ಗುರುವಾರ, ಫೆಬ್ರವರಿ 26, 2015

ಜಾಜಿ ಎಂಬ ಕಾಡು ಮಲ್ಲಿಗೆ

ಸೌಜನ್ಯ: ಪ್ರಜಾವಾಣಿ

-ರವೀಂದ್ರ ಭಟ್ಟ



ಕರ್ನಾಟಕದ ಆದಿವಾಸಿಗಳ ಆಶಾಕಿರಣದಂತೆ ಬದುಕಿದ ಜಾಜಿ ತಿಮ್ಮಯ್ಯ ತಮ್ಮ ಬದುಕಿನ ಪಯಣವನ್ನು ಮುಗಿಸಿದ್ದಾರೆ. ಹುಣಸೂರು ತಾಲ್ಲೂಕು ಹನಗೋಡು ಕಾಡಿನಲ್ಲಿಯೇ ಬದುಕಿದ್ದರೂ ಆದಿವಾಸಿಗರ ಬದುಕಿನಲ್ಲಿ ಕಿಚ್ಚು ಹಚ್ಚಿದ ಜಾಜಿ ಅವರ ಕನಸು ಇನ್ನೂ ನನಸಾಗಿಲ್ಲ. ಅವರು ಹಚ್ಚಿದ ಕಿಚ್ಚು ಇನ್ನೂ ಆರಿಲ್ಲ.
ಇಂದಿರಾ ಗಾಂಧಿ ಅವರಂತೆ ಜಾಜಿ ದೇಶವನ್ನು ಆಳಿದವರಲ್ಲ. ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಕಿರಣ್‌ ಬೇಡಿ ಅವರಂತೆ ಖಡಕ್‌ ಅಧಿಕಾರಿಯಲ್ಲ. ಮೇಧಾ ಪಾಟ್ಕರ್‌ ಅವರಂತೆ ದೇಶಮಟ್ಟದ ಹೋರಾಟಗಾರರಲ್ಲ. ಅವರು ಅಕ್ಷರ ಲೋಕದ ಗೊಂಬೆಯೂ ಅಲ್ಲ. ಅವರಿಗೆ ಅಕ್ಷರ ಹುಟ್ಟಿನಿಂದ ಬರಲೇ ಇಲ್ಲ. ಆದರೆ ಸಹಸ್ರಾರು ವರ್ಷಗಳಿಂದ ಕಾಡಿನ ಚಿಪ್ಪಿನೊಳಗೇ ಇದ್ದ ಆದಿವಾಸಿಗರ ನೋವಿನ ಪ್ರತಿನಿಧಿಯಾಗಿದ್ದರು ಅವರು. ಅಕ್ಷರ ಇಲ್ಲದಿದ್ದರೂ ಪ್ರಜ್ಞೆಯ ಸೆಲೆಯಲ್ಲಿಯೇ ಬೆಳೆದು ಬಂದ ಕಾಡಿನ ಮಗಳು ಅವರು. ಅಧಿಕಾರದ ಗದ್ದುಗೆಯನ್ನು ಏರಿದರೂ ಅಧಿಕಾರ ಚಲಾಯಿಸಲು ಹೆದರುವ ನಾಡಿನ ಹೆಣ್ಣು ಮಕ್ಕಳಂತೆ ಅಲ್ಲ ಅವರು. ಕಾಡಿನಿಂದ ಬಂದು ನಾಡಿನಲ್ಲಿ ಗರ್ಜಿಸಿದವರು.
ಜಾಜಿ ಅವರ ಬದುಕು ಸಂಪೂರ್ಣ ಹೋರಾಟಮಯ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಅವರು ರಾಜಕೀಯದಲ್ಲಿಯೂ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಗ್ರಾಮ ಪಂಚಾಯ್ತಿ ರಾಜಕಾರಣದಿಂದ ಆರಂಭಿಸಿ ಜಿಲ್ಲಾ ಪಂಚಾಯ್ತಿ ಮಟ್ಟದವರೆಗೆ ಬೆಳೆದವರು. ಮೈಸೂರು ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷೆಯಾಗಿ ತಮ್ಮನ್ನು ನಂಬಿದ ಕಾಡು ಮಂದಿಗೆ ನ್ಯಾಯ ಒದಗಿಸಿದವರು. ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದ ಮೊದಲ ಆದಿವಾಸಿ ಮಹಿಳೆ ಅವರು. ವಿಧಾನಸಭೆ ಚುನಾವಣೆಗೆ ನಿಂತು ಸೋತಿದ್ದರೂ ಹೋರಾಟದ ಹಾದಿಯನ್ನು ಬಿಟ್ಟವರಲ್ಲ.
ದೆಹಲಿಯಲ್ಲಿಯೂ ಚಳವಳಿಯನ್ನು ಮಾಡಿ ರಾಜಕಾರಣಿಗಳನ್ನು ನಡುಗಿಸಿದ ಜಾಜಿ ತಿಮ್ಮಯ್ಯ ತಮ್ಮ ಅಧಿಕಾರದಲ್ಲಿ ಯಾರೂ ತಲೆ ಹಾಕದಂತೆ ಮಾಡಿದ್ದರು. ಅವರು ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದಾಗ ತಮ್ಮ ಪತಿ ಆ ಕಡೆ ಬರದಂತೆ ನೋಡಿಕೊಂಡಿದ್ದರು. ಕಾಡಿನಲ್ಲಿದ್ದ ಜಾಜಿಯನ್ನು ಗುರುತಿಸಿ ಅವರಿಗೆ ಅಕ್ಷರ ಕಲಿಸಿ ಹೋರಾಟದ ಹಾದಿಯನ್ನು ತೋರಿದವರು ಹುಣಸೂರಿನ ಡೀಡ್‌ ಸಂಸ್ಥೆಯ ಶ್ರೀಕಾಂತ್‌, ಆದರೆ ಅಧಿಕಾರ ಬಂದಾಗ ಅವರನ್ನೂ ತಮ್ಮ ಹೆಸರಿನಲ್ಲಿ ಅಧಿಕಾರ ನಡೆಸಲು ಬಿಡಲಿಲ್ಲ.
ಆದಿವಾಸಿಗಳ ಅರಣ್ಯ ಹಕ್ಕು, ಭೂಮಿ ಹಕ್ಕು, ಬೆಟ್ಟದ ಕಾಡು, ನಾಗರಹೊಳೆಯಲ್ಲಿ ತಾಜ್‌ ಹೋಟೆಲ್‌ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಜಾಜಿ ತಿಮ್ಮಯ್ಯ ಕಾಡಿನಿಂದ ಹೊರಬಂದ ಆದಿವಾಸಿಗಳಿಗೆ ಭೂಮಿ ಕೊಡಿಸಲು ನಿರಂತರ ಹೋರಾಟ ನಡೆಸಿದ್ದರು. ‘ಕಾಡಿನಿಂದ ಹೊರಬಂದ ನಮಗೆ ಬದುಕಲು ಒಂದಿಷ್ಟು ಭೂಮಿ ಕೊಡಿ ಎಂಬ ಕೂಗು ಸರ್ಕಾರಕ್ಕೆ ಕೇಳುತ್ತಿರಲಿಲ್ಲ. ನಮ್ಮ ಭೂಮಿಯನ್ನು ಅಪಹರಿಸಿದವರಿಂದ ನಾವು ಭೂಮಿಯನ್ನು ಪಡೆದುಕೊಳ್ಳಬೇಕಾಗಿತ್ತು. ಈ ಭೂಮಿ ನಮ್ಮದೇ ಆಗಿತ್ತು. ನಾವು ಈ ಕಾಡನ್ನು ಸಾವಿರಾರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ನಾವು ಕಾಡಿನಲ್ಲಿ ಇದ್ದಾಗ ಕಾಡು ಸಮೃದ್ಧವಾಗಿತ್ತು. ನಾಡಿನ ಮಂದಿ ಕಾಡಿಗೆ ಬಂದ ಮೇಲೆ ಕಾಡು ಹಾಳಾಯಿತು. ನಮ್ಮನ್ನು ಬಲವಂತವಾಗಿ ಕಾಡಿನಿಂದ ಹೊರಕ್ಕೆ ಹಾಕಿದ ಮೇಲೆ ನಾವು ಭಿಕಾರಿಗಳಂತೆ ನಿಂತುಕೊಂಡಿದ್ದೇವೆ.
ನಮ್ಮ ಹಕ್ಕನ್ನು ನಾವು ಮತ್ತೆ ಪಡೆದುಕೊಳ್ಳಲೇ ಬೇಕು. ಅದಕ್ಕಾಗಿ ನಮಗೆ ಅಧಿಕಾರ ಬೇಕಾಗಿತ್ತು. ಅದಕ್ಕಾಗಿಯೇ ನಾನು ರಾಜಕೀಯಕ್ಕೆ ಬಂದೆ’ ಎಂದು ಹೇಳುತ್ತಿದ್ದ ಅವರು ನಿರಂತರವಾಗಿ ಅದರ ಬಗ್ಗೆ ಹೋರಾಟ ನಡೆಸುತ್ತಿದ್ದರು. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬರಲು ಜಾಜಿ ತಿಮ್ಮಯ್ಯ ಅವರ ಹೋರಾಟದ ಕೊಡುಗೆ ಬಹಳಷ್ಟು ಇದೆ.
ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿನಲ್ಲಿ ನಡೆದ ಅಖಿಲ ಭಾರತ ಆದಿವಾಸಿಗಳ ಸಮ್ಮೇಳನದಲ್ಲಿ ಭಾಗಿಯಾಗಿ ಜೇನು ಕುರುಬ ಸಮುದಾಯದ ಬಗ್ಗೆ ಭಾಷಣ ಮಾಡಿದ ಜಾಜಿ ಅಲ್ಲಿ ಆಗ ನಡೆಯುತ್ತಿದ್ದ ಅಯೋಡಿನ್‌ ಉಪ್ಪು ವಿರುದ್ಧದ ಚಳವಳಿಯಲ್ಲಿ ಭಾಗಿಯಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. 1999ರಲ್ಲಿ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ದೆಹಲಿಗೆ ಹೋಗಿದ್ದ ಅವರು ಮತ್ತೊಮ್ಮೆ ದೆಹಲಿಯಲ್ಲಿ ಮಿಂಚಿದ್ದರು.
ನಾಗರಹೊಳೆ ಕಾಡಿನಿಂದ ಆದಿವಾಸಿಗರನ್ನು ಶಾಶ್ವತವಾಗಿ ಹೊರ ಹಾಕಲು ಯತ್ನಿಸಿದ ಸರ್ಕಾರದ ವಿರುದ್ಧ ನಡೆಸಿದ ಹೋರಾಟ ಹಾಗೂ ನಾಗರಹೊಳೆಯ ಮೂರ್ಕಲ್‌ನಲ್ಲಿ ತಾಜ್‌ ಹೊಟೇಲ್‌ ನಿರ್ಮಾಣದ ವಿರುದ್ಧ ಜಾಜಿ ನಡೆಸಿದ ಹೋರಾಟ ಅವರ ಬದುಕಿನ ಅತ್ಯಂತ ಮಹತ್ವದ ಕ್ಷಣಗಳಾಗಿದ್ದವು. ‘ನಮ್ಮನ್ನು ಕಾಡಿನಿಂದ ಹೊರಕ್ಕೆ ಅಟ್ಟಿ, ಹಣ ಇದ್ದವರ ಮೋಜು ಮೇಜುವಾನಿಗೆ ಹೊಟೇಲ್‌ ನಿರ್ಮಾಣ ಮಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಕರೆ ಕೊಟ್ಟ ಅವರು ನಿರಂತರವಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿದ್ದೇ ಅಲ್ಲದೆ ಸುಪ್ರೀಂಕೋರ್ಟ್‌ವರೆಗೂ ಹೋಗಿ ತಾಜ್‌ ಹೋಟೆಲ್ ಬರುವುದನ್ನು ತಡೆದರು.
ತಾಜ್‌ ಹೋಟೆಲ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆಗ ಅರಣ್ಯ ಸಚಿವರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಹೋರಾಟಗಾರರೊಂದಿಗೆ ಸಂಧಾನಕ್ಕೆ ಬಂದಾಗ ‘ಪ್ರವಾಸೋದ್ಯಮದ ದೃಷ್ಟಿಯಿಂದ ತಾಜ್‌ನವರಿಗೆ ಹೋಟೆಲ್ ಮಾಡಲು ಜಾಗ ಕೊಟ್ಟಿದ್ದೇವೆ. ಅದರಿಂದ ಹಣ ಬರುತ್ತದೆ. ಅದನ್ನು ಆದಿವಾಸಿಗಳ ಪುನರ್‌ವಸತಿಗೇ ಬಳಸುತ್ತೇವೆ’ ಎಂದು ಹೇಳಿದರು. ಇದನ್ನು ಕೇಳಿ ಸಿಡಿದೆದ್ದ ಜಾಜಿ ‘ಕಾಡು ನಿಮ್ಮಪ್ಪನ ಆಸ್ತಿಯಲ್ಲ. ಅದು ನಮ್ಮಪ್ಪನ ಆಸ್ತಿ. ನಾವು ಇಲ್ಲಿನ ಮೂಲ ನಿವಾಸಿಗಳು. ನಮ್ಮನ್ನು ಹೊರಕ್ಕೆ ಹಾಕಿ ಅತಂತ್ರರನ್ನಾಗಿ ಮಾಡಿ ತಾಜ್‌ನವರಿಗೆ ಕಾಡು ಕೊಡಲು ಬಿಡಲ್ಲ. ಇಷ್ಟೆಲ್ಲಾ ಮಾತನಾಡುತ್ತೀರಲ್ಲ. ದೇಶ ಸೇವೆ ಮಾಡುವ ನೀವು ನಿಮ್ಮ ಆಸ್ತಿಯನ್ನು ದೇಶಕ್ಕಾಗಿ ಎಷ್ಟು ಬಿಟ್ಟುಕೊಟ್ಟಿದ್ದೀರಿ’ ಎಂದು ಸಚಿವರ ಬೆವರು ಇಳಿಸಿದರು. ಸಂಧಾನ ವಿಫಲವಾಯಿತು. ಹೋರಾಟ ಮುಂದುವರಿಯಿತು. ತಾಜ್‌ ಕಂಬಿ ಕಿತ್ತಿತು.
‘ಆ ಶಿವ ಕೊಟ್ಟಿದ್ದು ನಂಗ ಕಾಡು. ಸರ್ಕಾರ ಕಾಡಿಗೂ ಬೀಜ ನೆಟ್ಟಿಲ್ಲೆ’ ಎಂದು ಕೂಗುತ್ತಿದ್ದ ಜಾಜಿ ತಮ್ಮ ಬದುಕಿನ ಬಹುತೇಕ ಸಮಯವನ್ನು ಕಾಡಿನಲ್ಲಿಯೇ ಕಳೆದವರು. ‘ನಾಡು ನಮ್ಮನ್ನು ಬಾ ಎಂದು ಆತ್ಮೀಯವಾಗಿ ಕರೆಯಬೇಕಿತ್ತು. ಆದರೆ ನಾಡು ನಮ್ಮನ್ನು ಕಾಡಿನಿಂದ ಬಲವಂತವಾಗಿ ದಬ್ಬಿತು. ನೀರಿನಿಂದ ಹೊರ ಬಂದ ಮೀನಿನಂತಾದ ನಾವು ಇನ್ನೂ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.
‘ಕಾಡಿನಲ್ಲಾದರೆ ನಮಗೆ ಯಾವ ಪ್ರಾಣಿ ಯಾವಾಗ ಹಾಯುತ್ತದೆ. ಯಾವಾಗ ಒದೆಯುತ್ತದೆ ಎನ್ನುವುದು ಗೊತ್ತಿರುತ್ತದೆ. ಆದರೆ ನಾಡಿನ ಪ್ರಾಣಿಯ ಚಲನವಲನ ಗೊತ್ತೇ ಆಗುವುದಿಲ್ಲ’ ಎಂದು ಹೇಳುತ್ತಿದ್ದ ಜಾಜಿ ಅವರಿಗೆ ಕಡೆಗೂ ನಾಡಿನ ಪ್ರಾಣಿಯ ಚಲನೆ ಅರ್ಥವಾಗಲೇ ಇಲ್ಲ.

ಗುರುವಾರ, ಫೆಬ್ರವರಿ 12, 2015

ಎಂ ಡಿ ನಂಜುಂಡಸ್ವಾಮಿ ಅವರ ಜತೆ ರಹಮತ್ ತರೀಕೆರೆ ಸಂದರ್ಶನ

ಸಂದರ್ಶನ: ರಹಮತ್ ತರೀಕೆರೆ

ಎಂ ಡಿ ನಂಜುಂಡಸ್ವಾಮಿ ಅವರ ಜತೆ

ನೀವು ದೊಡ್ಡ ಫ್ಯೂಡಲ್ ಕುಟುಂಬದಿಂದ ಬಂದವರು ಅಂತ ಕೇಳಿದ್ದೇನೆ.

 ನಮ್ಮ ತಂದೆಯವರು ಮಹಾಂತದೇವರು ಅಂತ, ಮೊದಲನೇ ಪೀಳಿಗೆ ವಕೀಲರು. ೨೬ ವರ್ಷ ಶಾಸಕರಾಗಿದ್ದರು ಮೈಸೂರು ಜಿಲ್ಲೆಯಲ್ಲಿ. ಮತ್ತೆ ’ಫ್ಯೂಡಲ್’ ಅಂತ ಶಬ್ದ ಉಪಯೋಗಿಸಿದಿರಲ್ಲ, ಅದು ಕೇವಲ ಆಸ್ತಿಗೆ ಸಂಬಂಧಪಟ್ಟಂತೆ ಅನ್ವಯಿಸುತ್ತೆ. ನಮ್ಮ ತಾತನಿಗೆ ಸಾವಿರ ಎಕರೆ ಮೇಲಿತ್ತು ಭೂಮಿ. ಆ ಕಾರಣ ನಾನು ಹುಟ್ತಾನೇ ಒಬ್ಬ ಶಾಸಕನ ಮಗ ಮತ್ತು ಫ್ಯೂಡಲ್ ಲಾರ್ಡನ ಮೊಮ್ಮಗ(ನಗು). ಆಸ್ತಿ ದೃಷ್ಟಿಯಿಂದ ಫ್ಯೂಡಲ್ ಅಂತ ಕರೀಬಹುದೇ ಹೊರತು, ತಾತನ ವಿಚಾರಗಳು ತಂದೆಯ ವಿಚಾರಗಳು ಈ ಆಧಾರದ ಮೇಲೆ ಫ್ಯೂಡಲ್ ಅಂತ ಕರೆಯಕ್ಕೆ ಸಾಧ್ಯಾನೇ ಇಲ್ಲ. ಕಾರಣ, ನಮ್ಮ ಆ ಭಾಗದ ಜನ ಮೂಲತಃ ಉತ್ತರ ಕರ್ನಾಟಕದಿಂದ ಬಂದವರು. ಕಲ್ಯಾಣಕ್ರಾಂತಿ ಆದನಂತರ ಅಲ್ಲಿ ಗೊಂದಲಗಳಿದ್ದಾಗ ಬಂದವರು ಅಂತ ದಾಖಲೆಗಳಿವೆ. ಬಂದು ಗ್ರಾಮಸ್ಥಾಪನೆ ಮಾಡಿದರು. ಮಾಡರಹಳ್ಳಿ ಅಂತ, ಟಿ. ನರಸೀಪುರ ತಾಲ್ಲೂಕಲ್ಲಿ. ಅದೆಲ್ಲ ಕಪುಮಣ್ಣಿನ ಪ್ರದೇಶ. ಅಲ್ಲೇ ಬಂದು ಗ್ರಾಮಸ್ಥಾಪನೆ ಮಾಡೋಕೆ ಕಾರಣ, ಅವರ ವ್ಯವಸಾಯದ ಅಭ್ಯಾಸಗಳು, ಬೆಳೆ ಪದ್ಧತಿ. ಅವರು ಯಾವ ಮಣ್ಣಿಗೆ ಹೋಗಿದ್ರು ಅವೆಲ್ಲಾನೂ ಸಂಬಂಧ ಉಂಟು. ಉತ್ತರ ಕರ್ನಾಟಕದಲ್ಲಿನ ಬೆಳೆಗಳನ್ನ ನಮ್ಮ ಗ್ರಾಮದಲ್ಲಿ ನೀರಾವರಿ ಆಗಕೂ ಮುಂಚೆ ನಾನೆ ನೋಡಿದೀನಿ. ಅದೇ ಬಿಳಿಜೋಳ, ಕಡ್ಲೆ, ಕುಸುಬಿ, ದನಿಯಾ, ಹತ್ತಿ, ಕಬ್ಬು- ಕಪುಮಣ್ಣಲ್ಲಿ ಏನೇನು ಬೆಳೀತಾರೆ, ಅವನ್ನೆಲ್ಲ ಬೆಳೀತಾಯಿದ್ರು. ನಮ್ಮ ತಾತ ಕಟ್ಟಿದ ಮನೇನೆ ಸುಮಾರು ೨೦೦ ವರ್ಷದ್ದು ಇದೆ ಹಳ್ಳೀಲಿ. ಅದಕ್ಕಿಂತ ಎಷ್ಟು ವರ್ಷ ಹಿಂದೆ ಬಂದವರೋ ಗೊತ್ತಿಲ್ಲ. ಆ ಕಾರಣ ಭೂಮಿ ಯಾರಿಗೆ ಬೇಕಾದರೂ ಲಭ್ಯ ಇತ್ತು. ಆಗ ಭೂಮಿ ಕಷ್ಟದ ಆಸ್ತಿ ಆಗಿರಲಿಲ್ಲ. ಇದು ಒಂದು ದೃಷ್ಟಿಯಿಂದ ಫ್ಯೂಡಲ್ ಅಂತ ಕಾಣಿಸಬಹುದು. ಅಷ್ಟೇ ಹೊರತು, ಅವರು ಯಾವ ರೀತಿ ಜೀವನ ನಡೆಸಿದರು, ಏನು ವಿಚಾರ ಇಟ್ಟುಕೊಂಡಿದ್ರು, ಇದನ್ನೆಲ್ಲ ನೋಡಿದರೆ ಇನ್ನೂ ಶರಣ ಚಳುವಳಿಯ ಅಂಶಗಳು ಅವರಲ್ಲಿದ್ದವು ಅಂತ ಅನಿಸುತ್ತೆ.

ಶರಣ ಚಳುವಳಿಯ ಅಂಶಗಳು ಅಂದರೆ?

ಅಂದರೆ, ಹಳ್ಳಿ ಒಳಗಿನ ಸಂಬಂಧಗಳು, ಮತ್ತೆ ಜಾತಿ ಪದ್ಧತಿ ಬಗ್ಗೆ ಇದ್ದಂತಹ ಅವರ ಧೋರಣೆಗಳು, ಮತ್ತೆ ಈ ವ್ಯವಸ್ಥೆ ಬಗ್ಗೆ ಇದ್ದಂತಹ ಸಿಟ್ಟುಗಳು, ಹಳ್ಳೀ ಒಳಗೇನೆ ನಡೆಯೋವಂಥ ಕುತಂತ್ರಗಳನ್ನ ನಾಶ ಮಾಡೋವಂಥ ಘಟನೆಗಳು ಇವೆಲ್ಲಾನು.

ಇವೆಲ್ಲ ನೈತಿಕ ಉದಾರವಾದಿ ಗುಣಗಳೊ ಅಥವಾ ಚಳುವಳಿಯಿಂದ ಬಂದಂತಹವಾಗಿದ್ದವೋ?

ಒಂದು ಚಳುವಳಿಯ ಭಾಗವಾದ ಮೇಲೆ, ವ್ಯಕ್ತಿಯ ಗುಣಗಳು ಚಳುವಳಿಗೆ ವರ್ಗಾವಣೆಯಾಗೋದು, ಚಳುವಳಿಯ ಗುಣಗಳು ವ್ಯಕ್ತಿಗೆ ವರ್ಗಾವಣೆಯಾಗೋದು ನಿರಂತರವಾಗಿ ನಡೀತಾ ಇರ್ತದೆ. ಅದರ ಆಧಾರದ ಮೇಲೆ ಚಳುವಳಿ ಯಶಸ್ಸುಗಳಿಸೋದು ಅಥವಾ ಸೋಲೋದು ಅವಲಂಬಿತವಾಗಿರುತ್ತೆ. ಆ ಕಾರಣಾನೇ ಒಂದು ಚಾರಿತ್ರ್ಯದ ದೃಢತೆ ಚಳುವಳಿಯಲ್ಲಿರೋ ವ್ಯಕ್ತಿಗಳಲ್ಲೂ ಇರೋದು ಬಹಳ ಮುಖ್ಯ. ಅದನ್ನು ಕಳಕೊಂಡಂಥವರ ಸಂಖ್ಯೆ ಹೆಚ್ಚಾದಾಗ ಆ ಚಳುವಳಿ ನಾಶವಾಗಿ ಹೋಗುತ್ತೆ.

ತಂದೆಯವರು ಶಾಸಕರಾಗಿದ್ದರು ಅಂದಿರಿ. ಯಾವ ಪಕ್ಷವನ್ನು ಪ್ರತಿನಿದಿsಸ್ತಿದ್ರು?

ಸ್ವಾತಂತ್ರ್ಯ ಬರೋಕು ಮುಂಚೆ ಜಸ್ಟೀಸ್ ಪಾರ್ಟಿ ಅಂತ ಒಂದು ರಚನೆ ಆಗಿತ್ತು ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲಿ. ಈ ನಾನ್ ಬ್ರಾಹ್ಮಿನ್ ಮೂಮೆಂಟ್  ತಮಿಳುನಾಡಲ್ಲೂ ಬಹಳ ಶಕ್ತಿಯುತವಾಗಿ ಸಂಘಟನೆ ಆಗಿತ್ತು. ಸರಕಾರವನ್ನು ರಚನೆ ಮಾಡಿತ್ತು. ಅದೇ ಒಂದು ಚಳುವಳಿ ಕರ್ನಾಟಕದಲ್ಲಿ ಇತ್ತು. ಹಳೇ ಮೈಸೂರಿನಲ್ಲೂ  ಮಹಾರಾಜರ ಕಾಲದಲ್ಲಿನಡೀತಾಇತ್ತು. ಆ ಕಾರಣಾನೇ ಸರೆಂವಿಶ್ವೇಶ್ವರಯ್ಯನವರ ಕಾಲದಲ್ಲಿ ಮೊದಲನೇ ಬಾರಿಗೆ ಮೀಸಲಾತಿ ಜಾರಿಗೆ ತಂದಾಗ, ನಮ್ಮ ತಂದೆಯವರು ಆ ಚಳವಳಿಯ ಭಾಗವಾಗಿದ್ದರು.

ಮಾಡರಹಳ್ಳಿಯ ಯಾವ ನೆನಪುಗಳು ನಿಮಗೆ ಇವೆ?

ಇಲ್ಲ, ನಾನು ಹುಟ್ಟಿದ್ದೇ ಮೈಸೂರು ಸಿಟಿನಲ್ಲಿ. ಅಷ್ಟೊತ್ತಿಗಾಗಲೇ ತಂದೆಯವರು ವಕೀಲರಾಗಿದ್ದರು. ಶಾಸಕರಾಗಿದ್ದರು. ಮೈಸೂರಲ್ಲಿ ವಾಸ ಮಾಡ್ತಾ ಇದ್ದೆವು. ರಜಾ ಬಂದಾಗಲೆಲ್ಲಾ ನಮ್ಮ ತಂದೆ ಹಳ್ಳಿಗೆ ಕರಕೊಂಡು ಹೋಗೋರು. ಜಮೀನೆಲ್ಲಾ ಸುತ್ತಾಡಾದು ಮಾಡ್ತಾ ಇದ್ದೆವು. ಅಷ್ಟೆ ಸಂಪರ್ಕ.

ನೀವು ಕಾನೂನುಶಾಸ್ತ್ರ ಓದಿದೀರಿ, ತಂದೆಯವರ ಒತ್ತಡದಿಂದಲಾ?

ನಾನು ಮೂಲತಃ ವಿeನದ ವಿದ್ಯಾರ್ಥಿ. ಅದರಲ್ಲೂ ನ್ಯಾಚುರಲ್ ಸೈನ್ಸಸ್ ಏನು ಕರೀತಾರೆ ಅದರ ವಿದ್ಯಾರ್ಥಿ. ನನ್ನ ಮೊದಲನೇ ಡಿಗ್ರಿ ವಿeನಾನೆ. ಆನಂತರ ತಂದೆಯವರ ಆಸೆಗೆ ಸ್ವಲ್ಪ ತಲೆಬಾಗಿ ಲಾ ಓದೋದಕ್ಕೆ ಶುರುಮಾಡಿದ್ದು.

ಕಾಲೇಜಲ್ಲಿ ನಿಮ್ಮ ಗುರುಗಳು ಯಾರು?

ಅಂಥ ಹೇಳಿಕೊಳ್ಳೋವಂಥ ಪ್ರಿಯವಾದ ಗುರುಗಳು ದುರದೃಷ್ಟವಶಾತ್ ನಮಗೆ ಯಾರೂ ಸಿಗಲಿಲ್ಲ. ಅವರೆಲ್ಲ ಪಕ್ಕದ ಮಹಾರಾಜ ಕಾಲೇಜಲ್ಲಿ ಇದ್ದರು. ಕುವೆಂಪು ಆವಾಗ ಅಸಿಸ್ಟೆಂಟ್ ಪ್ರೊಫೆಸರ್ ಅಲ್ಲಿ. ಆಗಲೇ ದೊಡ್ಡ ಹೆಸರು ಪಡೆದಿದ್ದರು. ಮತ್ತೆ ಅವರ ಸಭೆಗಳಿಗೆ ತಪ್ಪದೇನೇ ಹಾಜರಾಗುತ್ತಿದ್ದೆ.

೧೦೬೦ರ ದಶಕದ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದ ಚಟುವಟಿಕೆಗಳಲ್ಲಿ, ನಿಮ್ಮ ಹೆಸರ ಜತೆ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅಡಿಗರು ಕಡಿದಾಳು ಶಾಮಣ್ಣ ಹೀಗೆ ಅನೇಕ ಹೆಸರುಗಳು ಪ್ರಸ್ತಾಪವಾಗುತ್ತವೆ. ತೇಜಸ್ವಿಯವರ ಜತೆ ನಿಮ್ಮ ಒಡನಾಟ ಬಹಳ ಹೆಚ್ಚು. ಇಬ್ಬರೂ ರೈತರ ಬಗ್ಗೆ ಚಿಂತೆ ಮಾಡಿಕೊಂಡು ಬಂದೋರು. ನೀವು ರೈತಾಪಿ ಚಿಂತನೆಗೆ ಹೊರಳಲು ಏನು ಕಾರಣ?

 ನನಗೂ ತೇಜಸ್ವಿಗೂ ಪರಿಚಯ ಸುಮಾರು ೧೯೬೦ನೇ ಇಸ್ವಿಯಿಂದ. ಅಷ್ಟೊತ್ತಿಗಾಗಲೇ ನಾನು ಎಲ್‌ಎಲ್‌ಎಂ ಮುಗಿಸಿದ್ದೆ, ಕರ್ನಾಟಕ ಯೂನಿವರ್ಸಿಟಿಯಿಂದ. ಮುಗಿಸಿ ಜರ್ಮನಿ ಹೋಗಿಬಿಟ್ಟೆ ೪ ವರ್ಷ. ಅಲ್ಲಿಂದ ವಾಪಸು ಬರೋವಾಗಲೇನೆ ರೈತ ಸಂಘಟನೆ ಮಾಡಬೇಕು ವ್ಯವಸಾಯನೇ ಮಾಡಬೇಕು ಅಂತಲೇ ತೀರ್ಮಾನ ಮಾಡಿಕೊಂಡು ಬಂದಿದ್ದು. ಅಷ್ಟರಲ್ಲಿ ತೇಜಸ್ವಿಯವರು ವ್ಯವಸಾಯ ಶುರು ಮಾಡಿದ್ದರು. ಮತ್ತೆ ಸುಂದರೇಶ್, ನಮ್ಮ ರೈತಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರಲ್ಲ ಅವರೂ ವ್ಯವಸಾಯ ಶುರುಮಾಡಿದ್ದರು. ೧೬೫ರಲ್ಲಿ ನಾನೂ ವ್ಯವಸಾಯ ಶುರುಮಾಡಿದೆ.

ನೀವು ಮೂಲತಃ ಕಾನೂನಿನ ವಿದ್ಯಾರ್ಥಿ. ರೈತಪರ ಚಿಂತನೆಗೆ ಜರ್ಮನಿಯಲ್ಲಿ ಹೇಗೆ ಪ್ರೇರಣೆ ಸಿಕ್ತು?

ಕಾನೂನಲ್ಲಿ ನಾನು ಇಂಟರ್‌ನ್ಯಾಶನಲ್ ಲಾ ಅಂಡ್ ಇಂಟರ್‌ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋನು. ಅದರಲ್ಲಿ ಸಾಮ್ರಾಜ್ಯಶಾಹಿ ಮಾಡ್ತಾ ಇರೊ ಜಾಗತಿಕ ಶೋಷಣೆ, ಇವೆಲ್ಲ ಸ್ಪಷ್ಟವಾಗಿ ಗೊತ್ತಾಗಲಿಕ್ಕೆ ಶುರುವಾಯಿತು. ಆಮೇಲೆ ಸ್ವಾತಂತ್ರ್ಯ ಬಂದ ಮೇಲೂ ಯಾವ ರೀತಿ ಕಲೋನಿಯಲಿಜಂ ಮುಂದುವರಿಸೋದರಲ್ಲಿ ಬಿಳೀ ರಾಷ್ಟ್ರಗಳೂ ಯಶಸ್ವಿಯಾಗಿದಾವೆ ಅನ್ನೋದು ಗೊತ್ತಾಯಿತು.

ಜರ್ಮನಿ ಕೂಡ ಒಂದು ಬಿಳೀರಾಷ್ಟ್ರವೆ. ಅಲ್ಲಿನ ಪಠ್ಯಕ್ರಮದಲ್ಲಿ ಇವೆಲ್ಲ ಇದ್ದವಾ?

ಯುಸೀ, ಇಂಟರ್‌ನ್ಯಾಶನಲ್ ಲಾದಲ್ಲಿ ಜರ್ಮನಿ ಪಠ್ಯಕ್ರಮ ಅಂತ ಏನಿರಲ್ಲ. ಎಲ್ಲಾ ದೇಶದಲ್ಲೂ ಒಂದೇ ಪಠ್ಯಕ್ರಮ ಇರಬೇಕಾಗುತ್ತೆ. ಜತೆಗೆ ನನ್ನ ಸುತ್ತ ಇದ್ದ ವಾತಾವರಣ ಕೂಡ ಇದಕ್ಕೆ ಕಾರಣವಾಯಿತು. ಹೇಳಿದೆನಲ್ಲ, ನಾನು ಬ್ರಾಹ್ಮಣೇತರ ಚಳುವಳಿ ನಡೀತಿದ್ದಂತಹ ವಾತಾವರಣದಲ್ಲಿ ಹುಟ್ಟಿದೆ ಅಂತ. ಆನಂತರ ಸ್ವಾತಂತ್ರ್ಯ ಬಂದ ಮೇಲೆ, ಕಿಸಾನ್ ಮಜದೂರ್ ಪ್ರಜಾಪಾರ್ಟಿ ಸದಸ್ಯರು ನಮ್ಮ ತಂದೆ. ಆನಂತರ ಪ್ರಜಾ ಸೋಶಲಿಸ್ಟ್ ಪಾರ್ಟಿ ಆಯಿತು. ಆಗಲೂ ನಮ್ಮ ತಂದೆ ಆ ಪಾರ್ಟಿ ಸದಸ್ಯರು. ಹಾಗಾಗಿ ಸಮಾಜವಾದಿ ವಾತಾವರಣದಲ್ಲೆ ಬೆಳೆದೆ.

ವಿದ್ಯಾಭ್ಯಾಸಕ್ಕೆ ಭಾರತದವರು ಸಾಮಾನ್ಯವಾಗಿ ಇಂಗ್ಲೆಂಡಿಗೆ ಹೋಗ್ತಾರೆ. ನೀವು ಜರ್ಮನಿ ಆರಿಸಿಕೊಂಡಿರಿ!

ಇಲ್ಲ. ವಿದ್ಯಾಭ್ಯಾಸಕ್ಕೆ ಅಂತ ಹೋಗಿದ್ದು ಜರ್ಮನಿ, ಫ್ರಾನ್ಸ್ ಮತ್ತು ಹಾಲೆಂಡ್‌ಗೆ. ಬ್ರಿಟಿಷರು ಮಾಡಿದಂಥ ಕೆಲಸಗಳೆಲ್ಲ ಗೊತ್ತಿದ್ದರಿಂದ ನನಗೆ ಇಂಗ್ಲೆಂಡ್ ಹೋಗಲಿಕ್ಕೆ ಮನಸ್ಸೇ ಇರಲಿಲ್ಲ. ಇನ್ನುವರೆಗೂ ನಾನು ಹೋಗಿಲ್ಲ. ಇಂಗ್ಲೆಂಡೂ ನನ್ನನ್ನು ಕರೆಸ್ಕೊಂಡಿಲ್ಲ(ನಗು). 

ನೀವು ಭಾರತ ಮತ್ತು ಯುರೋಪ್ ಎರಡೂ ಪರಿಸರಗಳಲ್ಲಿ ಕಲಿತಿದ್ದೀರಿ. ಎರಡೂ ಕಡೆ ಶಿಕ್ಷಣದ ವಿಷಯದಲ್ಲಿ ಎದ್ದುಕಾಣೋ ಫರಕು ಯಾವುದು ಅನಸುತ್ತೆ ಸಾರ್?

ಮುಖ್ಯವಾಗಿ ಅಧ್ಯಯನದ ವಿಧಾನ, ಮತ್ತೆ ಶಿಕ್ಷಣ ಸ್ವಾತಂತ್ರ್ಯ, ಆ ಒಂದು ವೈಚಾರಿಕ ಮುಕ್ತತೆ, ಅದ್ಯಾವುದೂ ಇಲ್ಲಿ ಕಾಣಲ್ಲ. ಜೊತೆಗೆ ಇದಕ್ಕೆ ಬೇರೆ ಸಾಮಾಜಿಕ ವ್ಯವಸ್ಥೆಗಳು ಕಾರಣ ಆಗ್ತಾವೆ. ಯೂರೋಪಿನಲ್ಲಿ ಈ ವೈಚಾರಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ಪೂರಕವಾದಂಥ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇದೆ. ಇಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸೇರಿದ ಕೂಡಲೇ ಗುಲಾಮ ಮನೋಭಾವನೆ ಶುರುವಾಗಿಬಿಡುತ್ತೆ. ಮುಂದಿನ ಉದ್ಯೋಗದ ಯೋಚನೆ, ಕರಿಯರ್ ಯೋಚನೆ ಇತ್ಯಾದಿಗಳು ಒಂದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವಾನೇ ವಕ್ರಗೊಳಿಸಿ ಕೊಂಡು ಬಿಡತಾರೆ.

ಒಂದು ನಾಗರಿಕ ಸಮಾಜದಲ್ಲಿ ಪ್ರಜೆಗಳಿಗೆ ಇರುವ ಸಾಮಾಜಿಕ ಆರ್ಥಿಕ ಭದ್ರತೆ ಅವರ ವೈಚಾರಿಕ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತೆ ಅಂತ ಹೇಳತಾ ಇದೀರಾ?

ನಿಜವಾಗಲೂ.
ನಿಮ್ಮ ಚಿಂತನೆಗಳಿಗೆ ಲೋಹಿಯಾರ ಪ್ರೇರಣೆಯಿದೆ. ಅವರ ಚಿಂತನೆಗಳ ಸಂಪರ್ಕ ನಿಮಗೆ ಯಾವಾಗ ಬಂದಿತು?
ತಮಾಷೆ ಹೇಳತೀನಿ. ನಾನು ಯುರೋಪಲ್ಲಿ ನಾಲ್ಕು ವರ್ಷ ಸ್ವತಃ ಚಿಂತನೆ ಮಾಡಿದೆ. ಅಲ್ಲಿಯವರೆಗೂ ನಾನು ಲೋಹಿಯಾನ ಓದಿರಲಿಲ್ಲ. ನರೇಂದ್ರದೇವ ಅವರದೂ ಇವರದೂ ಲಿಟರೇಚರ್ ಮನೆಗೆ ಬರ್ತಾ ಇತ್ತು. ಆದರೆ ನಾನೇನು ಚಿಂತನೆಗಳನ್ನ ನಡಸಿದ್ದೆ, ದೇಶದ ರಾಜಕೀಯ ಬಗ್ಗೆ ಇರಲಿ, ಅಂತರರಾಷ್ಟ್ರೀಯ ರಾಜಕೀಯದ ಬಗ್ಗೆ ಇರಲಿ, ಇಂಡಿಯಾಕ್ಕೆ ಬಂದ ನಂತರ ಎಲ್ಲಾ ರಾಜಕೀಯ ಪಕ್ಷಗಳನ್ನು ನೋಡಿ ಇನ್ನು ಆಯ್ಕೆ ಮಾಡೋ ಸ್ಥಿತಿನಲ್ಲಿ ಇರೋವಾಗಲೇನೆ, ಲೋಹಿಯಾರ ’ಮಾರ್ಕ್ಸ್ ಗಾಂದಿs ಅಂಡ್ ಸೋಶಿಯಲಿಜಂ’ ಪುಸ್ತಕ ನನ್ನ ಕೈಗೆ ಸಿಕ್ತು. ಅದನ್ನು ಓದೋಕೆ ಶುರುಮಾಡದಾಗ,  ನಾನೇ ಬರದಂಗೆ ಕಾಣಸ್ತಾ ಇತ್ತು! ನಾನು ಆಲೋಚನೆ ಮಾಡಿದ ವಿಚಾರಗಳೆಲ್ಲಾ ಅಲ್ಲೇ ಇತ್ತು. ಆನಂತರ ಆಯ್ಕೆ ಮಾಡೋ ಸಮಸ್ಯೇನೆ ಬರ್ಲಿಲ್ಲ. ನೇರ ಸಮಾಜವಾದಿ ಪಕ್ಷ ಸೇರಿದ್ದು, ಸಮಾಜವಾದಿ ಯುವಜನ ಸಭಾ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡೋದಿಕ್ಕೆ ಒಪ್ಪಿಗೆ ಕೊಟ್ಟಿದ್ದು, ಎಲ್ಲಾ ನಡೀತಾ ಬಂತು.

ಲೋಹಿಯಾ ಚಿಂತನೆಯಲ್ಲಿ ನಿಮಗೆ ಸೆಳೆದ ಮುಖ್ಯ ಸಂಗತಿ ಯಾವುದು?

ಅವರು ಉಪಯೋಗಿಸೋ ಭಾಷೆ ಮತ್ತು ಶೈಲಿ. ಅದು ನನ್ನ ಶೈಲೀನೇ. ಆ ಕಾರಣಕ್ಕೆ ಆಕರ್ಷಕ ಆಯ್ತೊ ಏನೋ? ಆ ಶಾರ್ಪ್‌ನೆಸ್ ಇದೆಯಲ್ಲ ದಟ್ಸ್ ವಾಟ್ ಐ ಅಟ್ರಾಕ್ಟೆಡ್ ಮಿ. ಅಂಡ್ ದೆನ್ ಹಿಸ್ ಕನ್‌ಸಿಸ್ಟೆನ್ಸಿ ಇನ್ ಪಾಲಿಟಿಕ್ಸ್. ನಂತರ ಅದೇ ದಿಕ್ಕಿನಲ್ಲಿ ಇನ್ನೂ ಹೆಚ್ಚು ವೈeನಿಕವಾಗಿ ಆಲೋಚನೆ ಮಾಡಿದಂಥ ಏಕೈಕ ಚಿಂತಕ ಇವತ್ತಿಗೂ ಇಂಡಿಯಾದಲ್ಲಿ ಅಥವಾ ಜಗತ್ತಿನಲ್ಲೇ ಗಾಂದಿsಜಿ ಒಬ್ಬರೆ.

ಈಗಿನ ಭಾರತದ ಮತ್ತು ಅಂತಾರಾಷ್ಟ್ರೀಯ ಸನ್ನಿವೇಶದಲ್ಲಿ ಲೋಹಿಯಾ ಚಿಂತನೆ  ಪ್ರಸ್ತುತ ಅಂತ ಭಾವಿಸ್ತೀರಾ?

ಹೇಳ್ತೀನಿ, ಈಗ ೪-೫ ದಿವಸದಲ್ಲಿ ಅವರದೊಂದು ಲೇಖನ ಹುಡುಕ್ತಾ ಇದ್ದೆ. ಸಿಕ್ತು ಕೈಗೆ. ’ಎಕನಾಮಿಕ್ಸ್ ಆಫ್ಟರ್ ಮಾರ್ಕ್ಸ್’ ಅಂತ. ಮತ್ತೆ ಓದೋಣ ಅಂತ ಶುರು ಮಾಡಿದೆ. ಏನಾಗುತ್ತೆ, ಲೋಹಿಯಾ ಬರೆದಿರೋದು, ದಿನನಿತ್ಯ ಓದಬಹುದು ತಾವು. ಒಂದು ಹೊಸದು ಕಾಣ್ತಾ ಇರುತ್ತೆ ಅಲ್ಲಿ. ಇವತ್ತು ಏನು ಜಾಗತೀಕರಣ ಆಗ್ತಾ ಇದೆ, ಅಮೆರಿಕನ್ ಕ್ಯಾಪಿಟಲಿಜಂ ತಾನು ಉಳಿಬೇಕಾದರೆ ಏನನ್ನ ಮಾಡ್ಲೇಬೇಕಾಗಿದೆ, ಅದನ್ನು ಲೋಹಿಯಾ ೧೯೪೨ನೇ ಇಸವಿನಲ್ಲಿ ಬರದಿದಾರೆ. ಅವರು ಆಗ ಏನ್ ಬರದರೋ ಅದನ್ನ ಅಮೆರಿಕ ಈಗ ಮಾಡ್ತಾ ಇದೆ.

ಇಷ್ಟೊಂದು ಮುಂಗಾಣ್ಕೆಯುಳ್ಳ ರಾಜಕೀಯ ತತ್ವಶಾಸ್ತ್ರವನ್ನು ಲೋಹಿಯಾ ರಚಿಸಿದರು. ಆದರೆ ಭಾರತದಲ್ಲಿ ಅವರ ಚಿಂತನೆಯನ್ನು ಅನುಸರಿಸುವ ಸಮಾಜವಾದಿ ರಾಜಕಾರಣ ಯಾಕೆ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿಲ್ಲ?

(ದೀರ್ಘಾಲೋಚನೆ ಮಾಡಿ) ಸೀ, ಕ್ಯಾರೆಕ್ಟರ್ ಅಂಡ್ ಕಂಡಕ್ಟ್, ನಡತೆ ಮತ್ತು ಗುಣ, ಲೋಹಿಯಾ ಸಿದ್ಧಾಂತದ ಒಂದು ಭಾಗ. ಇವನ್ನು ಲೋಹಿಯಾ ಮೀನ್ಸ್ ಅಂಡ್ ಎಂಡ್ಸ್‌ಗೆ ಲಿಂಕ್ ಮಾಡಿ ಸಿದ್ಧಾಂತ ನಿರೂಪಿಸ್ತಾರೆ. ಅವರ ಜೊತೆ ಕೆಲಸ ಮಾಡ್ತಾ ಇದ್ದವರಲ್ಲಿ ಈ ಅಂಶಗಳನ್ನ ಮೈಗೂಡಿಸಿಕೊಳ್ಳೋದರಲ್ಲಿ ಸೋತೋರೇ ಜಾಸ್ತಿ, ಜಾರ್ಜ್ ಫರ್ನಾಂಡೀಸ್ ಅವರಿಂದ ಹಿಡಿದು ನಮ್ಮ ಕರ್ನಾಟಕದ ಇವತ್ತಿನ ಅನೇಕ ಸಮಾಜವಾದಿ ರಾಜಕಾರಣಿಗಳವರೆಗೆ. ಲೋಹಿಯಾ ಮೀನ್ಸ್ ಅಂಡ್ ಎಂಡ್ಸ್ ಸಂಬಂಧವನ್ನ ಟೈಂ ಬಗ್ಗೆನೂ ಲಿಂಕ್ ಮಾಡ್ತಾ ಇದ್ದರು. ಟೈಂ ಈಸ್ ನಾಟ್ ಜಸ್ಟ್ ಎ ಮೂಮೆಂಟ್. ಇಟ್ ಈಜ್ ಆಲ್ಸೊ ಎಟರ್ನಿಟಿ. ಎವ್ವೆರಿ ಮೂಮೆಂಟ್ ಈಜ್ ಎಟರ್ನಿಟಿ ಅಂದಾಗ, ನೀವು ಇವತ್ತು ಸುಳ್ಳು ಹೇಳಿ ನಾಳೆ ಸತ್ಯಸ್ಥಾಪನೆ ಮಾಡ್ತೀನಿ ಅನ್ನೋಕೆ ಆಗೋಲ್ಲ.

ಲೋಹಿಯಾ ಇಂಡಿಯಾದ ಕಮ್ಯುನಿಸ್ಟರ ಮೇಲೆ ಕ್ರಿಟಿಕಲ್ ಆಗಿದ್ದರು. ಇದನ್ನ ನೀವು ಹೇಗೆ ವಿಶ್ಲೇಷಿಸ್ತೀರಿ?

 ಆಲ್ಸೊ ಅಕಾರ್ಡಿಂಗ್ ಟು ಲೋಹಿಯಾ, ದಿ ಗ್ರೇಟೆಸ್ಟ್ ಮಿಸ್ಟೇಕ್ ಮಾರ್ಕ್ಸ್ ಡಿಡ್ ವಾಜ್, ಅಕ್ಸೆಪ್ಟಿಂಗ್ ದಿ ಕ್ಯಾಪಿಟಿಲಿಸ್ಟ್ ಟೆಕ್ನಿಕ್ಸ್ ಆಫ್ ಪ್ರೊಡಕ್ಷನ್ ಅಂಡ್ ದಿ ಕ್ಯಾಪಿಟಿಲಿಸ್ಟ್ ಮೋಡ್ ಆಫ್ ಪ್ರೊಡಕ್ಷನ್, ಆಜ್ ಆನ್ ಐಡಿಯಲ್ ಮೋಡ್ ಆಫ್ ಪ್ರೊಡಕ್ಷನ್. ಲೋಹಿಯಾ ಅವರು ಹೇಳೋದು, ಇದನ್ನ ಒಪೊಕೆ ಮಾರ್ಕ್ಸ್‌ನ ಮನಸು ಯಾಕೆ ತಯಾರಾಯ್ತು ಅಂದ್ರೆ, ಬಿಕಾಸ್ ಹಿ ವಾಸ್ ಆಲ್ಸೋ ಯುರೋಪಿಯನ್. ಐ ವುಡ್ ಸೇ ದಟ್ ವಾಜ್ ದಿ ಬಿಗ್ಗೆಸ್ಟ್ ವೀಕ್‌ನೆಸ್. ಇವತ್ತು ಜಾಗತೀಕರಣದ ವಿರುದ್ಧ ಯುರೋಪಲ್ಲಿ ಏನು ಜನಾಂದೋಲನಗಳು ನಡೀತಾ ಇವೆ. ಅಲ್ಲೂನು ಇದನ್ನು ಕಾಣಬಹುದು. ದಿ ಸೇಮ್ ಯುರೋಪಿಯನ್ ಮೋಮೆಂಟ್ಸ್ ಹೂ ವರ್ ಅಪೋಸಿಂಗ್ ಗ್ಲೋಬಲೈಜೇಶನ್ ಅಲಾಂಗ್ ವಿತ್ ಅಸ್, ಎಕ್ಸಿಬಿಟ್ಸ್ ದಟ್ ಕೈಂಡ್ ಆಫ್ ವೀಕ್‌ನೆಸ್ ಆಕೇಶನಲಿ. ಅದೇ ಕಾರಣಕ್ಕೆ ಹೈದ್ರಾಬಾದ್‌ನಲ್ಲಿ ಮೊನ್ನೆ ಆಯಿತಲ್ಲ ಏಶಿಯನ್ ಸೋಶಿಯಲ್ ಪೋರಂ, ಅದಕ್ಕೆ ನಾನು ಹೋಗಲಿಲ್ಲ. ಹೋದ ವರ್ಷ ವರ್ಲ್ಡ್ ಸೋಶಿಯಲ್ ಫೋರಂ ಆಯ್ತು ಬ್ರೆಜಿಲ್‌ನಲ್ಲಿ. ಅಲ್ಲೂ ಭಾಷಣ ಮಾಡಬೇಕಿತ್ತು. ನಾನು ಹೋಗಲಿಲ್ಲ. ಅದಕ್ಕೆ ಕಾರಣ ಏನಂತಂದರೆ, ವರ್ಲ್ಡ್ ಸೋಶಿಯಲ್ ಫೋರಮ್‌ಗೆ ಯಾರು ಸಂಚಾಲಕರು ಅಂತ ಇದಾರೆ, ಆ ಸಂಚಾಲಕರು ಕ್ಯೂಬಾದ ಅಧ್ಯಕ್ಷ ಪಿsಡಲ್ ಕ್ಯಾಸ್ಟ್ರೋಗೆ ಬ್ರೆಜಿಲ್ ಸಮಾವೇಶಕ್ಕೆ ಆಹ್ವಾನ ಕೊಡೋದಕ್ಕೆ ವಿರೋಧ ಮಾಡಿದರು. ಅವರು ಹೇಳಿದ್ದು ಕ್ಯಾಸ್ಟ್ರೋಗೆ ಕರೆದರೆ ಜಾಗತೀಕರಣ ವಿರೋದಿs ಚಳುವಳಿಯಲ್ಲಿ ಒಡಕು ಬರುತ್ತೆ. ನಾನಂದೆ - ’ಕರೀದೇ ಇದ್ದರೂ ಒಡಕು ಬರುತ್ತೆ. ಆ ಕಾರಣಕ್ಕೆ ನಾನು ಬರಲ್ಲ’. ಈಗ ಇದೇ ೨೬-೨೭ಕ್ಕೆ ಅಲ್ಲಿ ನಡೀತಾ ಇದೆ. ನಾನು ಇರಬೇಕಿತ್ತಲ್ಲಿ. ನಾನು ಬರಲ್ಲ ಅಂದೆ. ಮುಂದಿನ ವರ್ಷ ಇಂಡಿಯಾದಲ್ಲಿ ವರ್ಲ್ಡ್ ಸೋಶಿಯಲ್ ಫೋರಂ ನಡೀಬೇಕು ಅಂತ ತೀರ್ಮಾನ ಮಾಡಿದಾರೆ. ಇಲ್ಲಿ ನಡೀಬೇಕು ಅನ್ನೋದಾದರೆ, ಇಲ್ಲಿಗೆ ಕ್ಯಾಸ್ಟ್ರೋ ಬಂದು ಉದ್ಭಾಟನೆ ಮಾಡಬೇಕು ಅಂತ ಸಂಚಾಲನಾ ಸಮಿತಿ ತೀರ್ಮಾನ ಮಾಡಿದರೆ, ನಾನು ಬರ್ತೀನಿ ಅಂತ ಹೇಳಿದೀನಿ.

ಈ ಒಂದು ನಿರ್ದಿಷ್ಟ ಅಂಶದ ಮೇಲೆ ನೀವು ಯಾಕೆ ಒತ್ತಾಯ ಮಾಡತಾ ಇದೀರಿ?

ಸೀ, ಬಿಕಾಸ್ ಆ ಆರ್ಗನೈಜರ್ಸ್ ಏನಿದಾರೆ, ಯುರೋಪಿನ ಕೆಲವು ಸಂಘ-ಸಂಸ್ಥೆಗಳ ಪದಾದಿsಕಾರಿಗಳು, ವರ್ಲ್ಡ್ ಸೋಶಿಯಲ್ ಫೋರಂನ ಸಂಚಾಲಕರು, ಅಮೆರಿಕನ್ ಕ್ಯಾಪಿಟಲಿಜಂ ಬಗ್ಗೆ ಬಹಳ ಒಂದು ಸಾಫ್ಟ್ ಲೈನ್ ತಗೋತಾರೆ. ಈವನ್ ದೆ ಗೋ ಟು ದಿ ಎಕ್ಸ್‌ಟೆಂಟ್ ದಟ್ ಆಂಟಿ ಗ್ಲೋಬಲೈಜೇಶನ್ ಈಜ್ ನಾಟ್ ಆಂಟಿ ಅಮೇರಿಕ. ವಿ ಆರ್ ನಾಟ್ ಆಂಟಿ 

ಜಾರ್ಜ್‌ಬುಶ್ ಅಂತಾರೆ. ಇಂಥಾವೆಲ್ಲ ಮಾತಾಡೋರ ಜೊತೆಗೆ ಏನೂಂತ ಚಳುವಳಿ ಮಾಡ್ತೀರಿ?

ಮಾರ್ಕ್ಸ್‌ವಾದವು ಯೂರೋಪಿನ ಒಂದು ಚಾರಿತ್ರಿಕ ಸಂದರ್ಭದಲ್ಲಿ ಹುಟ್ಟಕೊಂಡಿತು. ಅದರಲ್ಲಿ ಸಹಜವಾಗಿ ಆ ಕಾಲ ದೇಶ ಸನ್ನಿವೇಶಕ್ಕೆ ಅನುಸಾರವಾದ ಕೆಲವು ತತ್ವಗಳಿವೆ. ಅದು ಬೇರೆಬೇರೆ ದೇಶದ ಸಮಾಜಗಳ ಸಂದರ್ಭಗಳ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕು ಅಂತ ನಿರೀಕ್ಷಿಸೋಕೆ ಸಾಧ್ಯವಿಲ್ಲ. ಯಾವುದೇ ತತ್ವಕ್ಕೂ ಅಂತಹ ಸರ್ವಕಾಲೀನ ಶಕ್ತಿಯಿರೋಲ್ಲ. ವಾಸ್ತವ ಏನಂದರೆ, ಆ ತತ್ವಚಿಂತನೆಯನ್ನು ನಮ್ಮ ಚಾರಿತ್ರಿಕ ಸಂದರ್ಭಕ್ಕೆ ನಾವು ಹೇಗೆ ಪರಿವರ್ತಿಸಿ ಬಳಸ್ತೇವೆ ಹಾಗೂ ಅದನ್ನಿಟ್ಟುಕೊಂಡು ನಮ್ಮ ವರ್ತಮಾನದ ಪರಿಸರವನ್ನ ಮುಖಾಮುಖಿ ಮಾಡುತ್ತೇವೆ ಅನ್ನುವುದು. 

ಲೋಹಿಯಾ ಸಮಾಜವಾದವು ಮಾರ್ಕ್ಸ್‌ವಾದವನ್ನು ವಿಮರ್ಶೆ ಮಾಡತಾ ಇರುವಾಗ ಎತ್ತುವ ಮುಖ್ಯ ಪ್ರಶ್ನೆ ಯಾವುದು?

ಇಂಡಿಯನ್ ಮಾರ್ಕ್ಸಿಸ್ಟ್ ವರ್ ಜಸ್ಟ್ ಇಮಿಟೇಟರ್ಸ್ ಆಫ್ ರಶಿಯನ್ ಕಮ್ಯುನಿಸಂ ಆರ್ ಚೈನೀಸ್ ಕಮ್ಯುನಿಸಂ. ಇವತ್ತಿಗೂನೂ ಈ ಭಾರತದ ಕಮ್ಯೂನಿಸ್ಟ್ ಚಳುವಳಿ ಕೇಂದ್ರೀಕರಣವನ್ನ ವಿರೋಧ ಮಾಡಿಲ್ಲ. ಸೆಂಟ್ರಲೈಜೆಶನ್ಸ್ ಇನ್ ಎವರಿಥಿಂಗ್, ಅದನ್ನ ವಿರೋಧ ಮಾಡಿಲ್ಲ. ಕ್ಯಾಪಿಟಲಿಸ್ಟ್ ಮೋಡ್ ಆಫ್ ಪ್ರೊಡಕ್ಷನನ್ನ ವಿರೋಧ ಮಾಡಿಲ್ಲ. ಸೋಸಿಯಲೈಜೇಶನ್ಸ್ ಆಫ್ ಇಂಡಸ್ಟ್ರೀಸ್ ಬಗ್ಗೆ ಹೋರಾಟ ಮಾಡಿಲ್ಲ.

ಇಂಡಿಯನ್ ಕಮ್ಯುನಿಸಂ ಅನ್ನ ನೀವು ಬೀಸುಗ್ರಹಿಕೆಯಲ್ಲಿ ನೋಡತಾ ಇದೀರಾ ಅಂತ ಅನುಮಾನ. ಭಾರತದಲ್ಲಿ ಅನೇಕ ಸೈದ್ಧಾಂತಿಕ ನೆಲೆಯ ಕಮ್ಯೂನಿಸ್ಟ್ ಚಳುವಳಿಗಳಿದಾವೆ.

ಅವಕ್ಕೂ ಇದು ಅನ್ವಯಿಸುತ್ತೆ. ಈವನ್ ಫಾರ್ ದಿ ಪೀಪಲ್ಸ್ ವಾರ್‌ಗ್ರೂಪ್. ಆಂಧ್ರಪ್ರದೇಶದಲ್ಲಿ ೧೯೯೨ರಿಂದ ಈಚೆಗೆ ನಾನು ಅವರೇ ಕರೆದ ಬಹಳ ಸಭೆಗೆ ಹೋಗಿದೀನಿ. ಅವರು ಇಂಟ್ರನಲ್ ಕಾಂಟ್ರಡಿಕ್ಷನ್ ಅಂತ ಮಾತಾಡ್ತಾರೆ. ವಾಟ್ ಈಸ್ ದಿ ಸೀರಿಯಸ್ ಮೋಸ್ಟ್ ಕಾಂಟ್ರಡಿಕ್ಷನ್ ನೌ? ಹೂ ಈಜ್ ದಿ ಮೋಸ್ಟ್ ಸೀರಿಯಸ್ ಎನಿಮಿ ನೌ? ನಾನು ಕೇಳಿದೆ. ’ನೀವು ನಮ್ಮ ಪೋಲಿಸ್ ಸ್ಟೇಶನ್ಸ್‌ಗೆ ಬಾಂಬ್ ಹಾಕ್ತೀರಿ. ನಮ್ಮ ತಹಶೀಲ್ದಾರ್ ಕbsರಿಗೆ ಬಾಂಬ್ ಹಾಕ್ತೀರಿ. ವೈ ನಾಟ್ ಯು ಎಕ್ಸ್‌ಪ್ಲೋಡ್ ಮಲ್ಟಿನ್ಯಾಶನಲ್ ಕಾರ್ಪೋರೇಶನ್ಸ್?’ ಎಲ್ಲೋ ಒಂದು ಕೋಕಾ-ಕೋಲಾ ಬಾಟಲಿಂಗ್ ಯೂನಿಟ್ಟನ್ನ ಈಚೆಗೆ ಧ್ವಂಸ ಮಾಡಿದರೆ ಹೊರತು, ದೊಡ್ಡ ದೊಡ್ಡದನ್ನ ಎಕ್ಸ್‌ಫ್ಲೋಡ್ ಮಾಡಿ ಆಮೇಲೆ ಈ ಚಿಲ್ಲರೆ ಇಂಟರ್ನಲ್ ಕಾಂಟ್ರಡಿಕ್ಷನ್ ನಾವು ವಿಚಾರಿಸ್ಕೋಬಹುದು. ಅದನ್ನು ಮಾಡೋಕೆ ತಯಾರಿಲ್ಲ. ಈವನ್ ಸಿಪಿಎಂ ಗೌರ್ನಮೆಂಟ್ ಇನ್ ಕಲ್ಕತ್ತಾ, ಗ್ಲೋಬಲೈಜೇಶನ್ನ ಸಂಪೂರ್ಣ ವಿರೋಧ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅದರ ಬದಲು ಜ್ಯೋತಿಬಸುಗೆ ಉತ್ತರಾದಿsಕಾರಿ ಅನ್ನೋವಂಥ ಸೋಮನಾಥ ಚಟರ್ಜಿ ಸೀನಿಯರ್ ಮೋಸ್ಟ್ ಮೆಂಬರ್ ಆಫ್ ಪಾರ್ಲಿಮೆಂಟ್, ಅವರನ್ನು ಒಂದು ಕಾರ್ಪೋರೇಷನ್ನಿಗೆ ಅಧ್ಯಕ್ಷ ಮಾಡಿದಾರೆ. ಆ ಕಾರ್ಪೋರೇಷನ್ ಕೆಲಸ ಅಟ್ರಾಕ್ಟಿಂಗ್ ಫಾರೀನ್ ಕ್ಯಾಪಿಟಲ್. ಇಂಥ ಒಂದು ಹಳಿತಪ್ಪಿದ ವಿಚಾರದ ಮೇಲೆ ಕಮ್ಯೂನಿಸ್ಟ್ ಚಳುವಳಿ ನಡೆದಿರೋದು ಇಂಡಿಯಾದಲ್ಲಿ.

ಕಮ್ಯೂನಿಸಂ ಕುರಿತ ಲೋಹಿಯಾ ಅವರ ನಿಲುವುಗಳು, ಅವರ ಕಾಲದ ಭಾರತದ ಕಮ್ಯುನಿಸ್ಟರ ನಿಲುವುಗಳನ್ನು ತೀವ್ರವಾಗಿ ವಿರೋದಿsಸುತ್ತ ರೂಪುಗೊಂಡಂತಹವು. ವಾಸ್ತವವಾಗಿ ಅವನ್ನು ಕಮ್ಯುನಿಸಂ ವಿರೋದಿsಯಾದವು ಎಂದು ಕರೆಯಬಾರದು ಎಂಬ ವ್ಯಾಖ್ಯಾನಗಳಿವೆ.

 ನೋನೋ. ಲೋಹಿಯಾನ ಸರಿಯಾಗಿ ಅರ್ಥಮಾಡಿಕೊಳ್ಳದೇನೆ ಮಾಡಿರುವ ವ್ಯಾಖ್ಯಾನ ವಿದು. ಅವರು ’ಎಕನಾಮಿಕ್ಸ್ ಆಫ್ಟರ್ ಮಾರ್ಕ್ಸ್’ ಅನ್ನೋ ಪ್ರಬಂಧ ಬರೆದಾಗ ಅವರ ಮನಸಲ್ಲಿ ಡಾಂಗೆ, ನಂಬೂದರಿ ಪಾದ್ ಇವರ‍್ಯಾರೂ ಇರಲಿಲ್ಲ.

ನೀವು ಸಮಾಜವಾದಿ ಯುವಜನ ಸಭಾ ಶುರುಮಾಡಿದಾಗ ಲೋಹಿಯಾವಾದಕ್ಕೂ ಆಗಿನ ಕರ್ನಾಟಕ ಸಾಮಾಜಿಕ ರಾಜಕೀಯ ಸಂದರ್ಭಕ್ಕೂ ಯಾವ ತರಹ ಸಂಬಂಧ ಇತ್ತು?

ನಾವು ಯುವಜನ ಸಭಾ ಪ್ರಾರಂಭ ಮಾಡಿದಾಗ ಲೋಹಿಯಾ ವಿಚಾರಗಳನ್ನು ಯುವ ಜನತೆ ಮತ್ತು ಬುದ್ಧಿಜೀವಿಗಳು ಯಾವ ರೀತಿ ಸ್ವೀಕರಿಸಿದರು ಅಂತ ನೋಡಿದರೆ, ಆಗಲೇ ಕಾಲ ಪಕ್ವವಾಗಿತ್ತು. ಆಕ್ಚುವಲಿ ನಾವು ಚಟುವಟಿಕೆ ಹೆಚ್ಚಿಗೆ ಮಾಡಿದ್ದು ೧೯೬೮ರ ನಂತರ. ಲೋಹಿಯಾ ತೀರಿಕೊಂಡ ಮೇಲೆ. ಆದರೆ ೧೯೬೭ರ ಹೊತ್ತಿಗೆ ಏಳು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳು ತೆಗೆದುಹಾಕಿ ಕಾಂಗ್ರೆಸ್ಸೇತರ ಸರಕಾರಗಳು ರಚನೆಯಾಗಿದ್ದವು. ಲೋಹಿಯಾ ಅವರ ಒಂದು ಸೂಚನೆ ಮೇರೆಗೆ ನಡೀತಾ ಇತ್ತು ಆ ಕೆಲಸ. ಮತ್ತೆ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ಸನ್ನು ತೆಗೆಯುವಂತಹ ಒಂದು ಯೋಜನೆ ಪಕ್ವವಾಗಿತ್ತು. ದುರದೃಷ್ಟವಶಾತ್ ಲೋಹಿಯಾ ೧೯೬೭ರಲ್ಲಿ ತೀರಿಕೊಂಡರು. ಅಷ್ಟೊತ್ತಿಗಾಗಲೇ ದೇಶದ ತುಂಬಾ ’ನಾನ್ ಕಾಂಗ್ರೆಸ್ಸಿಸಂ’ ಒಂದು ವಿಚಾರವಾಗಿ ಸಾರ್ವತ್ರಿಕವಾಗಿ ಸ್ವೀಕಾರವಾಗಿತ್ತು. ಅಂಥ ಕಾಲದಲ್ಲಿ ನಾವು ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿ ಶುರುಮಾಡಿದ್ದು.

ಕರ್ನಾಟಕ ಲೋಹಿಯಾವಾದಿ ರಾಜಕಾರಣಿಗಳು ಸಾಮಾನ್ಯವಾಗಿ ಸಾಹಿತ್ಯಾಸಕ್ತರು. ಕುವೆಂಪು ಅಬಿsಮಾನಿಗಳು. ಕುವೆಂಪು ಕೂಡ ಒಂದು ಬಗೆಯ ಸಮಾಜವಾದಿ ದರ್ಶನವನ್ನು ತಮ್ಮ ಕೃತಿಗಳಲ್ಲಿ ಪ್ರಕಟಿಸುತ್ತಿದ್ದವರು. ಲೋಹಿಯಾ ಹಾಗೂ ಕುವೆಂಪು ಇವರಿಬ್ಬರಲ್ಲಿ ಯಾವ ಬಗೆಯ ಸಾಮ್ಯ ಹಾಗೂ ಬಿsನ್ನತೆ ಕಾಣ್ತೀರಿ?

ಅಷ್ಟೊಂದು ವಿವರವಾಗಿ ನಾವು ಹೋಲಿಕೆ ಮಾಡಕೆ ಸಾಧ್ಯ ಇಲ್ಲದಿದ್ದರೂ, ಸ್ಥೂಲವಾಗಿ ನೋಡಿದಾಗ ಹೋಲಿಕೆಗಳು ಜಾಸ್ತಿ ಇವೆ. ಅದರಲ್ಲೂ ಮಾತೃಭಾಷೆ ಬಗ್ಗೆ ಇರಬಹುದು. ಜಾತಿಪದ್ಧತಿ ಬಗ್ಗೆ ಇರಬಹುದು. ರೈತನ ಬಗ್ಗೆ ಅಥವಾ ಆಸ್ತಿವ್ಯವಸ್ಥೆ ಬಗ್ಗೆ ಇರಬಹುದು. ವೈದಿಕಶಾಹಿ ಬಗ್ಗೆ ಇರಬಹುದು. ಕುವೆಂಪು ಲೋಹಿಯಾ ಅವರಷ್ಟು ವಿವರವಾಗಿ ಈ ಸಮಸ್ಯೆಗಳ ಬಗ್ಗೆ ಬರೆಯದಿದ್ದರೂನೂ ಇಬ್ಬರಲ್ಲೂ ಬಹಳ ಹೋಲಿಕೆಗಳೂ ಇದ್ದವು.

ನೀವು ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಸುಂದರೇಶ್, ಕಡಿದಾಳು ಶಾಮಣ್ಣ, ಗೋಪಾಲಗೌಡರು, ಕೋಣಂದೂರು ಲಿಂಗಪ್ಪ ಹೀಗೆ ನಿಮ್ಮ ಗುಂಪನ್ನು ನೆನೆಸಿಕೊಂಡರೆ ಮುಖ್ಯವಾಗಿ ಅದೊಂದು ಬುದ್ಧಿಜೀವಿಗಳ ಗುಂಪಾಗಿತ್ತು. ಬಹುಶ ಅಡಿಗರೂ ಮೊದಲು ಅಲ್ಲಿದ್ದರು ಅಂತ ಕಾಣುತ್ತೆ. ನಿಮ್ಮನ್ನು ಒಂದು ಕೇಂದ್ರಕ್ಕೆ ತಂದಿದ್ದು ನಿಮ್ಮಲ್ಲಿ ಇದ್ದ ಸಾಹಿತ್ಯಾಸಕ್ತಿಯೊ ಅಥವಾ ರಾಜಕೀಯ ವಿಚಾರ ಧಾರೆಯೋ?

ವಿಚಾರವೇ ನಮ್ಮನ್ನು ಕೂಡಿಸಿದ್ದು. ಆದರೆ ನಿಜವಾಗಿ ವಿಚಾರ ಆಧಾರದ ಮೇಲೆ ಕೂಡಿದಂಥ ಹೆಸರುಗಳನ್ನ ನೀವು ಪ್ರತ್ಯೇಕಿಸಬಹುದು. ಪ್ರಾಮಾಣಿಕವಾಗಿ ವಿಚಾರದ ಮೇಲೆ ಕೂಡದೇ ಇದ್ದಂತಹ ಅಥವಾ ಕೂಡಿದಹಂಗೆ ತೋರಿಸಿಕೊಂಡ ವ್ಯಕ್ತಿಗಳನ್ನು ಪ್ರತ್ಯೇಕಿಸಬಹುದು. ನೀವು ಹೇಳಿದಿರಿ ಅಡಿಗ, ಅನಂತಮೂರ್ತಿ ಅಂತ. ಪ್ರಜಾಪ್ರಭುತ್ವವನ್ನೇ ವಿರೋಧ ಮಾಡಿದಂತಹ ಅಡಿಗರ ಹಲವಾರು ಲೇಖನಗಳು ಇವೆ. ನಂತರ ಜನಸಂಘದ ಅಭ್ಯರ್ಥಿಯಾದಾಗ, ಅದಕ್ಕೂ ಮುಂಚೆ ಅವರು ಬರೆದಂಥ ಲೇಖನಗಳು ಅಡಿಗರ ನಿಜವಾದ ವ್ಯಕ್ತಿತ್ವ ತೋರಿಸುತ್ತವೆ. ಮತ್ತೆ ಅನಂತಮೂರ್ತಿ ಕಾಲಕಾಲಕ್ಕೆ ಹೊಂದಿಕೊಳ್ಳೋವಂಥ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದರೆ, ಅವರ ವ್ಯಕ್ತಿತ್ವಾನೂ ಏನೂ ಅಂತ ಗೊತ್ತಾಗುತ್ತೆ. ದಟ್ಸ್‌ವೇರ್, ಲ್ಯಾಕ್ಸ್ ದಿ ಕನ್‌ಸಿಸ್ಟನ್ಸಿ ಇನ್ ಕ್ಯಾರೆಕ್ಟರ್, ವಿಚೀಸ್ ವೆರಿ ಇಂಪಾರ್ಟೆಂಟ್ ಫಾರ್ ಎನಿ ಸೋಷಿಯಲಿಸ್ಟ್ , ಫಾರ್ ಎನಿ ಮೂಮೆಂಟ್, ಆರ್ ಫಾರ್ ಎನಿ ಪರ್ಸನ್ಸ್ ಹೂ ವಾಂಟ್ಸ್ ಎ ಸೋಶಿಯಲ್ ಟ್ರಾನ್ಸ್ ಫರ್ಮೇಶನ್ .

ಈ ಲ್ಯಾಕ್ ಆಫ್ ದಿ ಕನ್‌ಸಿಸ್ಟೆನ್ಸಿ ಇನ್ ಕ್ಯಾರಕ್ಟೆರ್ ಗೆ ಕಾರಣಗಳು, ಆ ಕಾಲದ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳಲ್ಲಿ ಇದ್ದವೊ ಅಥವಾ ರಾಜಕೀಯ ಚಿಂತನೆಯಾಗಿ ಲೋಹಿಯಾವಾದದಲ್ಲಿ ಇದ್ದವೊ?

ಲೋಹಿಯಾವಾದದಲ್ಲೇ ಇದ್ದವು ಅಂತ ನಾನು ನಂಬಲ್ಲ. ಸೀ, ಎಲ್ಲರೂ ಬಿಟ್ಟು ಹೋದ ಮೇಲೆ ನಮ್ಮ ರೈತ ಚಳುವಳಿ ಪ್ರಾರಂಭವಾಯಿತು. ರೈತ ಚಳುವಳಿಗೂನೂ ಸಮಾಜವಾದಿ ಚಳುವಳಿಗೂನೂ ವ್ಯತ್ಯಾಸ ಇದೆ ಅಂತ ನಾನು ಹೇಳೋಲ್ಲ. ವೈಯಕ್ತಿಕವಾಗಿ ಕೇಳೋದಾದರೆ, ಸಮಾಜವಾದಿ ಯುವಜನಾ ಸಭಾ ಅಂದೋಲನದ ಎರಡನೇ ಅಧ್ಯಾಯ, ಈ ನಮ್ಮ ರೈತ ಚಳುವಳಿ ಅಂತ ಕರೆಯೋನು ನಾನು. ಈ ಚಳುವಳಿ ಬಹಳ ಪ್ರಬಲವಾಗೆ ಸಂಘಟನೆ ಆಯಿತು. ಆಗತಾ ಇದೆ. ಮಧ್ಯೆ ಮಧ್ಯೆ ಎಷ್ಟೇ ತಲೆನೋವು ಬಂದರೂನೂ ಇವತ್ತಿಗೂ ಆಗತಾ ಇದೆ.

ಲೋಹಿಯಾ ಪ್ರತಿವಾದಿಸುತ್ತಿದ್ದ ಸರಳತೆ ನೈತಿಕತೆಗಳನ್ನ ಬಹಳ ತೀವ್ರವಾಗಿ ಮೊದಲ ಘಟ್ಟದಲ್ಲಿ ಬದುಕ್ತಾ ಇದ್ದಂತಹ ಗೋಪಾಲಗೌಡರು, ಲೋಹಿಯಾವಾದ ಸೃಷ್ಟಿಸಿದ ಒಳ್ಳೇ ಜನನಾಯಕರಲ್ಲಿ ಒಬ್ಬರು. ಆದರೆ ಅವರು ಕರ್ನಾಟಕದ ರಾಜಕಾರಣದಲ್ಲಿ ಕೊನೆಕೊನೆಗೆ ತಮ್ಮ ಪ್ರಭಾವವನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ. ಸಮಸ್ಯೆ ನಿಜವಾಗಿ ಎಲ್ಲಿತ್ತು?

ಇಲ್ಲ. ಗೋಪಾಲಗೌಡ್ರ ಬಗ್ಗೆ ಬಹಳ ಹತ್ತಿರದಿಂದ ಪರಿಚಯ ಇರೋರು, ಅವರ ಬಗ್ಗೆ ಹಲವಾರು ಅಬಿsಪ್ರಾಯಗಳನ್ನು ಇಟ್ಟುಕೊಂಡಿದ್ದಾರೆ. ಒಂದೇ ಒಂದು ದೊಡ್ಡಗುಣ ಅವರಲ್ಲಿದ್ದುದು ಅಂದರೆ, ಒಂದು ಚಳುವಳಿಗೆ ಜೀವನದುದ್ದಕ್ಕೂ ಅಂಟಿಕೊಂಡಿದ್ದು. ಇದರ ಹೊರತು, ಅವರು ಕೊನೇ ಹತ್ತುವರ್ಷ ಕರ್ನಾಟಕದಲ್ಲಿ ಸಂಘಟನೆ ಪ್ರಯತ್ನಗಳನ್ನೇ ಮಾಡಲಿಲ್ಲ. ಹಿ ವಾಸ್ ನಾಟ್ ಎ ಗುಡ್ ಆರ್ಗನೈಜರ್ ಅಟಾಲ್. ಅದಕ್ಕೆ ಅವರ ವೈಯಕ್ತಿಕ ದೌರ್ಬಲ್ಯಗಳು ಕಾರಣ ಇರಬಹುದು. ಆ ಕಾರಣವೇ ’ಗೋಪಾಲಗೌಡರ ಬಗ್ಗೆ ಪುಸ್ತಕ ಪ್ರಕಟಣೆ ಮಾಡ್ತಾ ಇದೀವಿ, ಲೇಖನ ಬರೀರಿ’ ಅಂದ್ರೆ, ನಾನು ಬರೆಯೋಲ್ಲ. ಬರೆದರೆ ಪ್ರಾಮಾಣಿಕವಾಗಿ ಬರೀಬೇಕಾಗುತ್ತೆ. ಅದು ಕಹಿಯಾಗಿರುತ್ತೆ. ಈ ಕಹಿ ಸೇರಸೋದು ಬ್ಯಾಡ ಅಂತ್ಹೇಳಿ ನಾನು ಬರೀಲಿಲ್ಲ.

ಸಾಹಿತ್ಯದಲ್ಲಿ ನಿಮ್ಮ ಆಯ್ಕೆ ಕೇಳತೀನಿ. ನಿಮ್ಮ ಪ್ರಿಯವಾದ ಲೇಖಕ ಯಾರು?

 ಯೋಚನೆ ಮಾಡದೇನೆ ಹೇಳಬಹುದು ಕುವೆಂಪು ಅಂತ. ಕುವೆಂಪು ಮಟ್ಟಕ್ಕೆ ಏರುವಂಥ ಲೇಖಕ ಇನ್ನೂ ಹುಟ್ಟಿಲ್ಲ ಅಂತ ನನಗನಸುತ್ತೆ.

ಸಾಹಿತ್ಯ ವಿಮರ್ಶಕರಿಗೆ ಇದೇ ಪ್ರಶ್ನೆ ಕೇಳಿದರೆ, ಅವರದೇ ಆದ ಆಯ್ಕೆ, ಅದಕ್ಕೆ ಅವರದೇ ಆದ ಕಾರಣ ಇರುತ್ತೆ. ಒಬ್ಬ ಚಳುವಳಿಗಾರರಾಗಿ ನಿಮಗೆ ಕುವೆಂಪು ಯಾಕೆ ಮುಖ್ಯ ಅನಿಸ್ತಾರೆ?

ಅವರ ಸಾಮಾಜಿಕ ಕಳಕಳಿ, ಅವರ ವೈಚಾರಿಕ ವೈಶಾಲ್ಯ, ಮತ್ತೆ ಸಾಹಿತ್ಯಕ್ಕೂ ಒಂದು ಉದ್ದೇಶ ಅಂತ ಇರುತ್ತಲ್ಲ, ಆ ಉದ್ದೇಶಗಳ ಸ್ಪಷ್ಟತೆ, ಒಬ್ಬ ಸಾಹಿತಿಯ ಸಾಮಾಜಿಕ ಪಾತ್ರ ಅಂತ ಏನಂತೀವಿ ಅದನ್ನೆಲ್ಲ ಸಂಪೂರ್ಣ ಭರ್ತಿ ಮಾಡೋವಂಥ ವ್ಯಕ್ತಿತ್ವ ಅವರದು. ಅದರ್ ವೈಸ್ ಎ ರೈಟರ್ ಬಿಕಮ್ಸ್ ಇರೆಲವಂಟ್. ಸೀ, ಕುವೆಂಪು ಬಿಕಮ್ಸ್ ರಿಲವಂಟ್ ಇವನ್ ಟುಡೆ, ಬಿಕಾಸ್ ಆಫ್ ದೀಸ್ ಫ್ಯಾಕ್ಟರ್ಸ್.

ನಿಮ್ಮ ಗೆಳೆಯರಾದಂತಹ ತೇಜಸ್ವಿ ಎಂತಹ ಬರೆಹಗಾರ?

ತನ್ನ ಸುತ್ತಮುತ್ತ ಇರೋ ಸಮಸ್ಯೆಗಳ ಬಗ್ಗೆ ಬಹಳ ಸ್ಪಷ್ಟತೆ ಇರೋವಂಥ ಒಬ್ಬ ಲೇಖಕ ಅವರು. ಅದನ್ನು ಹಾಸ್ಯದ ರೂಪದಲ್ಲಿ ಹೇಳಿರಬಹುದು. ಕೆಲವು ಸಾರಿ ಗಂಬಿsರವಾಗಿ ಹೇಳಿರಬಹುದು. ಆದರೆ ಎ ರೈಟರ್ ವಿತ್ ಟೋಟಲ್ ಕ್ಲಾರಿಟಿ ಆನ್ ಇಶ್ಯೂಸ್. ಈಚೆಗೆ ಅವರು ಜಾಗತೀಕರಣ ಬಗ್ಗೆ ಸಡಿಲವಾಗಿ ಕೊಟ್ಟ ಒಂದೆರಡು ಹೇಳಿಕೆ ಬಿಟ್ಟರೆ, ಯಾವುದೇ ವಿಷಯದ ಬಗ್ಗೆ ಸಡಿಲವಾಗಿ ಹೇಳಿಕೆ ಕೊಟ್ಟಿದ್ದು ನನಗೆ ಕಾಣಿಸಲಿಲ್ಲ. ಅವರು ಜಾಗತೀಕರಣದ ಬಗ್ಗೆ ಹೇಳುವಾಗ, ನಡುವೆ ರೈತರ ಬಗ್ಗೆ ಚರ್ಚೆ ಬಂದಾಗ, ಒಂದು ಮಾತು ಹೇಳಿದ್ದರು -’ರೈತ ಯಾಕೆ ಆತ್ಮಹತ್ಯೆ ಮಾಡ್ಕೋಬೇಕು. ಸರಕಾರಗಳೇ ಆತ್ಮಹತ್ಯೆ ಮಾಡ್ಕೋಬೇಕು’ ಅಂತ. ಇನ್‌ಫ್ಯಾಕ್ಟ್ ದಟ್ ಹ್ಯಾಸ್ ಬಿಕಮ್ ದಿ ಸ್ಲೋಗನ್ ಆಫ್ ಅವರ್ ರ‍್ಯಾಲಿ ಟುಮಾರೊ. ಸರಕಾರಗಳು ಅಂತ ಹೇಳಿಲ್ಲ ಅವರು. ಯಾರು ಸಾಲ ಕೊಟ್ಟಿದಾರೋ ಅವರೇ ಆತ್ಮಹತ್ಯೆ ಮಾಡ್ಕೋಬೇಕು ಅಂತ ಹೇಳಿದ್ದಾರೆ. ಅದು ಅತ್ಯಂತ ಸ್ಪಷ್ಟವಾದ ವಿಚಾರ.
ತೇಜಸ್ವಿ ಗ್ಲೋಬಲೈಜೇಶನ್ ಬಗ್ಗೆ ಹಗುರವಾಗಿ ಯಾವುದೋ ಒಂದು ಮೂಡಿನಲ್ಲಿ ಹೇಳಿಕೆ ಮಾಡಿದರು ಅಂತ ನನಗೆ ಅನಸ್ತಾ ಇಲ್ಲ. ಅವರನ್ನ ಓದ್ತಾ ಇರೋರಿಗೆ ಜಾಗತೀಕರಣವನ್ನ ಅವರು ಆಧುನಿಕತೆ ಅಂತ ಅರ್ಥ ಮಾಡಿಕೊಳ್ಳುತಿದ್ದಾರಾ ಅಂತ ಸಂಶಯ.

ಅದೇ ಬರೋದು ತಾಪತ್ರಯ. ಜಾಗತೀಕರಣಕ್ಕೆ ಕಾರಣ ಆಗಿರೋವಂತಹ ಒಪ್ಪಂದ ಪತ್ರ ಅಥವಾ ಟ್ರೀಟಿನಲ್ಲಿ ಇರೋವಂಥ ಎಲ್ಲ ಅಂಶಗಳನ್ನು ಸಂಪುರ್ಣವಾಗಿ ಅಧ್ಯಯನ ಮಾಡಿದರೇನೇ ಜಾಗತೀಕರಣದ ಬಗ್ಗೆ ಸ್ಪಷ್ಟತೆ ಬರೋದು. ಆ ಕೆಲಸಾನ ನಮ್ಮ ದೇಶದಲ್ಲಿ ಮಾಡಿರೋದು ಬಹಳಾ ಕಡಿಮೆ. ಉದಾಹರಣೆಗೆ ಡಬ್ಲೂಟಿ ಟ್ರೀಟಿ. ಅದು ಸುಮಾರು ೫೬೦ ಪುಟ ಇದೆ. ಇದು ಇಂಗ್ಲಿಷಿನಲ್ಲಿ ಕಬ್ಬಿಣದ ಕಡಲೆ. ವೈದಿಕ ಭಾಷೆ ತರಹ ಅನ್ನಬಹುದು. ಅದನ್ನ ಸಂಪೂರ್ಣ ಅರ್ಥಮಾಡಿಕೊಂಡು ಅಬಿsಪ್ರಾಯ ವ್ಯಕ್ತಪಡಿಸಿರೋರು ಬಹಳ ಕಡಿಮೆ. ಸರಕಾರಿ ಮಟ್ಟದಲ್ಲೂ ನಾವು ಸಂಬಳ ಕೊಟ್ಟು ಇಟ್ಟುಕೊಂಡಿರೊ ಅರ್ಥಶಾಸ್ತ್ರಜ್ಞರೂ ಈ ಕೆಲಸ ಮಾಡಿಲ್ಲ. ಹಾಗಾಗಿ ತಪುಗಳಾಗ್ತವೆ. ನನಗೆ ಅನಿಸೋದು ತೇಜಸ್ವೀನೂ ಓದಿಲ್ಲ ಅಂತ. ಓದಿದ್ದರೆ ಅವರು ಆ ಅಬಿsಪ್ರಾಯ ಹೇಳ್ತಿರಲಿಲ್ಲ.

ತೇಜಸ್ವಿ ಲಂಕೇಶ್ ಅನಂತಮೂರ್ತಿ ಮುಂತಾದ ನಮ್ಮ ಲೇಖಕರು ಸಮಾಜಶಾಸ್ತ್ರಜ್ಞರ ಕೆಲಸಾನೂ ಮಾಡಿಕೊಂಡು ಬಂದಿದಾರೆ. ಆದರೆ ಅಂತಾರಾಷ್ಟ್ರೀಯ ರಾಜಕಾರಣದ ವಿಷಯ ಬಂದಾಗ, ಇವರು ಒಂದು ಬಗೆಯ ಅಮಾಯಕ ಹೇಳಿಕೆಗಳನ್ನ ಕೊಡೋದು ಕಾಣ್ತದೆ. ಇದಕ್ಕೆ ಕಾರಣ ಅಧ್ಯಯನದ ಕೊರತೇನಾ? ಅಥವಾ ಚಳುವಳಿಗಳ ಜತೆ  ಸಂಪರ್ಕ ಕಡಿಮೆಯಾಗಿರೋದಾ?

ನಿಜ, ಚಳುವಳಿಗಳ ಜತೆ ಸಂಬಂಧ ದೂರವಾದಾಗ ಹೀಗಾಗುತ್ತೆ. ಅವರು ಸ್ವತಃ ಅಧ್ಯಯನ ಮಾಡೋಲ್ಲ ಅಥವಾ ಅಧ್ಯಯನ ಮಾಡಿರೋವಂಥ ಚಳುವಳಿಗಳಲ್ಲಿ ಸಂಬಂಧಾನೂ ಇಟ್ಟುಕೊಳ್ಳೋಲ್ಲ. ಅದರಿಂದಾಗುವ ತಪುಗಳು ಇವು.

ಒಬ್ಬ ಚಳುವಳಿಗಾರನಾಗಿ ಕನ್ನಡದ ಲೇಖಕರು ಬುದ್ಧಿಜೀವಿಗಳು ಸಮಾಜ ಹಾಗೂ ವ್ಯವಸ್ಥೆಯ ಜತೆ ಇರಿಸಿಕೊಂಡಿರೋ ಸಂಬಂಧವನ್ನು ಹ್ಯಾಗೆ ವಿಶ್ಲೇಷಣೆ ಮಾಡತೀರಿ?

ಕರ್ನಾಟಕ ಲೇಖಕರುಗಳಲ್ಲಿ ಒಂದು ಅನ್‌ಡಿಸೈರಬಲ್ ಟ್ರೆಂಡ್ ಅಂತೀವಲ್ಲ, ಅಪೇಕ್ಷಣೀ ಯವಲ್ಲದಂಥ ಒಂದು ನಡತೆ, ಅದು ಕಾಣಿಸಿಕೊಳ್ಳೋದಿಕ್ಕೆ ಶುರುವಾಗಿದೆ. ಚಳುವಳಿಗಳಿಗೂ ಅವರಿಗೂ ನಡುವೆ ಕಂದರ ಪ್ರಾರಂಭವಾಗಿದೆ. ಇದು ಕೆಲವು ಚಳುವಳಿಗಳು ಕ್ಷೀಣ ಆಗಲಿಕ್ಕೂ ಕಾರಣ ಆಗಿದೆ. ಇದಕ್ಕೆ ಮುಖ್ಯ ಕಾರಣ, ವ್ಯವಸ್ಥೆ ಜೊತೆ ಹೊಂದಾಣಿಕೆ. ದಲಿತ ಚಳುವಳಿ ನಾಶವಾಗೋದಕ್ಕೆ ಕಾರಣ ವ್ಯವಸ್ಥೆ ಜೊತೆ ಹೊಂದಾಣಿಕೆ. ಪವರ್ ಪಾಲಿಟಿಕ್ಸ್ ಬಗ್ಗೆ, ರಾಜಕೀಯ ಪಕ್ಷಗಳ ಬಗ್ಗೆ, ಸ್ಪಷ್ಟವಾದಂಥ ಒಂದು ನಿಲುವು ತಾಳದೇ ಇರೋದು ನಮ್ಮ ಬುದ್ಧಿಜೀವಿಗಳು ಮಾಡ್ತಾ ಇರೋ ತಪು. ಬೇರೆ ದೇಶದ ಬುದ್ಧಿಜೀವಿಗಳಿಗೆ ಹೋಲಿಸಿದರೆ, ಜನಾಂದೋಳನಗಳಲ್ಲಿ ಭಾಗವಹಿಸದೇ  ಇರೋದು ಕಾಣ್ತಿದೆ. ಒಂದು ಸಾರಿ ಡಾ ಎಚ್ ನರಸಿಂಹಯ್ಯನವರು ಬಹಳ ದೊಡ್ಡ ಭಾಷಣ ಮಾಡಿದರು ಜಾಗತೀಕರಣದ ವಿರುದ್ಧ. ನರಸಿಂಹಯ್ಯ ಗಾಂದಿsವಾದಿ ಅಂತಲೇ ಬರೀತಾರೆ ಇವತ್ತಿಗೂ. ಆನಂತರ ನಾನು ಮಾತಾಡೋ ದಿತ್ತು. ಅವರ ಎದುರಿಗೇನೇ ಹೇಳಿದೆ : ’ಯಾಕೆ ನಮ್ಮ ದೇಶದ ಬುದ್ಧಿಜೀವಿಗಳಿಗೂ, ಬೇರೆ ದೇಶದ ಬುದ್ಧಿಜೀವಿಗಳಿಗೂ ವ್ಯತ್ಯಾಸ ಬರುತ್ತೆ? ಬರ್ಟಂಡ್ ರಸೆಲ್ ಸಾಯೋಕೆ ಮುಂಚೆ ಇಂಗ್ಲೆಂಡಿನ ರಸ್ತೆಗಳಲ್ಲಿ ಚಳುವಳಿ ಮಾಡಿದರು, ವಿಯಟ್ನಾಂ ವಾರ್ ವಿರುದ್ಧ. ನಮ್ಮ ದೇಶದ ಬುದ್ಧಿಜೀವಿಗಳಿಗೆ ಏನಾಗಿದೆ?’ ನರಸಿಂಹಯ್ಯನವರು ಇಷ್ಟೊಂದು ಮಾತಾಡುತ್ತಾರೆ. ಅವರು ಜಾಗತೀಕರಣದ ವಿರುದ್ಧ ನಡೀತಾ ಇರೋ ಚಳುವಳಿಗಳಲ್ಲಿ ಭಾಗವಹಿಸಬೇಕು; ಅದಾದ ಮೇಲೆ ಅವರು ಮತ್ತೆ ಮಾತಾಡಿದರು. ’ಇಲ್ಲ ನನ್ನಿಂದ ಭಾಗವಹಿಸೋಕೆ ಆಗಲ್ಲ.’ ಸೀ, ಈ ಧೋರಣೆಯಿದ್ದಾಗ ಕಂದರ ತನ್ನಿಂದ ತಾನೇ ಸೃಷ್ಟಿಯಾಗುತ್ತೆ. ಆ ತಪು ಮಾಡಬಾರದು ಅಂತ ನಮ್ಮ ಬುದ್ಧಿಜೀವಿಗಳಿಗೆ ವಿನಂತಿ ಮಾಡ್ಕೋಬಹುದೇನೊ ಈ ಸಂದರ್ಭದಲ್ಲಿ.
ಕರ್ನಾಟಕದಲ್ಲಿ ೮೦ರ ದಶಕದಲ್ಲಿ ಹುಟ್ಟಿದ ಬಂಡಾಯ ಸಾಹಿತ್ಯ ಚಳುವಳಿ, ದಲಿತ ಚಳುವಳಿ, ಭಾಷಾ ಚಳುವಳಿ, ಆನಂತರ ಬಂದ ರೈತಚಳುವಳಿ ಇವೆಲ್ಲ ಈಗ ೞsದ್ರ ಆಗಿವೆ. ಇದಕ್ಕೆ ಕಾರಣ ಈ ಚಳುವಳಿಯ ತಾತ್ವಿಕ ಸ್ವರೂಪದಲ್ಲಿ ಇದೆಯೋ ಅಥವಾ ದೇಶದ ರಾಜಕೀಯ ಪರಿಸರದಲ್ಲಿದೆಯೊ?

ನೀವು ಹೇಳಿದ ಬಂಡಾಯ ಚಳುವಳಿ ಡಿಸಿಂಟಿಟಿಗ್ರೇಟ್ ಆಗಿರಬಹುದು. ದಲಿತ ಚಳುವಳಿ ಡಿಸಿಂಟಿಗ್ರೇಟ್ ಆಗಿರಬಹುದು. ರೈತ ಚಳುವಳಿ ಮಾತ್ರ ಆಗಿಲ್ಲ. ನಾಲ್ಕು ಸಾರಿ ಅದಕ್ಕೆ ಸ್ವಲ್ಪ ತಲೆನೋವುಗಳು ಬಂದರೂನೂ ಡಿಸಿಂಟಿಗ್ರೇಟಂತೂ ಆಗಿಲ್ಲ. ಸಣ್ಣ ಸಣ್ಣ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಆಚೆ ಹೋಗಿವೆ. ಇದು ಪ್ರತಿ ವರ್ಷಕ್ಕೊಮ್ಮೆ ಅದೂ ಚುನಾವಣೆಗೆ ಪೂರ್ವಭಾವಿಯಾಗಿ ಇದಾಗುತ್ತೆ. ಇನ್ನೂ ಎರಡು ವರ್ಷಕ್ಕೆ ಮುಂದಿನ ಚುನಾವಣೆ ವೇಳೆಗೆ, ಐದನೇ ಗುಂಪು ಆಚೆ ಹೋಗಬಹುದು. ಕೆಲವು ವ್ಯಕ್ತಿಗಳು ಆಚೆ ಹೋಗಬಹುದು. ಆದರೆ ರೈತ ಚಳುವಳೀನ ಗಟ್ಟಿಯಾಗಿ ಇಟ್ಟಿರೋದು ಒಳಗೆ ಇರೋವಂಥ ಕಾರ್ಯಕರ್ತರು. ಅವರಿಗೆ ಇರೋವಂಥ ವೈಚಾರಿಕ ಸ್ಪಷ್ಟತೆ, ಸಂಘಟನಾತ್ಮಕ ನಿಲುವು, ನಮ್ಮ ಇವತ್ತಿನ ರಾಜಕೀಯ ಪಕ್ಷಗಳ ಬಗ್ಗೆ ಇರೋವಂಥ ಸ್ಪಷ್ಟ ನಿಲುವು, ಬೇರೆ ನೀವ್ಹೇಳಿದಂಥ ಚಳುವಳಿಗಳಿಗೆ ಇಲ್ಲ. ಬಂಡಾಯ ಸಾಹಿತಿಗಳಿಗೆ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟವಾದ ನಿಲುವು ಇದೆಯಾ? ಒಂದು ಸಂಘಟನೆಯಾಗಿ ದಲಿತ ಚಳುವಳಿಯಲ್ಲಿ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟ ನಿಲುವು ಇದೆಯಾ?

ಪವರ್ ಪಾಲಿಟಿಕ್ಸಿನ ಬಗ್ಗೆ ರಾಜಕೀಯ ಪ್ರe ಬೆಳೆಸಿಕೊಳ್ಳೋದು ಬೇರೆ. ಪವರ್ ಪಾಲಿಟಿಕ್ಸಿನಲ್ಲಿ ನೇರವಾಗಿ ದುಮುಕುವುದು ಬೇರೆ. ನೀವು ಚುನಾವಣೆಗೆ ನಿಂತಿದ್ರಿ. ಗೆದ್ರಿ, ಸೋತಿರಿ. ಚಳುವಳಿಗಳು ಜನಾಬಿsಪ್ರಾಯ ರೂಪಿಸುವ ಕೆಲಸವನ್ನು ಮಾಡ್ತಾ ಒತ್ತಡದ ಗುಂಪುಗಳಾಗಿ ಪ್ರಭುತ್ವಗಳನ್ನು ನಿಯಂತ್ರಿಸಬಲ್ಲ ಜನಾಂದೋಲನಗಳಾಗಿ ಇರುವುದು ಈ ಹೊತ್ತಲ್ಲಿ ಹೆಚ್ಚು ಅಗತ್ಯ ಅನಿಸೋದಿಲ್ಲವಾ?

ನೋ. ನಾಟ್ ನೆಸೆಸರೀಲಿ. ಯಾವುದೇ ಒಂದು ಆಂದೋಲನ ಆದರೂನೂ ಜನಾಬಿsಪ್ರಾಯ ರೂಪಿಸೋವಂಥ ಒಂದು ಚಳುವಳಿ ನಡೀತಾನೆ ಇರಬೇಕು. ಅದರ ಜೊತೆಗೆ ಅದಿsಕಾರ ಗ್ರಹಣಾನೂ ಒಂದು ಮುಖ್ಯ ಭಾಗ. ಅದಿsಕಾರ ಗ್ರಹಣ ಇಲ್ಲದೆ ಯಾವುದೇ ಚಳುವಳಿ ತನ್ನ ಆಶೋತ್ತರಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳೋದು ಅಸಾಧ್ಯ. ಆದರೆ ಅದಿsಕಾರ ಗ್ರಹಣ ಯಾವ ರೀತಿ ಮಾಡಬೇಕು ಇದು ಮುಖ್ಯ ಪ್ರಶ್ನೆ. ಕನ್ನಡ ಚಳುವಳಿಯವರಿಗೆ ನಾನು ಇದೇ ಮಾತು ಹೇಳಿದ್ದೆ: ’ಕಾಲಕಾಲಕ್ಕೆ ನೀವು ಯಾವುದೇ ಪಕ್ಷದ ಸರಕಾರ ಇದ್ದರೂನೂ ಹೊಂದಾಣಿಕೆ ಮಾಡಿಕೊಳ್ಳೋದು, ಆ ಸರಕಾರದಲ್ಲಿ ಕೆಲವು ಹುದ್ದೆಗಳಿಗೆ ಪ್ರಯತ್ನ ಮಾಡೋದು, ಇದನ್ನು ಎಷ್ಟು ಕಾಲ ಮಾಡ್ತೀರಿ? ಇದನ್ನ ಬಿಟ್ಟು ನೀವೇ ಒಂದು ರಾಜಕೀಯ ಶಕ್ತಿಯಾಗಿ ಉಳಿದಿದ್ದರೆ ಕನ್ನಡದ ಸ್ಥಿತಿ ಬೇರೇನೆ ಆಗ್ತಿತ್ತು.’

ಚಳುವಳಿಗಳು ಸದ್ಯ ಇರುವ ರಾಜಕೀಯ ಸಮೀಕರಣದಲ್ಲಿ ತಮ್ಮ ಆಶಯ ಹೇಗೆ ಈಡೇರಿಸಿಕೊಳ್ಳೋದು ಅಂತ ಯೋಚನೆ ಮಾಡದೆ, ತಾವೇ ಪರ್ಯಾಯ ರಾಜಕೀಯ ಶಕ್ತಿಯಾಗುವುದು ಹೇಗೆ ಎಂಬ ಚಿಂತನೆ ಮುಖ್ಯ ಅಂತಾದರೆ, ಈಗಿರುವ ಚುನಾವಣಾ ರಾಜಕೀಯದ ಮಾದರಿಯನ್ನು ಒಪ್ಪಿಕೊಂಡೇ ಈ ರಾಜಕೀಯ ಪರ್ಯಾಯವನ್ನು ಮಾಡಬೇಕು ಅಂತ ಆಯಿತಲ್ಲವಾ?

ಹೌದು. ಮೂಲಭೂತ ಪ್ರಶ್ನೆ, ಪಾರ್ಲಿಮೆಂಟರಿ ಡೆಮಾಕ್ರಸಿಯ ಬಗ್ಗೆ ನಿಮಗೆ ವಿಶ್ವಾಸ ಇದೆಯೋ ಇಲ್ಲವೋ ಅನ್ನೋದು. ಸಂಸದೀಯ ಪ್ರಜಾಪ್ರಭುತ್ವಾನ ಇದೇ ಅತ್ಯುತ್ತಮ ಮಾರ್ಗ ಅಂತ ಒಪ್ಪಿದ ಮೇಲೆ, ಗುಣಾತ್ಮಕವಾಗಿ ಅದನ್ನ ಹ್ಯಾಗೆ ಬದಲಾವಣೆ ಮಾಡಬೇಕು? ಬದಲಾಗಿ ಈ ಸಂಸದೀಯ ಪ್ರಜಾಪ್ರಭುತ್ವಾನ ಹಾಳಗೆಡವತಾ ಇರೋ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಕೊಂಡು ಈ ಚಳುವಳಿಗಳೂ ಹಾಳಾಗ್ತಾ ಇವೆಯೋ ಇಲ್ಲವೋ? ರೈತ ಚಳುವಳಿ ಮಾಡ್ತಾ ಇರೋ ಕೆಲಸಾನೆ ಇದು. ಪ್ರಜಾಪ್ರಭುತ್ವದಲ್ಲಿ ಮತದಾರ ಯಾವ ರೀತಿ ಗುಣಮುಖವಾಗಿ ಪರಿವರ್ತನೆ ಆಗಬೇಕು? ಇದನ್ನ ಪ್ರತಿ ಸಭೇನಲ್ಲಿ ಪ್ರತಿನಿತ್ಯ ನಾವು ಮಾತಾಡ್ತಾ ಇದೀವಿ ಜನರ ಜೊತೆ. ಆ ಮೂಲಕ ನಾವು ಸಂಸದೀಯ ಪ್ರಜಾಪ್ರಭುತ್ವವನ್ನು ಗುಣಾತ್ಮಕವಾಗಿ ಬದಲಾವಣೇನೂ ಮಾಡಬಹುದು. ಜೊತೆಗೆ ಅದಿsಕಾರ ಗ್ರಹಣಾನೂ ಮಾಡಬಹುದು.

ರಾಜಕೀಯ ಪರ್ಯಾಯವನ್ನು ಸೃಷ್ಟಿ ಮಾಡೋಕೆ ನೀವು ಹೇಳತಾ ಇರೋ ದಾರಿಯನ್ನು ಒಪೊದಾ ದರೆ, ಈ ಕೆಲಸವನ್ನು ಯಾವುದೋ ಒಂದು ಚಳುವಳಿ, ಉದಾಹರಣೆಗೆ ರೈತ ಚಳುವಳಿ, ಮಾತ್ರ ಮಾಡೋಕಾಗುತ್ತಾ ಅಥವಾ ಎಲ್ಲ ಜನಪರ ಚಳುವಳಿಗಳು ಸೇರಿ ಈ ಕೆಲಸ ಮಾಡುವಂಥದ್ದಾ?

ಇಲ್ಲ, ಸಮಾನ ದೃಷ್ಟಿಕೋನ ಇರೋವಂಥ ಜನಾಂದೋಲನಗಳ ಜೊತೆ ಕೈ ಜೋಡಿಸುವ ಮೂಲಕ ಈ ಕೆಲಸ ಸುಲಭ ಅಗುತ್ತೆ. ನಾವು ತಯಾರಿದೀವಿ ಕೈ ಜೋಡಿಸೋದಿಕ್ಕೆ. ಆ ಗುಣಗಳು ಇರೋವಂಥ ಆಂದೋಲನಗಳು ನಮ್ಮ ಮುಂದೆ ಕಾಣಿಸ್ತಾ ಇಲ್ಲ ಕರ್ನಾಟಕದಲ್ಲಿ.

ಹೀಗೆ ಸಮಾನ ಮನಸ್ಕ ಆಂದೋಲನಗಳನ್ನ ಒಂದು ಕೇಂದ್ರಕ್ಕೆ ತರೋಕೆ ನಾಯಕತ್ವ ಇರೋ ವ್ಯಕ್ತಿಗಳ ಅಗತ್ಯಾನೂ ಇರುತ್ತೆ. ಅನೇಕ ಸಲ ನಿಮ್ಮ ಹಠಮಾರಿತನದಿಂದ ಇಂತಹ ಕೆಲಸಗಳು ಸಾಧ್ಯವಾಗತಾ ಇಲ್ಲ ಅಂತ ಕೇಳಿದೇನೆ.

ಹೌದು ನಾನು ಹಠಮಾರಿ. ಆದರೆ ಚಟಮಾರಿ ಅಲ್ಲ; ಚಟಮಾರಿ ಅಲ್ಲದ ಕಾರಣಕ್ಕೇ ನಾನು ಹಠಮಾರಿ ತರಹ ಕಾಣಿಸ್ತೀನಿ. ಒಬ್ಬ ಚಳುವಳಿಗಾರನಲ್ಲಿ ಇರಬೇಕಾದದ್ದು ಅತ್ಯಂತ ಮುಖ್ಯವಾದ ಗುಣ ಹಠ. ಚಟ ಅಲ್ಲ. ರೈತ ಚಳುವಳಿಯಿಂದ ಚಟವಾದಿಗಳು ಆಚೆ ಹೋಗಿದಾರೆ. ನಾನು ಯಾವ ಚಳುವಳೀನಲ್ಲಿ ಇದೀನೋ, ಅಲ್ಲಿ ಚಟವಾದಿಗಳಿಗೆ ಅವಕಾಶವಿಲ್ಲ. ಹಠವಾದಿಗಳಿಗೆ ಇದೆ. ಆಚೆ ಹೋದವರು ನನ್ನನ್ನು ಹಠವಾದಿ ಅಂತಾರೆ. ಸರ್ವಾದಿsಕಾರಿ ಅಂತಾರೆ. ಹೌದು ನಾನು ಸರ್ವಾದಿsಕಾರಿ. ಯಾವುದರ ಬಗ್ಗೆ? ಶಿಸ್ತಿನ ಬಗ್ಗೆ. ಚಾರಿತ್ರ್ಯದ ಬಗ್ಗೆ. ಈ ಗುಣಗಳು ಇರಬೇಕೊ ಬೇಡವೊ?

ನಿಮ್ಮ ಪ್ರಕಾರ ಜನಪರ ಚಳುವಳಿಗಳು ಒಂದು ರಾಜಕೀಯ ಪರ್ಯಾಯದತ್ತ ಹೋಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ಯಾವುದು?

ಮೊದಲು ವೈಚಾರಿಕ ಸ್ಪಷ್ಟತೆ, ವೈಚಾರಿಕ ಹೊಂದಾಣಿಕೆ ಆಗಬೇಕು. ಅನಂತರ ಅದರ ಆಧಾರದ ಮೇಲೆ ಕಾರ್ಯಕ್ರಮಗಳನ್ನ ರೂಪಿಸಬೇಕು. ಎರಡು ಮೂರು ವರ್ಷ ಸತತ ಕೆಲಸ ಮಾಡಿದರೆ, ನಾವು ಕರ್ನಾಟಕದ ಪ್ರಜಾಪ್ರಭುತ್ವಾನ ಗುಣಾತ್ಮಕವಾಗಿ ಬದಲಾವಣೆ ಮಾಡಬಹುದು. ಅಷ್ಟು ಪ್ರಭಾವ ಬೀರಬಲ್ಲಂತಹ ಬುದ್ಧಿಜೀವಿಗಳ ಒಂದು ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ. ಆದರೆ ಈ ಕೆಲಸಾನ ಅವರು ಕೈಗೆ ತಗೊಂಡಿಲ್ಲ. ಇವತ್ತಿಗೂ ಎಲ್ಲರೂ ಈ ಒಂದು ವೈಚಾರಿಕ ಸ್ಪಷ್ಟತೆಯಿಂದ ಕೈಜೋಡಿಸಿದರೆ, ಆರೋಗ್ಯಕರವಾದಂತಹ ಪರ್ಯಾಯ ವ್ಯವಸ್ಥೆಯನ್ನ ನಾವು ಕರ್ನಾಟಕ್ಕೆ ಕೊಡಬಹುದು. ಆ ವಿಶ್ವಾಸ ನನಗಿದೆ.

ಸಮಾನ ಮನಸ್ಕರು ಒಂದು ಕಡೆ ಸೇರೋಕೆ ಕಾಮನ್ ಪ್ರೋಗ್ರಾಂ ಇರುವಂತೆ ಕಾಮನ್ ಎನಿಮಿ ಕೂಡ ಇರಬೇಕಾಗುತ್ತೆ. ಅಂತಹ ಸಮಾನ ಶತ್ರು ಯಾರು?

ಈಗಿರೋವಂಥ ರಾಜಕೀಯ ಪಕ್ಷಗಳು. ಅವನ್ನು ಸಾಕ್ತಾ ಇರೋವಂತಹ ಹಿತಾಸಕ್ತಿಗಳು. ಕೆಲವು ವೆಸ್ಟೆಡ್ ಇಂಟರೆಸ್ಟ್‌ಗಳು ಎಲ್ಲ ರಾಜಕೀಯ ಪಕ್ಷಗಳನ್ನು ಸಾಕ್ತಾಯಿವೆ. ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡಿಲ್ಲ ಇವತ್ತಿಗೂ. ಅವೆಲ್ಲ ಯಾರದೋ ಏಜೆಂಟ್ ಆಗಿ ಕೆಲಸ ಮಾಡೋವಂಥ ಗುಂಪುಗಳಾಗಿವೆ ಹೊರತು, ಒಂದು ರಾಜಕೀಯ ಪಕ್ಷಕ್ಕೆ ಬೇಕಾದಂತಹ ಚೌಕಟ್ಟಿನಲ್ಲಿ ಕೆಲಸ ಮಾಡೋವಂತಹ ಗುಂಪುಗಳಾಗಿ ಉಳಿದಿಲ್ಲ. ಆ ಕಾರಣ ನಮ್ಮ ಶತ್ರುಗಳು ಯಾರು ಅನ್ನೋದು ಸ್ಪಷ್ಟ. ಆದರೆ ಚಳುವಳಿಗಳ ಶಕ್ತಿ ಮುಂದೆ ಆ ಶತ್ರುಗಳು ನಿಲ್ಲಕ್ಕೆ ಸಾಧ್ಯ ಇಲ್ಲ. ಆ ಶಕ್ತಿಗಳ ವಿರುದ್ಧ ಜನಾಬಿsಪ್ರಾಯ ಈಗಾಗಲೇ ಸಿದ್ಧ ಆಗಿದೆ. ಆದರೆ ಈ ಜನಾಬಿsಪ್ರಾಯಕ್ಕೆ ಒಂದು ದಾರಿ ತೋರಿಸೋವಂಥ ಒಂದು ವೇದಿಕೆ ಸೃಷ್ಟಿಯಾಗಿಲ್ಲ ಅಷ್ಟೆ.
ರೈತ ಸಂಘವು ರಾಜಕಾರಣದಲ್ಲಿ ಇರಿಸಿಕೊಂಡಿರುವ ಎಚ್ಚರ, ತೋರಿಸುವ ಪ್ರe ಇವೆಲ್ಲ ಜನಪರ ವಾಗಿದೆ. ಬಹಳ ಪ್ರಖರವಾಗಿದೆ, ಸರಿ. ಆದರೆ ನಮ್ಮ ಹಳ್ಳಿಗಾಡಿನ ಜಾತಿ ಸಮಾಜದಲ್ಲಿ, ಭೂರಹಿತ ಕೂಲಿಕಾರ್ಮಿಕರು ಇರೋ ಸಮಾಜದಲ್ಲಿ, ಅವರ ಪಾತ್ರದ ಬಗ್ಗೆ ಈ ಜನಪರತೆ ಅನ್ನೋದು ಕಾಣತಾ ಇಲ್ಲ.

 ರೈತಸಂಘ ಈಗಲೂ ಊಳಿಗಮಾನ್ಯ ಪದ್ಧತಿಯನ್ನು ಒಪ್ಪಿಕೊಂಡಿರೊ ಭೂಮಾಲೀಕರಿಂದ ತುಂಬಿದೆ ಅಲ್ಲವಾ?

ಹಾಗೇನಿಲ್ಲ. ತಾವು ಗಮನಿಸಿಲ್ಲ ಅಂತ ಕಾಣುತ್ತೆ. ನಮ್ಮ ಸಂಘಟನೆ ಯಾವ್ಯಾವ ಗ್ರಾಮದಲ್ಲಿದೆ, ಅಲ್ಲೆಲ್ಲೂ ಕೋಮುಗಲಭೆ ಆಗಿಲ್ಲ. ಕಾರಣ, ಸಣ್ಣಪುಟ್ಟ ಸಮಸ್ಯೆಗಳು ಹಿಂದಿನಿಂದ ಏನು ಉಳಿದುಕೊಂಡು ಬಂದಿವೆ, ಊಳಿಗಮಾನ್ಯ ಪದ್ಧತಿ ಅಂದರಲ್ಲ, ಅದಕ್ಕಿಂತ ದೊಡ್ಡ ದೊಡ್ಡ ಸಮಸ್ಯೆಗಳ ಕಡೆ ಅವರ ಗಮನ ಬಿದ್ದಿದ್ದರಿಂದ ಈ ಸಾಂಪ್ರದಾಯಿಕ ವೈಷಮ್ಯಗಳು ಅಸಮಾನತೆ ತಾರತಮ್ಯ ಇತ್ಯಾದಿ ಹಳ್ಳಿಗಳಲ್ಲಿ ಕಾಣಿಸ್ತವೆ. ಅವು ಕ್ರಮೇಣ ಅದೃಶ್ಯ ಆಗ್ತಾಯಿವೆ. ಹಾಗಾಗಿ ನಮ್ಮ ಸಂಘ ಎಲ್ಲೆಲ್ಲಿದೆಯೊ ಅಲ್ಲಿ ಕೋಮು ಗಲಭೆ ಮಾತ್ರವಲ್ಲ, ಜಾತಿಗಲಭೆಗಳೂ ಆಗಿಲ್ಲ. ಚಳುವಳಿನಲ್ಲಿ ಕಂಡುಬರುವಂಥ ಈ ನಿಲುವು ನಿಧಾನಗತಿಯಲ್ಲೇ ಆಗಬಹುದು. ಅಂತೂ ಆಗ್ತಾ ಇದೆ.

ನನ್ನ ಪ್ರಶ್ನೆಯ ಉದ್ದೇಶ ಭೂಹಂಚಿಕೆ ಬಗ್ಗೆ ಸಂಘದ ನಿಲುವು ಏನು ಅಂತ ತಿಳಿಯೋದಾಗಿದೆ ಸಾರ್. ಕರ್ನಾಟಕದಲ್ಲಿ ಕಾಗೋಡು ಸತ್ಯಾಗ್ರಹ ಆಗಿದೆ. ದೇವರಾಜ ಅರಸರು ತಂದ ಭೂಸುಧಾರಣೆ ಆಗಿದೆ. ಆದರೂ ಭೂಹಂಚಿಕೆ ಅನ್ನೋದು ಪೂರ್ಣ ರೀತಿಯಲ್ಲಿ ನಡೆದಿಲ್ಲ.

ನಮ್ಮ ದೃಷ್ಟಿಕೋನದ ಪ್ರಕಾರ ಭೂಮಿತಿ ಎಷ್ಟಿರಬೇಕೆಂದರೆ, ಒಂದು ಕುಟುಂಬಕ್ಕೆ ಹೊರಗಿನಿಂದ ಕೂಲಿ ಇಲ್ಲದೆ ಕೆಲಸ ಮಾಡುವಷ್ಟು ಹಿಡುವಳಿ ಇರಬೇಕು. ಇದು ಒಂದು ಕುಟುಂಬದ ಹಿಡುವಳಿಗೆ ನಾವು ಕೊಟ್ಟಿರೋವಂಥ ವಿಶ್ಲೇಷಣೆ. ಆಜ್ ಮಚ್ ಲ್ಯಾಂಡ್ ಆಜ್ ಎ ಫ್ಯಾಮಿಲಿ ನೀಡ್ಸ್, ವಿತೌಟ್ ಹೈರಿಂಗ್ ಎಕ್ಸಟ್ರನಲ್ ಲೇಬರ್. ಇದು ಸಮಾಜವಾದದ ಕೊನೇ ಹಂತ. ನಿಮಗೆ ಒಂದು ಉದಾಹರಣೆ ಹೇಳಬೇಕು ಭೂಮಿ ಬಗ್ಗೆ ನಮ್ಮ ನಿಲುವು ಏನು ಅಂತ. ನಾವು ಚಿಕ್ಕಮಗಳೂರಿನಲ್ಲಿ ಬೆಂಬಲ ಕಳಕೊಂಡೆವು. ಕಾರಣ, ಕಾಪಿs ತೋಟಗಳಿಗೂ ಭೂಸುಧಾರಣೆ ಅನ್ವಯಿಸಬೇಕು ಅಂತ ನಾವು ಘೂಷಣೆ ಹಾಕಿದ್ದು. ಆ ದಿವಸದಿಂದ ಕಾಪಿs ತೋಟದ ರೈತರೆಲ್ಲ ನಮ್ಮನ್ನು ಬಿಟ್ಟು ಹೋಗಿಬಿಟ್ಟರು. ಇವತ್ತಿಗೂ ಅದೇ ನಿಲುವು ನಮ್ಮದು. ಲ್ಯಾಂಡ್ ರಿಫಾರ್ಮ್ಸ್ ಶುಡ್ ಬಿ ಅಪ್ಲೈಡ್ ಟು ಈವನ್ ಪ್ಲಾಂಟೆಷನ್ಸ್ . ಇನ್ನೂ ಭೂಸುಧಾರಣೆ ಆಗಬೇಕು. ಈಗ ಆಗಿರೋದು ಅಂತ ಸಮಪರ್ಕವಾದ ಭೂ ಸುಧಾರಣೆ ಏನಲ್ಲ. ಲ್ಯಾಂಡ್ ಟು ದ ಟಿಲ್ಲರ್ ಅಂತ ಏನಂತೀವಿ, ಆ ಸುಧಾರಣೆ ಇನ್ನೂ ಆಗಿಲ್ಲ. ಕಾಗೋಡು ಸತ್ಯಾಗ್ರಹ, ಅದು ಗೇಣಿದಾರರ ಚಳುವಳಿ ಅಷ್ಟೇ ಹೊರತು, ಉಳುವವನ ಚಳುವಳಿ ಅಲ್ಲ. ಆದಾದ ಮೇಲೆ ಟೆನೆನ್ಸಿ ಆಕ್ಟ್ ಬಂದಿದ್ದು. ದೇವರಾಜ ಅರಸು ಮಾಡಿದ್ದೂನೂ ಅಷ್ಟೇನೆ. ಟೆನೆನ್ಸಿ ಲಾ ಅಂತ ತಂದು ಆಬ್ಸೆಂಟಿವ್ ಲ್ಯಾಂಡ್ ಲಾರ್ಡಿಸಂ ತೆಗೆದುಹಾಕೋ ಪ್ರಯತ್ನ ಆಯ್ತೆ ಹೊರತು, ಲ್ಯಾಂಡ್ ಟು ದಿ ಟಿಲ್ಲರ್ ಆಗಲೇ ಇಲ್ಲ. ಇನ್ನೂ ಆಗಿಲ್ಲ.

ನೀವು ಹೇಳಿದಿರಿ, ಗುಣಾತ್ಮಕ ಬದಲಾವಣೆಗೆ ಬೇಕಾದಂಥ ಬುದ್ಧಿಜೀವಿಗಳ ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ ಅಂತ. ಆದರೆ ಬುದ್ಧಿಜೀವಿ ವರ್ಗದಲ್ಲಿ ಜಾಗತೀಕರಣ ಕುರಿತು ಬಗೆಬಗೆಯ ಅಬಿsಪ್ರಾಯಗಳಿವೆ. ಸೈದ್ಧಾಂತಿಕ ಗೊಂದಲ ಇದೆ. ನೀವು ಇಂಟರ್‌ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋರು. ಪಾಠ ಹೇಳದೋರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರೈತಚಳುವಳಿಗಾರನಾಗಿ ಕೆಲಸ ಮಾಡದೋರು. ಗ್ಲೋಬಲೈಜೇಶನನ್ನ ಹೆಂಗೆ ವಿಶ್ಲೇಷಣೆ ಮಾಡ್ತೀರಿ?

ಗೊಂದಲ ಬರೋದಿಕ್ಕೆ ಕಾರಣ, ನಮ್ಮಲ್ಲಿ ಬಹುಪಾಲು ಅರ್ಥಶಾಸ್ತ್ರಜ್ಞರು ಪ್ರಾಮಾಣಿ ಕರಲ್ಲ. ಅವಕಾಶವಾದಿಗಳು. ಜೊತೆಗೆ ಆತ್ಮವಿಶ್ವಾಸ ಇಲ್ಲದವರು. ಜಾಗತೀಕರಣ ಇಟ್ ಹ್ಯಾಸ್ ಬಿಕಮ್ ಎ ರಿಯಾಲಿಟಿ. ವಿ ಕಾಂಟ್ ಗೋ ಎಗೆನೆಸ್ಟ್ ಇಟ್ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ಟಿರೋರು. ಇದನ್ನು ಕೆಲವು ಎಕಾನಮಿಸ್ಟ್ ಕೆಟ್ಟ ಭಾಷೆ ಉಪಯೋಗಿಸಿ ಹೇಳೋದುಂಟು. ’ಇಫ್ ಯು ಕಾಂಟ್ ರೆಸಿಸ್ಟ್, ಲೆಡೌನ್ ಅಂಡ್ ಎಂಜಾಯ್ ಇಟ್’ ಅಂತ. ಇದಕ್ಕಿಂತ ಹೇಸಿಗೆ ನಿಲುವು ಏನಾದರೂ ಇದೆಯಾ? ಇಂಥ ಅರ್ಥಶಾಸ್ತ್ರಜ್ಞರು ನಮ್ಮ ಸುತ್ತಮುತ್ತ ಇದಾರೆ ಸ್ವಾಮಿ. ಇದು ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ನನಗೆ ಇನ್ನೂ ವಿಶ್ವಾಸ ಇದೆ. ಇಫ್ ಇಂಡಿಯಾ ಟೇಕ್ಸ್ ದಿ ಲೀಡರ್‌ಶಿಪ್ ಆಫ್ ಥರ್ಡ್‌ವರ್ಲ್ಡ್ ಕಂಟ್ರೀಸ್, ವಿ ಕ್ಯಾನ್ ಡೆಸ್ಟ್ರಾಯ್ ದಿಸ್ ಕೈಂಡ್ ಆಫ್ ಗ್ಲೋಬಲೈಜೇಶನ್. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗು ತ್ತೇನೋ. ಒಂದೊಂದು ಸಾರಿ ಧೈರ್ಯವಾಗಿ ಮಾತಾಡೋ ಧ್ವನಿ ಕೇಳ್ತಾ ಇದೆ. ನಮ್ಮ ಸರಕಾರದ ವಕ್ತಾರರಬಾಯಿಂದ,ಯಾರುಅಂತಾರಾಷ್ಟ್ರೀಯ ಸಮಾಲೋಚನೆಗಳಿಗೆ ಹೋಗ್ತಾರೊ ಅವರಿಂದ, ಮತ್ಯಾವುದೋ ಪ್ರೆಶರ್‌ನಿಂದ ಧ್ವನಿ ಕ್ಷೀಣ ಆಗುತ್ತೆ. ಆದರೆ ಇಲ್ಲಿ ಸಮಸ್ಯೆ ಜಾಸ್ತಿ ಜಾಸ್ತಿ ಆಗ್ತಾ, ಜನಾಂದೋಲನದ ಒತ್ತಡಕ್ಕೆ ಅವರೂ ಧೈರ್ಯವಾಗಿ ಮಾತಾಡಲೇ ಬೇಕಾಗುತ್ತೆ. ಸೋ, ಈಗ ಇಂಡಿಯಾ ಮಲೇಶಿಯಾ ಪಾಕಿಸ್ತಾನ ಇವು ಸ್ವಲ್ಪಮಟ್ಟಿಗೆ ನಾಯಕತ್ವ ತಗೊಂಡಿವೆ. ಜಾಗತೀಕರಣದ ಸಮಸ್ಯೆ ಈ ದೇಶಗಳಲ್ಲಿ ಜಾಸ್ತಿ ಆಗ್ತಾ ಆಗ್ತಾ ಇನ್ನೂ ಗಟ್ಟಿ ಧ್ವನಿಯಲ್ಲಿ ಮಾತಾಡ್ಲಿಕ್ಕೆ ಪ್ರಾರಂಭ ಆಗಬಹುದು. ಫೈನಲೀ ಕ್ಯಾಪಿಟಲಿಜಂ ಹ್ಯಾಸ್ ಟು ಕೊಲ್ಯಾಪ್ಸ್; ಅಲಾಂಗ್ ವಿಥ್ ಡಬ್ಲ್ಯೂಟಿಒ ಹ್ಯಾಸ್ ಟು ಕೊಲ್ಯಾಪ್ಸ್. ಆದರೆ ಈ ಕುಸಿತ ಬೇಗ ಆಗೋದಕ್ಕೋಸ್ಕರವಾಗಿ ನಾವು ಮಾಡ್ತಾ ಇರೋ ಚಳುವಳಿಯಿದು. ತಡ ಆದರೆ, ಅವು ಕೊಲ್ಯಾಪ್ಸ್ ಆಗೋಕ್ ಮುಂಚೆ ಸಾಕಷ್ಟು ಹಾನಿ ಮಾಡಿಬಿಡುತ್ವೆ. ಈ ಹಾನಿ ತಪ್ಪಿಸೋಕೋಸ್ಕರ ಈ ಚಳುವಳಿಗಳು.

ಈಗ ಅಫಘಾನಿಸ್ಥಾನದ ಮೇಲೆ ಅಮೆರಿಕ ಭಯೋತ್ಪಾದನೆ ನಿವಾರಣೆ ಹೆಸರಲ್ಲಿ ದಾಳಿ ಮಾಡಿತು. ಇದಕ್ಕೂ ಗ್ಲೋಬಲೈಜೇಶನ್ನಿಗೂ ಇರೋ ಸಂಬಂಧ ಎಂಥದ್ದು?

ನಾವು ಜಾಗತೀಕರಣವನ್ನ ಕಲೋನಿಯಲಿಜಂನ ಮುಂದುವರಿಕೆ ಅಂತ ಕರೀತಾ ಇರೋದು. ಇಟೀಸ್ ಎ ಪ್ರೊಸೆಸ್ ಆಫ್ ಎ ರಿಕಲೋನೈಜೇಶನ್. ಆಫ್ಟರ್ ದಿ ಫಸ್ಟ್ ಫೇಸ್ ಆಫ್ ಕಲೋನೈಜೇಶನ್, ಇದನ್ನ ನಾವು ಗ್ಲೋಬಲೈಜೇಶನ್ ಅಂತ ಅರ್ಥೈಸಿರೋದು. ಈಗ ಇರಾಕ್ ಮೇಲೆ ಯುದ್ಧ ಮಾಡಬೇಕು ಅನ್ನೋದನ್ನ ನಾವು ಅಮೆರಿಕದ ಪೆಟ್ರೊಟೆರರಿಸಂ ಅಂತ ಮಾತ್ರ ನೋಡೋದು. ಅಂಡ್ ದಿ ಬಿಗ್ಗೆಸ್ಟ್ ಟೆರರಿಸ್ಟ್ ಈಜ್ ಜಾರ್ಜ್‌ಬುಶ್. ಅಂಡ್ ದಟೀಸ್ ದಿ ಟ್ರೂತ್. ಇವತ್ತು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಭಯೋತ್ಪಾದಕ ಅಂದರೆ ಅಮೇರಿಕಾನೆ. ಇನ್ನು ಮಿಕ್ಕವರ‍್ಯಾರು ಭಯೋತ್ಪಾದಕರಲ್ಲವೇ ಅಲ್ಲ. ಅವರೆಲ್ಲ ಬೇರೆಬೇರೆ ರೂಪದಲ್ಲಿ ಅಮೇರಿಕದ ಭಯೋತ್ಪಾದನೆಯನ್ನ ವಿರೋಧ ಮಾಡ್ತಾ ಇರೋದು. ಅದರಲ್ಲಿ ಸದ್ದಾಂ ಕೂಡ ಒಬ್ಬರು. ಐ ವುಡ್ ಸೇ ಬಿನ್ ಲ್ಯಾಡೆನ್ ಆಲ್ಸೋ. ನಾನು ಒಂದು ರೀತಿ ಅವರ ಸ್ನೇಹಿತ. ಯಾಕಂದರೆ ಅವರು ಏನು ವಿರೋಧ ಮಾಡ್ತಾ ಇದಾರೊ ಅದನ್ನೇ ವಿರೋಧ ಮಾಡೋನು ನಾನು.

ನೀವು ಈ ಮೀಟರ್ ಅಳವಡಿಕೆಯಂತಹ ರೈತರ ಸಮಸ್ಯೆ ಬಗ್ಗೆ ಚಳುವಳಿ ಮಾಡತೀರಿ. ಅದೇ ಕಾಲಕ್ಕೆ ಈ ಬಗೆಯ ಅಂತಾರಾಷ್ಟ್ರೀಯ ರಾಜಕೀಯವನ್ನು ಕೂಡ ವಿಶ್ಲೇಷಣೆ ಮಾಡತೀರಿ. ಇವೆರಡಕ್ಕೂ ಇರೋ ಸಂಬಂಧವನ್ನ ರೈತರಿಗೆ ಒಂದು ರಾಜಕೀಯ ಪ್ರeಯಾಗಿ ಕೊಡೋ ವಿಷಯದಲ್ಲಿ ನಿಮ್ಮ ಅನುಭವ ಏನು?

ಕರ್ನಾಟಕದಲ್ಲಿ ಈ ಕೆಲಸ ಮಾಡ್ತಾ ಇರೋದು ರೈತ ಚಳುವಳಿ ಒಂದೇ. ಇದರ ಬಗ್ಗೆ ಅಧ್ಯಯನ ಶಿಬಿರಗಳನ್ನ ಇಟ್ಕೋತಾ ಇರೋದು ರೈತ ಚಳುವಳಿ ಒಂದೇ. ಮಿಕ್ಕ ಯಾವ ಸಂಘಟನೇನೂ ಈ ಕೆಲಸ ಮಾಡ್ತಾ ಇಲ್ಲ.

ಅಲ್ಲ. ರೈತರಿಗೆ ಇದನ್ನು ಕೊಡೋ ವಿಷಯದಲ್ಲಿರೊ ತೊಡಕುಗಳ ಬಗ್ಗೆ ಕೇಳಿದೆ....

ಜಾಗತೀಕರಣದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರೋವಂಥವರು ಇವತ್ತಿಗೂ ಕರ್ನಾಟಕದ ರೈತರು ಅಂತ ಹೇಳಬಹುದು ತಾವು. ಪ್ರತಿಯೊಬ್ಬನಿಗೂ ಗೊತ್ತು ಏನಾಗ್ತಿದೆ? ಎಲ್ಲಿಂದ ಸಮಸ್ಯೆ ಬರ್ತಿದೆ? ಎಲ್ಲಿಂದ ಏನು ಬಂತು? ನನ್ನ ಮುಸುಕಿನ ಜೋಳ ಬೆಲೆ ಕಡಿಮೆ ಆಗಕೆ ಏನ್ ಕಾರಣ? ಯಾವ ದೇಶದಿಂದ ಎಷ್ಟು ಮುಸುಕಿನ ಜೋಳ ಬಂತು? ಯಾವ ರೇಟಿಗೆ ಬಂತು? ತಾಳೆ ಎಣ್ಣೆ ಯಾವ ರೇಟಿಗೆ ಬಂತು? ಇದು ನಮ್ಮ ದೇಶದ ಬುದ್ಧಿಜೀವಿಗಳಿಗಿಂತ ಹೆಚ್ಚಾಗಿ ರೈತ ಕಾರ್ಯಕರ್ತರಿಗೆ ಹೆಚ್ಚು ಮಾಹಿತಿ ಇದೆ(ನಗು).

ಈ ಜಾಗತೀಕರಣದ ಹೊತ್ತಲ್ಲೇ ಭಾರತದಲ್ಲಿ ಮತೀಯವಾದವು ತುಂಬ ಬಿರುಸಾಗಿ ಬೆಳೀತಿದೆ.

ದೇರ್ ಈಜ್ ನೋ ಡಿಫರೆನ್ಸ್ ಬಿಟ್ವೀನ್ ವಾಟ್ ಹ್ಯಾನ್ಡ್ ಇನ್ ಗುಜರಾತ್ ಅಂಡ್ ಆಫ್‌ಘಾನಿಸ್ಥಾನ್. ಭಾರತದ ಮತ್ತು ಅಂತರರಾಷ್ಟ್ರೀಯ ಮೇಲ್ವರ್ಗಗಳು ಕೈಜೋಡಿಸಿರೋದು ಅಷ್ಟೆ. ಜಾಗತೀಕರಣದಿಂದ ಈ ಎರಡು ವರ್ಗಗಳಿಗೆ ಮಾತ್ರ ಲಾಭ. ಸೋ ಅದಕ್ಕೆ ಅವರೇನೇನು ತಂತ್ರಗಳನ್ನ ಉಪಯೋಗಿಸಬೇಕೊ ಅವನ್ನೆಲ್ಲ ಉಪಯೋಗಿಸ್ತಿದಾರೆ. ಈವನ್ ಬಾಬ್ರಿ ಮಸೀದಿ ಡಿಮಾಲಿಶ್ ಡಿಸೆಂಬರ್ ೬ನೇ ತಾರೀಕು ಅಂತ ನಿಗದಿ ಆಗಿದ್ದೂನೂ ವಾಷಿಂಗ್ ಟನ್‌ನಲ್ಲಿ. ಡಿಸೆಂಬರ್ ೬ರ ಕಾಲಕ್ಕೆ ಮುಖ್ಯವಾದ ಸಭೆ ಜೀನೇವಾದಲ್ಲಿ ನಡೀತಾ ಇತ್ತು. ದೇಶದ ಗಮನ ಆ ಕಡೆ ಹೋಗಬಾರದು, ಬೇರೆ ಕಡೆ ಬರಬೇಕು ಅನ್ನೊ ದೃಷ್ಟಿಯಿಂದಾನೇ ಡಿಸೆಂಬರ್ ೬ ನಿಗದಿ ಮಾಡಿದ್ದು. ಅಂತಾರಾಷ್ಟ್ರೀಯವಾಗಿ ನಡೆಯೋವಂತಹ ಕುತಂತ್ರಗಳು ಇವೆಲ್ಲ. ಭಾರತದ ಮೇಲ್ವರ್ಗ ಹಾಗೂ ಈ ಅಂತಾರಾಷ್ಟ್ರೀಯ ಮೇಲ್ವರ್ಗಗಳ ನಡುವೆ ನಿಕಟವಾದ ಸಂಕರ್ಪ ಉಂಟು. ಯಾವ್ಯಾವ ದೇಶದಲ್ಲಿ ಯಾವ್ಯಾವ ಸ್ಟ್ರ್ಯಾಟೆಜಿ ಉಪಯೋಗಿಸಬೇಕು? ಉದಾಹರಣೆಗೆ ಆಪಿsಕಾ ದೇಶದಲ್ಲಿ ರೂವಾಂಡಾ ಬುರುಂಡಿಗಳಲ್ಲಿ ಯಾವ ಸ್ಟ್ರ್ಯಾಟೆಜಿ ಉಪಯೋಗಿಸಬೇಕು? ಅಲ್ಲಿ ಹೆಂಗೆ ಜನಾಂಗೀಯ ಕಲಹಗಳನ್ನು ಸೃಷ್ಟಿ ಮಾಡಬೇಕು? ಇದನ್ನೂನು ಅಮೇರಿಕಾದ ತಜ್ಞರು ರೂಪಿಸೋವಂಥ ಕಾರ್ಯಕ್ರಮ. ಅದೇ ರೀತಿ ಭಾರತದಂಥ ದೇಶದಲ್ಲಿ ಯಾವ ರೀತಿ ಕೋಮುವಾದದ ಬೆಂಕಿ ಹಚ್ಚಬೇಕು? ಇದರ ಒಂದು ತಂತ್ರವನ್ನು ರೂಪಿಸೋರು ಅವರೇ. ಇದಕ್ಕೆ ತಯಾರಿ ಇರೋವಂಥ ಒಂದು ವರ್ಗ ಇದೆ ಭಾರತದಲ್ಲಿ. ಭಾರತದ ಜಾತಿಪದ್ಧತಿ ಯಿಂದ ಉದ್ಭವವಾಗಿರೊಂಥ ಆಲೋಚನೆಗಳು ಏನು ಇವೆ, ಅವನ್ನು ಸದ್ವಿನಿಯೋಗ ಪಡಿಸಿಕೊಳ್ಳೋವಂಥ ಮುಂದುವರಿದ ದೇಶಗಳನ್ನ ನಾನು ಅಂತಾರಾಷ್ಟ್ರೀಯ ಬ್ರಾಹ್ಮಣರು ಅಂತ ಕರೆಯೋದು.

ಬೇವಿನ ಮೇಲೆ, ಅರಿಶಿನದ ಮೇಲೆ, ಅಮೆರಿಕಾದ ಕಂಪನಿಗಳು ಪೇಟೆಂಟ್ ಮಾಡಿಸಿದವು ಅನ್ನೋ ಮಾತನ್ನ ಕೇಳತೀವಿ. ಜನ ನಮ್ಮದೇನನ್ನೊ ಯಾರೋ ಕದೀತಾ ಇದಾರೆ ಅನ್ನೋ ಆತಂಕವ ವ್ಯಕ್ತಪಡಿಸೋದನ್ನ ಕಾಣತೀವಿ. ವಾಸ್ತವವಾಗಿ ಪೇಟೆಂಟ್ ವಿಷಯದಲ್ಲಿ ನಮ್ಮ ರೈತರಿಗೆ ಯಾವ ತರಹ ಅನ್ಯಾಯವಾಗ್ತಾ ಇದೆ?

ನಮ್ಮಲ್ಲಿರೋವಂಥ ನೈಸರ್ಗಿಕ ಸಂಪತ್ತನ್ನು ನಾವೇ ಬಳಸಲಿಕ್ಕೆ ಆಗದಂಥ ವ್ಯವಸ್ಥೆ ತರೋದು ಪೇಟೆಂಟಿನ ಉದ್ದೇಶ. ಉದಾ : ಬೇವು. ಅಮೇರಿಕಾದಲ್ಲಿ ಒಂದು ಕಂಪನಿ ನೀಮ್ ಪೇಟೆಂಟ್ ಯಾವ ರೀತಿ ಮಾಡಿದೆ ಅಂದರೆ, ಆ ಬೇವಿನ ಬೀಜದಿಂದ ಯಾವ್ಯಾವ ಪ್ರಾಸೆಸ್‌ನಿಂದ ಏನೇನು ಮಾಡಬಹುದು, ೪ ಡಿಗ್ರೀಸ್‌ನಲ್ಲಿ ಏನು ಮಾಡಬಹುದು. ೬೦ ಡಿಗ್ರೀಸ್‌ನಲ್ಲಿ ಏನು ಮಾಡಬಹುದು ಇತ್ಯಾದಿ ಎಲ್ಲಾ ಪ್ರಾಸೆಸನ್ನೂ ಪೇಟೆಂಟ್ ಮಾಡಿ ಬಿಟ್ಟಿದೆ. ಒರಿಜಿನಲ್ ಡಾಕ್ಯುಮೆಂಟ್ ನನ್ನ ಕಡೆ ಇದೆ. ಆ ಪೇಟೆಂಟ್ ಚೌಕಟ್ಟಿಗೆ ನೀವು ಒಪ್ಪಿಗೆ ಕೊಟ್ಟರೆ, ನಿಮ್ಮಲ್ಲಿ ಎಷ್ಟೇ ಬೇವಿನ ಬೀಜ ಇರಲಿ, ಅದನ್ನ ತಗೊಂಡು ನೀವು ಪ್ರಾಸೆಸ್ ಮಾಡಕ್ಕೇ ಆಗಲ್ಲ. ಟ್ರೇಡ್ ರಿಲೇಟೆಡ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಅಗ್ರಿಮೆಂಟ್ ರುಜು ಹಾಕೋಕೆ ನಮ್ಮ ಸರಕಾರದವರು, ಇನ್ನೂ ಚರ್ಚೆ ಮಾಡ್ತಾ ಇದಾರೆ. ರುಜು ಹಾಕ್ತು ಅಂತಂದ್ರೆ, ರುಜು ಹಾಕಿದ ದೇಶದಲ್ಲಿ ಏನಾದರೂ ರಿಪಿಟೇಶನ್ಸ್ ಆಫ್ ದಿ ಸೇಮ್ ಪ್ರಾಸೆಸ್ ನಡೆದರೆ, ದಂಡ ಕೊಡಬೇಕು. ದಂಡ ಬಹಳ ದೊಡ್ಡ ಪ್ರಮಾಣದ್ದಾದ್ದರಿಂದ, ನಿಮ್ಮ ಸಂಪನ್ಮೂಲವನ್ನ ನೀವೇ ಬಳಸೋಕೆ ಆಗದೇ ಇರೋ ಸ್ಥಿತಿಗೆ ತಲುಪುತ್ತೀರಿ. ಈಗ ಬಿತ್ತನೆ ಬೀಜಗಳೂ ಪೇಟೆಂಟ್ ಆಗಿವೆ. ಜೆನಿಟಿಕಲಿ ಮಾಡಿಫೈಯ್ಡ್ ಅಂತ ಏನು ಹೇಳ್ತೀವಿ, ಈ ಕುಲಾಂತರಿಗಳಿಂದ ಬೇರೆ ತಳಿಗಳಿಗೂ ಪರಾಗ ಮಾಲಿನ್ಯದಿಂದ ಸೋಂಕು ತಗಲುತ್ತೆ. ಮೊನ್ನೆ ಒಂದು ಕೇಸಾಯಿತು ಕೆನಡಾ ದೇಶದಲ್ಲಿ. ಒಬ್ಬ ಆರ್ಗ್ಯಾನಿಕ್ ಫಾರ್ಮರ್. ಮಾನ್ಸಂಟೊ ಕಂಪನಿಯ ಬೀಜ ಉಪಯೋಗಿಸಿಲ್ಲ. ಆದರೆ ಪಕ್ಕದ ಜಮೀನಿನವನು ಆ ಬೀಜ ಉಪಯೋಗಿಸಿದಾನೆ. ಅದು ಪರಾಗ ಮಾಲಿನ್ಯ ಆಗಿ ಇಲ್ಲಿರೋ ಗುಣಗಳು ಅವನ ಬೆಳೆಗೆ ಬಂದ್ ಬಿಟ್ಟಿವೆ. ಕಂಪನಿ ಅವನ ಮೇಲೆ ಕೇಸ್ ಹಾಕ್ತು. ನೀನು ಕದ್ದಿದಿಯಾ ನಮ್ಮ ಬೀಜ ಅಂತ. ಕೋರ್ಟಲ್ಲಿ ಮಾನ್ಸಾಂಟೊ ಕಂಪನಿ ಪರ ತೀರ್ಮಾನ ಆಯಿತು. ಆ ರೈತ ಜುಲ್ಮಾನೆ ಕಟ್ಟಬೇಕಾಯಿತು. ಈಚೆಗೆ ನಡೆದಿದ್ದು ಇದು. ಸೋ, ಅಲ್ಲಿಗೆ ನಾಗುತ್ತೆ? ನಾವು ನಮ್ಮ ಸ್ವಂತ ತಳಿಗಳನ್ನೇ ಉಪಯೋಗಿಸೋಕೆ ಆಗದೇ ಇರೋ ಸ್ಥಿತಿಗೆ ಬಂದ್ ಬಿಡ್ತೀವಿ. ನಿಮ್ಮ ಸಂಪನ್ಮೂಲಗಳನ್ನ ನೀವೇ ಉಪಯೋಗಿಸೋಕಾಗದೇ ಇರೋದು, ನಿಮ್ಮ ಸ್ವಂತ ತಳೀನ ನೀವೇ ಉಪಯೋಗಿಸೋಕಾಗದೇ ಇರೋದಕ್ಕಿಂತ ಅಪಾಯ ಬೇಕೆ? ಇನ್ನೊಂದು ಅಪಾಯ ಇದೆ. ಯು ಸೀ, ಬಿತ್ತನೆಬೀಜ ಮಾರೋವಾಗ ಟೆಕ್ನಾಲಜಿ ಪಿs ಅಂತ ಚಾರ್ಜ್ ಮಾಡ್ತಾರೆ. ರಾಯಲ್ಟಿ ಅಂತ ಚಾರ್ಜ್ ಮಾಡೋಲ್ಲ. ಈಗ ಮಾನ್ಸಾಂಟೊ ಕಂಪನಿ ಬಿಟಿ ಹತ್ತಿ. ೪೫೦ ಗ್ರಾಂಗೆ ೧೬೦೦ ರೂಪಾಯಿ. ಯಾಕೆ ೧೬೦೦ ಅಂದರೆ, ಟೆಕ್ನಾಲಜಿ ಪಿs ಅಂತಾರೆ. ಇಟ್ಸ್ ಆಲ್‌ಮೋಸ್ಟ್ ರಾಯಲ್ಟಿ ಟು ದ ಪೇಟೆಂಟ್. ಹಂಗಾಗಿ ಕೃಷಿ ದುಬಾರಿಯಾಗೋದು ಒಂದು. ಇನ್ನೊಂದು ಕಡೆ ನಿಮ್ಮ ಬಿತ್ತನೆ ಬೀಜ ಬಳಸೋಕಾಗದೇ ಇರೋದು ಮತ್ತೊಂದು.

ರೈತ ಸಂಘವು ಕರ್ನಾಟಕದಲ್ಲಿರೊ ಅನೇಕ ಬಹುರಾಷ್ಟ್ರೀಯ ಬೀಜಕಂಪನಿಗಳ ಮೇಲೆ ಆಕ್ರಮಣ ಮಾಡಿದೆ. ಈ ಕಂಪನಿಗಳನ್ನ ಸಂಘ ತನ್ನ ಮುಖ್ಯ ಎದುರಾಳಿಯನ್ನಾಗಿ ಮಾಡಿಕೊಳ್ಳೋಕೆ ತರ್ಕ ಏನು?

ಒಂದು ದೇಶದ ಬಿತ್ತನೆ ಬೀಜದ ಮೇಲೆ ಮತ್ತೊಂದು ದೇಶದ ಕಂಪನಿ ಸಂಪೂರ್ಣ ಹತೋಟಿ ಸಾದಿsಸಿದರೆ, ಆ ದೇಶದ ಸ್ವಾತಂತ್ರ್ಯ ಉಳೀತು ಅಂತೀರಿ? ಅಂಡ್ ಸೀಡ್ ಈಸ್ ದ ಫಸ್ಟ್ ಲಿಂಕ್ ಇನ್ ದಿ ಫುಡ್ ಚೈನ್. ಒಂದು ದೇಶದ ಆಹಾರ ವ್ಯವಸ್ಥೇನ ನಿಯಂತ್ರಣ ಮಾಡೋವಂಥ ಒಂದು ಸ್ಥಾನಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಬಂದು ಕೂತರೆ, ಫುಡ್ ಸಾವರನ್‌ಟಿ ಅಂತ ಏನಂತೀವಿ, ಆಹಾರ ಸಾರ್ವಭೌಮತ್ವ, ಅದು ಹೋಯಿತು. ಅದು ಹೋಯಿತು ಅಂದರೆ ದೇಶದ ಸಾವರನ್‌ಟಿ ಹೋಯಿತು ಅಂತ. ಅದು ಅಪಾಯ ಇರೋದು.

ಈ ಫುಡ್ ಸಾವರನ್‌ಟಿ ಜತೆಗೆ ಆಹಾರ ವೈವಿಧ್ಯ ಕೂಡ ಈ ಜಾಗತೀಕರಣದಿಂದ ನಾಶವಾಗ್ತಾ ಇರೋ ಹಾಗಿದೆ.

ಹೌದು. ಯಾವ ಪ್ರದೇಶದಲ್ಲಿ ಜೈವಿಕ ವೈವಿಧ್ಯತೆ ಇದೆ, ಅಂಥ ದೇಶಗಳಲ್ಲಿ ಈ ಕಂಪನಿಗಳು ಹೆಚ್ಚು ಗಮನ ಕೊಟ್ಟು ಕೆಲಸ ಮಾಡ್ತಿವೆ. ಚಾರಿತ್ರಿಕ ಕಾರಣಕ್ಕೆ ಬಯೋಡೈವರ್ಸಿಟಿ ಇರೋದು ಗ್ಲೋಬಿನ ಕೆಳಭಾಗದಲ್ಲಿ ಮಾತ್ರ. ಅದಕ್ಕೆ ಕಾರಣ ಗ್ಲೋಬಿನ ಮೇಲ್ಭಾಗಕ್ಕೆ ಹಿಮಯುಗದಲ್ಲಿ ಬಯೋಡೈವರ್ಸಿಟಿ ಎಲ್ಲ ನಾಶವಾಗಿ ಹೋಯಿತು. ಸೋ, ಆಪಿsಕಾ ಏಶ್ಯಾ ಲ್ಯಾಟಿನ್ ಅಮೇರಿಕಾ ಇಲ್ಲೇ ಅವರ ಚಟುವಟಿಕೆ ನಡೀತಾ ಇರೋದು. ಇಲ್ಲೇ ವಿರೋಧಗಳು ಈಗ ವ್ಯಕ್ತ ಆಗ್ತಾ ಇವೆ. ಉದಾಹರಣೆಗೆ ಮೆಕ್ಸಿಕೋದಲ್ಲಿ. ಅದು ಮುಸುಕಿನ ಜೋಳದ ತೌರು. ನಮ್ಮಲ್ಲಿ ಏನು ೧೬೦೦೦ ಭತ್ತದ ತಳಿಗಳು ಇವೆ, ಇನ್ನೂ ಹೆಚ್ಚಿದ್ದವು.. ಅದೇ ರೀತಿ ಒಂದೊಂದು ಪ್ರದೇಶದಲ್ಲೂ ಸಮೀಕ್ಷೆ ನಡೀತಾ ಇತ್ತು- ಮಲ್ಟಿನ್ಯಾಶನಲ್ ಕಂಪನಿಗಳ ಜೆನಿಟಿಕಲಿ ಮಾಡಿಫೈಡ್ ಸೀಡ್ಸ್ ನಿಂದ. ಅದನ್ನು ರೈತರು ವಿರೋಧ ಮಾಡ್ತಾ ಇದಾರೆ. ಈ ವಿರೋಧ ಸಾಕಷ್ಟು ಯಶಸ್ವಿ ಆಗ್ತಾ ಇದೆ. ಇದು ಆಪಿsಕಾ ದೇಶಗಳಲ್ಲೂ ಪ್ರಾರಂಭ ಆಗಿದೆ. ಮೊನ್ನೆಮೊನ್ನೆ ಜಾಂಬಿಯಾ ದೇಶ, Pಮ ಬಂದಿದ್ದರೂನೂ, ಅಮೇರಿಕಾ ಜೆನಿಟಿಕಲಿ ಮಾಡಿಫೈಡ್ ಫುಡ್ ಕಳಿಸಿದಾಗ ರಿಜೆಕ್ಟ್ ಮಾಡ್ತು. ನಾವು ಉಪವಾಸ ಇರ್ತೀವಿ ಆ ವಿಷ ತಿನ್ನಲ್ಲ ಅಂತು.

ಈ ಬೀಜ ವೈವಿಧ್ಯದ ಪರವಾಗಿ, ಆಹಾರ ವೈವಿಧ್ಯದ ಪರವಾಗಿ ಕೆಲಸ ಮಾಡೊ ಜನತೆಯ ವಿeನಿಗಳು ಇದಾರಾ?

ಬಹಳ ಕಡಿಮೆ ಸಂಖ್ಯೆಯಲ್ಲಿ ಇದಾರೆ. ಆದರೆ ರೈತರು ದೊಡ್ಡ ಸಂಖ್ಯೆಯಲ್ಲಿ ಬೆಳೀತಿದಾರೆ. ನಮ್ಮ ಸ್ಥಳೀಯ ತಳಿಗಳನ್ನೇ ಉಪಯೋಗಿಸಿ ಅತ್ಯಂತ ಹೆಚ್ಚಿಗೆ ಉತ್ಪಾದನೆ ಮಾಡೋಕೆ ಪ್ರಯತ್ನ ಪಡ್ತಾ ಇರೋ ಕೃಷಿಕರ ಸಂಖ್ಯೆ ದಿನೇದಿನೇ ಜಾಸ್ತಿ ಆಗ್ತಾ ಇದೆ. ಆದಕಾರಣ ನಮ್ಮ ದೃಷ್ಟಿಯಲ್ಲಿ ಕೃಷಿಕರೆ ಮೊದಲನೇ ವಿeನಿಗಳು. ಅವರು ಸಾವಿರಾರು ವರ್ಷದಿಂದ ಪ್ರಯೋಗ ಮಾಡಿಕೊಂಡು ಬಂದಿರೋವಂಥ ವಿeನಿಗಳು. ಆ ಕಾರಣಾನೆ ಈವನ್ ಇನ್ ದಿ ಕನ್ವೆನ್‌ಶನಲ್ ಬಯಲಾಜಿಕಲ್ ಡೈವರ್ಸಿಟಿ, ಸಿಬಿಡಿ ಅಂತ ಏನ್ ಕರೀತೀವಿ ಅದು, ಟ್ರೆಡಿಶನಲ್ ನಾಲೆಜ್ ಸಿಸ್ಟಮ್ಸ್ ಆರ್ ನಾಟ್ ಇನ್‌ಪಿsರಿಯರ್ ಟು ಮಾಡರ್ನ್ ಸೈಂಟಿಪಿsಕ್ ಸಿಸ್ಟಮ್ಸ್. ದೇ ಶುಡ್ ಬಿ ಗೀವನ್ ಆನ್ ಈಕ್ವಲ್ ಸ್ಟೇಟಸ್.

ಜಾಗತೀಕರಣ ಜೀವವೈವಿಧ್ಯವನ್ನ ನಾಶಮಾಡುವಂತಹದ್ದು ಅನ್ನೊ ತರಹಾನೇ, ಪ್ರಾದೇಶಿಕ ಭಾಷೆಗಳ ಮೇಲೆ ಕೂಡ ಕೆಟ್ಟ ಪ್ರಭಾವ ಮಾಡ್ತಿದೆ. ಅಂತನ್ನೋ ಆತಂಕವಿದೆ.

ನಾವು ಸುಮ್ಮನೆ ಕೂತರೆ ಭಾಷೆ ಕೂಡಾ ನಾಶವಾಗಿ ಹೋಗುತ್ತೆ. ಅದರಲ್ಲಿ ಅನುಮಾನ ಇಲ್ಲ. ಸಂಸ್ಕೃತಿಯ ಬೇರೆ ಬೇರೆ ಮುಖಗಳು ಏನಿವೆ, ಆವಕ್ಕೆಲ್ಲ ಭಾಷೇನೇ ಒಂದು ದೊಡ್ಡ ಅಡಿಗಲ್ಲು. ಅದರ ಜೊತೆಗೆ ಕೃಷೀನೂ ಸಂಸ್ಕೃತಿಯ ಒಂದು ಭಾಗ. ಅದರ ಜೊತೆಗೆ ಆಹಾರದ ಸಂಸ್ಕೃತಿ. ಫುಡ್ ಕಲ್ಚರ್ ಈಜ್ ಆಲ್ ಸೋ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ಫುಡ್ ಕಲ್ಚರ್ ಗೆಟ್ಸ್ ಡಿಸ್ಟ್ರಾಯಿಡ್, ದಿ ಕನೆಕ್ಟೆಡ್ ಕ್ರಾಪ್ ಕಲ್ಚರ್ ಆಲ್ಸೋ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ದಿ ಕ್ರಾಪ್ ಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್, ದಿ ಅಗ್ರಿಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ಅಗ್ರಿಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್, ಬಯೋ ಡೈವರ್ಸಿಟಿ ಗೆಟ್ಸ್ ಡಿಸ್ಟ್ರಾಯ್ಡ್. ಜೈವಿಕ ವೈವಿಧ್ಯತೆ ಸಂಪೂರ್ಣ ನಾಶ ಆಗಿ ಹೋಗಿಬಿಡುತೆ. ಅಗೇನಾಗುತ್ತೆ, ಈ ಗ್ಲೋಬಲ್ ಮಾನೊ ಕಲ್ಚರಿಗೆ ನಾವು ಸೇರ್ಕೊಂಡು ಬಿಡ್ತೀವಿ. ಅಂಡ್ ಗ್ಲೊಬಲ್ ಮಾನೊಕಲ್ಚರ್ ಈಜ್ ಕಂಟ್ರೋಲ್ಡ್ ಬೈ ಮಲ್ಟಿನ್ಯಾಶನಲ್ ಕಾರ್ಫೋರೇಷನ್ಸ್ ! ವೆನ್ ಯು ಬಿಕಮ್ ಎ ಪಾರ್ಟ್ ಆಫ್ ಮಾನೊಕಲ್ಚರ್ ಕಂಟ್ರೊಲ್ಡ್ ಬೈ ಮಲ್ಟಿನ್ಯಾಶನಲ್ ಕಾರ್ಫೋರೇಷನ್ಸ್ , ಯು ಸೀಜಡ್ ಟು ಬಿ ಎ ನೇಶನ್ ಅಟಾಲ್. ಇವೆಲ್ಲ ಒಂದಕ್ಕೊಂದು ಸಂಬಂಧ ಇರೋವಂಥ ಬೆಳವಣಿಗೆಗಳು. ಇದರ ಪ್ರeನೆ ಇಲ್ಲ ನಮ್ಮ ದೇಶದ ಬುದ್ಧಿಜೀವಿಗಳಿಗೆ. ಎಲ್ಲಾ ವಿಷಯಾನೂ ಲಘುವಾಗಿ ತಗೊಳ್ಳೋದು. ಅಮೆರಿಕಾದ ಬಗ್ಗೆ ಆಕರ್ಷಣೆ ಮತ್ತು ದೌರ್ಬಲ್ಯ. ಅದರ ಒಂದು ಭಾಗ ಆಗೋದಿಕ್ಕೆ ಆಸೆ. ಇಂತಹ ಮನಸ್ಸು ಇರೋವಾಗ ತಡಿಯೋದು ಹ್ಯಾಗೆ?

ನಮ್ಮ ಬೀಜಪದ್ಧತಿಯನ್ನ ಭಾಷೆಯನ್ನ ಸಂಸ್ಕೃತಿಯನ್ನ ಯಾರೋ ಹೊರಗಿನವರು ಬಂದು ಹಾಳುಮಾಡ್ತಾ ಇದಾರೆ ಅನ್ನೋ ಆತಂಕ, ಯಾವಾಗಲೂ ನಮ್ಮನ್ನ ರಕ್ಷಣಾತ್ಮಕ ಮನಸ್ಥಿತಿಯಲ್ಲೇ ಇಡುತ್ತೆ. ಇದು ಒಂದು ಬಗೆಯಲ್ಲಿ ನಮ್ಮ ಸಂಪ್ರದಾಯಗಳ ಬಗ್ಗೆ ಸ್ವವಿಮರ್ಶೆಯಿಲ್ಲದ ಸ್ಥಿತಿಗೆ ಹಾಗೂ ಆಧುನಿಕತೆಯನ್ನು ಕುರುಡಾಗಿ ವಿರೋದಿsಸುವ ಸ್ಥಿತಿಗೆ ಕರೆದುಕೊಂಡು ಹೋಗೋ ಸಾಧ್ಯತೆ ಇದೆ.

ಆಧುನಿಕತೆ ಅನ್ನೋದರ ಬಗ್ಗೆ ಸ್ಪಷ್ಟ ಕಲ್ಪನೆ ಬರಬೇಕು. ಈಗ ಏನು ಆಧುನಿಕತೆ ಅಂತೀವಿ, ಅದು ನಿಜವಾಗಲೂ ಆಧುನಿಕವೇ? 

ಉದಾಹರಣೆಗೆ ಆಧುನಿಕ ಕೃಷಿ ಪದ್ಧತಿ. ಮೊದಲನೇ ಹಸಿರುಕ್ರಾಂತಿ ಅಂತ ಏನು ಕರೀತೀವಿ, ಇದನ್ನ ಸುಮಾರು ೫೦ ವರ್ಷ ಬಳಿಸಿದೀವಿ. ಇದು ನಿಜವಾಗಲೂನೂ ಆಧುನಿಕ ಪದ್ಧತಿನೋ? ಇದು ನಿಸರ್ಗಕ್ಕೆ ವಿರೋಧವಾದಂಥ ಅತ್ಯಂತ ಅವೈeನಿಕವಾದ ಪದ್ಧತಿ ಅನ್ನೋದು ಈಗ ಸ್ಪಷ್ಟ ಆಗ್ತಾ ಇದೆ. ನಾವು ರಾಸಾಯನಿಕಗಳ ಆಧಾರದ ಮೇಲೆ ಹಸಿರುಕ್ರಾಂತಿ ಅನ್ನೋ ಹೆಸರಲ್ಲಿ ಕೃಷಿ ಮಾಡಿದೆವು. ಅದರಿಂದ ಏನೇನು  ಕೆಟ್ಟ ಪರಿಣಾಮಗಳು ಆದವು? ಎಷ್ಟು ಪ್ರಮಾಣದಲ್ಲಿ ನಾವು ಮಣ್ಣಿನ ಫಲವತ್ತತೆಯನ್ನ ಹಾಳು ಮಾಡಿದೆವು? ಮಣ್ಣಲ್ಲಿರೋ ಅಮೂಲ್ಯವಾಗಿರತಕ್ಕಂತಹ ಕ್ರಿಮಿಗಳನ್ನ ಹಾಳು ಮಾಡಿದೆವು. ಪಕ್ಷಿಗಳನ್ನ ನಾಶಮಾಡಿದೆವು. ದುಂಬಿಗಳನ್ನ ಹಾಳುಮಾಡಿದೆವು. ಚಿಟ್ಟೆಗಳನ್ನ ಹಾಳು ಮಾಡಿದೆವು. ಜೇನು ಹಾಳುಮಾಡಿದೆವು. ಕೃಷಿಗೆ ಅತ್ಯಂತ ಅವಶ್ಯಕವಾದಂಥ ಕೀಟ ವೈವಿಧ್ಯತೆ, ಇನ್‌ಸೆಕ್ಟ್ ಡೈವರ್ಸಿಟಿ, ಹಾಳು ಮಾಡಿದೀವಿ. ಇದೆಲ್ಲ ಮನವರಿಕೆಯಾಗಿ, ಮತ್ತೆ ಇದ್ಯಾವುದೂ ಹಾಳಾಗದೇ ಇರೋವಂಥ ಪದ್ಧತಿ ಯಾವುದು ಅಂತ ಹುಡುಕಿ ಹುಡುಕಿ, ಈಗ ಮತ್ತೆ ’ಸಸ್ಟೈನಬಲ್ ಅಗ್ರಿಕಲ್ಚರ್’ ಅಂತ ಹೊಸಹೆಸರಲ್ಲಿ ಎಲ್ಲ ದೇಶಗಳು ಪ್ರಾರಂಭ ಮಾಡಿವೆ. ಸಸ್ಟೈನಬಲ್ ಅಗ್ರಿಕಲ್ಚರ್ ಅಂದರೆ ಬೇರೆ ಏನೂ ಅಲ್ಲ. ನಮ್ಮ ದೇಶದಲ್ಲಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ಕೃಷೀನೆ!

ಸಮಸ್ಯೆ ಇರೋದು ಇಲ್ಲೆ. ’ನಮ್ಮ ಪೂರ್ವಜರು’ ನಡೆಸಿಕೊಂಡು ಬಂದದ್ದು ಅಂತ ರೈತರು ಹೇಳಿದರೆ ಒಂದರ್ಥ ಬರುತ್ತೆ. ಸಾಮಾಜಿಕವಾಗಿ ಸಂಪ್ರದಾಯವಾದಿಗಳು ಹೇಳುವಾಗ ಮತ್ತೊಂದರ್ಥ ಬರುತ್ತೆ. ಜಾಗತೀಕರಣದ ಹೊತ್ತಲ್ಲಿ ಈ ಎರಡನೇ ಸಾಧ್ಯತೆ-ಮೂಲಭೂತವಾದಿಗಳ ಕನ್ಸರ್ವೇಟಿವ್ ಆಟಿಟೂಡ್ -ಕೂಡ ಮೇಲಕ್ಕೆ ಏಳ್ತಾ ಇದೆ. ಹೀಗಾಗಿ ಹಿಂದಕ್ಕೆ ಹೋಗೋದು ಯಾರು ಯಾವುದಕ್ಕಾಗಿ ಅನ್ನೋ ಪ್ರಶ್ನೇನ ಎಚ್ಚರದಿಂದ ಗಮನಿಸಬೇಕಾಗಿದೆ.

ನಿಜ, ಈಗ ನಮ್ಮದು ಅಂತ ನಾವು ಹೇಳೂದಕ್ಕೂ, ನಮ್ಮದು ಅಂತ ಮತೀಯ ಸಂಪ್ರದಾಯವಾದಿಗಳು ಹೇಳೋದಕ್ಕೂ ಭಾರಿ ವ್ಯತ್ಯಾಸ ಇದೆ. ಕನ್ಸರ್ವೇಟಿವ್ ಆಟಿಟೂಡ್ ಅಂತ ಏನಂದಿರಿ, ಆ ಅಂಶ ನಾವು ಹೇಳೋದು ವೈeನಿಕ ಸತ್ಯದ ಆಧಾರದ ಮೇಲೆ. ಯಾಕಂದರೆ ಈ ಪ್ರಪಂಚ ಸಂಪೂರ್ಣ ವೈವಿಧ್ಯತೆಯಿಂದ ಕೂಡಿದೆ. ಅದರಲ್ಲೂ ವಿಶೇಷವಾಗಿ ಪ್ರಪಂಚದ ಕೃಷಿಪದ್ಧತಿಗಳು ಸಂಪೂರ್ಣ ವೈವಿಧ್ಯತೆಯಿಂದ ಕೂಡಿವೆ. ಇದಕ್ಕೆ ಕಾರಣ ಆಗ್ರೋ ಕ್ಲೈಮ್ಯಾಟಿಕ್ ಕಂಡಿಶನ್ಸ್ ಅಂತ ಏನು ಕರೀತೀವಿ ಅದು ಒಂದೊಂದು ಪ್ರದೇಶದಲ್ಲಿ ಒಂದೊಂದು ತರಹ ಇರೋದು. ಹಂಗಾಗಿ ಬೇರೆ ಬೇರೆ ಪ್ರದೇಶದಲ್ಲಿ ಬೇರೆಬೇರೆ ಕೃಷಿ ಪದ್ಧತಿಗಳು ಇವೆ. ಅವು ಸಾವಿರಾರು ವರ್ಷಗಳಿಂದ ಪರೀಕ್ಷೆಗೆ ಒಳಗಾಗಿರೋವು. ಸಸ್ಟೈನಬಲ್ ಪ್ಲಾನೆಟ್ ಹ್ಯಾಜ್ ಬೀನ್ ದೇರ್, ಬಿಕಾಸ್ ಆಫ್ ದೀಸ್ ಡೈವೋರ್ಸ್ ಅಗ್ರಿಕಲ್ಚರ್ ಸಿಸ್ಟಮ್ಸ್. ಆಕಾರಣ ಮಾನೋ ಕಲ್ಚರ್‌ನಿಂದ ಪ್ಲಾನೆಟ್ ಹಾಳು ಮಾಡ್ತೀವಿ. ಮಾನೋ ಕಲ್ಚರ್ ಬಿಟ್ಟು, ಡೈವರ್ಸಿಟಿಗೆ ಇರೋವಂಥ ಒಂದು ಪದ್ಧತಿಗೆ ನಾವು ಬರಬೇಕು ಅಂತ ವೈeನಿಕವಾಗಿ ಹೇಳ್ತಾ ಇರೋ ಮಾತು. ಅದರೆ ಸ್ವದೇಶಿ ಸ್ವದೇಶಿ ಅಂತ ಸಂಪ್ರದಾಯವಾದಿಗಳು ಹೇಳೋ ಮಾತು ಇದೆಯಲ್ಲ, ಅದು ಆಷಾಢಭೂತಿತನದ ಮಾತು.

ಜಾಗತೀಕರಣವು ಏಕರೂಪೀ ಸಂಸ್ಕೃತಿಯನ್ನ ಹೇರುತ್ತೆ ಅಂತನ್ನೊ ಆತಂಕ ರೈತರು ಮಾಡೋವಾಗ, ಅದು ಬೀಜ ವೈವಿಧ್ಯವನ್ನ ಆಹಾರ ವೈವಿಧ್ಯವನ್ನ ರಕ್ಷಿಸಿಕೊಳ್ಳೋ ಕ್ರಿಯೆಯಾಗಿದೆ. ವಿಚಿತ್ರ ಅಂದರೆ, ನಮ್ಮ ಸಂಸ್ಕೃತಿಯಲ್ಲಿರೋ ಜಾನಾಂಗಿಕ ವೈವಿಧ್ಯಗಳನ್ನು ಉಳಿಸಿಕೋಬೇಕು ಅಂತ ಅನೇಕ ಎನ್‌ಜಿಓಗಳು ಕೆಲಸ ಮಾಡ್ತಾ ಇವೆ. ಜಾಗತೀಕರಣದ ಸಂದರ್ಭದಲ್ಲಿ ತುಂಬ ಕ್ರಿಯಾಶೀಲವಾಗಿರುವ ಈ ಎನ್‌ಜಿಓಗಳ ಪಾತ್ರವನ್ನ  ಚಳುವಳಿಗಾರರಾಗಿ ಹೇಗೆ ನೋಡುತ್ತೀರಿ?

ನಮ್ಮಲ್ಲಿರೋವಂಥ ಬಹುಪಾಲು ಸರಕಾರೇತರ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳ ಅಥವಾ ಫೋರ್ಡು, ರಾಕ್‌ಫೆಲರ್ ಮುಂತಾದ ವಿದೇಶಿ ಫೌಂಡೇಶನ್ಸುಗಳ ಏಜೆಂಟರಾಗಿ ಕೆಲಸ ಮಾಡ್ತಾ ಇವೆ. ಈ ಫೌಂಡೇಶನ್‌ಗಳು ಎಲ್ಲಾ ದೇಶದಲ್ಲೂ ದೊಡ್ಡ ಪ್ರಮಾಣದಲ್ಲಿವೆ. ಜೊತೆಗೆ ನೀವೇನು ಆಧುನಿಕತೆ ಅಂದಿರಿ, ಅದಕ್ಕೆ ಯಾವ ರೀತಿ ವೈeನಿಕವಾದ ಒಂದು ಅರ್ಥ ಕೊಡಬೇಕೋ, ಅದೇ ರೀತಿ ಕಲ್ಚರ್ ಅಂತನ್ನೋದಕ್ಕೂ ಒಂದು ವೈeನಿಕ ಅರ್ಥ ಕೊಡಬೇಕಾಗುತ್ತೆ. ನಮ್ಮ ಕಲ್ಚರ್ ಅಂದರೆ ಏನದು? ಅವರು ಹೇಳೋದೆ ನಮ್ಮ ಕಲ್ಚರೋ ಅಥವಾ ಅದು ಬೇರೇನೇ ಇದೆಯೋ? ನಮ್ಮ ನಿಜವಾದ ಕಲ್ಚರ್ ಏನಿದೆ, ಅದನ್ನು ಉಳಿಸ್ಕೋಬೇಕು. ಅದನ್ನ ಉಳಿಸ್ಕೋಬೇಕು ಅನ್ನೋದರ ಹಿನ್ನೆಲೆಯಲ್ಲಿ ವೈeನಿಕ ಕಾರಣಗಳು ಇರಬೇಕು. ಇಂಡಿಯನ್ ಕಲ್ಚರ್ ಅಂತ ಮಾತಾಡಿದರೆ ಸ್ವದೇಶಿ ಜಾಗರಣ ಮಂಚ್‌ನ ಮನಸ್ಸಿನಲ್ಲಿ ಅದಕ್ಕೆ ಬೇರೆ ಅರ್ಥ ಇದೆ. ಈಗ ನಾನು ಇಂಡಿಯನ್ ಕಲ್ಚರ್ ಅಂದರೆ, ನನ್ನ ಮನಸಲ್ಲಿ ಅದಕ್ಕೆ ಸಂಪೂರ್ಣ ಬೇರೆ ಅರ್ಥ ಇದೆ. ನನ್ನ ಮನಸ್ಸು ಜಾನಪದದ ದಿಕ್ನಲ್ಲಿ ಹೋಗ್ತದೆ. ಅದು ನಮ್ಮ ದೇಶದ ದುಡಿಯುವ ಜನರ ಸಂಸ್ಕೃತಿ.

ಟಿಪ್ಪಣಿ
೧. ಕನ್ನಡದಲ್ಲಿ ಚಿಂತನ ಪರಂಪರೆ ದೀರ್ಘವಾಗಿದೆ ಮತ್ತು ಸದೃಢವಾಗಿದೆ. ಕುವೆಂಪು ಕಾರಂತ ಡಿವಿಜಿ ಶಂಬಾ ಜೋಶಿ ಅವರಿಂದ ಹಿಡಿದು ಈಚಿನ ಚಿಂತಕರವರೆಗೆ ಅದರ ಹರಹು ಇದೆ. ಆದರೆ ಹೆಚ್ಚಿನವರು ಸಾಹಿತ್ಯ ಸಂಸ್ಕೃತಿ ನೆಲೆಯಿಂದ ಚಿಂತನೆ ಮಾಡುವವರು. ಕರ್ನಾಟಕದ ರಾಜಕಾರಣ ಆರ್ಥಿಕತೆಯ ನೆಲೆಯಿಂದ ಚಿಂತನೆ ಮಾಡುವವರು ಕಡಿಮೆ. ಸಮಾಜವಿeನದ ವೃತ್ತಿಪರ ಪ್ರಾಧ್ಯಾಪಕರು  ಕನ್ನಡದಲ್ಲಿ ಬರೆಯುವುದೇ ಕಡಿಮೆ. ಬರೆದರೆ ಅದರಲ್ಲಿ ಸಮುದಾಯ ಬದುಕಿನ ರಾಜಕಾರಣ ಇರುವುದಿಲ್ಲ. ರಾಜಕೀಯ ಅರ್ಥಶಾಸ್ತ್ರಗಳನ್ನು ತರಗತಿಯ ಗಿಳಿಪಾಠವನ್ನಾಗಿ ಮಾಡಿರುವ, ಬೌದ್ಧಿಕತೆಯನ್ನು ಪ್ರಭುತ್ವ ಪರವಾದ ಸೇವೆಯನ್ನಾಗಿ ಮಾಡಿರುವ  ಅಕೆಡೆಮಿಕ್ ವಿದ್ವತ್ತಿಗೆ ಒಂದು ಮಂಕು ಬಡಿದಿರುತ್ತದೆ. ಇಂತಹದೊಂದು ಹಿನ್ನೆಲೆಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರ ರಾಜಕೀಯ ಚಿಂತನೆಗಳನ್ನು ಇಟ್ಟು ನೋಡಿದರೆ, ಅವುಗಳ ಮಹತ್ವ ತಿಳಿಯುತ್ತದೆ. ಅಧ್ಯಯನದಿಂದ ಚಿಂತನೆಗೆ ಸೈದ್ಧಾಂತಿಕತೆ ಮತ್ತು ಪಾಂಡಿತ್ಯ ಒದಗುತ್ತದೆ. ಚಳುವಳಿಗಳ ನಡುವಿಂದ ಹುಟ್ಟುವ ಚಿಂತನೆಗೆ ಸೈದ್ಧಾಂತಿಕ ಸ್ಪಷ್ಟತೆ, ಸರಳತೆ ಮತ್ತು ಆನ್ವಯಿಕತೆ ಇರುತ್ತದೆ. ಅಂತಹ ಉಪಯುಕ್ತತೆಯ ಆಯಾಮ ನಂಜುಂಡಸ್ವಾಮಿ ಚಿಂತನೆಗೆ ಇದೆ. ಅತ್ಯಂತ ಸ್ಥಳೀಯವಾದುದನ್ನು ಅಂತಾರಾಷ್ಟ್ರೀಯ ರಾಜಕೀಯ ತಿಳಿವಳಿಕೆಯಲ್ಲಿ ಇಟ್ಟು ವಿಶ್ಲೇಷಿಸುವ ಪ್ರಬುದ್ಧತೆಯಿದೆ. ಹೀಗೆ ಅವರ ಚಿಂತನೆಯು ಸಮುದಾಯ, ಅಂತರಾಷ್ಟ್ರೀಯ ರಾಜಕಾರಣ, ಸಾಹಿತ್ಯ ಸಂಸ್ಕೃತಿಗಳ ಒಬ್ಬ ವಿಚಿತ್ರ ಮಿಲನವಾಗಿದೆ.

ನಂಜುಂಡಸ್ವಾಮಿ ಚಳುವಳಿಗಾರರೂ ಹಾಗೂ ಮಾಸ್‌ಲೀಡರೂ ಆಗಿದ್ದರು. ಇದರ ಜತೆಯಲ್ಲಿ ಅವರೊಬ್ಬ ರಾಜಕೀಯ ಚಿಂತಕರೂ ಆಗಿದ್ದರು. ಅದರಲ್ಲೂ ಚಳುವಳಿಗಳು ಹಾಗೂ ಪ್ರಭುತ್ವ, ಜಾಗತೀಕರಣ ಹಾಗೂ ಭಾರತದಂತಹ ದೇಶಗಳ ಆರ್ಥಿಕತೆ ವಿಶ್ಲೇಷಣೆ, ಎನ್‌ಜಿಓ ಹಾಗೂ ಸಾಮ್ರಾಜ್ಯಶಾಹಿ ಸಂಬಂಧಗಳು, ಬೆಳೆಪದ್ಧತಿ, ಆಹಾರ ಸಂಸ್ಕೃತಿ ಹಾಗೂ ಬೀಜೋತ್ಪಾದನೆ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಅಂತರ್‌ಸಂಬಂಧ, ಪ್ರಭುತ್ವಪೋಷಕ ಅರ್ಥಶಾಸ್ತ್ರಜ್ಞರ ಸ್ವಭಾವ, ನಕ್ಸಲ್ ಹೋರಾಟದ  ಸ್ವರೂಪ, ಲೋಹಿಯಾವಾದದ ದೃಷ್ಟಿಯಿಂದ ಕಮ್ಯುನಿಸಂನ ವಿಮರ್ಶೆ ಇತ್ಯಾದಿ ಕುರಿತಂತೆ ಅವರ ತಿಳಿವಳಿಕೆಯು ವಿಶಿಷ್ಟವಾಗಿದೆ.

ಆದರೆ ವರ್ಗಕಲ್ಪನೆಯ ಬಗೆಗಿನ ಪೂರ್ವಗ್ರಹಗಳಿಂದ ಬಂದಿರುವ ಮಿತಿಗಳು ಸ್ವಾಮಿಯವರಲ್ಲಿವೆ. ಇದನ್ನು ಭೂಮಾಲೀಕತ್ವದ ಬಗೆಗಿನ ಅವರ ಮೆದು ಧೋರಣೆಯಲ್ಲಿಯೂ  ದಲಿತ ಮತ್ತು ಭೂರಹಿತ ಕೃಷಿಕಾರ್ಮಿಕರ ಸಮಸ್ಯೆಗಳ ಬಗೆಗಿನ ನಿರ್ಲಕ್ಷ್ಯದಲ್ಲಿಯೂ ಕಾಣಬಹುದು. ಇದು ಬಹುಶಃ ಬಹುತೇಕ ಲೋಹಿಯಾವಾದಿಗಳ ಸಮಸ್ಯೆ ಕೂಡ. ಇದರ ಜತೆಗೆ ವ್ಯಕ್ತಿವಾದಿ ಹಠವೂ  ಸೇರಿದೆ. ಸಿರಿವಂತ ಕುಟುಂಬಗಳಲ್ಲಿ ಹುಟ್ಟಿಬಂದವರು ಸಮಾಜವಾದಿ ಚಳುವಳಿಗಳಲ್ಲಿ ತೊಡಗಿಕೊಂಡರು ಎನ್ನುವುದು ಮೆಚ್ಚುಗೆಯ ಸಂಗತಿಯಾದರೆ, ಅವರಿಗೆ ಜಮೀನುದಾರಿ ದರ್ಪಗಳನ್ನು ಬಿಡಲಾಗಲಿಲ್ಲ ಎನ್ನುವುದು ಒಂದು ವೈರುಧ್ಯ. ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗ್ಗೆ ಖಚಿತವಾಗಿ ಮಾತಾಡಬಲ್ಲ ಸ್ವಾಮಿ, ಸಾಮಾಜಿಕ ಸಮಸ್ಯೆಗಳಿಗೆ ಬಂದಂತೆ ಅಸೂಕ್ಷ್ಮರಾಗುತ್ತಾರೆಯೆ? ಇದು ಕರ್ನಾಟಕದ ರಾಜಕೀಯ ಚಿಂತನೆಯಲ್ಲಿರುವ ಸಮಸ್ಯೆಯೂ ಆಗಿದೆ. ಈ ಸಮಸ್ಯೆಗೆ ಪರ‍್ಯಾಯ ಉತ್ತರವನ್ನು ಕಡಿದಾಳು  ಹಾಗೂ ಗಣಪತಿಯಪ್ಪನವರ ಸಂದರ್ಶನಗಳಲ್ಲಿ ಕಾಣಬಹುದು. 






























ಬುಧವಾರ, ಫೆಬ್ರವರಿ 11, 2015

ಬೆಳೆ ಸಂಬಂಧಿ ರೈತರ ಆಚರಣೆಗಳು

- ಮಲ್ಲಿಕಾರ್ಜುನ ಹೊಸಪಾಳ್ಯ


ಸೌಜನ್ಯ:ಕಣಜ


ರೈತರು ನೆಲಕ್ಕೆ ಬೀಜ ಬಿತ್ತುವುದರಿಂದ ಹಾಗೂ  ಸಸಿ ಮಡಿ ಹಾಕುವುದರಿಂದ ಮೊದಲುಗೊಂಡು ಬೆಳೆ ಕುಯಿಲಾಗುವ ತನಕ ಹೊಲದಲ್ಲಿ  ವಿವಿಧ ರೀತಿಯ ಬೆಳೆ ಸಂಬಂಧಿ  ಆಚರಣೆಗಳನ್ನು ನೆರವೇರಿಸುತ್ತಾರೆ. ಬೆಳೆಯ ವಿವಿಧ ಹಂತಗಳಲ್ಲಿ ಇವು ಜರುಗುತ್ತವೆ. ಇವುಗಳ ಉದ್ದೇಶ ಸ್ಪಷ್ಟ, ಮಾಡಿದ ಆರಂಬ ಕೈ ಹತ್ತಲಿ, ಬಿತ್ತಿದ ಬೀಜ ಮೊಳೆಯಲು ಯಾವುದೇ ಆತಂಕ ಅಡ್ಡಿಯಾಗದಿರಲಿ, ಬೆಳೆದ ಪೈರಿಗೆ   ಕೀಟ– ರೋಗಾದಿಗಳ ಬಾಧೆ ತಗುಲದಿರಲಿ, ಅದರ ಹಸುರಿಗೆ ನೋಡುಗರ ಕಣ್ಣೆಸರು ತಾಗದಿರಲಿ ಮುಂತಾದ ಕಾರಣಗಳಿಂದ ಇವುಗಳನ್ನು ಆಚರಿಸಲಾಗುತ್ತದೆ.
ಕಾರಬ್ಬ
ದಕ್ಷಿಣ ಕರ್ನಾಟಕದ ರೈತಾಪಿಗಳಲ್ಲಿ ಆಚರಿಸಲ್ಪಡುವ ಬಹುಮುಖ್ಯವಾದ ಆಚರಣೆ. ಇದು ತುಂಬಾ ಸರಳವಾಗಿ ಆಚರಿಸಲ್ಪಡುವ ಕ್ರಿಯೆ. ಆದರೆ  ಈ ಆಚರಣೆಯೇ ನಿರ್ದಿಷ್ಟ ವರ್ಷದ ಬೇಸಾಯದ ಕೆಲಸಗಳಿಗೆ ಮುನ್ನುಡಿ. ಗೊಲ್ಲ ಸಮುದಾಯಗಳಲ್ಲಿ ವಿಶೇಷವಾಗಿ ಕಾಣಬಹುದು. ಸಾಮಾನ್ಯವಾಗಿ ಮೃಗಶಿರ, ಆರಿದ್ರಾ ಮಳೆಗಳ ಸಂದರ್ಭದಲ್ಲಿ ಕಾರಬ್ಬವನ್ನು ಆಚರಿಸಲಾಗುತ್ತದೆ. ರಾಗಿ ಅಥವಾ ಭತ್ತದ ಸಸಿ ಮಡಿ (ಒಟ್ಲು ಬಿಡುವುದು) ಹಾಕುವ ಮುನ್ನ ಇದನ್ನು ಆಚರಿಸುವುದು ವಾಡಿಕೆ.
ಸಸಿ ಮಡಿ ಹಾಕುವ ದಿವಸದ ಬೆಳಿಗ್ಗೆ ಕರಿನ ಸೊಪ್ಪನ್ನು ತಂದು ತೋರಣ ಮಾಡಿ ಬಾಗಿಲಿಗೆ ಕಟ್ಟುತ್ತಾರೆ. ಕರಿನ ಸೊಪ್ಪೆಂದರೆ ಮಾವು, ಬೇವು ಮತ್ತು ಲಕ್ಕಿ -ಈ ಮೂರು ಸೊಪ್ಪುಗಳ ಸಂಗ್ರಹ. ಬೇಸಾಯದ ಸಲಕರಣೆಗಳಾದ ನೇಗಿಲು ನೊಗ ಮೇಣಿ ಇತ್ಯಾದಿ ಮುಟ್ಟುಗಳನ್ನೆಲ್ಲಾ ತೊಳೆದು ಅವುಗಳಿಗೆ ಸುಣ್ಣ-ಕೆಮ್ಮಣ್ಣು ಹಚ್ಚಿ, ಅಂಗುನೂಲು (ಹರಿಶಿನದ ದಾರ) ಕಟ್ಟಿ, ಎಡೆಹಾಕಿ ಪೂಜಿಸುತ್ತಾರೆ. ಎತ್ತು-ಕರಗಳಿಗೂ ಮೈತೊಳೆದುವುಗಳ ಹಣೆಗೆ, ಗೋಪುರಕ್ಕೆ, ಮುಂಗೊರಸಿಗೆ ಅಕ್ಷತೆ (ಅಕ್ಕಸ್ತೆ) ಇಟ್ಟು, ಕೊರಳಿಗೆ ಅಂಗುನೂಲು ಕಟ್ಟಿ ಎಡೆ ತಿನ್ನಿಸುತ್ತಾರೆ. ಅದೇ ದಿನ ಸಾಯಂಕಾಲ ಮನೆಯಲ್ಲಿ ಕುಕ್ಕೆಯೊಂದಕ್ಕೆ (ಬಿದಿರಿನಲ್ಲಿ ಮಾಡಿದ ಬುಟ್ಟಿ) ಬಿತ್ತನೆ ರಾಗಿ ತೋಡಿಕೊಂಡು, ನಡುಮನೆಯಲ್ಲಿ ನೆಲ ಸಾರಿಸಿ ರಂಗೋಲಿ ಬಿಡಿಸಿದ  ಜಾಗದಲ್ಲಿ ಆ ಬುಟ್ಟಿಯನ್ನು ಇಟ್ಟು ಅದಕ್ಕೂ ಸಹ ಅಂಗುನೂಲು, ಅಕ್ಸತ್ತೆ ಇಟ್ಟು, ವಿಭೂತಿ ಧರಿಸಿ ಕುಕ್ಕೆ ಸಮೇತ ಹೊಲಕ್ಕೆ ತೆಗೆದುಕೊಂಡು ಹೋಗಿ ರಾಗಿ ಒಟ್ಲು ತೊಳೆಯುತ್ತಾರೆ.
ಶೆಟ್ಟಿಕೆರೆಯ ವಿಶೇಷ ಕಾರಬ್ಬ: ತುಮಕೂರು ಜಿಲ್ಲೆ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ನಡೆಯುವ ಕಾರಬ್ಬ ವಿಶೇಷವಾದುದು. ಆ ವರ್ಷ ಯಾವ ಬೆಳೆ ಹುಲುಸಾಗುತ್ತದೆ, ಯಾವ ಬೆಳೆ ಚೆನ್ನಾಗಿ ಹುಲುಸುವರಿಯುವುದಿಲ್ಲ ಎಂಬುದನ್ನು ಇಲ್ಲಿ ನಡೆಯುವ ಧಾನ್ಯದ ಗಡಿಗೆ ಒಡೆಯುವ  ಕ್ರಿಯೆಯ ಮೂಲಕ ರೈತಾಪಿಗಳು ತಿಳಿಯುತ್ತಾರೆ. ಹಳ್ಳಿಗರು ಕಾರಬ್ಬ ಮಾಡಿದ ಮರುದಿವಸ ಮೂಲಾ ನಕ್ಷತ್ರದಂದು ಇಲ್ಲಿ ಕಾರಬ್ಬ ನಡೆಯುತ್ತದೆ.
ಅಂದು ಊರಿನ ಸಕಲಾದಿ ಜನರೂ ಮತ್ತು ಸುತ್ತ-ಮುತ್ತಲ ಗ್ರಾಮಗಳ ಒಕ್ಕಲುಗಳೂ ಶೆಟ್ಟಿಕೆರೆಯ ಆಚಿಜನೇಯ ದೇವಾಲಯದ ಬಳಿ ಸೇರಿರುತ್ತಾರೆ. ಒಂದು ಮಣ್ಣಿನ ಗಡಿಗೆಯಲ್ಲಿ (ಕರಗ) ತಾವು ಬೆಳೆಯುವ ಸಕಲ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಿ ಆ ಗಡಿಗೆಗೆ ಕರಿನ ಸೊಪ್ಪು, ಅಂಗುನೂಲು, ಅಕ್ಷತೆಗಳನ್ನಿಟ್ಟು ಪೂಜಿಸುತ್ತಾರೆ.  ಹೀಗೆ ಪೂಜಿಸಿದ ನಂತರ ಎಲ್ಲರ ಅಪ್ಪಣೆ ಪಡೆದು ಪೂಜಾರಪ್ಪನು ಅಥವಾ ನಿಗದಿತ ವ್ಯಕ್ತಿಯು ಆ ಧಾನ್ಯ ತುಂಬಿದ ಕರಗವನ್ನು ಜೋಡೇತ್ತಿನ ನೇಗಿಲಿನಿಂದ ಹೊಡೆಯುತ್ತಾನೆ. ಹಾಗೆ ಹೊಡೆದ ರಭಸಕ್ಕೆ ಒಳಗಿನ ಧಾನ್ಯಗಳೆಲ್ಲಾ ದೂರಕ್ಕೆ ಚಲ್ಲಾಡುತ್ತವೆ. ಹೀಗೆ ಚೆಲ್ಲಿದ ಧಾನ್ಯಗಳಲ್ಲಿ ಯಾವುದು ಎಲ್ಲಕ್ಕಿಂತ ಮುಂದೆ ಬಿದ್ದಿರುತ್ತದೆಯೋ ಆ ಧಾನ್ಯ ಈ ವರ್ಷ ಉತ್ತಮ ಫಸಲು ಕೊಡುತ್ತದೆಂದು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಮುಂಗಾರು ಒಳ್ಳೆಯದೋ ಅಥವಾ ಹಿಂಗಾರು ಒಳ್ಳೆಯದೋ ಎಂಬುದನ್ನೂ  ಸಹ ಈ ಆಚರಣೆಯಲ್ಲಿಯೇ ತಿಳಿಯುತ್ತಾರೆ. ಅಂದರೆ ಕರಗ ಹೊಡೆದಾಗ ಕಾಳುಗಳು ಮುಂದೆ ಬಿದ್ದಿದ್ದರೆ ಹಿಂಗಾರು ಒಳ್ಳೆಯದು ಮತ್ತು ರಾಗಿ ಮುಂದೆ ಬಿದ್ದಿದ್ದರೆ ಮುಂಗಾರು ಒಳ್ಳೆಯದು ಎಂದರ್ಥ.
ಕೂರಿಗೆ ಪೂಜೆ
ಕೂರಿಗೆಯು ಬೀಜ ಬಿತ್ತನೆಗೆ ಬಳಸುವ ಒಂದು ಪ್ರಮುಖ ಉಪಕರಣ. ರಾಗಿ, ಜೋಳ, ಅಕ್ಕಡಿ ಕಾಳುಗಳು ಮುಂತಾದವನ್ನು ಸಾಲು ಬಿತ್ತನೆ ಮಾಡಲು ಕೂರಿಗೆಯನ್ನು ಬಳಸುತ್ತಾರೆ, ಇದು ಮುಖ್ಯವಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಚಾಲ್ತಿಯಲ್ಲಿದೆ. ಐದು ಮತ್ತು ಏಳು ತಾಳುಗಳುಳ್ಳ, ಅಂದರೆ ಐದು ಮತ್ತು ಏಳು ಸಾಲು ಬಿತ್ತುವ ಕೂರಿಗೆಗಳಿವೆ, ಕೂರಿಗೆಯ ದಿಂಡನ್ನು ಗಟ್ಟಿ ಮರದಲ್ಲಿ ಮಾಡಿದ್ದರೆ ಕೊಳವೆಗಳನ್ನು ಬಿದಿರಿನಲ್ಲಿ ಮಾಡಿರುತ್ತಾರೆ.
ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ರಾಗಿ ಬಿತ್ತುವ ದಿವಸ ಹಾಗೂ ಉತ್ತರ ಕರ್ನಾಟಕದಲ್ಲಿ ಜೋಳ ಬಿತ್ತುವ ದಿವಸ ಕೂರಿಗೆ ಪೂಜೆ ಮಾಡುವುದು ರೂಢಿ. ಎರಡೂ ಪ್ರದೇಶಗಳಲ್ಲಿನ ಆಚರಣೆಯ  ಉದ್ದೇಶ ಒಂದೇ ಆದರೂ ಸಹ ಮಾಡುವ ರೀತಿಯಲ್ಲಿ ತುಸು ವ್ಯತ್ಯಾಸವಿದೆ.
ದಕ್ಷಿಣದಲ್ಲಿ ಒಂದು ಕುಟುಂಬಕ್ಕೆ ಸೀಮಿತವಾದ ಆಚರಣೆಯಾಗಿದ್ದು ಕೆಳಗೆ ವಿವರಿಸಿದ  ರೀತಿ ಕೂರಿಗೆ ಪೂಜೆ ನಡೆಯುತ್ತದೆ.
ಬಿತ್ತನೆಗೆ ಸೂಕ್ತ ಹದವಿರುವ ದಿನ ಜನ-ಜಾನುವಾರು-ಬಿತ್ತನೆ ಸಮೇತ ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಕೂರಿಗೆಗೆ ಎತ್ತುಗಳನ್ನು ಹೂಡಿ ನಿಲ್ಲಿಸಿ, ಮನೆ ಹೆಣ್ಣು ಮಗಳು  ಎತ್ತುಗಳಿಗೆ ಹಾಗೂ ಕೂರಿಗೆಗೆ ಅರಿಶಿನ ಕುಂಕುಮ ಇಟ್ಟು, ಕೈಗಳನ್ನು ಕಣ್ಣಿಗೆ ಮುಟ್ಟಿಸಿ ಸಣಮಾಡಿಕೊಂಡು ರಾಗಿ ಬಿತ್ತಲು ನಿಂತವರ ಮಡಿಲಿಗೆ ಮೂರು ಬೊಗಸೆ ಬಿತ್ತನೆಯನ್ನು ಹಾಕುತ್ತಾಳೆ. ರಾಗಿ ಬಿತ್ತುವ ವ್ಯಕ್ತಿ ಸೊಂಟಕ್ಕೆ ರಾಗಿ ತುಂಬುವ ಜೋಳಿಗೆಯನ್ನು ಕಟ್ಟಿಕೊಂಡಿರುತ್ತಾರೆ. ಆ ಜೋಳಿಗೆಯಲ್ಲಿ ವಿವಿಧ ಪದರಗಳಿದ್ದು ಅದರಲ್ಲಿ ಒಂದರಲ್ಲಿ ರಾಗಿ ಉಳಿದವುಗಳಲ್ಲಿ ಅವರೆ, ತೊಗರಿ, ಹುರುಳಿ ಇತ್ಯಾದಿ ಅಕ್ಕಡಿ ಕಾಳುಗಳನ್ನು ಹಾಕಿಕೊಂಡಿರುತ್ತಾರೆ. ಹೆಣ್ಣುಮಗಳು ಮೂರು ಬೊಗಸೆ ಬಿತ್ತನೆಯನ್ನು ಹಾಕಿದ ನಂತರ ಒಳ್ಳೇದಾಗ್ಲಿ ಎಂದು ಉದ್ಘರಿಸುವುದರೊಂದಿಗೆ ಬಿತ್ತನೆ ಪ್ರಾರಂಭವಾಗುತ್ತದೆ.
ಉತ್ತರದಲ್ಲಿ ಈ ಆಚರಣೆಯ ರೀತಿ ಸ್ವಲ್ಪ ಭಿನ್ನ. ಅಲ್ಲಿ ಇದುಂದು ಸಾಮುದಾಯಿಕ ಕ್ರಿಯೆ. ಅವರು ಕೂರಿಗೆಯನ್ನು ಮನೆಯಲ್ಲಿಯೇ ಇಟ್ಟು ಪೂಜಿಸಿ ನಂತರ ಹೊಲಕ್ಕೆ ತೆಗೆದುಕೊಂಡು ಹೋಗಿ ಬಿತ್ತಲು ಪ್ರಾರಂಭಿಸುತ್ತಾರೆ, ಅಲ್ಲದೆ ಈ ಪೂಜೆಗೆ ಊರಿನ ಹಿರಿ-ಕಿರಿಯರನ್ನು ಪ್ರಸಾದಕ್ಕೆ ಬರಹೇಳುವುದು ರೂಢಿ. ವಿಶೇಷ ಅಡುಗೆಗಳನ್ನು ಮಾಡಿ ಬಂದವರಿಗೆ ನೀಡುತ್ತಾರೆ. ಬೆಳೆ ಉತ್ತಮವಾಗಿ ಬರಬೇಕಾದರೆ ಬೀಜ ಬಿತ್ತನೆ ಸಾವಕಾಶವಾಗಿ, ಸಮರ್ಪಕವಾಗಿ, ಹೊಲದ ನಾಲ್ಕೂ ಮೂಲೆಗೆ ಒಂದೇ ಪ್ರಮಾಣದಲ್ಲಿ ಬೀಳಬೇಕು, ಹಾಗೆ ಬೀಜ ಬೀಳಬೇಕಾದರೆ ಬಿತ್ತುವ ಹತಾರ, ಅಂದರೆ ಕೂರಿಗೆ ಸರಿಯಾಗಿರಬೇಕು. ಹೀಗಾಗಿ ಆ ಕೂರಿಗೆ ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಕೂರಿಗೆ ಪೂಜೆಯನ್ನು ಮಾಡುತ್ತಾರೆ. ಪೂಜೆಯ ನೆಪದಲ್ಲಿ ಕೂರಿಗೆಯನ್ನು ಬಿಚ್ಚಿ ಅದರ ಕೊಳವೆಗಳು, ಕೊಳವೆಯ ರಂದ್ರಗಳು ಸರಿಯಾಗಿವೆಯೋ,  ಸದೃಢವಾಗಿವೆಯೋ ಎಂದು ನೋಡಲಾಗುತ್ತದೆ. ಒಂದು ವೇಳೆ ದೋಷವೇನಾದರೂ ಕಂಡು ಬಂದರೆ ಬಡಗಿಯನ್ನು ಕರೆಸಿ ಸರಿಪದಿಸಲಾಗುತ್ತದೆ ಅಥವಾ ಮನೆಯವರೇ ಸರಿಪಡಿಸುತ್ತಾರೆ. ನಂತರ ಕೂರಿಗೆ ಪೂಜೆಗೆ ಅಣಿಯಾಗುತ್ತಾರೆ.
ಮನೆಯ ಪಡಸಾಲೆಯಲ್ಲಿ ಕಂಬಳಿ ಅಥವಾ ಬಟ್ಟೆಯನ್ನು ಹಾಸಿ ಕೂರಿಗೆಯನ್ನಿಡುತ್ತಾರೆ. ಅದರ ಈಚು ಅಥವಾ ದಂಡಿಗೆಗಳಿಗೆ ಹೂವಿನ ಮಾಲೆಗಳನ್ನು ಹಾಕಿ, ದಿಂಡು ಮತ್ತು ಮೇಣಿಗೆ ಸೇರಿಸಿ ಸೀರೆ ಉಡಿಸುತ್ತಾರೆ, ಕುಪ್ಪಸ ತೊಡಿಸುತ್ತಾರೆ. ಕೂರಿಗೆಯ ಕೊಳವೆಯ ಭಾಗಕ್ಕೆ ಉಡಿಚೀಲವನ್ನು ಕಟ್ಟಿ ಅದಕ್ಕೆ ಬಿತ್ತನೆ ಜೋಳವನ್ನು ಹಾಕುತ್ತಾರೆ. ಕೆಲವರು ಚಿನ್ನದ ಆಭರಣವನ್ನೂ ಸಹ ಕಟ್ಟುವುದುಂಟು. ಹೀಗೆ ಅಲಂಕರಿಸಿದ ಕೂರಿಗೆಗೆ ಹಿರಿಯರಿಂದ ಪೂಜೆ ಸಲ್ಲಿಸಲಾಗುತ್ತದೆ. ನಂತರ ದಿವಿನಾದ ಊಟ. ಊಟಕ್ಕೆ ಅವರವರ ಇಷ್ಟಾನುಸಾರ ಭಕ್ಷ್ಯಗಳಿರುತ್ತವೆ. ಸಾಮಾನ್ಯವಾಗಿ ಜೋಳ ಮತ್ತು ಸಜ್ಜೆಯ ಕಡುಬು, ಶೇಂಗಾ ಹೋಳಿಗೆ, ಎಣ್ಣೆಗಾಯಿ ಬದನೆಕಾಯಿ, ಅಗಸಿ ಚಟ್ನಿ, ಉಳ್ಳಾಗಡ್ಡಿ ಚಟ್ನಿ, ವಿವಿಧ ರೀತಿಯ ಪಲ್ಯಗಳು ಇರುವುದು ವಾಡಿಕೆ.
ಉತ್ತಮ ಫಸಲಿಗೆ ಉತ್ತಮ ಬಿತ್ತನೆಯೇ ಮೂಲ ಎಂಬುದನ್ನು ಅನುಭವದಿಂದ ತಿಳಿದಿರುವ ರೈತರು ಈ ಆಚರಣೆಯ ಮೂಲಕ ವಿಧಿವತ್ತಾಗಿ ಅದನ್ನು ನೆರವೇರಿಸುತ್ತಾರೆ.
ಕೊಡಗಿನ ಹುತ್ತರಿ
ರಾತ್ರಿ ಎಂಟೂವರೆಯ ಸಮಯ, ಹುಣ್ಣಿಮೆ ಬೆಳದಿಂಗಳು ಎಲ್ಲೆಲ್ಲೂ ಹರಡಿದ ತಣ್ಣನೆಯ ವಾತಾವರಣ. ಡಿಸೆಂಬರ್ ತಿಂಗಳ ಕೊರೆ ಬೀಳುವ ಕಾಲ. ಕೊಡಗಿನಲ್ಲಿ ಭತ್ತದ ಹೊಲಗಳು ಹಾಲುದುಂಬಿ ತೆನೆಗಟ್ಟುವ ಸಮಯ. ಇಂತಹ ಸಂದರ್ಭದಲ್ಲಿ ಕೊಡಗಿನಾದ್ಯಂತ ಹುತ್ತರಿ ಹಬ್ಬದ ಸಂಭ್ರಮ. ಕೊಡವರಿಗೆ ಹುತ್ತರಿ ದೀಪಾವಳಿಗಿಂತಲೂ ಮಿಗಿಲಾದ ಹಬ್ಬ. ಬಯಲು ಸೀಮೆಯವರಿಗೆ ಸಂಕ್ರಾಂತಿ ಸುಗ್ಗಿಯ ಆಚರಣೆಯಾದರೆ ಹುತ್ತರಿ ಕೊಡವರಿಗೆ ಸುಗ್ಗಿಯ ಕ್ಷಣ.
ಕೊಡವರಿಗೆ ಹುತ್ತರಿ ಹಬ್ಬ ಬಂತೆಂದರೆ ಹೊಸ ಸೊಸೆ ಮನೆ ತುಂಬಿದಷ್ಟೇ ಸಂಭ್ರಮ. ಹುಣ್ಣಿಮೆಯ ಪರಿಶುಭ್ರ ಬೆಳಕಿನಲ್ಲಿ, ಶುಭ ಸಂದರ್ಭವನ್ನು ನೋಡಿ ಈಡು ಹಾರಿಸುತ್ತಾ, ಪಟಾಕಿ ಸಿಡಿಸುತ್ತಾ ಭತ್ತದ ಕದಿರು ಕೊಯ್ಯುವುದರೊಂದಿಗೆ ಆಚರಿಸಲಾಗುವ ಹುತ್ತರಿ ಕೊಡವರ ಕೌಟುಂಬಿಕ ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತ. ಹುತ್ತರಿ ಕೊಡವರ ನಾಡಹಬ್ಬವೆಂದೇ ಪ್ರಚಲಿತ. ಚಿಕ್ಕ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪಾಲ್ಗೊಂಡು ಆಚರಿಸಲ್ಪಡುವ ಹುತ್ತರಿ ಕ್ಯಾಲೆಂಡರುಗಳಲ್ಲಿ ಸ್ಥಾನ ಪಡೆದಿರುವ ಬೆರಳೆಣಿಕೆಯ ಆಚರಣೆಗಳಲ್ಲೊಂದು. ಎಲ್ಲಾ ಪ್ರಮುಖ ಕ್ಯಾಲೆಂಡರುಗಳಲ್ಲಿ ಹುತ್ತರಿ ನಡೆಯುವ ದಿನಾಂಕವನ್ನು ಗಮನಿಸಬಹುದು. (ಡಿಸೆಂಬರ್ ತಿಂಗಳಿನಲ್ಲಿ)
ಕೊಡವ ಭಾಷೆಯಲ್ಲಿ ಪುತ್ತರಿ (ಪುದಿಯ -ಅಕ್ಕಿ- ಹೊಸ ಅಕ್ಕಿ) ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಕನ್ನಡದಲ್ಲಿ ಹುತ್ತರಿ ಎಂದು ಕರೆಯುತ್ತಾರೆ.  ಹಾಗೆಂದರೆ ಈಗಾಗಲೇ ಹೇಳಿದಂತೆ ಹೊಸ ಅಕ್ಕಿ ಎಂದರ್ಥ. ಹುತ್ತರಿ ಹಬ್ಬವು ಧಾನ್ಯ ಲಕ್ಷ್ಮಿಯನು ಮನೆಗೆ ಬರಮಾಡಿಕೊಳ್ಳುವ ಒಂದು ವಿಧಾನ. ಅಂದರೆ ಭತ್ತದ ಕದಿರುಗಳನ್ನು ಕಡಿದು ತಂದು ಶಾಸ್ತ್ರೋಕ್ತವಾಗಿ ಮನೆತುಂಬಿಸಿಕೊಳ್ಳಲಾಗುತ್ತದೆ.
ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆ-ಮನೆಯ ಕಿಟಕಿ ಬಾಗಿಲುಗಳು ಮಾವಿನ ತೋರಣ, ಚೆಂಡು ಹೂವಿನ ಮಾಲೆಗಳಿಂದ ಅಲಂಕೃತಗೊಳ್ಳುತ್ತವೆ. ಸಂಜೆ ಪೂರ್ವ ದಿಕ್ಕಿನಲ್ಲಿ ಚಂದ್ರ ಉದಯವಾಗುತ್ತಿದ್ದಂತೆ ಹುತ್ತರಿಯ ಆಚರಣೆಗೆ  ರಂಗೇರುತ್ತದೆ. ನೆಲ್ಲಕ್ಕಿ ಬಾಡೆಯಿಂದ ಇದು ಪ್ರಾರಂಭವಾಗುತ್ತದೆ. ಕದಿರು ಕಡಿಯಲು ಹೋಗುವ ಈ ಸಂದರ್ಭದಲ್ಲಿ ಕುಲ ದೇವರಾದ ಇಗ್ಗುತಪ್ಪನಿಗೆ ನಮಿಸಿ ಈ ಶುಭ ಕಾರ್ಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಕಾಪಾಡು ಎಂದು ಬೇಡಿಕೊಳ್ಳಲಾಗುತ್ತದೆ.
ಈ ಹಬ್ಬದ ಆಚರಣೆಗೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಅ ಉಡುಪಿನ ಜೊತೆಗೆ ಸೊಂಟಕ್ಕೆ ರೇಷ್ಮೆಯ ನಡುಪಟ್ಟಿ ಕಟ್ಟಿ ಅದರೊಳಕ್ಕೆ ಕತ್ತಿ ಸಿಗಿಸಿ ಮನೆಯ ಯಜಮಾನರಾದವರು ನೆಲ್ಲಕ್ಕಿ ಬಾಡೆಯಲ್ಲಿರುವ ಬೆಳಗುವ ದೀಪಕ್ಕೆ ಕೈಜೋಡಿಸಿ ನಮಿಸುತ್ತಾರೆ. ನಂತರ ಗುಂಪು-ಗುಂಪಾಗಿ ಭತ್ತದ ತಾಕಿನ ಕಡೆಗೆ ಸಾಗುತ್ತದೆ ಮೆರವಣಿಗೆ. ಡೋಲು ವಾದ್ಯಗಳು, ಕೋಲಾಟದ ತಂಡಗಳು ಜೊತೆಗೂಡುವುದರಿಂದ ಮೆರವಣಿಗೆ ಮತ್ತಷ್ಟು ಖದರು ಪಡೆಯುತ್ತದೆ.
ಗದ್ದೆಯ ಬಳಿ ತೆರಳಿ ಅಲ್ಲಿ ನಿಗದಿಪಡಿಸಿದ ಒಂದು  ತಾಕಿನಲ್ಲಿ ಎಲ್ಲರೂ ಒಟ್ಟುಗೂಡಿ, ಹಾಲು-ಜೇನು ಹಾಗೂ ಹಣ್ಣು-ಕಾಯಿಯನ್ನು ಇಟ್ಟು, ಎಡೆಯನ್ನು ಭತ್ತದ ಪೈರಿನಡಿಗೆ ಸುರಿದು, ಸಾಂಬ್ರಾಣಿಯ ಹೊಗೆ ಕೊಟ್ಟು ಒಂದು ಹಿಡಿಯಷ್ಟು ಭತ್ತದ ಪೈರಿನ ಬುಡವನ್ನು ಕಟ್ಟಿ ಬಂದೂಕಿನಿಂದ ಗುಂಡು ಹಾರಿಸುತ್ತಾರೆ. ಬಳಿಕ ಮನೆ ಹಿರಿಯರು ಸುಬ್ರಹ್ಮಣ್ಯನನ್ನು ನೆನೆದು ಕದಿರು ಕೊಯ್ಯುತ್ತಾರೆ. ಈ ಸಂದರ್ಭದಲ್ಲಿ ಪೊಲಿ ಪೊಲಿದೇವ ಪೊಲಿಯೇ ಬಾ ಎಂಬ ಕೂಗು ಮುಗಿಲು ಮುಟ್ಟುತ್ತದೆ, ಈ ಆಚರಣೆಯ ವಿಶೇಷ ತಿಂಡಿಗಳಾದ ತಂಬಿಟ್ಟು, ಏಳಕ್ಕಿಪುಟ್‌ಗಳನ್ನು ಎಲ್ಲರಿಗೂ ಹಂಚಲಾಗುತ್ತದೆ. ನಂತರ ಕೊಯ್ದ ಭತ್ತದ ಕದಿರುಗಳನ್ನು ತಂದು ಮನೆತುಂಬಿಸಿಕೊಳ್ಳಲಾಗುತ್ತದೆ.
ಬಪ್ಪಕ ಪುತ್ತರಿ ಬಣ್ಣತೆ ಬಾತ್
ಪೋಪಕ ಪುತ್ತರಿ ಎಣ್ಣತೆ ಪೋಚ್
ದಮ್ಮಯ್ಯ ಪುತ್ತರಿ ಒಮ್ಮೆಲು ಪೋತೆ
ಎಂಬ ಹಾಡನ್ನು ಹಬ್ಬದ ಕೊನೆಯಲ್ಲಿ ಹಾಡಲಾಗುತ್ತದೆ.
ಈ ಹಾಡಿನ ಅರ್ಥ; ಬರುವಾಗ ಹುತ್ತರಿ ಸಡಗರದಿಂದ ಬಂತು, ಹೋಗುವಾಗ ಹುತ್ತರಿ ಯಾರಿಗೂ ಹೇಳದೆ ಹೋಯಿತು, ಆದರೆ ಹುತ್ತರಿ ನೀನು ಒಮ್ಮೆಯೂ ಹೋಗದಿರು.
ಹುತ್ತರಿಯಂದು ವಿಶೇಷ ಅಡುಗೆಗಳನ್ನು ಮಾಡಲಾಗುತ್ತದೆ. ಆಗ ತಾನೇ ಗದ್ದೆಯಿಂದ ಕುಯ್ದು ತಂದ ಭತ್ತದ ಕಾಳನ್ನು ಸುಲಿದು ಅಕ್ಕಿಯನ್ನು ಪಾಯಸಕ್ಕೆ ಸೇರಿಸಲಾಗುತ್ತದೆ. ಇದು ಹೊಸ ಅಕ್ಕಿ ಪಾಯಸ. ಇದನ್ನು ಬೇಯಿಸುವಾಗ ಐದಾರು ಪುಟ್ಟ-ಪುಟ್ಟ ಕಲ್ಲಿನ ಚೂರುಗಳನ್ನು ಸೇರಿಸುತ್ತಾರೆ. ಊಟಕ್ಕೆ ಕುಳಿತಾಗ ಯಾರಿಗೆ ಈ ಕಲ್ಲಿನ ಚೂರುಗಳು ಸಿಗುತ್ತವೋ ಅವರಿಗೆ ಕಲ್ಲಾಯುಷ್ಯ (ಧೀರ್ಘಾಯುಷ್ಯ) ಲಭಿಸುತ್ತದೆನ್ನುವ ನಂಬಿಕೆ ಇದೆ. ಪಾಯಸದ ಜೊತೆಗೆ ಬಾಳೆ ಹಣ್ಣಿನಿಂದ ತಯಾರಿಸಿದ ತಂಬಿಟ್ಟು, ಘಮಘಮಿಸುವ ಏಲಕ್ಕಿ ಪೂಟ್, ವಿವಿಧ ರೀತಿಯ ಎಣ್ಣೆ ಖಾದ್ಯಗಳ ಸತ್ಕಾರ ನಡೆಯುತ್ತದೆ.
ಸಾಂಪ್ರದಾಯಿಕ ನೃತ್ಯಗಳು ಹಾಗೂ ಕ್ರೀಡೆಗಳ ಪ್ರದರ್ಶನ ಹುತ್ತರಿಯ ಮತ್ತೊಂದು ಆಕರ್ಷಣೆ. ಕೊಡವ ರೈತಾಪಿಗಳು ವಾರಗಟ್ಟಳೆ ಇದರಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯ ಮತ್ತು ಶೌರ್ಯ ಮೆರೆಯುತ್ತಾರೆ. ಮುಂಚೆ ಕ್ರೀಡಾ ಪ್ರದರ್ಶನಕ್ಕಾಗಿಯೇ  ಊರ ಹೊರಗೆ ಕ್ರೀಡಾಂಗಣವೊಂದನ್ನು ಮಾಡಲಾಗುತ್ತಿತ್ತು. ಅದಕ್ಕೆ ಮಂದ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಊರ ಎಲ್ಲರೂ ಸೇರಿ ಜನಪದ ಗೀತೆಗಳನ್ನಾಡುತ್ತಾ ಗುಂಪಾಗಿ ಕೂಡಿ ಎರಡೂ ಕೈಗಳಲ್ಲಿ ಬೆತ್ತದ ಬಾರುಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಲಯಬದ್ಧವಾಗಿ ತಿರುವುತ್ತಾ, ಬೀಸುತ್ತಾ ಕುಣಿಯುವ ಪರಿ ನೋಡಲು ಅದ್ಭುತ. ಇದಕ್ಕೆ ಹುತ್ತರಿ ಕೋಲಾಟ ಎಂದೇ ಕರೆಯಲಾಗುತ್ತದೆ. ಕೊಡವ ನೃತ್ಯಗಳಲ್ಲಿ ಇದು ಅತ್ಯಂತ ಜನಪ್ರಿಯ. ಹುತ್ತರಿಯ ಮತ್ತೊಂದು ಆಕರ್ಷಣೆ ಹೆಣ್ಣುಮಕ್ಕಳು ಭಾಗವಹಿಸುವ ಉಮ್ಮತ್ತಾಟ್ ನೃತ್ಯ.
ಕೃಷಿ ಆಚರಣೆಗಳಲ್ಲಿ ಕೊಡಗಿನ ಹುತ್ತರಿಗೆ ವಿಶಿಷ್ಟ ಸ್ಥಾನವಿದೆ. ಸುಗ್ಗಿಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಾಗೂ ತಮ್ಮ ಜಾನಪದ ನೃತ್ಯ ಸಂಗೀತಗಳನ್ನು ತಲೆಮಾರಿನಿಂದ ತಲೆಮಾರಿಗೆ ಒಯ್ಯುವ ಸಾಧನವಾಗಿಯೂ ಸಹ ಈ ಆಚರಣೆ ಬಳಕೆಯಾಗುತ್ತಿರುವುದು ಮಹತ್ವದ ಸಂಗತಿ.
ಆದರೆ ಕೊಡಗಿನಲ್ಲಿ ಸಾಂಪ್ರದಾಯಿಕ ಬೆಳೆಯಾದ ಭತ್ತದ ಸ್ಥಾನವನ್ನು  ನಿಧಾನಕ್ಕೆ ವಾಣಿಜ್ಯ ಬೆಳೆಗಳಾದ ಶುಂಠಿ ಮುಂತಾದವು ಆಕ್ರಮಿಸುತ್ತಿವೆ.  ಇದು ಹುತ್ತರಿಗೆ ಶಾಶ್ವತ ಕುತ್ತು ತರುವ ಬದಲಾವಣೆಯಾಗಿದೆ. ಒಂದು ಬೆಳೆಯ ಬದಲಾವಣೆ ಸಮಗ್ರವಾಗಿ ನೋಡಿದರೆ ಚಿಕ್ಕ ಕ್ರಿಯೆಯಂತೆ ಕಂಡರೂ ಸಹ ಅದು ಒಂದು ಶ್ರೀಮಂತ ಕೃಷಿ ಸಂಸ್ಸೃತಿಯ ಕೊಂಡಿಯನ್ನೇ ಕಳಚಿ ಹಾಕುತ್ತಿರುವ ರೀತಿ ಭಯ ಹುಟ್ಟಿಸುವಂತಹುದು.
ಬೆಳೆ ರಕ್ಷಣೆಗೆ ಕಾಸರಕದ ಕೊಂಬೆ ನೆಡುವಿಕೆ
ತುಳುವರಿಗೆ ವರ್ಷದಲ್ಲಿ ಆಟಿ ತಿಂಗಳು (ಜುಲೈ-ಆಗಸ್ಟ್)  ಬಹು ಮಹತ್ವದ ತಿಂಗಳುಗಳು. ಈ ಕಾಲದಲ್ಲಿ ಬೆಳೆಗಳಿಗೆ ಮತ್ತು ಮನುಷ್ಯರಿಗೆ ರೋಗಗಳು ಬರುವುದು ಸರ್ವೇ ಸಾಮಾನ್ಯ. ಇದರ ನಿವಾರಣೆಗಾಗಿ ಕೆಲವು ವಿಶಿಷ್ಟ ಆಚರಣೆಗಳು ಬಳಕೆಯಲ್ಲಿವೆ.
ಈ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯ ದಿನ ಬೆಳಗಿನ ಜಾವದಲ್ಲಿ ಭತ್ತದ ಗದ್ದೆಗೆ ಕಾಸರಕದ ಗಿಡದ ರೆಂಬೆಗಳನ್ನು ನೆಡುತ್ತಾರೆ, ಈ ಸಂದರ್ಭದಲ್ಲಿ ವರ್ಷದ ಮೊದಲನೇ ಬೇಳೆ- – ಅಂದರೆ ಎಣಿಲು ಬೆಳೆ ಚಾಲ್ತಿಯಲ್ಲಿರುತ್ತದೆ. ಹಾಗೂ ಈ ನಿರ್ದಿಷ್ಟ ತಿಂಗಳಿನಲ್ಲಿ ನಾಟಿ ಹಾಕಿದ ಭತ್ತದ ಸಸಿಗಳು ಇನ್ನೂ  ಎಳೆಯದಾಗಿರುತ್ತದೆ. ಹಾಗಾಗಿ ಹುಳುಗಳ ಕಾಟ ಹೆಚ್ಚು. ಇದರಿಂದ ರಕ್ಷಣೆ ಪಡೆಯಲು ಆಚರಿಸುವುದೇ ಈ ಆಚರಣೆ.
ಈ ಕಾಸರಕದ-ತುಳುವಿನಲ್ಲಿ ಕಾಯೆರ್- ರೆಂಬೆ ನೆಡುವ ಕ್ರಿಯೆಯನ್ನು ಕಾಪು (ರಕ್ಷಣೆ) ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ಬೆಳೆಗೆ ಅಮರಿಕೊಳ್ಳುವ ಮಾರಿ ಅರ್ಥಾತ್ ಹುಳಗಳ ಕಾಟವನ್ನು ಕಾಯೆರ್ ತಡೆಗಟ್ಟುತ್ತದೆ, ಆ ಮೂಲಕ ಬೆಳೆಯನ್ನು ರಕ್ಷಿಸುತ್ತದೆ, ನಮಗೆ ಸಮೃದ್ಧಿ ತರುತ್ತದೆ ಎಂಬ ನಂಬಿಕೆ ರೈತಾಪಿಗಳಲ್ಲಿದೆ. ಈ ಪ್ರದೇಶದಲ್ಲಿಯೇ ಮನುಷ್ಯರಿಗೆ ಮತ್ತು ಗ್ರಾಮಗಳಿಗೆ ಬರುವ ಮಾರಿಯನ್ನು ಓಡಿಸಲು ಆಚರಿಸಲಾಗುವ  ಆಟಿಕಳೆಂಜ ಕ್ರಿಯೆಯೂ ಸಹ ಬಳಕೆಯಲ್ಲಿರುವುದನ್ನು ನಾವು ಕಾಣಬಹುದು.
ಹಾಲೆ ಮರದ ಹಾಲು ಕುಡಿಯುವುದು
ಕರಾವಳಿಯ ತುಳು  ಸಂಸ್ಕೃತಿಯಲ್ಲಿ ಸಾಮೂಹಿಕವಾಗಿ ಹಾಲೆಮರದ ಮದ್ದು (ಹಾಲು) ಕುಡಿಯುವ ಸಂಪ್ರದಾಯವೂ ಸಹ ಇದೇ ಆಟಿ ಮಾಸದ ಸಂದರ್ಭದಲ್ಲಿ ಇರುವುದು ವಿಶೇಷ. ತುಳುವಿನಲ್ಲಿ ಪಾಲೆ ಎಂದು ಕರೆಯಲ್ಪಡುವ ಹಾಲೆಯ ಸಸ್ಯ ಶಾಸ್ತ್ರೀಯ ಹೆಸರು Alstonia Scholaris.
ಆಟಿ ಮಾಸದಲ್ಲಿಯೇ ಹಾಲೆ ಮರದ ಹಾಲನ್ನು ಕುಡಿಯಲು ಒಂದು ಪ್ರಬಲವಾದ ಕಾರಣವಿದೆ, ಏನೆಂದರೆ; ತುಳುವರಿಗೆ ಮೇ-ಜೂನ್-ಜುಲೈ ತಿಂಗಳುಗಳು ಮಳೆಗಾಲದ ಆರಂಭದ ತಿಂಗಳುಗಳಾಗಿದ್ದು ಈ ಸಮಯದಲ್ಲಿ ಉಳುಮೆ ಕೆಲಸ, ಬೀಜ ಹಾಕುವ ಹಾಗೂ ಭತ್ತದ ಸಸಿಗಳನ್ನು ನಾಟಿ ಹಾಕುವ ಕೆಲಸವಿರುತ್ತದೆ. ಈ ಕೆಲಸಗಳನ್ನೆಲಾ ಅವರು ಹೆಚ್ಚು-ಕಡಿಮೆ ಬಿರು ಮಳೆಯಲ್ಲಿದ್ದುಕೊಂಡೇ ಮಾಡುತ್ತಾರೆ. ಸದಾ ನೆನೆಯುವ ದೇಹವು ಛಳಿಯನ್ನು  ತಾಳಿಕೊಳ್ಳಲು ಹುರಿದ ಹುಣಸೆ ಬೀಜಗಳನ್ನು ಹೆಚ್ಚು ತಿನ್ನುತ್ತಾರೆ. ಈ ಕಾರಣದಿಂದ ಹೊಟ್ಟೆಯಲ್ಲಿ ಹುಳದ ಬಾಧೆ ಕಾಣಿಸಿಕೊಳ್ಳುತ್ತದೆ. ಈ ತೊಂದರೆಯಿಂದ ಮುಕ್ತಿ ಪಡೆಯಲು ಅವರು ಅನುಭವದಿಂದ ಕಂಡುಕೊಂಡದ್ದು ಹಾಲೆ ಮರದ ಹಾಲು ಕುಡಿಯುವ ಪರಿಹಾರ.
ಹಾಲೆ ಮರದಿಂದ ಹಾಲು ಸಂಗ್ರಹಿಸುವ ವಿಧಾನವೂ ಸಹ ವಿಚಿತ್ರವಾಗಿದೆ. ಅಮಾವಾಸ್ಯೆಯ ರಾತ್ರಿ ಬೆಳಕು ಮೂಡುವ ಮುಂಚೆಯೇ ಬೆತ್ತಲೆಯಾಗಿ ಹಾಲೆ ಮರದ ಬಳಿ ಬಂದು ಮರಕ್ಕೆ ಮೂರು ಸುತ್ತು ಹಾಕಿ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತೆಗೆಯುತ್ತಾರೆ. ಮೈಮೇಲೆ ಬಟ್ಟೆ ಹಾಕಿಕೊಂಡು ಹೋದರೆ ಹಾಲಿನಲ್ಲಿರುವ  ಔಷದಿಯ ಅಂಶ ಹೋಗಿಬಿಡುತ್ತದಂತೆ.  ಮತ್ತೊಂದು ನಿಷಿದ್ಧವೆಂದರೆ, ಹಾಲೆ ಮರದ ತೊಗಟೆ  ತೆಗೆಯಲು ಕಬ್ಬಿಣ ಇಲ್ಲವೇ ಇನ್ನಾವುದೇ ಆಯುಧ ಬಳಸುವಂತಿಲ್ಲ. ಹಾಗಾಗಿಯೇ ಕಲ್ಲನ್ನು ಬಳಸುತ್ತಾರೆ. ತೊಗಟೆ ತೆಗೆದುಕೊಂಡ  ನಂತರ ಮನೆಗೆ ಬರಬೇಕು. ಅಲ್ಲದೆ ಹಿಂದಿನ ದಿನವೇ ಮರದ ಬಳಿ ಹೋಗಿ ನಾಳೆ ಬರುತ್ತೇವೆ ಮದ್ದು ಕೊಡು ಎಂದು ಪ್ರಾರ್ಥಿಸಿ ಹೋಗಿರುತ್ತಾರೆ.
ತೊಗಟೆ ತಂದ ನಂತರ ಮನೆಯಲ್ಲಿ ಹೆಣ್ಣುಮಕ್ಕಳು ಅದನ್ನು ಜಜ್ಜಿ ರಸ ತೆಗೆದು ಅದಕ್ಕೆ ಬೆಳ್ಳುಳ್ಳಿ, ಮೆಣಸು ರಸವನ್ನು ಬೆರೆಸುತ್ತಾರೆ. ಅಲ್ಲದೆ ಒಂದು ಬೆಣಚು ಕಲ್ಲನ್ನು ಒಲೆಗೆ ಹಾಕಿ ಚೆನ್ನಾಗಿ ಕಾಯಿಸಿ ಬಿಸಿ ಮಾಡಿ ಆ ರಸಕ್ಕೆ ಒಗ್ಗರಣೆ ಹಾಕುತ್ತಾರೆ. (ಹೀಗೆ ಬೆಣಚು ಕಲ್ಲಿನ ಒಗ್ಗರಣೆ ಕೊಡುವ ಪದ್ಧತಿ ಬಯಲು ಸೀಮೆಯಲ್ಲಿಯೂ ಸಹ ಪ್ರಚಲಿತದಲ್ಲಿದೆ, ಅಲ್ಲಿ ಬಿದಿರು ಕಳಲೆ  ಸಾರು ಮಡುವಾಗ ಹೀಗೆ ಮಾಡುತ್ತಾರೆ) ನಂತರ ಖಾಲಿ ಹೊಟ್ಟೆಗೆ  ಎಲ್ಲರೂ ಅದನ್ನು ಕುಡಿಯುತ್ತಾರೆ. ಹಾಲೆ ಮರದ ರಸ ಉಷ್ಣ ಎಂಬ ಭಾವನೆಯಿರುವುದರಿಂದ ಅದನ್ನು ಕುಡಿದ ನಂತರ ಮೆಂತ್ಯದ ಗಂಜಿಯನ್ನು ಎಲ್ಲರಿಗೂ ಕೊಡುವುದು ರೂಡಿ.
ಬಲಿಪಾಡ್ಯಮಿಯ ವಿವಿಧ ಆಚರಣೆಗಳು
ದೀಪಾವಳಿ ಸಮಯದಲ್ಲಿ; ಅಂದರೆ ಅಕ್ಟೋಬರ್-ನವಂಬರ್ ತಿಂಗಳಿನಲ್ಲಿ ಎಲ್ಲೆಡೆ ಕುಯಿಲಿಗೆ ಸಿದ್ಧವಾಗುವ  ಬೆಳೆಗಳನ್ನು ಕಾಣಬಹುದು. ರೈತಾಪಿಗಳಿಗೆ ವರ್ಷದ ದುಡಿಮೆ ಕೈಗೆ ಬರುವ ಸಮಯ.  ಈ ಸಂದರ್ಭದಲ್ಲಿ ವಿವಿಧ ರೀತಿಯ ಕೃಷಿ ಆಚರಣೆಗಳೂ ಗರಿಗೆದರುತ್ತವೆ. ಬಯಲು ಸೀಮೆಯಲ್ಲಿ ಇವು ಸ್ವಲ್ಪ ಕಡಿಮೆಯಾದರೂ ಮಲೆನಾಡು ಮತ್ತು ಕರಾವಳಿ/ತುಳುನಾಡುಗಳಲ್ಲಿ ವಿಶೇಷವಾದ ಕೃಷಿ ಆಚರಣೆಗಳಿವೆ.
ಇದು ಮುಖ್ಯವಾಗಿ ಭತ್ತದ ಬೆಳೆ ತೆನೆ ಹೊಡೆದು ಕಾಳು ಕಟ್ಟುವ ಸಮಯ, ಅಡಿಕೆ ತೋಟದ ಕೆಲಸಗಳು ಇನ್ನೂ ಪ್ರಾರಂಭವಾಗಿರುವುದಿಲ್ಲ. ಸ್ವಲ್ಪ ಬಿಡುವಿನ ಮತ್ತು  ನಿರಾಳತೆಯ ಕಾಲ. ಎಲ್ಲೆಲ್ಲೂ ಹಸಿರು, ಮಳೆಯ ಬಿರುಸು ಕಡಿಮೆಯಾಗಿದ್ದರೂ ಅದರ ಪರಿಣಾಮವಾಗಿ ಹೊಲ-ಗದ್ದೆಗಳಲ್ಲಿ, ಹಳ್ಳ-ಕಾಲುವೆಗಳಲ್ಲಿ ನೀರು ಹರಿಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕಾಲಿಡುವ ಬೆಳಕಿನ ಹಬ್ಬ ದೀಪಾವಳಿ ಹತ್ತು-ಹಲವು ಕೃಷಿ ಆಚರಣೆಗಳಿಗೆ   ವೇದಿಕೆಯಾಗುತ್ತದೆ. ಮಲೆನಾಡಿನಲ್ಲಿ ನದೆಯುವ ಕೆಲವು ಆಚರಣೆಗಳನ್ನು ನೋಡುವುದಾರೆ;
ಬಲೀಂದ್ರ ಪೂಜೆ
ದೀಪಾವಳಿ ಸಮಯದಲ್ಲಿ ಬಲಿಪಾಡ್ಯಮಿಯ ದಿವಸ ತುಳುನಾಡು ಮತ್ತು ಮಲೆನಾಡಿನಲ್ಲಿ ಭೂಮಿ ಪುತ್ರನಾದ ಬಲೀಂದ್ರನನ್ನು ಭೂಮಿಗೆ ಬರಮಾಡಿಕೊಳ್ಳುವ ಆಚರಣೆಯೇ ಬಲೀಂದ್ರ ಪೂಜೆ. ಅಂದು ಮನೆಯಲ್ಲಿ ಹೆಣ್ಣು ಮಕ್ಕಳು ಮನೆಯ ಮುಂದಿನ ತುಳಸಿ ಕಟ್ಟೆಯ ಬಳಿ ಕಳಸ ಹೂಡಿ, ಅದಕ್ಕೆ ಅಡಿಕೆ ಹಿಂಗಾರದಿಂದ ಅಲಂಕರಿಸಿ ವಿವಿಧ ಅಡುಗೆಗಳ ಎಡೆ ಹಾಕುತ್ತಾರೆ. ಕೆಲವು ಕಡೆ ಬಾಳೆ ದಿಂಡಿನಲ್ಲಿ ಬಲೀಂದ್ರನ ಪ್ರತಿಮೆ ಮಾಡಿ ತುಳಸಿ ಕಟ್ಟೆಯ ಬಳಿ ಸ್ಥಾಪಿಸುವ ಸಂಪ್ರದಾಯವನ್ನೂ ಸಹ ಕಾಣಬಹುದು.
ಅದೇ ದಿನ ಸಂಜೆ ಇನ್ನೇನು ಹೊತ್ತು ಮುಳುಗುತ್ತದೆ ಎನ್ನುವಾಗ ಗದ್ದೆಗೆ ದೀಪದ ಕೋಲುಗಳನ್ನಿಡುವ ವಿಶಿಷ್ಟವಾದ ಹಾಗೂ ಅರ್ಥಪೂರ್ಣವಾದ ಆಚರಣೆ ನಡೆಯುತ್ತದೆ, ಗಂಡಸರು ಹೊಲಕ್ಕೆ ದೀಪ ಹಚ್ಚಲು ಹೊರಡುತ್ತಾರೆ, ಮನೆಯಲ್ಲಿ ಅದಕ್ಕಾಗಿಯೇ ಉದ್ದನೆಯ ಬಿದಿರು ಕೋಲುಗಳಿರುತ್ತವೆ, ಇವು ಅಂದಾಜು ನಾಲ್ಕರಿಂದ ಐದು ಅಡಿ ಉದ್ದವಿರುತ್ತವೆ, ಇವುಗಳ ತುದಿಗೆ ಎಣ್ಣೆ ಸವರಿದ ಬಟ್ಟೆಯನ್ನು ಸುತ್ತಿರುತ್ತಾರೆ. ಒಬ್ಬೊಬ್ಬರು ಏಳೆಂಟು ಕೋಲುಗಳನ್ನು ಕಂಕುಳಲ್ಲಿ ಇಟ್ಟುಕೊಂಡು ಅವರವರ ಗದ್ದೆಯಲ್ಲಿ ಓಡಾಡುತ್ತಾ ಅಲ್ಲಲ್ಲಿ ನೆಡುತ್ತಾರೆ, ಒಂದು ಕಡೆ ಎರಡರಿಂದ ಮೂರು ಕೋಲುಗಳಂತೆ ಗದ್ದೆಯ ವಿವಿಧ ಭಾಗಗಳಲ್ಲಿ ನೆಡುವುದು ವಾಡಿಕೆ, ಹೀಗೆ ನೆಡುವಾಗ ಬಲಿಯೇ ಬಾ.. ಬಲಿಯೇ ಕೂ.. ಎಂದು ತಾರಕ ಸ್ವರದಲ್ಲಿ ಕೂಗುತ್ತಾರೆ.
ಶಿವಮೊಗ್ಗದ ಭಾಗದಲ್ಲಿ ಈ ಆಚರಣೆಯನ್ನು ದೀವೋಳಿಗೆ ಎಂದು ಕರೆಯುತ್ತಾರೆ. ಆಚರಣೆಯ ಉದ್ದೇಶ ಹಾಗೂ ವಿಧಾನ ಬಹುಮಟ್ಟಿಗೆ ಒಂದೇ ಆದರೂ ಕೂಗುವುದರಲ್ಲಿ ಸ್ವಲ್ಪ ವ್ಯತ್ಯಾಸವಿದೆ, ಇವರು ಓಳಿಗೆ.. ದೀಪೋಳಿಗೆ… ಎಂದು ಗದ್ದೆಗಳಲ್ಲಿ ಲಯಬದ್ದವಾಗಿ ಕೂಗುತ್ತಾ ಸಾಗುತ್ತಾರೆ.
ಎಲ್ಲರ ಗದ್ದೆಗಳಲ್ಲಿ ಹತ್ತಿ ಉರಿಯುವ ದೀಪದ ಕೋಲುಗಳನ್ನು ನೋಡುವುದು ಅತ್ಯಂತ ಮನೋಹರ.
ಗದ್ದೆಗೆ ಹೂ ಹಾಕುವುದು
ಇದೇ ಸಂದರ್ಭದಲ್ಲಿ ಆಚರಿಸಲ್ಪಡುವ ಗದ್ದೆಗೆ ಹೂ ಹಾಕುವ ಆಚರಣೆಯೂ ಸಹ ಅರ್ಥಪೂರ್ಣವಾದುದು. ಬಲಿಪಾಡ್ಯಮಿಯ ಸಂಜೆ ಗದ್ದೆಗಳಿಗೆ ಮುಂಡುಗದ ಹೂ, ಕಕ್ಕೆ ಹೂ ಮತ್ತು ಹುಲಿಗಿಡದ ಹೂಗಳನ್ನು ಹಾಕುತ್ತಾರೆ, ಹೀಗೆ ಮಾಡುವುದರಿಂದ ಗದ್ದೆಗೆ ಕಾಟಕೊಡುವ ಹುಳುಗಳು ಮತ್ತು ಕೀಟಗಳು ಈ ಹೂಗಳಿಗೆ ಆಕರ್ಷಿತವಾಗುತ್ತವೆ ಎಂದು ರೈತಾಪಿಗಳ ಅನಿಸಿಕೆ.
ಅಂಟಿಗೆ-ಪಂಟಿಗೆ
ಬಲಿಪಾಡ್ಯಮಿಯ ಸಂದರ್ಭದಲ್ಲಿಯೇ ಮಲೆನಾಡಿನಲ್ಲಿ ಕಾಣಬರುವ ಮತ್ತೊಂದು ವಿಶೇಷ ಕ್ರಿಯೆ ಅಂಟಿಗೆ-ಪಂಟಿಗೆ. ಬಲಿಪಾಡ್ಯಮಿಯಿಂದ ಮುಂದಿನ ಮೂರು ದಿವಸ ಕಾಲ ಯುವಕರ ಹಿಂಡು ಹಳ್ಳಿಯ ಪ್ರತಿ ಮನೆಗೂ ಭೇಟಿ ನೀಡಿ ದೀವೋಳಿಗೆ ಪದಗಳನ್ನು ಹಾಡುತ್ತಾರೆ. ಇದು ಮಲೆನಾಡಿನ ಸಮೃದ್ಧ ಜನಪದ ಸಾಹಿತ್ಯವನ್ನು ಉಳಿಸುವ ಗಾಯನ ಪದ್ಧತಿಯಾಗಿದೆ.
ಬೂರಿಹಬ್ಬ
ಸತತ ಐದು ದಿನಗಳ ಕಾಲ ನಡೆಯುವ ವಿಶಿಷ್ಟ ಹಬ್ಬ. ದೀಪಾವಳಿಯ ಹಿಂದಿನ ದಿನ ಪ್ರಾರಂಭ. ಪ್ರತಿ ದಿನ ಒಂದೊಂದು ಆಚರಣೆ, ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಪಾಲ್ಗೊಂಡು ಖುಷಿ ಪಡುವ ರೀತಿ ಅನನ್ಯವಾದುದು.
ಮೊದಲ ದಿನ ಭೂತಗಳಿಗೆ ಕೋಳಿಯ ಬಲಿ ನಡೆಯುತ್ತದೆ, ಅವುಗಳನ್ನು ಸಂತೃಪ್ತಗೊಳಿಸಿದರೆ ಉಳಿದಿದ್ದೆಲ್ಲವೂ ಸುಸೂತ್ರ ಎಂದು ಜನಪದರ ನಂಬಿಕೆ, ಹಾಗಾಗಿ ಅವಕ್ಕೆ ಮೊದಲ ಆದ್ಯತೆ. ಅಂದು ಬೆಳಿಗ್ಗೆಯೇ ಅಡಿಕೆ ಹಿಂಗಾರ, ಪಚ್ಚೆತೆನೆ ಹಗೂ ಹಣ್ಣಡಿಕೆಗಳನ್ನು ಸುಟ್ಟು ಬೂದಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹುಡುಗರು ಖುಷಿಗಾಗಿ ಕಳ್ಳತನ ಮಾಡುವ ಪ್ರಸಂಗ ವಿಶೇಷವಾದದ್ದು. ತೆಂಗಿನ ಕಾಯಿಗಳನ್ನು  ಕದಿಯುತ್ತಾರೆ, ಹಸೆಕಲ್ಲನ್ನೇ ಎತ್ತಿ ಬಚ್ಚಿಟ್ಟುಬಿಡುತ್ತಾರೆ, ಅರೆಯಲು ಕಲ್ಲಿಲ್ಲದೆ ಹೆಂಗಸರ ಪರದಾಟ ಇವರಿಗೆ ನಗೆಪಾಟಲಿನ ಸಂಗತಿ. ಬೀದಿಯಲ್ಲಿ ನಿಲ್ಲಿಸಿದ್ದ ಗಾಡಿಯ ಚಕ್ರವನ್ನೇ ಬಿಚ್ಚಿ ಬೇರೆಡೆ ಸಾಗಿಸಿಬಿಡುತ್ತಾರೆ.
ಮರುದಿನ ಅಮಾವಾಸ್ಯೆ, ಅಂದು ಜಾನುವಾರುಗಳ ಹಬ್ಬ, ಅವುಗಳಿಗೆ ಮೈತೊಳೆದು, ಅಲಂಕಾರ ಮಾಡಿ ಬೆದರಿಸುತ್ತಾರೆ-ಅಂದರೆ ಓಡಿಸುತ್ತಾರೆ. ಅದರ ಮರುದಿನ ಪಾಡ್ಯ, ಅಂತಹ ವಿಶೇಷವೇನಿಲ್ಲ. ಆದರೆ ನಂತರದ ದಿನ-ಅಂದರೆ ನಾಲ್ಕನೆಯ ದಿನ ಅತ್ಯಂತ ಮುಖ್ಯವಾದುದು, ಅಂದು ಕರಿ ಹಬ್ಬ. ಬಲೀಂದ್ರನ ಪೂಜೆ, ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಎತ್ತಿನ ಗಾಡಿ, ನೇಗಿಲು, ನೊಗ, ಮಚ್ಚು, ಕುಡುಗೋಲು ಮುಂತಾದ ಸಕಲೆಂಟು ಹತಾರಗಳನ್ನು ಸ್ವಚ್ಚವಾಗಿ ತೊಳೆದು ಅಚ್ಚುಕಟ್ಟಾಗಿ ಜೋಡಿಸಿ ಅರಿಶಿನ-ಕುಂಕುಮ ಹೂ-ಪತ್ರೆಗಳನಿಟ್ಟು ಪೂಜೆ ಮಾಡುತ್ತಾರೆ.
ಐದನೇ ದಿನ ಹಾಗೂ ಕೊನೆಯ ದಿನ ವರ್ಷದ ತೊಡಕು. ಮನೆಯಲ್ಲಿ ಸಿಹಿ ಅಡುಗೆ. ಗದ್ದೆಯಿಂದ ಹೊಸ ಕದಿರು ತಂದು ಅಕ್ಕಿಯನ್ನು ಬಿಡಿಸಿ  ಅದರಿಂದ ವಿಶೇಷ ತಿನಿಸುಗಳನ್ನು ಮಾಡಿ ಊಟ ಮಾಡುತ್ತಾರೆ. ಜೊತೆಗೆ ಭತ್ತದ ಕದಿರುಗಳನ್ನು ತಂದು ಮನೆಯ ವಿವಿಧ ಜಾಗಗಳಲ್ಲಿಡುವುದು ಸಂಪ್ರದಾಯ.
ಹೀಗೆ ಭೂತಗಳಿಗೆ ಬಲಿ ಕೊಡುವುದರಿಂದ ಶುರುವಾಗುವ ಬೂರಿ ಹಬ್ಬ ಭತ್ತದ ಹೊಸ ಕದಿರನ್ನು ತರುವ ಕ್ರಿಯೆಯೊಂದಿಗೆ ಮುಕ್ತಾಯವಾಗುತ್ತದೆ. ಭರ್ತಿ ಐದು ದಿನ ಕಾಲ ಬೇಸಾಯದ ವಿವಿಧ ಅವಿಭಾಜ್ಯ ಅಂಗಗಳಿಗೆ ನಮಿಸಿ ಧನ್ಯತೆ ಹೊಂದುವ ರೀತಿಯೇ ವಿಶಿಷ್ಟವಾದದ್ದು. 
ಚರಗ ಚೆಲ್ಲುವುದು
ಬೆಳೆಗಳಿಗೆ ಅಂಟುವ ಪೀಡೆ ಪರಿಹಾರಾರ್ಥವಾಗಿ, ರೋಗ ನಿವಾರಣಾರ್ಥವಾಗಿ ಚರಗ ಚಲ್ಲುವ ಆಚರಣೆ ವ್ಯವಸಾಯಗಾರರಲ್ಲಿ ದಟ್ಟವಾಗಿ ನೆಲೆಯೂರಿದೆ.  ಚರಗ ಪದವನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಪ್ರಾಣಿಬಲಿಯ ನಂತರದ ರಕ್ತದ ಅನ್ನ ಹಾಗೂ ತಂಗಳು ಅಡುಗೆ ಪದಾರ್ಥಗಳಿಂದ ಮಾಡಿದ ಮಿಶ್ರಣ ನೆನಪಿಗೆ ಬರುತ್ತದೆ.  ಪ್ರಾಣಿಬಲಿಯನ್ನು ನೀಡಿ ಮಾಡಿದ  ಚರಗವು ಸಮಗ್ರವಾಗಿ ಊರಿನ ಕ್ಷೇಮವನ್ನು  ಕಾಪಾಡುತ್ತದೆ ಎಂದು ಭಾವಿಸುವುದಾದರೆ, ಪ್ರತಿ ರೈತ ತನ್ನ ಹೊಲಗದ್ದೆಗಳಿಗೆ ಚಲ್ಲುವ ಚರಗ ಅವನ ಆರಂಬವನ್ನು ರಕ್ಷಿಸುತ್ತದೆ. 
ಕೆಲವು ಪ್ರದೇಶಗಳಲ್ಲಿ ಚರಗದ ಕುಡಿಕೆಯೊಂದನ್ನು  ಮನೆಯಲ್ಲಿ ಸದಾ ಇಟ್ಟುಕೊಂಡಿರುತ್ತಾರೆ.  ಬೆಳೆಗಳಿಗೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಮುದ್ದೆ, ಅನ್ನ ಇಂತಹ ಯಾವುದಾದರೂ ಅಡಿಗೆಯನ್ನು ನೀರಿಗೆ ತೆಳ್ಳಗೆ ಕಲಸಿಕೊಂಡು ಹೊಲದ ಸುತ್ತ ಚಲ್ಲುತ್ತಾರೆ.  ಹಾಗೆ ಮಾಡುವುದರಿಂದ ಬೆಳೆಗಳಿಗೆ ಅಪಾಯಕಾರಿಯಾಗುವ ಹುಳು-ಹುಪ್ಪಟೆಗಳ ನಿವಾರಣೆ ಮತ್ತು ಪೀಡೆ ಪರಿಹಾರ ಮಾಡಿದಂತಾಗುತ್ತದೆ ಎಂಬ ಭಾವನೆ ರೈತಾಪಿಗಳಲ್ಲಿದೆ. ಎಲೆ ತೋಟ, ಬಾಳೆ  ತೋಟಗಳಿಗಂತೂ ನಿಯಮಿತವಾಗಿ ಚರಗ ಚಲ್ಲುವುದನ್ನು ಕಾಣಬಹುದು, ಈ ಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತದೆ. 
ಸಾಮಾನ್ಯವಾಗಿ ಹೀಗೆ ಚರಗ ಚೆಲುವುದು ಇಬ್ಬರ ಕೆಲಸ. ಮುಂದಿರುವ ನ ವ್ಯಕ್ತಿ ಒಂದು ಕೈಯಲ್ಲಿ ಬೆಂಡುಗೊಳ್ಳಿ ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟರೆ, ಹಿಂದಿನವನು ಚರಗದ ಕುಡಿಕೆ ಹಿಡಿದು ಅದನ್ನು ಚಲ್ಲುತ್ತಾ ‘ಹೋಲಿಗ್ಯ ಹೋಲಿಗ್ಯ ಎಂದು ಉದ್ಘರಿಸುತ್ತಾನೆ.  ಹೋಲಿಗ್ಯ ಎಂಬ ಕೂಗು ಎಲ್ಲಿಯವರೆಗೆ ಕೇಳಿಸುತ್ತದೆಯೋ ಅಷ್ಟು ವ್ಯಾಪ್ತಿಯ ಬೆಳೆಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ. ಒಂದು ಸುತ್ತು ಚರಗ ಚಲ್ಲಿದ ಮೇಲೆ ಮುಂದಿದ್ದವನು ಕುಡುಗೋಲಿನಿಂದ ಬಾಳೆಯ ಗಿಡವೊಂದನ್ನು ಕಡಿದು ಹಾಕು ಬೆಂಡುಗೊಳ್ಳಿಯನ್ನು ಬಿಸಾಕುತ್ತಾನೆ. 
ಒಕ್ಕಣೆ  ಮಾಡುವ ಸಂದರ್ಭದಲ್ಲಿ ಒಕ್ಕುವ ಕಣದಲ್ಲಂತೂ ಚರಗದ ಕುಡಿಕೆ ಸದಾ ತುಂಬಿರುತ್ತದೆ.  ಪ್ರತಿ ಹಂತದಲ್ಲೂ ಬೆಳಿಗ್ಗೆ, ಸಂಜೆ ಚರಗ ಚಲ್ಲಿಯೇ ಕೆಲಸ ಆರಂಭವಾಗುವುದು.  ಚರಗ ಚೆಲ್ಲುವ ಈ ಆಚರಣೆಯಿಂದ ಲೌಕಿಕ ಉಪಯೋಗವೂ ಇದೆ.  ಚರಗದಲ್ಲಿರುವ ರಕ್ತ, ಅನ್ನದಗುಳು, ಮುದ್ದೆ ಚೂರು ಮುಂತಾದ ಆಹಾರದ ಪದಾರ್ಥಗಳನ್ನು  ತಿನ್ನಲು ಬರುವ ಹಕ್ಕಿಗಳು ಅಲ್ಲಿರುವ ಆಹಾರವನು ತಿಮ್ದು ಮುಗಿಸಿದ ನಂತರ ಅಲಿಯೇ ಕಣ್ಣಿಗೆ ಬೀಳುವ ಹುಳುಗಳನ್ನು ತಿಂದು ಹಾಕುತ್ತವೆ.  ಹಾಗಾಗಿ ಚರಗ ಚೆಲ್ಲುವುದು ಕೀಟ ನಿವಾರಣೆ ಮಾಡುವ ಸರಳ ವಿಧಾನವೂ ಆಗಿದೆ.  ಔಡಲ ಗಿಡಗಳಿಗೆ, ಹೆಸರು ಗಿಡಗಳಿಗೆ ಹತ್ತಿದ ಹುಳಗಳನ್ನು ಚರಗ ಹಾಕಿ ಪಕ್ಷಿಗಳನ್ನು ಆಕರ್ಷಿಸಿ ನಿವಾರಣೆ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. 
ಎಳ್ಳಮವಾಸ್ಯೆ
ವರ್ಷದ ಜನವರಿ ಅಥವಾ ಡಿಸೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಸಂಭ್ರಮದ ಆಚರಣೆ ಎಳ್ಳಮಾವಾಸ್ಯೆ. ಈ ತಿಂಗಳುಗಳು ಮುಂಗಾರಿನ ಬೆಳೆಗಳ ಕಟಾವು ಮತ್ತು ಹಿಂಗಾರಿ ಬೆಳೆಗಳ ಬಿತ್ತನೆಗಳೆರಡೂ ಏಕಕಾಲಕ್ಕೆ ನಡೆಯುವ ಸಂಭ್ರಮದ ಮತ್ತು ಸಂಧಿಗ್ದದ ಸಮಯ. ಒಂದೆಡೆ ಮುಂಗಾರಿನ ಪ್ರಮುಖ ಬೆಳೆಯಾದ ಜೋಳದ ಕಟಾವು ನಡೆಯುತ್ತಿದ್ದರೆ, ಮತ್ತೊಂದೆಡೆ ಹಿಂಗಾರು ಬೆಳೆಗಳಾದ ಶೇಂಗಾ, ಕಡಲಿ, ಸೂರ್ಯಕಾಂತಿ, ಬೇಸಿಗೆ ಸಜ್ಜೆ ಮುಂತಾದ ಬೆಳೆಗಳ ಬಿತ್ತನೆ ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಾಜರಾಗುವುದು ಎಳ್ಳಮವಾಸ್ಯೆಯ ಸಡಗರ. ಅಂದು ಎಲ್ಲಿ ನೋಡಿದರೂ  ರಂಗುರಂಗಿನ ಬಟ್ಟೆ ತೊಟ್ಟ ಹೆಂಗಳೆಯರನ್ನು ಕರೆದೊಯ್ಯುವ ಸಾಲಂಕೃತ ಸಾಲು-ಸಾಲು ಎತ್ತಿನ ಗಾಡಿಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಆಚರಣೆಯ ದಿವಸ ಎಳ್ಳಿನ ಅಡುಗೆಗಳ ವಿಶೇಷ.
ಅಂದು ಮೊದಲ ಕೋಳಿ ಕೂಗುವಾಗಲೇ ಊರಿಡೀ ಎಚ್ಚೆತ್ತಿರುತ್ತದೆ.  ಯುವಕರು ಬಂಡಿ ತೊಳೆದು ಅದರ ಚಕ್ರಕ್ಕೆ ಕೀಲೆಣ್ಣೆ ಹಾಕಿ, ಕೊಲ್ಲಾರಿ ಕಟ್ಟಿ, ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ ಕೊಂಬು ಗುಣುಸು ಹಾಕಿ, ಹಣೆ ಗೆಜ್ಜೆ, ಕೊರಳು ಗಂಟೆ ಕಟ್ಟಿ, ಮೈ ತುಂಬ ಚಿತ್ತಾರದ ಜೂಲ ಹಚ್ಚುತ್ತಿದ್ದರೆ… ಅತ್ತ ಹೆಣ್ಣು ಮಕ್ಕಳಿಂದ ಅಡುಗೆಮನೆ ಘಮಘಮಗುಟ್ಟುತ್ತಿರುತ್ತದೆ.
ಎತ್ತು-ಗಾಡಿಗಳನ್ನು ಅಲಂಕರಿಸಿ ಮನೆಯ ಎಲ್ಲರೂ ಸೇರಿ ಹೊಲದತ್ತ ಸಾಗುತ್ತಾರೆ.  ಅವರು ತಂತಮ್ಮ ಹೊಲಗಳಿಗೆ `ಚರಗ’ ಆಚರಿಸಲು ಹೊರಟ ಪರಿ ಇದು. ಹಚ್ಚ ಹಸರಿನ ಬೆಳೆ ಹೊತ್ತ ಭೂಮಿ ತಾಯಿಗೆ ಇಂದು `ಸೀಮಂತ’ ಮಾಡಿ ಸಂತಸ ಹಂಚಿಕೊಳ್ಳುವ ಶುಭ ದಿನ ಈ ಎಳ್ಳು ಅಮಾವಾಸ್ಯೆ. ಅಂದು ಹೊಲಕ್ಕೆ ಯಾರೇ ಬಂದರೂ ಅವರು ಅತಿಥಿಗಳು.
ಎಳ್ಳಮವಾಸ್ಯೆಯ ಅಡುಗೆ ವೈವಿಧ್ಯ ಅಪಾರ.    ಹಿಂದಿನ ದಿನ ಇಡೀ ರಾತ್ರಿ ತಯಾರಿಸಿದ ಎಳ್ಳು ಹೋಳಿಗೆ, ಎಳ್ಳು ಬಜಿ, ಕಡಕ್ ಸೆಜ್ಜೆ ರೊಟ್ಟಿ, ಕರಿಗಡಬು, ತರಾವರಿ ಮಸಾಲೆ ಉಸುಳಿ, ಖಾರಸಾರು, ಎಣ್ಣೆಗಾಯಿ ಬದನೆಕಾಯಿ ಪಲ್ಯೆ, ಕೆನೆ ಮೊಸರು, `ಚರಗ’ದ ನೈವೇದ್ಯಕ್ಕೆ ತಯಾರಿಸಿದ ಜೋಳ, ಅವರೆ, ಅಕ್ಕಿ ಕಿಚಡಿ. ಈ ಎಲ್ಲಾ ಭಕ್ಷ್ಯಾನ್ನಗಳ ಬಿದಿರು ಬುಟ್ಟಿ ಭರ್ತಿಯಾಗಿ ಬಂಡಿ ಏರಿರುತ್ತವೆ. ಹೊಲಕ್ಕೆ ಸಾಗುವ ಬಂಡಿಗಳ ಸಂಭ್ರಮ ಮಾತಿಗೆ ನಿಲುಕದ್ದು. ನಾ ಮುಂದೆ- ತಾ ಮುಂದೆ ಎಂಬ ಸ್ಪರ್ಧೆಯೂ ನಡೆಯುತ್ತದೆ.  ಹೊಸದಾಗಿ ಮದುವೆಯಾದ ಜೋಡಿಗಳೂ ಅಂದು ಈ ಆಚರಣೆಯಲ್ಲಿ ಪಾಲ್ಗೊಳ್ಳಬೇಕು.
‘ಕಡಬು ಬಜಿ’ ಇಂದಿನ ಅತ್ಯಂತ ವಿಶೇಷ ತಿನಿಸು. ಪ್ರತಿಯೊಂದು ಕಾಳು, ಕಾಯಿ ಪಲ್ಲೆ ಮತ್ತು ತರಕಾರಿಗಳನ್ನು ಸೇರಿಸಿ ಬೇಯಿಸಿದ್ದೇ ಕಡಬು ಬಜಿ. ಎಲ್ಲ ಪದಾರ್ಥಗಳನ್ನೂ ಸಹ ಸೇರಿಸುವುದರಿಂದ ಇದು ಅತ್ಯಂತ ರುಚಿಯಾಗಿರುತ್ತದೆ. ಅಲ್ಲದೆ ಜೋಳದ ಕಬ್ಬು (ಕಾಂಡ) ತಿನ್ನುವುದು ಇಂದಿನ ದಿನದ ಪದ್ಧತಿ. ಬೇರೆ ದಿನಗಳಲ್ಲಿಯೂ ತಿನ್ನುತ್ತಾರೆ ಆದರೆ ಎಳ್ಳಮವಾಸ್ಯೆಯಂದು ತಿಂದರೆ ತುಂಬಾ ರುಚಿಯಾಗಿರುತ್ತದೆ ಎಂಬುದು ಹಿರಿಯರ ಅನಿಸಿಕೆ.
ಹೊಲಕ್ಕೆ ಸಾಗಿದ ನಂತರ  ಬನ್ನಿ ಗಿಡದ ಕೆಳಗಡೆ ಭರಮ ದೇವರೆಂದು ಕರೆಯುವ  ಐದು ಕಲ್ಲುಗಳನ್ನು ಇಟ್ಟು ಪೂಜಿಸುತ್ತಾರೆ.  ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ `ಉಲ್ಲುಲ್ಲಗೋ… ಚಳಂಬ್ರಿಗೋ’ ಎನ್ನುತ್ತಾ ಉಗ್ಗುತ್ತಾರೆ.  ಹೊಲದಲ್ಲಿ ಬೆಳೆದಿರುವ ಜೋಳದ ತೆನೆಗಳಿಗೆ ಅರಿಶಿನ -ಕುಂಕುಮ ಇಟ್ಟು, ಆರತಿ ಬೆಳಗಿ ಮನೆಯ ಹ್ಗಿರಿಯರು ಅಥವಾ ಹೆಣ್ಣು ಮಕ್ಕಳು ಪೂಜಿಸುತ್ತಾರೆ, ಅಲ್ಲದೆ ಹೊಲದಲ್ಲಿರುವ ಬಾವಿ, ಬೋರ್ ವೆಲ್ ಗಳಿಗೂ ಸಹ ಪೂಜಿಸಲಾಗುತ್ತದೆ. ಹೊಲದಲ್ಲಿರುವ ಇತರ ಬೆಳೆಗಳಿಗೂ ಸಹ ಪೂಜಿಸಲಾಗುತ್ತದೆ.  ಎಳ್ಳಮವಾಸ್ಯೆಯ ಮತ್ತೊಂದು ವಿಶೇಷವೆಂದರೆ ಅಂದು ಜೇನು ತಿಂದರೆ ಒಳ್ಳೆಯದೆಂಬ ಭಾವನೆಯಿದೆ. ಗಂಡಸರು ಹೊಲದಲ್ಲಿ ಜೇನು ಕಟ್ಟಿದ್ದರೆ ಕಿತ್ತು ತಂದು ತುಪ್ಪವನ್ನು ಎಲ್ಲರಿಗೂ ಹಂಚುತ್ತಾರೆ. ಹೊಲದಲಿ ಜೇನಿರುವ ಸ್ಥಳ ಮುಂಚಿತವಾಗಿ ತಿಳಿದಿದ್ದರೂ ಸಹ ಎಳ್ಳಮವಾಸ್ಯೆಯ ದಿವಸವೇ ಕೀಳುವುದು ಪದ್ಧತಿ. ಇದಾದ ನಂತರ `ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಒಂದೆಡೆ ಕುಳಿತು  ಊಟ ಮಾಡುತ್ತಾರೆ.
ಸಂಜೆಯಾಗುತ್ತಿದ್ದಂತೆ ಚಕ್ಕಡಿಗಳು ಮತ್ತೆ ಒಂದೊಂದಾಗಿ ಊರ ದಾರಿ ಹಿಡಿಯುತ್ತವೆ.
ಮಗೆ ಮುಂಡುಗನನ್ನು ಹಾಕುವುದು
ನಾಟಿಯಾದ ಸಸಿಗಳು ಗಟ್ಟಿಯಾಗಿ ಚಿಗುರತೊಡಗಿದಾಗ ಮಲೆನಾಡಿನ ವ್ಯವಸಾಯಗಾರರು `ಎರಕಲು ಗೂಟ’ದ ಆಚರಣೆಗೆ ತೊಡಗುತ್ತಾರೆ.  ಮಗೆ ಮಳೆ ಶುರುವಾಗುತ್ತದೆ ಎನ್ನುವಾಗ ಹಿಂದಿನ ಸಂಜೆಯೇ ಹಳ್ಳಗಳ ದಂಡೆಯಲ್ಲಿ ಬೆಳೆಯುವ ಮುಂಡುಗದ ತುಂಡುಗಳನ್ನು ಕಡಿದು ತಂದು ಗದ್ದೆಯ ಪ್ರತಿ ಹಾಳೆಯಲ್ಲೂ ಇಟ್ಟು ಬರುತ್ತಾರೆ.  ರಾತ್ರಿಯ ಹೊತ್ತು ಒಬ್ಬ ಗಂಡಸು ಮೈಮೇಲೆ ನೂಲೆಳೆಯಿಲ್ಲದಂತೆ ಬೆತ್ತಲೆಯಾಗಿ ಹೋಗಿ ಆ ತುಂಡುಗಳನ್ನು ಪ್ರತಿ ಹಾಳೆಯಲ್ಲಿ ನೆಟ್ಟು ಬರುತ್ತಾನೆ.  ಇತ್ತೀಚೆಗೆ ಬೆತ್ತಲೆ ಹೋಗುವ ಮನುಷ್ಯ ಕರಿ ಕಂಬಳಿ ಹೊದೆಯಬಹುದೆಂಬ ರಿಯಾಯಿತಿ ನೀಡಿದ್ದಾರೆ.  ಹೀಗೆ ಎರಕಲು ಗೂಟ ನೆಡುವುದರಿಂದ ಭೂಮಿ ತನ್ನ ಫಲವಂತಿಕೆಯನ್ನು ಕಳೆದುಕೊಳ್ಳುವುದಿಲ್ಲವೆಂತಲೂ, ಪೈರಿಗೆ ಯಾವ ರೋಗ ರುಜಿನ, ಹುಳು, ಉಪ್ಪಟೆಯ ಕಾಟವಿರುವುದಿಲ್ಲವೆಂತಲೂ, ಪ್ರಾಣಿಗಳಿಂದ ತೊಂದರೆ ಬರುವುದಿಲ್ಲವೆಂತಲೂ ನಂಬಲಾಗುವುದು.  ಕೆಲವರು ಮುಂಡಗದ ತುಂಡಿನ ಬದಲು ಕವೆಕೋಲುಗಳನ್ನು ನೆಟ್ಟು ಅದರ ಮೇಲೆ ಬಿಳಿಕಲ್ಲಿಟ್ಟು `ಕಣ್ಣಾಸರು’ ಎಂದುಕೊಳ್ಳುತ್ತಾರೆ. 
ಕರಿಕೊಳ್ಳಿ ಹಾಕುವುದು
ಗದ್ದೆಯನ್ನು ಕೊಯ್ಲು ಮಾಡುವಾಗ ಪೈರನ್ನು ಸಂಪೂರ್ಣವಾಗಿ ಕಟಾವು ಮಾಡದಿರುವುದು ಒಂದು ವಿಶೇಷ.  ಮಲೆನಾಡಿನ ಭಾಗಗಳಲ್ಲಿ ಕೊನೆಯಲ್ಲಿ ಐದು ಸಸಿಗಳನ್ನು ಉಳಿಸುತ್ತಾರೆ.  ಕೊಯ್ಲು ಮಾಡಿದ ಹುಲ್ಲನ್ನು ಹೊರೆ ಮಾಡಿ ಬಣವೆಗೆ ಹೊತ್ತು ಸಾಗಿಸುತ್ತಾರೆ.  ಐದು ಸಸಿಗಳ ಜಾಗದ ಹತ್ತಿರದ ಕೊನೆಯ ಹೊರೆಯನ್ನು ನಿಶ್ಚಿತ ಮನುಷ್ಯನೊಬ್ಬ ಹೊತ್ತು ಹೊರಡುತ್ತಾನೆ.  ಆಗ ಅವನು ಯಾರು ಮಾಡನಾಡಿಸಿದರೂ ಮಾತನಾಡದೆ ಬಣವೆಗೆ ಹಾಕಿ, ಮನೆಯ ಒಲೆಯಲ್ಲಿ ಕೊಳ್ಳಿಯೊಂದನ್ನು ತಂದು ಪ್ರಸ್ತುತ ಗದ್ದೆಗೆ ಹಣಿದು ಬರುತ್ತಾನೆ.  ಇದಕ್ಕೆ `ಕರಿಕೊಳ್ಳಿ ಹಾಕುವುದು’ ಎನ್ನುತ್ತಾರೆ.  ಇಷ್ಟು ದಿವನ ಪೈರಿನಿಂದ ತುಂಬಿ ತುಳುಕಿದ ಗದ್ದೆ ಬೋಳಾಗಿರುವುದನ್ನು ಕಂಡು ಯಾರೂ ಕಣ್ಣು ಹಾಕಬಾರದೆಂದು ಈ ಆಚರಣೆ. 
ಬಯಲು ನಾಡಿನಲ್ಲಿ ಐದು ಸಸಿ ಉಳಿಸಿ ಪೂಜಿಸುವುದನ್ನೇ `ಬೆಳೆಮುಂಬು’ ಎಂದು ಕರೆಯುತ್ತಾರೆ.  ಕೊನೆಯಲ್ಲಿನ ಸಸಿಗಳನ್ನು ತುದಿಗಂಟು ಹಾಕಿ ಕಟ್ಟಿ ಕುಡುಗೋಲು ಮಸಗಲ್ಲುಗಳನ್ನಿಟ್ಟು ಪೂಜಿಸಿ ಎಡೆ ಹಿಡಿದು ಊಟ ಮಾಡುತ್ತಾರೆ.  ಬೆಳೆಮುಂಬು ಆಚರಣೆಗೆ ದಾಸಯ್ಯ ಪೂಜಾರಿಗಳನ್ನೂ ಆಹ್ವಾನಿಸುವುದುಂಟು.  ಆಗ ಜೊತೆ – ಜೊತೆಗೆ ಮಂತ್ರ ಹೇಳುವುದು, ಶಂಖ ಊದುವುದು, ಜಾಗಟೆ ಬಾರಿಸುವುದು ನಡೆಯುತ್ತದೆ.  ಬೆಳೆ ಮುಂಬನ್ನೇ ಹೋಲುವಂತಹ ಹತ್ತಿದೇವರ ಆಚರಣೆ ಒಂದಿದೆ.  ಮೊದಲ ಬಾರಿಗೆ ಹತ್ತಿ ಬಿಡಿಸುವಾಗ ಆಯ್ದ ಗಿಡವೊಂದಕ್ಕೆ ಪೂಜಿಸಿ ಬಿಡಿಸಿದ ಮೊದಲ ಹತ್ತಿಯನ್ನು ಏರಿಸುತ್ತಾರೆ.  ನಂತರ ಪ್ರತಿ ಸಾರಿ ಹಾಗೆಯೇ ಇರುತ್ತದೆ.  ಎಲ್ಲ ಗಿಡಗಳನ್ನು ಕತ್ತರಿಸಿ ಹಾಕಿದರೂ ಹತ್ತಿ ದೇವರ ಗಿಡ ಮಾತ್ರ ಮುಂದಿನ ಉಳುಮೆಯಾಗುವ ತನಕ ಹಾಗೆಯೇ ಇರುತ್ತದೆ.
ಪ್ರಸ್ತುತ ಬೆಳೆಮುಂಬು ಮತ್ತು ಹತ್ತಿ ದೇವರ ಪೂಜೆ ಆಚರಣೆಯು ಪ್ರಾಕ್ತನ ಮಾನವನ ನಂಬಿಕೆಯ ಪಳೆಯುಳಿಕೆಯಂತೆ ಕಾಣುತ್ತದೆ.  ಧಾನ್ಯಗಳಲ್ಲಿ, ಬೆಳೆಗಳಲ್ಲಿ ಆತ್ಮವಿದೆ.  ಅದನ್ನು ಪೂರ್ಣ ಕೊಯ್ದು ಹಾಕಿದರೆ ಪುನಃ ನಮಗೆ ಸಿಕ್ಕಲಾರದು ಎಂಬ ನಂಬಿಕೆಯ ಪರಿಣಾಮವೂ ಇದ್ದಂತೆ ತೋರುತ್ತದೆ.  ಪ್ರಪಂಚದಾದ್ಯಂತ ಹರಡಿರುವ ಇಂತಹ ಅನೇಕ ಆಚರಣೆಗಳನ್ನು ಫ್ರೇಜರ್‌ರವರು ಗಮನಿಸಿ ವಿಶ್ಲೇಷಿಸಿದ್ದಾರೆ.  ಆದಿವಾಸಿಗಳ ಪ್ರಕಾರ ಒಂದು ಹೊಲದಲ್ಲಿ ಬೆಳೆ ಬೆಳೆದಿದ್ದರೆ ಹಾಗಾಗಲು ಅದರಲ್ಲಿ ಧಾನ್ಯಮಾತೃವಿನ ಆತ್ಮ ಇರುವುದೇ ಕಾರಣ.  ಬೆಳೆಯನ್ನು ಕೊಯ್ಯುವವರೆಗೆ ಮಾತ್ರ ಧಾನ್ಯಮಾತೃ ಹೊಲವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.  ಆದರೆ ಬೆಳೆಯನ್ನು ಕೊಯ್ಯುತ್ತಾ ಬಂದಂತೆ ಸಾಯುವುದನ್ನು ತಪ್ಪಿಸಿಕೊಳ್ಳಲು ಒಂದರಿಂದ ಇನ್ನೊಂದು ಪೈರಿಗೆ ಓಡುತ್ತದೆ.  ಆದರೆ ಹೊಲದಲ್ಲಿ ಎಲ್ಲ ಪೈರನ್ನೂ ಕೊಯ್ದು ಇನ್ನೊಂದು ಮಾತ್ರ ಉಳಿದಿದ್ದರೆ ಅದರಲ್ಲಿಯೇ ಧಾನ್ಯಮಾತೃ ಇರುವುದೆಂದು ಅವರ ನಂಬಿಕೆ.  ಆದುದರಿಂದ ಧಾನ್ಯಮಾತೃ ಆ ಕೊನೆಯ ಪೈರಿನಲ್ಲಿ, ಕೊನೆಯ ಕಂತೆಯಲ್ಲಿ, ಕೊನೆಯ ಪೈರನ್ನು ಕೊಯ್ಯುವ ವ್ಯಕ್ತಿಯಲ್ಲಿ, ಕೊನೆಯ ಕಂತೆ ಕಟ್ಟುವ ವ್ಯಕ್ತಿಯಲ್ಲಿ ಇರಲು ಸಾಧ್ಯ.  ಈ ಧಾನ್ಯಮಾತೃವನ್ನು ಹೊರಗೆ ಹೋಗದಂತೆ ಸಾಯಿಸಿದರೆ ಅದರ ಶಕ್ತಿ ಹೊಲದಲ್ಲಿಯೇ ಉಳಿದು ಮುಂದಿನ ವರ್ಷ ಬೆಳೆ ಬೆಳೆಯಲು ಸುಗಮವಾಗುತ್ತದೆ.  ಈ ಮಾತುಗಳ ಆಧಾರದ ಮೇಲೆ ನಮ್ಮ ಬೆಳೆಮುಂಬು ಈ ಹೊಲದ ಧಾನ್ಯದ ಆತ್ಮವನ್ನು ತನ್ನಲ್ಲೇ ಉಳಿಸಿಕೊಂಡು ಮುಂದಿನ ಫಲಶಕ್ತಿಗೆ ಕಾರಣವಾಗುವ ಸಂಕೇತವಾಗಿದೆ.  ಹತ್ತಿ ದೇವರ ಪೂಜೆ ಆಚರಣೆಯೂ ಇದನ್ನೇ ನೆನಪಿಸುತ್ತದೆ.  ಪ್ರಾಯಶಃ ಬಲಿ ಕೊಡುವ ಪದ್ಧತಿ ಸುಧಾರಣೆ ಆಗಿ ಆಗಿ ಬೆಳೆ ಉಳಿಸುವ ಕ್ರಮಕ್ಕೆ ಬಂದು ನಿಂತಿದೆ.
ವೀಳ್ಯದೆಲೆಗೆ ಗೌರಿ ಪೂಜೆ
ವೀಳ್ಯದೆಲೆಗೆ ನಮ್ಮ ಗ್ರಾಮೀಣ ಸಮುದಾಯ ನೀಡುವ ಪ್ರಾಮುಖ್ಯತೆ ನಮಗೆಲ್ಲರಿಗೂ ತಿಳಿದದ್ದೇ. ಶುಭ ಕಾರ್ಯವಾಗಲೀ, ಅಶುಭ ಕಾರ್ಯವಾಗಲೀ, ಭೂತ ಬಿಡಿಸುವುದಿರಲಿ, ಬಾಗಿನ ಕೊಡುವುದಿರಲಿ `ಎರಡೆಲೆ ಎರಡಡಿಕೆ’ ಇರಲೇಬೇಕು.  ಏನೇ ಕೊಡು-ತೆಗೆದುಕೊಳ್ಳುವುದಿರಲಿ ಎಲೆಯಡಿಕೆ ಜೊತೆಯಲ್ಲಿಟ್ಟೇ ಕೊಡಬೇಕೆಂಬುದು ಒಂದು ಸಂಪ್ರದಾಯ, ತಾಂಬೂಲಕ್ಕಂತೂ ವೀಳ್ಯದೆಲೆಯೇ ಮೂಲ. ಹಾಗಾಗಿ ವೀಳ್ಯದೆಲೆ ಎಂದರೆ ರೈತರಿಗೆ ಸಾಕ್ಷಾತ್ ಗೌರಿ. ವೀಳ್ಯದೆಲೆ ತೋಟವನ್ನು ಅವರು ವಿಶೇಷ ಗೌರವದಿಂದಲೇ ಕಾಣುತ್ತಾರೆ. ಅಲ್ಲಿ ಚಪ್ಪಲು ಮೆಟ್ಟಬಾರದು,  ಔಷಧ ಸಿಂಪರಣೆ ಕೂಡದು ಎಂಬ ನಿಷೇಧಗಳಿವೆ.
ವೀಳ್ಯದೆಲೆಯನ್ನು ಗೌರಿಯ ಅವತಾರ ಎಂದು ನಂಬುವುದು ಎಲ್ಲ ಪ್ರದೇಶಗಳಲ್ಲಿ ಕಾಣಬಹುದು.  ಎಲೆ ತೋಟವಂತೂ ಸಾಕ್ಷಾತ್ ದೇವಾಲಯದಂತೆಯೇ ಪರಿಗಣಿಸುತ್ತಾರೆ. ದೇವಾಲಯದ ಸಕಲ ನಿರ್ಬಂಧಗಳೂ ಇಲ್ಲಿವೆ.  ಕೃಷಿ ಏನೆಲ್ಲ ಆಧುನೀಕರಣಗೊಂಡಿದ್ದರು ಸಹ ಎಲೆ ತೋಟಕ್ಕೆ ಮಾತ್ರ ರಾಸಾಯನಿಕಗಳು ಸೋಂಕುವಂತಿಲ್ಲ.  ವೀಳ್ಯದೆಲೆ ವಾಣಿಜ್ಯ ಬೆಳೆಯಾಗಿದ್ದರೂ ಈಗಲೂ ರೈತರಲ್ಲಿ ಎಲೆತೋಟದ ಬಗೆಗಿನ ಭಕ್ತಿ, ಗೌರವ, ನಂಬಿಕೆಗಳು ಬದಲಾಗಿಲ್ಲ.  ತೋಟವಿರುವ ಪ್ರತಿಯೊಬ್ಬರೂ ಗೌರಿ ಹಬ್ಬದ ಸಮಯದಲ್ಲಿ ಗೌರಿಪೂಜೆ ಮತ್ತು ಬೊಮ್ಮಪ್ಪನ ಪೂಜೆಯನ್ನು ತೋಟದಲ್ಲೇ ಮಾಡುತ್ತಾರೆ. ಅದಕ್ಕೆ ಹಿನ್ನೆಲೆಯಾಗಿ ಸ್ವಾರಸ್ಯವಾದ ಕಥೆಯೊಂದು ಹೀಗಿದೆ:
ಪಾಂಡವರ ತಾಯಿ ಕುಂತಿದೇವಿಯು ಗಜಗೌರಿ ವ್ರತವನ್ನು ಮಾಡಲು ದೇವಲೋಕದಿಂದ ತರಿಸಿದ ಐರಾವತ ಮುಂತಾದ ಅನೇಕ ವಸ್ತುಗಳಲ್ಲಿ ವೀಳ್ಯದೆಲೆ ಅಂಬು ಸಹ ಒಂದು. ಪೂಜೆ ಮುಗಿದ ನಂತರ ಮುಂಚೆಯೇ ಆದ ಕರಾರಿನಂತೆ ಅವು  ದೇವಲೋಕದ ಕಡೆ ಹೊರಟವು.  ಆದರೆ ಅವುಗಳನ್ನು ದೇವಲೋಕಕ್ಕೆ ಹೋಗಲು ಬಿಡದೆ ಒಬ್ಬೊಬ್ಬರು ಒಂದೊಂದನ್ನು ಕಟ್ಟಿ ಹಾಕಿದರು.  ಭೀಮ – ಐರಾವತವನ್ನು, ಧರ್ಮರಾಯ ಅವರೆಕಾಳನ್ನು, ನಕುಲ – ಸಹದೇವರು ಭತ್ತವನ್ನು ಹಿಡಿದು ಕಟ್ಟಿಹಾಕಿದರೆ  ವೀಳ್ಯದೆಲೆ ಅಂಬನ್ನು `ಬೊಮ್ಮಪ್ಪ’ನೆಂಬ ಗಂಗ ಮತಸ್ಥ  ಬೆಸ್ತರವನು ಕಟ್ಟಿ ಹಾಕಿದನಂತೆ. ಹಾಗಾಗಿ ಅವೆಲ್ಲಾ ಭೂ ಲೋಕದಲ್ಲಿಯೇ ಉಳಿದವಂತೆ. ಈಗಲೂ ಸಹ ವೀಳ್ಯದೆಲೆ ಅಂಬು ಆಕಾಶದತ್ತ ಹರಿಯುವುದು ದೇವಲೋಕದ ಆಸೆಗಾಗಿಯೇ! ಅದಕ್ಕಾಗಿಯೇ ಪ್ರತಿ ವರ್ಷ ಎಲೆ ಅಂಬನ್ನು ಇಳಿಸುವ ಪದ್ಧತಿ ಇದೆ ಎನ್ನುತ್ತಾರೆ.  ಮತ್ತು ವೀಳ್ಯದೆಲೆಯನ್ನು ಕಟ್ಟಿ ಹಾಕಿದ ಬೊಮ್ಮಪ್ಪನ ನೆನಪಿಗಾಗಿ ವರ್ಷಕ್ಕೊಮ್ಮೆ ಎಲೆ ಅಂಬನ್ನು ಇಳಿಸಿ ಎಡೆ ಹಾಕಿ ಪೂಜೆ ಮಾಡುತ್ತಾರೆ.  ಜೊತೆಗೆ ಸಾಕ್ಷಾತ್ ಗೌರಿಯೇ `ವೀಳ್ಯದೆಲೆ’ಯಾಗಿದ್ದಾಳೆ ಎಂದು ನಂಬಿದ ರೈತರು ಅದೇ ಸಮಯಕ್ಕೆ `ಗೌರಿ ಪೂಜೆ’ಯನ್ನೂ ಮಾಡುತ್ತಾರೆ.
ಗೌರಿ ಹಬ್ಬದ ದಿನ ಅಥವಾ ಹಬ್ಬ ಮುಗಿದ ಒಂಭತ್ತು ದಿವಸಕ್ಕೆ ತೋಟದ ದೇವ ಮೂಲೆಯಲ್ಲಿ ಮೂಡಣ ದಿಕ್ಕಿಗೆ ಚಿಕ್ಕ ಚಪ್ಪರ ಹಾಕಿ ಬಾಳೆಕಂದು ಕಟ್ಟಿ ಕಳಸವಿಟ್ಟು ಗೌರಿಯ ಮುಖವನ್ನು ಬರೆದ ತೆಂಗಿನ ಕಾಯಿಯನು ಕಳಸದ ಬಾಯಿಗಿಡುತ್ತಾರೆ. ಆ ತೆಂಗಿನಕಾಯಿಗೆ ವಾಲೆ, ಜುಮುಕಿ, ಬಳೆ, ಸರ… ಮುಂತಾದ ಒಡವೆಗಳನ್ನು ತೊಡಿಸಿ, ಹೊಸ ಸೀರೆ, ಕುಬುಸದ ಕಣ ಉಡಿಸಿ ಎಳ್ಳಿನ ಚಿಗಳಿ, ಅಕ್ಕಿಯ ತಂಬಿಟ್ಟು, ಅಕ್ಷತೆ, ಸಿಹಿ ಅಡುಗೆ ಎಡೆ ಇಡುತ್ತಾರೆ.  ತೋಟದಲ್ಲಿ ಬಳಸುವ ಕುಡುಗತೋಲು, ಏಣಿ, ಎಲೆ ಕುಯ್ಯುವ ಉಗುರು, ನೀರು ಹುಯ್ಯುವ ಗುಂಬ ಎಲ್ಲವನ್ನೂ ಇಟ್ಟು ಸಿಂಗರಿಸಿ ಸಮೃದ್ಧವಾಗಿ ಸೇವಂತಿಗೆ ಹೂ ಮುಡಿಸಿ ಮೊದಲು ಗೌರಮ್ಮನ ತಂಗಿಯಾದ ಗಂಗೆಯನ್ನು ಪೂಜಿಸುತ್ತಾರೆ.  ನಂತರ ಗೌರಿಗೆ ಪೂಜೆ ಮಾಡಿ ಮುತ್ತೈದೆಯರು ಅಕ್ಷತೆ ಹಚ್ಚಿ ಬಾಗಿನ ಕೊಡುತ್ತಾರೆ.
ಪೂಜೆಯೆಲ್ಲಾ ಹೆಂಗಸರ ಕೆಲಸ.  ಆದರೆ ಬೊಮ್ಮಪ್ಪನಿಗೆ ಎಡೆ ಹಾಕುವುದು ಗಂಡಸರ ಕೆಲಸ.  ಬೊಮ್ಮಪ್ಪನಿಗೆಂದೇ ಜೀರಿಗೆ ಮೆಣಸು ಹಾಕಿ ಮಾಡಿದ ಕಿಚಡಿ ಅನ್ನ, ನೀರು ಮತ್ತು ಗಂಧದ ಕಡ್ಡಿ.  ಇವು ಮೂರನ್ನೂ ಒಬ್ಬೊಬ್ಬರು ಹಿಡಿದುಕೊಂಡು
`ಬೊಮ್ಮಪ್ಪೊ, ಬೊಮ್ಮಪ್ಪೊ,
ವರಗುಡ್ಲು ಮಡಗಿವ್ನಿ, ಗುಂಬ ಮಡಗಿವ್ನಿ,
ನಿಂಗೆ ಬೇಕಾದ್ದೆಲ್ಲ ಮಡಗಿವ್ನಿ
ಊಟ ಮಾಡಿ ಬೊಮ್ಮಪ್ಪೋ, ಒಳ್ಳೇದು ಮಾಡು ಬೊಮ್ಮಪ್ಪೋ…’ ಎನ್ನುತ್ತಾ, ಅನ್ನ-ನೀರು ಎರಚುತ್ತಾ ತೋಟ ಮೂರು ಸುತ್ತು ಹಾಕುತ್ತಾರೆ.  ಸಂಜೆ ಹೊತ್ತು ಈ ಪೂಜೆ ನಡೆಯುತ್ತದೆ.
ಇಳಿಗತ್ತಲ ಹೊತ್ತಿನಲ್ಲಿ  ಹಳ್ಳಿಯ ಎಲ್ಲರೂ ವೀಳ್ಯದೆಲೆ ತೋಟದಲ್ಲಿ ಸೇರಿ ಗೌರಿಗೆ ಹಸೆ ಹಚ್ಚಿ, ಬೊಮ್ಮಪ್ಪನಿಗೆ ಎಡೆ ಹಾಕಿ, ಆ ಮೂಲಕ ತಮ್ಮ ಬೇಸಾಯವೆಂಬ ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿ ಖುಷಿಪಡುತ್ತಾರೆ.
ನೇಗಿಲು ಪೂಜೆ : ಬಿತ್ತನೆ ಬೀಜ ಪರೀಕ್ಷಿಸುವ ಆಚರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಕನಕಪುರ ಮತ್ತು ತಮಿಳುನಾಡು ಪ್ರದೇಶದ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಿಂದೆ – ಮುಂದೆ ನೇಗಿಲು ಪೂಜೆ ಎಂಬ ವಿಶಿಷ್ಟ ಆಚರಣೆ ಮಾಡುತ್ತಾರೆ. ಹಸಿ ಸಗಣಿಯಲ್ಲಿ ಬಟ್ಟಲಾಕಾರ ಮಾಡಿ ಸ್ವಲ್ಪ ಒಣಗಿಸಿ ಅದಕೆ ಕೆಮ್ಮಣ್ಣು ಹಾಕಿ ತಾವು ಮುಂದಿನ ವರ್ಷ ಬಿತ್ತುವ ೫, ೭ ಅಥವಾ ೯ ಜಾತಿಯ ಬೀಜಗಳನ್ನು ಸ್ವಲ್ಪ-ಸ್ವಲ್ಪ ಬಿತ್ತುತ್ತಾರೆ.  ಸಾಮಾನ್ಯವಾಗಿ ಅವರೆ, ತೊಗರಿ, ರಾಗಿ, ಭತ್ತ, ಜೋಳ, ನವಣೆ, ಹರಳು, ಹುರುಳಿ ಮುಂತಾದವನ್ನು ಬಿತ್ತುವುದು ರೂಢಿ. 
ಬಿತ್ತಿದ ನಂತರ ಈ ಸಗಣಿ ಬಟ್ಟಲನ್ನು ಎರಡು ಮರದ ನೇಗಿಲುಗಳಿಗೆ ಕಟ್ಟುತ್ತಾರೆ.  ನೇಗಿಲುಗಳು ಹೊಸತಾಗಿರಬೇಕು, ಹಳೆಯವನ್ನು ಬಳಸುವುದಿಲ್ಲ. ಹೀಗೆ ಬಿತ್ತಿದ ನಂತರ ಒಂಭತ್ತನೇ ದಿನದವರೆಗೆ ನೀರು ಹಾಕಿ ಕೊನೆಯ ದಿನ ಮನೆ ಹಿರಿಯರು ಮತ್ತು ಗ್ರಾಮದ ಹಿರಿಯರು ಸೇರಿ ಮೊಳಕೆಯನ್ನು ಪರೀಕ್ಷಿಸುತ್ತಾರೆ.  ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಮೊಳಕೆ ಬಂದಿದೆಯೋ ಅಷ್ಟು ಬೆಳೆ ಮುಂದಿನ ವರ್ಷ ಆಗುತ್ತದೆ ಎಂಬುದು ನಿರೀಕ್ಷೆ. 
ಉದಾಹರಣೆಗೆ ರಾಗಿ ಐವತ್ತು ಪೈಸೆ (ಅರ್ಧ ಭಾಗ) ಮೊಳಕೆ ಬಂದಿದ್ದರೆ ಎಂಟಾಣೆ ಬೆಳೆ, ಮುಕ್ಕಾಲು ಭಾಗ ಬಂದಿದ್ದರೆ ಹನ್ನೆರಡಾಣೆ ಬೆಳೆ ಆಗುತ್ತದೆ.  ಈ ರೀತಿ ನಿರ್ಧರಿಸಿ ಯಾವುದು ಹೆಚ್ಚು ಹುಲುಸಾಗಿ ಮೊಳಕೆ ಬಂದಿರುತ್ತದೆಯೋ ಅದನ್ನು ಈ ವರ್ಷ ಜಾಸ್ತಿ ಪ್ರಮಾಣದಲ್ಲಿ (ಒಂದ್ ಕೈ ಮುಂದೆ ಮಾಡಿ ಬಿತ್ಬೇಕು) ಬಿತ್ತಬೇಕೆಂದು ತೀರ್ಮಾನಿಸಿಕೊಳ್ಳುತ್ತಾರೆ.  ಹೇಗೆಂದರೆ ಹೆಸರು ಕಾಳು ಉತ್ತಮವಾಗಿ ಮೊಳಕೆಯಾಗಿದ್ದರೆ ಅಕ್ಕಡಿ ಸಾಲಿಗೆ ಬೇರೆ ಕಾಳುಗಳನ್ನು ಕಡಿಮೆ ಮಾಡಿ ಹೆಸರುಕಾಳು ಜಾಸ್ತಿ ಮಾಡುತ್ತಾರೆ.  ತೊಗರಿ ಚೆನ್ನಾಗಿ ಮೊಳಕೆ ಬಂದಿದ್ದರೆ ಅದನ್ನು ಹೆಚ್ಚು ಮಾಡುತ್ತಾರೆ. ತೀರ್ಮಾನ ಮುಗಿದ ನಂತರ ಊರವರೆಲ್ಲರೂ ಸಾಮೂಹಿಕವಾಗಿ ತೆರಳಿ ಎಲ್ಲಾ ಮೊಳಕೆ ಬಂದ ಬಟ್ಟಲುಗಳನ್ನು  ಗಂಗಮ್ಮನಿಗೆ (ನೀರಿನ ಸೆಲೆ) ಬಿಡುತ್ತಾರೆ.
ಇದನ್ನು ಆಚರಣೆಯ ಮಟ್ಟಕ್ಕಿಂತ ಆಚೆ ನಿಂತು ನೋಡಿದರೆ ಹೀಗನ್ನಿಸುತ್ತದೆ.  ಯುಗಾದಿ ಮಾರ್ಚಿ-ಏಪ್ರಿಲ್‌ನಲ್ಲಿ ಬರುತ್ತದೆ.  ಡಿಸೆಂಬರ್, ಜನವರಿಯಲ್ಲಿ ಕುಯಿಲು, ಒಕ್ಕಣೆ ಮಾಡಿ ಸಂಗ್ರಹ ಮಾಡಿದ ಬೀಜಗಳನ್ನು ಜೂನ್-ಜುಲೈ ತಿಂಗಳಲ್ಲಿ ತೆಗೆದು ಬಿತ್ತನೆ ಮಾಡುತ್ತಾರೆ. ಈ ಎರಡು ಅವಧಿಯ ನಡುವೆ ನೇಗಿಲು ಪೂಜೆ ನೆಪದಲ್ಲಿ ಸಂಗ್ರಹವಾದ ಬೀಜಗಳನ್ನು ಒಮ್ಮೆ ಬಿಚ್ಚಿ ನೋಡಿದಂತಾಗುತ್ತದೆ.  ಹುಳ-ಗಿಳ ಬಿದ್ದಿದ್ದರೆ ಹುಷಾರಾಗಬಹುದು.  ಜೊತೆಗೆ ನೇಗಿಲು ಪೂಜೆಯಲ್ಲಿ ಚೆನ್ನಾಗಿ ಮೊಳಕೆ ಬರದಿದ್ದಾಗ ಬೀಜ ಹಾಳಾಗಿದೆ ಎಂಬ ಅಂಶ ತಿಳಿದುಬಂದು ಅದನ್ನು ಬದಲಾಯಿಸಬಹುದು ಮತ್ತು ಮೊಳಕೆ ಪ್ರಮಾಣ ಕಡಿಮೆಯಾಗಿದ್ದು ಗೊತ್ತಾಗಿ ಬಿತ್ತುವ ಬೀಜದ ಪ್ರಮಾಣವನ್ನು ಹೆಚ್ಚಿಸಬಹುದು.  ಅಂದರೆ ಎಕರೆಗೆ ೧೪ ಕೆ.ಜಿ. ಬಿತ್ತುವ ಕಡೆ ೧೬ ಕೆ.ಜಿ. ಬಿತ್ತುವುದು… ಹೀಗೆ.  ಆಗ ಅಲ್ಲಿಗಲ್ಲಿಗೆ ಸರಿಹೋಗುತ್ತದೆ.
ತಮಿಳುನಾಡಿನ ಹುಲಿಬಂಡೆ ಎಂಬ ಕಾಡುಹಳ್ಳಿಯಲ್ಲಿ ಇಡೀ ಗ್ರಾಮದ ಪ್ರತಿಯೊಂದು ಮನೆಯವರೂ ನೇಗಿಲು ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ಕ್ರಮಬದ್ಧವಾಗಿ ಮಾಡುತ್ತಾರೆ.
ಬಿತ್ತನೆ ಬೀಜಗಳ ಮೊಳಕೆ ಶಕ್ತಿಯನ್ನು ಪರೀಕ್ಷಿಸುವ ಈ ಆಚರಣೆ ವಿಶಿಷ್ತವಾದುದು ಮತ್ತು ರೈತರ ಜಾಣತನಕ್ಕೆ ಉತ್ತಮ ನಿದರ್ಶನ. ಆದರೆ ಈ ಆಚರಣೆ ಇಂದು ತೀರಾ ಅಪರೂಪವಾಗುತ್ತಿದೆ.
ಬೆಳೆ ಹರಕೆಗಳು
ತನಗೆ ಖಾಯಿಲೆ-ಕಸಾಲೆ ಬಂದಾಗ ಅದು ವಾಸಿಯಾಗಲೆಂದು ಹೇಗೆ ಹರಕೆ ಕಟ್ಟಿಕೊಳ್ಳುತ್ತಾರೋ ಅದೇ ರೀತಿ ತನ್ನ ಬೆಲೆಗಳಿಗೂ ರೋಗ-ರುಜಿನಗಳು ಬಾರದಿರಲೆಂದು ಹರಕೆ ಕಟ್ಟಿಕೊಳ್ಳೂವುದನ್ನು ಕಾಣಬಹುದು. ದವಸ ಧಾನ್ಯಗಳಿಗೆ ದೆವ್ವ, ಪೀಡೆಯ ಕಾಟ ಬರದಿರಲೆಂದು, ಕಳ್ಳ-ಕಾಕರ ಕಾಟವಿರದಿರಲೆಂದು, ರೋಗ-ರುಜಿನಗಳು ಮುತ್ತದಿರಲೆಂದು ಹರಕೆ ಹಾಕಿಕೊಳ್ಳುತ್ತಾನೆ.  ಅದು ಈಡೇರಿದರೆ ತಪ್ಪದೆ ಹರಕೆ ತೀರಿಸುತ್ತಾನೆ. 
ಉದಾಹರಣೆಗೆ ಔಡಲಕ್ಕೆ ಕೊಂಡಲ ಹುಳ ಬಿದ್ದರೆ ಮನೆ ದೇವರಿಗೆ ಹರಳೆಣ್ಣೆ ತಂದು ಒಪ್ಪಿಸುವುದಾಗಿ ಹರಕೆ ಹಾಕಿಕೊಂಡು ದೇವರ ತೀರ್ಥ ತಂದು ಹಾಕುತ್ತಾನೆ.  ಜೋಳಕ್ಕೆ ಜೋನಿ ಬೀಳದಿರಲೆಂದು, ತೆಂಗಿನಕಾಯಿಯ ಹರಳುದುರದಿದ್ದರೆ ಸೂರೆ ಹಬ್ಬ ಮಾಡುತ್ತೇನೆಂದು, ಹೊಗೆಸೊಪ್ಪಿಗೆ ತೊಂಡ್ಲೆ ಹುಳ ಬೀಳದಿದ್ದರೆ ಬೆಳ್ಳಿಯ ಅಥವಾ ಬಂಗಾರದ ತೊಂಡ್ಲೆ ಮಾಡಿಸಿಕೊಡುತ್ತೇವೆಂದು ಹರಕೆ ಹಾಕಿಕೊಳ್ಳುತ್ತಾರೆ. ಪೈರು ಚೆನ್ನಾಗಿ ಬೆಳೆದರೆ ಕಣ್ಣಾಸರು ಆಗದಿರಲಿ ಎಂದು ಬೆರ್ಚು ನಿಲ್ಲಿಸುತ್ತಾರೆ.  ಬೆರ್ಚು, ಬೆಳ್ತಲೆ, ಚಂದಪ್ಪ, ಬೆಕ್ಕಿನ ಸೋರೆ ಗಡಿಗೆ, ಮಡಕೆ ಎಂದೆಲ್ಲ ಕರೆಸಿಕೊಳ್ಳುವ ಈ ಸುಣ್ಣ ಹಚ್ಚಿದ ಬೋರಲು ಮಡಕೆ ಪ್ರತಿ ಹೊಲಗದ್ದೆಗಳಲ್ಲೂ ಕಾಣಸಿಗುತ್ತದೆ.  ಅಡಿಕೆ, ಬಾಳೆ, ತೆಂಗಿನ ತೋಟಗಳಲ್ಲಂತೂ ಆಳೆತ್ತರದ ಮನುಷ್ಯನ ಆಕಾರವೇ ಬೆರ್ಚು ಆಗಿ ಕಾರ್ಯನಿರ್ವಹಿಸುತ್ತದೆ.  ಬೆರ್ಚು ನಿಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೇ ಇರುವಂತೆ ಕಾಣುತ್ತದೆ.  ಜನ್ನ ಕವಿ ತನ್ನ ಯಶೋಧರ ಚರಿತೆಯಲ್ಲಿ `ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರದಿಂ’ ಎಂದು ಪ್ರಯೋಗಿಸಿದ್ದಾನೆ.  ಋಗ್ವೇದದ ಕಾಲದಲ್ಲೂ ಸಹ ಜೋಳದ ಜಮೀನಿನಿಂದ ಹಕ್ಕಿಗಳನ್ನು ದೂರವಿರಿಸಲು ಬೆದರುಗೊಂಬೆಗಳನ್ನು ನಿಲ್ಲಿಸಲಾಗುತ್ತಿತ್ತು ಎಂದು ತಿಳಿದು ಬರುತ್ತದೆ.
ಹೊಸ ಪೈರಿನ ಹಬ್ಬ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಬಂಧುಗಳು ಮಾತೆ ಮೇರಿಯ ಹುಟ್ಟಿದ ಹಬ್ಬವನ್ನು ಹೊಸ ಪೈರಿನ ಹಬ್ಬವನ್ನಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಅಂದು ಮನೆಯನ್ನು ವಿಶೇಷವಾಗಿ ಅಲಂಕರಿಸಿ ವಿವಿಧ ರೀತಿಯ ತರಕಾರಿ ಮತ್ತು ವೈವಿಧ್ಯಮಯ ಬೆಳೆಗಳ ತೆನೆಗಳನ್ನು ಮನೆಗೆ ತಂದು ಮಾತೆ ಮೇರಿಯ ಮೂರ್ತಿಯ ಮುಂದಿರಿಸಿ ಶಾಖಾಹಾರಿ ಅಡುಗೆ ತಯಾರಿಸಿ ಎಲ್ಲ ಒಟ್ಟಿಗೆ ಕಲೆತು ಊಟ ಮಾಡಿ ಸಂಭ್ರಮಿಸುತ್ತಾರೆ. 
ಕೊನೆ ಮಹೂರ್ತ
ಮಲೆನಾಡಿನ ಸಾಂಪ್ರದಾಯಿಕ ಅಡಕೆ ಬೆಳೆಯುವ ಕುಟುಂಬಗಳಲ್ಲಿ ಪ್ರಚಲಿತವಿರುವ ಆಚರಣೆ. ವಿಜಯದಶಮಿಯ ದಿವಸ ಸಾಂಕೇತಿಕವಾಗಿ ಅಡಿಕೆ ಗೊನೆ ಇಳಿಸುತ್ತಾರೆ, ಹಾಗೆ ಮೊದಲ ಗೊನೆ ಇಳಿಸುವಾಗ ಮಡುವ ಆಚರಣೆಯೇ ಕೊನೆ ಮಹೂರ್ತ. ಒಂದು ನಿರ್ದಿಷ್ಟ ಅಡಿಕೆ ಮರವನ್ನು ಗುರುತಿಸಿ ಅದಕ್ಕೆ ಪೂಜೆ ನೆರವೇರಿಸಿ ಆ ಮರದಿಂದ ಐದು ಗೊನೆಗಳನ್ನು ಇಳಿಸಿ ಆ ಗೊನೆಗಳನು ತುಳಸಿಕಟ್ಟೆಯ ಮುಂದೆ ಇಟ್ಟು ಜಾಗಟೆ ಬಾರಿಸುವ ಮೂಲಕ ಪೂಜಿಸುತ್ತಾರೆ.
ಗೌರಿ ಹಬ್ಬ
ಗೌರಿ ಮತ್ತು ಗಣೇಶನ ಹಬ್ಬ ಮುಖ್ಯವಾಗಿ ಭೂಮಿ ಮತ್ತು ಜಲ ಸಂಬಂಧದ ಆಚರಣೆಗಳನ್ನು ಹೊಂದಿವೆ.  ಹೊಲಗದ್ದೆಗಳಲ್ಲಿ ಪೈರು ಮೊಳೆತು ಬೆಳೆ ಏಳುವುದರ ಆರಂಭಕಾಲದಲ್ಲಿ ಗೌರಿ-ಗಣೇಶ ಹಬ್ಬ ಕಾಲೂರುತ್ತದೆ. ಇದು ಹುಬ್ಬೆ-ಉತ್ತರೆ ಮಳೆಗಳ ತುಂಬು ಮಳೆಗಾಲ.  ಬಯಲು ಸೀಮೆಯಲ್ಲಿ ರಾಗಿ, ಶೇಂಗಾ ಕಳೆ ತೆಗೆಯುವ ಹಂತದಲ್ಲಿರುತ್ತವೆ. ಈಗ ನಡೆಯುತ್ತಿರುವ ಆಬ್ಬರದ, ಆರ್ಭಟದ ಹಬ್ಬಕ್ಕೂ ಸಾಂಪ್ರದಾಯಿಕವಾದ ಹಬ್ಬಕ್ಕೂ ಅಜಗಜಂತರ ವ್ಯತ್ಯಾಸವಿದೆ. ಕೃಷಿಕರ ಗೌರಿ-ಗಣೇಶ ಆಚರಣೆಯ ಆಶಯವೇ ಬೇರೆ.
ಗಣೇಶನ ಇನ್ನೊಂದು ಹೆಸರು ವಿಘ್ನೇಶ್ವರ ಎಂಬುದು ನಮಗೆಲ್ಲ ತಿಳಿದಿದೆ. ಬಹಳ ಹಿಂದೆ ರೈತರು ಹೊಲಗದ್ದೆಗಳ ಕಡೆಯಿಂದಲೇ ಮರಳು ಮಿಶ್ರಿತ ಕೆಂಪು ಮಣ್ಣನ್ನು ತಂದು, ಅದರಿಂದಲೇ ಗಣೇಶನನ್ನು ನಿರ್ಮಿಸಿ ಪೂಜಿಸುತ್ತಿದ್ದರು. ಪೂಜಾ ಸಾಮಗ್ರಿಯಲ್ಲಿ ಮುಖ್ಯವಾದುದು ಗರಿಕೆ.  ತೋಟಗಳಲ್ಲಿ ಬೆಳೆಗೆ ತೊಂದರೆ ಕೊಡುವ ಮುಖ್ಯ ಕಳೆ ಗರಿಕೆ.  ಈ ಗರಿಕೆಯ ಜತೆಗೆ ಧಾನ್ಯ ಶತ್ರು ಇಲಿಯೂ ಇರುತ್ತದೆ.  ಗಣೇಶನ ಕಾಲ ಅಡಿಯಲ್ಲಿ ಇಲಿ, ಗಣೇಶನ ಒಂದು ಕೈಯಲ್ಲಿ ಧಾನ್ಯದ ತೆನೆ, ಇನ್ನೊಂದು ಕೈಯಲ್ಲಿ ಅದೇ ಧಾನ್ಯದಿಂದ ತಯಾರಿಸಿದ ಕಡುಬು ಇರುತ್ತದೆ.  ಜನಪದ ಗೀತೆಗಳಲ್ಲಿ ಭೂಮಿಯನ್ನು ಸ್ತುತಿಸುವಾಗ ಎಳ್ಳು ಬೆಳೆಯುವ ಭೂಮಿ ಎಂದು ಹೇಳಲಾಗುತ್ತದೆ.  ಈ ಎಳ್ಳಿನಿಂದ ತಯಾರಿಸಿದ ಉಂಡೆ ಗಣೇಶನಿಗೆ ಪ್ರಿಯ.  ಇದರ ಜತೆಗೆ ಗಣೇಶನು ಚೆನ್ನಾಗಿ ಊಟ ಮಾಡಿದ್ದರಿಂದ ಆತನ ಹೊಟ್ಟೆ ದಪ್ಪವಾಗಿ, ಆ ಹೊಟ್ಟೆ ಒಡೆಯಬಾರದೆಂದು ಹಾವು ಸುತ್ತಿಕೊಂಡಿರುತ್ತಾನೆ ಎಂದು ಕಥೆ ಪ್ರಚಲಿತದಲ್ಲಿರುವುದು ಎಲ್ಲರೂ ತಿಳಿದ ವಿಷಯ. ಒಟ್ಟಾರೆ ಇಡೀ ಗಣೇಶನಲ್ಲಿ ಪ್ರಕ್ರಿತಿಯ ವಿವಿಧ ಅಂಗಗಳಿರುವುದನ್ನು ಗುರುತಿಸಬಹುದು.
ಗಣೇಶನ ಸಮೃದ್ಧಿಯ ಊಟ, ಒಂದು ಕೈಯ ತೆನೆ, ಇನ್ನೊಂದು ಕೈಯ ಕಡುಬು, ಕಾಲ ಕೆಳಗಿನ ಗರಿಕೆ ಮತ್ತು ಇಲಿ ಹಾಗೂ  ಈ ಹಬ್ಬ ಬೆಳೆಗಳೆಲ್ಲಾ ಬೆಳವಣಿಗೆ ಹಂತದಲ್ಲಿರುವಾಗ  ಬರುವುದು,  ಇದೆಲ್ಲಾ ಭೂಮಿಯ ಮತ್ತು ಮಣ್ಣಿನ ವ್ಯವಸಾಯ ಸಂಬಂಧದ ಆಚರಣೆಯಾಗಿ ಕಾಣಿಸುತ್ತದೆ.
ಆದರೆ ಕಾಲಕ್ರಮೇಣ ಗಣೇಶನ ರೂಪ ಮತ್ತು ಇನ್ನಿತರ ವಿವರಗಳ ಮೇಲೆ ಬೇರೆ ಬೇರೆ ಕಥೆಗಳು ಹುಟ್ಟಿಕೊಂಡು ಪ್ರಚಾರಕ್ಕೆ ಬಂದವು.
ಗಣೇಶನ ಹಬ್ಬ ಭೂಮಿ ಮತ್ತು ಪ್ರಕೃತಿ ಪ್ರಜ್ಞೆಯನ್ನು ಸಂಕೇತಿಸಿದರೆ, ಇದರೊಡನೆ ಹೊಂದಿಕೊಂಡು ಬರುವ ಗೌರಿಹಬ್ಬ ನೀರಿನ ಪೂಜೆಯನ್ನು ಕುರಿತು ಹೇಳುತ್ತದೆ. ಗಣೆಶನ ಹಬ್ಬಕ್ಕಿಂತ ಒಂದು ದಿನ ಮುಂಚೆ ಗೌರಿ ಹಬ್ಬ ಬರುತ್ತದೆ. ಇದಕ್ಕೆ ಹಳ್ಳಿಗರು ನೀಡುವ ಕಾರಣ. ತವರು ಮನೆಗೆ ಬರುವ ಗೌರಮ್ಮನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಮಗನಾದ ಗಣೇಶ ಒಂದು ದಿನ ತಡೆದು ಬರುತ್ತಾನೆ. 
ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆಯ ಹೆಂಗಸರು ನೀರು ತುಂಬಿರುವ ಕೆರೆ, ಬಾವಿ ಅಥವಾ ಹರಿಯುವ ತೊರೆ ಕಡೆಗೆ ಹೋಗಿ ಆ ನೀರನ್ನು ಪೂಜಿಸಿ, ನೀರಿನೊಳಗೆ ಕೈಯಿಟ್ಟು ಒಂದು ಹಿಡಿ ಮರಳು ತರುತ್ತಾರೆ, ಅದನ್ನು ಮರಳು ಗೌರಮ್ಮ ಎಂದು ಕರೆಯುತ್ತಾರೆ. ಮತ್ತೆ ಕೆಲವೆಡೆ ಅರಿಷಿಣದ ಹುಂಡಿಯಿಂದ ತಯಾರಿಸಿದ ಮೂರ್ತಿಯನ್ನು ಗೌರಿಯೆಂದು ಮನೆಗೆ ತರುತ್ತಾರೆ.  ವಾಸ್ತವವಾಗಿ ಇದು ಜಲಪೂಜೆಯೇ.  ಈ ಗೌರಿ ಗಣೇಶನ ತಾಯಿಯೆಂದು ಹೆಸರಿಸಲಾಗಿದೆ. ಎಂದರೆ ಧಾನ್ಯ ದೇವತೆ ಗಣೇಶನಿಗೆ ಜಲದೇವತೆಯನ್ನು ತಾಯಿಯಾಗಿ ಕಲ್ಪಿಸಲಾಗಿದೆ. 
ಮನೆಯಲ್ಲಿ ಗೌರಮ್ಮನನ್ನು ಕೂರಿಸಿ (ಪ್ರತಿಷ್ಠಾಪಿಸಿ) ಬಾಗಿನ ಕೊಡುತ್ತಾರೆ. ಈ ಬಾಗಿನದಲ್ಲಿ ಕಾರೆ ಹಣ್ಣು, ಯಲಚಿ ಹಣ್ಣು (ಬೋರೆ ಹಣ್ಣು) ಬಿಕ್ಕೆ ಹಣ್ಣು, ಹಸಿ ಅಕ್ಕಿ ತಂಬಿಟ್ಟು, ಎಳ್ಳಿನ ಚಿಗುಳಿ ಪ್ರಮುಖವಾಗಿರುತ್ತವೆ. ಹೊಸದಾಗಿ ಮದುವೆಯಾದವರು ಗೌರಮ್ಮನಿಗೆ ಪೂಜಿಸಿ ಬಾಗಿನ ಅರ್ಪಿಸುತ್ತಾರೆ. ಈ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ಕಡ್ಡಾಯವಾಗಿ ತವರಿಗೆ ಬರುತ್ತಾರೆ. ಮರು ದಿವಸ ಗೌರಮ್ಮನ ಪಕ್ದಲ್ಲಿಯೇ ಗಣೆಶನ ವಿಗ್ರಹವನ್ನು ಕೂಡಿಸಿ ಕಡುಬಿನ ವಿಶೇಷ ಅಡುಗೆ ಮಾಡಿ ಅದರ ಮರುದಿನ ಇಬ್ಬರನ್ನೂ ನೀರಿಗೆ ಬಿಟ್ಟು ಬರುತ್ತಾರೆ. 
ಭೂಮಿ ಮತ್ತು ಜಲ ಪೂಜೆಯ ಆಚರಣೆ ಹೊಂದಿರುವ ಗೌರಿ- ಗಣೇಶನ ಈ ಹಬ್ಬ ಇಂದು ತನ್ನ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದೆ.
ಕರಿಭಂಟನ ಪೂಜೆ
ಹುಬ್ಬೆ-ಉತ್ತರೆ ಮಳೆಯಲ್ಲಿ ಹುಲುಸಾಗಿ ಬೆಳೆದ ಬೆಳೆಗಳಿಗೆ ರೋಗ-ರುಜಿನ, ನೋಡುಗರ ಕೆಟ್ಟ ದೃಷ್ಟಿ ತಾಕದಿರಲಿ ಎಂಬ ಉದ್ದೇಶದಿಂದ ಬಯಲು ಸೀಮೆ ಹಳ್ಳಿಗರು ಆಚರಿಸುವ ಕರಿಭಂಟನ ಆಚರಣೆ ಅತ್ಯಂತ ವಿಶಿಷ್ಟವಾದದ್ದು. ಇಡೀ ಗ್ರಾಮ ಸಮುದಾಯ ಒಂದುಗೂಡಿ, ಮೂರು ದಾರಿ ಕೂಡುವಲ್ಲಿ ಬೂದಿಯಿಂದ ರಾಕ್ಷಸಿಯ ಚಿತ್ರ ಬರೆದು ಅದರ ಹೊಟ್ಟೆಯ ಮೇಲೆ ಹಾರೆಯಿಂದ ರಂಧ್ರ ಮಾಡಿ, ಹೊಲದಲ್ಲಿ ಪಚ್ಚಾಡಿ ಮರದ ಕೊಂಬೆಗಳನ್ನು ನೆಟ್ಟು ಹರಿಶಿಣದ ಬಟ್ಟೆಯಲ್ಲಿ ಸೇರಿಸಿದ ನವಧಾನ್ಯಗಳನ್ನು ಗಂಟು ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ.  ಕೋಳಿ ಇಲ್ಲವೇ ಕುರಿ ಬಲಿ ಕೊಟ್ಟು ಅದರ ರಕ್ತದ ಜೊತೆ ರಾಗಿ ಪೈರಿನ ಎಳೆ ಗರಿಗಳನ್ನು ಸೇರಿಸಿ ಹೊಲಕ್ಕೆ ಬಲಿಯೋ ಬಲಿ ಎಂದು ಕೂಗುತ್ತಾ ಎರಚಲಾಗುತ್ತದೆ. ಬೆಳೆಗಳು ಬೆಳವಣಿಗೆ  ಹಂತದಲ್ಲಿರುವಾಗ ಇದನ್ನು ಆಚರಿಸುವುದರಿಂದ ಬೆಳೆಗಳಿಗೆ, ಅದರಲ್ಲಿಯೂ ಮುಖ್ಯವಾಗಿ ರಾಗಿ ಪ್ಶೆರಿಗೆ ಬರುವ ಇಲುಕು ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ.
ಈ ಆಚರಣೆಯು ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮೂಹಿಕವಾಗಿ ಇಡೀ ಗ್ರಾಮವು ಒಗ್ಗಟ್ಟಾಗಿ ಮಾಡುವುದನ್ನು ಕಾಣಬಹುದು. ರಾಗಿ ಮುಖ್ಯ ಬೆಳೆಯಾಗಿ ಬೆಳೆಯುವ ಪ್ರದೇಶಗಳಲ್ಲಿ ಇದು ಅತ್ಯಂತ ವೈಭವಯುತವಾಗಿ, ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ, ಉಳಿದ ಭಾಗಗಳಲ್ಲಿ ಸಾಧಾರಣ ರೀತಿಯಲ್ಲಿ ಹೊಲಕ್ಕೆ ಚರಗ ಚೆಲ್ಲಿ ಪಚ್ಚಾಡಿ ಕೊಂಬೆಗಳನ್ನು ನೆಡುವ ಮೂಲಕ ಆಚರಿಸುತ್ತಾರೆ.
ಸಾಮೂಹಿಕ ಕರಿಭಂಟನ ಆಚರಣೆ: ಇಡೀ ಗ್ರಾಮ ಸಮುದಾಯ ಸೇರಿ ಮಾಡುವ ಕರಿಬಂಟನ ಪೂಜೆಯ ವಿಧಿ-ವಿಧಾನಗಳು ಈ ರೀತಿ ಇರುತ್ತವೆ:
ಹುಬ್ಬೆ ಮಳೆ ಹುಟ್ಟಿದಾಗ ಗ್ರಾಮಸ್ಥರು ಒಂದೆಡೆ ಕಲೆತು ಹಬ್ಬ ಮಾಡುವ ದಿನಾಂಕವನ್ನು ಗೊತ್ತುಪಡಿಸುತ್ತಾರೆ. ಹಬ್ಬಕ್ಕಾಗಿ ಮನೆಗೆ ಇಂತಿಷ್ಟು ಹಣ ವಸೂಲು ಮಾಡಲಾಗುತ್ತದೆ. ಹಬ್ಬದ ಹಿಂದಿನ ದಿನವೇ ಗ್ರಾಮದ ಹಿರಿಯರು ಜವಾಬ್ದಾರಿಗಳನ್ನು ಎಲ್ಲರಿಗೂ ಹಂಚಿಬಿಡುತ್ತಾರೆ. ಆ ಪ್ರಕಾರ ಕೆಲವರು ಮೂರು ತೆರನಾದ ಬೂದಿ ತರಬೇಕು, ಮತ್ತೆ ಕೆಲವರು ಪಚ್ಚಾಡಿ ಮರದ ಕೊಂಬೆಗಳನ್ನು ಕಡಿದು ತರಬೇಕು, ಉಳಿದವರು ಬಲಿ ಕೊಡಲು ಮರಿ ವ್ಯವಸ್ಥೆ ಮಾಡಬೇಕು ಮತ್ತು ರಾಗಿ ಗರಿಗಳನ್ನು ಕತ್ತರಿಸಿ ತರಬೇಕು. ಹಾಗೆಯೇ ಹಿಂದಿನ ದಿನವೇ ಊರಿನಲ್ಲಿ ಡಂಗೂರ ಸಾರುವ ಮೂಲಕ ಹಬ್ಬದ ಬಗ್ಗೆ ತಿಳಿಸಲಾಗುತ್ತದೆ. ಎಲ್ಲ ಮನೆಯವರೂ ರಾತ್ರಿ ಅಡುಗೆ ಉಳಿಕೆಯನ್ನು- ಅಂದರೆ ಮುದ್ದೆ, ಅನ್ನ ಇತ್ಯಾದಿ- ಬೆಳಿಗ್ಗೆ ತಂದು ಒಂದೆಡೆ ಗುಡ್ಡೆ ಹಾಕಬೇಕು.
ಕರಿಬಂಟನ ಅಚರಣೆಗೆ ಮೂರು ರೀತಿಯ ಬೂದಿ ತರುವುದು ಕಡ್ಡಾಯ. ಒಂದು-ಕುಂಬಾರರ ಮನೆಯ ಬೂದಿ, ಎರಡು- ಕಮ್ಮಾರರ ಮನೆಯ ಬೂದಿ ಮತ್ತು ಮೂರು- ಮಡಿವಾಳರ ಮನೆ ಬೂದಿ. ಇವುಗಳಿಗೆ ಕ್ರಮವಾಗಿ ಆವಿಗೆ ಬೂದಿ, ಕುಲುಮೆ ಬೂದಿ, ಮತ್ತು ಉಬ್ಬೆ ಬೂದಿ ಎಂದು ಕರೆಯುತ್ತಾರೆ.  ಈ ಮೂರು ಬಗೆಯ ಬೂದಿಗಳನ್ನು ತಂದು ಮಿಶ್ರ ಮಾಡಿ ಇಟ್ಟುಕೊಳ್ಳುತ್ತಾರೆ.
ಪಚ್ಚಾಡಿ ಕೊಂಬೆ ನೆಡುವುದು ಈ ಆಚರಣೆಯ ಅತ್ಯಂತ ಮುಖ್ಯ ಕ್ರಿಯೆ. ಆಚಿಟbಚಿಡಿರಿiಚಿ ಠಿಚಿಟಿiಛಿuಟಚಿಣಚಿ ಎಂಬ ವ್ಶೆಜ್ಞಾನಿಕ ಹೆಸರಿನ ಪಚ್ಚಾಡಿ ಮರ ಕುರುಚಲು ಕಾಡುಗಳಲ್ಲಿ ಸಾಧಾರಣ ಎತ್ತರ ಬೆಳೆಯುವ ಮರ. ಕಾಂಡವು ಬಿಳುಪಾಗಿದ್ದು ಕಾಸಗಲದ ಎಲೆಗಳಿರುತ್ತವೆ. ಈ ಮರದ ವಿಶೇಷವೆಂದರೆ ಕೊಂಬೆಯನ್ನು ಕತ್ತರಿಸಿ ಹೊಲದಲ್ಲಿ ನೆಟ್ಟರೆ ೨೪ ಗಂಟೆಗಳೊಳಗಾಗಿ ಎಲೆಗಳು ಕಪ್ಪನೆ ಬಣ್ಣಕ್ಕೆ ತಿರುಗುತ್ತವೆಯೇ ಹೊರತು  ಒಣಗಿ ಉದುರುವುದಿಲ್ಲ. ಬಹಳ ದಿವಸಗಳ ನಂತರ ಒಣಗಿದ ಎಲೆಗಳು ಉದುರುತ್ತವೆ.
ಹಬ್ಬದ ದಿನ ಬೆಳಿಗ್ಗೆಯೇ ಒಂದು ನಿಗದಿತ ಸ್ಥಳದಲ್ಲಿ ಎಲ್ಲರೂ ಸೇರಿ ಚಪ್ಪರ ಹಾಕುತ್ತಾರೆ, ಸಾಮಾನ್ಯವಾಗಿ ಮೂರು ದಾರಿ ಕೂಡುವ ಸ್ಥಳವನ್ನು ಚಪ್ಪರ ಹಾಕಲು ಅಯ್ಕೆ ಮಾಡುತ್ತಾರೆ. ಚಪ್ಪರಕ್ಕೂ ಸಹ ಪಚ್ಚಾಡಿ ಕೊಂಬೆಗಳನ್ನು ಬಳಸುತ್ತಾರೆ. ಅಷ್ಟೊತ್ತಿಗೆ ಎಲ್ಲ ಮನೆಯವರೂ ಉಳಿಕೆ ಅಡುಗೆಯನ್ನು ತಂದು ಅಲ್ಲಿ ಹಾಕುವುದು ನಡೆದಿರುತ್ತದೆ. ರಾಗಿ ಗರಿಗಳನ್ನು ತುಂಡು-ತುಂಡಾಗಿ ಕತ್ತರಿಸಿ ಅದಕ್ಕೆ ಮೂರು ರೀತಿಯ ಬೂದಿಯ ಮಿಶ್ರಣದಲ್ಲಿ ಸ್ವಲ್ಪವನ್ನು ಬೆರೆಸಲಾಗುತ್ತದೆ.  ಮೂರು ದಾರಿ ಕೂಡುವ ಸ್ಥಳದಲ್ಲಿ ಬೂದಿಯಿಂದ ಒಂದು ರಾಕ್ಷಸಾಕೃತಿಯನ್ನು ಬರೆಯುತ್ತಾರೆ. ಹಳ್ಳಿಗರ ಪ್ರಕಾರ ಅದು ಪುಂಡರೀಕಾಕ್ಷಿ ಎಂಬ ರಾಕ್ಷಸಿ. ಕೇವಲ ಊರಿನ ಮೂರು ದಾರಿ ಕೂಡುವಲ್ಲಲ್ಲದೆ ಆಯಾ ಹೊಲದವರು ತಮ್ಮ ಹೊಲಗಳಲ್ಲಿಯೂ ಸಹ ಈ ರಾಕ್ಷಸಿ ಚಿತ್ರವನ್ನು ಬರೆಯುತ್ತಾರೆ. ಹಾಗೂ ಊರಿನ ಬೇರೆ-ಬೇರೆ ಭಾಗಗಳಲ್ಲಿಯೂ ಸಹ ಚಿತ್ರ ಬರೆಯುವುದು ರೂಢಿ. ಇದೆಲ್ಲ ಮುಗಿಯುವ ಹೊತ್ತಿಗೆ ಬಲಿ ಕೊಡುವ ಮರಿಯನ್ನು ತಂದು ಅದಕ್ಕೆ ಪೂಜೆ ಮಾಡಿ ಚಪ್ಪರದ ಮುಂದೆ ನಿಲ್ಲಿಸಿ ಊರವರ ಅಪ್ಪಣೆ ಕೇಳಿ ಬಲಿ ಕೊಡಲಾಗುತ್ತದೆ.
ಬಲಿ ಕೊಟ್ಟ ಪ್ರಾಣಿಯ ರಕ್ತವನ್ನು ಬೂದಿ ಮತ್ತು ರಾಗಿ ಗರಿ ಮಿಶ್ರಣದೊಂದಿಗೆ ಮತ್ತು ಉಳಿಕೆ ಅಡುಗೆಯೊಂದಿಗೆ ಬೆರೆಸುತ್ತಾರೆ. ಪ್ರತಿಯೊಂದು ಹೊಲದವರೂ ಒಂದೊಂದು ಬೋಕಿ ಬಿಂಚೆ (ಮಣ್ಣಿನ ಮಡಕೆಯ ಚೂರು) ಯನ್ನು ತಂದು ಹಿರಿಯರ ಕೈಲಿ ಆ ಚರಗವನ್ನು ಹಾಕಿಸಿಕೊಂಡು ತಮಗೆ ಎಷ್ಟು ಬೇಕೋ ಅಷ್ಟು ಪಚ್ಚಾಡಿ ಕೊಂಬೆಗಳನ್ನು ತೆಗೆದುಕೊಂಡು ಹೊರಡುತ್ತಾರೆ. ಕೈಯಲ್ಲೊಂದು ಹಾರೆಯೂ ಇರುತ್ತದೆ. ಇಬ್ಬರು ಮೂವರು ಗುಂಪಾಗಿ ಹೊರಟು ತಂತಮ್ಮ ಹೊಲಗಳಿಗೆ ಚರಗವನ್ನು ಚೆಲ್ಲುತ್ತಾ ಬಲಿಯೋ ಬಲಿ ಎಂದು ಕೂಗುತ್ತಾರೆ. ಹಾರೆಯಿಂದ ಒಂದು ದಸಿ ಹಾಕಿ ಪಚ್ಚಾಡಿ ಕೊಂಬೆಯನ್ನು ನೆಡುತ್ತಾರೆ, ಅಲ್ಲದೆ ರಾಕ್ಷಸಿ ಚಿತ್ರದ ಹೊಟ್ಟೆಯ ಭಾಗಕ್ಕೆ ಹಾರೆಯಿಂದ ತಿವಿಯುತ್ತಾರೆ.
ಎಲ್ಲರೂ ತಂತಮ್ಮ ಹೊಲಗಳಿಗೆ ಈ ರೀತಿ ಮಾಡಿ ಊರಿಗೆ ಹಿಂತಿರುಗುತ್ತಾರೆ, ನಂತರ ಬಲಿ ಕೊಟ್ಟ ಮರಿಯನ್ನು ಕೊಯ್ದು ಪಾಲು ಮಾಡಿ ಗುಡ್ಡೆ ಹಾಕಿ ಎಲ್ಲರೂ ಹಂಚಿಕೊಳ್ಳುತ್ತಾರೆ. ಅಂದು ಎಲ್ಲರ ಮನೆಯಲ್ಲಿ ವಿಶೇಷ ಅಡುಗೆ.
ಈ ಆಚರಣೆಗೆ ಹಸಿರುಬಲಿ, ಅತ್ತೆ ಮಳೆ ವಂಗಲು ಎಂಬ ಹೆಸರುಗಳೂ ಇವೆ. ಕೆಲವರು ಹಸಿರು ಬಲಿ ಮತ್ತು ಕರಿಬಂಟನ ಆಚರಣೆ ಬೆರೆ-ಬೇರೆ ಎನ್ನುತ್ತಾರಾದರೂ ಆಚರಿಸುವ ರೀತಿಯನ್ನು ನೋಡಿದರೆ ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತವೆ.
ಒಟ್ಟಾರೆ ಈ ಆಚರಣೆಯಿಂದ ರಾಗಿ ಬೆಳೆಗೆ ಬರುವ ಇಲುಕೆ ರೋಗ (ಈiಟಿgeಡಿ ಃಟಚಿsಣ) ನಿವಾರಣೆಯಾಗುತ್ತದೆ ಎಂದು ರೈತಾಪಿಗಳ ದೃಢವಾದ ನಂಬಿಕೆ. ಅಲ್ಲದೆ ಹುಲುಸಾಗಿ ಬೆಳೆದ ಪ್ಶೆರಿಗೆ ನೋಡುಗರ ದೃಷ್ಟಿ ತಾಗದಿರಲಿ ಎಂಬ ಆಶಯವೂ ಇದರ ಹಿಂದಿದೆ.
ಆಚರಣೆಯ ಹಿಂದಿನ ಜನಪದ ನಂಬಿಕೆ
ಈ ಆಚರಣೆಯ ಕಾಲ, ಇಲ್ಲಿನ ವಿಧಿ ವಿಧಾನಗಳು, ಪಚ್ಚಾಡಿ ಕೊಂಬೆ ನೆಡುವಿಕೆ, ರಾಕ್ಷಸಿ ಚಿತ್ರ ಮುಂತಾದ ಕ್ರಿಯೆಗಳು ಕುತೂಹಲ ಮೂಡಿಸುತ್ತವೆ. ಈ ಎಲ್ಲವುಗಳಿಗೆ ಹಿನ್ನೆಲೆಯಾಗಿ ಒಂದು ಅದ್ಭುತವಾದ ಜಾನಪದ ಕಥೆಯಿದೆ. ಮೈಸೂರು ಸೀಮೆಯಲ್ಲಿ ಕರಿಭಂಟನ ಕುರಿತಾಗಿ ಅನೇಕ ಸಾಹಿತ್ಯ, ಕಥನ ಕಾವ್ಯಗಳು ಲಭ್ಯವಿವೆ, ಕರಿಬಂಟನ ಕಾಳಗ ಎಂಬ ಹೆಸರಿನ ಬಯಲು ನಾಟಕ, ಯಕ್ಷಗಾನಗಳೂ ಸಹ ಅಭಿನಯಿಸಲ್ಪಡುತ್ತವೆ. ಸಂಕ್ಷಿಪ್ತ ವಿವರಣೆಗಳನ್ನು ನೀಡುವುದಾರೆ…
ಕರಿಬಂಟ ಒಬ್ಬ ರಾಜ. ಮಾರಭೂಪ ಮತ್ತು ಬಲವಂತದೇವಿಯವರ ಮಗ. ವೀರ, ಶೂರ. ಆತ ಒಮ್ಮೆ ಬಲ್ಲಾಳರಾಯನೆಂಬ ರಾಜನ ಮಗಳಾದ ಧರಣಿಮೋಹಿನಿ ಎಂಬಾಕೆಯನ್ನು ಮದುವೆಯಾಗುವ ಸಲುವಾಗಿ ತನ್ನ ರಾಜ್ಯದಿಂದ ಬಲ್ಲಾಳರಾಜನ ರಾಜ್ಯಕ್ಕೆ ಪ್ರಯಾಣ ಹೊರಡುತ್ತಾನೆ, ಹೊರಡುವಾಗ ಕೆಲವು ಅಪಶಕುನಗಳಾಗುತ್ತವೆ. ಆತನ ತಾಯಿ ಪ್ರಯಾಣ ಬೇಡವೆನ್ನುತ್ತಾಳೆ, ಅದಕ್ಕೊಪ್ಪದ ಕರಿಬಂಟ ಏಕಾಂಗಿಯಾಗಿ ದಾರಿಗೆ ಬುತ್ತಿ ಕಟ್ಟಿಸಿಕೊಂಡು ಹೊರಡುತ್ತಾನೆ. ಬಲ್ಲಾಳರಾಯನ ರಾಜ್ಯ ತಲುಪಲು ಒಂದು ಗೊಂಡಾರಣ್ಯವನ್ನು ದಾಟಬೇಕಾಗಿರುತ್ತದೆ. ಆ ಗೊಂಡಾರಣ್ಯದಲ್ಲಿ ಉದ್ದಂಡಿ ಎಂಬ ರಾಕ್ಷಸಿಯು ವಾಸವಾಗಿರುತ್ತಾಳೆ, ಆಕೆಗೆ ಬೊಮ್ಮ ಎಂಬ ತಮ್ಮನಿರುತ್ತಾನೆ. ಕಾಡೆಲ್ಲಾ ಇವರಿಬ್ಬರದೇ, ಭಯಂಕರ ರೂಪದ ಇವರು ಅಲ್ಲಿಗೆ ಬರುವ ಮನುಷ್ಯರನ್ನು ಹಿಡಿದು ತಿನ್ನುತ್ತಾ ಕಾಲ ಕಳೆಯುತ್ತಿರುತ್ತಾರೆ. ರಾಕ್ಷಸಿಗೆ ಒಬ್ಬ ಮಗಳಿರುತ್ತಾಳೆ. ಹೆಸರು ಪುಂಡರೀಕಾಕ್ಷಿ. ಅವಳೋ ಈ ಅಮ್ಮ ಮತ್ತು ತಮ್ಮನ ಸ್ವಭಾವ, ರೂಪಗಳಿಗೆ ತದ್ವಿರುದ್ದವಾದ ಗುಣದವಳು. ರೂಪ ಲಾವಣ್ಯವತಿ, ಸಾಧು ಸ್ವಭಾವ.
ಕರಿಬಂಟನು ಈ ರಾಕ್ಷಸರ ಹಾವಳಿಯಿರುವ ಕಾಡನ್ನು ದಾಟಬೇಕಾದರೆ ರಾಕ್ಷಸಿಯ ಮಗಳಾದ ಪುಂಡರೀಕಾಕ್ಷಿ  ಕಣ್ಣಿಗೆ ಬೀಳುತ್ತಾನೆ. ಕರಿಬಂಟನ ರೂಪಿಗೆ ಮನಸೋತು ಅವನನ್ನೇ ವರಿಸುವ ಆಸೆಯಿಂದ ಉಪಾಯ ಮಾಡಿ ತನ್ನ ಮನೆಗೆ ಕರೆತರುತ್ತಾಳೆ. ರಾತ್ರಿ ಮನೆಗೆ ಬಂದ ಉದ್ದಂಡಿ ರಾಕ್ಷಸಿ ತನ್ನ ಮನೆಯಲ್ಲಿ ನರಮಾನವರ ವಾಸನೆ ಅರಿತು ಮಗಳನ್ನು ಕೇಳುತ್ತಾಳೆ. ಮಗಳು ತನ್ನಾಸೆಯನ್ನು ಹೇಳಿಕೊಂಡಾಗ ತನ್ನ ತಮ್ಮನಿಗೇ ಮಗಳನ್ನು ಕೊಟ್ಟು ಮದುವೆ ಮಾಡಬೇಕೆಂದಿದ್ದ ರಾಕ್ಷಸಿ ಮನಸ್ಸಿನಲ್ಲೇ ಕ್ರೋಧಗೊಳ್ಳುತ್ತಾಳೆ, ಆದರೂ ಹೊರಗೆ ತೋರ್ಪಡಿಸದೆ ಮಗಳ ಆಸೆಗೆ ಸಮ್ಮತಿಸಿದಂತೆ ಮಾಡಿ, ಬೆಳಿಗ್ಗೆ ನಿಮ್ಮಿಬ್ಬರಿಗೂ ಮದುವೆ ಮಾಡಿಸುತ್ತೇನೆ, ಇಂದು ರಾತ್ರಿ ಅವನು ಬೊಮ್ಮನ ಜೊತೆ ಮಲಗಿರಲಿ ಈ ದಾರವನ್ನು ನಿನ್ನ ಗಂಡನಾಗುವವನ ಕಾಲಿಗೆ ಕಟ್ಟು ಎನ್ನುತ್ತಾಳೆ.
ಆದರೆ ಅಮ್ಮನ ಈ ವರ್ತನೆಯನ್ನು ಅನುಮಾನಿಸುವ ಮಗಳು ದಾರವನ್ನು ಕರಿಬಂಟನಿಗೆ ಬದಲಾಗಿ ಬೊಮ್ಮನ ಕಾಲಿಗೆ ಕಟ್ಟುತ್ತಾಳೆ.
ಅರ್ಧ ರಾತ್ರಿಯಲ್ಲಿ ಎದ್ದ ಉದ್ದಂಡಿ ರಾಕ್ಷಸಿ ದಾರ ಕಟ್ಟಿರುವ ಕಾಲಿನವನೇ ಕರಿಬಂಟನೆಂದು ತಿಳಿದು  ತಮ್ಮನಾದ ಬೊಮ್ಮನನ್ನು ಸಿಗಿದು ಕೊಂದು ಹಾಕುತ್ತಾಳೆ. ಇದನ್ನು ಕಂಡ ಮಗಳು ಕರಿಬಂಟನನ್ನು ಎಬ್ಬಿಸಿ ನೀನು ಬದುಕಿರುವುದನ್ನು ನೋಡಿದರೆ ನಮ್ಮಮ್ಮ ನಿನ್ನನ್ನು ಬಿಡುವುದಿಲ್ಲ ಹೊರಟು ಹೋಗು ಎಂದು ಕಳಿಸಿಬಿಡುತ್ತಾಳೆ.
ಬೆಳಿಗ್ಗೆ ಎದ್ದು ಮಹದಾನಂದದಿಂದ ತಮ್ಮನನ್ನು ಕಾಣಲು ಬಂದ ಉದ್ದಂಡಿ ರಾಕ್ಷಸಿ ಸತ್ತು ಬಿದ್ದಿರುವ ತಮ್ಮನನ್ನು ಕಾಣುತ್ತಾಳೆ, ಕ್ಷಣಾರ್ಧದಲ್ಲಿ ಆಕೆಗೆ ನಿಜಾಂಶ ತಿಳಿಯುತ್ತದೆ. ಕರಿಬಂಟನ ಮೇಲೆ ರಣಕೋಪಗೊಂಡು ಆತನನ್ನು ಸಾಯಿಸೇ ತೀರುತ್ತೇನೆಂದು ಯೋಜನಾ ವೇಗದಲ್ಲಿ ಧಾವಿಸುತ್ತಾಳೆ. ಆಕೆ ಕರಿಬಂಟನನ್ನು ಸಮೀಪಿಸುವಾಗ ಆತ ಒಂದು ಹಳ್ಳಿಯ ಬಳಿ ಹೋಗುತ್ತಿರುತ್ತಾನೆ. ಆಗ ರಾಕ್ಷಸಿ ಬಾಣಂತಿಯಂತೆ ವೇಷ ಧರಿಸಿ ಆ ಹಳ್ಳಿಯ ೭ ಜನ ಗೌಡರನ್ನು ಭೇಟಿ ಮಾಡಿ ಈತ ನನ್ನ ಗಂಡ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ, ಈತನನ್ನು ನನ್ನ ಜೊತೆ ಕಳಿಸಿಕೊಡಿ ಎಂದು ರೋಧಿಸುತ್ತಾಳೆ. ಆದರೆ ಕರಿಬಂಟ ಈಕೆ ಯಾರೆಂಬುದೇ ನನಗೆ ಗೊತ್ತಿಲ್ಲ ನನಗಿನ್ನು ಮದುವೆಯೇ ಆಗಿಲ್ಲ ಎಂದು ವಾದ ಮಾಡುತ್ತಾನೆ. ಇದರಿಂದ ಗೊಂದಲಗೊಂಡ ಹಳ್ಳಿಯ ಗೌಡರು ಒಂದು ಸಲಹೆ ನೀಡುತ್ತಾರೆ. ಏನೆಂದರೆ, ಇಂದು ರಾತ್ರಿ ಇಬ್ಬರೂ ಈ ದೇವಾಲಯದಲ್ಲಿ ತಂಗಿರಿ ಬೆಳಿಗ್ಗೆ ತೀರ್ಪು ನೀಡುತ್ತೇವೆ ಎಂದು ಹೇಳುತ್ತಾರೆ.
ಅರ್ಧ ರಾತ್ರಿಯಲ್ಲಿ ತನ್ನ ನಿಜ ಸ್ವರೂಪ ತಾಳಿದ ರಾಕ್ಷಸಿ ಕರಿಬಂಟನನ್ನು ಕೊಂದು ದೇವಾಲಯದ ಸೂರನ್ನು ಮುರಿದುಕೊಂಡು ಪರಾರಿಯಾಗುತ್ತಾಳೆ.
ಬೆಳಿಗ್ಗೆ ಬಂದ ಗೌಡರು ಸತ್ತು ಬಿದ್ದಿರುವ ಕರಿಬಂಟನನ್ನು ಕಂಡು ಹೌಹಾರುತ್ತಾರೆ, ತಾವೇ ಕೈಯಾರ ಕರಿಬಂಟನನ್ನು ಕೊಂದಂತಾಯಿತಲ್ಲಾ ಎಂದು ಮರುಗಿದ ಅವರು ಅದಕ್ಕೆ ಪಶ್ಚಾತ್ತಾಪ ಕ್ರಮವಾಗಿ ಸಾಮೂಹಿಕ ಅಗ್ನಿಪ್ರವೇಶಕ್ಕೆ ಊರ ಹೊರಗೆ ಕುಂಡ ಸಿದ್ದಪಡಿಸಿ ಒಬ್ಬೊಬ್ಬರಾಗಿ ಎಲ್ಲರೂ ಅಗ್ನಿಪ್ರವೇಶಿಸುತ್ತಾರೆ. ತನ್ನಿಂದಾಗಿ ಕರಿಬಂಟ ಸತ್ತನೆಂಬ ಕಾರಣದಿಂದ ರಾಕ್ಷಸಿಯ ಮಗಳು ಪುಂಡರೀಕಾಕ್ಷಿಯೂ  ಸಹ ಬೆಂಕಿಗೆ ಹಾರುತ್ತಾಳೆ, ಬಲ್ಲಾಳರಾಯನ ಮಗಳಾದ ಧರಣಿಮೋಹಿನಿಯು ತನ್ನನ್ನು ಮದುವೆಯಾಗಲು ಬಂದಿದ್ದರಿಂದಲೇ ಕರಿಬಂಟ ಸಾವಿನ ದವಡೆಗೆ ಹೋಗಬೇಕಾಯಿತೆಂದು ಭಾವಿಸಿ ಅವಳೂ ಸಹ ಬಂದು ಬೆಂಕಿಗೆ ಹಾರುತ್ತಾಳೆ.
ಆಗ ಶಿವ-ಪಾರ್ವತಿಯರು ಪ್ರತ್ಯಕ್ಷವಾಗಿ ಕರಿಬಂಟನ ಸಮೇತ ಎಲ್ಲರನ್ನೂ ಬದುಕಿಸುತ್ತಾರೆ. ಊರ ೭ ಜನ ಗೌಡರ ಪ್ರಾಮಾಣಿಕತೆ ಎಲ್ಲರ ಜೀವ ಉಳಿಯಲು ಕಾರಣವಾಗುತ್ತದೆ. ಆದರೆ ಇದರಿಂದ ಕೆರಳಿದ ರಾಕ್ಷಸಿ  ಗೌಡರ ಮೇಲೆ ಕೋಪಗೊಂಡು  ತಾನು ಪ್ರತಿ ವರ್ಷ ರೋಗವಾಗಿ ಬಂದು ಹಳ್ಳಿಗರ ಬೆಳೆ ಹಾಳು ಮಾಡುವುದಾಗಿ ಶಪಥ ಮಾಡುತ್ತಾಳೆ, ಆಗ ಕರಿಬಂಟ ತನ್ನಿಂದಾಗಿ ಹಳ್ಳಿಗರಿಗೆ ಈ ಸ್ಥಿತಿ ಬಂದೊದಗಿತಲ್ಲಾ ಎಂದುಕೊಂಡು ತಾನು ಪಚಾಡಿ ಮರವಾಗಿ ಹುಟ್ಟಿ ರೈತರ ಹೊಲದಲ್ಲಿ ನಿಂತು ರೋಗ-ರುಜಿನಗಳಿಂದ ಬೆಳೆ ರಕ್ಷಿಸುವುದಾಗಿ ಪಣ ತೊಡುತ್ತಾನೆ.
ಇದು ಕರಿಬಂಟನ ಆಚರಣೆಯ ಹಿಂದಿನ ಕತೆ.
ಭತ್ತದ ಗದ್ದೆಗೆ ಗೊಡ್ಡೀಚಲು ಗರಿ ಇಡುವುದು
ಕರ್ನಾಟಕದ ಕನಕಪುರ, ಆನೇಕಲ್ ಪ್ರದೇಶಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಆಚರಣೆ ಗೊಡ್ಡೀಚಲು ಗಿಡದ ಕೊಂಬೆ ನೆಡುವುದು. ಭತ್ತದ ಗದ್ದೆ ನಾಟಿ ಮಾಡಿದ ೨೦ ದಿವಸ ಅಥವಾ ಒಂದು ತಿಂಗಳಿಗೆ ಇದನ್ನು ಮಾಡಲಾಗುತ್ತದೆ. ರೈತರು ಹೆಚ್ಚಾಗಿ ಮುಂಗಾರು ಹಂಗಾಮಿನ ಭತ್ತದ ತಾಕಿಗೆ ಈ ಆಚರಣೆ ಮಾಡುವುದು ರೂಢಿ. ಸಾಮಾನ್ಯವಾಗಿ ಮಗೆ (ಮಖಾ) ಮಳೆಯ ಅವಧಿಯಲ್ಲಿ ಇದರ ಆಚರಣೆಯನ್ನು ಕಾಣಬಹುದು.
ಒಂದು ಗೊತ್ತಾದ ದಿನ ಹಳ್ಳಿಯ ಎಲ್ಲರೂ ಹೊತ್ತಿಗೆ ಮುಂಚೆ ಹತ್ತಿರದ ಗುಡ್ಡಗಳಿಗೆ ಹೋಗಿ ಈಚಲು ಗರಿಗಳನ್ನು ತಂದು ತಮ್ಮ-ತಮ್ಮ ಗದ್ದೆಗಳಿಗೆ ನೆಡುತ್ತಾರೆ. ಸಾಮಾನ್ಯವಾಗಿ ಎಕರೆಗೆ ನಾಲ್ಕೈದು ಗರಿ ನೆಡುವುದು ವಾಡಿಕೆ.  ಹೀಗೆ ನೆಟ್ಟ ಗರಿಗಳು ಬಹಳ ದಿವಸದವೆರೆಗೂ ಹಸಿರಾಗೇ ಇರುತ್ತವೆ. ಈ ಗರಿಗಳಲ್ಲಿ ಔಷಧೀಯ ಗುಣವಿದ್ದು ಅದು ಗಾಳಿಯ ಮೂಲಕ ಹಾದು ಭತ್ತದ ಪೈರುಗಳಿಗೆ ಸೋಕಿ ರೋಗ ನಿವಾರಣೆಯಾಗುತ್ತದೆ ಎನ್ನುತ್ತಾರೆ ರೈತರು. ಗರಿಗಳು ೧೫ ರಿಂದ ೨೦ ದಿವಸದ ನಂತರ ತುದಿಯ ಭಾಗದಿಂದ ಸ್ವಲ್ಪ-ಸ್ವಲ್ಪವೇ ಒಣಗುತ್ತಾ ಬರುತ್ತವೆ. ಗರಿಗಳು ಹೀಗೆ ಒಣಗಿದಂತೆ ಭತ್ತದ ಗದ್ದೆಯ ರೋಗವೂ ನಿಧಾನವಾಗಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ.
ಗದ್ದೆಗೆ ಗರಿಗಳನ್ನು ನೆಟ್ಟ ನಂತರ ಕೆಲವರು ಕೋಳಿಯನ್ನು ಸುಟ್ಟು ಗದ್ದೆಯ ಸುತ್ತಲೂ ಬರುತ್ತಾರೆ. ಅದರ ಹೊಗೆ ಭತ್ತದ ಪೈರುಗಳಿಗೆ ಸೋಕಿದರೆ ರೋಗ-ಕೀಟಗಳು ಬೇಗ ವಾಸಿಯಾಗುತ್ತವೆಯಂತೆ. ಕೆರೆ ಹಿಂಭಾಗದಲ್ಲಿ ಗದ್ದೆಯಿರುವವರು ಒಟ್ಟಾಗಿ ಕಪ್ಪು ಬಣ್ಣದ ಹಂದಿಯನ್ನು ಸುಟ್ಟು ಈ ರೀತಿ ಸುತ್ತು ಹಾಕುತ್ತಾರೆ.
ಗೊಡ್ಡೀಚಲು ಗಿಡ ಈಚಲು ಜಾತಿಗೆ ಸೇರಿದ ಸಸ್ಯ. ಕಾಡು, ಬಯಲುಗಳಲ್ಲಿ ಬೆಳೆಯುತ್ತದೆ. ಇದರ ಗರಿಗಳು ಈಚಲು ಗರಿಗಳನ್ನೇ ಹೋಲುತ್ತವೆ. ಆದರೆ ಈಚಲು ಗರಿಗಳಿಗಿರುವಂತೆ ತುದಿಯಲ್ಲಿ ಚೂಪಾದ ಮುಳ್ಳುಗಳಿರುವುದಿಲ್ಲ, ಮತ್ತು ಈಚಲು ಗರಿಗಳಿಗಿಂತ ಗಾಢ ಹಸಿರು ಹಾಗೂ ಮೃದುವಾಗಿರುತ್ತವೆ.  ನಗರಗಳಲ್ಲಿ ಮನೆಯ ಮುಂದೆ ಫ಼್ಯಾಷನ್‌ಗಾಗಿ ಗೊಡ್ಡೀಚಲು ಗಿಡಗಳನ್ನು ಹಾಕಿಕೊಂಡಿರುತ್ತಾರೆ.
ಕಡ್ಲೆ ಕಾಯಿ ಹೊಲದಲ್ಲಿ ಕರಡಿ ಬೂತಪ್ಪ
ಕಡ್ಲೆಕಾಯಿ (ಶೇಂಗಾ) ಬೆಳೆಯುವ ಪ್ರದೇಶದಲ್ಲಿ ಕಂಡುಬರುವ ಆಚರಣೆ. ಹೊಲಕ್ಕೆ ಬಿತ್ತಿದ ಕಡ್ಲೆಕಾಯಿ ಹೊಲಕ್ಕೆ ಕರಡಿಗಳು  ಧಾಳಿ ಮಾಡಿ ಬೆಳೆ ಹಾಳು ಮಾಡದಿರಲಿ ಎಂಬ ಆಶಯದಿಂದ ಆಚರಿಸಲಾಗುತ್ತದೆ.
ಕಡ್ಲೆ ಕಾಯಿ ಮುಖ್ಯ ಬೆಳೆಯಾದ ತುಮಕೂರು, ಹಿರಿಯೂರು ಭಾಗದಲ್ಲಿ ಕರಡಿಗಳು ವಿಪರೀತ.  ಇವು ಕಡ್ಲೆ ಬೀಜವನ್ನು ಹೊಲಕ್ಕೆ ಬಿತ್ತಿದ ಎರಡು-ಮೂರು ದಿವಸಕ್ಕೇ ಹೊಲಕ್ಕೆ ಧಾಳಿ ಇಡುತ್ತವೆ, ಇನ್ನೂ ಮೊಳಕೆಯಾಗದೆ ಇರುವ ಬೀಜಗಳನ್ನು ಮೂತಿಯಲ್ಲಿ ಮಣ್ಣು ಬಗೆದು ಆರಿಸಿ ತಿನ್ನುತ್ತವೆ.  ಸಾಲು ಹಿಡಿದು ತಿನ್ನುತ್ತಾ ಹೋಗುವುದರಿಂದ ಅಷ್ಟು ಜಾಗ ಖಾಲಿ ಬೀಳುತ್ತದೆ.
ಇದಲ್ಲದೆ ಕಡ್ಲೆ ಗಿಡದಲ್ಲಿ ಕಾಯಿ ಬಲಿತ ಹೊತ್ತಿಗೆ ಮತ್ತೆ ಧಾಳಿ ಶುರು. ಗಿಡವನ್ನು ಅನಾಮತ್ ಹೊರಳಿಸಿ ಕಾಯಿಗಳನ್ನು ಅಲ್ಲೇ ಕಡಿದು ಬೀಜ ತಿನ್ನುತ್ತವೆ. ಗಿಡ ಹಸಿರಾಗೇ ಇದ್ದರೂ ಸಹ ಬುಡದಲ್ಲಿ ಕಾಯಿ ಇರುವುದಿಲ್ಲ.
ಈ ಕರಡಿಗಳ ನಿಯಂತ್ರಣಕ್ಕಾಗೇ ಕರಡಿ ಭೂತಪ್ಪನ ಆಚರಣೆ ಮಾಡುತ್ತಾರೆ. ಹೊಲಕ್ಕೆ ಬೀಜ ಬಿತ್ತಿದ ಹತ್ತು ಹದಿನೈದು ದಿವಸದಲ್ಲಿ ಇದನ್ನು ನೆರವೇರಿಸಲಾಗುತ್ತದೆ. ಅದರ ವಿಧಾನ ಹೀಗಿದೆ.
ಕಡ್ಲೆ ಬೀಜಗಳನ್ನು ಹುರಿದು ತಂಬಿಟ್ಟು ಆರತಿ ಮಾಡಿಕೊಂಡು ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಪೂಜೆ ಮಾಡಿ ತಂಬಿಟ್ಟಿನ ಆರತಿಯನ್ನು ಕರಡಿಗಳು ಹೆಚ್ಚಾಗಿ ಯಾವ ದಿಕ್ಕಿನಿಂದ ಬರುತ್ತವೆಯೋ ಆ ದಿಕ್ಕಿಗೆ ಬೆಳಗುತ್ತಾರೆ. ನಮ್ಮ ಹೊಲ ಹಾಳು ಮಾಡಬೇಡ ಸ್ವಾಮಿ ಎಂದು ಹೇಳುತ್ತಾ ಸಣ ಮಾಡುತ್ತಾರೆ. ತಂಬಿಟ್ಟನ್ನು ಬಂದವರಿಗೆಲ್ಲ ಹಂಚಿ ಮನೆಗೆ ತೆರಳುತ್ತಾರೆ.
ಯಾರು ಕರಡಿ ಭೂತಪ್ಪನನ್ನು ಮಾಡಿರುತ್ತಾರೋ ಅವರ ಹೊಲಕ್ಕೆ ಕರಡಿಗಳು ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಇದೆ.