ಶುಕ್ರವಾರ, ಆಗಸ್ಟ್ 10, 2012

ಜಾನಪದ ಮುಂದುವರಿಕೆಗೆ ಹೊಸ ತಳಹದಿ?


ಡಾ ಹಿ ಶಿ ರಾಮಚಂದ್ರೇಗೌಡ 
(ಹಿ.ಶಿ ರಾಮಚಂದ್ರೇಗೌಡರು ಮೈಸೂರು ಭಾದಲ್ಲಿ  ಜಾನಪದದ ತಿಳುವಳಿಕೆಯನ್ನು ಭಿನ್ನವಾಗಿ ಕಟ್ಟಲು ಶ್ರಮಿಸಿದವರು. ಅವರ ಜಾನಪದ ವಿಶ್ಲೇಷಣೆ ಕೂಡ  ಅವರದೇ ಆದ ವಿಶಿಷ್ಟತೆಯ ನ್ನು ಹೊಂದಿದೆ. ನಮ್ಮ ಹಣತೆಗಳೇಕೆ ಉರಿಯುತ್ತಿಲ್ಲ ?  ಎಂದು ಪ್ರಶ್ನಿಸುವ ಮೂಲಕ ಕನ್ನಡಕ್ಕೇ ಬೇಕು ಕನ್ನಡದ್ದೇ ಜಾನಪದ ಅಧ್ಯಯನ ವಿಧಾನ ಎಂಬ ಹುಡುಕಾಟ ಮಾಡಿದವರು. ಅವರು ಈಗ ಮಗಳಮನೆ ಅಮೇರಿಕಾದಲ್ಲಿದ್ದಾರೆ. ಅಲ್ಲಿದ್ದುಕೊಂಡೇ  ಈ ಕಾಲದ ವೈರುಧ್ಯಗಳ ನೆಲೆಯಲ್ಲಿ ಜಾನಪದವನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ.ಇದು ಮೊದಲ ಕಂತು. ಮುಂದುವರಿದ ಭಾಗ ನಂತರ ಪ್ರಕಟವಾಗುವುದು.
-ಅರುಣ್)

ಜ್ನಾನದ ಸ್ಪೋಟವೊಂದು ಆಗಿ ವಿಜ್ನಾನದ ಭವಿಷ್ಯ ಕಂಡುಕೊಂಡೆವಲ್ಲ ಅಲ್ಲಿಂದ ಇಲ್ಲಿವರೆಗಿನ ಪರಿಕ್ರಮವನ್ನು ಅವಲೋಕಿಸಿದರೆ ನಾವು ಯಾವ ಭವಿಷ್ಯವನ್ನು ಅನುಭವಿಸುತ್ತಿದ್ದೇವೆ ಮತ್ತು ಮುಂದಿನ ಯಾವ ಬಗೆಯ ಭವಿಷ್ಯಕ್ಕೆ ದಾರಿಮಾಡಿಕೊಟ್ಟಿದ್ದೇವೆ ಎಂಬುದು ಒಂದು ಬಿಗ್ ಬ್ಯಾಂಗ್ ಪ್ರಶ್ನೆಯಾಗಿಯೆ ಉಳಿಯುತ್ತದೆ. ಹೌದಾ, ನಾವು ಭವಿಷ್ಯವನ್ನು ದೂರಗಾಮಿಯಾಗಿ ಉಳಿಸಿದ್ದೇವಾ, ಅಥವಾ ಮೊಟಕುಗೊಳಿಸಿದ್ದೇವಾ, ಆ ಭವಿಷ್ಯ ಜನರ ಹಸ್ತದಲ್ಲಿದೆಯೆ ಅಥವಾ ಅದನ್ನು ಪ್ರಕೄತಿಗೆ ಬಿಟ್ಟುಕೊಟ್ಟಿದ್ದೇವಾ?

ವಿಜ್ನಾನ ಮಾನವನ ಬದುಕಿನ ಸಾಧ್ಯತೆಗಳನ್ನು ಗುಣಾತ್ಮಕವಾಗಿ ಸಾಧಿಸಿಕೊಟ್ಟಿತೆ ಅಥವಾ ಅವನನ್ನು ಆಸೆಗಳ ಅಮಲಿನಲ್ಲಿ ಕೂರಿಸಿದೆಯೆ, ಆ ಎಲ್ಲ ಸಾಧ್ಯತೆಗಳು ಮನುಷ್ಯನಿಗಾಗಿಯೆ ಆದವು ಎಂದು ನಂಬಬಹುದೆ? ವಿಜ್ನಾನ ಈಗ ಮನುಷ್ಯನ ಹತ್ತಿರ ಇಲ್ಲ, ಅದು ಅವನಿಂದ ಜಾರಿಕೊಂಡು ಹೋಗಿದೆ ಏನ್ನಬಹುದೆ? ನನಗೆ ಈ ಕೊನೆಯ ಮಾತೇ ಸತ್ಯವಾಗಿ ವಿಜ್ನಾನದ ಬಹುದೊಡ್ಡ ಸಾಧ್ಯತೆ ಇನ್ನೂ ಸಿಗದೆ ಉಳಿದಿದೆ ಎನಿಸುತ್ತಿದೆ. ಅದು ಚಂದ್ರ, ಸೂರ್ಯ, ಮಂಗಳ ಅಥವ ಮತ್ತೊಂದು ಗ್ರಹಕ್ಕೆ ಹಾರುವ ವಿಷಯ ಎಂದು ನಾನು ಹೇಳಲಾರೆ. ಖಂಡಿತ ಆ ಒಂದು ಆಸೆ ಪ್ರತಿಯೊಬ್ಬ ಮನಷ್ಯನಲ್ಲಿಯೂ ಇದೆ. ಹಿಂದೊಮ್ಮೆ ಕನಸು, ಕಥೆ, ಪುರಾಣಗಳಲ್ಲಿ ಕಂಡುದು ವಾಸ್ತವವೇ ಆಗುವುದಾದರೆ ಮನುಷ್ಯ ಭಾವಪರವಶನಾಗುತ್ತಾನೆ. ಕಳೆದುಕೊಂಡ ಕನಸು, ಕಥೆ, ಪುರಾಣಗಳನ್ನು ಬೇರೆಲ್ಲಿ ಕಟ್ಟಿಕೊಳ್ಳುತ್ತಾನೆ ಎಂಬ ಪ್ರಶ್ನೆ ಭಯಂಕರವಾದುದೆ. ಅವನ್ನೆಲ್ಲ ಕಳೆದುಕೊಡ ಮನುಷ್ಯ ಪೂರಾ ಬರಡನಾದರೆ, ವಿಜ್ನಾನದ ಕಡೆಗೆ ಧಾಳಿ ಇಟ್ಟರೆ, ಆ ಲೋಡಿನ ಶಕ್ತಿಯನ್ನು ವಿಜ್ನಾನ ತಡೆದುಕೊಳ್ಳಬಲ್ಲುದೆ ಎಂದುನೋಡಬೇಕು. ಆಗ ನಿಜವಾದ ವಿಜ್ನಾನದ ಶಕ್ತಿ ಅರ್ಥವಾಗುತ್ತದೆ.
ಈಗ ವಿಜ್ನಾನವನ್ನು ಹುಡುಕುತ್ತಿರುವವರೆಲ್ಲ ಇದೇ ರಭಸದಲ್ಲಿದ್ದಾರೆ. ಅದು ಎಷ್ಟು ಸರಳ ಆಗಿದೆ ಅಂದರೆ ಅದೊಂದು ಹೊರಗಿನ ಸೌಲಭ್ಯ ಎನ್ನುವಂತಾಗಿದೆ. ವಿಜ್ನಾನ ಬಹುಜನರಿಗೆ ಅಂತರಂಗದ ವಿಷಯವಾಗಿ ಉಳಿದಿಲ್ಲ. ಅದು ಅದರ ಪ್ರಾರಬ್ದವನ್ನು ತೀರ್ಮಾನಿಸುವ ಸಂಗತಿಯೂ ಹೌದು. ಯಾವಾಗ ವಿಜ್ನಾನ ಸೀಮಿತ ವಸ್ತು ವಿನ್ಯಾಸಕ್ಕೆ ಒಳಗಾಯಿತೊ ಆಗ ಅದರ ಭವಿಷ್ಯ ಬಹಳ ಮಿತವಾಯಿತು. ಆ ಕಷ್ಟವನ್ನು ಈಗ ವಿಜ್ನಾನ ಅನುಭವಿಸುತ್ತಿರಬಹುದೆ?

ಹಾಗಿದ್ದಲ್ಲಿ ವಿಜ್ನಾನ ಅಂತರಂಗದ ವಿಷಯವಾಗುವುದು ಸಾಧ್ಯವೆ? ಹೇಗೆ? ಹದಿನೆಂಟನೆಯ ಶತಮಾನದ ವಿಜ್ನಾನವಿಕಾಸ ಈ ಅಂತರಂಗವನ್ನು ಕಂಡುಕೊಳ್ಳಲಾಗದ ಒಂದು ಮಿತವಾದ ಶೋಧ ಎನ್ನಬಹುದೆ? ಇದೊಂದು ಕೇವಲ ಸ್ಪೋಟಮಾತ್ರ ಎನ್ನಬಹುದೆ? ಬಹುತೇಕ ವಿಶ್ಲೇಷಣೆ ಹಾಗೆಯೆ ಹೇಳುತ್ತಿದೆ. ಅದರ ಹುಟ್ಟು ಚಾರಿತ್ರಿಕವಾಗದೆ ಕೆಲವು ಬಂಡವಾಳಿಗರ ಅತ್ಯಪೇಕ್ಷೆಯಾಗಿ ಹೊರಬಂದುದೂ ಇದಕ್ಕೆ ಕಾರಣ ಇರಬಹುದು. ಅದು ಹುಟ್ಟಿದ ಭೌಗೋಳಿಕ/ಸಾಮಾಜಿಕ ಪರಿಸರ ಮತ್ತು ಪರಿಸ್ಥಿತಿ ಕೂಡ ಅದು ಅಲ್ಪಾಯುಷಿಯಾಗಲು ಕಾರಣವಿರಬಹುದು. ಯೂರೋಕೇಂದ್ರಿತ ಸಮುದಾಯಗಳ ದುರಪೇಕ್ಷೆಯನ್ನು ತುಂಬಿಕೊಡಲಷ್ಟೆ ಅದಕ್ಕೆ ಸಾಧ್ಯವಾದುದು ಇದೇ ಕಾರಣಕ್ಕೆ ಇರಬಹುದು. ಏಷ್ಯಾಖಂಡದ ಕೆಲವು ದೇಶಗಳು ಈ ಅಪೇಕ್ಷೆಯ ಪಾಲುದಾರರಾಗಿರುವುದು ನಿಜವಾದರೂ ಅವುಗಳದು ಕಡ ಪಡೆದ ವಿಜ್ನಾನಸೌಲಭ್ಯ ಎಂದೆನಿಸುತ್ತದೆ.

ಈಗ ವಿಜ್ನಾನ ಎಂಬುದು ಸಾಮಗ್ರಿಯಾಗಿರುವುದು ನಿಜ. ವಿಜ್ನಾನದ ಉದ್ದೇಶ ಸಮಾಜೋದ್ಧಾರವಾದರೂ ಅದು ಆ ಕೆಲಸವನ್ನು ಮಾಡಲಾಗಿಲ್ಲ. ಅದರ ಭಾವನೆಗಳನ್ನು, ಬದುಕನ್ನು ಹಂಚಿಕೊಳ್ಳಲು ಬಹುಜನರಿಗೆ ಸಾಧ್ಯವಾಗಿಲ್ಲ. ವಿಜ್ನಾನ ಜನರಿಂದ ಜನರಿಗಾಗಿ ಹುಟ್ಟುವ ಸಾಮಾಜಿಕ ಪ್ರಕ್ರಿಯೆ. ಅದನ್ನು ಪ್ರತಿನಿಧಿಸುವ, ಪ್ರತಿಪಾದಿಸುವ ಅಥವಾ ಕಾರಣೀಭೂತನಾದ ಒಬ್ಬ ವ್ಯಕ್ತಿ ಇರುತ್ತಾನೆ. ಇದ್ದೇ ಇರುತ್ತಾನೆ ಎಂಬುದು ಸತ್ಯವಾದರೂ ಅವನು ಏಕ ಅಥವ ಏಕೈಕ ವ್ಯಕ್ತಿ ಅಲ್ಲ. ನಿಜವಾದ ವಿಜ್ನಾನ ಯಾವೊಬ್ಬ ವ್ಯಕ್ತಿಯನ್ನೂ, ದೇಶವನ್ನೂ ಉದ್ದೇಶಿಸಿರುವುದಿಲ್ಲ. ಅದು ಜನರನ್ನಷ್ಟೇ ಉದ್ದೇಶಿರುತ್ತದೆ. ಹದಿನೆಂಟನೆಯ ಶತಮಾನದ ಹಿಂದಕ್ಕೆ ನೋಡಿದರೆ ಅಥವ ಅನಭಿವೃದ್ದಿ ದೇಶಗಳೆಂದು ಕರೆಸಿಕೊಳ್ಳುತ್ತಿರುವ ದೇಶಗಳ ಪರಿಸ್ಥಿತಿಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಅಲ್ಲಿ ವಿಜ್ನಾನವೆ ಇರಲಿಲ್ಲ ಅಥವ ಇಲ್ಲ ಎಂದು ಹೇಳುವುದು ಹುಚ್ಚುತನವಾಗುತ್ತದೆ. ಅಂಥ ಮಾತುಗಳು ಯಾರಿಂದ ಮತ್ತು ಯಾವಕಡೆಯಿಂದ ಉಗಮವಾಗುತ್ತವೆ ಎಂಬುದನ್ನೂ ನೋಡಬೇಕಾಗುತ್ತದೆ.

ಹುಟ್ಟುತ್ತಲೆ ವಿಜ್ನಾನ ಅಪಹರಣಕ್ಕೆ ಒಳಗಾಯಿತು. ಅದು ಬಂಡವಾಳದ ಬಂಧಿಯಾಯಿತು. ವಿಜ್ನಾನಶೋಧ ಅಪಾರ ಮಾನಸಿಕಶ್ರಮ, ಶ್ರದ್ಧೆ, ತ್ಯಾಗ ಮತ್ತು ಮೂಲಧನದ ಅಪೇಕ್ಷೆಯನ್ನು ಬಯಸುತ್ತದೆ. ಅದು ಕೇವಲ ಹಣಬಂಡವಾಳವಲ್ಲ. ವ್ಯಕ್ತಿಯ ಶ್ರಮ ಮತ್ತು ಶ್ರದ್ಧೆಯಾಗಿರುತ್ತದೆ. ವಿಜ್ನಾನ ಬಂಡವಾಳ ಅಪೇಕ್ಷಿಯಲ್ಲ, ಅದು ಬಂಡವಾಳಿಗನ ಕೈಸೇರಿದಾಗ ಬಂಧಿಯಾಗುತ್ತದೆ. ಅವನ ವೈಯಕ್ತಿಕ ಅಪೇಕ್ಷೆ ಮತ್ತು ದುರಾಸೆಗೆ ತನ್ನನ್ನು ಮಾರಿಕೊಳ್ಳಬೇಕಾಗಿ ಬರುತ್ತದೆ. ಹಾಗೆ ಅದು ಕೈಗಾರಿಕಾ ಬಂಡವಾಳಿಗರಿಗೆ ಮಾರಾಟವಾಯಿತು. ಆದರೆ ಕೈಗಾರಿಕಾಕರಣವೆ ಬಂಡವಾಳವಾದ ಆಗಬೇಕಿಲ್ಲ. ಜನತಾಸಮಾಜ, ಜನತಾಸರಕಾರಗಳ ಸಂದರ್ಭದಲ್ಲಿ ಅದು ಜನಪರವೆ ಆಗಿರುತ್ತದೆ. ಅಂತ ಜನಪರವಾಗುವ ಯೋಗ ಸ್ಪೋಟಕ ವಿಜ್ನಾನಕ್ಕೆ ಸಾಧ್ಯವಾಗಲಿಲ್ಲ. ಅದು ಬಂಡವಾಳಿಗನ ಮೂಲಕ ಜನತೆಯ ಕಡೆಗೆ ಚಲಿಸಬೇಕಾಯಿತು. ಪರಿಸ್ಥಿತಿ: ಲಾಭ, ವಾಂಛೆ, ಪ್ರತಿಷ್ಠೆ, ಮೂಲಭೂತವಾದಗಳು ಒಂದು ಕಡೆಗೆ ಘೇರಾಯಿಸಿ ಜನತೆಯನ್ನು ಕಟ್ಟುಬದ್ಧವಾಗಿ ನಿಯಂತ್ರಿಸುವ ಹೊಸಪ್ರಭುತ್ವ ಸೃಷ್ಟಿಯಾಯಿತು. ಇದು ಅಪ್ರಜ್ನಾಪೂರ್ವಕವಾಗಿ, ಅಜ್ನಾನದಿಂದ, ಆಕಸ್ಮಿಕತೆಯಿಂದ ಜನತೆಯನ್ನು ನಿಯಂತ್ರಿಸುವ ಪುರಾತನ ಕ್ರೌರ್ಯಕಿಂತ ಹೊಸರೂಪದ ಪ್ರಜ್ನಾಪೂರ್ವಕ ಹಾಗೂ ಉದ್ದೇಶಪೂರ್ವಕ ಜನ ಶೋಷಣೆಗೆ ದಾರಿಮಾಡಿಕೊಟ್ಟಿತು.

ಕೈಗಾರಿಕಾಕರಣದ ಜೊತೆಗೆ ಕಾರ್ಮಿಕಸಂಘಟನೆಗಳು, ಆಧುನಿಕತೆಯ ಜೊತೆಗೆ ದೇಶೀಪ್ರವೃತ್ತಿಗಳು ಈ ವಿದ್ಯಮಾನಕ್ಕೆ ಪ್ರತಿಕ್ರಿಯೆಯಾದವು. ಕಾರ್ಮಿಕಸಿದ್ಧಾಂತ ಈ ಯುಗದ ಒಂದು ಯುಗಧರ್ಮವೆ ಆಯಿತು. ಅದು ಒಂದು ಪ್ರಜ್ನಾಪೂರ್ವಕ ಪ್ರತಿಭಟನೆ ಮತ್ತು ಪ್ರಜ್ನಾಪೂರ್ವಕ ರಾಜಕೀಯಸಿದ್ಧಾಂತವಾಯಿತು. ಜೊತೆಜೊತೆಗೆ ಸಾಮಾಜಿಕ ಅಭಿವೃದ್ಧಿಯ ಒಂದು ತತ್ವಪ್ರಣಾಳಿಕೆಯೂ ಆಯಿತು. ನಿಜವಾಗಿ ಮತ್ತು ನೇರವಾಗಿ ವಿಜ್ನಾನಶೋಧದಿಂದ ಆಗಬೇಕಾದ ಈ ಬದಲಾವಣೆ ವಿಜ್ನಾನ ಬಂಡವಾಳಿಗನ ಸೆರೆಸಿಕ್ಕು ಸಂಕುಚಿತಗೊಂಡುದರಿಂದ ಅದರ ಫಸಲನ್ನು ಬೇರೊಂದು ಕಡೆಯಿಂದ ಶೋಧಿಸಲು ನಡೆದ ಪ್ರಯತ್ನವಿದು. ಈ ಸಿದ್ದಾಂತ ಎಷ್ಟು ಕರು ಮರಿಗಳನ್ನು ಹಾಕಿತೆಂದರೆ ಜಗತ್ತಿನ ಬಹುತೇಕ ಬಡವರು ತಮ್ಮೊಳಗೊಂದು ಚಿಮ್ಮುವ ಶಕ್ತಿ ಇದೆ ಎಂಬ ಅಂತರಂಗ ಶೋಧ ಮಾಡಿಕೊಂಡರು. ಮನುಷ್ಯನನ್ನು ಸಾಂಘಿಕ ಜೀವನಕ್ಕೆ ಒಗ್ಗೂಡಿಸಿದ್ದ ಧರ್ಮಸಿದ್ದಾಂತಗಳಿಂದ ಅದು ಸಾಧ್ಯವಾಗಿರಲಿಲ್ಲ. ವ್ಯಕ್ತಿತ್ವವನ್ನು ಕಡೆಗಣಿಸಿದ, ವ್ಯಕ್ತಿತ್ವನಿರಸನ ಮಾಡಿಕೊಳುವ ಅವಿಕಾಸ ಚಿಂತನೆಯಿಂದಾಗಿ ಅವು ಮನುಷ್ಯನನ್ನು ಸೊರಗಿಸಿದ್ದವು. 
ಬಂಡವಾಳಿಕೈಗಾರಿಕೀಕರಣದಿಂದಾಗಿ ಮಾನವ ಇತಿಹಾಸದಲ್ಲಿ ಪ್ರಥಮಬಾರಿಗೆ ಮನುಷ್ಯ ತಾನೊಬ್ಬನಿದ್ದೇನೆ, ತನಗೊಂದು ಅಸ್ತಿತ್ವವಿದೆ ಮತ್ತು ತನಗೊಂದು ಬೆಳವಣಿಗೆ ಇದೆ ಎಂಬುದನ್ನು ಸಮಾಜದ ಒಟ್ಟಿಗೇ ಕಂಡುಕೊಳ್ಳುವಂತಾಯಿತು.

ಸೈದ್ಧಾಂತಿಕ ನೆಲೆಯೂ ಅಲ್ಲದ, ಪ್ರಭುತ್ವವನ್ನು ನೇರವಾಗಿ ವಿರೋಧಿಸುವುದರ ಅಗತ್ಯತೆಯನ್ನೂ ಅರಿಯದ ಆದರೆ ವಿಜ್ನಾನ ಮತ್ತು ಆಧುನಿಕತೆಗಳು ಬಹಳ ಹೊರೆಯಾಗುತ್ತಿವೆ ಎಂದು ಸ್ವಂತದಲ್ಲಿ ಮಿಡುಕಿದ ಮನೋಧರ್ಮವೆ ದೇಸಿ ಪ್ರವೃತ್ತಿ. ಇದೊಂದು ವ್ಯಕ್ತಿಸ್ವಾತಂತ್ರಕ್ಕಾಗಿ ತೆವಳುವ ಕೂಸು, ಹೋರಾಡುವ ಯುವತ್ವ ಅಲ್ಲ. ಆದ್ದರಿಂದಲೆ ಆ ಘಟ್ಟದಲ್ಲಿ ಕಾರ್ಮಿಕಚಳುವಳಿಗೆ ಬಂದ ಯೌವನ ಇದಕ್ಕೆ ಬರಲೇ ಇಲ್ಲ. ಎಲ್ಲೋ ಇದು ಪ್ರಭುತ್ವ ಮತ್ತು ಬಂಡವಾಳಿಯ ಮನಸ್ಸಿನಿಂದ ತಪ್ಪಿಸಿಕೊಂಡು ಹೊರಗೆ ಚಿಮ್ಮಲು ಪ್ರಯತ್ನಿಸಲೆ ಇಲ್ಲ ಅನಿಸುತ್ತದೆ. ಈಗ ಕೂಡ ಇದು ಶತಮಾನದ ಕೂಸು. ಆದರೆ ಇದರೊಳಗೆ ಸಹಜವಿಜ್ನಾನದ ಮನಸ್ಸು ಮಿಡಿಯುತ್ತಿದೆ. ಅದು ಬಂಡವಾಳವಾದ ಅಥವ ಕಾರ್ಮಿಕವಾದ ಸ್ವರೂಪಿಯೂ ಅಲ್ಲ. ಅಭಿವೃದ್ಧಿ ಸಿದ್ಧಾಂತದ ಬೆನ್ನು ಹತ್ತದೆ ಜೀವವಿಕಾಸದ ಪ್ರಗತಿಯ ಹಾದಿಯನ್ನು ಮೂಸುತ್ತಾ, ಮೆಲುಕುಹಾಕುತ್ತಾ ಬಂದ, ಎಲ್ಲ ಅಭಿವೃದ್ಧಿವಾದ, ವಾದಿಗಳ ನಿರಾಸೆಗೆ ಸಮಾಧಾನಕರವಾದ ಬದುಕುವ ನೆಲೆಯೊಂದು ನಮ್ಮ ಮಧ್ಯೆಯೆ ಇದೆ ಎಂದು ಕಾಣಿಸಿದ್ದು ಈ ಚಿಂತನೆ. ವಿಜ್ನಾನ ಮತ್ತು ಆಧುನಿಕತೆಗಳು ನಮ್ಮ ಮೇಲೆ ಉರುಳಿಸಿದ ಬಂಡೆಗಳು. ಅವುಗಳನ್ನು ಹತ್ತಿಹೋದವರು ಒಂದು ದಡ ಕಂಡರು, ಅವುಗಳ ಅಡಿಗೆ ಸಿಕ್ಕು ನರಳಿದವರು ಮತ್ತೊಂದು ದಡ ಕಂಡರು. ಮಗ್ಗುಲಾದವರು ಬದುಕುಳಿದಿದ್ದಾರಲ್ಲ ಅಲ್ಲಿ ಸಹಜ ಜೀವನಶೋಧ ಇದೆ ಎಂದು ಕಂಡುಕೊಳ್ಳುವ ಮರುಚಿಂತನೆ ಇದು. ಯಾವುದನ್ನೂ ಹೊರೆಮಾಡಿಕೊಳ್ಳದ ಜೀವನಕ್ರಮವಿದು. ಅಲ್ಪಾಯುಷಿಗಳಾದ ಬಂಡವಾಳವಾದ, ಸಮತಾವಾದ ಅಥವ ಸಮಾಜವಾದದ ಹೊರಗೆ ನಿರಂತರ ನೆಮ್ಮದಿಯನ್ನು ಕಾಣುವ ಜೀವವಿಕಾಸವಿದು. 

ವಿಜ್ನಾನದ ಪ್ರವೇಶದೊಂದಿಗೆ ವಸ್ತು, ವಿಷಯಗಳನ್ನು ವಿಭಜಿಸಿನೋಡುವ, ಅದರ ಘಟಕಗಳನ್ನು ವಿಶ್ಲೇಷಿಸುವ ಮತ್ತು ಅವು ಕೂಡಿದರೆ ಆಗುವ ಪರಿಣಾಮಗಳ ಬಗ್ಗೆ ತಿಳಿಯುವ ಮನೋಧರ್ಮ ಉಂಟಾಯಿತು. ಈಗಾಗಲೆ ಈ ಮನೋಧರ್ಮ ವಿವಕ್ಷೆಯಲ್ಲಿ ಇತ್ತಾದರೂ ಅದರ ಪ್ರಯೋಗವೇನಿದ್ದರೂ ಕಲ್ಪಿತವಸ್ತು, ವಿಷಯಗಳಿಗೆ ಸೀಮಿತವಾಗಿತ್ತು. 
ಅದು ಭೌತಿಕ ಜಗತ್ತಿಗೆ ಏನನೂ ಕೊಡಲು ಆಗದ ಭಾವಿಸಿಕೊಂಡ ಬಸಿರು. ವಿಜ್ನಾನದ ವಿಷಯವಾದರೂ ವಸ್ತು, ವಿಷಯಗಳ ಮರುಜೊಡಣೆ ಮತ್ತು ಮರುಚಿಂತನೆಗೆ ಕಾರಣವಾಗಿ ಹೊಸ ಹೊಸ ವಸ್ತು ವಿಷಯಗಳ ರೂಪೀಕರಣಕ್ಕೆ ಕಾರಣವಾಯಿತು. ಇದರಿಂದ  ಅಖಂಡತೆಯ ಬಗ್ಗೆ ಇಟ್ಟುಕೊಂಡಿದ್ದ ಪುರಾತನ ಚಿಂತನೆ ಪ್ರಶ್ನಿತವಾಯಿತು. ಧಾರ್ಮಿಕರಿಗಂತೂ
ಇದರ ಪ್ರವೇಶ ಕಷ್ಟವಾಗತೊಡಗಿತು. ಸೃಷ್ಟಿ, ಸ್ಥಿತಿ, ಲಯಗಳ ಬಗ್ಗೆ ತಮ್ಮದೆ ಗಟ್ಟಿಯಾದ ನಂಬುಗೆ ಇಟ್ಟುಕೊಂಡಿದ್ದ ಅವರಿಗೆ ವಿಜ್ನಾನದ ಪ್ರವೇಶ ಅವರ ಅಸ್ಥಿತ್ವವನ್ನು ಪ್ರಶ್ನಿಸುವಂತಾಯಿತು. ಅವರು ಅಖಂಡವನ್ನು ಊಹಿಸಿಕೊಂಡಿದ್ದರು, ವಿಶ್ಲೇಷಿಸಿಕೊಂಡಿರಲಿಲ್ಲ. ಕಾರಣವಾಗಿ ಭೌತಿಕ ವಿಷಯ ಚಿಂತನೆಯಲ್ಲಾದ ವಿಘಟನ, ವಿಶ್ಲೇಷಣ, ಮರುಜೋಡಣಾ ಚಿಂತನೆ ಅವರನ್ನು ಚಿಂತೆಗೀಡುಮಾಡಿತು. ಅವರು ವಿಜ್ನಾನವನ್ನು ದೇವರು, ಧರ್ಮ ಮತ್ತು ಅಖಂಡ ಪ್ರಕೃತಿಯ ಮೇಲಿನ ಹಾವಳಿ ಎಂದು ಘೊಷಿಸಿದರು. ಇವರೂ ಕೈಗಾರಿಕಾ ಸಂಸ್ಕೃತಿಯಿಂದ ಹತಾಶೆಗೊಂಡವರ ಜೊತೆಗೆ ಸೇರಿಕೊಡರು. ಆದರೆ ಇಂಥವರು ದೇಸಿ ಬಗ್ಗೆ ಮಾತನಾಡತೊಡಗಿದ್ದು ಅಪಾಯಕಾರಿಯಾಯಿತು.

ವಿಜ್ನಾನ ಮತ್ತು ಅದರ ಪ್ರತಿಫಲನವಾದ ಆಧುನಿಕತೆಗಳು ಬರುಬರುತ್ತ ತಳಬಿಟ್ಟದ್ದು ಜನರಲ್ಲಿ ನಿರಾಸೆಯನ್ನು ಮೂಡಿಸಿತು. ಅದರೊಳಗೆ ಜನ ಉಳಿಯದೆ ಹೊಸಬಗೆಯ ಪ್ರಭುತ್ವ ಸ್ಥಾಪಿತವಾದುದು ಆತಂಕಕಾರಿ ಅನಿಸಿತು. ಇದು ಪ್ರಗತಿ ಅಲ್ಲ, ನೆಗೆತ. ಅದರ ಎತ್ತರಕ್ಕೆ ನೆಗೆದವನು ಅನುಕೂಲಿಯಾಗುತ್ತನೆ, ಹಾಗಲ್ಲದವನು ಅದರ ಆಸೆಯ ಬೆನ್ನುಹತ್ತಿ ನಿರಂತರಫಲಾಪೇಕ್ಷಿಯಾಗಿ ಹಪಹಪಿಸುತ್ತಾನೆ. ಅಭಿವೃಧಿ ಹೊಂದಿದ ದೇಶಗಳು, ಅಭಿವೃದ್ಧಿಶೀಲ ದೇಶಗಳು ಮತ್ತು ಹಿಂದುಳಿದ ದೇಶಗಳು ಎಂಬ ಬೆಳವಣಿಗೆಯ ವಿಭಜನಾ ಕ್ರಮವೆ ತಾರತಮ್ಯ ರೀತಿಯದು. ಈ ತಾರತಮ್ಯ ಹೋಗಿ ಎಲ್ಲ ದೇಶಗಳೂ ಅಭಿವೃಧಿ ದೇಶಗಳಾಗುವುದು ಸಾಧ್ಯವೆ ಇಲ್ಲ. ಯಾಕಂದರೆ ಈ ಅಭಿವೃದ್ಧಿ ಇನ್ನೊಂದು ದೇಶದ ಶೋಷಣೆಯ ಮೂಲಕವೆ ಆಗುವ ಪ್ರಕ್ರಿಯೆ. ಕೊಳ್ಳುವವನನ್ನು ಹುಡುಕುವ ಅಭಿವೃದ್ಧಿ ಎಲ್ಲ ದೇಶಗಳ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದಿಲ್ಲ. ಬದಲಾಗಿ ಹತ್ತಿಕ್ಕುತ್ತದೆ. ಎಲ್ಲ ದೇಶಗಳಲ್ಲಿಯೂ ಸಮಾನ ಸೃಜನೆ ಮತ್ತು ಸಮಾನ ಉತ್ಪಾದನೆ ಸಾಧ್ಯವಾದರೆ ಕೊಳ್ಳುವವನು ಹೊರದೇಶದ ಮಾಲುಗಳ ಕಡೆ ಯಾಕೆ ನೋಡುತ್ತಾನೆ?

ಇಂಥ ಫಿನಿಷ್ ಗೂಡ್ಸ್ ಆಧಾರಿತ ಅಭಿವೃದ್ಧಿ ಪರಿಕಲ್ಪನೆ ಸಮಾನತೆಯನ್ನು ನಿರಾಕರಿಸುತ್ತದೆ. ಅದೊಂದು ದೊಡ್ಡ ಸುಳ್ಳು ಎನ್ನುತ್ತದೆ. ಆಗ ಬಡವ, ಬಡತನ ವೈಯಕ್ತಿಕ ಅಪರಾಧ ಅಥವ ಧಾರ್ಮಿಕ ಭಾಷೆಯಲ್ಲಿ ಹೇಳುವುದಾದರೆ ಅದು ಅವರವರ ಕರ್ಮ ಎಂದೆ ಘೋಷಿಸುತ್ತದೆ. ಯಾರ ಸಂಪಾದನೆಯಿಂದ ಬಡತನ ನಿವಾರಣೆ ಮಾಡುತ್ತೀರಿ? ಓಡುವವನ ಮೇಲೆ ಹೆಳವನನ್ನು ಕೂರಿಸುತ್ತಿದ್ದೀರಿ ಎನ್ನುತ್ತದೆ. ಆಗ ಸಮತಾವಾದ ಅನ್ ಸೈನ್ಟಿಫಿಕ್ ಮತ್ತು ಪ್ರಕೃತಿ ವಿರೋಧವಾಗಿ ಕಾಣುತ್ತದೆ. ಸಮತಾವಾದ ಇಲ್ಲ, ನೀವು ಹುಟ್ಟಿಸಿಕೊಂಡಿದ್ದೀರಿ. ಅದು ಇಲ್ಲ ನೀವು ಕಟ್ಟಿಕೊಂಡಿದ್ದೀರಿ. ಅದು ನೆಲೆ ಇಲ್ಲದ ಅಸ್ಮಿತೆ. ಉಳ್ಳವರನ್ನು, ಪ್ರತಿಭಾವಂತರನ್ನು, ದುಡಿಯುವವರನ್ನು ಹತ್ತಿಕ್ಕಲು ನೀವು ಬಳಸುತ್ತಿರುವ ಅಸ್ತ್ರಗಳು. ನಿಮ್ಮ ದುಡಿಮೆಯ ಪರಿಕಲ್ಪನೆ ಬರಡಾಗಿದೆ. ಅದು ದೈಹಿಕ ದುಡಿಮೆಯನ್ನು ಮಾತ್ರ ಕುರಿತಿದೆ. ಅದರಲ್ಲೂ ಮೇಲುಸ್ಥರದ ದುಡಿಮೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೀರಿ. ಅದು ಕ್ರಿಯೆಯಾಗುವ 
ಬಹುತೇಕ ಸಾಧ್ಯತೆಗಳು ನಿಮ್ಮ ಗಮನಕ್ಕೆ ಬಂದಿಲ್ಲ. ಬಡವನನ್ನು ಬಡವನನ್ನಾಗಿಯೆ ಉಳಿಸುವ, ಅವನ ಚೈತನ್ಯವನ್ನು ಪ್ರಚೋದಿಸದ ಕೇವಲ ಕೂಲಿಸಿದ್ಧಾಂತ ನಿಮ್ಮದು ಎಂದು 
ಈ ಅತ್ಯಾಧುನಿಕ, ಇಪ್ಪತ್ತೊಂದನೆಯ ಶತಮಾನ ಹೇಳುತ್ತಿದೆ. 

ಇನ್ನು ಬಡವ ಬದುಕಿರುವುದಿಲ್ಲ . ಅವನು ಇರುತ್ತಾನೆ ಎಂದರೆ ಬಡವನಾಗಿರುವುದಿಲ್ಲ, ಇನ್ನೇನೊ ಆಗಿರುತ್ತಾನೆ. ಆ ಇನ್ನೇನೊ ಎಂಬುದು ನಿಧಾನವಾಗಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಅಂಥ ಪ್ರಕ್ರಿಯೆ ಈ ಹೊತ್ತು ಜಗತ್ತಿನಾದ್ಯಂತ ನಡೆಯುತ್ತಿದೆ. ಆದ್ದರಿಂದಲೆ ಬಡವ ಶ್ರೀಮಂತರ ಜೊತೆಗೆ ಗೆಲ್ಲಲಾರದ ಪೈಪೋಟಿಗೆ ತೊಡಗಿದ್ದಾನೆ. ಅದು ಕನಸನ್ನು ಹಿಡಿಯುವ ಕೆಲಸವೊ ಅಥವ ಭ್ರಮೆಯನ್ನು ಬೆನ್ನಟ್ಟುವ ಶ್ರಮವೊ ಹೇಳಲಾಗದು. ಇಪ್ಪತ್ತನೆಯೆ ಶತಮಾನವಷ್ಟೆ ಅವನನ್ನು ಉದ್ದೇಶಿಸಿತ್ತು. ಅದು ಅವನ ಪರವಾದ ರಾಜಕಾರಣವೂ ಆಗಿತ್ತು. ಇನ್ನು ಅಂಥ ರಾಜಕಾರಣ ಬರುವ ಸಾಧ್ಯತೆಗಳು ಕಡಿಮೆ. ಈ ಹೊತ್ತಿನ ರಾಜಕಾರಣಿಗಳ ಕೈಯಲ್ಲಿ ರಾಜಕಾರಣ ಇಲ್ಲ. ಅವರು ರಾಜಕಾರಣಕ್ಕೆ ಬಳಸಿಕೊಳುತ್ತಿರುವ ದಾಳಗಳಷ್ಟೆ. ಜನ ಓಟು ಹಾಕುತ್ತಾರೆ, ರಾಜಕಾರಣಿಗಳು ರಾಜಕಾರಣ ನಡಸುತ್ತಾರೆ ಎಂಬುದೆಲ್ಲ ನಮ್ಮ ಅನಿಸಿಕೆ ಮಾತ್ರ. ನಮಗೆ ಹತ್ತಿರದಿಂದ ಗೊತ್ತಿರುವಂತೆ ಮತದಾನ ಎನ್ನುವುದು ಅಸಲಿ ಚಟುವಟಿಕೆಯೆ ಅಲ್ಲ. ಅದನ್ನು ಹಲವು ಶಕ್ತಿಗಳು ನಡೆಸಿಕೊಡುತ್ತವೆ. ನೀವು ರಾಜಕಾರಣದ ಆಟ ಆಡಿಕೊಳ್ಳಿ ನಾವು ದೇಶದ ವ್ಯಾಪಾರ, ವ್ಯವಹಾರ ನೋಡಿಕೊಳ್ಳುತ್ತೇವೆ. ಅದರಲ್ಲಿ ನಿಮ್ಮ ಹಸ್ತಕ್ಷೇಪ ಬೇಡ ಎಂದು ಕಾರ್ಪೊರೇಟ್ ಸಂಸ್ಥೆಗಳು ಹೇಳಿದರೆ ಅಲ್ಲಿ ನಿಜವಾದ ರಾಜಕಾರಣ ಇಲ್ಲ ಎಂದೆ ಅರ್ಥ. ನಿಜದಲ್ಲಿ, ಬಡತನವನ್ನು ಉದ್ದೇಶಿಸಿದ ರಾಜಕಾರಣವಷ್ಟೆ ಅಸಲಿ ರಾಜಕಾರಣ. ಉಳಿದಂತೆ ಅದು ಯಾವುದಾದರೊಂದು ಬಗೆಯ ಪ್ರಭುತ್ವ ಆಗಿರುತ್ತದೆ. 

ಹೀಗೆ ಜನೋದ್ದೇಶಿತ ರಾಜಕಾರಣವೂ ಅಡ್ಡದಾರಿ ಹಿಡಿದು ಪ್ರಭುತ್ವದ ತೆಕ್ಕೆಗೆ ಜಾರುತ್ತಿದೆ. ಅದೇ ಹಾದಿಹಿಡಿದ ವಿಜ್ನಾನ ಮತ್ತು ಅದರ ಫಲಶೃತಿಯಾದ ಆಧುನಿಕತೆಯು ನವಒಡೆಯರ ಹಸ್ತಕ್ಕೆ ಬಿದ್ದಿವೆ. ಈಗ ಕುಮಾರವ್ಯಾಸನ ಪದ್ಯವೊಂದು ನೆನಪಿಗೆ ಬರುತ್ತಿದೆ 
ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ ಅಧಿಕಾರಿಗಳು ಹದ್ದಿನ ನೆರವಿ ................ಈಗ ಜನಗಳ ಕೈಲಿ ಏನು ಉಳಿದಿದೆ?

ಯಾಹೊತ್ತೂ ಹಲಾಹಲದ ಜೊತೆಗೆ ಅಮೃತವೂ ಹುಟ್ಟುವುದು ಪ್ರಕೃತಿನಿಯಮ. ಹಾಗೆಯೆ ಸೃಷ್ಟಿ ಲಯ ಒಟ್ಟೊಟ್ಟಿಗೆ ಜನ್ಮ ತಳೆಯುತ್ತವಂತೆ. ಅವುಗಳ ಕಾಲ ಬಂದಾಗ ಪ್ರವೃತ್ತವಾಗುತ್ತವೆಯಂತೆ. ಪ್ರಕೃತಿ ನಿಯಮದಲ್ಲಿಯೆ ಸೃಷ್ಟಿ ಮತ್ತು ನಿಯಂತ್ರಣ ಶಕ್ತಿಗಳಿರುತ್ತವೆ ಎಂಬುದು ಸಾಬಿತಾಗಿ ಹೋಗಿದೆ. ಮನುಷ್ಯನ ಸಂಧರ್ಭವನ್ನೆ ತೆಗೆದುಕೊಂಡರೆ ಅವನಿಗೆ ಕಾಯಿಲೆಗಳೂ ಇವೆ. ಜೊತೆಯಲ್ಲಿ ಅದರ ನಿಯಂತ್ರಣ ಶಕ್ತಿಗಳಾದ ಔಷಧಗಳೂ ಇವೆ. ನಾವು ಈಗ ಪ್ರಸ್ತಾಪಿಸಿದ ಸ್ಪೋಟ ವಿಜ್ನಾನದ ಉದಯದ ಜೊತೆಗೆ ಅದನ್ನು ನಿಯಂತ್ರಿಸುವ ಶಕ್ತಿಗಳ ಉದಯವೂ ಆಗಿದೆ. ಸರಳಾರ್ಥದಲ್ಲಿ ಅವುಗಳನ್ನು ಪರ್ಯಾಯಗಳೆಂದು ಕರೆಯಲಾಗಿದೆ. ವೈರುಧ್ಯ ಚಿಂತನೆಯ ಭಾಷೆಯಲ್ಲಿ ಸೃಷ್ಟಿ/ಪ್ರತಿಸೃಷ್ಟಿ ಎನ್ನಬಹುದು. ಸಾಮಾನ್ಯರ ಭಾಷೆಯಲ್ಲಿ ದಾರಿಬದಲಿಸುವುದು ಎನ್ನುತ್ತಾರೆ. ಪ್ರಪಂಚ ನಡೆಯುವುದೇ ಹಾಗೆ.

ಸ್ಪೋಟ ವಿಜ್ನಾನಕ್ಕೊಂದು ಸಾವಧಾನವಿಜ್ನಾನ, ಅರಾಜಕರಾಜಕೀಯಕ್ಕೊಂದು ಸೃಜನಶೀಲರಾಜಕೀಯ ಇವತ್ತಿನ ಅವಶ್ಯಕತೆಯಾಗಿದೆ. ಸ್ಪೋಟವಿಜ್ನಾನಕ್ಕೆ ಮೊದಲು ಅಂತರ್ ಸಂಭಂದಿಯಾದ ಅಖಂಡಜ್ನಾನ ಪದ್ಧತಿಯೊಂದಿತ್ತು. ಸ್ಪೋಟವಿಜ್ನಾನ ಅದರ ಮಗ್ಗುಲು ಮುರಿಯಲು ಎಲ್ಲ ಪ್ರಯತ್ನ ಮಾಡಿತು. ಆದರೆ ಅದು ಸಾವಧಾನವಿಜ್ನಾನದ ಪರಿಕಲ್ಪನೆಯ ಸ್ವರೂಪದಲ್ಲಿ ಚಿಗುರೊಡೆಯಿತು. ಸ್ಪೋಟವಿಜ್ನಾನದ ಹುಟ್ಟು, ಅಬ್ಬರ ಮತ್ತು ಅವಾಂತರದ ಸಂದರ್ಭದಲ್ಲಿ ಅದು ಎರಡು ಪ್ರವೃತ್ತಿಗಳಲ್ಲಿ ಕಾಣಿಸಿಕೊಡಿದೆ. ಒಂದು, ಸ್ಪೋಟವಿಜ್ನಾನದ ಅವಾಂತರಕ್ಕೆ ಪ್ರತಿಭಟನೆ. ಎರಡು, ಜನರ ಮಧ್ಯೆಯೆ ಇದ್ದ ತಳ/ಕೆಳ ಜ್ನಾನಪದ್ಧತಿಗಳ ಹುಡುಕಾಟ ಮತ್ತು ಅವುಗಳ ಬಗ್ಗೆ ಮರುಚಿಂತನೆ. ಮೊದಲ ಹಂತದ ಪ್ರತಿಭಟನೆ ಆಧುನಿಕ ಎನ್ನುವ ಸೌಲಭ್ಯಗಳ ಬಗ್ಗೆ ತಿರಸ್ಕಾರ, ಅನಾದರ, ಮೂದಲಿಕೆ. ಇದರ ಪ್ರತಿಫಲ ಮಾತ್ರ ಫಲಪ್ರದವಾದುದಲ್ಲ. ಇದು ಒಂದುರೀತಿಯ ಪಲಾಯನ ಮತ್ತು ಸೋಲಿನಲ್ಲಿ ಅಂತ್ಯವಾಗುತ್ತದೆ. ದ್ಯೆತ್ಯ ಸ್ಪೋಟವಿಜ್ನಾನದ ಹೊರಗೆ ಮನರಂಜನೆ, ನೋವುಪರಿಹಾರಕ ಚಟುವಟಿಕೆ, ಅಲಮಾರಿತನ ಅನುಭವಿಸುವಿಕೆ ಹಾಗೂ ಹತಾಶರಾಗುವ ಮಾರ್ಗ ಕಂಡುಕೊಳ್ಳಲಾಯಿತು. ಎರಡನೆಯ ಹಂತದ ಪ್ರತಿಭಟನೆ ದುಡಿಯುವವರಿಗೆ ಸರಿಯಾದ ಅನುಕೂಲಗಳನ್ನು ಕಲ್ಪಿಸಲು ಹೋರಾಡುವುದು. ಅತಿದುಡಿಮೆ, ಮಾನಸಿಕಒತ್ತಡ, ದುಡಿಮೆಯ ದುರ್ಬಳಕೆ ಮತ್ತು ಹಿಂಸೆಯ ಬಗ್ಗೆ ಅಸಮಧಾನ, ಅಸಹನೆ ಮತ್ತು ಕ್ರೋಧವನ್ನು ವ್ಯಕ್ತಪಡಿಸುವುದು. ನಿಜವಾದ ಗುಣಾತ್ಮಕ ಪ್ರತಿಭಟನೆ ಎಂದರೆ ಕೈಗಾರಿಕೆಯ ಉತ್ಪಾದನೆ ಕಾರ್ಮಿಕರಿಗೆ ಮತ್ತು ಕಾರ್ಮಿಕರಾಜ್ಯಕ್ಕೆ ಸೇರಿದ್ದು ಎನ್ನುವುದು. ಮಾರ್ಕ್ಸ್ ಸಿಧಾಂತದ ಮೊದಲೂ ಇಂಥ ಪ್ರವೃತ್ತಿ ಇಂಗ್ಲೆಂಡ್ ನಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಎಷ್ಟರ ಮಟ್ಟಿನ ತಾತ್ವಿಕತೆ ಇತ್ತು ಎನ್ನುವುದು ಬೇರೆಮಾತು. ಇದೊಂದು ಪ್ರತಿಸೃಷ್ಟಿಗೆ ಕಾರಣವಾದ ನಡೆವಳಿಕೆ. ಖಾಸಗಿಬಂಡವಾಳ ಒಡೆತನ ವಿರೋಧಿಯಾದ ಈ ಪ್ರವೃತ್ತಿ ಕಾರ್ಮಿಕ ಬಂಡವಾಳವಾದವನ್ನೆ ಸೃಷ್ಟಿಸಿತು ಒಂದು ಸಮತಲದ, ಸಮಾಧಾನದ ಹಾಗೂ ಸರ್ವರ ಹಿತದ ಪ್ರಗತಿಯ ಚಿಂತನೆ ಇದರಿಂದ ದೂರವೆ ಉಳಿಯಿತು.

ಸಾವಧಾನ ವಿಜ್ನಾನವೆ ಈ ಹೊತ್ತಿನ ಎಲ್ಲರ ಸದಾವಕಾಶದ ಸ್ಥಿತಿ ಎಂದು ನನಗೆ ಅನಿಸಿದೆ. ಇದನ್ನು ಸಮುದಾಯ ಅಂತರ್ಗತ ವಿಜ್ನಾನ ಎಂದು ಕರೆಯುವುದುಂಟು. ಅಗತ್ಯತೆ ಸೃಷ್ಟಿಯ ತಾಯಿ ಎಂಬ ಸಾರ್ವತ್ರಿಕ ನಿಯಮದಂತೆ ಮನುಷ್ಯ ತನ್ನ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ ಹೋಗುತ್ತಾನೆ. ಅದು ಹಂಚಿಕೆಯ ವಿಜ್ನಾನ. ಆಧುನಿಕ ವಿಜ್ನಾನದಂತೆ ಶೇಖರಣೆ ಮತ್ತು ಧೂರ್ತತನ ಪ್ರಚೋದಕ ಜ್ನಾನವಲ್ಲ/ಅದು ಪ್ರಚೋದನ ರಹಿತ ಎಂದೇನೂ ಅಲ್ಲ. ಅದರೆ ಅದು ಏಕಮುಖ ಹಾಗೂ ಏಕಪಕ್ಷೀಯವಾಗಿರುವುದಿಲ್ಲ. ಒಂದು ಸಮುದಾಯಕ್ಕೆ ಕತ್ತಿ ಗುರಾಣಿಗಳು ಇದ್ದಲ್ಲಿ, ಅಂಥವನ್ನು ಹೊಂದುವ ಅವಕಾಶ ಮತ್ತೊಂದು ಗುಂಪಿಗೂ ಇರುತ್ತದೆ. ತೀರ್ಮಾನ ಎರಡು ಕಡೆಯವರ ಭಾಗವಹಿಸುವಿಕೆಯಿಂದಲೆ ನಡೆಯಬೇಕಾಗುತ್ತದೆ. ಅಮೆರಿಕದ ಹಸ್ತದಲ್ಲಿ ಮಾನವ ಚಾಲನೆರಹಿತ ದ್ರೋಣ್ ಯುದ್ದವಿಮಾನವಿದ್ದು ವಿರೋಧಿಗಳ ಕೈಯಲ್ಲಿ ಅಂಥದೇನೂ ಇಲ್ಲದ ಪರಿಸ್ಥಿತಿ ಇರುವುದಿಲ್ಲ. ರಿಲಯನ್ಸ್ ಒಡೆಯನ ಹತ್ತಿರ ಇಪ್ಪತ್ತೇಳು ಅಂತಸ್ತಿನ ಮನೆ ಇದ್ದು ಇನ್ನೊಂದು ಕಡೆ ಗುಡಿಸಿಲಿನವನಸ್ಥಿತಿ ಇರುವುದಿಲ್ಲ. ಸಹಜ ಸೃಷ್ಟಿ ಮತ್ತು ಪೈಪೋಟಿಗೆ ಅವಕಾಶವನ್ನೆ ಕೊಡದೆ ಶೋಷಣೆ
ಆಧಾರಿತ ಬೆಳವಣಿಗೆಯನ್ನು ಅಭಿವೃದ್ಧಿ ಎಂದು ಕರೆಯುವುದು ಅವೈಜ್ನಾನಿಕವಾಗುತ್ತದೆಯೆ ಕೊರತು ಪ್ರಗತಿ ಎನಿಸಿಕೊಳ್ಳುವುದಿಲ್ಲ. ನಮಗೆ ಎಲ್ಲರೊಳಗೆ ಇರುವ ಪ್ರಗತಿ ಪ್ರಚೋದಿತವಾಗಬೇಕೆ ವಿನಹ ಕೆಲವರ ನೆಗೆತ ಅಲ್ಲ. 

ಈ ಸಾವಧಾನವಿಜ್ನಾನ ಹಿಂದೆ ಎಲ್ಲ ಜನರ ಜೀವನ ಪದ್ಧತಿಯಾಗಿತ್ತು. ಆಧುನಿಕ ವಿಜ್ನಾನದ ಸಂದರ್ಭದಲ್ಲಿ ಅದು ಹಿಂದೆಬಿದ್ದು ಪಾರಂಪರಿಕವಿಜ್ನಾನ, ಜನಪದ ವಿಜ್ನಾನ, ಅಥವ ಜನಸಾಮಾನ್ಯರವಿಜ್ನಾನ ಎಂದು ಕರೆಸಿಕೊಂಡಿತು. ಇದು ಓಡುವವನ ಎದುರು ನಡೆಯುವವನು ಅಸಹಜ ಎನ್ನುವಂತಾಯಿತು. ಸಾವಧಾನ ಅಥವ ಜನಪದಜ್ನಾನ-ವಿಜ್ನಾನ ಅಖಂಡ ವಿಜ್ನಾನ. ಇದನ್ನು ಅವಿಭಜಿತ ವಿಜ್ನಾನ ಎಂದೂ ಕರೆಯಲಾಗಿದೆ. ಆಧುನಿಕವಿಜ್ನಾನ ಖಂಡವಿಜ್ನಾನ. ಅದು ಜ್ನಾನವನ್ನೂ, ಮನುಷ್ಯನನ್ನೂ ಬೇರೆಬೇರೆಯಾಗಿಯೆ ನೋಡುತ್ತದೆ. ಅದರ ವಿಶಿಷ್ಟ ಸಾಧನೆ ಲಾಭವನ್ನು ಕುರಿತದ್ದಾಗಿದೆ. ಲಾಭದ ಮೂಲಕ ಅಭಿವೃದ್ದಿ ಎಂದರೆ ನಷ್ಟಕ್ಕೊಳಗಾದವನೂ ಇರಲೆಬೇಕಲ್ಲವೆ? ಅವನು ಯಾರ ಮನುಷ್ಯ? ಅಂದರೆ ಆಧುನಿಕವಿಜ್ನಾನ ಅಖಂಡ ಸ್ವರೂಪಿಯಲ್ಲ. ಅದು ಅಖಂಡ ಜನತೆಯನ್ನು ಉದ್ದೇಶಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಈಗ ನಾವು ಸಾವಧಾನ ವಿಜ್ನಾನ ಅಥವ ಜಾನಪದವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ವಿಘಟನಪೂರ್ವ ಸಮಾಜವೆ ಜನಪದಸಮಾಜ. ಅಲ್ಲಿ ಸಮಾಜವಿಜ್ನಾನ ಮತ್ತು ನೈಸರ್ಗಿಕವಿಜ್ನಾನ ಬೇರೆಬೇರೆಯಾಗಿರಲಿಲ್ಲ. ಒಬ್ಬ ರೈತನೊಳಗೆ ರೈತಸಮಾಜವೂ ರೈತವಿಜ್ನಾನಿಯೂ ಅಡಕವಾಗಿದ್ದರು. ಒಬ್ಬ ಕುಶಲಕರ್ಮಿಯಲ್ಲಿ ಒಬ್ಬ ತಂತ್ರಜ್ನಾನಿ ಮತ್ತು ಒಬ್ಬ ತಂತ್ರಸಾಮಾಜಿಕ ಕೂಡಿಯೆ ಇದ್ದರು. ಇಂಥ ಜಾನಪದದ ಮೂಲಸೆಲೆ ಮತ್ತು ನೆಲೆ ಸಾವಧಾನವಿಜ್ನಾನದ ಹುಡುಕಾಟವೆ ಆಗಿತ್ತು. ಸ್ಪೋಟವಿಜ್ನಾನದ ಸಂದರ್ಬದಲ್ಲಿ ಹಿಂದೆ ಸರಿದಂತೆ ಕಂಡರೂ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಅವತಾರಗಳಲ್ಲಿ ಜಾನಪದ ಹೆಸರಿನಲ್ಲಿ ಅದು ಹುಟ್ಟಿಕೊಂಡಿದೆ. ಎಲ್ಲಿ ಸ್ಪೋಟವಿಜ್ನಾನ ಹುಟ್ಟಿತೊ ಅದೇ ಇಂಗ್ಲೆಂಡಿನಲ್ಲಿ ’ಫೋಕ್ ಲೋರ್’ ಎಂಬ ಹೆಸರಿನಲ್ಲಿ ಕಾಣಿಸಿಕೊಂಡರೆ, ಜರ್ಮನಿಯಲ್ಲಿ ’ವಾಲ್ಕ್ಸುಂಡೆ’ ಎಂಬ ಹೆಸರಿನಿಂದ ಜನ್ಮತಳೆಯಿತು. ಇದನ್ನು ಜನಪದವಿಜ್ನಾನ, ಪಾರಂಪರಿಕವಿಜ್ನಾನ ಎಂದು ಆಗ ಗುರುತಿಸಲಾಯಿತು. ನಿಸರ್ಗ ಮತ್ತು ಸಮಾಜ ಎರಡನ್ನೂ ಒಳಗೊಂಡ ಅಖಂಡಜ್ನಾನ ಎಂದು ಅದನ್ನು ಸ್ಪಷ್ಟಮಾಡಿಕೊಳ್ಳಲಾಯಿತು. ಜಗತ್ತಿನ ತಜ್ನರು ಇದನ್ನು ಗಮನಿಸಿದರು. ಯೂರೊಕೇಂದ್ರ ಚಿಂತನೆಯನ್ನು ಅನುಸರಿಸಿದವರು ಇದನ್ನು ಪಾರಂಪರಿಕವಿಜ್ನಾನ ಎಂದು ಕರೆದರೆ ಹಿಂದುಳಿದ ದೇಶಗಳವರು ಇದು ದೇಶಬದ್ಧಜ್ನಾನವಾದುದರಿಂದ ದೇಸಿ ಎಂದು ಕರೆದುಕೊಂಡರು. ಅಂಥ ನಮ್ಮೆಲ್ಲರನ್ನು ಕೂಡಿಸಿಕೊಳ್ಳುವ ಸಾವಧಾನವಿಜ್ನಾನವನ್ನು ಅರ್ಥಾತ್ ಜಾನಪದವನ್ನು ಕೈಗೆತ್ತಿಕೊಳ್ಳಬಹುದೆ ?

ಕಾಮೆಂಟ್‌ಗಳಿಲ್ಲ: