್ತಿಗೆ ತಲುಪಿಸುತ್ತೇನೆ)
ವಂದನೆಗಳೊಂದಿಗೆ
ದಿನಾಂಕ: ೧೩.೧೦.೨೦೧೫ ತಮ್ಮ ವಿಶ್ವಾಸದ
ಸ್ಥಳ: ವಿದ್ಯಾರಣ್ಯ. 
(ಅರುಣ್ ಜೋಳದಕೂಡ್ಲಿಗಿ)

ಕಾಮೆಂಟ್‌ಗಳಿಲ್ಲ: