ಸೋಮವಾರ, ಜುಲೈ 9, 2012

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ

 ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ


-ಅರುಣ್ ಜೋಳದಕೂಡ್ಲಿಗಿ


    ಬಹುದಿನದಿಂದ ಖಾಲಿ ಇದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಇಲ್ಲಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊಫೆಸರ್ ಹಿ.ಚಿ. ಬೋರಲಿಂಗಯ್ಯ ಅವರು ಆಯ್ಕೆಯಾಗಿದೆ. ಈ ಆಯ್ಕೆಯ ಬಗೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ವಾತಾವರಣವಿದೆ. ಇಲ್ಲಿಯರೇ ಅಧ್ಯಾಪಕರು ಕುಲಪತಿಗಳಾದ ಸಂಭ್ರಮವದು. ಜಾನಪದ ಅಧ್ಯಯನ, ಬುಡಕಟ್ಟು ಅಧ್ಯಯನಗಳ ಮೂಲಕ ಗುರುತಿಸಿಕೊಂಡಿರುವ ಪ್ರೊ. ಹಿಚಿಬೋ ಅವರು ದೇಸಿ ಚಿಂತನೆಯ ಆಯಾಮದಲ್ಲಿ ಆಲೋಚಿಸಬಲ್ಲವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಬಲ್ಲ ಪ್ರೊ. ಹಿಚಿಬೋ ಅವರನ್ನು ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ.
  
   ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದವರು.
ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳ ಸ್ಫೂರ್ತಿ ಪಡೆದು ಜಾನಪದ ಅಧ್ಯಯನ ಆಸಕ್ತಿ ಬೆಳೆಸಿಕೊಂಡವರು.
ಹಂಪಿಯ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲೂ ಅವರು ತಮ್ಮ ಸೇವೆಯಿಂದ ವಿಶಿಷ್ಟ ಛಾಪು ಮೂಡಿಸಿದವರು. ಇಳಿ ವಯಸ್ಸಿನಲ್ಲೂ ಜಾನಪದ ಅಧ್ಯಯನ, ಸಂಶೋಧನೆಗೆ ತಮ್ಮ ಯುವ ಚೈತನ್ಯ ವನ್ನೂ ಬಳಸಿ ತಮ್ಮ ಕೊಡುಗೆ ನೀಡಿದವರು.


  ಇಟಲಿ, ಫ್ರಾನ್ಸ್, ಹಾಲೆಂಡ್ ಹಾಗೂ ಇರಾನ್ ದೇಶಗಳಲ್ಲಿ ನಡೆದ ಗೊಂಬೆಯಾಟ ಜಾನಪದ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡವರು. ಬುಡಕಟ್ಟು ಜನರ ಇತಿಹಾಸ ಅಧ್ಯಯನ, ಸಂಶೋಧನೆಗಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

  ಪ್ರೊ. ಹಿಚಿಬೋ ಅವರು ಕನ್ನಡ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಗಳಾಗಿ, ಕುಲಸಚಿವರಾಗಿ, ವಿವಿಧ ನಿಕಾಯಗಳ ಡೀನ್ ಆಗಿಯೂ, ಕನ್ನಡ ವಿವಿಯ ಪ್ರಸಾರಾಂಗದ ನಿರ್ಧೇಶಕರಾಗಿಯೂ ಕೆಲಸ ಮಾಡಿ ಕನ್ನಡ ವಿಶ್ವವಿದ್ಯಾಲಯದ ಹೇಳಿಗೆಗೆ ಶ್ರಮಿಸಿದ್ದಾರೆ.  17 ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಪ್ರೊ. ಹಿಚಿಬೋ ಅವರು ಈ ತನಕ 23 ಕೃತಿಗಳನ್ನೂ, 82 ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ.


  ಮುಖ್ಯವಾಗಿ ಗುರುತಿಸಬಹುದಾದ ಅವರ ಕೃತಿಗಳೆಂದರೆ, ಉಜ್ಜನಿ ಚೌಡಮ್ಮ, ದಾಸಪ್ಪ-ಜೋಗಪ್ಪ, ಗಿರಿಜನ ನಾಡಿಗೆ ಪಯಣ, ನಮ್ಮೊಳಗೊಂದು ಪುಟ್ಟ ಆಫ್ರಿಕಾ, ಸಿದ್ಧಿಯರ ಸಂಸ್ಕೃತಿ, ಕಾಡು ಕಾಂಕ್ರೇಟ್ ಮತ್ತು ಜಾನಪದ, ಗಿರಿಜನರು, ಮಂಟೇಸ್ವಾಮಿ ಮಹಾಕಾವ್ಯ (ಸಂಪಾದನೆ), ಕರ್ನಾಕಟ ಜನಪದ ಕಲೆಗಳ ಕೋಶ (ಸಂಪಾದನೆ), ಗೊಂಡರ ರಾಮಾಯಣ, ವಿಸ್ಮೃತಿ ಮತ್ತು ಸಂಸ್ಕೃತಿ,  ಬುಡಕಟ್ಟು ದೈವಾರಾಧನೆ, ಗಿರಿಜನ ಕಾವ್ಯ(ಸಂಪಾದನೆ) , ಹಾಲಕ್ಕಿ ಒಕ್ಕಲಿಗರ ಜ್ಞಾನಪರಂಪರೆ, ಕಾಗೋಡು ಚಳವಳಿ (ಸಂಪಾದನೆ), ದೇಸಿ ಸಂಸ್ಕೃತಿ ಸಂಕಥನ ಮುಂತಾದವುಗಳನ್ನು ಹೆಸರಿಸಬಹುದು. ಬುಡಕಟ್ಟು ಅಧ್ಯಯನ, ಜಾನಪದ ಗಂಗೋತ್ರಿ, ಚೆಲುವ ಕನ್ನಡ, ಪುಸ್ತಕ ಮಾಹಿತಿ ಮುಂತಾದ ಸಂಶೋಧನ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಕರ್ನಾಟಕ ಬುಡಕಟ್ಟು ಮಹಾಕಾವ್ಯ ಮಾಲೆಯ  ಪ್ರಧಾನ ಸಂಪಾದಕರಾಗಿ ಜನಪದ ಮಹಾಕಾವ್ಯಗಳ ಸಂಗ್ರಹದಂತಹ ಚಾರಿತ್ರಿಕ ಮಹತ್ವದ ಕೆಲಸಕ್ಕೆ ಪ್ರೇರಣೆಯಾಗಿದ್ದಾರೆ.

     ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಮುಖ್ಯವಾಗಿ ದೇಸಿ ಆಲೋಚನ ಕ್ರಮ ಇವರ ಚಿಂತನೆಯಲ್ಲಿ ಪ್ರಮುಖವಾಗಿ ಕಾಣಬಹುದಾಗಿದೆ. ಅವರು ಜಾನಪದ ಅಕಾಡೆಮಿಯ ರಿಜಿಷ್ಟ್ರಾರ್ ಆದಾಗಲೂ ಜಾನಪದ ಕ್ಷೇತ್ರಕ್ಕೆ ಬಹಳ ಮುಖ್ಯ ಕೊಡುಗೆಗಳನ್ನು ನೀಡಿದ್ದಾರೆ. ಅಂತೆಯೇ ಜಾನಪದ ವಿದ್ವಾಂಸರಾಗಿ ಕನ್ನಡದಲ್ಲಿ ಲೋಕದೃಷ್ಠಿಯ ಬಗ್ಗೆ ಮೊದಲ ಬಾರಿಗೆ ವಿಸ್ತಾರವಾಗಿ ಶೋಧಿಸಿದರು. ಅದು ಅವರ ವಿಸ್ಮೃತಿ ಸಂಸ್ಕ್ರತಿ ಕೃತಿಯಲ್ಲಿ ನೋಡಬಹುದು. ಕಾಡು ಕಾಂಕ್ರೇಟ್ ಪುಸ್ತಕದಲ್ಲಿ ಆಧುನಿಕ ಅಭಿವೃದ್ಧಿಯ ಮಾದರಿಗಳಿಂದಾಗಿ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿ ಆಲೋಚಿಸುತ್ತಾರೆ.

  ಹೀಗಿರುವ ಪ್ರೊ. ಹಿಚಿಬೋ ಅವರು ಕನ್ನಡ ವಿಶ್ವವಿದ್ಯಾಲಯವನ್ನು ಸಮರ್ಥವಾಗಿ ಮುನ್ನಡೆಸಲಿ ಎಂದು ಮತ್ತೊಮ್ಮೆ ಶುಭ ಹಾರೈಸುತ್ತೇನೆ.

1 ಕಾಮೆಂಟ್‌:

Vivek@jeevamandala ಹೇಳಿದರು...

ಪ್ರೊ. ಹಿ.ಚಿ. ಬೋರಲಿಂಗಯ್ಯನವರ ಆಯ್ಕೆ ನಮ್ಮೆಲ್ಲರ ಬಹಳ ದಿನದ ಕನಸಾಗಿತ್ತು. ನನಸಾಗಿದೆ. ಎದೆ ತುಂಬಿದ ಅಭಿನಂದನೆಗಳು.
ಡಾ. ಟಿ.ಎಸ್.ವಿವೇಕಾನಂದ