ಬುಧವಾರ, ಆಗಸ್ಟ್ 31, 2011

ಜೋಗತಿ ಕಲೆ ಕಲಿತವರ ಕಸರತ್ತುಗಳು

-ಅರುಣ್

ಚಿತ್ರಗಳು- ಸೋಮೇಶ್ ಉಪ್ಪಾರ್ ಮರಿಯಮ್ಮನಹಳ್ಳಿ



‘ಜೋಗತಿ’ ಪದ ನೆನಪುಗಳನ್ನು ಕೆದಕುತ್ತದೆ. ನಾವಿದ್ದ ಕೂಡ್ಲಿಗಿ ತಾಲೂಕು ಹಾರಕನಾಳಿನ ಊರ ಹೊರಗಿನ ಅಂಗನವಾಡಿ ಕಟ್ಟಡ ನಮ್ಮ ಮನೆಯೂ ಆಗಿತ್ತು. ಊರಿಗೆ ಬರುವ ದೊಂಬಿದಾಸರು, ಕಾಡುಸಿದ್ಧರು, ಗೊಂದಲಿಗರು, ಜೋಗತಿಯರು ವೇಷ ಬದಲಿಸುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ನಮ್ಮ ಮನೆ ಪಕ್ಕವೇ ಇತ್ತು. ಹಾಗಾಗಿ ಹಾಗೆ ಬಂದವರೆಲ್ಲಾ ನಮಗೆ ಆತ್ಮೀಯರಾಗಿ ಪರಿಚಿತರಾಗಿಬಿಡುತ್ತಿದ್ದರು. ಇದರಲ್ಲಿ ಗಂಡು ಜೋಗತಿಯರು (ಗಂಡಿನೊಳಗಿನ ಹೆಣ್ತನದ ಭಾವಗಳಿಂದಾಗಿ ಸೀರೆಯುಟ್ಟು ಯಲ್ಲಮ್ಮ ಅಥವಾ ರೇಣುಕೆಯ ಭಕ್ತರಾದವರು) ಬಂದಾಗ ಊರ ಯುವಕರೆಲ್ಲಾ ಶಾಲೆಯ ಸುತ್ತಮುತ್ತ ಸುಳಿದಾಡುತ್ತಿದ್ದರು. ಶಾಲಾ ಮಕ್ಕಳು ಅವರುಗಳನ್ನು ಕಾಡು ಪ್ರಾಣಿಗಳಂತೆ ವಿಚಿತ್ರವಾಗಿ ನೋಡುತ್ತಿದ್ದರು. ಆಗ ಅವರು ‘ ಏ ಮನ್ಸಾರ‍್ನ ಎಂದೂ ನೋಡಿರೋ ಇಲ್ಲೋ ಒಕ್ಕಿರೋ ಕಲ್ಲು ತಗಳ್ಳಲೋ’ ಎಂದು ಗಡಸು ದ್ವನಿಯಲ್ಲಿ ಮಾತಾಡಿದಾಗ ಮಕ್ಕಳೆಲ್ಲಾ ಕೇ,,ಕೇ ಎಂದು ಕೇಕೆ ಹಾಕುತ್ತಾ ಓಡುತ್ತಿದ್ದರು. ಆಗ ಮಕ್ಕಳಲ್ಲಿ ಗಂಡು ಜೋಗತಿಯರು ವಿಚಿತ್ರವಾದ ಕುತೂಹಲ ಮೂಡಿಸುತ್ತಿದ್ದುದಂತೂ ನಿಜ.

ಹಾಗೆ ಬರುತ್ತಿದ್ದ ಗಂಡು, ಹೆಣ್ಣು ಜೋಗತಿಯರ ಒಂದು ಜೋಡಿ ವಿಚಿತ್ರವಾಗಿತ್ತು. ಒಬ್ಬ ಹೆಣ್ಣು ಜೋಗತಿ,(ಜಡೆ ಹೆಣೆದು ದೇವಿ ಒಲಿದಿದ್ದಾಳೆಂದು ಜೋಗತಿಯರಾಗುವ ಹೆಣ್ಣು) ಇನ್ನೊಬ್ಬ ಗಂಡು ಜೋಗತಿ. ಇವರಿಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುವಂತೆ ಕಾಣುತ್ತಿದ್ದರು. ರಾತ್ರಿಯಾಗುತ್ತಲೂ ಇಬ್ಬರೂ ಕಂಠಪೂರ್ತಿ ಕುಡಿದು ಶಾಲೆಯ ಆವರಣದಲ್ಲಿ ಮಲಗುತ್ತಿದ್ದರು, ರಾತ್ರಿಯೆಲ್ಲಾ ಪೇಚಾಡುತ್ತಿದ್ದರು.ಒಮ್ಮೊಮ್ಮೆ ಮಧ್ಯರಾತ್ರಿ ಹೆಣ್ಣು ಜೋಗತಿ ಜೋರಾಗಿ ಅಳತೊಡಗಿ, ಗದ್ದಲವಾಗುತ್ತಿತ್ತು. ಆಗ ರಾತ್ರಿ ಊರ ಕೆಲವರು ಎದ್ದು ಬಂದು ಗಂಡು ಜೋಗತಿಯನ್ನು ಬೈದು ಸುಮ್ಮನ ಮಲಗ್ರಿ ಎಂದು ಗದರು ಹಾಕಿ ಹೋಗುತ್ತಿದ್ದರು. ಬೆಳಕಾಗುತ್ತಲೂ ಇಬ್ಬರು ಅಮರ ಪ್ರೇಮಿಗಳಂತೆ ರಾತ್ರಿಯ ಗದ್ದಲಗಳನ್ನು ಮರೆತು ಒಂದಾಗಿರುತ್ತಿದ್ದರು. ಬೆಳಗ್ಗೆ ಮಿರ್ಚಿ ವಗ್ಗರಣೆ ಕಟ್ಟಿಸಿಕೊಂಡು ಬಂದು ಒಬ್ಬರಿಗೊಬ್ಬರು ತಿನ್ನಿಸಿಕೊಂಡು ತಾವು ಒಂದಾಗಿರುವುದನ್ನು ತೋರುತ್ತಿದ್ದರು.


ಎಂಟು ಗಂಟೆಯ ಹೊತ್ತಿಗೆ ಮತ್ತೆ ನಾಲ್ಕಾರು ಗಂಡು, ಹೆಣ್ಣು ಜೋಗತಿಯರು ಇವರ ಜತೆ ಸೇರುತ್ತಿದ್ದರು. ಆಗ ಊರೊಳಗೆ ಅವರ ಎಲ್ಲಮ್ಮನ ಕುರಿತ ಹಾಡುಗಳು, ನೃತ್ಯ ಆರಂಭವಾಗುತ್ತಿತ್ತು. ಒಬ್ಬರು ಕೊಡ ಹೊತ್ತು ಕುಣಿದರೆ ನಾಲ್ಕು ಜನ ಚೌಡಕಿ ಪದಗಳನ್ನು ಹಾಡುತ್ತಿದ್ದರು. ಕೆಲವೊಮ್ಮೆ ಊರ ಮುಂದಿನ ದುರುಗಮ್ಮನ ಗುಡಿ ಎದುರು ರೇಣುಕ ಎಲ್ಲಮ್ಮನ ಮಹಾತ್ಮೆಯ ನಾಟಕವನ್ನು ಅಭಿನಯಿಸುತ್ತಿದ್ದರು. ಆಗ ಜೋಗತಿ ನೃತ್ಯ ಹಗಲು ಮಾಡಿದ್ದಕ್ಕಿಂತ ಭಿನ್ನವಾಗಿರುತ್ತಿತ್ತು . ಅದಕ್ಕೆ ಭಕ್ತಿಯ ಆಯಾಮ ಬಂದಿರುತ್ತಿತ್ತು. ಜನರು ಜೋಗತಿ ನೃತ್ಯ ನಡೆವ ಹೊತ್ತಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ತಮ್ಮ ಭಕ್ತಿಯನ್ನು ತೋರುತ್ತಿದ್ದರು. ಕೆಲವೊಮ್ಮೆ ಇದರಲ್ಲಿ ನಡು ನಡುವೆ ಹಾಸ್ಯ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಅದರಲ್ಲಿ ಸೀರೆ ಉಟ್ಟ ಗಂಡು ಜೋಗತಿಯರು ಗಂಡಾಳುಗಳನ್ನು ಕಿಚಾಯಿಸುತ್ತಿದ್ದರು. ಆಗ ಹರೆಯದ ಹುಡುಗರು ಮಂಡಕ್ಕಿ ತೂರಿಯೋ ಕೇಕೆ ಹಾಕಿಯೋ ಖುಷಿ ಪಡುತ್ತಿದ್ದರು. ಈ ನಾಟಕವನ್ನು ನೋಡಲು ಕೆಳ ಸಮುದಾಯದ ಜನ ಹೆಚ್ಚು ಸೇರುತ್ತಿದ್ದರು. ರಾತ್ರಿಪೂರಾ ಇರುತ್ತಿದ್ದ ಈ ನಾಟಕದಲ್ಲಿ ನಡು ನಡುವೆ ಊರ ಜನರ ಸಂಗತಿಗಳನ್ನೂ ಸೇರಿಸಿ ಹಾಸ್ಯ ಮಾಡುತ್ತಿದ್ದರು. ಇದರಲ್ಲಿ ಜನರ ಪಾಲ್ಗೊಳ್ಳುವಿಕೆ ಅದ್ಭುತವಾಗಿರುತ್ತಿತ್ತು. ಇದೆಲ್ಲವೂ ಮೊನ್ನೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ ಮಂಜಮ್ಮ ಜೋಗತಿ(ಜೋಗತಿ ಕಲೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದೆ) ನಡೆಸಿದ ಜೋಗತಿ ನೃತ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಹೋದಾಗ ನೆನಪಾಯಿತು.


