ಗುರುವಾರ, ಮಾರ್ಚ್ 24, 2016

‪ಗಾಂಧಿಯೊಬ್ಬರೇ‬ ‪ಸಾಕಾಗಲ್ಲ‬

-ದಿನೇಶ್‌‬ ಅಮಿನಮಟ್ಟು‬

‪#‎ಕೃಪೆ‬:‪#‎ಪ್ರಜಾವಾಣಿ‬ ‪#‎ಸಂಗತ‬ #25/03/2016


ಕೋಮುವಾದಕ್ಕೆ ಮೊದಲ ಬಾರಿ ಸೈದ್ಧಾಂತಿಕ ಮುಖವಾಡ ತೊಡಿಸಿದವರು ಸಾವರ್ಕರ್ ಅಲ್ಲವೇ?
ಹಿಂದುತ್ವವನ್ನು ಎದುರಿಸಲು ಗಾಂಧಿವಾದವೇ ಸೂಕ್ತ ಎಂದು ಪ್ರಸನ್ನ ತಮ್ಮ ಎಂದಿನ ಗಾಂಧಿವಾದದ ಪ್ರೀತಿಯಿಂದ ಪ್ರತಿಪಾದಿಸಿದ್ದಾರೆ. (ಅಭಿಮತ, ಮಾರ್ಚ್‌ 12) ಇದನ್ನು ಹೇಳುವ ಭರದಲ್ಲಿ ಕಮ್ಯುನಿಸ್ಟರು, ಅಂಬೇಡ್ಕರ್‌ವಾದಿಗಳು ಮತ್ತು ಸಮಾಜವಾದಿಗಳನ್ನು ಕೆಲಸಕ್ಕೆ ಬಾರದವರು ಎಂದು ಮೂಲೆಗೆ ತಳ್ಳಿದ್ದಾರೆ.

ನನ್ನ ಪ್ರಕಾರ ಕೋಮುವಾದದ ಹೆಸರಲ್ಲಿ ಬಲಗೊಳ್ಳುತ್ತಿರುವ ಪುರೋಹಿತಶಾಹಿಯನ್ನು ಎದುರಿಸಲು ನಮಗೆ ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್, ರಾಮಮನೋಹರ ಲೋಹಿಯಾ, ಕಾರ್ಲ್ ಮಾರ್ಕ್ಸ್, ಪೆರಿಯಾರ್, ನಾರಾಯಣ ಗುರು, ಜ್ಯೋತಿಬಾ ಫುಲೆ, ಕನಕದಾಸ, ಕಬೀರ ಮಾತ್ರವಲ್ಲ, ಮಂಟೆಸ್ವಾಮಿ ಬೇಕು. ಜುಮಾದಿ, ಕೋರ್ದಬ್ಬು ಭೂತಗಳೂ ಬೇಕು.
ಇವರಲ್ಲಿ ಯಾರೂ ದೋಷಾತೀತರಲ್ಲ, ಎದುರಾಳಿಯಾಗಿ ವಾದಕ್ಕೆ ನಿಂತರೆ ಇವರನ್ನು ಒಂದೆರಡು ಸುತ್ತು ಸೋಲಿಸಿಯೂ ಬಿಡಬಹುದು. ಅಂತಹ ವೈರುಧ್ಯ ಪ್ರತಿಯೊಂದು ವಾದದಲ್ಲಿಯೂ ಇದೆ.

ಈ ವೈರುಧ್ಯಗಳನ್ನು ಸುಧಾರಕರು ಆರಿಸಿಕೊಂಡ ದಾರಿಯಲ್ಲಿ ಮತ್ತು ಅವರ ಅನುಯಾಯಿಗಳೆನಿಸಿಕೊಂಡವರ ಆತ್ಮವಂಚಕ ನಡವಳಿಕೆಯಲ್ಲಿ ನಾವು ಕಾಣಬಹುದು, ಅವರು ಆರಿಸಿಕೊಂಡ ಗುರಿಯಲ್ಲಿ ಅಲ್ಲ ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳಬೇಕಾಗಿದೆ. ದಾರಿ ಬಗ್ಗೆ ಜಗಳವಾಡುವುದು ಇದ್ದೇ ಇದೆ, ಮೊದಲು ಗುರಿ ಬಗ್ಗೆ ಇರುವ ಸಾಮ್ಯತೆಯನ್ನು ಕಂಡುಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ನನ್ನಲ್ಲಿ ಅಚ್ಚರಿ ಮೂಡಿಸಿದ್ದು ಪ್ರಸನ್ನ ತಮ್ಮ ಚರ್ಚೆಯಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಅನಗತ್ಯವಾಗಿ (ದುರುದ್ದೇಶದಿಂದ ಎಂದು ಹೇಳಲಾರೆ) ಎಳೆದು ತಂದಿರುವುದು. ಜತೆಯಲ್ಲಿ ಮಹಮ್ಮದ್ ಅಲಿ ಜಿನ್ನಾ ಮತ್ತು ವಿ.ಡಿ.ಸಾವರ್ಕರ್ ಅವರನ್ನು ಒಂದೇ ತಕ್ಕಡಿಯಲ್ಲಿ ಕೂರಿಸಿದ್ದು. ಹೌದು ಇಬ್ಬರೂ ನಾಸ್ತಿಕರಾಗಿದ್ದರೆನ್ನುವುದು ನಿಜ. ಆದರೆ ಇಬ್ಬರೂ ಧಾರ್ಮಿಕ ರಾಜಕಾರಣಿಗಳಾಗಿದ್ದರು ಎನ್ನುವ ಲೇಬಲ್ ಹಚ್ಚುವ ಮುನ್ನ ಪ್ರಸನ್ನ ಒಮ್ಮೆ ಯೋಚಿಸಬೇಕಾಗಿತ್ತು.

ಜಿನ್ನಾ ಒಬ್ಬ ಅಪ್ರಾಮಾಣಿಕ ಧಾರ್ಮಿಕ ರಾಜಕಾರಣಿ. ಧರ್ಮ ಜಿನ್ನಾ ಅವರಿಗೆ ರಾಜಕೀಯದ ಗದ್ದುಗೆಯನ್ನೇರುವ ಮೆಟ್ಟಿಲಾಗಿತ್ತು. ಅವರು ಇಸ್ಲಾಂ ಧರ್ಮವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಇಲ್ಲವೇ ಅಧಿಕಾರಕ್ಕಿಂತ ಹೆಚ್ಚು ಪ್ರೀತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿನ್ನಾ ಅವರನ್ನು ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಇಲ್ಲವೇ ನರೇಂದ್ರ ಮೋದಿಯವರಿಗೆ ಹೋಲಿಸಬಹುದು ಅಷ್ಟೇ.

ಗೋಲ್‌ವಾಲ್ಕರ್, ಬಾಳಾಸಾಹೇಬ್ ದೇವರಸ್, ಭಾಗವತ್ ಅವರಂತೆ ವಿ.ಡಿ.ಸಾವರ್ಕರ್ ಒಬ್ಬ ಪ್ರಾಮಾಣಿಕ ಹಿಂದೂ ಪುರೋಹಿತಶಾಹಿ ನಾಯಕ. ಜಿನ್ನಾ, ವಾಜಪೇಯಿ, ಅಡ್ವಾಣಿ, ಮೋದಿ ಮೊದಲಾದವರು ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಂಡರೆ ಸಾವರ್ಕರ್ ಮತ್ತು ಸಂಗಾತಿಗಳು ತಾವು ನಂಬಿರುವ ಹಿಂದೂ ಪುರೋಹಿತಶಾಹಿ ವ್ಯವಸ್ಥೆಯನ್ನು ಧರ್ಮದ ಹೆಸರಲ್ಲಿ ಬಲಗೊಳಿಸಲು ರಾಜಕೀಯವನ್ನು ಬಳಸುತ್ತಾ ಬಂದಿದ್ದಾರೆ. ಸಾವರ್ಕರ್ ಮತ್ತು ಸಂಗಾತಿಗಳಿಗೆ ರಾಜಕೀಯ ಗುರಿ ಅಲ್ಲ, ಅದು ದಾರಿ.

ರಾಜಕೀಯ ಮತ್ತು ಧರ್ಮಗಳ ಈ ಸೂಕ್ಷ್ಮವನ್ನು ಅರಿಯದೆ ಹೋದರೆ ಕೋಮುವಾದದ ವಿರುದ್ಧದ ಹೋರಾಟ ಮುಖವಾಡಗಳ ಜತೆ ಗುದ್ದಾಟವಾಗುತ್ತದೆ, ಮುಖಗಳ ಜತೆ ಅಲ್ಲ.

ಪ್ರಸನ್ನ ಅವರು ಸಾವರ್ಕರ್ ಅವರಿಗೆ ‘ಅಪ್ರತಿಮ ಬುದ್ಧಿಜೀವಿ’ ಎಂಬ ಸರ್ಟಿಫಿಕೇಟ್ ನೀಡಿರುವುದು ನನ್ನ ಇನ್ನೊಂದು ಅಚ್ಚರಿ. ಬುದ್ಧಿವಂತಿಕೆಯ ವ್ಯಾಖ್ಯಾನ ಏನು? ತಥಾಕಥಿತ ಬುದ್ಧಿವಂತರು ಸಮಾಜಕ್ಕೆ ಮಾಡಿದಷ್ಟು ಅನ್ಯಾಯವನ್ನು ದಡ್ಡರು ಮಾಡಿಲ್ಲ. ಇದರಿಂದಾಗಿಯೇ ‘ಬುದ್ಧಿ ಇಲ್ಲದ’ ದಡ್ಡ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ‘ಬುದ್ಧಿವಂತ’ ಮಲ್ಯ ಬ್ಯಾಂಕ್ ಮುಳುಗಿಸಿ ವಿದೇಶದಲ್ಲಿ ಮಜಾ ಮಾಡುತ್ತಿರುವುದು.

ಸಾವರ್ಕರ್ ಅವರಿಗೆ ಸರ್ಟಿಫಿಕೇಟ್ ನೀಡಲು ಪ್ರಸನ್ನ ಸಿಪಾಯಿ ದಂಗೆ ಮತ್ತು ದೇಸಿವಾದದ ಬಗೆಗಿನ ಬರವಣಿಗೆಗಳನ್ನು ಉಲ್ಲೇಖಿಸಿದ್ದಾರೆ. ‘ಅಪ್ರತಿಮ ಬುದ್ಧಿಜೀವಿ’ಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಓದಬೇಕಾಗಿರುವುದು ಅವರು ಬರೆದಿರುವ ‘ಹಿಂದುತ್ವ’ ಪುಸ್ತಕವನ್ನಲ್ಲವೇ?
‘ಹಿಂದುತ್ವ ಎನ್ನುವುದು ದೇಶ, ಗಡಿ ಮೀರಿದ ಪ್ರಶ್ನೆ, ಕೇವಲ ವಾಸದ ಬಲದಿಂದಲೇ ಒಬ್ಬ ಹಿಂದೂ ಆಗಲು ಸಾಧ್ಯ ಇಲ್ಲ, ಪ್ರತಿಯೊಬ್ಬ ಹಿಂದೂವಿಗೂ ಈ ಸಿಂಧೂಸ್ಥಾನ ಪಿತೃಭೂಮಿಯೂ ಹೌದು, ಪುಣ್ಯಭೂಮಿಯೂ ಹೌದು. ಇದರಿಂದಾಗಿ ಮುಸ್ಲಿಮ್ ಇಲ್ಲವೇ ಕ್ರಿಶ್ಚಿಯನ್ನರಿಗೆ ವಂಶಪಾರಂಪರ್ಯವಾಗಿ ಭಾರತ ಪಿತೃಭೂಮಿಯಾಗಿದ್ದರೂ ಭಾಷೆ, ಸಂಸ್ಕೃತಿ, ಆಚಾರ, ಜನಪದ, ಇತಿಹಾಸಗಳಿಂದಾಗಿ ಅವರನ್ನು ಹಿಂದೂಗಳೆನ್ನಲು ಸಾಧ್ಯ ಇಲ್ಲ. ಅವರ ಪುಣ್ಯಭೂಮಿ ಅರೇಬಿಯಾ ಇಲ್ಲವೆ ಪ್ಯಾಲೆಸ್ಟೀನ್‌ನಲ್ಲಿದೆ.

ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಮಾತ್ರ ಹಿಂದೂಗಳು’ ಎಂದು ಮೊದಲ ಬಾರಿ ಈ ನೆಲದಲ್ಲಿ ಕೋಮುವಾದಕ್ಕೆ ಸೈದ್ಧಾಂತಿಕ ಮುಖವಾಡ ತೊಡಿಸಿದವರು ಸಾವರ್ಕರ್ ಅಲ್ಲವೇ? ಹಿಂದುತ್ವವನ್ನು ಎದುರಿಸುವ ಚರ್ಚೆಯಲ್ಲಿ ಪ್ರತಿವಾದಿಯಾಗಿ ಕಾಣಿಸಿಕೊಳ್ಳಬೇಕಾದ ಸಾವರ್ಕರ್ ಅವರನ್ನು ಗಾಂಧೀಜಿ ಜತೆಯಲ್ಲಿ ಕಕ್ಷಿದಾರರ ಸ್ಥಾನದಲ್ಲಿ ಪ್ರಸನ್ನ ನಿಲ್ಲಿಸಿದಂತಾಗಿದೆ.

ಕೊನೆಯದಾಗಿ, ಪ್ರಸನ್ನ ಗಾಂಧಿವಾದದಲ್ಲಿ ಬಡತನ, ಸತ್ಯ, ಅಹಿಂಸೆಗಳು ಉಡುಪಿಯ ಶ್ರೀಕೃಷ್ಣನ ಮೂರ್ತಿಯಂತೆ ತನ್ನ ಕಾಲುಗಳನ್ನು ಭದ್ರವಾಗಿ ನೆಲಕ್ಕೆ ಊರಿ ನಿಂತಿವೆ ಎಂದು ಹೇಳುವ ಮೂಲಕ ಗಾಂಧಿವಾದದ ಬಗೆಗಿನ ನಮ್ಮಂತಹವರ ತಕರಾರನ್ನು ತಮಗರಿವಿಲ್ಲದೆ ಒಪ್ಪಿಕೊಂಡಂತಿದೆ. ಜಗತ್ತಿನ ಎಲ್ಲ ದೇವಾಲಯಗಳ ಮೂರ್ತಿಗಳ ಕಾಲುಗಳು ಭದ್ರವಾಗಿ ನೆಲಕ್ಕೆ ಊರಿಬಿಟ್ಟಿವೆ ಎಂದು ಹೇಳಿಬಿಡಬಹುದು, ಆದರೆ ಉಡುಪಿಯ ಕೃಷ್ಣನದ್ದಲ್ಲ. ಅವು ಕನಕನ ಭಕ್ತಿಗೆ ಒಲಿದು ಹಿಂದಕ್ಕೆ ತಿರುಗಿದ ಕಾಲುಗಳು ಅಲ್ಲವೇ?

ಗಾಂಧೀಜಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ನಡುವಿನ ತಕರಾರಿನ ಮೂಲವೇ ಉಡುಪಿ ಕೃಷ್ಣ ನೆನಪಿಸುತ್ತಲೇ ಇರುವ ಜಾತಿ ವ್ಯವಸ್ಥೆ. ಗಾಂಧಿ ಅವರಿಗೆ ಜಾತಿ ಕುರುಡುತನ ಇತ್ತು. ಇದು 1925ರಲ್ಲಿ ನಡೆದ ಗಾಂಧೀಜಿ-ನಾರಾಯಣ ಗುರು ನಡುವಿನ ಭೇಟಿಯಲ್ಲಿಯೂ ಕಂಡಿತ್ತು.
ವೈವಿಧ್ಯತೆ ಪ್ರಕೃತಿ ಸಹಜ ಎಂದು ಮರದಲ್ಲಿನ ವಿಭಿನ್ನ ಆಕಾರಗಳ ಎಲೆಗಳನ್ನು ತೋರಿಸಿ ವರ್ಣಾಶ್ರಮ ವ್ಯವಸ್ಥೆಯನ್ನು ಗಾಂಧೀಜಿ ಸಮರ್ಥಿಸಿದ್ದರು. ನಾರಾಯಣ ಗುರುಗಳು ಅದೇ ಮರದ ಎಲೆಗಳನ್ನು ಕಿತ್ತು ತಂದು ಜಜ್ಜಿ ಹಿಂಡಿ ರಸವನ್ನು ಗಾಂಧೀಜಿ ಬೊಗಸೆಗೆ ಸುರಿದು ‘ಆಕಾರ ಬೇರೆಯಾದರೂ ರಸದ ಬಣ್ಣ, ರುಚಿ ಒಂದೇ ಅಲ್ಲವೇ?’ ಎಂದು ಬಾಯಿಮುಚ್ಚಿಸಿದ್ದರು.

ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಲಾಗದೆ, ಜಾತಿ ವ್ಯವಸ್ಥೆ ಬಗ್ಗೆ ಸ್ಪಷ್ಟತೆಯನ್ನು ಪಡೆಯಲಾಗದೆ ಕೊನೆಯವರೆಗೂ ಒದ್ದಾಡಿದ ಗಾಂಧಿ ಅವರ ವಿಳಂಬವಾದ ಮನಪರಿವರ್ತನೆ ಕೂಡಾ ಅಂಬೇಡ್ಕರ್ ಎಂಬ ಪ್ರತಿನಾಯಕನನ್ನು ಎದುರಿಸುವ ಕಾರ್ಯತಂತ್ರವೇನೋ ಎಂಬ ಅನುಮಾನ ಹುಟ್ಟಿಸುವಂತಿದೆ. ಇದು ಇಂದಿಗೂ ಗಾಂಧಿವಾದದ ಕೆಲವು ಮಿತಿಗಳಲ್ಲಿ ಒಂದಾಗಿ ಉಳಿದಿದೆ.

ಈ ಕಾರಣದಿಂದಾಗಿಯೇ ಗಾಂಧಿ ಅವರಂತೆ ರೊಮ್ಯಾಂಟಿಕ್ ಆಗಿ ಗ್ರಾಮಗಳನ್ನು ಅದೇ ಗ್ರಾಮದಲ್ಲಿ ಜಾತೀಯತೆ ಮತ್ತು ಊಳಿಗಮಾನ್ಯ ವ್ಯವಸ್ಥೆಯ ಬಲಿಪಶುಗಳಾಗಿ ಬದುಕುತ್ತಿರುವವರಿಗೆ ನೋಡಲು ಸಾಧ್ಯವೇ ಇಲ್ಲ. ಗ್ರಾಮಸ್ವರಾಜ್ಯದ ಬಹುದೊಡ್ಡ ಸಾಮಾಜಿಕ ಶತ್ರುವೇ ಜಾತಿ ವ್ಯವಸ್ಥೆ. ಜಾತಿಗಿಂತ ದೊಡ್ಡ ಹಿಂಸೆ ಈ ಜಗತ್ತಿನಲ್ಲಿ ಯಾವುದಿದೆ? ಇವೆಲ್ಲದರ ಬಗ್ಗೆ ಹೇಳಬೇಕಾದಷ್ಟು ಸ್ಪಷ್ಟವಾಗಿ ಗಾಂಧೀಜಿ ಹೇಳಲೇ ಇಲ್ಲ.
ಕೋಮುವಾದವನ್ನು ಎದುರಿಸಲು ಗಾಂಧೀಜಿ ಪ್ರತಿಪಾದಿಸಿದ ಹಿಂದೂ-ಮುಸ್ಲಿಮ್ ಸೌಹಾರ್ದ ಒಂದು ಪ್ರಮುಖ ಸಾಧನ ಎನ್ನುವುದು ಒಪ್ಪಿಕೊಳ್ಳುವಂತಹದ್ದೇ ಆಗಿದೆ.

ಇದಕ್ಕಿಂತ ಮೊದಲು ಈ ಸೌಹಾರ್ದಕ್ಕೆ ಅಡ್ಡಿಯಾಗಿರುವ ಒಳಗಿನ ಶತ್ರುಗಳನ್ನು ವಿಚಾರಿಸಿಕೊಳ್ಳುವುದು ಬೇಡವೇ? ಧರ್ಮದ ನಶೆಯುಣಿಸುವ ಮೂಲಕ ಜಾತಿಯ ನೋವು ಮರೆಸಿ ಅದು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುತ್ತಿರುವ ಕೋಮುವಾದಿಗಳ ಮುಖವಾಡ ಕಳಚಲು ಗಾಂಧಿ ಅವರಿಗಿಂತಲೂ ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣ ಗುರು ನಮಗೆ ಹೆಚ್ಚು ಸಹಕಾರಿ.
-ಲೇಖಕ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ

ಶನಿವಾರ, ಮಾರ್ಚ್ 19, 2016

ಡಾ. ಪುರುಷೋತ್ತಮ ಬಿಳಿಮಲೆಯವರ ಕನ್ನಡ ವಿವಿ ನುಡಿಹಬ್ಬದ ಭಾಷಣ


ಡಾ. ಪುರುಷೋತ್ತಮ ಬಿಳಿಮಲೆ 


 ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಶ್ರೀ ವಾಜುಬಾಯಿ ಪಟೇಲ ಅವರೇ, ಕರ್ನಾಟಕ ಸರ್ಕಾರದ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರೂ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಶ್ರೀ ಟಿ ಬಿ ಜಯಚಂದ್ರ ಅವರೇ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಲ್ಲಿಕಾ ಘಂಟಿ ಅವರೇ, ಕುಲಸಚಿವರಾದ ಡಾ. ಪಾಂಡುರಂಗ ಬಾಬು ಅವರೇ, ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ತಿನ ಸದಸ್ಯರೆ, ಇವತ್ತು ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ಆಗಮಿಸಿರುವ ಮಹನೀಯರೇ, ವಿವಿಧ ನಿಕಾಯಗಳ ಡೀನರುಗಳೇ, ವಿಶ್ವವಿದ್ಯಾಲಯದ ಎಲ್ಲ ಉದ್ಯೋಗಿಗಳೆ, ಮಾಧ್ಯಮದ ಪ್ರತಿನಿಧಿಗಳೆ, ಮತ್ತು ಎಲ್ಲ ಕನ್ನಡ ಬಂಧುಗಳೇ,

ಮೊದಲಿಗೆ, ಈ ನುಡಿ ಹಬ್ಬದಲ್ಲಿ ವಿವಿಧ ಪದವಿಗಳನ್ನು ಸ್ವೀಕರಿಸುತ್ತಿರುವ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಅಭಿನಂದನೆಗಳು. ಹಾಗೆಯೇ ನಾಡೋಜ ಪ್ರಶಸ್ತಿಗೆ ಭಾಜನರಾದ ಮಹನೀಯರಿಗೆ ಅಭಿವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ತಮ್ಮ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಕರ್ನಾಟಕ ಇನ್ನಷ್ಟು ಆರೋಗ್ಯಕರವಾಗಿ ಬೆಳೆಯಲಿ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇನೆ.

ನಾನು ಇಲ್ಲಿ ಕೆಲವು ಮಾತುಗಳನ್ನು ಹೇಳುವ ಹೊತ್ತಿಗೆ ಕನ್ನಡ ವಿಶ್ವ ವಿದ್ಯಾಲಯವು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ಬಂದು ನಿಂತಿದೆ. ಕಳೆದ 23 ವರ್ಷಗಳಲ್ಲಿ ಇಲ್ಲಿ ನಡೆದ ನುಡಿಹಬ್ಬಗಳಲ್ಲಿ ಅನೇಕ ಮಹನೀಯರುಗಳು ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ವಿಸ್ತರಣೆಯ ಬಗೆಗೆ ಅತ್ಯಂತ ಮೌಲಿಕವಾದ ಮಾತುಗಳನ್ನು ಹೇಳಿದ್ದಾರೆ. ಅವು ನಮ್ಮ ಕನ್ನಡ ಪರ ಚಿಂತನಾಕ್ರಮಗಳ ಶಕ್ತಿಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿವೆ. ಇಲ್ಲಿ ಇದುವರೆಗೆ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ವಿದ್ವಾಂಸರುಗಳು ನಮ್ಮ ಅಧ್ಯಯನ ಕ್ರಮದ ವಿಭಿನ್ನ ಶಿಸ್ತುಗಳಿಗೆ ಸೇರಿದ್ದಾರೆ. ಅವರೆಲ್ಲರೂ ಕನ್ನಡ ವಿಶ್ವವಿದ್ಯಾಲಯದ ಅಪೂರ್ವ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿರುವರಲ್ಲದೆ, ಅದು ಮುಂದೆ ಮಾಡಬೇಕಾದ ಕೆಲವು ಕೆಲಸಗಳ ಬಗೆಗೆಯೂ ಮುನ್ಸೂಚನೆಗಳನ್ನು ನೀಡಿದ್ದಾರೆ. ಈ ಸಲಹೆಗಳಲ್ಲಿ ವಿಶ್ವವಿದ್ಯಾಲಯ ಎಷ್ಟನ್ನು ಅಂಗೀಕರಿಸಿದೆ, ಎಷ್ಟನ್ನು ನಿರಾಕರಿಸಿದೆ ಮತ್ತು ಎಷ್ಟನ್ನು ನಿರ್ಲಕ್ಷಿಸಿದೆ ಎಂಬುದನ್ನು ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಒಂದು ವಿಶ್ಲೇಷಣೆಗೆ ಒಳ ಪಡಿಸಲು ಸಾಧ್ಯವಾದರೆ ಅದರಿಂದ ತುಂಬಾ ಪ್ರಯೋಜನವಾದೀತು.

1992ರಲ್ಲಿ ಈ ವಿಶ್ವವಿದ್ಯಾಲಯ ಆರಂಭಗೊಂಡಾಗ ಇಲ್ಲಿದ್ದದ್ದು ಬೆಣಚುಕಲ್ಲಿನ ಬೋಳುಗುಡ್ಡ ಮತ್ತು ನೀಲಿ ಪರದೆ ಹಾಸಿಕೊಂಡ ಕಮಲಾಪುರ ಕೆರೆ. ಆದರೆ ಈಗ ಈ ಕೆರೆಯಿಂದ ಸಾಕಷ್ಟು ನೀರು ಹರಿದಿದೆ, ಬೋಳುಗುಡ್ಡದ ಬೆಣಚುಕಲ್ಲುಗಳು ಹಸನಾದ ಕನಸುಗಳನ್ನು ಬಿತ್ತುತ್ತಾ ಹಸಿರು ಗಿಡಮರಗಳಿಗೆ ಆಸರೆ ನೀಡಿ ನಮ್ಮನ್ನು ಇಲ್ಲಿವರೆಗೆ ಕರೆದುತಂದಿದೆ. ಈ ನಡಿಗೆಯನ್ನು ಹತ್ತಿರದಿಂದ ಮತ್ತು ದೂರದಿಂದ, ಒಳಗಿನಿಂದ ಮತ್ತು ಹೊರಗಿನಿಂದ ಕಂಡವನು ನಾನು. ಹೀಗೆ ಈ ವಿಶ್ವವಿದ್ಯಾಲಯದ ಭಾಗವಾಗಿ ಬೆಳೆದ ನನ್ನನ್ನು ಇಲ್ಲಿಗೆ ಈಗ ಅತಿಥಿಯಾಗಿ ಕರೆದಿದ್ದೀರಿ. ಇದನ್ನು ಒಂದು ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. ಆದರೆ ಇದು ಒಂದು ಬಗೆಯ ಕಷ್ಟವನ್ನೂ ತಂದು ಕೊಟ್ಟಿದೆ. ಜೊತೆಗೆ ಓಡಾಡಿದ ಜನಗಳ ಮುಂದೆಯೇ ಅತಿಥಿಯಾಗಿ ಮಾತಾಡುವುದು ಸುಲಭವಲ್ಲ. ಈ ಸಂಕೋಚದಲ್ಲಿ ಕನ್ನಡ ಸಂಶೋಧನೆಗೆ ಸಂಬಂಧಿಸಿದಂತೆ ಕೇವಲ ಎರಡು ವಿಷಯಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ.

1. ಸಂಶೋಧಕರ ಮುಂದಿರುವ ಆತಂಕಗಳು, ಅಪಾಯಗಳು ಮತ್ತು ಸವಾಲುಗಳು 

  ಈ ವಿಶ್ವವಿದ್ಯಾಲಯನ್ನು ಸಂಶೋಧನೆಗಾಗಿಯೇ ಕಟ್ಟಲಾಯಿತು. ‘ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು ಇದರ ಗುರಿ’ ಎಂದು ಮೊದಲಿನಿಂದಲೂ ಹೇಳುತ್ತಾ ಬರಲಾಗಿದೆ. ಈ ಗುರಿ ಸಾಧನೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಬಹುತೇಕ ಯಶಸ್ವಿಯಾಗಿದೆ. ದೇಸೀ ಚಿಂತನಾಕ್ರಮವೊಂದನ್ನು ಕಟ್ಟಲು ಬೇಕಾದ ಮೂಲಸಾಮಗ್ರಿಗಳನ್ನು ಇಲ್ಲಿನ ಅನೇಕ ಸಂಶೋಧಕರು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಜೊತೆಗೆ ಇತಿಹಾಸ, ಶಾಸನ, ಹಸ್ತಪ್ರತಿ, ಗ್ರಂಥ ಸಂಪಾದನೆ, ಜಾನಪದ, ಛಂದಸ್ಸು, ಸ್ಥಳನಾಮ, ಮೊದಲಾದ ಕನ್ನಡದ ಮಾಹಿತಿಗಳ ಮೂಲಕವೇ ಕನ್ನಡವನ್ನು ಕಟ್ಟಿದ ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಅವರಂಥವರು ಇಲ್ಲಿ ಕುಲಪತಿಗಳಾಗಿ ಕೆಲಸ ಮಾಡಿದ್ದಾರೆ. ಅವರು ಬರೆದ ಸಾವಿರಕ್ಕೂ ಹೆಚ್ಚು ಲೇಖನಗಳು ಮತ್ತು ನೂರಕ್ಕೂ ಹೆಚ್ಚು ಕೃತಿಗಳು ಕನ್ನಡ ಸಂಶೋಧಕನೊಬ್ಬನ ಚರಮ ಸಿದ್ಧಿಯ ಹಾಗೆ ಭಾಸವಾಗುತ್ತದೆ. ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿರುವಂತೆ ತೋರುತ್ತಿದೆ. ಕಲಬುರ್ಗಿಯವರು ತಮ್ಮ ಸಂಶೋಧನೆಯ ಸತ್ಯಗಳಿಂದಾಗಿಯೇ ಅಮಾನುಷವಾಗಿ ಕೊಲೆಯಾದರು.ಸಂಶೋಧಕ ಆಗಾಗ ಶಿಲುಬೆಗೇರಬೇಕಾಗುತ್ತದೆ ಎಂಬ ಅವರ ಮಾತು ಅವರಲ್ಲಿಯೇ ನಿಜವಾಯಿತು. ಕೊಲೆಗಾರರನ್ನು ಇವತ್ತಿನವರೆಗೆ ಸರಕಾರಕ್ಕೆ ಹಿಡಿಯಲಾಗಿಲ್ಲ. ಅಂದರೆ ಸಂಶೋಧಕರು ಇಂದು ತಮ್ಮ ಓದಿನಲ್ಲಿ ಕಂಡುಕೊಂಡ ಅಥವಾ ಕ್ಷೇೀತ್ರಕಾರ್ಯದಲ್ಲಿ ತಾವು ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ತಮ್ಮ ಸಂಶೋಧನೆಯನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ. ಬದಲು ಸಮಕಾಲೀನ ಸಮಾಜ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನೇ ಹೇಳಬೇಕಾಗಿರುವ ಒತ್ತಡದಲ್ಲಿ ನಾವು ಸಿಲುಕಿದ್ದೇವೆ. ಟಿಪ್ಪೂ ಸುಲ್ತಾನನ ಲಾವಣಿಯೊಂದರಲ್ಲಿ ಬರುವ –

‘ಟೀಪು ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಅಫೀಮು ಇರಲಿಲ್ಲ, 
ಟೀಪುವಿನ ಕಾಲದೊಳು ಜೂಜಿನಾಟ ಮೇಣ್ ವೈಭಿಚಾರದ ಸುಳಿವಿಲ್ಲ’

ಎಂಬ ಸಾಲುಗಳನ್ನು ಉದ್ಧರಿಸಿದ್ದಕ್ಕೆ ನಾನು ಅನೇಕ ಕೆಟ್ಟ ಮತ್ತು ಅಶ್ಲೀಲ ಮಾತುಗಳನ್ನು ಕೇಳಬೇಕಾಯಿತು. ಪಂಡರಾಪುರ ವಿಠ್ಠಲನು ವಲಸೆಗಾರ ಪಶುಪಾಲಕರ ದೈವವಾಗಿರುವ ಸಾಧ್ಯತೆ ಇದೆ ಎಂಬ ಮಾತನ್ನು ಬರೆದದ್ದಕ್ಕೆ ನಾನು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ‘ದೇವನಹಳ್ಳಿಯಲ್ಲಿ ಟಿಪ್ಪು ಹುಟ್ಟಿದ್ದರಿಂದ ಅವನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬಹುದಾಗಿತ್ತು’ ಎಂಬ ಒಂದು ಸಣ್ಣ ಅಭಿಪ್ರಾಯನ್ನು ಗಿರೀಶ್ ಕಾರ್ನಾಡರು ವ್ಯಕ್ತಪಡಿಸಿದ್ದೇ ದೊಡ್ಡ ಅಪರಾಧವಾಗಿ ಅನೇಕರಿಗೆ ಕಂಡು ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕಾಯಿತು. ಕರ್ನಾಟಕವೂ ಸೇರಿದಂತೆ, ಈ ದೇಶದ ಸುದೀರ್ಘ ಇತಿಹಾಸದಲ್ಲಿ ಇಲ್ಲಿಗೆ ವಲಸೆ ಬಂದು ನೆಲೆಸಿದ ಜನಾಂಗಗಳ ಮತ್ತು ಸಮುದಾಯಗಳ ಲೆಕ್ಕ ಇಟ್ಟವರಿಲ್ಲ. ಒಂದು ಬಗೆಯ ನಿರಂತರತೆಯನ್ನು ಸದಾ ಕಾಪಾಡುತ್ತಲೇ, ಜೊತೆ ಜೊತೆಗೆ ಬದಲಾಗುತ್ತಾ ಹೋಗಿರುವ ಈ ನೆಲವು, ಬಗೆ ಬಗೆಯ ಸಂಸ್ಕøತಿಗಳನ್ನು ಉದಾರವಾಗಿ ಸ್ವೀಕರಿಸಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಈ ಹಂತದಲ್ಲಿ ನಡೆದ ಹೊಸ ಆವಿಷ್ಕಾರಗಳು, ಸೇರ್ಪಡೆಗಳು, ನಿರಾಕರಣೆಗಳು, ಸಂಘರ್ಷಗಳು ಮತ್ತು ಸಮನ್ವಯಗಳು ನಮ್ಮ ದೇಶವನ್ನು ಇತರ ದೇಶಗಳಿಂದ ಬೇರೆಯಾಗಿಸಿದೆ. ಜಗತ್ತಿನ ಮೂಲೆ ಮೂಲೆಗಳಿಂದ ಇಲ್ಲಿಗೆ ಬೌದ್ಧಿಕತೆ ಹರಿದು ಬಂದಿದೆ, ಭೌತಿಕ ಸಾಮಗ್ರಿಗಳು ಸಾಗಿ ಬಂದಿವೆ. ಅವು ಕಾಲಾಂತರದಲ್ಲಿ ಇಲ್ಲಿಯವರಿಗೆ ಗೊತ್ತಾಗದ ಹಾಗೆ ಇಲ್ಲಿಯವೇ ಆಗಿವೆ. ಇಂದು ಕರ್ನಾಟಕ ಸಂಗೀತದ ಮೂಲ ದ್ರವ್ಯವಾಗಿರುವ ವಯೋಲಿನ್, ಮಧ್ಯ ಏಷಿಯಾದಿಂದ ಇಲ್ಲಿಗೆ ಆಗಮಿಸಿದೆ. ಜನಪದ ಸಂಗೀತದ ಅದರಲ್ಲೂ ಭಾರತದ ದಲಿತರ ಸುಖ ದು:ಖಗಳ ಭಾಗವಾಗಿರುವ ದಪ್ಪು ಕೂಡಾ ಮೂಲತಹ ನಮ್ಮದಲ್ಲ. ಇಂಥ ಘಟನೆಗಳು ನಮಗೆ ಸಹನೆಯನ್ನು ಹೇಳಿಕೊಟ್ಟಿದೆ. ಈ ನೆಲದಲ್ಲಿ ನಡೆದ ಬಹುದೊಡ್ಡ ಸಂವಾದಗಳು ಇಂದು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿ ಕೆಲಸ ನಿರ್ವಹಿಸುತ್ತಿದೆ. ಕ್ಷಮೆಯನ್ನು ಧರ್ಮದ 10 ಲಕ್ಷಣಗಳಲ್ಲಿ ( ಕ್ಷಮಾ ದಮೋ ಆಸ್ತೇಯಂ..) ಒಂದು ಎಂದು ಪ್ರಾಚೀನ ಹಿಂದೂಗಳು ನಂಬಿದ್ದರು. ಆದರೆ ಈಗ ಏನನ್ನು ಹೇಳಿದರೆ ನಾನು ಅಪಾಯದಿಂದ ಪಾರಾಗಬಹುದು ಎಂದು ಎರಡೆರೆಡು ಬಾರಿ ಯೋಚಿಸಿ ಬರೆಯಬೇಕಾದ ಮತ್ತು ಮಾತಾಡಬೇಕಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸಂಶೋಧನೆಗಳು ಪೇಲವವಾಗುವುದರಲ್ಲಿ ಅನುಮಾನವಿಲ್ಲ.

ಈ ಸಮಸ್ಯೆ ಇನ್ನೂ ಜಟಿಲವಾಗಿರುವುದು ಸಂಶೋಧನೆಗೆ ಜಾತಿ ಮತ್ತು ಸಮುದಾಯಗಳು ಗಟ್ಟಿಯಾಗಿ ಅಂಟಿಕೊಂಡಿರುವುದರಿಂದ. ಪಂಪ, ಬಸವಣ್ಣ, ಕನಕದಾಸ ಕುವೆಂಪು, ಸಂಗೊಳ್ಳಿ ರಾಯಣ್ಣ , ಕೆಂಪೇ ಗೌಡ ಮೊದಲಾದ ಇತಿಹಾಸ ಪ್ರಸಿದ್ಧರು, ಎಲ್ಲ ಕನ್ನಡಿಗರ ಸೊತ್ತಾಗಿ ಬೆಳೆಯಬೇಕಾಗಿತ್ತು, ಆದರೆ ಅವರೆಲ್ಲ ಇಂದು ಒಂದೊಂದು ಸಮುದಾಯಗಳಿಗೆ ಸೀಮಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮತ್ತು ನಿರೀಕ್ಷೆಗೂ ಮೀರಿ ಎಲ್ಲ ಬಗೆಯ ವಿಮರ್ಶೆಗಳ ಗಡಿದಾಟಿ ಬೆಳೆದು ನಿಲ್ಲುತ್ತಿದ್ದಾರೆ. ಕರ್ನಾಟಕದ ಅನೇಕ ಚಾರಿತ್ರಿಕ ಘಟನೆಗಳನ್ನು, ಇತಿಹಾಸ ನಿರ್ಮಾಪಕರನ್ನು ಮತ್ತು ಸಾಹಿತಿಗಳನ್ನು ಜಾತಿಯ ಕಬಂಧ ಬಾಹುಗಳಿಂದ ಬಿಡಿಸದೇ ಹೋದರೆ ಯಾವ ಬಗೆಯ ಚರ್ಚೆಯೂ ಸಾಧ್ಯವಿಲ್ಲ, ಸಂಶೋಧನೆಯೂ ಸಾಧ್ಯವಿಲ್ಲ. ಈ ಮಾತು ಅನೇಕ ಜನಪದ ಕಲೆಗಳಿಗೂ ಅನ್ವಯವಾಗುತ್ತದೆ. ಯಕ್ಷಗಾನದಂಥ ಜನಪ್ರಿಯ ಕಲೆಯಲ್ಲಿ ವಿದೂಷಕನಿಗಿದ್ದ ಮುಕ್ತ ಅವಕಾಶ ಈಗ ಸಂಕುಚಿತವಾಗಿಬಿಟ್ಟಿದೆ. ಅರಸರನ್ನೂ, ದೇವಾನು ದೇವತೆಗಳನ್ನು, ಋಷಿಗಳನ್ನೂ ರಂಗದ ಮೇಲೆ ಎಗ್ಗಿಲ್ಲದೆ ಹಾಸ್ಯ ಮಾಡುವ ಅವಕಾಶ ಸಂಸ್ಕøತ ರಂಗಭೂಮಿಯಿಂದ ತೊಡಗಿ ಜನಪದ ರಂಗಭೂಮಿಯವರೆಗೆ ವಿದೂಷಕನಿಗೆ ಮೊದಲಿನಿಂದಲೂ ಇತ್ತು. ಆದರೆ ಈಗ ಇಲ್ಲ ಅಥವಾ ಅಂಥ ಅವಕಾಶ ಕಡಿಮೆಯಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿ ಕಲಾವಿದರ ಮುಕ್ತ ಅಭಿವ್ಯಕ್ತಿಗೆ ಈಗ ಅಂಕುಶ ಬಿದ್ದಿದೆ. ಇಂಥಲ್ಲಿ ಸೃಜನಶೀಲತೆ, ಸಂಶೋಧನೆ ಮತ್ತು ವಿಮರ್ಶೆ ಆರೋಗ್ಯಕರವಾಗಿ ಬೆಳೆಯುವುದು ಅಸಾಧ್ಯ. ಮಾರ್ಗ- 4 ರಲ್ಲಿ ಕಲಬುರ್ಗಿಯವರು ಹೀಗೆ ಬರೆಯುತ್ತಾರೆ-
‘ಇತ್ತೀಚೆಗೆ ಸಮಾಜದಲ್ಲಿ ಸಹಜ ಬದಲಾವಣೆಯ ಜೊತೆಗೆ ರಾಜಕೀಯ –ಧಾರ್ಮಿಕ ಧುರೀಣರಿಂದಾಗಿ ಕೃತಕ ಬದಲಾವಣೆಗಳು ಸಂಭವಿಸುತ್ತಲಿವೆ. ಇವರು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟು ಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆ ಎನ್ನುವುದು ಕೇವಲ ಇತಿಹಾಸದ ಶೋಧವಲ್ಲ, ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ (ಮಾರ್ಗ – 4, ಮಾರ್ಗಕ್ಕೆ ಮೊದಲು, 2004)
ಬಹುಶ: ಕನ್ನಡ ಎಂದೂ ಇಂಥ ಪರಿಸ್ಥಿತಿಯನ್ನು ಇದಿರಿಸಿಲ್ಲ ಎಂಬ ಅಂಶವು ನಮ್ಮ ಆತಂಕವನ್ನು ಇನ್ನೂ ಹೆಚ್ಚು ಮಾಡುತ್ತಿದೆ.
ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಪಂಪನಿಗೆ ‘ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಾ’ ಎಂದು ಹೇಳುವ ಧೈರ್ಯವಿತ್ತು. ‘ಮೂರ್ಧಾಭಿಷಿಕ್ತರಾದ ಹಲವು ಅರಸರು ವಿಷಯ ಭೋಗಗಳಿಂದಾಗಿ ಮದೋನ್ಮತ್ತರಾಗಿ ತಮ್ಮಂ ಮರೆತು ಧರ್ಮವೆಂಬ ದೋಣಿಯಿಂದ ಜಾರಿ ಬೀಳುತ್ತಾರೆ’ ಎಂದು ಅವನು ಕೆಂಡ ಕಾರುತ್ತಾನೆ. ಊರೆಲ್ಲಾ ತುಂಬಿಕೊಂಡಿರುವ ಬ್ರಹ್ಮಚಾರಿಗಳನ್ನು ಕಂಡ ಉರಿಲಿಂಗ ಪೆದ್ದಿಯು –‘ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಬ್ರಹ್ಮಚಾರಿಗಳಾಗಬೇಕೆಂದು ಬಣ್ಣವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ’ ಎಂದು ಕೆಣಕುತ್ತಾನೆ. ಮಧ್ಯಕಾಲೀನ ಕರ್ನಾಟಕದ ವೈಭವದ ಅರಸೊತ್ತಿಗೆಯನ್ನು ಕಣ್ಣಾರೆ ಕಂಡ ಕುಮಾರವ್ಯಾಸನು ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು, ಉರಿವುರಿವುತಿದೆ ದೇಶ, ನಾವಿನ್ನಿರಲು ಬಾರದು’ ಎಂದು ಗುಡುಗಿದ್ದಲ್ಲದೆ, ‘ಸಿರಿಯನುಳ್ಳವನವನೆ ಕುಲಜನು, ಸಿರಿಯನುಳ್ಳವನೇ ವಿದಗ್ಧನು, ಸಿರಿಯನುಳ್ಳವನೇ ಮಹಾತ್ಮನು ಸಕಲಗುಣಯುತನು’ ಎಂದು ವ್ಯಂಗ್ಯವಾಡುತ್ತಾನೆ. ಹಂಪಿಯ ಅಪಾರ ಸಂಪತ್ತನ್ನು ತಾತ್ವಿಕವಾಗಿ ನಿರಾಕರಿಸುವ ಪುರಂದರದಾಸರು

‘ ಲೊಳಲೊಟ್ಟೆ, ಎಲ್ಲಾ ಲೊಳಲೊಟ್ಟೆ, 
ಆನೆಕುದುರೆ ಎಲ್ಲ ಲೊಳಲೊಟ್ಟೆ
ಸೇನೆ ಭಂಡಾರವು ಲೊಳಲೊಟ್ಟೆ
ಮುತ್ತು ಮಾಣಿಕ್ಯ ಲೊಳಲೊಟ್ಟೆ
ಛತ್ರಚಾಮರ ಧ್ವಜ ಲೊಳಲೊಟ್ಟೆ’


ಎಂದು ಹೇಳಿ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂದು ಘೋಷಿಸುತ್ತಾನೆ. ಆ ಕಾಲದ ವರ್ತಕರು ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರಾಟಮಾಡುತ್ತಿದ್ದಾಗ, ಅದೇ ಬೀದಿಯಲ್ಲಿ ಓಡಾಡಿದ ದಾಸರು – ‘ ಲಂಗೋಟಿ ಬಲು ಒಳ್ಳೇದಣ್ಣ ಒಬ್ಬರ ಹಂಗಿಲ್ಲದೆ ಮಡಿಗೆ ಒದಗುವುದಣ್ಣ, ‘ ಎಂದು ಹಾಡಿ ಪ್ರತಿಭಟಿಸಿದರು. ‘ಕೆಂಡಗಣ್ಣ ನೊಸಲೊಳಗಿಟ್ಟ ನಮ್ಮ ಶಿವ ಕೆಂಡವ ಸೋಂಕಲು ಅಳುವೆಯಲ್ಲೋ ಖೋಡಿ’ ಎಂದು ದೈವವನ್ನೇ ಹಾಸ್ಯ ಮಾಡಲು ಅವರು ಹಿಂಜರಿಯಲಿಲ್ಲ.

ಹೀಗೆ ಎಲ್ಲ ಬಗೆಯ ಸ್ಥಾಪಿತ ಹಿತಾಸಕ್ತಿಗಳನ್ನು ವಿರೋಧಿಸಿಯೇ ಕನ್ನಡ ಸಾಹಿತ್ಯ ಬೆಳೆದಿದೆ. ಈ ಮಾತಿಗೆ ಕನ್ನಡದಲ್ಲಿ ಬರೆದ ಸೂಫಿ ಸಂತರು ಕೂಡಾ ಹೊರತಲ್ಲ. ಸಾಲಗುಂದ ಗುರು ಖಾದರಿ ಪೀರನು ‘ಮಸೀದಿ ಎಂಬುದು ಹಾಳಾದ ಜಾಗ, ಅದರ ಗೊಡವಿ ನಿನಗ್ಯಾಕಂತೆ ? ಎಂದು ಸಡ್ಡು ಹೊಡೆಯುತ್ತಾನೆ. ಹೀಗೆ ನಮ್ಮ ಸಾಹಿತ್ಯ ಪರಂಪರೆಗೆ ಅದರದ್ದೇ ಒಂದು ಗುಣವಿದೆ, ಅದು ಕನ್ನಡವನ್ನು ಕರ್ನಾಟಕವನ್ನು ಇದುವರೆಗೆ ಬದುಕಿಸಿದೆ. ಆದರೆ ಈಗ ಅದರ ಹಾದಿ ಬದಲುವಂತಿದೆಯಾದ್ದರಿಂದ ನಾವೆಲ್ಲ ಅರೆಕ್ಷಣ ನಿಂತು, ಯೋಚಿಸಿ, ಮುಂದುವರೆಯಬೇಕಾಗಿದೆ.

ಹಾಗೆ ನೋಡಿದರೆ, ಆಧುನಿಕತೆಯ ಪರಿಣಾಮವಾಗಿ ನಮ್ಮ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಾ ಪ್ರಗತಿಗಾಮಿಯಾಗಬಹುದೆಂದು ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಹುಟ್ಟಿದ್ದ ನಾವೆಲ್ಲ ನಂಬಿದ್ದೆವು. ಆದರೆ ಅದು ಹಾಗಾಗದೆ, ಮತ್ತೆ ನಮ್ಮ ಸಮಾಜದ ಪ್ರತಿಗಾಮೀ ಬೇರುಗಳು ಗಟ್ಟಿಗೊಳ್ಳುತ್ತಿವೆ. ಜಾತಿಯ ಪ್ರಜ್ಞೆ ಹೊಸ ರೂಪ ತಾಳುವುದರ ಜೊತೆಗೆ ಅದರೊಂದಿಗೆ ಕೋಮುವಾದವೂ ಸೇರಿಕೊಂಡು, ಸೃಜಶೀಲವಾಗಿದ್ದ ಜನ ಸಂಸ್ಕøತಿಗಳು ಇಂದು ಪತನಮುಖಿಯಾಗುತ್ತಲಿವೆ. ಈ ಬೆಳವಣಿಗೆಯ ತಕ್ಷಣದ ಪರಿಣಾಮವೆಂದರೆ ಸಮುದಾಯ, ಜಾತಿ ಮತ್ತು ಕೋಮುಗಳು ತಮ್ಮ ಆಂತರಿಕ ವಿಮರ್ಶನ ಪ್ರಜ್ಞೆಯನ್ನು ಕಳೆದುಕೊಂಡು, ಸ್ವಯಂ ವಿನಾಶದ ಕಡೆಗೆ ಚಲಿಸುವುದು. ನಿಖರ ಮತ್ತು ಪ್ರಖರ ವಿಮರ್ಶೆಗೆ ತೆರೆದುಕೊಂಡಿದ್ದ ಸಮುದಾಯಗಳು ಇಂದು ಒಂದು ಸಣ್ಣ ಠೀಕೆಗೆ ಬೆಚ್ಚಿ ಬೀಳುತ್ತಿವೆ ಎಂದರೆ ಅವು ಆಂತರಿಕವಾಗಿ ಕುಸಿದಿವೆ ಎಂದೇ ಅರ್ಥ. ಹಾಗಾಗಿಯೇ ಅವು ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಇತರರ ಮೇಲೆ ಆಕ್ರಮಣ ಮಾಡಲಾರಂಭಿಸಿವೆ. ಮೊದಲು ದಲಿತರನ್ನು ಸಜೀವವಾಗಿ ಸುಡಲಾಗುತ್ತಿತ್ತು, ಆದರೆ ಈಗ ದಲಿತರು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಡಲಾಗುತ್ತಿದೆ. ಕೋಮುವಾದಕ್ಕೆ ಕೋಮುವಾದ ಉತ್ತರವಾದರೆ, ಜಾತಿಗೆ ಜಾತಿ ಉತ್ತರವಾದರೆ, ದ್ವೇಷಕ್ಕೆ ದ್ವೇಷ ಉತ್ತರವಾದರೆ ಅವೆಲ್ಲವೂ ದ್ವಿಗುಣಗೊಳ್ಳುತ್ತವೆ ಎಂಬ ಸರಳ ಸತ್ಯವನ್ನು ನಾವೀಗ ಮನಗಾಣಲಾರದಾಗಿದ್ದೇವೆ. 
ಈ ಬಗೆಯ ಬೆಳವಣಿಗೆಗಳು ಜನರು ಸುದೀರ್ಘ ಕಾಲಾವಧಿಯಲ್ಲಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೆಳೆಸಿಕೊಂಡು ಬಂದ ಸಂಸ್ಕøತಿಯನ್ನು ಅಧೋಮುಖಿಯಾಗಿಸುತ್ತವೆ, ಇಲ್ಲವೇ ಅನ್ಯ ಸಂಸ್ಕøತಿಯ ಅಧೀನಕ್ಕೆ ಒಳಗಾಗಿ ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳಲು ಒತ್ತಡ ಹೇರುತ್ತವೆ. ನಮ್ಮ ಸಂಶೋಧನೆಗಳು ಈ ಬಗೆಯ ಬೆಳವಣಿಗೆಗಳಿಗೆ ಮುಖಾಮುಖಿಯಾಗದೇ ಹೋದರೆ ಅವು ಅನುಪಯುಕ್ತವಾಗಿಬಿಡುತ್ತವೆ. ಸಾಮಾಜಿಕ ಆಯಾಮವಿಲ್ಲದ ಸಂಶೋಧನೆಗಳು ಭಾರತದಲ್ಲಿ ವಿಶೇಷವಾದ್ದೇನನ್ನೂ ಸಾಧಿಸಲಾರವು. 

ಕರ್ನಾಟಕದ ಸಾಂಸ್ಕøತಿಕ ವೈವಿಧ್ಯದ ಸಂಕೇತಗಳೆಂದರೆ ಇಲ್ಲಿನ ಜನಪದ ಕಲೆಗಳು. ಗೀಗೀ ಪದಗ¼ಲ್ಲಿ ಗಂಡು ಹೆಚ್ಚೋ, ಹೆಣ್ಣು ಹೆಚ್ಚೋ ಚರ್ಚೆ ನಡೆಯುತ್ತದೆ. ಮುಸಲ್ಮಾನರ ರಂಜಾನ್ ಪದಗಳಲ್ಲಿ ಎಳೆ ವಯಸ್ಸಿನಲ್ಲಿ ಸತ್ತು ಹೋದ ಅಸಗರನನ್ನು ಅಭಿಮನ್ಯುವಿಗೆ ಹೋಲಿಸಲಾಗಿದೆ. ಅಕಾಲ ಮರಣಕ್ಕೀಡಾದ ಕುಂಬಳೆಯ ಆಲಿ, ಮತ್ತು ಕಡಲ ಪಯಣದಲ್ಲಿ ವಿಕ್ರಮ ಸಾಧಿಸಿದ ಬೊಬ್ಬರ್ಯ ಇಬ್ಬರೂ ಸಾಂಸ್ಕøತಿಕ ವೀರರೆಂದು ಗುರುತಿಸಿಕೊಂಡು ತುಳುನಾಡಿನ ಭೂತಾರಾಧನೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಸ್ಲಾಂ ಧರ್ಮವು ಭೂತಾರಾಧನೆಯನ್ನು ತಾತ್ವಿಕವಾಗಿ ಒಪ್ಪದು, ಹಿಂದೂ ಧರ್ಮವು ಮುಸ್ಲಿಂ ನಾಯಕರನ್ನು ತಮ್ಮ ದೈವವಾಗಿ ಅಂಗೀಕರಿಸದು. ಆದರೆ ಇವೆರಡೂ ಕರಾವಳಿಯ ಮಣ್ಣಲ್ಲಿ ಸಾಧ್ಯವಾಗಿದೆ. ತನಗೆ ದೇವಸ್ಥಾನ ಕಟ್ಟಿಕೊಟ್ಟ ಬಪ್ಪ ಬ್ಯಾರಿಗೆ ಮೂಲ್ಕಿಯ ದುರ್ಗಾ ಪರಮೇಶ್ವರಿಯು ಇಂದಿಗೂ ಗಂಧ ಪ್ರಸಾದ ನೀಡುತ್ತಾಳೆ, ಮಾತ್ರವಲ್ಲ ಆ ಊರಿಗೆ ಬಪ್ಪನಾಡೆಂಬ ಹೆಸರು ಪ್ರದಾನ ಮಾಡುತ್ತಾಳೆ. ಹಡಗಲಿಯ ಮೈಲಾರ ಲಿಂಗಪ್ಪನು ಅತಿಯಾದ ಹಣದಾಸೆಯ ತಿರುಪತಿ ತಿಮ್ಮಪ್ಪನ ಮಗಳನ್ನು ಮೋಸದಿಂದ ಮದುವೆಯಾಗುವುದಲ್ಲದೆ, ಚಿಕ್ಕಾಸು ಕೂಡಾ ಕೊಡದೆ ತಿಮ್ಮಪ್ಪನನ್ನು ನಿರಂತರವಾಗಿ ಗೋಳಾಡಿಸುತ್ತಾನೆ. ವಿಲೋಮ ವಿವಾಹ ನಿಷಿದ್ಧ ಎಂದು ಶಾಸ್ತ್ರಗಳು ಸಾರುತ್ತಿರುವಾಗಲೇ ಬಾವಿಗೆ ಬಿದ್ದ ದಲಿತ ಹುಡುಗನನ್ನು ಸೀರೆಯ ಸೆರಗಿಳಿಸಿ ಮೇಲೆತ್ತಿದ ಬ್ರಾಹಣ ಕನ್ಯೆಯ ಕತೆಗಳನ್ನು ಜನರು ಹೇಳುತ್ತಾ ಬಂದಿದ್ದಾರೆ. ಮುಸಲ್ಮಾನ ಅರಸರು ಹಿಂದೂ ರಾಜ್ಯವನ್ನು ನಾಶ ಮಾಡಿದರು ಎಂದು ಅನೇಕರು ಬರೆಯುತ್ತಿದ್ದಾಗ ಮುಸಲ್ಮಾನ ಹುಡುಗಿಯು ಹಿಂದೂ ಯುವಕನ್ನು ಪ್ರೀತಿಸಿದ ಕತೆಯನ್ನು ನಮ್ಮ ಜನಪದ ಕಲೆಗಳು ರಂಗದ ಮೇಲೆ ಪ್ರದರ್ಶಿಸುತ್ತಾ ಬಂದಿವೆ. ಇಂಥ ಹಲವು ಮುಕ್ತ ಮತ್ತು ಅದ್ಭುತ ನಿರೂಪಣೆಗಳಿರುವ ನಾಡು ಇದೀಗ ತನ್ನ ಬಾಗಿಲುಗಳನ್ನು ಮತ್ತಷ್ಟು ವಿಸ್ತಾರವಾಗಿ ತೆರೆದುಕೊಳ್ಳಬೇಕಿತ್ತು. ಆದರೆ ಅವು ಹೆಚ್ಚು ಹೆಚ್ಚು ಸಂಕುಚಿತಗೊಂಡು ಮುಚ್ಚಿಕೊಳ್ಳುತ್ತಿವೆ. ಜನಪದ ಸಂಸ್ಕøತಿಗಳ ಅವನತಿಯು ಪ್ರಚಲಿತ ಕರ್ನಾಟಕದ ಪ್ರಮುಖ ಸಾಂಸ್ಕøತಿಕ ವಿದ್ಯಮಾನಗಳಲ್ಲಿ ಒಂದು. ಇಂಥ ಬೆಳವಣಿಗೆಗಳ ಬಗೆಗೆ ಗಂಭೀರವಾದ ಚರ್ಚೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಡೆಯಲು ಸಾಧ್ಯ್ಯವಾದರೆ ಅದರಿಂದ ಸಮಾಜಕ್ಕೆ ತುಂಬಾ ಪ್ರಯೋಜನವುಂಟು. ಭಾಷೆ, ಗಡಿ ಮತ್ತು ಸಂಸ್ಕøತಿಯ ವಿಷಯಗಳು ಬಹುಬೇಗ ಜನರನ್ನು ತಪ್ಪುದಾರಿಗೆಳೆದದ್ದನ್ನು ವಿಶ್ವದ ಇತಿಹಾಸ ರುಜುವಾತು ಪಡಿಸಿದೆ. ಜಗತ್ತಿನ ಎಲ್ಲೆಡೆಯೂ ಈ ಮೂರು ಶಬ್ದಗಳನ್ನು ಉಪಯೋಗಿಸಿಯೇ ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸಿವೆ. ಕಾರಣ ನಮ್ಮ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನೆಗಳು ಈ ಬೆಳವಣೆಗೆಗಳ ಕುರಿತು ವಿಶೇಷ ಎಚ್ಚರ ವಹಿಸಬೇಕೆಂದು ನಾನು ಭಾವಿಸುತ್ತೇನೆ.


2. ಜ್ಞಾನದ ಅಂತಾರಾಷ್ಟ್ರೀಕರಣ ಮತ್ತು ಕನ್ನಡ 

ಹೀಗೆ ಕನ್ನಡ ಭಾಷೆಯು ಒಳಗಿನಿಂದ ಒಂದು ಬಗೆಯ ಒತ್ತಡಕ್ಕೆ ಒಳಗಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಅದು ಇಂದಿನ ಜಾಗತೀಕರಣ ಪ್ರಕ್ರಿಯೆಯ ತೀವ್ರ ಹೊಡೆತಕ್ಕೆ ಸಿಕ್ಕಿ ಇನ್ನೊಂದು ಬಗೆಯಲ್ಲಿ ನಲುಗುತ್ತಿದೆ. ಭಾರತದ ಅನೇಕ ಭಾಷೆಗಳು ಈ ವಿಷಯದಲ್ಲಿ ಕನ್ನಡದೊಂದಿಗಿವೆ. ನಮ್ಮ ದೇಶಕ್ಕೆ ರಾಷ್ಟ್ರೀಯ ಭಾಷಾ ನೀತಿ ಎಂಬುದು ಇಲ್ಲವಾದ್ದರಿಂದ ಈ ಗೊಂದಲವು ಅನೇಕ ಭಾಷೆಗಳನ್ನು ಸುಲಭವಾಗಿ ಕೊಂದು ಹಾಕುವ ಮಟ್ಟಕ್ಕೆ ಬೆಳೆದಿದೆ. 

ಖಚಿತವಾಗಿ ಇದು ಜಾಗತೀಕರಣದ ಕಾಲ. ಆದರೆ ಜಾಗತೀಕರಣವು ಭಾರತಕ್ಕೆ ಹೊಸದೇನೂ ಅಲ್ಲ. ಭಾರತದ ಭೌಗೋಳಿಕತೆಯು ಚಾರಿತ್ರಿಕವಾಗಿ ಅದನ್ನು ವಿಶ್ವದೊಂದಿಗೆ ಸಹಜವಾಗಿ ಜೋಡಿಸಿದೆ. ನಮ್ಮ ಊಟದ ಮೂಲಭೂತ ಘಟಕಗಳಾದ ಬಟಾಟೆ, ಟೊಮೆಟೋ, ಗೆಣಸು, ಜೋಳ, ಮೆಣಸು ಮೊದಲಾದುವುಗಳೆಲ್ಲ ಎಂದೋ ಹೊರದೇಶದಿಂದ ಬಂದು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಕೊಂಡಿವೆ. ಅನಾನಾಸು, ಪೇರಳೆ ಚಿಕ್ಕು ಮೊದಲಾದ ಹಣ್ಣುಗಳೂ ಮೂಲತಹ ನಮ್ಮವಲ್ಲ. ಬೆಳ್ಳುಳ್ಳಿ, ಅರಸಿನ, ಶುಂಠಿ ಮೊದಲಾದ ಪರಕೀಯ ಪದಾರ್ಥಗಳು ಇಂದು ನಮ್ಮ ದೇಸೀ ಎನ್ನಲಾದ ವೈದ್ಯ ಪದ್ಧತಿಯೊಂದಿಗೂ ಸೇರಿಕೊಂಡಿವೆ. ರೈಮಂಡೋ ಪಣಿಕ್ಕರ್ ಅವರ ಪ್ರಕಾರ ಚೈನಾದಲ್ಲಿ ಅತಿ ಪ್ರಾಚೀನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಅನ್ನದ ಉಂಡೆಯೇ ಇಂದು ಇಡ್ಲಿಯಾಗಿ ನಮ್ಮ ಮುಂದೆ ಕಾಣಿಸಿಕೊಂಡಿದೆ. ಹೀಗೆ ಹೊರಗಿನಿಂದ ಬಂದ ಈ ಪದಾರ್ಥಗಳನ್ನು ನಮ್ಮ ದೇವರುಗಳು ಇಂದಿಗೂ ಸ್ವೀಕರಿಸಲಾರವು.


ಇಷ್ಟಿದ್ದರೂ ತೊಂಭತ್ತರ ದಶಕದಿಂದೀಚೆಗೆ ಕಾಣಿಸಿಕೊಂಡ ಉದಾರೀಕರಣ, ಜಾಗತೀಕರಣ, ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಹಿಂದಿಗಿಂತ ತುಂಬಾ ಭಿನ್ನವಾಗಿದ್ದು ಜಗತ್ತನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಮೇಲಿನ ಪರಿಭಾಷೆಗಳು ಮೂಲತಹ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಇಡಿಯಾಗಿ ಆಕ್ರಮಿಸಿಕೊಂಡಿವೆ. ಪರಿಣಾಮವಾಗಿ ಅವು ಇದೀಗ ಉನ್ನತ ಶಿಕ್ಷಣ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಲು ಸಜ್ಜಾಗಿದೆ. ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಹಾಗೂ ಜ್ಞಾನೋತ್ಪತ್ತಿಯ ಅಂತಾರಾಷ್ಟ್ರೀಕರಣ (Internationalization of higher education and Internationalization of knowledge production) ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ‘ ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ( To the world understanding and understanding of India in the world) ಈ ಅಂತಾರಾಷ್ಟ್ರೀಕರಣ ಪ್ರಕ್ರಿಯೆ ಬಹಳ ಅಗತ್ಯ ಎಂದು ಎಲ್ಲ ಸರಕಾರಗಳೂ ಇಂದು ಭಾವಿಸತೊಡಗಿವೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ (United Nations Educational, Scientific and Cultural Organization- UNESCO) ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು (International Association of Universities-IAU) ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಸರಕಾರಗಳ ಪಾಲಿಗೆ ‘ಅನುತ್ಪಾದಕ’ ವಸ್ತುವಾಗಿರುವ ಉನ್ನತ ಶಿಕ್ಷಣವನ್ನು ‘ಉತ್ಪಾದಕ ಅಥವಾ ಲಾಭದಾಯಕ’ ವನ್ನಾಗಿ ಪರಿವರ್ತಿಸುವುದು ಈ ವಾದಗಳ ಉದ್ದೇಶ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರಗಳು ತಮ್ಮ ಆರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಉನ್ನತ ಶಿಕ್ಷಣದ ಖಾಸಗೀಕರಣಕ್ಕೆ ಕ್ರಮ ಕೈಕೊಳ್ಳಲಾರಂಭಿಸಿದುವು. ಪರಿಣಾಮವಾಗಿ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಮತ್ತು ವಿದೇಶೀ ವಿಶ್ವವಿದ್ಯಾಲಯಗಳು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣದತ್ತ ಹೊರಳಿಕೊಂಡವು. ಅವು ತಮ್ಮ ಆರ್ಥಿಕ ಭದ್ರತೆಗಾಗಿ ನಯವಾದ ಬಗೆಯಲ್ಲಿ ‘ಶುಲ್ಕ’ ವಸೂಲು ಮಾಡಲು ಹೊರಟಿವೆ. ಈ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳೂ ಸರಕಾರಗಳೂ ಜೊತೆಯಾಗಿ ಹಣ ಮಾಡಲಾರಂಭಿಸಿದುವು. ಒಂದು ವರದಿಯ ಪ್ರಕಾರ 2013-2014 ರಲ್ಲಿ ಅಮೆರಿಕಾ ದೇಶದಲ್ಲಿ ಹೊರದೇಶದಿಂದ ಆಗಮಿಸಿದ 11,30,000ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು ಅದರಿಂದ ಆ ದೇಶಕ್ಕೆ 25 ಬಿಲಿಯನ್ ಡಾಲರ್ ಆದಾಯವಾಗಿದೆ. ಆಸ್ಟ್ರೇಲಿಯಾದಲ್ಲಿ 2001-2002ರಲ್ಲಿ ಸುಮಾರು 2 ಲಕ್ಷ ಹೊರದೇಶದ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು ಆಗ ಆ ದೇಶದ ಆದಾಯ 4.2ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಆಗಿತ್ತು. ಜಾಗತೀಕರಣದ ಪರಿಣಾಮವಾಗಿ ಈ ಆದಾಯವು 2013-14ರಲ್ಲಿ 14 ಬಿಲಿಯನ್ ಡಾಲರುಗಳಿಗೆ ಏರಿತು. ಸಣ್ಣ ದೇಶ ನ್ಯೂಜಿಲೇಂಡ್ ನಲ್ಲಿ 2001-2012ರಲ್ಲಿ ಸುಮಾರು ಒಂದು ಲಕ್ಷ ವಿದೇಶೀ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು ಆ ದೇಶದ ಬೊಕ್ಕಸಕ್ಕೆ 1.7 ಬಿಲಿಯನ್ ಡಾಲರ್ ಆದಾಯವಾಗಿದ್ದು 2013-14ರಲ್ಲಿ ಅದು 6 ಬಿಲಿಯನ್ ಡಾಲರುಗಳಿಗೆೆ ಏರಿತು. ಈ ಬಗೆಯ ಆದಾಯದ ಕುರಿತು ಅಭಿವೃದ್ಧಿಶೀಲ ದೇಶಗಳು ಕಣ್ಣು ಮುಚ್ಚಿ ಕುಳಿತಿರಲು ಸಾಧ್ಯವಿಲ್ಲ. ಏಕೆಂದರೆ 21ನೇ ಶತಮಾನದ ಮೊದಲ ದಶಕದಲ್ಲಿ ಉನ್ನತ ಶಿಕ್ಷಣವು ಬಿಲಿಯನ್ ಡಾಲರ್ ಆದಾಯದ ಪ್ರಶ್ನೆಯಾಗಿ ಮಾರ್ಪಟ್ಟಿದೆ.

ಭಾರತದಲ್ಲಿ ಶಿಕ್ಷಣದ ಅಂತಾರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement of Trade in Servises ಹಾಗೂ ಡಬ್ಲ್ಯುಟಿಒ ( World Trade Organizations) ಒಪ್ಪಂದದ ಮೇರೆಗೆ ಆರಂಭವಾಯಿತು. ಎಪ್ರಿಲ್ 1, 2005 ರಂದು ಜಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ 10ನೇ ಪಂಚವಾರ್ಷಿಕ ಯೋಜನೆಯಲ್ಲಿ (2002-2007) ಉನ್ನತ ಶಿಕ್ಷಣವನ್ನು ‘Educational Services as sector of industry under GATS’ ಎಂದು ಇತರ 12 ವಿಷಯಗಳೊಂದಿಗೆ ಸೇರಿಸಿ ಘೋಷಿಸಲಾಗಿದೆ. 11 ಮತ್ತು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ‘ ನಮ್ಮ ತರುಣರನ್ನು ಲೇಬರ್ ಮಾರುಕಟ್ಟೆಗೆ’ ಸಿದ್ಧಪಡಿಸಬೇಕಾದ ಅಗತ್ಯವಿದೆ’ (It equips young people with skills relevant for the labour market) ಎಂದು ಹೇಳಲಾಗಿದೆ ಮಾತ್ರವಲ್ಲ 2020ರ ಹೊತ್ತಿಗೆ ಚೀನಾ ದೇಶಕ್ಕೆ ಅಗತ್ಯವಾಗಿರುವ 40 ಕೋಟಿ ಪರಿಣಿತರನ್ನು ನಾವು ಸೃಷ್ಟಿ ಮಾಡಬೇಕಾಗಿದೆ ಎಂದೂ ಅದು ಘೋಷಿಸಿದೆ. ಹೀಗಾಗಿ ಈಗ ಇದು ಸರಕಾರದ ಒಂದು ಅಂಗೀಕೃತ ಮತ್ತು ಆದ್ಯತೆಯ ಯೋಜನೆಯಾಗಿದೆ. ಈ ಯೋಜನೆಯ ಭಾಗವಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಈ ಕೆಳಗಿನ ಮೂರು ಅಂಶಗಳನ್ನು ಜ್ಯಾರಿಗೆ ತರಲು ಇದೀಗ ಕಾರ್ಯಪ್ರವೃತ್ತವಾಗಿದೆ. ಅವುಗಳೆಂದರೆ. 

1.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ 

2.ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಜಂಟಿಯಾಗಿ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ( twinning programs) ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ( exchange programs) ಮತ್ತು 

3.ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ ( Special educational excellence and export zones - SEEEZ)

 ಈ ಬದಲಾದ ಪರಿಸ್ಥಿತಿಗೆ ಅನುಗುಣವಾದ ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಮುಖ್ಯವಾಗಿ ಇದೀಗ ಆಗಲೇ ಅನೇಕ ಖಾಸಗಿ ವಿಶ್ವವಿದ್ಯಾಲಯಗಳು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧ ಸ್ಥಾಪಿಸಿಕೊಂಡಿವೆ. ವಿದೇಶೀ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಅಧ್ಯಯನ ಕೇಂದ್ರಗಳನ್ನು ತೆರೆದಿವೆ. ವಿದೇಶೀ ಅಧ್ಯಾಪಕರುಗಳು ಮತ್ತು ಭಾರತೀಯ ಅಧ್ಯಾಪಕರುಗಳು ಒಟ್ಟಿಗೇ ಕೆಲಸ ಮಾಡಲು ಸಾಧ್ಯವಾಗುವ ಹಾಗೆ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ವಿಶ್ವವಿದ್ಯಾಲಯಗಳ ನಡುವೆ ಗುಣಾಂಕಗಳ (ಕ್ರೆಡಿಟ್ಸ್) ವರ್ಗಾವಣೆ ಸಾಧ್ಯವಾಗುತ್ತಿದೆ. ಈ ಕ್ರಮಗಳು ಉನ್ನತ ಶಿಕ್ಷಣದ ರೀತಿ ನೀತಿಗಳನ್ನು ಈಗಾಗಲೇ ಗಮನಾರ್ಹವಾಗಿ ಬದಲಾಯಿಸುತ್ತಿವೆ. ಸದ್ಯಕ್ಕೆ ಈ ಪ್ರಯೋಗವು ಕಾರ್ಪೋರೇಟ್ ಜಗತ್ತಿಗೆ ಬೇಕಾದ ಬುದ್ಧಿವಂತರನ್ನು ಮತ್ತು ಪರಿಣಿತ ಕೆಲಸಗಾರರನ್ನು ಸೃಷ್ಟಿಸಿಕೊಡುವಲ್ಲಿ ಸಫಲವಾಗಿವೆ.


 ಇಂಥ ಬದಲಾದ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ಎಂಬುದು ಚಲಾವಣೆಯಲ್ಲಿಲ್ಲದ ನಾಣ್ಯವಾಗುತ್ತಿದೆ. ಜೊತೆಗೆ ಮಾನವಿಕಗಳು ಬೇಡಿಕೆಯಿಲ್ಲದ ಅಧ್ಯಯನ ಶಿಸ್ತುಗಳಾಗಿ ಪರಿವರ್ತನೆಗೊಂಡು ದುರ್ಬಲವಾಗುತ್ತಿವೆ. 10 ನೇ ಪಂಚವಾರ್ಷಿಕ ಯೋಜನೆಯಲ್ಲಿ ಸಂಸ್ಕøತ ಮತ್ತು ಹಿಂದೀ ಭಾಷೆಯ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ರೂಪಿಸಿದ್ದರೂ ಉಳಿದ ಭಾರತೀಯ ಭಾಷೆಗಳ ಬಗೆಗೆ ಅದು ದಿವ್ಯ ಮೌನವನ್ನು ತಾಳಿದೆ. 11 ಮತ್ತು 12 ನೇ ಪಂಚವಾರ್ಷಿಕ ಯೋಜನೆಗಳಲ್ಲಿ ಭಾರತೀಯ ಭಾಷೆಗಳ ಬಗ್ಗೆ ಯಾಂತ್ರಿಕವಾಗಿ ನಾಲ್ಕು ಮಾತು ಹೇಳಲಾಗಿದೆಯಲ್ಲದೆ, ಅವುಗಳ ಅಭಿವೃದ್ಧಿಯ ಬಗೆಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಹೀಗೆ ಮಾರುಕಟ್ಟೆಯ ಧ್ಯೇಯ ಧೋರಣೆಗಳೇ ಉನ್ನತ ಶಿಕ್ಷಣವನ್ನು ನಿಯಂತ್ರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕನ್ನಡದಂಥ ಸಣ್ಣ ಭಾಷೆಗಳ ಭವಿಷ್ಯವೇನು? ಎಂಬುದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕು.
ಮೇಲೆ ಹೇಳಿದ ಮಾರುಕಟ್ಟೆ ಕೇಂದ್ರಿತ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನದ ಉತ್ಪತ್ತಿ ಮತ್ತು ವಿತರಣೆಯು ಅಂತಾರಾಷ್ಟ್ರೀಯವಾಗುವುದು ಅನಿವಾರ್ಯ. ಈ ಪ್ರಕ್ರಿಯೆಯಲ್ಲಿ ಆಳುವ ಶಕ್ತಿ ಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ‘ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು‘ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜನರೂ ಈ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಇದು ಕನ್ನಡವೂ ಸೇರಿದಂತೆ ಜಗತ್ತಿನ ಅನೇಕ ಸಣ್ಣ ಭಾಷೆಗಳ ಕುರಿತು ಆಯಾ ದೇಶದ ಸರಕಾರಗಳು ಮತ್ತು ಜನರು ನಿರ್ಲಕ್ಷ್ಯ ವಹಿಸುವಂತೆ ಮಾಡಿದೆ. ಇದರಿಂದ ಜಗತ್ತಿನಾದ್ಯಂತ ಇಂದು ಅನೇಕ ಭಾಷೆಗಳು ಅವಸಾನದ ಅಂಚಿಗೆ ಬಂದು ನಿಲ್ಲುವಂತಾಗಿದೆ. ಸಣ್ಣ ಭಾಷೆಗಳ ಧ್ವನಿ ಉಡುಗಿವೆ, ಅವುಗಳ ನಾಲಗೆ ಕಟ್ಟಿಹೋಗಿವೆ. ಉಳಿಯುವಿಕೆಗಾಗಿ ಅವು ಹೆಣಗಾಡುತ್ತಿವೆ. ಕಲಿಕೆ ಮತ್ತು ಉಪಯೋಗಗಳ ವಿಷಯದಲ್ಲಿ ಇಂಗ್ಲಿಷ್ ಸಾವಿರಾರು ಸಣ್ಣ ಭಾಷೆಗಳನ್ನು ಅಪಾಯದ ಅಂಚಿಗೆ ತಳ್ಳಿದೆ.

ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ರಾಜಕೀಯ, ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದ ಹಾಗೆ, ಅವಸಾನದ ಅಂಚಿನಲ್ಲಿರುವ ಭಾಷೆಗಳ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ. ಇಂದು ಬಹಳ ಪ್ರಭಾವಶಾಲಿಯಾಗಿರುವ ಮಾಧ್ಯಮಗಳಿಗೂ ಈ ಕುರಿತು ಆಸಕ್ತಿಯಿಲ್ಲ. ಭಾಷೆಯ ಅವನತಿಯ ಅಪಾಯಗಳ ಕುರಿತು ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ.

ಇಂದು ವಿಶ್ವದಾದ್ಯಂತÀ ಜೀವಂತವಿರುವ ಸುಮಾರು 7000 ಭಾಷೆಗಳನ್ನು ಸಣ್ಣ ಭಾಷೆಗಳೆಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 3700 ರಷ್ಟು ಭಾಷೆಗಳು ಭಾರತದಲ್ಲಿಯೇ ಇವೆ. ಇದು ಸ್ಥೂಲ ರೂಪದ ತಿಳುವಳಿಕೆ. ಆದರೆ ಸೂಕ್ಷ್ಮವಾಗಿ ಮತ್ತು ಭಿನ್ನವಾಗಿ ನೋಡಿದರೆ ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಉದಾಹರಣೆಗೆ ಇಂಗ್ಲಿಷಿಗೆ ಹೋಲಿಸಿದರೆ, ಹಿಂದಿ ಸಣ್ಣ ಭಾಷೆ ಮತ್ತು ಅದಕ್ಕೆ ಇಂಗ್ಲಿಷಿನಿಂದ ಅಪಚಾರವಾಗುತ್ತಿದೆ, ಆದರೆ ರಾಜಸ್ಥಾನಿ, ಭೋಜಪುರಿ ಮೈಥಿಲಿ ಮತ್ತಿತರ ಭಾಷೆಗಳನ್ನು ಗಮನಿಸಿದಾಗ ಅವುಗಳ ಮೇಲೆ ಹಿಂದಿ ಭಾಷೆಯಿಂದಲೇ ಅಪಚಾರವಾಗುವುದನ್ನು ಕಾಣುತ್ತೇವೆ. ಹಿಂದಿಗೆ ಹೋಲಿಸಿದರೆ ಕನ್ನಡ ಭಾಷೆ ಸಣ್ಣದು. ಕಾರಣ ಹಿಂದಿ ಕನ್ನಡದ ಮೇಲೆ ಆಕ್ರಮಣ ಮಾಡುತ್ತದೆ. ಕನ್ನಡ ತುಳುವನ್ನು ಆಕ್ರಮಿಸಿಕೊಳ್ಳುತ್ತದೆ. ತುಳುವನ್ನು ಮಾತ್ರ ಗಮನಿಸಿದರೂ ಸಾಕು, ಅಲ್ಲಿ ದಲಿತರ ತುಳು ಸಾಮಾನ್ಯವಾಗಿ ಸವರ್ಣೀಯರ ತುಳುವಿಗೆ ತಲೆಬಾಗುತ್ತದೆ. ನಾವು ನೋಡುತ್ತಿದ್ದಂತೆಯೇ ಕೊರಗ ಭಾಷೆಯ ಜಾಗವನ್ನು ತುಳು ಪೂರ್ತಿಯಾಗಿ ಆಕ್ರಮಿಸಿಕೊಂಡಿತು. ಹೀಗೆ ಕೊನೆಯಿಲ್ಲದ ಈ ಸಂಕಷ್ಟದಲ್ಲಿ ಭಾಷಾ ಅಲ್ಪಸಂಖ್ಯಾಕರನ್ನು ನಾವು ಇದುವರೆಗೆ ಸರಿಯಾಗಿ ನಿರ್ವಚಿಸಿಯೇ ಇಲ್ಲ. ನಮ್ಮ ದೇಶಕ್ಕೆ ರಾಷ್ಟ್ರೀಯ ಭಾಷಾ ನೀತಿ ಎಂಬುದೇ ಇಲ್ಲ.
 
ಭಾರತದಲ್ಲಿ ಇದೀಗ 22 ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ. ಇದರಲ್ಲಿ 18 ಭಾಷೆಗಳು ಉತ್ತರ ಭಾರÀತಕ್ಕೆ ಸೇರಿದರೆ, ಕೇವಲ ನಾಲ್ಕು ಭಾಷೆಗಳು ದ್ರಾವಿಡ ಭಾಷಾ ವರ್ಗಕ್ಕೆ ಸೇರಿವೆ. ಈ ನಡುವೆ ಇತರ 38 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದು ಅದರಲ್ಲಿ ಕೇವಲ ಎರಡು (ತುಳು ಮತ್ತು ಕೊಡವ) ದ್ರಾವಿಡ ವರ್ಗಕ್ಕೆ ಸೇರಿವೆ. ಈ ಬೇಡಿಕೆಗಳನ್ನು ಸವಾಲಾಗಿ ಸ್ವೀಕರಿಸಿ, ಭಾಷೆಗಳ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿದ್ದ ಸರಕಾರ ಇದೀಗ ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನೇ ಕಡಿತಗೊಳಿಸಲು ಆರಂಭಿಸಿದೆ. ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗಳನ್ನು ನಡೆಸಬೇಕಾಗಿಲ್ಲ. ಅಂದರೆ, ಸ್ಪರ್ಧಿಯೊಬ್ಬನ ಮಾತೃ ಭಾಷೆಗೆ ಅಲ್ಲಿ ಅವಕಾಶವಿಲ್ಲ. ಸಣ್ಣ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಮಾಡುವವರಿಲ್ಲವೆಂದು ಅದು ಹೇಳುತ್ತದೆ. ಪ್ರಶ್ನೆ ಪತ್ರಿಕೆ ತಯಾರು ಮಾಡುವಂಥ ವಿದ್ವಾಂಸರ ಸೃಷ್ಟಿಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳಿದರೆ ಅದರ ಬಳಿ ಉತ್ತರವಿಲ್ಲ. ಇಂಥ ಪ್ರಕ್ರಿಯೆಗಳ ಜೊತೆಗೆ ಕೆಲವು ರಾಜ್ಯ ಸರಕಾರಗಳೂ ಸೇರಿಕೊಂಡಿವೆ. ಉದಾಹರಣೆಗೆ ದೆಹಲಿಯಲ್ಲಿ ಹಿಂದಿ, ಪಂಜಾಬಿ ಮತ್ತು ಉರ್ದು ಅಧಿಕೃತ ಭಾಷೆಗಳಾದರೆ, ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ, ನೇಪಾಲಿ, ಹಿಂದಿ, ಉರ್ದು, ಮತ್ತು ಸಂತಾಲಿ ಭಾಷೆಗಳು ಅಧಿಕೃತ ರಾಜ್ಯ ಭಾಷೆಗಳಾಗಿವೆ. ತೆಲಂಗಾಣದಲ್ಲಿ ತೆಲುಗುವಿನ ಜೊತೆಗೆ ಉರ್ದುವನ್ನು ಅಂಗೀಕರಿಸಲಾಗಿದೆ. ಆದರೆ ಕರ್ನಾಟಕವು ತುಳು ಮತ್ತು ಕೊಡವ ಭಾಷೆಗಳನ್ನು ಅಧಿಕೃತ ರಾಜ್ಯ ಬಾಷೆಯಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ರಾಜ್ಯಕ್ಕೇ ಬೇಡವಾದ ಭಾಷೆಯನ್ನು ಕೇಂದ್ರ ಅಂಗೀಕರಿಸುವುದಾದರೂ ಹೇಗೆ? ಹೀಗೆ ನಮ್ಮ ಭಾಷಾ ರಾಜಕೀಯವು ಜಾಗತೀಕರಣ ಪ್ರಕ್ರಿಯೆಗಳೊಂದಿಗೆ ಸೇರಿಕೊಂಡು ಸಂಕೀರ್ಣವಾದ ಸನ್ನಿವೇಶ ನಿರ್ಮಾಣಗೊಂಡಿದೆ.


ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. (Christopher Moseley, ed., UNESCO, Paris 2010) ಈ ಸಣ್ಣ ಭಾಷೆಗಳನ್ನಾಡುವ ಜನರಲ್ಲಿಯೂ ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿ, ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗುತ್ತಲಿದೆ. ಹೀಗೆ ಭಾರತದಲ್ಲಿ ಸುಮಾರು ಮೂರು ಕೋಟಿಯ ಅರುವತ್ತು ಲಕ್ಷ ಜನಗಳ ಮಾತೃ ಭಾಷೆಗಳು ಇಂದು ಪತನಮುಖಿಯಾಗಿವೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸುಮಾರು ಒಂದು ಕೋಟಿ ಜನರಾಡುವ ತುಳುವನ್ನು ಕರ್ನಾಟಕ ರಾಜ್ಯ ಇಂದಿನವರೆಗೆ ಅಧಿಕೃತ ಭಾಷೆಯೆಂದೇ ಘೋಷಿಸಿಲ್ಲ್ಲವಲ್ಲ! ಖಾಸಿ, ಜೈಂಟಿಯಾ, ಕೊಡವ, ಬೃಜ ಮೊದಲಾದ ಅನೇಕ ಸುಂದರ ಭಾಷೆಗಳ ಕತೆಯಾದರೂ ಅಷ್ಟೆ. ಕರ್ನಾಟಕದಲ್ಲಿ ಇವತ್ತಿಗೂ ತುಳು- ಕೊಡವದಂಥ ಭಾಷೆಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಾಧ್ಯಾಪಕರೇ ಇಲ್ಲ. ಕನ್ನಡದ ಅಧ್ಯಾಪಕರೇ ಈ ಭಾಷೆಗಳ ಉದ್ಧಾರದ ಕೆಲಸಗಳನ್ನೂ ಮಾಡಬೇಕಾಗಿದೆ. ದ್ರಾವಿಡಾ ಭಾಷಾ ವರ್ಗದಲ್ಲಿ ತಮಿಳು, ಮಲೆಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಮಾತ್ರ ಸಾವಿರಾರು ಅಧ್ಯಾಪಕರಿದ್ದಾರೆ, ಉಳಿದ ಸುಮಾರು 24 ಸ್ವತಂತ್ರ ಭಾಷೆಗಳಲ್ಲಿ ಪ್ರಾಧ್ಯಾಪಕರು ಏಕಿಲ್ಲ.? ಒಟ್ಟಾರೆಯಾಗಿ ಇದರರ್ಥ ಇಷ್ಟೇ-

ಇಂದು ಸಣ್ಣ ಭಾಷೆಗಳ ಅಭಿವೃದ್ಧಿಯ ಕುರಿತು ಸರಕಾರಗಳಾಗಲೀ ವಿಶ್ವವಿದ್ಯಾಲಯಗಳಾಗಲೀ ಮಾಡಬೇಕಾದಷ್ಟು ಕೆಲಸಗಳನ್ನು ಮಾಡುತ್ತಿಲ್ಲ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಜನರ ಭಾಷೆಗಳು ಎಲ್ಲ ಸವಲತ್ತುಗಳನ್ನೂ ಪಡೆದುಕೊಳ್ಳುತ್ತಿವೆ. ದುರ್ಬಲರ ನಾಲಗೆ ಕಟ್ಟಿ ಹೋಗಿದೆ, ಅವರ ಭಾಷೆಗಳು ವಿನಾಶದತ್ತ ಚಲಿಸುತ್ತಿವೆ. ಸಂಸ್ಕøತಿಯ ಬಗೆಗೆ ತಿಳುವಳಿಕೆಯಿಲ್ಲದ ಅಭಿವೃದ್ಧಿಯ ಪರಿಕಲ್ಪನೆಯು ಮೂಲತಹ ಅನಾಹುತಕಾರಿಯಾದುದು ಎಂಬುದನ್ನು ಜಗತ್ತಿನ್ನೂ ಅರ್ಥಮಾಡಿಕೊಂಡಿಲ್ಲ.

ಇಂಥ ಸಂದರ್ಭದಲ್ಲಿ ನಾವು ನಮ್ಮ ಸಂಶೋಧನೆಗಳ ಬಗೆಗೆ ಹೊಸದಾಗಿ ಯೋಚಿಸುವ ಕಾಲ ಬಂದಿದೆ. ಕನ್ನಡ ವಿಶ್ವವಿದ್ಯಾಲಯದಂಥ ಭಾಷಾ ಕೇಂದ್ರಿತ ಸಂಸ್ಥೆಯ ಜವಾಬ್ದಾರಿಗಳನ್ನೂ ನಾವು ಪುನರ್ ರೂಪಿಸಿಕೊಳ್ಳಬೇಕಾಗಿದೆ. ಒಂದೆಡೆ ಸಂಶೋಧನೆಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಇನ್ನೊಂದೆಡೆ ತಿಳುವಳಿಕೆಗಳು ಅಂತಾರಾಷ್ಟ್ರೀಯಗೊಳ್ಳುತ್ತಿರುವ ಆಧುನಿಕ ಪ್ರಕ್ರಿಯೆ, ಇವೆರಡರ ನಡುವೆ ನಾವು ಬದುಕುತ್ತಾ, ನಮ್ಮ ಧ್ವನಿಯು ಇತರರಿಗೆ ಕೇಳುವಂತೆ ಕೆಲಸ ಮಾಡಬೇಕಾಗಿದೆ. ನಮಗೆ ನಾವೇ ಮಾತಾಡಿಕೊಳ್ಳುವ ಕಾಲ ಮುಗಿದುಹೋಗಿದೆ. ಜಗತ್ತಿನೊಡನೆ ಗಂಭೀರವಾಗಿ ಸಂವಾದಿಸಬೇಕಾದ ಕಾಲ ಸನ್ನಿಹಿತವಾಗಿದೆ.

ನಮ್ಮ ಯೋಚನೆಗಳ ಬಗ್ಗೆ ಎಚ್ಚರದಿಂದಿರೋಣ, 
ಅವು ಪದಗಳಾಗುತ್ತವೆ
ನಮ್ಮ ಪದಗಳ ಬಗ್ಗೆ ಎಚ್ಚರದಿಂದಿರೋಣ 
ಅವು ಕ್ರಿಯೆಗಳಾಗುತ್ತವೆ, 
ನಮ್ಮ ಕ್ರಿಯೆಗಳ ಬಗ್ಗೆ ಎಚ್ಚರದಿಂದಿರೋಣ
ಅವು ಅಭ್ಯಾಸಗಳಾಗುತ್ತವೆ, 
ನಮ್ಮ ಅಭ್ಯಾಸಗಳ ಬಗ್ಗೆ ಎಚ್ಚರದಿಂದಿರೋಣ 
ಅವು ವ್ಯಕ್ತಿತ್ವವಾಗಿರುತ್ತದೆ, 
ನಮ್ಮ ವ್ಯಕ್ತಿತ್ವದ ಬಗ್ಗೆ ಎಚ್ಚರದಿಂದಿರೋಣ 
ಅವು ನಾಡಿನ ಭವಿಷ್ಯವಾಗಿರುತ್ತದೆ.


ಡಾ. ಪುರುಷೋತ್ತಮ ಬಿಳಿಮಲೆ 
ಪ್ರಾಧ್ಯಾಪಕರು
ಕನ್ನಡ ಅಧ್ಯಯನ ಪೀಠ
ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ 
ನವದೆಹಲಿ-110070
pbilimale@mail.jnu.ac.in

ಬುಧವಾರ, ಮಾರ್ಚ್ 9, 2016

ಮುಹಮ್ಮದರನ್ನು ಜನಪದವಾಗಿಸುವ ‘ಓದಿರಿ’

Dr Ashok K R

odiri
ಸ್ನಾತಕೋತ್ತರ ಪದವಿ ಓದುತ್ತಿದ್ದ ದಿನಗಳಲ್ಲಿ ಒಂದು ಸುತ್ತು ಭಗವದ್ಗೀತೆ ಓದಿ ಮುಗಿಸಿದ್ದೆ. ಕುರಾನ್ ಓದೋಣವೆನ್ನಿಸಿತ್ತು. ಇಂಗ್ಲೀಷಿನಲ್ಲಿ ಓದೋ ಕಷ್ಟವ್ಯಾಕೆ ಎಂದುಕೊಂಡು ಕನ್ನಡ ಕುರಾನ್ ಹುಡುಕಿದವನಿಗೆ ಪುಸ್ತಕ ಸಿಕ್ಕಿತ್ತಾದರೂ ಮುನ್ನೂರು ರುಪಾಯಿ ಜೇಬಿನಲ್ಲಿರಲಿಲ್ಲ! ಮುಂದೆ ಯಾವಾಗಲಾದರೂ ಓದಿದರಾಯಿತು ಎಂದುಕೊಂಡೆ. ಓದಲಿಲ್ಲ. ರಂಜಾನ್ ಮಾಸದಲ್ಲಿ ಕಲಬುರಗಿಯ ವಿದ್ಯಾರ್ಥಿಗಳು ಇಫ್ತಿಯಾರ್ ಕೂಟ ಏರ್ಪಡಿಸುತ್ತಿದ್ದರು. ಆ ಸಮಯದಲ್ಲಿ ಇಸ್ಲಾಮಿನ ಬಗೆಗಿನ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ಆಂಗ್ಲದಲ್ಲಿದ್ದ ಆ ಪುಸ್ತಕಗಳನ್ನು ಓದುವುದಕ್ಕೆ ಯಮಹಿಂಸೆಯಾಗುತ್ತಿತ್ತು. ಕಾರಣ ಎಲ್ಲೆಲ್ಲಿ Prophet ಎಂದು ಬರೆಯುತ್ತಾರೋ ಅಲ್ಲೆಲ್ಲಾ Peace be upon him ಅಥವಾ ಅದರ ಸಂಕ್ಷಿಪ್ತ ರೂಪವಾದ pbuh ಎಂಬ ಅಕ್ಷರಗಳು. ಸರಾಗ ಓದಿಗೆ ಅಡ್ಡಿಯುಂಟಾದರೆ ಪುಸ್ತಕ ಓದುವ ಆಸಕ್ತಿ ಉಳಿಯುವುದಾದರೂ ಹೇಗೆ? ಪ್ರವಾದಿ/ ಇಸ್ಲಾಮಿನ ಬಗ್ಗೆ ಇರುವ ಪುಸ್ತಕಗಳು/ಲೇಖನಗಳು ಒಂದೋ ಅತಿಯಾದ ಧಾರ್ಮಿಕ ಪ್ರಜ್ಞೆಯ ಭಾರದಿಂದ ನಲುಗಿರುತ್ತವೆ, ಇಲ್ಲ ಇಸ್ಲಾಮೋಫೋಬಿಯಾದ ಪ್ರಭಾವಕ್ಕೆ ಒಳಗಾದವರ ಸುಳ್ಳಿನ ಕಂತೆಯಾಗಿರುತ್ತದೆ. ಎರಡೂ ರೀತಿಯ ಬರಹಗಳು ಧಾರ್ಮಿಕ ನಂಬುಗೆಯಿರದ ದ್ವೇಷದ ಮನಸ್ಥಿತಿಯಿರದ ಓದುವ ಕುತೂಹಲವಷ್ಟೇ ಇರುವ ವ್ಯಕ್ತಿಗೆ ರುಚಿಸಲಾರದು. ಇಂತವರ ಓದಿಗೆ ಅನುಕೂಲಕರವಾಗಲೆಂದೇ ಬೋಳೂವಾರ ಮಹಮದ್ ಕುಂಞಿ ‘ಓದಿರಿ’ ಪುಸ್ತಕವನ್ನು ಬರೆದಿದ್ದಾರೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ರವಷ್ಟು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲ ತಿಳಿಸಿದ ಸತ್ಯವೇ!

ಪ್ರವಾದಿಯನ್ನು ಚಿತ್ರ ರೂಪದಲ್ಲಿ ಮೂಡಿಸುವುದು ಬಿಡಿ ಮಾತನಾಡುವುದು, ಚರ್ಚಿಸುವುದು, ಬರೆಯುವುದು ಕೂಡ ಅಪರಾಧವೆಂದು ನಂಬುವ ಅನೇಕ ಮುಸ್ಲಿಮರಿದ್ದಾರೆ. ಇಸ್ಲಾಮಿನ ವಿಚಾರಗಳನ್ನು ಪ್ರಶ್ನಿಸಿದವರ ಕೈಕತ್ತರಿಸುವವರು, ಕೊಲೆಗೈಯ್ಯುವವರು ಮತ್ತವರನ್ನು ಬೆಂಬಲಿಸುವವರ ಸಂಖೈಯೇನೂ ಕಡಿಮೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೋಳುವಾರು ಮಹಮದ್ ಕುಂಞಿಯವರ ‘ಓದಿರಿ’ ಕಾದಂಬರಿ ಯಾವ ರೀತಿಯಾಗಿ ಪ್ರವಾದಿ ಮುಹಮ್ಮದರನ್ನು ಚಿತ್ರಿಸಿರಬಹುದು ಎನ್ನುವ ಕುತೂಹಲದಿಂದಲೇ ಪುಸ್ತಕವನ್ನು ಕೈಗೆತ್ತಿಕೊಂಡೆ. ಮೊದಲ ನೆಮ್ಮದಿ ಮುಹಮ್ಮದರ ಹೆಸರು ಬಂದಲ್ಲೆಲ್ಲ peace be upon him ಎಂಬ ಸಾಲುಗಳಿಲ್ಲದಿರುವುದು! ಇದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ ‘ಓದಿರಿ’ ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಅಲ್ಲೊಂದು ಇಲ್ಲೊಂದು ಅಡೆತಡೆಗಳನ್ನೊರತುಪಡಿಸಿ. ಅಂತರಂಗ, ಬಹಿರಂಗ ಮತ್ತು ಚದುರಂಗದಲ್ಲಿ ಪ್ರವಾದಿಯವರ ವಿವಿಧ ಕಾಲಘಟ್ಟದ ಕಥೆಗಳನ್ನು ಹೆಣೆಯಲಾಗಿದೆ. ಅಂತರಂಗ ಬಾಲಕ ಮುಹಮ್ಮದರಲ್ಲಿ ನಿಧನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗೆಗಿದ್ದರೆ ಬಹಿರಂಗ ಮುಹಮ್ಮದರು ಕೊನೆಯ ಪ್ರವಾದಿಯೆಂಬ ಘೋಷಣೆಯೊಂದಿಗೆ ಇಸ್ಲಾಂ ಧರ್ಮ ಸ್ಥಾಪನೆಯಾಗಿ ಆಗ ಅಸ್ತಿತ್ವದಲ್ಲಿದ್ದ ಇನ್ನಿತರೆ ಧರ್ಮಗಳು ಇಸ್ಲಾಂ ಅನ್ನು ನಾಶಪಡಿಸಬೇಕೆಂದು ನಿರ್ಧರಿಸುವ ಬಗ್ಗೆ. ಸುಳ್ಳು ಹೇಳದ, ಕೆಡಕು ಬಯಸದ, ಕೆಟ್ಟತನವನ್ನೇನೂ ಚಟವಾಗಿಸಿಕೊಳ್ಳದ ಮುಹಮ್ಮದ್ ಮಕ್ಕಾದ ಎಲ್ಲರಿಗೂ ಪ್ರೀತಿ ಪಾತ್ರ ಹುಡುಗ. ಬಡ್ಡಿ ವ್ಯವಹಾರದ ವಿರುದ್ಧ, ವ್ಯಭಿಚಾರದ ವಿರುದ್ಧ, ಮದ್ಯಸೇವನೆಯ ವಿರುದ್ಧದ ಆತನ ನಿಲುವುಗಳನ್ನು ಯಾರೂ ಪಾಲಿಸದಿದ್ದರೂ ಎಲ್ಲರಿಗೂ ಈ ಸತ್ಯಸಂಧನನ್ನು ಕಂಡರೆ ಗೌರವ – ಆದರ. ಈ ಗೌರವಾದರಗಳೆಲ್ಲವೂ ಮಣ್ಣುಪಾಲಾಗುವುದು ಬಹಿರಂಗದಲ್ಲಿ. ದೇವರ ದರ್ಶನವಾಗಿ ಹಿಂದಿನ ಧರ್ಮಗ್ರಂಥಗಳಲ್ಲಿ ಹೇಳಿರುವ ಕೊನೆಯ ಪ್ರವಾದಿ ನಾನೇ ಎಂಬ ಸಂಗತಿ ಮುಹಮ್ಮದರಿಗೆ ತಿಳಿದ ನಂತರ ಅಲ್ಲಿಯವರೆಗೆ ಪಾಲಿಸಿದ ಧರ್ಮಾಚರಣಗೆಗಳನ್ನು ತೊರೆದು ದಿನಕ್ಕೈದು ಬಾರಿ ನಮಾಜು ಮಾಡುವ ಮೂಲಕ ಅಲ್ಲಾಹು ಕೊಟ್ಟ ಸಂದೇಶಗಳನ್ನು ಜನರಿಗೆ ತಲುಪಿಸುವ ಮೂಲಕ ಹೊಸ ಧರ್ಮದ ಹುಟ್ಟಿಗೆ ಕಾರಣರಾಗುತ್ತಾರೆ. ಕೆಲವರು ಈ ಹೊಸ ಧರ್ಮವನ್ನು ಅಪ್ಪಿದರೆ, ಹಲವರು ಅಪ್ಪದಿದ್ದರೂ ಒಪ್ಪಿ ದೂರವುಳಿಯುತ್ತಾರೆ, ಬಹುತೇಕರು ಅಲ್ಲಿಯವರೆಗೆ ಗೌರವಿಸುತ್ತಿದ್ದ ಮುಹಮ್ಮದರನ್ನು ದ್ವೇಷಿಸಲಾರಂಭಿಸುತ್ತಾರೆ.

ಈ ದ್ವೇಷ, ಅನಾದಾರ, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಹಮ್ಮದರು ಹೇಗೆ ಇಸ್ಲಾಂ ಧರ್ಮ ಹಬ್ಬಲು ಕಾರಣವಾದರು ಎನ್ನುವುದು ಚದುರಂಗದ ಭಾಗ. ಅಂತರಂಗ ಮತ್ತು ಬಹಿರಂಗದಲ್ಲಿ ಮುಗ್ಧರಂತೆ, ಕೆಲವು ಕಡೆ ದಡ್ಡರಂತೆಯೂ ಕಾಣಿಸಿಬಿಡುವ ಮುಹಮ್ಮದ್ ಚದುರಂಗದಲ್ಲಿ ಚಾಣಾಕ್ಷ್ಯ ಧಾರ್ಮಿಕ ನಾಯಕರಾಗಿ ರೂಪುಗೊಳ್ಳುತ್ತಾರೆ. ಈಗ ಮುಸ್ಲಿಮರ ಪವಿತ್ರ ಸ್ಥಳವೆನ್ನಿಸಿಕೊಳ್ಳುವ ಮಕ್ಕಾದಲ್ಲಿಯೇ ಪ್ರವಾದಿಗೆ ಮತ್ತವರ ಹೊಸ ಧರ್ಮದ ಹಿಂಬಾಲಕರಿಗೆ ರಕ್ಷಣೆಯಿರುವುದಿಲ್ಲ. ತಾತ್ಕಾಲಿಕವಾಗಿ ಮಕ್ಕಾ ತೊರೆದು ಮದೀನಾ ಸೇರುತ್ತಾರೆ. ಇಸ್ಲಾಂ ಧರ್ಮ ವ್ಯಾಪಕವಾಗಿಸಲು ಪ್ರವಾದಿ ವಿರೋಧಿಸುವವರ ಮೇಲಿನ ಯುದ್ಧಗಳಲ್ಲಿ ಗೆದ್ದಿದ್ದಕ್ಕಿಂತ ಆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ಪದ್ಧತಿ ಮತ್ತು ಶ್ರೇಷ್ಟ ಗೋತ್ರದ ವ್ಯಸನ ಪ್ರಮುಖ ಕಾರಣವಿರಬೇಕು. ಗುಲಾಮರಿಗೆ ಸ್ವಂತಿಕೆಯ ಧರ್ಮವಿರಲಿಲ್ಲ. ತಮ್ಮ ಒಡೆಯರ ಧರ್ಮವನ್ನೇ ಪಾಲಿಸಬೇಕಾದ ಅನಿವಾರ್ಯತೆ. ಗುಲಾಮಗಿರಿಯೇ ತಪ್ಪೆಂದು ಸಾರಿದ ಪ್ರವಾದಿಯ ಧರ್ಮ ಅವರನ್ನು ಸೆಳೆದಿದ್ದರೆ ಅಚ್ಚರಿಯಿಲ್ಲ. 

ಅಂತರಂಗ ಮತ್ತು ಬಹಿರಂಗದಲ್ಲಿ ಕಾಣುವ ಮುಹಮ್ಮದರ ವಿಮರ್ಶೆ ಚದುರಂಗದಲ್ಲಿ ನಿಧಾನಕ್ಕೆ ಕಣ್ಮರೆಯಾಗಿಬಿಟ್ಟಿದೆ. ಘೋಷಿತ ಪ್ರವಾದಿಯ ಬಗ್ಗೆ ವಿಮರ್ಶಾತ್ಮಕ ಅಂಶಗಳು ಕಡಿಮೆಯಿರಬೇಕು ಎಂದು ಲೇಖಕರು ಬಯಸಿರಬೇಕು ಅಥವಾ ಕಾದಂಬರಿಯ ಪಾತ್ರಗಳು ಬಯಸಿರಬೇಕು! ಪ್ರವಾದಿಯನ್ನು ಸಂಪೂರ್ಣ ಸರಿಯಾಗಿಸಿಬಿಡುವ ಪ್ರಯತ್ನದಲ್ಲಿ ಅಲ್ಲಿಯವರೆಗೂ ಇದ್ದ ಧರ್ಮದ ಜನರನ್ನು ಸಂಪೂರ್ಣ ತಪ್ಪೆಂದು ಬಿಂಬಿಸುವುದೂ ನಡೆದಿದೆ. ಒಂದೇ ಒಂದು ಕಡೆ ಇಸ್ಲಾಮಿಗೆ ಪರಿವರ್ತನೆಗೊಂಡ ಮಗನ ಮನೆಯನ್ನು ತೊರೆದು ಹೋಗುವ ವಯಸ್ಸಾದ ತಾಯಿ ನನ್ನ ಧರ್ಮ ನನಗೆ ಎಂದು ಸೆಡ್ಡುಹೊಡೆಯುವ ಧೈರ್ಯ ತೋರುತ್ತಾಳೆ. ಪ್ರವಾದಿ ಮುಹಮ್ಮದರ ಪ್ರಕಾರ ಕುರ್ ಆನ್ ಅಂತಿಮ ಸತ್ಯವಿರಬಹುದು. ಆದರೆ ಅಂತಿಮ ಸತ್ಯವೆಂಬುದಿದೆಯೇ? ‘ಪ್ರವಾದಿಯ ಅಲ್ಲಾ ದಿನಕ್ಕೆ ಐವತ್ತು ಸಲ ನಮಾಜು ಮಾಡಲು ಹೇಳಿದ್ದನಂತೆ. ಅಷ್ಟೊಂದು ಸಲ ನಮಾಜು ಮಾಡಿದರೆ ಉಳಿದ ಕೆಲಸಗಳಿಗೆ ಸಮಯವಿರುವುದಿಲ್ಲ ಎಂದು ಐದು ಸಲಕ್ಕೆ ಇಳಿಸಲು ಕೇಳಿಕೊಂಡರಂತೆ’ ಎಂಬಂತಹ ಹಾಸ್ಯಾತ್ಮಕ ವಿಮರ್ಶೆಗಳು ಬಹಿರಂಗದ ನಂತರದ ಭಾಗದಲ್ಲಿ ಕಾಣಿಸುವುದಿಲ್ಲ. ಪುಸ್ತಕದ ಕೊನೆಯಲ್ಲಿ ಮುಗಿಯಿತು ಎನ್ನುವುದರ ಬದಲಾಗಿ ‘ಸಶೇಷ’ ಎಂದು ಬೋಳುವಾರರು ಬರೆದಿರುವುದರಿಂದ ‘ನಿರೀಕ್ಷಿಸಬಹುದು’! 

ನಮಗೆ ಪರಿಚಿತವೇ ಇಲ್ಲದ ಪರಿಸರ ಸಂಸ್ಕೃತಿಯನ್ನು ಸರಾಗವಾಗಿ ಓದುವಂತೆ ಮಾಡಿದೆ ಬೋಳುವಾರರ ಲೇಖನಿ. ಪ್ರವಾದಿಯ ಕತೆ ಓದುತ್ತಿದ್ದರೆ ನಮ್ಮ ದೇಶದ ಬುದ್ಧ, ಬಸವಣ್ಣ ನೆನಪಾಗದೆ ಇರಲಾರರು. ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ಇವರೆಲ್ಲರೂ ಪ್ರಮುಖರೇ ಅಲ್ಲವೇ? ಕಾಲ ಸರಿದಂತೆಲ್ಲ ಇವರು ಪ್ರಾರಂಭಿಸಿದ ಧರ್ಮ ಯಾವ ರೂಪ ಪಡೆದಿದೆ? ಅಂಧಾಚರಣೆಗಳಿಂದ ಮುಕ್ತವಾಗಿದೆಯಾ ಎಂದು ನೋಡಿದರೆ ನಿರಾಶೆಯೇ ಆಗುತ್ತದೆ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ದುಬಾರಿ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ತಮ್ಮ ದೇವ ಮೂರ್ತಿಯನ್ನು ಘಾಸಿಗೊಳಿಸಿದವರ ಮೇಲೆ ಕೋಪಗೊಳ್ಳುತ್ತಿದ್ದ ಕುರೈಶರು ಮುಹಮ್ಮದರನ್ನು ವಿರೋಧಿಸಿದವರಲ್ಲಿ ಪ್ರಮುಖರು. ರೂಪವಿಲ್ಲದ ದೇವರನ್ನು ಮುಹಮ್ಮದರು ಸ್ಥಾಪಿಸಿದರು. ಮಸೀದಿಯನ್ನು ಹಾನಿಗೊಳಿಸಿದವರ ಮೇಲೆ, ‘ಅಪವಿತ್ರ’ಗೊಳಿಸಿದವರ ಮೇಲೆ ಇವತ್ತಿನ ಮುಸ್ಲಿಮರಿಗೂ ಕೋಪವುಕ್ಕುತ್ತದೆ. ಅಲ್ಲಿಗೆ ಬದಲಾದದ್ದೇನು? ಎಂಬಂತಹ ಪ್ರಶ್ನೆಗಳನ್ನು ನಮ್ಮೊಳಗೆ ಮೂಡಿಸುವುದರಲ್ಲಿಯೇ ‘ಓದಿರಿ’ಯ ಯಶಸ್ಸಿದೆ. ಇನ್ನೇನು ಹೇಳುವುದಕ್ಕಿಲ್ಲ. ಒಮ್ಮೆ ಓದಿರಿ!

ಬೆಲೆ: 220/- ನವಕರ್ನಾಟಕದ ಮೂಲಕ ಆನ್ ಲೈನಿನಲ್ಲಿ 176 ರುಪಾಯಿಗೆ ತರಿಸಿಕೊಳ್ಳಲು 
click:

ಗುರುವಾರ, ಮಾರ್ಚ್ 3, 2016

ಜನಸಾಮಾನ್ಯರೊಂದಿಗೆ ಮಾತನಾಡುವ ಭಾಷೆಯನ್ನು ಕಲಿಯಬೇಕು- ಯೋಗೇಂದ್ರ ಯಾದವ

ಯೋಗೇಂದ್ರ ಯಾದವ್ ಭಾಷಣದಿಂದ
"...ಸಂಘರ್ಷದ ತಾಣವಾಗಿ ಸಾರ್ವಜನಿಕ ಅಭಿಪ್ರಾಯದ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಚುನಾವಣೆ ಇಲ್ಲಿ ಪ್ರಧಾನ ತಾಣವಲ್ಲ. ಸಾರ್ವಜನಿಕ ಅಭಿಪ್ರಾಯವೇ ಕದನ ನಡೆಯುವ ಪ್ರಧಾನ ನೆಲೆ. ಇದನ್ನು ನಾವು ಬಹಳ ಬಹಳ ಕಾಲದಿಂದ ಕಡೆಗಣಿಸಿದ್ದೇವೆ. ಇದಕ್ಕೆ ನಾವು ಮರಳುವ ಅಗತ್ಯವಿದೆ. ಈ ಪ್ರಕ್ರಿಯೆಯಲ್ಲಿ ನಾವು ಹೊಸ ಮಿತ್ರರೊಂದಿಗೆ ಗುರುತಿಸಿಕೊಳ್ಳಲು ಕಲಿಯಬೇಕು. ಬಹಳ ಬಹಳ ಕಾಲದಿಂದ ನಾನು ನೋಡಿರುವಂತೆ ಈ ತೆರನಾದುದನ್ನು ನಾವು ಉಲ್ಲೇಖಿಸಿದಾಗಲೆಲ್ಲ ನಮ್ಮಂತಹ ಪ್ರಜಾಸತ್ತಾತ್ಮಕ, ಪ್ರಗತಿಪರ, ಉದಾರವಾದಿ ವ್ಯಕ್ತಿಗಳು ಒಗ್ಗೂಡುತ್ತಿದ್ದೇವೆ. ನಿಜ, ಆದರೆ ನಾವೆಲ್ಲ ಹಳೆಯ ಮಿತ್ರರು. ಕಳೆದ 20 ವರ್ಷಗಳಿಂದ ನಾವು ಒಂದೇ ತೆರನ ವೇದಿಕೆಯಲ್ಲಿದ್ದೇವೆ. ಹೊಸ ಮಿತ್ರರನ್ನು ಹುಡುಕಿಕೊಳ್ಳಲು ಕಾಲ ಕೂಡಿಬಂದಿದೆ.

ನನ್ನನ್ನು ನಂಬಿ, ಲೆಕ್ಕ ಇಲ್ಲದಷ್ಟು ಮಿತ್ರರನ್ನು ಗಳಿಸುವುದು ನಮಗೆ ಸಾಧ್ಯ. ಅವರು ನಮ್ಮ ಭಾಷೆಯನ್ನು ಮಾತನಾಡದಿರಬಹುದು. ಅವರು ಉನ್ನತ ಮಟ್ಟದ ಸೆಕ್ಯುಲರಿಸಂ ನ ಭಾಷೆ ಮಾತನಾಡದಿರಬಹುದು. ಅವರು ಸಂವಿಧಾನದ ಭಾಷೆ ಮಾತನಾಡದಿರಬಹುದು. ಆದರೆ ಚಲನಚಿತ್ರ ಕ್ಷೇತ್ರದ ಬಗ್ಗೆ ಯಾವ ಜ್ಞಾನವೂ ಇಲ್ಲದ ವ್ಯಕ್ತಿಯೊಬ್ಬನನ್ನು ಎಫ್‍ಟಿಐಐ ನಿರ್ದೇಶಕನನ್ನಾಗಿ ನೇಮಿಸಿದಾಗ ಅವರು ನೋವು ಅನುಭವಿಸಿರಬಹುದು. ಲವ್ ಜಿಹಾದ್‍ ಬಗ್ಗೆ ಯಾವ ರೀತಿಯಲ್ಲಿ ಮಾತನಾಡಲಾಗುತ್ತಿದೆಯೋ ಹಾಗೆ ಮಾತನಾಡುತ್ತಿರುವ ಬಗ್ಗೆ ಅವರಲ್ಲಿ ಆಕ್ಷೇಪವಿರಬಹುದು. ಆದ್ದರಿಂದ ಈ ಜನರೊಂದಿಗೆ ಸಂಪರ್ಕ ಸಾಧಿಸೋಣ. ನಾವು ಸಂಪರ್ಕ ಇರಿಸಿಕೊಳ್ಳಬಹುದಾದ ಅನೇಕ ಭಾರತೀಯರು, ಅವರು ‘ನಿಮ್ಮ ಬೈಬಲ್’ ಅನ್ನು, ನಿಮ್ಮ ಸಂಪೂರ್ಣ ಸಂವಿಧಾನವನ್ನು, ನಿಮ್ಮ ಸಂಪೂರ್ಣ ಸೆಕ್ಯುಲರಿಸಂ ಅನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಬೇಡಿ.

ನಮಗೆ ಅಸಂಖ್ಯ ಮಿತ್ರರಿದ್ದಾರೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ನಾವು ಹೊಸದೊಂದು ಭಾಷೆಯನ್ನು ಕಲಿಯಬೇಕು; ಅದೇ ಸಂಪ್ರದಾಯಗಳಿಗೆ (ಟ್ರೆಡಿಶನ್) ಸಂಬಂಧಿಸಿದ ಭಾಷೆ. ನನ್ನ ಅನೇಕ ಗೆಳೆಯರಿಗೆ ಇದು ಇಷ್ಟವಾಗದಿರಬಹುದು. ತುಂಬಾ ತುಂಬಾ ಯೋಚನೆ ಮಾಡಿದ ಬಳಿಕ ನಾನು ಇದನ್ನು ಹೇಳುತ್ತಿದ್ದೇನೆ. ನನಗೆ ಇದು ಮನವರಿಕೆಯಾದುದು ಡಿಸೆಂಬರ್ 6, 1992 ರಂದು. ಬಾಬ್ರಿ ಮಸೀದಿ ‍ಧ್ವಂಸಗೊಳಿಸಿದ ಸಂದರ್ಭ. ನಾನಾಗ ಚಂದೀಗಢದ ಹೊರವಲಯದ ಒಂದು ಪುಟ್ಟ ಕಾಲನಿಯಲ್ಲಿ ವಾಸವಾಗಿದ್ದೆ. ಮಸೀದಿ ಧ‍್ವಂಸಗೊಳಿಸಿದಾಗ ಎಲ್ಲರಂತೆ ನನ್ನಲ್ಲೂ ಆಕ್ರೋಶ ಉಂಟಾಯಿತು. ನಾನು ಅತ್ತೆ. ನನ್ನ ನೆರೆಹೊರೆಯವರೊಂದಿಗೆ ಮಾತನಾಡಬೇಕು ಎಂದು ನನಗನಿಸಿತು. ಅದು ಕೊಳೆಗೇರಿಗಿಂತ ಕೊಂಚವೇ ಉತ್ತಮ ಮಟ್ಟದ, ಕಾರ್ಮಿಕರು ವಾಸವಾಗಿದ್ದ ಕಾಲನಿಯಾಗಿತ್ತು. ನನ್ನ ನೆರೆಯಲ್ಲಿ ರಿಕ್ಷಾ ಓಡಿಸುವವರಿದ್ದರು, ಟಾಂಗಾ ಓಡಿಸುವವರಿದ್ದರು… ನಾನು ಅವರಲ್ಲಿ ಮಾತನಾಡುತ್ತಾ ‘ಎಂತಹ ಕೆಟ್ಟ ಕೆಲಸ ನಡೆಯಿತಲ್ಲವೇ’ ಅಂದೆ. ಆಗ ಅವರೆಲ್ಲರೂ , ‘ಅರೇ, ರಾಮ ಮಂದಿರ ಇಲ್ಲಿ, ಆಗದಿದ್ದರೆ ಇನ್ನೇನು ಇಂಗ್ಲೆಂಡ್ ನಲ್ಲಿ ಆಗುತ್ತದೆಯೇ?’ ಎಂದು ಕೇಳಿದರು. ‘ಒಳ್ಳೆಯದೇ ಆಯಿತಲ್ಲ, ರಾಮಮಂದಿರ ನಿರ್ಮಾಣವಾಗುತ್ತದಲ್ಲ, ಇದರಲ್ಲಿ ತಪ್ಪೇನು?’ ಅಂದರು. ನಾನು ನನ್ನ ಸಂವಿಧಾನದ ಭಾಷೆ ಮಾತನಾಡಿದೆ. ಅದು ಅವರನ್ನು ತಲಪಲಿಲ್ಲ. ನಾನು ಹಕ್ಕುಗಳ ಭಾಷೆ ಮಾತನಾಡಿದೆ. ಅವರು ಜೋರಾಗಿ ನಕ್ಕು ‘ಬಾಬೂಜಿ ದೊಡ್ಡ ದೊಡ್ಡ ಪುಸ್ತಕ ಓದಿ ದೊಡ್ಡ ದೊಡ್ಡ ಮಾತನಾಡುತ್ತಿದ್ದಾರೆ’ ಎಂದು ಹಂಗಿಸಿದರು. ನನ್ನ ಮಾತಿಗೆ ಬೆಲೆಯೇ ಇರಲಿಲ್ಲ.

ಮಾರನೆ ದಿನ ‘ಜನಸತ್ತಾ’ ಪತ್ರಿಕೆಯ ದಿವಂಗತ ಸಂಪಾದಕ ಪ್ರಭಾತ್ ಜೋಷಿ ಮುಖಪುಟ ಲೇಖನವೊಂದನ್ನು ಬರೆದರು. ಅದರಲ್ಲಿ ‘ಮರ್ಯಾದಾ ಪುರುಷೋತ್ತಮ ಕೀ ನಾಮ್ ಪರ್ ಕಲಂಕ್’ ಎಂದು ಕರೆಯಲಾಗಿತ್ತು. ಮರ್ಯಾದಾ ಪುರುಷೋತ್ತಮ ರಾಮನ ಬಗೆಗಿನ ಲೇಖನವದು. ರಾಮ ಅಂದರೆ ಏನು? ರಾಮ ಹೇಗೆ ಮರ್ಯಾದಾ ಪುರುಷೋತ್ತಮನಾಗಿದ್ದ ಎನ್ನುವುದನ್ನು ಅದರಲ್ಲಿ ಸರಳವಾಗಿ ಹೇಳಲಾಗಿತ್ತು. ಪ್ರತಿಯೊಂದು ವಾಕ್ಯದ ಕೊನೆಯ ಸಾಲಿನಲ್ಲಿಯೂ ಆರ್ ಎಸ್ ಎಸ್ ಮತ್ತು ಬಿಜೆಪಿಯ ಮಂದಿ ‘ಈ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ’, ‘ಅವರು ಈ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ’, ‘ಅವರು ಈ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಲಾಗಿತ್ತು. ಇದು ನನಗೊಂದು ಭಾಷೆಯನ್ನು ಕೊಟ್ಟಿತು. ನಾನು ಮರಳಿ ಹೋಗಿ ‘ಇದು ರಾಮನ ಮರ್ಯಾದೆ’ ಎಂದು ಹೇಳಿದೆ. ಅವರಿಗೆ ಅದು ಸುಲಭದಲ್ಲಿ ಅರ್ಥವಾಯಿತು. ಅವರೊಡನೆ ಮಾತನಾಡಲು ನನಗೊಂದು ಹೊಸ ಭಾಷೆ ಸಿಕ್ಕಿತು.

ಜನಸಾಮಾನ್ಯರೊಂದಿಗೆ ಮಾತನಾಡುವ ಭಾಷೆಯನ್ನು ಸೆಕ್ಯುಲರ್ ಮಂದಿ ಕಳೆದುಕೊಂಡುಬಿಟ್ಟಿದ್ದಾರೆ. ನಾವು ಚೇತರಿಸಿಕೊಳ್ಳಬೇಕಾದುದು ಕಾರ್ಯತಂತ್ರ ರೂಪದಲ್ಲಿ ಅಲ್ಲ. ನಾವು ವಿವೇಕಾನಂದರ ಮಾತುಗಳಲ್ಲಿ ನಂಬಿಕೆ ಇಲ್ಲದೆ ಒಂದು ಕಾರ್ಯತಂತ್ರವಾಗಿ ಪದೇ ಪದೇ ಅವರ ಮಾತನ್ನು ಉದ್ಧರಿಸಿ ಪ್ರಯೋಜನವಿಲ್ಲ. ಮಹಾತ್ಮಾ ಗಾಂಧಿ ಮಾಡಿದಂತೆ ಮಾಡಬೇಕು. ಆತ ‘ರಾಮ’ ಎಂದು ಹೇಳಿದಾಗ ಅದು ಕೇವಲ ಕಾರ್ಯತಂತ್ರದ ಸಂಗತಿಯಾಗಿರಲಿಲ್ಲ. ಆತ ಅದರಲ್ಲಿ ನಂಬಿಕೆ ಇರಿಸಿದ್ದ. ನಾವು ಆ ಭಾಷೆಯನ್ನು ಕಲಿಯಬೇಕು ಮತ್ತೆ ಮತ್ತೆ ಕಲಿಯಬೇಕು. ಆ ಭಾಷೆಯನ್ನು ಕಲಿಯುವುದು ಕಷ್ಟಕರ ಮತ್ತು ಇಂಗ್ಲಿಷ್ ಮಾತನಾಡುವ ಸೆಕ್ಯುಲರಿಸಂ ಆಚರಿಸುವ ನಮಗಂತೂ ಅದು ಇನ್ನೂ ಕಷ್ಟ. ಆದರೆ ಅದೆಷ್ಟೋ ಜನರು ಅಂತಹ ಕಷ್ಟವನ್ನು ಪಡಬೇಕು ಎಂದು ನಾವೂ ಬಯಸುತ್ತೇವಲ್ಲ! ಮತ್ತು ಈಗ ಅಪಾಯ ಎದುರಿಸುತ್ತಿರುವುದು ಸಣ್ಣ ಸಂಗತಿಯೇನಲ್ಲ. ಇಂಡಿಯಾ ಎಂಬ ಪರಿಕಲ್ಪನೆಯೇ ಅಪಾಯ ಎದುರಿಸುತ್ತಿದೆ." 

ಕನ್ಹಯ್ಯನಿಗೆ ಜಾಮೀನು ಕೊಟ್ಟ ಹೈಕೋರ್ಟ್ ಹೇಳಿದ್ದೇನು?



ಡಾ. ಅಶೋಕ್.ಕೆ.ಆರ್

03/03/2016


ದಿನದಿನಕ್ಕೂ ಹೊಸ ತಿರುವು ಪಡೆಯುತ್ತಲೇ ಇದ್ದ ಕನ್ಹಯ್ಯ ಬಂಧನ ಪ್ರಕರಣ ಒಂದು ಹಂತಕ್ಕೆ ಬಂದು ನಿಂತಿದೆ. ‘ದೇಶದ್ರೋಹ’ದ ಆರೋಪ ಎದುರಿಸುತ್ತಿದ್ದ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರನಿಗೆ ಹೈಕೋರ್ಟ್ ಆರು ತಿಂಗಳ ಜಾಮೀನು ನೀಡಿದೆ. ಬಡತನದ ಕುಟುಂಬದಿಂದ ಬಂದವನೆಂಬ ಕಾರಣದಿಂದ ಹತ್ತು ಸಾವಿರ ರುಪಾಯಿಗಳ ವೈಯಕ್ತಿಕ ಬಾಂಡ್ ಕಟ್ಟಲು ಸೂಚಿಸಿದೆ. ಕನ್ಹಯ್ಯನೇ ದೇಶದ್ರೋಹಿ ಘೋಷಣೆಗಳು ಕೂಗಿದನೆಂಬ ವೀಡಿಯೋಗಳು ಮೊದಲೆರಡು ದಿನ ಹರಿದಾಡಿದವು, ವಾಹಿನಿಗಳಲ್ಲೂ ಅದೇ ಪ್ರಸಾರವಾಯಿತು. ಕನ್ಹಯ್ಯನ ಪರವಾಗಿ ಮಾತನಾಡಿದವರಿಗೆಲ್ಲ ‘ದೇಶದ್ರೋಹಿ’ ಸರ್ಟಿಫಿಕೇಟುಗಳನ್ನು ಹಂಚುವಲ್ಲಿ ‘ದೇಶಪ್ರೇಮಿ’ಗಳು ಬ್ಯುಸಿಯಾಗಿಬಿಟ್ಟರು. ನಂತರದ ದಿನಗಳಲ್ಲಿ ಘೋಷಣೆ ಕೂಗಿದ್ದು ಎಬಿವಿಪಿಯವರು ಎಂದರು, ಇಲ್ಲ ಘೋಷಣೆ ಕೂಗಿದ್ದು ಕಾಶ್ಮೀರಿಗಳು ಎಂದರು. ಕನ್ಹಯ್ಯನ ವೀಡಿಯೋ ನಕಲಿ, ಅವನು ಮನುವಾದದ ವಿರುದ್ಧ ಬ್ರಾಹ್ಮಣವಾದದ ವಿರುದ್ಧ ಬಡತನದ ವಿರುದ್ಧ ಜಾತೀಯತೆಯ ವಿರುದ್ಧ ಕೂಗಿದ್ದ ಘೋಷಣೆಗಳ ವೀಡಿಯೋದ ಧ್ವನಿ ಬದಲಿಸಿ ದೇಶದ್ರೋಹಿಯಾಗಿ ಬಿಂಬಿಸಲು ಝೀ ನ್ಯೂಸಿನಂತಹ ಕೆಲವು ಮಾಧ್ಯಮಗಳು ನಡೆಸಿದ್ದ ಪ್ರಯತ್ನವನ್ನು ಇಂಡಿಯಾ ಟುಡೇ ಬಯಲಿಗೆಳೆಯಿತು. ಫೊರೆನ್ಸಿಕ್ ವರದಿಗಳು ಕೂಡ ಏಳು ವೀಡಿಯೋಗಳಲ್ಲಿ ಎರಡು ನಕಲಿ ಎಂದ್ಹೇಳಿತು. ಝೀ ನ್ಯೂಸಿನ ವರದಿಗಾರ ಘಟನೆ ನಡೆಯುವ ಒಂದು ಘಂಟೆ ಮೊದಲೇ ಎಬಿವಿಪಿ ಮುಖಂಡನ ಆಹ್ವಾನದ ಮೇರೆಗೆ ಜೆ.ಎನ್.ಯು ಒಳಗೆ ಹೋಗಿದ್ದರು ಎಂಬಂಶ ಜೆ.ಎನ್.ಯು entry bookನಿಂದ ಪತ್ತೆಯಾಯಿತು. ಹಿಂಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ, ‘ದೇಶದ್ರೋಹ’ದ ಕೆಲಸವನ್ನು ಕನ್ಹಯ್ಯ ಮಾಡಿದ್ದನೇ ಇಲ್ಲವೇ ಎಂಬ ಗೊಂದಲಗಳು ಚಾಲ್ತಿಯಲ್ಲಿರುವಾಗಲೇ ಹೈಕೋರ್ಟ್ ಕನ್ಹಯ್ಯನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ನಮ್ಮ ಚರ್ಚೆಗಳು ವಾದಗಳು ಏನೇ ಇರಲಿ ನ್ಯಾಯಾಲಯ ಕನ್ಹಯ್ಯನ ಬಿಡುಗಡೆಯ ಸಂದರ್ಭದಲ್ಲಿ ಹೇಳಿದ ಪ್ರಮುಖ ಅಂಶಗಳೇನು ಎನ್ನುವುದನ್ನು ನೋಡೋಣ.

ಎಫ್ ಐ ಆರಿನ ಪ್ರಕಾರವೇ ಜೆ.ಎನ್.ಯುನಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೂಗಿದರೆನ್ನಲಾದ ದಿನ ಯಾವುದೇ ರೀತಿಯ ಹಿಂಸೆ ನಡೆದಿಲ್ಲ. ಕನ್ಹಯ್ಯ ಕುಮಾರ್ ತನಿಖೆಗೆ ಪೂರ್ಣ ಸಹಕರಿಸಿದ್ದಾನೆ, ಸದ್ಯಕ್ಕೆ ಈ ಪ್ರಕರಣದ ತನಿಖೆಗೆ ಅವನ ಅವಶ್ಯಕತೆಯಿಲ್ಲ ಎಂದು ಕನ್ಹಯ್ಯನ ಪರ ವಕೀಲರಾದ ಕಪಿಲ್ ಸಿಬಲ್ ವಾದಿಸಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಕನ್ಹಯ್ಯನ ಮೇಲೆ ಆರೋಪ ಹೊರಿಸಲಾಗಿದೆ. ದಿನಾಂಕ 11ರಂದು (ಘಟನೆ ನಡೆದ ಎರಡು ದಿನಗಳ ನಂತರ) ಮಾಡಿದ ಭಾಷಣದಲ್ಲಿ ಕನ್ಹಯ್ಯಕುಮಾರ್ ದೇಶದ ಸಂವಿಧಾನದ ಪರವಾಗಿ ಮಾತನಾಡಿದ್ದಾನೆ. ಕಾರ್ಯಕ್ರಮದ ಆಯೋಜನೆಯಲ್ಲಿ ಕನ್ಹಯ್ಯನ ಪಾತ್ರವಿರಲಿಲ್ಲ, ಆ ಕಾರ್ಯಕ್ರಮದ ಪೋಸ್ಟರುಗಳಲ್ಲಿ ಕನ್ಹಯ್ಯನ ಹೆಸರಿರಲಿಲ್ಲ. ಕನ್ಹಯ್ಯನಿಗೂ ಅವತ್ತಿನ ಘಟನೆಗೂ ಯಾವುದೇ ರೀತಿಯ ಸಂಬಂಧವೂ ಇರಲಿಲ್ಲ. ಝೀ ವಾಹಿನಿ ಹತ್ತನೇ ಫೆಬ್ರವರಿಯಂದು ಪ್ರಸಾರ ಮಾಡಿದ ವೀಡಿಯೋದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳಿದ್ದವು. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ ಪೋಲೀಸರ ಎಫ್.ಐ.ಆರಿನಲ್ಲಿ ನಮೂದಾಗಿರುವ ಮೂವತ್ತು ಘೋಷಣೆಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯೇ ಇಲ್ಲ! ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಬಹುದೆಂಬ ಕಾರಣದಿಂದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯ ಗಲಭೆ ತಪ್ಪಿಸುವ ಸಲುವಾಗಿ ಘಟನಾ ಸ್ಥಳಕ್ಕೆ ಹೋಗಿ ಪರಿಸ್ಥಿತಿ ಶಾಂತವಾದ ಮೇಲೆ ವಾಪಸ್ಸಾದ. ಮತ್ತು ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ದೇಶದ ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯೊಳಗೇ ಇತ್ತು, ಅದನ್ನು ದೇಶದ್ರೋಹವೆಂದು ಕರೆಯಲು ಬರುವುದಿಲ್ಲವೆಂಬುದು ಕನ್ಹಯ್ಯ ಪರ ವಕೀಲರ ವಾದವಾಗಿತ್ತು.

ಇನ್ನು ಸರಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರಾದ ತುಷಾರ್ ಮೆಹ್ತಾ ದಿನಾಂಕ 9ರಂದು ಎರಡು ಗುಂಪುಗಳ ನಡುವೆ ಘರ್ಷಣೆ, ಸಣ್ಣಪುಟ್ಟ ತಳ್ಳಾಟ ಮತ್ತು ಘೋಷಣೆಗಳು ನಡೆದವು. ಪೋಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾದ ನಂತರ ಎಲ್ಲರೂ ವಾಪಸ್ಸಾದರು ಎಂದು ತಿಳಿಸಿದರು. ಝೀ ವಾಹಿನಿ ಪ್ರಸಾರ ಮಾಡಿದ ವೀಡೀಯೋವನ್ನು ಪಡೆದ ನಂತರ ಪೋಲೀಸರು ಎಫ್.ಐ.ಆರ್ ದಾಖಲಿಸಿದರು (ಈಗ ಆ ವೀಡಿಯೋದ ಅಸಲಿಯತ್ತೇ ಪ್ರಶ್ನಾರ್ಹವಾಗಿಬಿಟ್ಟಿದೆ!). ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ಅವರ ಪರವಾಗಿ ಘೋಷಣೆ ಕೂಗುತ್ತಿದ್ದರು ಎಂಬಂಶವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಕೊಟ್ಟ ಅನುಮತಿಯನ್ನು ಜೆ.ಎನ್.ಯು ವಾಪಸ್ಸು ತೆಗೆದುಕೊಂಡದ್ದರ ಬಗ್ಗೆ ಕನ್ಹಯ್ಯ ಕುಮಾರ್ ಅಸಂತೋಷ ವ್ಯಕ್ತಪಡಿಸಿದ್ದರ ಬಗ್ಗೆ ಸಾಕ್ಷಿದಾರರು ಹೇಳಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು ತುಷಾರ್ ಮೆಹ್ತಾ. ತುಷಾರ್ ಮೆಹ್ತಾರ ಪ್ರಕಾರ ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ಘಟನೆ ನಡೆದ ನಂತರ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸಿದ ಯೋಜನೆಯ ಭಾಗವಾಗಿತ್ತು. ವೀಡಿಯೋದ ಜೊತೆಗೆ ಸಾಕ್ಷಿಗಳ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಮತ್ತು ಗಂಭೀರ ಕಾಯಿದೆಗಳಡಿಯಲ್ಲಿ ಕನ್ಹಯ್ಯನನ್ನು ಬಂಧಿಸಿರುವುದರಿಂದ ಆತನಿಗೆ ಜಾಮೀನು ಕೊಡಬಾರದೆಂಬುದು ಸರಕಾರೀ ವಕೀಲರ ವಾದವಾಗಿತ್ತು.

ವಾದ ಪ್ರತಿವಾದಗಳನ್ನೆಲ್ಲವನ್ನೂ ಆಲಿಸಿದ ನ್ಯಾಯಾಲಯ ಘಟನೆ ನಡೆದ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದುದನ್ನು ಯಾರೂ ನಿರಾಕರಿಸುತ್ತಿಲ್ಲ, ಆದರಾತ ಇದ್ದದ್ದು ಸಂಭವನೀಯ ಗಲಭೆ ನಡೆಯದಂತೆ ನೋಡಿಕೊಳ್ಳಲೇ ಹೊರತು ದೇಶವಿರೋಧಿ ಘೋಷಣೆ ಕೂಗಲಲ್ಲ. ಅಫ್ಝಲ್ ಗುರು, ಮಕ್ಬೂಲ್ ಭಟ್ ನ ಪರವಾಗಿ ಘೋಷಣೆ ಕೂಗಿದ್ದು, ಭಾರತವನ್ನು ವಿಭಜಿಸುವ ಘೋಷಣೆ ಕೂಗಿದ್ದೆಲ್ಲವೂ ಎಫ್.ಐ.ಆರ್ ನಲ್ಲಿ ದಾಖಲಾಗಿದೆ. ಆ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದ ಎನ್ನುವುದಕ್ಕೆ ಫೋಟೋ ದಾಖಲೆಗಳಿವೆ. ಆದರೆ ಸರಕಾರೀ ವಕೀಲರು ಕೂಡ ಅವತ್ತಿನ ವೀಡಿಯೋದಲ್ಲಿ ಕನ್ಹಯ್ಯಕುಮಾರ್ ದೇಶವಿರೋಧಿ ಘೋಷಣೆ ಕೂಗಿಲ್ಲ ಎಂಬಂಶದ ಬಗ್ಗೆ ತಕರಾರು ಎತ್ತಿಲ್ಲ. ಸ್ವತಂತ್ರ ಸಾಕ್ಷಿಗಳು ಆತನೂ ಅದರಲ್ಲಿ ಭಾಗವಹಿಸಿದ್ದ ಎಂದಿದ್ದಾರೆ, ಅದರ ಬಗ್ಗೆ ತನಿಖೆಯಾಗಬೇಕಷ್ಟೇ. ಇನ್ನು ದಿನಾಂಕ ಹನ್ನೊಂದರಂದು ಕನ್ಹಯ್ಯ ಕುಮಾರ್ ಮಾಡಿದ ಭಾಷಣ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೂಡಿದ ಯೋಜನೆಯಾಗಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ನ್ಯಾಯಾಲಯ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ತನಿಖೆ ಪೂರ್ಣವಾದ ಮೇಲಷ್ಟೇ ಕನ್ಹಯ್ಯ ಕುಮಾರನ ಮೇಲಿನ ದೇಶದ್ರೋಹದ ಆರೋಪ ಸರಿಯೋ ತಪ್ಪೋ ಎಂದು ನಿರ್ಧರಿತವಾಗುವುದು. ತನಿಖೆ ಈಗಷ್ಟೇ ಪ್ರಾರಂಭವಾಗಿದೆ, ವಿಡೀಯೋ ಆಧಾರಗಳು ಕನ್ಹಯ್ಯ ಘಟನಾ ಸ್ಥಳದಲ್ಲಿದ್ದ ಎನ್ನುತ್ತಿವೆ, ಗಂಭೀರ ಆಪಾದನೆ ಆತನ ಮೇಲಿದೆ, ಇದರ ಮೇಲೆ ಆತನನ್ನು ಜೈಲಿನಲ್ಲಿಡುವುದೇ ಸೂಕ್ತವೆಂಬ ಭಾವನೆ ಬರುತ್ತದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿರುವ ಕಾರಣ ಕ್ಯಾಂಪಸ್ಸಿನಲ್ಲಿ ನಡೆಯುವ ಘಟನೆಗಳಿಗೆ ಕನ್ಹಯ್ಯ ಜವಾಬ್ದಾರಿಯಾಗುತ್ತಾನೆ. ಸಂವಿಧಾನದ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಪ್ರತಿಯೊಬ್ಬರೂ ತಮ್ಮ ಇಷ್ಟಾನಿಷ್ಟದ ಸಿದ್ಧಾಂತವನ್ನು ಸಂವಿಧಾನದ ಚೌಕಟ್ಟಿನೊಳಗೆ ಪಾಲಿಸಲು ಸ್ವತಂತ್ರರು. ಈ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿದಿರುವುದು ನಮ್ಮ ಗಡಿಗಳಲ್ಲಿ ಸೈನಿಕರು ಮಳೆ ಚಳಿ ಹಿಮವೆನ್ನದೆ ಕಾಯುತ್ತಿರುವ ಕಾರಣದಿಂದ ಎನ್ನುವುದನ್ನು ಮರೆಯದಿರೋಣ. ಅಫ್ಜಲ್ ಗುರು, ಮಕ್ಬೂಲ್ ಭಟ್ ಪರವಾಗಿ ಕೂಗುವ ಘೋಷಣೆಗಳು, ದೇಶವಿರೋಧಿ ಕೂಗುಗಳು ದೇಶದ ಸಮಗ್ರತೆಗೆ ಅಪಾಯ ತರುತ್ತವೆಂದು ಹೇಳಿದ ನ್ಯಾಯಾಧೀಶರು ಇಂತಹ ಕೂಗುಗಳು ನಮ್ಮನ್ನು ಕಾಯುವ ಸಲುವಾಗಿ ಹುತಾತ್ಮರಾದವರ ಕುಟುಂಬಗಳಲ್ಲಿ ಮೂಡಿಸುವ ಭಾವನೆಗಳೇನು ಎನ್ನುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿರುವ ಕನ್ಹಯ್ಯಕುಮಾರನಿಗೆ ಅದೇ ಸಂವಿಧಾನ ಹೇಳಿರುವ ಕರ್ತವ್ಯಗಳ ಬಗ್ಗೆಯೂ ನೆನಪಿಸಲು ಬಯಸುತ್ತೇನೆ. ಅಫ್ಜಲ್ ಗುರು, ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದು ನಿಂತಿರುವ ಚಿತ್ರಗಳು ನಮ್ಮ ಮುಂದಿವೆ, ಇಂತಹ ವಿದ್ಯಾರ್ಥಿ ಸಮುದಾಯ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಜೆ.ಎನ್.ಯು ಆಡಳಿತ ಮಂಡಳಿ ನೋಡಿಕೊಳ್ಳಬೇಕು. ತನಿಖೆ ಪ್ರಾರಂಭಿಕ ಹಂತದಲ್ಲಿದೆ. ಕೆಲವು ವಿದ್ಯಾರ್ಥಿಗಳು ಕೂಗಿದ ಘೋಷಣೆಗಳು ಸರ್ವವ್ಯಾಪಿಯಾಗದಂತೆ ತಡೆಯುವ ಕೆಲಸಗಳಾಗಬೇಕು. ಕಾಲಿಗೆ ಗಾಯವಾಗಿದೆ, ಗಾಯ ಮಾಯಲು ಮೊದಲು ಔಷಧ ಕೊಡಬೇಕು; ಮಾಯದಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕವೇ ತೆಗೆಯಬೇಕಾಗುತ್ತದೆ. ಬಂಧನದ ದಿನಗಳಲ್ಲಿ ಕನ್ಹಯ್ಯಕುಮಾರ್ ಘಟನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರಬಹುದು. ಆತ ಮುಖ್ಯವಾಹಿನಿಯಲ್ಲಿ ಉಳಿಯಲಿ ಎಂಬುದ್ದೇಶದಿಂದ ಔಷಧ ಕೊಡುವ ಕೆಲಸವನ್ನು ಮಾಡಬಯಸುತ್ತೇನೆ. ಹಾಗಾಗಿ ಕನ್ಹಯ್ಯನಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡುತ್ತಿದ್ದೇನೆ. ಕನ್ಹಯ್ಯ ಹನ್ನೊಂದರದು ಮಾಡಿದ ಭಾಷಣದಲ್ಲಿ ತನ್ನ ಮನೆ ನಡೆಯುತ್ತಿರುವುದು ಮೂರು ಸಾವಿರ ರುಪಾಯಿಯ ಸಂಬಳದಿಂದ ಎಂದು ತಿಳಿಸಿದ್ದಾನೆ. ಹಾಗಾಗಿ ಬಾಂಡಿನ ಮೊತ್ತವನ್ನು ಕಡಿಮೆ ಇಡುವುದಕ್ಕೆ ನಿರ್ಧರಿಸಿದ್ದೇನೆ. ಯಾವುದೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕಾಗಬಹುದು. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತನ್ನ ಕೈಲಾದ ಮಟ್ಟಿಗೆ ಕ್ಯಾಂಪಸ್ಸಿನೊಳಗೆ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಹತ್ತು ಸಾವಿರದ ಬಾಂಡ್ ಕಟ್ಟಿಸಿಕೊಂಡು ಆರು ತಿಂಗಳ ಜಾಮೀನು ನೀಡಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳೆಲ್ಲವೂ ಜಾಮೀನಿಗೆ ಸಂಬಂಧಪಟ್ಟಂತೆಯೇ ಹೊರತು ಇಡೀ ಪ್ರಕರಣಕ್ಕೆ ಸಂಬಂಧಿಸಿದಂತಲ್ಲ ಎಂದ್ಹೇಳಿದ ನ್ಯಾಯಾಧೀಶರು ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸುವಂತೆ ತಿಳಿಸಿ ತಮ್ಮ ಹೇಳಿಕೆಯನ್ನು ಮುಗಿಸಿದರು.

ಮೂಲ: http://indiankanoon.org/doc/77368780/

ಮಾರ್ಚ್ 3ರಂದು ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಕನ್ಹಯ್ಯ ಕುಮಾರ್ ಮಾಡಿದ ಭಾಷಣ.


ಮಧ್ಯಂತರ ಜಾಮೀನು ಪಡೆದು ಹೊರಬಂದ ಕನ್ಹಯ್ಯಕುಮಾರ್ ಜೆ.ಎನ್.ಯು ಆವರಣದಲ್ಲಿ ಸಹವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣ.
ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
04/03/2016

ಸೌಜನ್ಯ:http://www.hingyake.in
ನಮಗೆ ಆಜಾದಿ ಬೇಕು. ಹೌದು. ಆಜಾದಿ ಬೇಕು ಅಂತ ಕೇಳೋದು ತಪ್ಪೇನು? ಈ ದೇಶದ ನೆಲದಲ್ಲಿ ನಿಂತು ಸರಿಯನ್ನು ಸರಿ ತಪ್ಪನ್ನು ತಪ್ಪು ಅಂತ ಹೆಳುವ ಆಜಾದಿ ನಮಗೆ ಬೇಕು. ಒಂದು ಮಜದ ವಿಷಯ ಗೊತ್ತಾ? ಇದು ನಿರಂತರ ಪ್ರಕ್ರಿಯೆ. ಈ ಮಾತು ನಾನ್ಯಾಕೆ ಹೇಳ್ತಿದೀನಿ ಗೊತ್ತಾ? ಮೊದಲು ಇದಕ್ಕೆ ಉಲ್ಟಾ ಇತ್ತು. ಎಲ್ಲಾ ಯೋಜಿತವಾಗಿತ್ತು. ಈಗ ಇದು ಸ್ಪಾಂಟನಸ್ ಆಗಿದೆ.
ಈ ದೇಶದ ಸಂವಿಧಾನದಲ್ಲಿ, ದೇಶದ ಕಾನೂನಿನಲ್ಲಿ, ಈ ದೇಶದ ನ್ಯಾಯ ಪ್ರಕ್ರಿಯೆಯಲ್ಲಿ ಭರವಸೆ ಇದೆ. ಹಾಗೇ, ಬದಲಾವಣೆಯೇ ಸತ್ಯ ಅನ್ನೋ ಮಾತಿನಲ್ಲೂ ಭರವಸೆ ಇದೆ. ಎಲ್ಲವೂ ಬದಲಾಗುತ್ತವೆ. ನಾವು ಬದಲಾವಣೆಯ ಪಕ್ಷದಲ್ಲಿ ನಿಂತಿದ್ದೀವಿ. ಬದಲಾವಣೆ ಸಾಧಿಸಿ ತೋರಿಸ್ತೀವಿ. ಸಂವಿಧಾನದ ಮೇಲೆ ನಮಗೆ ಸಂಫೂರ್ಣ ಭರವಸೆ ಇದೆ. ಸಂವಿಧಾನದ ಆಶಯಗಳ ಜೊತೆ ನಾವು ಗಟ್ಟಿಯಾಗಿ ನಿಲ್ತೀವಿ. ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಅದರ ಎಲ್ಲ ಧಾರೆಗಳ ಜೊತೆ ಪ್ರವಹಿಸ್ತೀವಿ. ಸಮಾಜವಾದ, ಧರ್ಮನಿರಪೇಕ್ಷತೆ, ಸಮಾನತೆ – ಇವುಗಳ ಜೊತೆ ಬೆಸೆದುಕೊಂಡಿದ್ದೀವಿ. 

ನಾನು ಸಾಕಷ್ಟು ಪ್ರಶ್ನೆಗಳನ್ನ ಕೇಳ್ತಿದ್ದೆ. ನಾನಿವತ್ತು ಭಾಷಣ ಮಾಡೋದಿಲ್ಲ. ನನ್ನ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತೀನಿ. 

ಮೊದಲು ಭಾಷಣಕ್ಕೆ ಮುಂಚೆ ಸಿಕ್ಕಾಪಟ್ಟೆ ಓದ್ತಾ ಇದ್ದೆ, ವ್ಯವಸ್ಥೆಯನ್ನು ಛೇಡಿಸ್ತಿದ್ದೆ. ಈ ಸಲ ಓದಿದ್ದು ಕಡಿಮೆಯಾಗಿದೆ ಮತ್ತು ಛೇಡಿಸೋಕೆ ಸಾಕಷ್ಟಿದೆ. ಒಬ್ರು ಹೇಳ್ತಾರೆ, ಜೆ ಎನ್ ಯು ನ ಜಾಲಾಡಿದೀನಿ ಅಂತ. ಅವರೊಂದಷ್ಟು ದಾಖಲೆ ಕೊಡ್ತಾರೆ. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇದೆ ಅಂತ ಹೇಳ್ತಾರೆ! ಈಗ ನ್ಯಾಯಾಲಯದ ಅಧೀನದಲ್ಲಿರೋ ಸಂಗತಿ ಬಗ್ಗೆ ನಾನು ಏನೂ ಹೇಳೋದಿಲ್ಲ. ಆದ್ರೆ ಒಂದು ಮಾತು, ಸಂವಿಧಾನವನ್ನ ನಿಜಕ್ಕೂ ಪ್ರೀತಿಸುವ, ಬಾಬಾ ಸಾಹೇಬರ ಕನಸುಗಳನ್ನ ಸಾಕಾರಗೊಳಿಸಲು ಬಯಸುವ ಈ ದೇಶದ ಜನತೆ, ನಾನು ಏನು ಹೇಳಬಯಸ್ತಿದ್ದೀನಿ ಅನ್ನೋದನ್ನ ಇಷಾರೆಗಳಲ್ಲೇ ಅರ್ಥ ಮಾಡಿಕೊಂಡಿರುತ್ತಾರೆ.

ಇದನ್ನೂ ಓದಿ:
ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೇಳಿದ್ದೇನು?


ಪ್ರಧಾನ ಮಂತ್ರಿ ಟ್ವೀಟ್ ಮಾಡಿದಾರೆ; ಹೇಳಿದಾರೆ, “ಸತ್ಯಮೇವ ಜಯತೆ!”. ನಾನೂ ಹೇಳ್ತೀನಿ, “ಪ್ರಧಾನ ಮಂತ್ರೀ ಜೀ, ನಿಮ್ಮ ಜೊತೆ ಬಹಳವೇ ಮತಭೇದವಿದೆ. ಆದ್ರೆ ಸತ್ಯಮೇವ ಜಯತೆಯ ಘೋಷ ಬರೀ ನಿಮ್ಮ ಪಾಲಿಗಲ್ಲ, ಈ ದೇಶದ ಪಾಲಿಗೂ ಇದೆ, ಸಂವಿಧಾನದ ಪಾಲಿಗೂ ಇದೆ. ನಾನೂ ಕೂಡ ಹೇಳ್ತೀನಿ, ಸತ್ಯಮೇವ ಜಯತೇ!” ಮತ್ತು ಸತ್ಯಕ್ಕೆ ಜಯವಾಗುತ್ತೆ, ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡಿರುವ ಸಮಸ್ತ ಜನತೆಗಾಗಿ ನನ್ನ ಅನುಭವಗಳನ್ನ ಹಂಚಿಕೊಳ್ತೀನಷ್ಟೆ. 

ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳ ಮೇಲೆ ಒಂದು ರಾಜಕೀಯ ಅಸ್ತ್ರವಾಗಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ ಅಂತ ಅಂದುಕೊಳ್ಬೇಡಿ. ಅದನ್ನ ತಿಳಿಯಬೇಕಿರೋದು ಹೀಗೆ. ನಾನಿದನ್ನ ಈ ಹಿಂದೆಯೂ ಬಹಳ ಸಲ ಹೇಳಿದೀನಿ. ನಾವು ಹಳ್ಳಿಯಿಂದ ಬಂದವರು. ನಿಮಗೆ ಈಗಾಗ್ಲೇ ನನ್ನ ಮನೆಜನರ ಪರಿಚಯವಾಗಿರಬೇಕು. ನಮ್ಮ ಕಡೆ ರೈಲ್ವೇ ಸ್ಟೇಷನ್ ಹತ್ರ ಆಗಾಗ ಜಾದೂ ಪ್ರದರ್ಶನ ನಡೀತಾ ಇರತ್ತೆ. ಜಾದೂಗಾರ ಜಾದೂ ತೋರಿಸ್ತಾನೆ, ಹೆಬ್ಬೆಟ್ಟಿನ ಮಂದಿ ಅದನ್ನ ನೋಡ್ತಾರೆ. ಯಾರು ಏನು ಬಯಸ್ತಾರೋ ಅದನ್ನ ಅವರವರ ಹೆಬ್ಬೆಟ್ಟು ಪೂರ್ತಿಗೊಳಿಸತ್ತೆ ಅಂತ ಜಾದೂಗಾರ ನಂಬಿಸ್ತಾನೆ. ಈ ದೇಶ ಆಳೋರ ಕಥೆಯೂ ಹೀಗೇನೇ. ಅವ್ರು ಹೇಳ್ತಿದ್ರು, ಕಪ್ಪು ಹಣ ಬರುತ್ತೆ ಅಂತ. “ಹರ ಹರ ಮೋದಿ!! ಬೆಲೆ ಏರಿಕೆ ಗಗನ ಮುಟ್ಟಿದೆ. ಎಷ್ಟೂಂತ ಸಹಿಸ್ತೀರಿ? ಈ ಸಲ ಮೋದಿಯನ್ನ ಆರಿಸಿ” “ಸಬ್ ಕಾ ಸಾಥ್ ಸಬ್ ಕ ವಿಕಾಸ್” ಅಂತೆಲ್ಲ. ಆ ಎಲ್ಲ ಆಶ್ವಾಸನೆಗಳನ್ನ ಜನ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಭಾರತೀಯರು ಬಹಳ ಬೇಗ ಮರೀತೇವೆ. ಆದ್ರೆ ಈ ಸಲದ ತಮಾಷೆ ಎಷ್ಟು ಜೋರಿತ್ತು ಅಂದ್ರೆ, ಅದನ್ನ ಮರೆಯೋದಕ್ಕೇ ಆಗ್ತಿಲ್ಲ. ಈ ಜುಮ್ಲಾಗಳನ್ನ ಜನ ಮರೆಯುವಂತೆ ಮಾಡೋಕೆ ಅವರು ಪ್ರಯತ್ನಿಸ್ತಿದ್ದಾರೆ. ಮೊದಲು ಸುಳ್ಳುಗಳನ್ನ ಸೃಷ್ಟಿಸೋದು. ಆಮೇಲೆ ಈ ದೇಶದಲ್ಲಿ ಯಾರೆಲ್ಲ ರಿಸರ್ಚ್ ಸ್ಕಾಲರುಗಳಿದ್ದಾರೋ ಅವರ ಫೆಲೋಷಿಪ್ ನಿಲ್ಲಿಸಿಬಿಡೋದು. ಜನ ಆಗ ಏನ್ಮಾಡ್ತಾರೆ? “ಫೆಲೋಷಿಪ್ ಕೊಟ್ಬಿಡಿ, ಫೆಲೋಷಿಪ್ ಕೊಟ್ಬಿಡಿ” ಅಂತ ಬೆನ್ನು ಬೀಳ್ತಾರೆ. ಇವ್ರು ಹೇಳ್ತಾರೆ, ಮೊದಲೇನು ಕೊಡ್ತಿದ್ವೋ ಐದರಿಂದ ಎಂಟು ಸಾವಿರ… ಅಷ್ಟನ್ನೇ ಮುಂದುವರೆಸ್ತೀವಿ ಅಂತ. ಇದರರ್ಥ, ಹೆಚ್ಚಿಸೋ ಮಾತಿಗೆ ಅವಕಾಶವೇ ಇಲ್ಲ ಅಂತ. ಈಗ ಯಾರು ಮಾತಾಡೋದು? ಜೆ ಎನ್ ಯು! 

ಆದ್ರಿಂದ ನಿಮಗೆ ಬೈಗುಳ ಬೀಳ್ತಾ ಇದ್ರೆ ಚಿಂತೆ ಮಾಡ್ಬೇಡಿ. ಏನನ್ನ ಗಳಿಸಿದೀವೋ ಅದನ್ನೇ ತಿನ್ತಾ ಇದ್ದೀವಿ ನಾವಿವತ್ತು. ಈ ದೇಶದಲ್ಲಿ ಜನವಿರೋಧಿ ಸರ್ಕಾರವಿದೆ. ಈ ಜನವಿರೋಧಿ ಸರ್ಕಾರ ಆದೇಶ ಕೊಟ್ರೆ ಸಾಕು, ಅದರ ಸೈಬರ್ ಸೆಲ್ ಏನ್ಮಾಡತ್ತೆ ಹೇಳಿ? ಅದು ಡಾಕ್ಟರ್ಡ್ ವಿಡಿಯೋ ತಯಾರಿಸುತ್ತೆ!! ನಿಮ್ಮ ಮೇಲೆ ಬೈಗುಳಗಳ ಮಳೆ ಸುರಿಸುತ್ತೆ. ಮತ್ತು ಅದು ನಿಮ್ಮ ಡಸ್ಟ್ ಬಿನ್ನಿನಲ್ಲಿ ಎಷ್ಟು ಕಾಂಡೋಮ್ ಇವೆ ಅಂತ ಗಣತಿಗೆ ಶುರುವಿಡತ್ತೆ!

ಈಗ ಸಮಯ ಬಹಳ ಗಂಭೀರವಾಗಿದೆ. ಈ ಗಂಭೀರ ಸಮಯದಲ್ಲಿ ನಾವು ಯೋಚಿಸಬೇಕಿರೋದು ಬಹಳ ಇದೆ. ಜೆ ಎನ್ ಯು ಮೇಲೆ ನಡೆಸಿದ ದಾಳಿ ಒಂದು ನಿಯೋಜಿತ ದಾಳಿಯಾಗಿತ್ತು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಅಕ್ಯುಪೈ ಯುಜಿಸಿ ಚಳವಳಿಯನ್ನ ಮುಂದುವರೆಸೋಕೆ ಬಯಸಿದ್ದರಿಂದಲೇ ಈ ದಾಳಿ ರೂಪುಗೊಳಿಸಲಾಗಿದೆ. ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸುವ ಹೋರಾಟವನ್ನ ಕೈಗೆತ್ತಿಕೊಂಡಿದ್ದೇವಲ್ಲ, ಈ ಹೋರಾಟವನ್ನ ಮುಗಿಸಿಬಿಡುವ ಉದ್ದೇಶದಿಂದ ಈ ದಾಳಿ ರೂಪಿಸಲಾಗಿದೆ.

ನೀವು ಜೆ ಎನ್ ಯು ಸಂಗತಿಯನ್ನು ಪ್ರೈಮ್ ಟೈಮಿಗೆ ತಂದಿರೋದೇ ಈ ಕಾರಣಕ್ಕೆ ಅಂತ ನಮಗೆ ಗೊತ್ತಿದೆ ಮಾನನೀಯ ಎಕ್ಸ್ ಆರೆಸ್ಸೆಸ್… ನೀವು ಈ ದೇಶದ ಜನರ ಮನಸಿನಿಂದ ಸಾಕಷ್ಟು ವಿಷಯಗಳನ್ನ ಅಳಿಸಿಹಾಕುವ ಹುನ್ನಾರದಲ್ಲಿದ್ದೀರಿ. ಈ ದೇಶದ ಪ್ರಧಾನಿ ಪ್ರತಿಯೊಬ್ಬರ ಖಾತೆಯಲ್ಲಿ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವ ಮಾತಾಡಿದ್ದರು. ಆದರೆ ಒಂದು ಮಾತು ಹೇಳೋಕೆ ಬಯಸ್ತೀನಿ. ಜೆ ಎನ್ ಯು ನಲ್ಲಿ ಪ್ರವೇಶ ಪಡೆಯೋದು ಸುಲಭದ ಮಾತಲ್ಲ. ಜೆ ಎನ್ ಯು ನಲ್ಲಿರುವವರ ಬಳಿ ಮಾತು ಮರೆಸೋದು ಕೂಡ ಸುಲಭವಲ್ಲ. ನೀವು ಬಯಸೋದಾದ್ರೆ ನಾವು ಮರೆತುಹೋಗ್ತೀವಿ. ಆದ್ರೆ ನಾವೂ ನಿಮಗೆ ಮತ್ತೆ ಮತ್ತೆ ನೆನಪಿಸೋಕೆ ಇಷ್ಟಪಡ್ತೀವಿ, ಯಾವಾಗೆಲ್ಲ ಈ ದೇಶದ ಆಡಳಿತ ಯಂತ್ರ ಅತ್ಯಾಚಾರ ನಡೆಸಿದೆಯೋ ಆಗೆಲ್ಲ ಜೆ ಎನ್ ಯು ನಿಂದ ಗಟ್ಟಿಯಾದ ದನಿ ಮೊಳಗಿದೆ. ಮತ್ತು ನಾವು ಈಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ, ಈ ಮಾತನ್ನು ನಾನು ಮತ್ತೆಮತ್ತೆ ಹೇಳಲು ಬಯಸ್ತೀನಿ. ನೀವು ನಮ್ಮ ಹೋರಾಟವನ್ನ ದುರ್ಬಲಗೊಳಿಸೋಕೆ ಸಾಧ್ಯವಿಲ್ಲ. 

ನೀವೇನು ಹೇಳ್ತೀರಿ? ಒಂದು ಕಡೆ ದೇಶದ ಯುವಕರು ಗಡಿಗಳಲ್ಲಿ ಕಾದಾಡಿ ಜೀವ ಕೊಡ್ತಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳನ್ನ ಸಲ್ಲಿಸ್ತೀನಿ. ನನ್ನದೊಂದು ಪ್ರಶ್ನೆಯಿದೆ. ನಾನು ಜೈಲಲ್ಲಿ ಒಂದು ಪಾಠ ಕಲಿತುಬಂದೆ. ವಿಚಾರಧಾರೆಯ ಸವಾಲುಗಳನ್ನು ಎತ್ತುವಾಗ ಸುಖಾಸುಮ್ಮನೆ ಯಾರೊಬ್ಬ ವ್ಯಕ್ತಿಗೂ ಪಬ್ಲಿಸಿಟಿ ಕೊಡಕೂಡದು ಅಂತ. ಆದ್ದರಿಂದ ನಾನು ಆ ಲೀಡರ್ ನ ಹೆಸರು ಹೇಳೋದಿಲ್ಲ. ಬಿಜೆಪಿಯ ಒಬ್ಬ ನೇತಾ ಲೋಕಸಭೆಯಲ್ಲಿ ಹೇಳಿದ್ರು ಈ ದೇಶದ ಗಡಿಗಳಲ್ಲಿ ಯುವಕರು ಸಾಯ್ತಿದ್ದಾರೆ ಅಂತ. ಅವರಿಗೆ ನಾನು ಕೇಳ್ತೀನಿ, ಅವರು ನಿಮ್ಮ ತಮ್ಮಂದಿರೇನು? ಈ ದೇಶದೊಳಗೆ ಕೋಟ್ಯಂತರ ರೈತರು ಸಂಕಟ ಪಡ್ತಿದ್ದಾರೆ. ನಮಗಾಗಿ ಅನ್ನ ಬೆಳೆಯುವವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಡಿಯಲ್ಲಿ ನಿಂತಿರುವ ಆ ಯುವಕರ ತಂದೆಯಂದಿರೂ ಅಂಥವರಲ್ಲಿ ಸೇರಿದ್ದಾರೆ. ಈ ಜನರ ಬಗ್ಗೆ ನೀವು ಏನು ಹೇಳ್ತೀರಿ? ಹೊಲದಲ್ಲಿ ದುಡಿಯುವ ರೈತ ನನ್ನಪ್ಪ. ನನ್ನ ಅಣ್ಣ ಸೇನೆಗೆ ಸೇರಿಕೊಳ್ತಾನೆ. ರೈತನಾದ ನನ್ನಪ್ಪನೂ ಸಾಯುತ್ತಾನೆ, ಗಡಿಯಲ್ಲಿ ನಿಂತ ಅಣ್ಣನೂ ಸಾಯ್ತಾನೆ. ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ನೀವು ಇದನ್ನೊಂದು ಸರಕಾಗಿಸ್ಕೊಂಡು ವಾಗ್ವಾದ ಶುರುಹಚ್ಚಬೇಡಿ. ನನ್ನ ಜನರು ದೇಶದ ಒಳಗೂ ಸಾಯ್ತಾರೆ. ನನ್ನ ಜನರು ದೇಶದ ಗಡಿಯಲ್ಲೂ ಸಾಯ್ತಾರೆ. ನನ್ನ ಪ್ರಶ್ನೆ ಇದೆ ನಿಮಗೆ, ಪಾರ್ಲಿಮೆಂಟಿನಲ್ಲಿ ನಿಂತು ಯಾರಿಗೋಸ್ಕರ ರಾಜಕೀಯ ಮಾಡ್ತಿದ್ದೀರಿ? ಅಲ್ಲಿ ಸಾಯ್ತಿರುವವರ ಜವಾಬ್ದಾರಿ ಯಾರು ಹೊರುತ್ತಾರೆ? ಸಾಯುವವರು ಜವಾಬ್ದಾರರಲ್ಲ, ಯುದ್ಧಕ್ಕೆ ಹಚ್ಚುವವರು ಜವಾಬ್ದಾರರು. ನನ್ನ ತಂದೆ, ನನ್ನ ಅಣ್ಣ ಇವರೆಲ್ಲ ಹೇಗೆ ಸಾಯ್ತಿದ್ದಾರೆ ನೋಡಿ. ಪ್ರೈಮ್ ಟೈಮಿನಲ್ಲಿ ಕೂತವರು ಎರಡು ಕಾಸಿನ ಸ್ಪೀಕರ್ ಮುಂದೆ ಕಿರುಚಾಡುತ್ತಾರಷ್ಟೆ. ಇವರಿಗೆ ನನ್ನ ಪ್ರಶ್ನೆಗಳಿವೆ.

ದೇಶದೊಳಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಮುಕ್ತಿ ಬಯಸೋದು ತಪ್ಪಾ? ಅವರು ಕೇಳ್ತಾರೆ, “ಯಾರಿಂದ ಆಜಾದಿ (ಸ್ವಾತಂತ್ರ್ಯ) ಕೇಳ್ತಿದ್ದೀಯ?” ಅಂತ. “ಭಾರತ ಯಾರನ್ನಾದ್ರೂ ಗುಲಾಮರನ್ನಾಗಿ ಮಾಡಿಟ್ಟುಕೊಂಡಿದೆಯೇನು? ಹೇಳು ನೋಡೋಣ?” ಇಲ್ಲ… ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಸರಿಯಾಗಿ ಕೇಳಿಸ್ಕೊಳ್ಳಿ, ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ… ಭಾರತದಲ್ಲಿ ಸ್ವಾತಂತ್ರ್ಯ ಕೇಳ್ತಿದ್ದೀವಿ. ಇಂದ ಮತ್ತು ಅಲ್ಲಿ – ಈ ಪ್ರತ್ಯಯಗಳಲ್ಲಿ ವ್ಯತ್ಯಾಸವಿದೆ. ಬ್ರಿಟೀಷರಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಈ ದೇಶದ ಜನರು ಅದನ್ನು ಹೋರಾಡಿ ಪಡೆದಿದ್ದಾರೆ.

ಈಗ ನಾನು ನನ್ನ ಅನುಭವ ಹೇಳ್ತೀನಿ ಕೇಳಿ. ಪೊಲೀಸರು ಕೇಳಿದ್ರು, “ನೀವು ಲಾಲ್ ಸಲಾಮ್, ಲಾಲ್ ಸಲಾಮ್ ಅಂತ ಕೂಗ್ತಿದ್ರಲ್ಲ ಯಾಕೆ?” ಅದೇನೂ ಔಪಚಾರಿಕ ವಿಚಾರಣೆಯಾಗಿರಲಿಲ್ಲ. ನನ್ನನ್ನ ಊಟ ತಿಂಡಿಗೆ, ಮೆಡಿಕಲ್ ಚೆಕಪ್ಪಿಗೆ ಕರೆದ್ಕೊಂಡು ಹೋಗುವಾಗ ಅವೆಲ್ಲ ಮಾತಾಡ್ತಿದ್ವಿ. ನನಗಂತೂ ಸುಮ್ಮನಿರೋಕೇ ಬರೋದಿಲ್ಲ. ನಾವು ಜೆ ಎನ್ ಯು ನವರು ಸುಮ್ಮನೆ ಇರಬಲ್ಲೆವಾದ್ರೂ ಹೇಗೆ!? ನಾನು ಅವರೊಂದಿಗೆ ಹರಟುತ್ತಿದ್ದೆ. ಮಾತುಮಾತಲ್ಲೆ ನನಗೆ ಗೊತ್ತಾಯ್ತು, ಆ ಮನುಷ್ಯನೂ ನನ್ನ ಥರದವರೇ ಅಂತ. ಪೊಲೀಸ್ ಇಲಾಖೆಯಲ್ಲಿ ಯಾರು ಕೆಲಸ ಮಾಡ್ತಾರೆ ಹೇಳಿ? ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳಿಂದ ಬಂದವರು – ಇಂಥವರೇ ಪೊಲೀಸ್ ನೌಕರಿಗೆ ಸೇರೋದು. ನಾನು ಕೂಡ ಈ ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಬಿಹಾರದಿಂದ ಬಂದವನು. ನಾನೂ ಬಡ, ರೈತ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲೂ ಬಡ ಪರಿವಾರದ ಜನರೇ ಹೆಚ್ಚು ಕೆಲಸ ಮಾಡೋದು. ನಾನು ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಇನ್ಸ್ಪೆಕ್ಟರ್ ವರೆಗಿನವರ ಬಗ್ಗೆ ಹೇಳ್ತಿದೀನಿ. ಐಪಿಎಸ್ ಮಾಡಿದ ಸಾಹೇಬರೊಂದಿಗೆ ನನಗೆ ಹೆಚ್ಚು ಮಾತುಕತೆಯಿಲ್ಲ. ಅಲ್ಲಿದ್ದ ಸಿಪಾಯಿಗಳೊಂದಿಗೆ ನಾನು ಮಾತಾಡಿದೆ. ನಾನು ಹೇಳೋಕೆ ಹೊರಟಿರೋದು ಆ ಮಾತುಕತೆಯ ತುಣುಕುಗಳನ್ನೇ. ಅವರು ಕೇಳಿದ್ರು, “ಈ ಲಾಲ್ ಸಲಾಮ್ ಲಾಲ್ ಸಲಾಮ್ ಏನು!?” ನಾನೇಳಿದೆ, “ಲಾಲ್ ಅಂದ್ರೆ ಕ್ರಾಂತಿ. ಸಲಾಮ್ ಅಂದ್ರೆ ಕ್ರಾಂತಿಗೊಂದು ಸಲಾಮು” ಅಂತ. ಅವರಿಗೆ ಅರ್ಥವಾಗ್ಲಿಲ್ಲ. “ನಿಮಗೆ ಇಂಕ್ವಿಲಾಬ್ ಜಿಂದಾಬಾದ್ ಗೊತ್ತಾ?” ಅಂತ ಕೇಳಿದೆ. ಅವರು ತಲೆಯಾಡಿಸ್ತಾ ಹೇಳಿದ್ರು, “ಕ್ರಾಂತಿಯನ್ನ ಉರ್ದುವಿನಲ್ಲಿ ಇಂಕ್ವಿಲಾಬ್ ಅಂತಾರೆ ಅಲ್ವ? ಈ ಸ್ಲೋಗನ್ ಎಬಿವಿಪಿಯವ್ರೂ ಹಿಡ್ಕೊಂಡಿರ್ತಾರೆ!” ನಾನು ಹೇಳಿದೆ, “ಅದು ನಕಲಿ ಇಂಕ್ವಿಲಾಬ್. ನಮ್ಮದು ಅಸಲಿ ಇಂಕ್ವಿಲಾಬ್!!”

ಅವ್ರು ಮತ್ತೂ ವಿಚಾರಿಸಿದ್ರು, “ಜೆ ಎನ್ ಯು ನಲ್ಲಿ ನಿಮಗೆ ಎಲ್ಲವೂ ಸಸ್ತಾದಲ್ಲಿ ಸಿಗ್ತವೆ ತಾನೆ?” ಅಂತ. ಅವರು ದಿನಕ್ಕೆ ಹದಿನೆಂಟು ಗಂಟೆ ಡ್ಯೂಟಿ ಮಾಡ್ತಿದ್ದನ್ನು ನಾನು ಗಮನಿಸಿದ್ದೆ. ಆದ್ರೂ ಓಟಿ ಪಡೆಯೋಕೆ ಪರದಾಡಬೇಕಿತ್ತು. ನಿಮಗ್ಯಾಕೆ ಸಸ್ತಾದಲ್ಲಿ ಯಾವುದೂ ಸಿಗೋದಿಲ್ಲ ಅಂತ ನಾನು ಕೇಳಿದೆ. ಆತ ಅಷ್ಟು ಕೆಲಸ ಮಾಡಿಯೂ ಬಡ್ತಿ ಬೇಕು ಅಂದ್ರೆ, ಸವಲತ್ತುಗಳು ಬೇಕು ಅಂದ್ರೆ ಭ್ರಷ್ಟಾಚಾರಕ್ಕೆ ಒಳಗಾಗಬೇಕಿತ್ತು. ನಾನು ಅದನ್ನೇ ಹೇಳಿದೆ. “ಈ ಕಾರಣಗಳಿಗಾಗಿಯೇ ನಾವು ಆಜಾದಿ ಬೇಕು ಅಂತ ಕೇಳ್ತಿರೋದು. ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ… ಇವುಗಳ ಬೇಡಿಕೆಯಿಂದಲೇ ಒಂದು ಆಂದೋಲನ ಶುರುವಾಗಿಬಿಡ್ತು. ನಿಮಗ್ಗೊತ್ತಾ, ದೆಹಲಿಯ ಬಹಳಷ್ಟು ಪೊಲೀಸರು ಹರ್ಯಾಣಾದಿಂದ ಬಂದವರಾಗಿರ್ತಾರೆ. ಅವ್ರು ತುಂಬಾ ಶ್ರಮಜೀವಿಗಳು. ಅವರು ಮಾತಾಡ್ತಾ ಹೇಳಿದ್ರು, “ಜಾತಿವಾದ ಬಹಳ ಕೆಟ್ಟದ್ದು”. ನಾನು ಹೇಳಿದೆ, “ನಾವು ಕೇಳ್ತಿರೋದು ಈ ಜಾತಿವಾದದಿಂದ ಆಜಾದಿ ಬೇಕು ಅಂತಲೇ!” ಅವರು ಹೇಳಿದ್ರು, ಇದೇನೂ ತಪ್ಪಲ್ವಲ್ಲ! ಇದು ದೇಶದ್ರೋಹ ಹೇಗಾಗತ್ತೆ? ನಾನು ಕೇಳಿದೆ, “ಹೇಳಿ ನೋಡೋಣ, ವ್ಯವಸ್ಥೆಯಲ್ಲಿ ಅತಿ ಹೆಚ್ಚು ಅಧಿಕಾರ ಇರೋದು ಯಾರಿಗೆ?” ಅವರು ಠೀವಿಯಿಂದ ಹೇಳಿದ್ರು “ನಮ್ಮ ದಂಡಕ್ಕೆ”. “ಸರಿಯೇ ಸರಿ. ನೀವು ಈ ದಂಡವನ್ನು ನಿಮ್ಮ ಇಚ್ಛೆಯಿಂದ ಚಲಾಯಿಸಬಲ್ಲಿರೇನು?” “ಇಲ್ಲ” “ಹಾಗಾದ್ರೆ ಅಧಿಕಾರವೆಲ್ಲ ಯಾರ ಬಳಿ ಹೋಯ್ತು?” “ಭರ್ಜಿ, ಟ್ವೀಟ್ ಗಳ ಮೂಲಕ ಸ್ಟೇಟ್ಮೆಂಟ್ ಕೊಡೋರ ಹತ್ತಿರ!!” “ ಈ ಭರ್ಜಿ ಇಟ್ಕೊಂಡು, ಟ್ವೀಟ್ ಮಾಡಿಕೊಂಡು ಇರೋ ಸಂಘಿಗಳಿಂದ ಆಜಾದಿ ಬೇಕಂತಲೇ ನಮ್ಮ ಹೋರಾಟ ಇರೋದು!” ಅವನಂದ, “ಹಾಗಾದ್ರೆ ನಾನೂ ನೀನೂ ಈಗ ಒಂದೇ ಕಡೆ ನಿಂತಿದ್ದೀವಿ ಅಂತಾಯ್ತು”.

ಇಲ್ಲೊಂದು ಅಡ್ಡಿ ಇದೆ. ನಾನು ಎಲ್ಲ ಮೀಡಿಯಾದವರಿಗೂ ಈ ಮಾತು ಹೇಳ್ತಿಲ್ಲ. ಎಲ್ಲರಿಗೂ ಅಲ್ಲಿಂದ ಕಪ್ಪ ಕಾಣಿಕೆ ಬರೋದಿಲ್ಲ. ಕೆಲವ್ರಿಗೆ ಮಾತ್ರ ಅದು ಬರೋದು. ಕೆಲವರು ಕುಳಿತಲ್ಲಿಯೆ ಕತೆ ಹೆಣೆದು ನನ್ನನ್ನು ಹೇಗೆ ಬಿಂಬಿಸಿದ್ರು ಅಂದ್ರೆ, ಆ ಸಿಪಾಯಿ ನನ್ನನ್ನು ಜೈಲಿಗೆ ಹಾಕಿದಾಗ ನನಗೆ ಸರಿಯಾಗಿ ಬಾರಿಸಬೇಕು ಅಂದ್ಕೊಂಡಿದ್ನಂತೆ. ಅದಕ್ಕಾಗೇ ನನ್ನ ಹೆಸರನ್ನ ಎಲ್ಲಕ್ಕಿಂತ ಮೇಲೆ ಬರೆದಿಟ್ಟುಕೊಂಡಿದ್ನಂತೆ. ನನ್ನ ಜೊತೆ ಮಾತುಕತೆಯಾಡಿದ ಮೇಲೆ ಅವನು ಹೇಳಿದ್ದನ್ನ ನಿಮಗೆ ಹೇಳ್ತೀನಿ ಕೇಳಿ. ಅವನೀಗ ಹಾಗೆಲ್ಲ ನನ್ನನ್ನು ಬಿಂಬಿಸಿದವನಿಗೆ ಒಂದು ಗತಿ ಕಾಣಿಸ್ಬೇಕು ಅಂತ ಯೋಚಿಸತೊಡಗಿದ್ದ. ಆ ಸಿಪಾಯಿ ನನ್ನ ಹಾಗೇ ಬಡ ಹಿಂದುಳಿದ ವರ್ಗದಿಂದ ಬಂದವನು. ಒಂದು ಕಾಲದಲ್ಲಿ ತಾನೂ ಉನ್ನತ ಶಿಕ್ಷಣ ಪಡೀಬೇಕು ಅನ್ನೋ ಆಸೆ ಇದ್ದವನು. ಆದರೆ ಹಣದ ಅಭಾವ ಅವನ ಆಸೆಯನ್ನ ಪೂರೈಸಲಿಲ್ಲ. ಅವನಲ್ಲಿ ಸಾಮರ್ಥ್ಯವಿತ್ತು ಆದರೆ ಅದನ್ನು ಪೂರೈಸಿಕೊಳ್ಳುವ ಹಣಬಲವಿರಲಿಲ್ಲ. ಈ ಜನ, ಇಂಥವರು ಉನ್ನತ ಶಿಕ್ಷಣ ಪಡೆಯೋದನ್ನ ತಡೀತಾರೆ. ಇವರಿಗೆ ನನ್ನ ಸಮುದಾಯದವರು, ಹಿಂದುಳಿದವರು ಪಿಎಚ್ಡಿ ಮಾಡೋದು ಬೇಕಿಲ್ಲ. ಯಾಕಂದ್ರೆ ನಮ್ಮ ಬಳಿ ವಿದ್ಯೆಯನ್ನ ಕೊಳ್ಳೋಕೆ ಹಣವಿರೋದಿಲ್ಲ. ಇಂಥವರಿಗಾಗಿ ಜೆ ಎನ್ ಯು ದನಿ ಎತ್ತಿದೆ, ಎತ್ತುತ್ತಲೇ ಇರುತ್ತೆ. ಅದು ರೈತನಿರಲಿ, ಕಾರ್ಮಿಕನಿರಲಿ ಜೆ ಎನ್ ಯು ಅವರಿಗಾಗಿ ಹೋರಾಡುತ್ತೆ.

ಬಾಬಾ ಸಾಹೇಬರು ಹೇಳಿದ್ದರು, ರಾಜನೈತಿಕ ಲೋಕತಂತ್ರದಿಂದಷ್ಟೆ ಕೆಲಸ ಆಗೋದಿಲ್ಲ, ನಾವು ಸಾಮಾಜಿಕ ಲೋಕತಂತ್ರವನ್ನ ಸ್ಥಾಪಿಸೋಣ ಅಂತ. ಆದ್ದರಿಂದಲೇ ನಾನು ಮತ್ತೆ ಮತ್ತೆ ಸಂವಿಧಾನದ ಮಾತಾಡೋದು. ‘ಡೆಮಾಕ್ರಸಿ ಇಸ್ ಇನ್ಡಿಸ್ಪೆನ್ಸಬಲ್ ಟು ಸೋಷಿಯಲಿಸಮ್’ ಅಂತಾನೆ ಲೆನಿನ್. ಆದ್ರಿಂದ್ಲೇ ನಾವು ಸಮಾಜವಾದದ ಮಾತಾಡ್ತೀವಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡ್ತೀವಿ. ಸಮಾನತೆಯ ಮಾತಾಡ್ತೀವಿ. ಒಬ್ಬ ಚಪ್ರಾಸಿಯ ಮಗ, ಒಬ್ಬ ರಾಷ್ಟ್ರಪತಿಯ ಮಗ – ಇಬ್ರೂ ಒಂದೇ ಸ್ಕೂಲಲ್ಲಿ ಜೊತೆಯಾಗಿ ವಿದ್ಯೆ ಪಡೆಯುವಂತಾಗಬೇಕು ಅನ್ನೋದು ನಮ್ಮ ಬಯಕೆ. ಅದಕ್ಕಾಗಿ ನಾವು ದನಿ ಎತ್ತುತ್ತೇವೆ. ಆದ್ರೆ ನೀವು, ನಮ್ಮ ಸದ್ದಡಗಿಸೋಕೆ ಯತ್ನಿಸ್ತಿದ್ದೀರಿ. ಆದರೆ ಎಂಥಾ ಪವಾಡ ನೋಡಿ! ವಿಜ್ಞಾನ ಹೇಳುತ್ತೆ, ನೀವು ಎಷ್ಟು ದಬಾಯಿಸಿ ತಳ್ತೀರೋ ಅಷ್ಟು ಹೆಚ್ಚಿನದಾಗಿ ಪುಟಿದೇಳುತ್ತೆ ಅಂತ. ವಿಜ್ಞಾನ ಓದೋದು ಒಂದು ಥರವಾದ್ರೆ, ವೈಜ್ಞಾನಿಕವಾಗಿರೋದು ಇನ್ನೊಂಥರ. ಎರಡೂ ಬೇರೆಬೇರೆ. ಯಾರು ವೈಜ್ಞಾನಿಕವಾಗಿ ಆಲೋಚಿಸಬಲ್ಲರೋ ಅವರಿಗೆ ಇವೆಲ್ಲ ಅರ್ಥವಾಗುತ್ತೆ. ಹಸಿವು ಮತ್ತು ಬಡತನಗಳಿಂದ ಆಜಾದಿ, ಭ್ರಷ್ಟಾಚಾರ ಮತ್ತು ಅತ್ಯಾಚಾರಗಳಿಂದ ಆಜಾದಿ ಹಾಗೂ ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅಧಿಕಾರಕ್ಕಾಗಿ ನಾವು ಆ ಆಜಾದಿಯನ್ನ ಪಡೆದೇ ತೀರುತ್ತೀವಿ. ಮತ್ತು ಅದನ್ನು ಇದೇ ಸಂವಿಧಾನದ ಅಡಿಯಲ್ಲಿ. ಇದೇ ಕಾನೂನಿನ ಅಡಿಯಲ್ಲಿ, ಇದೇ ನ್ಯಾಯ ಪ್ರಕ್ರಿಯೆಯ ಮೂಲಕ ಪಡೆದು ಈ ದೇಶಕ್ಕೆ ತೋರಿಸ್ತೀವಿ. ಇದು ನಮ್ಮ ದೃಢನಿಶ್ಚಯ. 

ಇದು ನಮ್ಮ ರೋಹಿತನ ಕನಸೂ ಆಗಿತ್ತು. 

ಒಬ್ಬ ರೋಹಿತನನ್ನು ಕೊಂದಿರಿ. ಹೋರಾಟದ ಉಸಿರುಗಟ್ಟಿಸಲು ನೋಡಿದಿರಿ. ಅದೇ ಹೋರಾಟ ಈಗ ಎಷ್ಟು ವಿಸ್ತಾರವಾಗಿ ಹರಡಿಕೊಂಡಿದೆ ನೋಡಿ. ನನ್ನ ಜೈಲುವಾಸದ ಅನುಭವದಿಂದ ಹೇಳ್ತೀನಿ ಕೇಳಿ. ಇದನ್ನ ಸ್ವವಿಮರ್ಶೆ ಅಂದ್ಕೊಳ್ಳಿ. ನಾವು ಜೆ ಎನ್ ಯು ನವರು ತಳಮಟ್ಟದ ಸಂಗತಿಗಳಿಗಾಗಿ ಹೋರಾಡ್ತೀವಿ ಅನ್ನೋದೇನೋ ನಿಜವೇ. ಆದರೆ ನಾವು ಬಳಸುವ ಭಾಷೆ ಭಾರವಾಗಿರುತ್ತದೆ. ಇದು ದೇಶದ ಜನಸಾಮಾನ್ಯರನ್ನ ತಲುಪೋದಿಲ್ಲ. ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ದೋಷವಲ್ಲ. ಅವರು ಸಜ್ಜನ, ಪ್ರಾಮಾಣಿಕ, ಬುದ್ಧಿವಂತ ಜನ. ಅವರ ಪರಿಕರಗಳ ಮೂಲಕವೇ ನಮ್ಮ ಮಾತುಗಳನ್ನ ಅವರಿಗೆ ತಲುಪಿಸಬೇಕಾಗುತ್ತೆ. ಅವರನ್ನು ಎಂಥವು ತಲುಪುತ್ತವೆ ಹೇಳಿ? “ಬೇಗ ಬೇಗ ಫಾರ್ವರ್ಡ್ ಮಾಡಿ, ಲೈನ್ ಉದ್ದವಾಗಿಬಿಡತ್ತೆ” ಅನ್ನುವಂಥ ಜಾಹೀರಾತುಗಳು. ಆನ್ ಲೈನ್ ಮಾರಾಟ ಮಾಡ್ತಾರೆ, ಓಎಲೆಕ್ಸ್ ಮೂಲಕ ಮಾರಾಟ ಮಾಡ್ತಾರೆ. ನಮ್ಮ ದೇಶದಲ್ಲಿ ಮಾರಾಟ ಮಾಡುವುದೊಂದು ವ್ಯಸನ ಶುರುವಾಗಿದೆ. ಅಂಥ ಜನರೊಂದಿಗೆ ನಮಗೆ ಸಂವಾದ ಸಾಧ್ಯವಾಗಬೇಕು.

ಜೈಲಿನಲ್ಲಿರುವಾಗ ನನಗೆ ಇನ್ನೊಂದು ಅನುಭವವಾಯ್ತು. ಅಲ್ಲಿ ಊಟದ ತಟ್ಟೆಯಲ್ಲಿ ಎರಡು ಕಟೋರಿಗಳನ್ನ ಇಡುತ್ತಿದ್ದರು. ಒಂದರ ಬಣ್ಣ ನೀಲಿ, ಒಂದರ ಬಣ್ಣ ಕೆಂಪು. ನನಗೆ ಅದೃಷ್ಟದ ಮೇಲೆ ನಂಬಿಕೆಯಿಲ್ಲ. ದೇವರ ವಿಷಯ ನನಗೆ ಗೊತ್ತಿಲ್ಲ. ಆದರೆ ಆ ತಟ್ಟೆ ಮತ್ತು ಬಟ್ಟಲುಗಳು ಈ ದೇಶದ ಒಳಿತನ್ನ ಸೂಚಿಸ್ತಿವೆಯೇನೋ ಅನಿಸುತ್ತಿತ್ತು. ನನಗೆ ತಟ್ಟೆ ಭಾರತದಂತೆಯೂ ನೀಲಿ ಬಟ್ಟಲು ಅಂಬೇಡ್ಕರ್ ಸೇನೆಯಂತೆಯೂ ಕೆಂಪು ಬಟ್ಟಲು ಕಮ್ಯುನಿಸ್ಟರಂತೆ ಕಂಡಿತು. ಈ ಎರಡು ಶಕ್ತಿಗಳು ಈ ದೇಶದಲ್ಲಿ ಒಗ್ಗೂಡಿಬಿಟ್ಟರೆ ಅದರ ಕಥೆಯೇ ಬೇರೆ. ನಮ್ಮ ದೇಶಕ್ಕೆ ಮಾರಾಟಮಾಡುವವರು ಬೇಡ. ಮಾರಾಟಗಾರರನ್ನ ಕಳಿಸಬಿಡೋಣ. ಕೊಡುಕೊಳ್ಳುವಿಕೆಯ ಸೌಹಾರ್ದವನ್ನ ಮೂಡಿಸೋಣ. ಅಂಥ ಸರಕಾರವನ್ನ ರಚಿಸೋಣ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವ ಮಾತನ್ನ ನಾವು ವಾಸ್ತವದಲ್ಲೂ ನಿಜಗೊಳಿಸೋಣ. ನನಗೆ ಬಲವಾಗಿ ಅನಿಸ್ತಿದೆ, ನಾವಿದನ್ನ ಸಾಧಿಸ್ತೀವಿ. ಖಂಡಿತಾ ಮಾಡಿಯೇಮಾಡ್ತೀವಿ.

ಬಹಳ ಕಾಲದ ನಂತರ ಜೆ ಎನ್ ಯು ವಿದ್ಯಾರ್ಥಿಯನ್ನ ಜೈಲಿಗೆ ಕಳಿಸಲಾಗಿದೆ. ಹೇಳಿಕೊಳ್ಳುವಂಥ ಅನುಭವಗಳು ಸಾಕಷ್ಟಿದೆ. ಆದರಣೀಯ ಮಾನನೀಯ ಪ್ರಧಾನ ಮಂತ್ರಿಯವರು… ಹಾಗೆಲ್ಲ ಹೇಳಲೇಬೇಕು ತಾನೆ? ನಮ್ಮ ಪ್ರಧಾನಮಂತ್ರಿಯವರು ದೊಡ್ಡ ದೊಡ್ಡ ಮಾತಾಡ್ತಿದ್ದರು. ಒಳ್ಳೆಯ ದಿನಗಳ ಬಗ್ಗೆ ಹೇಳ್ತಿದ್ದರು. ನನಗೆ ಹಾಗೇ ಟೀವಿಯೊಳಗೆ ನುಗ್ಗಿಬಿಡೋಣ ಅನ್ನಿಸ್ತಿತ್ತು. ಮತ್ತು ಅವರ ಸೂಟ್ ಹಿಡಿದೆಳೆದು ಕೇಳಬೇಕನ್ನಿಸ್ತು, “ಮೋದಿ ಜೀ, ಸ್ವಲ್ಪ ಹಿಟ್ಲರನ ಮಾತುಗಳನ್ನಾಡಿ ನೋಡೋಣ!” “ಹಿಟ್ಲರನದು ಬಿಡಿ, ಕರಿ ಟೊಪ್ಪಿ ತೊಡುತ್ತಿದ್ದ ಮುಸೋಲಿನಿಯದಾದರೂ ಮಾತುಗಳನ್ನಾಡಿ ನೋಡೋಣ!! ಅವರನ್ನ ನಿಮ್ಮ ಗುರೂಜಿ ಗೋಳವಾಲ್ಕರ್ ಭೇಟಿ ಮಾಡಲು ಹೋಗಿದ್ದರಲ್ವಾ? ಮತ್ತು ಭಾರತೀಯ ಪರಿಭಾಷೆಯನ್ನು ಜರ್ಮನರಿಂದ ಕಲಿಯಲು ಹೊರಟಿದ್ದರಲ್ವಾ?” ಅಂತೆಲ್ಲ. ಈ ಹಿಟ್ಲರನ ಮಾತು, ಮುಸೋಲಿನಿಯ ಮಾತು, ಪ್ರಧಾನಮಂತ್ರಿಯ ಮಾತು ಇವೆಲ್ಲ ಒಂದೇ ಥರ ಅನಿಸ್ತಿತ್ತು. ನೂರು ಸಲ ಸೂರ್ಯನನ್ನ ಚಂದ್ರ ಚಂದ್ರ ಅನ್ತಾ ಇದ್ದರೆ ಅದು ಚಂದ್ರವಾಗಿಬಿಡುತ್ತೇನು? 

ಇದನ್ನೂ ಓದಿ:


ಸಾವಿರ ಸಲ ಹೇಳಿದರೂ ಅದು ಸೂರ್ಯನಾಗೇ ಇರುತ್ತೆ. ನೀವು ಸುಳ್ಳನ್ನಷ್ಟೆ ಸುಳ್ಳಾಗಿರಿಸಬಲ್ಲಿರಿ ಹೊರತು ಸತ್ಯವನ್ನು ಸುಳ್ಳಾಗಿಸಲಾರಿರಿ. ನೀವು ಸಂಸತ್ತಿನ ಒಳಗೆ ಏನೆಲ್ಲ ಪ್ರಸ್ತಾಪಗಳನ್ನಿಡ್ತೀರಿ, ಜನರ ಮನಸ್ಸು ಅತ್ತ ತಿರುಗದಂತೆ ಮಾಡಲು ಸುಳ್ಳುಗಳನ್ನ ಹೇರುತ್ತೀರಿ. ಇಲ್ಲಿ ಅಕ್ಯುಪೈ ಯುಜಿಸಿ ಚಳವಳಿ ನಡೀತಿತ್ತು, ಅಲ್ಲಿ ರೋಹಿತನ ಹತ್ಯೆಯಾಯ್ತು. ರೋಹಿತನಿಗಾಗಿ ಜೆ ಎನ್ ಯು ದನಿ ಎತ್ತಿದರೆ, “ನೋಡಿ! ನೋಡಿ!! ಎಂಥಾ ದೇಶದ್ರೋಹ! ಜೆ ಎನ್ ಯು ರಾಷ್ಟ್ರದ್ರೋಹಿಗಳ ಅಡ್ಡೆಯಾಗ್ಬಿಟ್ಟಿದೆ” ಅಂತ ಕಥೆ ಕಟ್ಟಲಾಯ್ತು. ಇದು ಕೂಡ ಜಾಸ್ತಿ ದಿನ ನಡೆಯೋದಿಲ್ಲ. ಹೊಸ ತಯಾರಿ ಮಾಡ್ಕೊಳ್ಳಿ. ರಾಮಮಂದಿರ ಮಾಡಿ.

ಇವತ್ತಿನ ಕತೆ ಹೇಳ್ತೀನಿ. ಜೈಲಿಂದ ಹೊರಡೋ ಮುಂಚೆ ಒಬ್ಬ ಸಿಪಾಯಿ ಮಾತಿಗೆ ಸಿಕ್ಕ. “ಧರ್ಮವನ್ನ ನಂಬ್ತೀಯಾ?” ನಾನೇಳಿದೆ, “ನನಗೆ ಹಾಗೆಂದರೇನು ಅಂತಲೇ ಗೊತ್ತಿಲ್ಲ”. ಮೊದಲು ಹಾಗಂದರೇನು ಅಂತ ಗೊತ್ತಾದರೆ ತಾನೆ ನಂಬುವ ಕೆಲಸ? “ಯಾವುದಾದ್ರೂ ಪರಿವಾರದಲ್ಲಂತೂ ಹುಟ್ಟೀರ್ತೀಯ!?” “ಹೌದು. ಪವಾಡವೆಂಬಂತೆ ಹಿಂದೂ ಪರಿವಾರದಲ್ಲಿ ಹುಟ್ಟಿಕೊಂಡಿದ್ದೀನಿ”. “ಈ ಬ್ರಹ್ಮಾಂಡವನ್ನ ಭಗವಂತ ಸೃಷ್ಟಿ ಮಾಡಿದಾನೆ. ಸೃಷ್ಟಿಯ ಕಣಕಣದಲ್ಲೂ ಭಗವಂತ ಇದ್ದಾನೆ. ಈ ಮಾತಿಗೆ ನೀನೇನು ಹೆಳ್ತೀ?” “ಖಂಡಿತಾ. ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತ ಇರಬಹುದು. ಆದರೆ ಇಂಥಾ ಭಗವಂತನಿಗೂ ಒಂದು ಮಂದಿರ ಕಟ್ಟಿಸಿ ಇಡೋಕೆ ಕೆಲವರು ಪರದಾಡ್ತಿದ್ದಾರೆ. ಅಂಥವರ ಬಗ್ಗೆ ನೀನೇನು ಹೇಳ್ತೀ?” “ಬಹಳ ಕೆಟ್ಟ ಯೋಚನೆ ಇದು!” ಅವನಂದ. ಹೀಗೆ ಯೋಚಿಸುವ ಜನರನ್ನೂ ಅವರು ಪ್ರಚೋದಿಸ್ತಾರೆ. ಈ ದೇಶದೊಳಗೆ ಸದಾ ಪ್ರಕ್ಷುಬ್ಧತೆ ಇರಲೆಂದು ಅವರ ಬಯಸುತ್ತಾರೆ.

ನೀವಿವತ್ತು ಇಲ್ಲಿ ಕುಳಿತಿದ್ದೀರಲ್ಲ, ನಿಮಗನ್ನಿಸ್ತಿದೆ ತಾನೆ, ನಿಮ್ಮ ಮೇಲೆ ದೊಡ್ಡದೊಂದು ದಾಳಿ ನಡೆದಿದೆ ಅಂತ? ಆದರೆ ಈ ದಾಳಿ ಹೊಸತಲ್ಲ. ಇದು ಈಗಿನದ್ದೂ ಅಲ್ಲ. ನಿಮಗೆ ನೆನಪಿದೆಯಾ, ಆರೆಸ್ಸೆಸ್ಸಿನ ಮುಖವಾಣಿ ಆರ್ಗನೈಸರಿನಲ್ಲಿ ಜೆ ಎನ್ ಯು ಕುರಿತು ಕವರ್ ಸ್ಟೋರಿ ಮಾಡಲಾಗಿತ್ತು. ಸ್ವಾಮಿ ಜೆ ಎನ್ ಯು ಕುರಿತು ಸಾಕ್ಷ್ಯ ಹೇಳಿದ್ದರು. ಆದರೆ ನನಗೆ ಸಂವಿಧಾನದ ಮೇಲೆ ಭರವಸೆ ಇದೆ. ನನ್ನ ಎಬಿವಿಪಿ ಗೆಳೆಯರಿದ್ದರೆ ಕೇಳಿಸಿಕೊಳ್ಳಲಿ, ಒಂದು ಬಾರಿ ಆ ಸ್ವಾಮಿಯನ್ನು ಕರೆತರಲಿ. ಮುಖಾಮುಖಿಯಾಗಿ ಮಾತಿಗೆ ಕೂರಿಸಲಿ. ನಾವು ಸೋಲಿಸ್ತೀವಿ. ತಾರ್ಕಿಕವಾಗಿಯೇ ಸೋಲಿಸ್ತೀವಿ, ಕುತರ್ಕದಿಂದಲ್ಲ. ಹಾಗೇ ಅವರು ಕೂಡ ಜೆ ಎನ್ ಯುವನ್ನು ನಾಲ್ಕು ತಿಂಗಳ ಕಾಲ ಬಂದ್ ಮಾಡಬೇಕು ಅಂತ ತಾರ್ಕಿಕವಾಗಿಯೇ ಒಪ್ಪಿಸಲು ಸಫಲರಾದರೆ, ನಾನು ಅವರ ಪಾದಸೇವಕನಾಗ್ತೀನಿ. ಅವರಿಂದ ಸಾಧ್ಯವಾಗದೆ ಹೋದರೆ, ನಾನು ಅವರಲ್ಲಿ ಭಿನ್ನವಿಸಿಕೊಳ್ತೀನಿ, “ಮೊದಲು ಹೇಗೆ ನೀವು ಈ ದೇಶದಿಂದ ಹೊರಗಿರ್ತಿದ್ದರೋ ಈಗಲೂ ಹಾಗೇ ಹೊರಟುಹೋಗಿ” ಅಂತ.

ನಿಮಗೆ ಇನ್ನೊಂದು ಮಜದ ವಿಷಯ ಹೇಳಲಿಕ್ಕಿದೆ. ನೀವೆಲ್ಲ ಕ್ಯಾಂಪಸ್ಸಿನ ಒಳಗಿದ್ದುದರಿಂದ ನಿಮ್ಮ ಕಣ್ಣಿಗೆ ಬೀಳದೆ ಹೋಗಿರಬಹುದು. ಎಂಥಾ ಯೋಜನೆ ರೂಪಿಸ್ಕೊಂಡಿದ್ದರು… ಮೊದಲ ದಿನದಿಂದಲೂ ಪ್ರತಿಯೊಂದನ್ನೂ ಯೋಜಿತವಾಗಿಯೇ ನಡೆಸಿದ್ದರು. ಇಷ್ಟೆಲ್ಲ ತಲೆಕೆಡಿಸಿಕೊಂಡು ಪ್ಲಾನ್ ಮಾಡಬಾರದಿತ್ತು ಗೆಳೆಯರೇ! ಪೋಸ್ಟರ್ ಕೂಡ ಬದಲಿಸೊದಿಲ್ಲ ನೀವು! ಯಾವ ಸ್ಲೋಗನ್ ಇಟ್ಟುಕೊಂಡು, ಹ್ಯಾಂಡ್ ಬಿಲ್ ಇಟ್ಟುಕೊಂಡು ಹಿಂದೂಕ್ರಾಂತಿ ಸೇನೆ ಗಲಭೆ ನಡೆಸುತ್ತದೆಯೋ ಅದೇ ಸ್ಲೋಗನ್ ಇಟ್ಟುಕೊಂಡು ಎಬಿವಿಪಿ ಕೂಡ ಹೋರಾಡುತ್ತದೆ. ಅವೇ ಎಲ್ಲ ಪರಿಕರಗಳನ್ನು, ಘೋಷಣೆಗಳನ್ನು ಇಟ್ಟುಕೊಂಡು ಮಾಜಿ ಯೋಧರೊಂದಷ್ಟು ಜನ ಪ್ರತಿಭಟನೆಗೆ ಇಳಿಯುತ್ತಾರೆ. ಇದರರ್ಥ ಇವರೆಲ್ಲರ ಕಾರ್ಯಕ್ರಮಗಳನ್ನು ಒಮ್ಮೆಗೇ ನಾಗ್ಪುರದಲ್ಲಿ ಯೋಜಿಸಲಾಗಿರುತ್ತದೆ! ಅವರಾಡೋದೆಲ್ಲ ದೊಡ್ಡ ದೊಡ್ಡ ಮಾತುಗಳು. ಅಬ್ಬರದ ಮಾತುಗಳು. ಈ ದೇಶದ ಸಂಘರ್ಷವನ್ನ, ಪ್ರತಿಭಟನೆಯ ದನಿಯನ್ನ ಹೊಸಕಿಹಾಕುವಂಥ ಮಾತುಗಳು. ಈ ದೇಶದ ಜನರು ತಮ್ಮ ಜೀವನದ ಅಗತ್ಯಗಳಿಗಾಗಿ ಎತ್ತುವ ಪ್ರಶ್ನೆಗಳ, ನಡೆಸುವ ಚಿಂತನೆಗಳ ದಿಕ್ಕುತಪ್ಪಿಸುವ ಮಾತುಗಳು. ಅದೇ ಜೆ ಎನ್ ಯುನಲ್ಲಿಯೂ ದೊಡ್ಡ ದೊಡ್ಡ ಪ್ರಶ್ನೆಗಳಿವೆ. ನಾವು ಈ ಹೇರಲಾಗುವ ಭಾರದ ಮಾತುಗಳನ್ನ ಪ್ರಶ್ನಿಸ್ತೀವಿ. ನನ್ನ, ಉಮರನ, ಅನಿರ್ಬಾಣ್, ಆಶುತೋಶ್, ನಾಗ, ಶೆಹ್ಲಾ, ಯಾರೇ ಇರಲಿ ನಮ್ಮೆಲ್ಲರ ಗಂಟಲೊತ್ತುವ ಪ್ರಯತ್ನ ಅದೆಷ್ಟು ಮಾಡಿದರೂ ಅಷ್ಟೇ, ನಮ್ಮ ಸಂಘರ್ಷ ಮುಗಿಸಿಬಿಡಲು ಎಷ್ಟು ಹೆಣಗಾಡಿದರೂ ಅಷ್ಟೇ, ನಾವು ಹೋರಾಟದಿಂದ ಹಿಂದೆ ಸರಿಯೋದಿಲ್ಲ. ಸರಿಯಾಗಿ ಕೇಳಿಸಿಕೊಳ್ಳಿ, ನೀವೆಷ್ಟೋ ದಬ್ಬಿದರೂ ನಾವು ಮತ್ತೆಮತ್ತೆ ಎದ್ದುಬರುತ್ತೀವಿ. ನಮ್ಮ ಸಂಘರ್ಷವನ್ನು ನೀವು ಅದುಮಿಹಾಕಲು ಸಾಧ್ಯವಿಲ್ಲ. ನೀವೆಷ್ಟು ದಬ್ಬುತ್ತೀರೋ ನಾವು ಅಷ್ಟೇ ಪುಟಿದು ಬರುತ್ತೇವೆ. ಅಷ್ಟೇ ತೀವ್ರವಾಗಿ ಹೋರಾಟ ಮುಂದುವರೆಸುತ್ತೇವೆ.

ಇದನ್ನೂ ಓದಿ:

ಇದು ಸುದೀರ್ಘ ಕದನ. ಎಲ್ಲಿಯೂ ನಿಲ್ಲದೆ, ಯಾರಿಗೂ ಬಾಗದೆ, ಉಸಿರು ಬಿಗಿಹಿಡಿದು ನಾವು ಇದನ್ನು ಮುನ್ನಡೆಸಬೇಕು. ಮತ್ತು ಈ ಕ್ಯಾಂಪಸ್ ಒಳಗಿನ ವಿಧ್ವಂಸಕ ಚಿಂತನೆಯ ಎಬಿವಿಪಿ ಜನರು, ಕ್ಯಾಂಪಸ್ ಹೊರಗಿನ ಈ ದೇಶವನ್ನು ಬರಬಾದ್ ಮಾಡಲು ಹವಣಿಸ್ತಿರುವ ಭಾಜಪದ ಜನರು ಅದ್ಯಾರೇ ಇದ್ದರೂ ನಾವು ಅವರೆಲ್ಲರ ವಿರುದ್ಧ ಒಗ್ಗಟ್ಟಿನಿಂದ ಎದ್ದು ನಿಲ್ಲುತ್ತೇವೆ. ಜೆ ಎನ್ ಯು ಎದ್ದು ನಿಲ್ಲುತ್ತದೆ. ಜೆ ಎನ್ ಯು ಗಾಗಿ ಶುರುವಾದ ಈ ಹೋರಾಟ, ರೋಹಿತ್ ವೇಮುಲಾನ ಸಾವಿನ ನ್ಯಾಯಕ್ಕಾಗಿ ಶುರುವಾದ ಈ ಹೋರಾಟ, ನಿಮ್ಮೆಲ್ಲರ ಕಳಕಳಿಯಿಂದ ಶುರುವಾದ ಈ ಹೋರಾಟ, ಈ ದೇಶದ ಸೌಹಾರ್ದ ಜೀವಿಗಳು, ಪ್ರಗತಿಪರರು ಶುರುಮಾಡಿದ ಈ ಹೋರಾಟವೇನಿದೆ, ಈ ಹೋರಾಟವನ್ನು ನಾವು ನಡೆಸ್ತೀವಿ, ಗೆದ್ದೇಗೆಲ್ತೀವಿ. 
ಇದು ನಮ್ಮ ವಿಶ್ವಾಸ.

***

ಕನ್ಹಯ್ಯನ ‘ಆಜಾದಿ ಕಾ ನಾರಾ’
ಮನುವಾದದಿಂದ ಆಜಾದಿ
ಬ್ರಾಹ್ಮಣ್ಯವಾದದಿಂದ ಆಜಾದಿ
ಸಾಮ್ರಾಜ್ಯವಾದದಿಂದ ಆಜಾದಿ
ಅಸ್ಪೃಶ್ಯತೆಯಿಂದ ಆಜಾದಿ
ಜಾತಿಪದ್ಧತಿಯಿಂದ ಆಜಾದಿ
ಕೋಮುವಾದದಿಂದ ಆಜಾದಿ
ಭಯೋತ್ಪಾದನೆಯಿಂದ ಆಜಾದಿ
ಫ್ಯಾಸಿಸ್ಟ್ ವಾದದಿಂದ ಆಜಾದಿ
ಬಂಡವಾಳಶಾಹಿಯಿಂದ ಆಜಾದಿ
ಹಸಿವಿನಿಂದ ಆಜಾದಿ
ಅನಾರೋಗ್ಯದಿಂದ ಆಜಾದಿ
ಅನಕ್ಷರತೆಯಿಂದ ಆಜಾದಿ
ನಿರುದ್ಯೋಗದಿಂದ ಆಜಾದಿ
ಲಿಂಗ ಅಸಮಾನತೆಯಿಂದ ಆಜಾದಿ
ಶೋಷಣೆ-ವಂಚನೆ ಅನ್ಯಾಯಗಳಿಂದ ಆಜಾದಿ