****
ಕಾರ್ಯಕ್ರಮ ಮದ್ಹಾನ ಮೂರಕ್ಕಿತ್ತು. ಆದರೆ ನಾನು ಒಂದು ಗಂಟೆಗಾಗಲೇ ಅಲ್ಲಿಗೆ ಹೋಗಿದ್ದೆ. ಆಗ ಇಪ್ಪತ್ತಕ್ಕಿಂತ ಹೆಚ್ಚಿನ ಗಂಡು ಜೋಗತಿಯರು ಸೇರಿದ್ದರು. ಅವರಲ್ಲಿ ಕೆಲವರು ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದರು.ಇನ್ನು ಕೆಲವರು ಸಿದ್ದತೆ ಮಾಡುವವರನ್ನು ನೋಡುತ್ತಾ ಕೂತಿದ್ದರು. ಕೆಲವು ಗಂಡು ಜೋಗತಿಯರು ಹೊಸದಾಗಿ ಬಂದಂತಿತ್ತು. ಅವರುಗಳೆಲ್ಲಾ ಇದನ್ನು ಕುತೂಹಲದಿಂದಲೂ, ಮುಜುಗರದಿಂದಲೂ ನೋಡುತ್ತಿದ್ದರು. ಇದರಲ್ಲಿ ಕೆಲವರು ಲಿಂಗ ಬದಲಾವಣೆ ಮಾಡಿಸಿಕೊಂಡವರಿದ್ದರು. ಇವರು ಬೆಂಗಳೂರಿನಲ್ಲಿ ಹಿಜಿಡಗಳಾಗಿ ಭಿಕ್ಷೆ ಬೇಡುತ್ತಾ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದವರು. ಇದರಲ್ಲಿ ಕೆಲವರು ಹೆಣ್ಣನ್ನು ನಾಚಿಸುವಂತಹ ವನಪು ವೈಯಾರವನ್ನು ಕಣ್ಣಂಚಿನಲ್ಲೇ ಮಿಂಚಿಸಿ ಮರೆಯಾಗಿಸುತ್ತಿದ್ದರು. ಮಂಜಮ್ಮನ ಜತೆಗಿದ್ದ ಹಳೆ ಜೋಗತಿಯರು ಈ ನಗರದ ಹಿಜಿಡಾಗಳನ್ನು ತುಂಬಾ ಕುತೂಹಲದಿಂದ ನೋಡುತ್ತಿದ್ದರು. ಬೆಂಗಳೂರಿನ ಅನುಭವವನ್ನು ಬಾಯಿತೆರೆದು ಕೇಳಿ ಅಚ್ಚರಿ ಪಡುತ್ತಿದ್ದರು. ಕಲೆ ಕಲಿತ ಶಿಷ್ಯೆಯರು ನೃತ್ಯ ಮಾಡಲು ವೇಷ ಧರಿಸುತ್ತಿದ್ದರು. ಇಡೀ ವೇದಿಕೆಯನ್ನು ಹಳದಿ ಸೀರೆ ಬಳಸಿ ಸಿದ್ದಪಡಿಸಿದ್ದರು. ಮಂಜಮ್ಮ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಾ ಚಡಪಡಿಸುತ್ತಾ ಓಡಾಡಿಕೊಂಡಿದ್ದರು. ಸೋಮೇಶ ನಿರೂಪಣೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು.

***
ಜಾನಪದ ಕಲೆ ಕಲಿಸುವಿಕೆಗಾಗಿ ‘ಗುರು ಶಿಷ್ಯ ಪರಂಪರೆ’ಎನ್ನುವ ಯೋಜನೆಯಿದೆ. ಇದು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ. ಆಯಾ ಜನಪದ ಕಲೆಯ ಹಿರೀಕರನ್ನು ಗುರುತಿಸಿ, ಅವರನ್ನು ಗುರುವನ್ನಾಗಿಯೂ ಆಯಾ ಕಲೆಯನ್ನು ಆಸಕ್ತಿ ಇರುವ ಶಿಷ್ಯರನ್ನು ಒಳಗೊಂಡಂತೆ, ಆರು ತಿಂಗಳು ಕಾಲ ಕಲೆ ಕಲಿಯಲು ಗುರುಶಿಷ್ಯರಿಗೆ ಸಹಾಯಧನ ಇರುತ್ತದೆ. ಇದು ಜನಪದ ಕಲೆ ಉಳಿಸುವ ಮತ್ತು ಅದನ್ನು ಆಸಕ್ತಿ ಇರುವವರ ಮೂಲಕ ಮುಂದುವರೆಸುವ ಒಂದು ಯೋಜನೆ. ಆದರೆ ಈ ಯೋಜನೆ ಆಯಾ ಜನಪದ ಕಲೆಯನ್ನು ಆಯಾ ಸಮುದಾಯದಲ್ಲಿ ಮಾತ್ರ ಮುಂದುವರಿಯುವಂತೆ ಮಾಡಿ, ಒಂದು ಜಾತಿ ಸಮುದಾಯಕ್ಕೆ ಆಯಾ ಕಲೆಯನ್ನು ಗಂಟು ಹಾಕುತ್ತದೆಯೇ ಎನ್ನುವ ಭಯ ನನಗಿದೆ. ಈ ಯೋಜನೆ ಆಯಾ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಆಧರಿಸಿ ಅದು ಅನುಷ್ಠಾನಕ್ಕೆ ಬಂದಂತೆ ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೋರನೂರು ಕೊಟ್ರಪ್ಪ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಂತೆ ಕಾಣುತ್ತದೆ.


ಈ ಬಾರಿ ಮಂಜಮ್ಮನಿಗೆ ಮಹಾರಾಷ್ಟ್ರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಇವರು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಜೋಗತಿ ಕಲೆ ಕಲಿಸಲು ಅನುವುಮಾಡಿಕೊಟ್ಟಿದ್ದರು. ಹಾಗಾಗಿ ಮಂಜಮ್ಮ ನಾಲ್ಕು ಜನ ಶಿಷ್ಯರನ್ನು , ಒಬ್ಬ ಸಹಾಯಕರನ್ನು ತೆಗೆದುಕೊಂಡು ಜೋಗತಿ ಕಲೆಯನ್ನು ಮರಿಯಮ್ಮನಹಳ್ಳಿಯ ತಮ್ಮ ಮನೆ ಆವರಣದಲ್ಲಿ ಕಲಿಸಿದರು. ಈ ಆರು ತಿಂಗಳ ತರಬೇತಿ ಮುಗಿದು ಮೊನ್ನೆಯಷ್ಟೆ ಸಮಾರೋಪ ನಡೆಯಿತು. ಹಾಗೆ ಜೋಗತಿ ಕಲೆ ಕಲಿತ ಶಿಷ್ಯೆಯರು ದುರುಗಮ್ಮ, ಕೆ. ಮಂಜಮ್ಮ, ಎಲ್ಲಮ್ಮ, ಗೌರಮ್ಮ. ಸಹಾಯಕರಾಗಿ ಹಿರಿಯ ಜೋಗತಿ ರಾಮವ್ವ ಕಲೆ ಕಲಿಸಲು ನೆರವಾಗಿದ್ದಾರೆ.ಮಕ್ಕಳು ಶಾಲೆಯಲ್ಲಿ ಕಲಿತಿದ್ದನ್ನು ಅಮ್ಮನ ಎದುರು ಹೇಳಲು ತೋರುವ ಉತ್ಸಾಹದ ಚಿಲುಮೆಯಂತೆ ಕಲೆ ಕಲಿತ ಜೋಗತಿಯರು ವೇದಿಕೆಯಲ್ಲಿ ನೃತ್ಯ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಮಂಜಮ್ಮನೂ ಅವರುಗಳಿಗೆ ನಿರ್ದೇಶನ ನೀಡುತ್ತಾ ಹೇಗೆ ಮಾಡುತ್ತಾರೋ ಎಂಬ ಆತಂಕದಲ್ಲಿದ್ದಂತಿತ್ತು. ಸಾಂಪ್ರದಾಯಿಕವಾಗಿ ಯಲ್ಲಮ್ಮನ ಪ್ರಾರ್ಥನ ಗೀತೆಯನ್ನು ರಾಮಕ್ಕ ಮತ್ತು ಸಂಗಡಿಗರು ಚೌಟಗಿ ಹಿಡಿದು ಹಾಡತೊಡಗಿದರು. ಆ ಹಾಡಿಗೆ ತಕ್ಕ ಹಾಗೆ ವೇದಿಕೆಯ ಮೇಲೆ ಒಬ್ಬೊಬ್ಬರಾಗಿ ಯಲ್ಲಮ್ಮನ ಕೊಡ ಹೊತ್ತು ಪ್ರವೇಶ ಮಾಡಿದರು. ಹಾಡು ಸಾಂಪ್ರದಾಯಿಕವಾಗಿದ್ದರೂ ನೃತ್ಯದಲ್ಲಿ ಮಾತ್ರ ಆಧುನಿಕ ವರಸೆಗಳ ಪ್ರಭಾವ ಇದ್ದಂತೆ ಕಾಣುತ್ತಿತ್ತು. ಇದರಲ್ಲಿ ಭರತನಾಟ್ಯದ ಭಂಗಿಗಳು, ಸಾಹಸಮಯ ಕಸರತ್ತುಗಳು ಕಾಣುತ್ತಿದ್ದವು . ಕೊಡ ಹೊತ್ತು ಅದನ್ನು ಬ್ಯಾಲನ್ಸ ಮಾಡುತ್ತಾ ಬಾಗುವ ಭಂಗಿಗಳು ನೋಡುಗರಲ್ಲಿ ಕೌತುಕ ಮತ್ತು ಅಚ್ಚರಿ ಮೂಡಿಸುವಂತಿತ್ತು. ಕುಣಿತದ ಲಯಗಳು ಕೂಡ ಆಧುನಿಕ ನೃತ್ಯದ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತಿತ್ತು. ಇಡೀ ನೃತ್ಯ ಅತ್ಯಂತ ನಯ ನಾಜೂಕಿನಿಂದ ರೋಚಕಗೊಳಿಸಿ ನೋಡುಗರನ್ನು ರೋಮಾಂಚನಗೊಳಿಸುವಂತಿತ್ತು. ಇಲ್ಲಿ ಜೋಗತಿ ಕಲೆಯನ್ನು ಈ ಕಾಲದ ಜತೆ ಮರು ಹೊಂದಾಣಿಕೆ ಮಾಡಲು ಮಾಡಿದ ಪ್ರಯತ್ನ ಕಾಣುತ್ತಿತ್ತು. ಈ ನಿಟ್ಟಿನಲ್ಲಿ ನೃತ್ಯ ಯಶಸ್ವಿಯೂ ಆಯಿತು.

ದೇಹದಲ್ಲಿನ ಹಾರ್ಮೊನ್ಸ ವೈಪರೀತ್ಯದಿಂದಾಗಿ ಗಂಡಿನ ಒಳಗೆ ಹೆಣ್ಣೇ ಆಗಬೇಕೆಂಬ ತೀವ್ರತೆರನಾದ ಒತ್ತಡ ಶುರುವಾದಾಗ ಇವರುಗಳೆಲ್ಲಾ ಸೀರೆಯುಟ್ಟು ಜೋಗತಿಯಾದವರು. ಲಿಂಗ ಬದಲಾಯಿಸಿಕೊಂಡು ಹಿಜಿಡಾಗಳಾಗಿ ಭಿಕ್ಷೆ ಬೇಡುವ, ಲೈಂಗಿಕ ಕಾರ್ಯಕರ್ತರಾಗುವವರಿಗಿಂತ ಇವರು ಬೇರೆಯ ರೀತಿಯವರು. ಇವರುಗಳೆಲ್ಲಾ ಎಲ್ಲಮ್ಮ ಅಥವಾ ರೇಣುಕೆಯ ಭಕ್ತರು. ಗಂಡು ಹೆಣ್ಣಾಗುವುದು ಜೈವಿಕವಾಗಿ ಹಾರ್ಮೋನ್ಸ ಉತ್ಪತ್ತಿಯಲ್ಲಾಗುವ ಬದಲಾವಣೆಯಿಂದಾದರೂ, ಇವರುಗಳು ತಿಳಿಯುವುದು ಗಂಡಿನ ಅಹಂ ಮುರಿದು ಹೆಣ್ಣಾಗಿಸಿದ ರೇಣುಕೆಯ ಪ್ರಭಾವದಿಂದಾಗಿ ಎಂದು. ಹಾಗಾಗಿ ನಾವು ಸೀರೆ ಉಟ್ಟು ಜೋಗತಿಯರಾಗಿದ್ದೇವೆಂದು ಭಾವಿಸುತ್ತಾರೆ. ಹೀಗೆ ರೇಣುಕೆಯ ಭಕ್ತರಾಗಿ ಜೀವಮಾನವಿಡೀ ಜೋಗತಿ ಹಾಡು ನೃತ್ಯವನ್ನು ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇವರದು ಭಿಕ್ಷೆಯೇ ಆದರೂ ಇವರುಗಳಿಗೆ ಜನರಲ್ಲಿರುವ ದೈವದ ನಂಬಿಕೆಯ ಕಾರಣಕ್ಕೆ ಗೌರವ ಸಿಗುತ್ತದೆ. ಆದರೆ ಇವರು ತಮ್ಮೊಳಗೆ ಇರುವ ಹೆಣ್ತನದ ತೀವ್ರತೆರನಾದ ಕಾಮನೆಗಳನ್ನು ದೈವದ ಕಾರಣಕ್ಕೆ ತಮ್ಮೊಳಗೇ ಅದುಮಿಡುತ್ತಾರೆ. ಈ ವಿಷಯದಲ್ಲಿ ಹಿಜಿಡಾಗಳು ತಮ್ಮೊಳಗಿನ ಹೆಣ್ತನದ ಕಾಮನೆಗಳಿಗೆ ತೆರೆದುಕೊಂಡು ತಮ್ಮಿಷ್ಟದಂತೆ ಬದುಕಿ ಹಗುರಾಗುತ್ತಾರೆ. ಆದರೆ ಅವರಿಗೆ ದೈವದ ನೆಲೆಯ ಗೌರವಾಧರಗಳು ಸಿಗುವುದಿಲ್ಲ, ಅದನ್ನವರು ಬಯಸುವುದೂ ಇಲ್ಲ. ಈ ಇಬ್ಬಂದಿತನ ಗಂಡು ಜೋಗತಿ ಮತ್ತು ಹಿಜಿಡಾಗಳಲ್ಲಿದೆ.

ಈ ತರಬೇತಿ, ಜೋಗತಿ ಕಲೆ ಕೇವಲ ಗಂಡುಜೋಗತಿಯರಲ್ಲಿ ಮಾತ್ರ ಮುಂದುವರೆಸಲು ಸಾದ್ಯ ಎಂಬ ನಂಬಿಕೆಯನ್ನು ಬಲಗೊಳಿಸಿತು. ಜೋಗತಿ ಕಲೆ ಒಂದು ಪ್ರದರ್ಶನಾತ್ಮಕ ಕಲೆ ಅದನ್ನು ಬೇರೆ ಬೇರೆ ಸಮುದಾಯಗಳ ಯುವಕ ಯುವತಿಯರೂ ಮಾಡಬಹುದು ಎಂಬ ಹೊಸ ನಂಬಿಕೆಯನ್ನು ಹುಟ್ಟಿಸಲು ಸಾದ್ಯವಾಗಲಿಲ್ಲ ಅನ್ನಿಸಿತು. ಈ ಕುರಿತು ಮಂಜಮ್ಮನನ್ನು ಕೇಳಿದರೆ, ‘ನಾವೇನೋ ಕಲಿಸ್ತಿವಿ ಆದರೆ ಸಮಾಜ ಒಪ್ಪಬೇಕಲ್ಲ, ಹಾಗ್ಮಾಡಿದ್ರೆ ನಮ್ಮ ಮಕ್ಕಳನ್ನು ಜೋಗತಿ ಮಾಡ್ತೀ ಅಂತ ನನ್ನ ಸುಮ್ನೆ ಬಿಡ್ತಾರೇನು? ಎಂದಾಗ ತಕ್ಷಣಕ್ಕೆ ಏನು ಉತ್ತರಿಸಬೇಕೋ ಗೊತ್ತಾಗಲಿಲ್ಲ.

ಮತ್ತೆ ನನ್ನ ಬಾಲ್ಯದ ನೆನಪುಗಳಿಗೆ ಮರಳುವುದಾದರೆ, ಬಾಲ್ಯದಲ್ಲಿ ನಾನು ನೋಡಿದ ಜೋಗತಿ ನೃತ್ಯಕ್ಕೂ ಈಗ ನಡೆದ ನೃತ್ಯಕ್ಕೂ ವ್ಯತ್ಯಾಸಗಳಿದ್ದವು. ಇದು ಬದಲಾದ ಕಾಲದಲ್ಲಿ ಸಹಜ ಕೂಡ. ಮಂಜಮ್ಮ ಕಾರ್ಯಕ್ರಮದ ಕೊನೆಗೆ ಮಾತನಾಡುತ್ತಾ ‘ನಮ್ಮನ್ನೂ ಮನುಷ್ಯರಂತೆ ನೋಡಿ, ನಾವು ಮನುಷ್ಯರೇ ಅಲ್ಲ, ನಾವೇನೋ ಘೋರ ಅಪರಾಧ ಮಾಡಿದ್ದೇವೆಂಬಂತೆ, ನಮ್ಮನ್ನು ನೋಡಬೇಡಿ, ನಮ್ಮ ಸಮುದಾಯ ನಿಮ್ಮಿಂದ ಬೇಡುವುದು ಒಂದಿಡಿ ಪ್ರೀತಿ ಮಮತೆಯನ್ನಷ್ಟೆ’ ಎಂದು ಬೇಡಿಕೊಂಡಳು. ಈ ಅಂತಃಕರಣದ ಮಾತು ನನ್ನೊಳಗೆ ಈಗಲೂ ಹಸಿಯಾಗಿದೆ.

ಸೋಮವಾರ, ಆಗಸ್ಟ್ 22, 2011

ಇದು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ : ಸಿಎನ್ನಾರ್

ಮಾತುಕತೆ ನಡೆಸಿದವರು: ಹರ್ಷಕುಮಾರ್ ಕುಗ್ವೆ


ಡಾ. ಸಿ.ಎನ್.ರಾಮಚಂದ್ರನ್ ಅವರು ನಾಡಿನ ಪ್ರಮುಖ ಸಂಸ್ಕೃತಿ ಚಿಂತಕರು. ಇವರ ಅಧ್ಯಯನದ ಕ್ಷೇತ್ರಗಳು ಬಹು ವಿಸ್ತಾರವಾದಂತವು. ಸೃಜನ ಸಾಹಿತ್ಯ, ವಿಮರ್ಷಾ ಸಾಹಿತ್ಯ, ಜಾನಪದ ಅಧ್ಯಯನ, ಅನುವಾದ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿರುವ ಸಿಎನ್ನಾರ್ ಹರ್ಷಕುಮಾರ್ ಕುಗ್ವೆಯೊಂದಿಗೆ ಸಂಸ್ಕ್ಕೃತಿ ವಿಮರ್ಷೆ, ಜಾನಪದ ಅಧ್ಯಯನ, ಮುಂತಾದುವುಗಳ ಕುರಿತಾಗಿ ಹಲವಾರು ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

'ಸಂಸ್ಕೃತಿ’ಯನ್ನು ನೀವು ಹೇಗೆ ಪರಿಭಾವಿಸುತ್ತೀರಿ?

ಸಂಸ್ಕೃತಿ ಎಂಬ ಪದವನ್ನು ನಾವು ಅನೇಕ ನೆಲೆಗಳಲ್ಲಿ ಅರ್ಥೈಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ನೋಡಿದರೆ ಡಿವಿಜಿ, ಅನಕೃ ಮುಂತಾದವರೆಲ್ಲಾ ಸಂಸ್ಕೃತಿಯನ್ನು ಒಂದು ರೀತಿಯಲ್ಲಿ ಅರ್ಥೈಸುತ್ತಿದ್ದರು. ಸಾಹಿತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಇತ್ಯಾದಿ ಲಲಿತ ಕಲೆಗಳೇನಿವೆ ಅವುಗಳಲ್ಲಿರುವ ಪ್ರೌಢಿಮೆಯನ್ನು ಸಂಸ್ಕೃತಿ ಎಂದು ಅರ್ಥೈಸುತ್ತಿದ್ದರು. ಅದು ಎಷ್ಟು ಹೆಚ್ಚಿದಷ್ಟೂ ಅಷ್ಟು ನಮ್ಮ ಸಂಸ್ಕೃತಿ ಶ್ರೇಷ್ಠವಾಗಿದೆ ಎನ್ನುವ ನಿಲುವು ಅದು. ಅದೇ ಕಾಲಘಟ್ಟದಲ್ಲಿ ಇನ್ನೊಂದು ನೆಲೆಯಲ್ಲಿ ಆಧ್ಯಾತ್ಮಿಕತೆಯೊಂದಿಗೆ ಸಂಸ್ಕೃತಿಯನ್ನು ಸಮೀಕರಿಸಿ ನೋಡುವ ಪರಂಪರೆಯೂ ಇತ್ತು. ಈ ಎರಡು ನೆಲೆಯಲ್ಲಿ ಮಾತ್ರ ಸಂಸ್ಕೃತಿಯ ವ್ಯಾಖ್ಯಾನ ನಡೆಯುತ್ತಿತ್ತು. ಆದರೆ ಸುಮಾರು ೭೦ - ೮೦ರ ದಶಕದ ನಂತರ ಭಾರತದಲ್ಲಿ; ಅದಕ್ಕಿಂತ ಎರಡು ಮೂರು ದಶಕಗಳ ಹಿಂದೆ ಅಮೆರಿಕ, ಬ್ರಿಟನ್‌ಗಳಲ್ಲಿ, ಸಂಸ್ಕೃತಿ ವ್ಯಾಖ್ಯಾನ ಬೇರೆ ನೆಲೆಯಲ್ಲಿ ಆರಂಭವಾಯ್ತು. ಅವರ ಪ್ರಕಾರ ಸಂಸ್ಕೃತಿ ಎಂದರೆ ಒಂದು ಜೀವನ ಕ್ರಮ. ಒಂದು ಸಮುದಾಯದ ನಂಬಿಕೆ, ಭಾಷೆ, ಉಡುಗೆ ತೊಡುಗೆ, ಆಹಾರ, ವೃತ್ತಿ, ನಂಬಿಕೆಗಳು, ದೇವರು, ಇವೆಲ್ಲವೂ ಸಂಸ್ಕೃತಿಯನ್ನು ಸೂಚಿಸುತ್ತದೆ ಎನ್ನುವುದು. ನಾವು ಸಾಮಾನ್ಯವಾಗಿ ಯಾವುದನ್ನು ಎಡಪಂಥೀಯ ಚಿಂತನೆ ಎಂದು ಗುರುತಿಸುತ್ತೀವೋ ಆ ನೆಲೆಯಲ್ಲಿ ಸಂಸ್ಕ್ಕೃತಿಯನ್ನು ಗುರುತಿಸಲು ಆರಂಭಿಸಿದರು. ಈ ನೆಲೆಯಲ್ಲಿ ಬಹಳ ಪ್ರಭಾವಿ ಹಾಗೂ ಪಥಪ್ರವರ್ತಕ ವ್ಯಾಖ್ಯಾನ ನೀಡಿದವರು ರೇಮಂಡ್ ವಿಲಿಯಮ್ಸ್ ಎಂಬ ಬ್ರಿಟಿಷ್ ಎಡಪಂಥೀಯ ಚಿಂತಕ. ಸಂಸ್ಕೃತಿ ಚಿಂತನೆ ಎನ್ನುವ ಸಾಮಾಜಿಕ ಸಾಹಿತ್ಯಕ ಚಿಂತನಾ ಮಾರ್ಗ ಪ್ರಾರಂಭವಾದದ್ದೆ ಆತನ ಪ್ರಭಾವದಿಂದ. ಆತನು ರೂಢಿಗತ ಚಿಂತನೆಗಳಿಗೆ ವಿರುದ್ಧವಾಗಿ ನಿಂತಂತವನು. ಎಲ್ಲಾ ಬಗೆಯ ಬಂಡಾಯ ಚಿಂತನೆಗಳ ಹಿಂದೆ ಆತ ಇದ್ದಾನೆ ಎನ್ನಬಹುದು.


ಸಂಸ್ಕೃತಿ ಚಿಂತನೆಯ ಆರಂಭಿಕ ವ್ಯಾಖ್ಯಾನಗಳ ಸಮಸ್ಯೆಯೇನು?


ನಾವು ಸಂಸ್ಕೃತಿ ಎನ್ನುವುದನ್ನು ಬರೀ ಲಲಿತ ಕಲೆ, ಆಧ್ಯಾತ್ಮಿಕ ಚಿಂತನೆಗಳಿಗೆ ಸೀಮಿತಗೊಳಿಸಿ ನೋಡಿದಾಗ ಅದು ಸಮಾಜದ ಮೇಲುವರ್ಗದ ಜನರ ಸಂಸ್ಕ್ಕೃತಿಯನ್ನು ಮಾತ್ರ ಪ್ರತಿನಿಧಿಸುತ್ತದೆ. ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ ಎಂದರೇನು ಎಂದಾಕ್ಷಣ ಕಾಳಿದಾಸನನ್ನು ಹೇಳುತ್ತೇವೆಯೇ ಹೊರತು ಜನಪದ ಸಾಹಿತ್ಯವನ್ನು ಹೇಳುವುದಿಲ್ಲ. ಪಂಪನನ್ನು ಉದಾಹರಿಸುತ್ತೇವೆಯೇ ಹೊರತು ಮಲೆಮಾದೇಶ್ವರರನ್ನು ಉದಾಹರಿಸುವುದಿಲ್ಲ.

ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯ ವ್ಯಾಖ್ಯಾನ ಯಾವ ಬಗೆಯದು? ಅದರ ಇತ್ತೀಚಿನ ಒಲವುಗಳೇನು?


ಅದು ಡಿ.ಆರ್. ನಾಗರಾಜ್ ಇರಬಹುದು, ಬರಗೂರು ರಾಮಚಂದ್ರಪ್ಪ, ರಹಮತ್ ತರೀಕೆರೆ ಮುಂತಾದವರೆಲ್ಲರೂ ಹೇಳುವ ಸಂಸ್ಕೃತಿ ಚಿಂತನೆ ಏನೆಂದರೆ ಅದು ಎಲ್ಲಾ ವರ್ಗಗಳಿಗೂ ಅನ್ವಯಿಸುವಂತಿರಬೇಕು ಅನ್ನುವುದು. ಎಲ್ಲರ ಅಪೇಕ್ಷೆ ನಿರೀಕ್ಷೆಗಳನ್ನೂ ಅದು ಒಳಗೊಳ್ಳುವುದಾಗಿರಬೇಕು. ಕೇವಲ ಒಂದು ವರ್ಗವನ್ನಲ್ಲ. ಹಾಗೆಯೇ ನಾವು ಲಿಖಿತ - ಮೌಖಿಕ, ಗ್ರಾಮೀಣ - ನಗರೀಕೃತ, ಲಿಪಿ ಸಹಿತ ಭಾಷೆ - ಲಿಪಿರಹಿತ ಭಾಷೆ, ಮುಂತಗಿ ನಾವು ಒಪ್ಪಿಕೊಂಡಿರುವ ಎಲ್ಲ ದ್ವಿಮಾನ ವೈರುಧ್ಯಗಳನ್ನು ಒಡೆಯುವಂತಹ ಚಿಂತನೆ ನಮಗೆ ಬೇಕು ಎನ್ನುವುದು. ಇದನ್ನು ನಾವು ಸಂಸ್ಕೃತಿ ಚಿಂತನೆ ಎನ್ನಬಹುದು. ಸಂಸ್ಕೃತಿ ಚಿಂತನೆಯೆಂದರೆ, ಒಂದು ಕಾಲಘಟ್ಟದ ಸಮಾಜದ ಪ್ರತಿಯೊಂದು ವರ್ಗವೂ ಬದುಕುವ ರೀತಿ, ಅದು ಇತರ ವರ್ಗಗಳೊಡನೆ ಹೊಂದಿರುವ ಸಂಬಂಧದ ಸ್ವರೂಪ, ಮತ್ತು ಆ ವರ್ಗ ದೇವರು-ಮಾನವ, ಮಾನವ ಸಂಬಂಧಗಳು, ಮಾನವ-ನಿಸರ್ಗ ಸಂಬಂಧ ಇತ್ಯಾದಿಗಳ ವಿಶ್ಲೇಷಣೆ ಹಾಗೂ ವ್ಯಾಖ್ಯಾನ. ಈ ದಿಕ್ಕಿನಲ್ಲಿ, ಇತ್ತೀಚೆಗೆ ಸಮಾಜದಂಚಿನಲ್ಲಿ ಬದುಕುತ್ತಿರುವವರ, ಬುಡಕಟ್ಟು ಜನಾಂಗಗಳ, ಇತ್ಯಾದಿ ಜನಾಂಗಗಳ ಹಾಗೂ ಅವರ ಸಾಹಿತ್ಯ-ಕಲೆ ಇತ್ಯಾದಿಗಳ ಅಧ್ಯಯನವನ್ನು ಕನ್ನಡ ಸಂಸ್ಕೃತಿಯ ಇತ್ತೀಚಿನ ಒಲವು ಎಂದು ಹೇಳಬಹುದು.



ಈ ಬಗೆಯ ವ್ಯಾಖ್ಯಾನಗಳಿಗೆ ನಮ್ಮ ಬಲಪಂಥೀಯ ಸಾಹಿತಿಗಳು ಹೇಗೆ ಸ್ಪಂದಿಸಿದ್ದಾರೆ?


ರೇಮಂಡ್ ವಿಲಿಯಮ್ಸ್ನ ಹೆಸರನ್ನು ಅವರು ಕೇಳಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಪ್ರಾಯಶಃ ಕೇಳಿದ್ದರೂ ಇರಬಹುದು. ಓದಿದ್ದರೂ ಇರಬಹುದು. ಒಂದೊಮ್ಮೆ ಓದಿದ್ದರೂ ಅದಕ್ಕೆ ಅವರು ಮಹತ್ವ ಕೊಡುವುದಿಲ್ಲ. ಇವನೂ ಒಬ್ಬ ಕಮ್ಯೂನಿಷ್ಟು ಎಂದು ಮೂಲೆಗೆಸೆದಿರುತ್ತಾರೆ ಅಷ್ಟೆ. ಅದರ ಮಹತ್ವ ಗೊತ್ತಿದ್ದರೂ ಅದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಉದಾಹರಣೆಗೆ ಭೈರಪ್ಪನವರು ಆವರಣದ ಕೊನೆಯಲ್ಲಿ ಆಕರ ಕೃತಿಗಳ ಪಟ್ಟಿ ಕೊಟ್ಟಿದ್ದಾರಲ್ಲ ಅದರಲ್ಲಿರುವ ಎಲ್ಲವೂ ಬಲಪಂಥೀಯರದ್ದೇ ವಿನಃ ಒಂದೂ ಎಡಪಂಥೀಯ ಚಿಂತಕರು ಎನ್ನುವವರ ಪುಸ್ತಕವೇ ಇಲ್ಲ. ಅದನ್ನು ಗಮನಕ್ಕೇ ತರುವುದಿಲ್ಲ. ರೋಮಿಲಾ ಥಾಪರ್, ಬಿಪಿನ್ ಚಂದ್ರರಂತವರ ಹೆಸರುಗಳೇ ಇಲ್ಲ. ರೇಮಂಡ್ ವಿಲಿಯಮ್ಸ್ ಹೆಸರಿಲ್ಲ. ಇವರುಗಳನ್ನೇ ಬಿಟ್ಟು ಭಾರತೀಯ ಇತಿಹಾಸ, ಸಂಸ್ಕ್ಕೃತಿಯ ಬಗ್ಗೆ ಏನು ಮಾತಾಡಲು ಸಾಧ್ಯ? ಭೈರಪ್ಪನವರಿರಲೀ, ಚಿದಾನಂದ ಮೂರ್ತಿಯವರಿರಲೀ ತಂತಮ್ಮ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸ ಮಾಡಿರುವವರೇ ಎಂಬುದನ್ನು ಒಪ್ಪಿಕೊಂಡೂ, ಅವರ ಬಗ್ಗೆ ಗೌರವದ ಜೊತೆಗೇ ಹೇಳುವುದಾದರೆ, ಇಬ್ಬರೂ ಸಹ ತಮ್ಮ ಐಡಿಯಾಲಜಿಯ ಕುರಿತು ಹೊಂದಿರುವ ಬದ್ಧತೆಯಿಂದಾಗಿ, ತಾವು ನಂಬಿದ್ದೇ ಸತ್ಯ, ಹಾಗಾಗಿ ಅದರ ಬಗ್ಗೆ ಚರ್ಚೆ ಬೇಕಿಲ್ಲ, ಅದು ವಾದ ಮಾಡುವ ವಿಷಯ ಅಲ್ಲ, ಅದು ಪರಮ ಸತ್ಯ ಎಂಬ ನಿಲುವಿನವರು. ’ನಾನು ಹೇಳುವುದು ಸತ್ಯ’ ಎಂಬ ಧೋರಣೆ ಹೊಂದಿರುವುದರಿಂದಾಗಿ ಅವರಿಗೆ ವೈಚಾರಿಕ ಸ್ವಾತಂತ್ರ್ಯ ಕಡಿಮೆಯಾಗುತ್ತದೆ. ಇದು ಎಡಪಂಥೀಯರ ವಿಷಯದಲ್ಲೂ ಅಷ್ಟೇ ಸತ್ಯ. ಒಂದು ವೈಚಾರಿಕತೆಗೆ ಸಂಪೂರ್ಣ ತಮ್ಮನ್ನು ಒಪ್ಪಿಸಿಕೊಂಡವರು ಸಮತೋಲನವನ್ನು ಸಂಪೂರ್ಣ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಬಲಪಂಥೀಯರು, ಎಡಪಂಥೀಯರು, ಜಾತ್ಯಾತೀತವಾದಿಗಳು, ಜಾತ್ಯಾತೀತರಲ್ಲದವರು, ಯಾರಿಗೆ ಬೇಕಾದರೂ ಅನ್ವಯವಾಗಬಹುದು. ಅಂತಿಮವಾಗಿ ಅದು ಕುರುಡು ನಂಬಿಕೆಯೆಡೆ ವಾಲುವುದು ಶತಃಸಿದ್ಧ.

ವೈಚಾರಿಕ ಸ್ವಾತಂತ್ರ್ಯ ಕಳೆದುಕೊಳ್ಳುವುದರ ಪರಿಣಾಮವೇನು?


ನಮ್ಮ ಚರಿತ್ರೆಯಲ್ಲೂ ಇಂತಹವು ಆಗಿವೆ. ಅದು ಶೈವ - ವೈಷ್ಣವರ ನಡುವಿನ ಸಂಘರ್ಷವೇ ಇರಬಹುದು. ಶಿವ, ವಿಷ್ಣು, ಕ್ರಿಸ್ತ, ಅಥವಾ ಅಲ್ಲಾ ಹೀಗೆ ನನ್ನ ದೇವರು ಬಿಟ್ಟು ಬೇರೆ ದೇವರಿಲ್ಲ, ನನ್ನ ದೇವರನ್ನು ಯಾರು ಮನ್ನಿಸೋಲ್ಲ ಅವರೆಲ್ಲರೂ ಪಾಖಂಡಿಗಳು, ಎನ್ನುವ ನಿಲುವೂ ಈ ಚೌಕಟ್ಟಿನೊಳಗೇ ಬರುತ್ತದೆ. ಅಂದರೆ ನಮ್ಮ ವೈಚಾರಿಕ ಸ್ವಾತಂತ್ರ್ಯವನ್ನು ನಾವು ಧರ್ಮದ ಹೆಸರಿನಲ್ಲಿ ಅಥವಾ ಸಂಸ್ಕ್ಕೃತಿಯ ಹೆಸರಿನಲ್ಲಿ ಅಥವಾ ದೇಶದ ಹೆಸರಿನಲ್ಲಿ ನಾವೇ ಕುಂಠಿತಗೊಳಿಸಿಕೊಂಡಿರುತ್ತೇವೆ. ಅದರಿಂದಾಗಿ ಕಣ್ಣಿಗೆ ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಓಡುತ್ತಿರುತ್ತೇವೆ. ಅದಕ್ಕೆ ಬದಲು ಭಿನ್ನ ಭಿನ್ನ ದೃಷ್ಟಿಕೋನಗಳನ್ನೂ ಇಟ್ಟುಕೊಂಡು ಅದೂ ತಪ್ಪಿರಬಹುದು ಎಂಬ ಸಂದೇಹಾತ್ಮಕ ಧೋರಣೆಯನ್ನು (ಸ್ಕೆಪ್ಟಿಕಲ್ ಆಟಿಟ್ಯೂಡ್) ಹೊಂದಿರಬೇಕು. ಎಲ್ಲವನ್ನೂ ಪ್ರಶ್ನಿಸುವ ಗುಣ ಏನಿರುತ್ತದಲ್ಲ ಅದೊಂದೇ ಆಧುನಿಕ ಕಾಲದಲ್ಲಿ ಆರೋಗ್ಯಪೂರ್ಣವಾದುದು. ಯಾವುದನ್ನೇ ಪೂರ್ಣವಾಗಿ ನಂಬಿದರೂ ಅದು ಒಂದಲ್ಲಾ ಒಂದು ಕುರುಡು ಓಣಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ.


ಕನ್ನಡ ಸಾಹಿತ್ಯದ ಸಮಕಾಲೀನ ನೆಲೆಗಳೇನು?


ಈ ಪ್ರಶ್ನೆಯ ವ್ಯಾಪ್ತಿ ಅಗಾಧವಾಗಿದೆ. ತುಂಬಾ ಸಂಕ್ಷಿಪ್ತವಾಗಿ ಹೇಳಬೇಕಾದರೆ: ಕಾವ್ಯದಲ್ಲಿ: ಆದರ್ಶ ಸಮಾಜದ ಸಾಧ್ಯತೆ ಹಾಗೂ ಸ್ವರೂಪಗಳನ್ನು ಕುರಿತ ಚಿಂತನೆ (ವೀರಪ್ಪ ಮೊಯಿಲಿ ಅವರ ಶ್ರೀ ರಾಮಾಯಣ ಮಹಾನ್ವೇಷಣಂ; ಕಂಬಾರರ ಎಲ್ಲಿದೆ ಶಿವಾಪುರ; ಎಚ್. ಎಸ್. ಶಿವಪ್ರಕಾಶ್ ಅವರ ಮತ್ತೆ ಮತ್ತೆ; ಇತ್ಯಾದಿ); ಜಾನಾಂಗಿಕ ಚರಿತ್ರೆ (ಕಾದಂಬರಿ: ಮಲ್ಲಿಕಾರ್ಜುನ ಹಿರೇಮಠ್, ಹವನ; ವಿಷ್ಣು ನಾಯ್ಕ, ಜಂಗುಂ ಜಕ್ಕುಂ; ಕೆ. ಗೋಪಾಲಕೃಷ್ಣ, ಸ್ವಪ್ನ ಸಾರಸ್ವತ; ಇತ್ಯಾದಿ); ನಾಟಕ: ಸ್ಥಳೀಯ ದೃಷ್ಟಿಕೊನದ ಚರಿತ್ರೆ (ಕಂಬಾರರ ಶಿವರಾತ್ರಿ; ಇತ್ಯಾದಿ). ಒಟ್ಟಾರೆಯಾಗಿ ಹೇಳಬೇಕಾದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲವನ್ನು ’ನೂತನ ಪ್ರಯೋಗಗಳ ಕಾಲ; ನೂತನ ವೈಚಾರಿಕತೆಯ ಕಾಲ, ಮತ್ತು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ ಎಂದು ಹೇಳಬಹುದು.

ಜಾನಪದ ಅಧ್ಯಯನ ಇತ್ತೀಚೆಗೆ ಪ್ರಾಮುಖ್ಯತೆ ಪಡೆದಿದೆ. ಸಂಸ್ಕೃತಿ ಚಿಂತನೆಯಲ್ಲಿ ಜಾನಪದ ಅಧ್ಯಯನ ಪಡೆದುಕೊಳ್ಳುತ್ತಿರುವ ಪಾತ್ರವೇನು?

ಜಾನಪದ ಅಧ್ಯಯನ ಶಿಷ್ಟ ವರ್ಗಗಳ ವೈಚಾರಿಕತೆ ಹಾಗೂ ಲೋಕದೃಷ್ಟಿ ಇವುಗಳನ್ನು ಮೀರುವ ಹಾಗೂ ಭಿನ್ನ ವೈಚಾರಿಕತೆ ಮತ್ತು ಲೋಕದೃಷ್ಟಿಗಳನ್ನು ಅರಿಯುವ ಪರ್ಯಾಯ ಮಾರ್ಗಗಳನ್ನು ನಮಗೆ ತೆರೆಯುತ್ತದೆ; ಇದೇ ಹಾದಿಯನ್ನು ಸಂಸ್ಕೃತಿ ಚಿಂತನೆಯೂ ತುಳಿಯುವುದರಿಂದ ಎರಡೂ ಪರಸ್ಪರ ಪೂರಕವಾಗಬಹುದು.

ಜಾಗತಿಕ ಜಾನಪದ ಮಹಾಕಾವ್ಯಗಳ ಅಧ್ಯಯನ ನಡೆಸಿದ್ದೀರಿ. ಕನ್ನಡ ಜಾನಪದಕ್ಕೂ ಇತರೆ ಜಾನಪದಗಳಿಗೂ ತುಲನಾತ್ಮವಾಗಿ ಕಾಣುವ ಸಾಮ್ಯತೆ ಭಿನ್ನತೆಗಳೇನು?


ತುಂಬಾ ಸ್ಥೂಲವಾಗಿ ಹೇಳಬೇಕಾದರೆ, ಕನ್ನಡೇತರ ಜಾನಪದ ಮಹಾಕಾವ್ಯಗಳು ನಾಯಕನ ದೈಹಿಕ ಸಾಹಸ-ಧೈರ್ಯ-ಶೌರ್ಯಗಳಿಗೆ ಒತ್ತು ಕೊಟ್ಟರೆ ಕನ್ನಡದ ಪ್ರಮುಖ ಜಾನಪದ ಮಹಾಕಾವ್ಯಗಳು (ಮಲೆ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಇತ್ಯಾದಿ) ನಾಯಕನ ಸಾಮೂಹಿಕ ಕಾರ್ಯಗಳಿಗೆ, ಅವನ ಆಧ್ಯಾತ್ಮಿಕ ಸಾಧನೆಗಳಿಗೆ, ಮತ್ತು ವಿಶ್ವಸೃಷ್ಟಿಯ ಎಲ್ಲಾ ಜೀವಜಂತುಗಳೂ ಸಮಾನ ಜೀವಸೂತ್ರದಿಂದ ಬಂಧಿಸಲ್ಪಟ್ಟಿವೆ ಎಂಬಂತಹ ಪೂರ್ಣ ದೃಷ್ಟಿಗೆ ಒತ್ತು ಕೊಡುತ್ತವೆ. ಮಾದೇಶ್ವರ, ಮಂಟೇಸ್ವಾಮಿ ಇವರುಗಳಂತಹ ’ಯೋಗಿ’ಗಳನ್ನು ನಾಯಕರಾಗುಳ್ಳ ಮೌಖಿಕ ಮಹಾಕಾವ್ಯಗಳು, ಮತ್ತು ಬುಡಕಟ್ಟು ಜನಾಂಗಗಳ ’ರಾಮಾಯಣ-ಮಹಾಭಾರತ’ಗಳು ಭಾರತೀಯೇತರ ಮೌಖಿಕ ಪರಂಪರೆಯಲ್ಲಿ (ನನಗೆ ತಿಳಿದಂತೆ ) ಇಲ್ಲ.

ಜಾನಪದ ಸಾಹಿತ್ಯದಲ್ಲಿ ಬರುವ ಪ್ರತಿರೋಧದ ನೆಲೆಗೆ ಕೆಲ ನಿದರ್ಶನ ನೀಡಬಹುದೇ?


ಮೊದಲಿಗೆ ಮಲೆ ಮಾದೇಶ್ವರನ ಮೌಖಿಕ ಕಾವ್ಯದಲ್ಲಿ ನೋಡುವುದಾದರೆ ಒಂದು ನೆಲೆಯಲ್ಲಿ ಈ ಮಹಾಕಾವ್ಯ ಕಾಲಾಂತರದಲ್ಲಿ ಜೈನ ಧರ್ಮವೂ ಜಾತಿಯಂತಹ ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿಕೊಂಡುದನ್ನು ಪ್ರತಿಭಟಿಸುತ್ತದೆ: ರಾಜನು ಮಾದೇಶ್ವರನು ಮಾದಿಗನೆಂದು ತಿರಸ್ಕಾರದಿಂದ ಕಂಡು, ಅವನಿಗೆ ತನಗೋಸ್ಕರ ಒಂದು ಜೊತೆ ಪಾದರಕ್ಷೆಗಳನ್ನು ಹೊಲಿದು ಕೊಡುವಂತೆ ಆದೇಶಿಸುತ್ತಾನೆ. ಮಾದೇಶ್ವರನಾದರೋ ಮಹಾ ಶರಣ ಹರಳಯ್ಯನ ’ಉರಿ ಚಮ್ಮಾಳಿಗೆ’ಗಳನ್ನೇ ತಂದು, ಅವುಗಳಲ್ಲಿ ಕಾಲಿಡಲು ಶ್ರವಣಾಸುರನನಿಗೆ ಹೇಳುತ್ತಾನೆ; ಅದರಂತೆಯೇ, ದರ್ಪದಿಂದ ಆ ಉರಿ ಚಮ್ಮಾಳಿಗೆಗಳನ್ನು ಮೆಟ್ಟಿದ ಕೂಡಲೇ ಶ್ರವಣಾಸುರನು ಉರಿದು ಭಸ್ಮವಾಗುತ್ತಾನೆ. ಇನ್ನೊಂದು ನೆಲೆಯಲ್ಲಿ ಈ ಕಾವ್ಯ ಸಂಸ್ಥೀಕರಣಗೊಂಡ ಮಠ-ಮಾನ್ಯಗಳನ್ನು ತಿರಸ್ಕರಿಸುತ್ತದೆ: ಇನ್ನೊಂದು ನೆಲೆಯಲ್ಲಿ, ಮಾನವಕೇಂದ್ರಿತ ಲೋಕದೃಷ್ಟಿಯನ್ನು ತಿರಸ್ಕರಿಸಿ, ಹಾವು-ಚೇಳುಗಳನ್ನೂ ಮನುಷ್ಯರ ಕೈಗೆ ಸಿಗದಂತೆ ದೂರವಿಟ್ಟು, ಹುಲಿವಾಹನನಾಗಿ, ತನ್ನ ಸಾಧನೆಯನ್ನು ಮುಂದುವರೆಸುತ್ತಾನೆ. ಮಂಟೇಸ್ವಾಮಿ ಕಾವ್ಯವು ಸಂಸ್ಥೀಕರಣಗೊಂಡ ವೀರಶೈವ ಧರ್ಮವನ್ನು ವಿಡಂಬಿಸುತ್ತದೆ: ಕಲ್ಯಾಣದ ಶರಣರ ಹಾಗೂ ಬಸವಣ್ಣನವರ ಭಕ್ತಿ-ನಿಷ್ಠೆಗಳನ್ನು ಪರೀಕ್ಷಿಸಲು, ಮಂಟೇಸ್ವಾಮಿ ತನ್ನ ದೇಹವನ್ನೆಲ್ಲ ಕಜ್ಜಿಯಿಂದ ತುಂಬಿಕೊಂಡು, ಒಂದು ತಿಪ್ಪೆಯಲ್ಲಿ ಕುಳಿತಿದ್ದು ಬಸವಣ್ಣನವರನ್ನು ಕಾಣುತ್ತಾನೆ; ಅನಂತರ, ಶರಣರು ಸ್ನಾನಕ್ಕೆ ಹೋದಾಗ, ಅವರ ಲಿಂಗಗಳನ್ನೆಲ್ಲಾ ಮಾಯ ಮಾಡಿ, ಅವುಗಳನ್ನು ಮತ್ತೆ ಪಡೆಯುವಂತೆ ಶರಣರನ್ನು ಆಹ್ವಾನಿಸುತ್ತಾನೆ; ಅವರೆಲ್ಲರೂ ಸೋತು ಓಡಿ ಹೋಗುತ್ತಾರೆ. ಎಂದರೆ, ಶರಣರಲ್ಲಿ ಎಲ್ಲರಿಗೂ --ದಲಿತರಿಗೆ, ರೋಗಿಗಳಿಗೆ, ದರಿದ್ರರಿಗೆ ಕೂಡಾ -- ಸಮಾನ ಸ್ಥಾನವಿರಬೇಕು ಎಂಬುದನ್ನು; ಮತ್ತು, ಲಿಂಗಧಾರಣೆ, ಪೂಜೆ, ಇತ್ಯಾದಿ ಬಾಹ್ಯಾಚರಣೆಗಳಿಂದ ವ್ಯಕ್ತಿಯೋರ್ವನು ನಿಜ ಶರಣನಾಗಲು ಸಾಧ್ಯವಿಲ್ಲ ಎಂದು ಈ ಕಾವ್ಯದ ಪ್ರಮುಖ ಭಾಗಗಳು ನಿರೂಪಿಸುತ್ತವೆ. ಹಾಗೆಯೇ, ಮುಂದೆ, ತಾವೇ ಶ್ರೇಷ್ಠರೆಂದು ಕೊಬ್ಬಿದ್ದ ಪಾಂಚಾಳರನ್ನೂ ಮಂಟೇಸ್ವಾಮಿ ಗೆದ್ದು ತನ್ನ ಒಕ್ಕಲಾಗಿ ಮಾಡಿಕೊಳ್ಳುತ್ತಾನೆ.



ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ನಡೆಸಿದ್ದಿರಿ. ಕನ್ನಡದಲ್ಲಿ ಅನುವಾದ ಕ್ಷೇತ್ರದ ಸವಾಲುಗಳೇನು?


ಅನುವಾದ ಎನ್ನುವ ಕಾರ್ಯ ಎರಡು ಭಾಷಿಕ ಜನಾಂಗಗಳನ್ನು ಹಾಗೂ ಅವರ ಸಂಸ್ಕೃತಿ-ವೈಚಾರಿಕತೆಗಳನ್ನು ಬೆಸೆಯುವ ಕಾರ್ಯ. ಈ ಕಾರ್ಯದಲ್ಲಿ ಇಂಗ್ಲೀಷ್-ಫ್ರೆಂಚ್ ಇತ್ಯಾದಿ ’ಅಂತಾರಾಷ್ಟ್ರೀಯ’ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸುವಾಗ ತುಂಬಾ ಸ್ವಾತಂತ್ರ್ಯ ವಹಿಸುವುದು; ಮತ್ತು ಕನ್ನಡ-ಹಿಂದಿ ಇತ್ಯಾದಿ ’ನಮ್ಮ’ ಭಾಷೆಗಳಿಂದ ಇಂಗ್ಲೀಷ್-ಫ್ರೆಂಚ್ ಭಾಷೆಗಳಿಗೆ ಅನುವಾದಿಸುವಾಗ ಮೂಲಕ್ಕೆ ತುಂಬಾ ವಿಧೇಯವಾಗಿರುವುದು ಇತ್ತೀಚಿನ ’ವಸಾಹತೋತ್ತರ ಅನುವಾದಗಳ’ ಸ್ವರೂಪವಾಗುತ್ತಿದೆ. ಇದಕ್ಕೆ ಬದಲಾಗಿ, ಅನುವಾದದ ನಿರೀಕ್ಷಿತ ಓದುಗ ಹಾಗೂ ಮೂಲಕೃತಿಯ ಸಂಸ್ಕೃತಿ ಇವೆರಡಕ್ಕೂ ಬದ್ಧನಾಗಿರುವುದು ಹೇಗೆ ಎಂಬುದು ಎಲ್ಲಾ ಅನುವಾದಕರೂ ಎದುರಿಸುವ ಸವಾಲು; ಇದು ಕನ್ನಡ ಅನುವಾದಕರೂ ಎದುರಿಸುವ ಸವಾಲು.

ಇತ್ತೀಚೆಗೆ ನೊಬೆಲ್ ಪುರಸ್ಕೃತ ವಿ.ಎಸ್.ನೈಪಾಲ್ ಮಹಿಳಾ ಸಾಹಿತ್ಯವನ್ನು, ಮಹಿಳೆಯರನ್ನು ಅವಮಾನಿಸುವ ಹೇಳಿಕೆ ನೀಡಿದರು. ಒಬ್ಬ ಸಾಹಿತಿಯಾಗಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ?


ಇದು ಸಂಪೂರ್ಣವಾಗಿ ಅಲಕ್ಷಿಸಬೇಕಾದ ಸಂಗತಿ; ಈ ಬಗೆಯ ಹೇಳಿಕೆ ಸಲ್ಮಾನ್ ರಶ್ದಿಯಿಂದಲೂ ಒಮ್ಮೆ ಬಂದಿತ್ತು (’ಶ್ರೇಷ್ಠ ಭಾರತೀಯ ಸಾಹಿತ್ಯವೆಂದರೆ ಭಾರತೀಯರಿಂದ ಇಂಗ್ಲೀಷ್‌ನಲ್ಲಿ ಬರೆದ ಸಾಹಿತ್ಯ’); ಇಂತಹ ಹೇಳಿಕೆಗಳನ್ನು ನಿರ್ಲಕ್ಷ್ಯದಿಂದ ಕಾಣುವುದೇ ಅವುಗಳಿಗೆ ನಾವು ಕೊಡಬಹುದಾದ ಉತ್ತರ.
ಕನ್ನಡ ವಿಮರ್ಷಾ ಲೋಕದಲ್ಲಿ ಸ್ತ್ರೀಸಂವೇದನೆಯ ಕೊರತೆ ಎಂಬ ಅಭಿಪ್ರಾಯವಿದೆ. ವಿಮರ್ಷಕರಾಗಿ ನಿಮ್ಮ ಅಭಿಮತವೇನು?
ಈ ಪ್ರಶ್ನೆಯ ಅರ್ಥ ’ವಿಮರ್ಶೆಯಲ್ಲಿ ಪುರುಷರ ಹೋಲಿಕೆಯಲ್ಲಿ ಸ್ತ್ರೀಯರ ಸಂಖ್ಯೆ ಕಮ್ಮಿ ಇದೆ’ ಎಂದಾದರೆ, ಆ ಅಭಿಪ್ರಾಯ ಸರಿ. ಆದರೆ, ಈ ಸಂದರ್ಭದಲ್ಲಿ ಕ್ರಿಯಾಶೀಲರಾಗಿರುವ ಸುಮಿತ್ರಾ ಬಾಯಿ, ಆಶಾದೇವಿ, ಪ್ರಭಾವತಿ, ವಿಜಯಾ ಸುಬ್ಬರಾಜ್, ಇತ್ಯಾದಿ ಅನೇಕರ ಅರ್ಥಪೂರ್ಣ ವಿಮರ್ಶೆಯನ್ನು ಮರೆಯುವಂತಿಲ್ಲ.


ಸಾಹಿತ್ಯ ವಿಮರ್ಷೆ ಎನ್ನುವುದು ಸಾಮಾನ್ಯ ಓದುಗರಿಗೆ ಕಬ್ಬಿಣದ ಕಡಲೆಯಂತಾಗಿದೆ. ಇದು ಹೀಗೇ ಇರಬೇಕಾ?


ಸಾಮಾನ್ಯ ಓದುಗರು ಎಂದರೆ ಸಾಹಿತ್ಯಾನುಭವ ಅಷ್ಟಾಗಿ ಇಲ್ಲದವರು ಎಂದಾದರೆ ನೀವು ಹೇಳುವ ’ಕಬ್ಬಿಣದ ಕಡಲೆ’ಯ ಉಪಮೆ ಸರಿ. ಆದರೆ, ಆ ಕ್ಷೇತ್ರದ ಸಾಕಷ್ಟು ಅನುಭವವಿಲ್ಲದೆ ನೀವು ಶಾಸ್ತ್ರೀಯ ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಇತ್ಯಾದಿಗಳನ್ನು ಗ್ರಹಿಸುವುದು ಸಾಧ್ಯವೆ? ಈ ಕಾರಣಕ್ಕಾಗಿಯೇ, ವಿಮರ್ಶಕನನ್ನು (ಎಂದರೆ ಸಹೃದಯನನ್ನು) ವರ್ಣಿಸುವಾಗ ಅಭಿನವಗುಪ್ತರು ಅವನ ವ್ಯುತ್ಪತ್ತಿ ಹಾಗೂ ಅನುಭವಕ್ಕೆ ಒತ್ತು ಕೊಡುತ್ತಾರೆ: ಏಷಾಂ ಕಾವ್ಯಾನುಶೀಲಾನಾಂ, ಅಭ್ಯಾಸವಶಾತ್ . . . ಸ್ವಲ್ಪವೂ ತಯಾರಿಯಿಲ್ಲದೆ, ನಾವು ಯಾವ ಕ್ಷೇತ್ರಕ್ಕೆ ಹೋದರೂ ಅದು ’ಕಬ್ಬಿಣದ ಕಡಲೆ’ಯಂತೆಯೇ

ಬುಧವಾರ, ಆಗಸ್ಟ್ 17, 2011

ಏಕತಾರಿ ತತ್ವಪದಕಾರ ಜೋಗೇರ ಗೋಣೆಪ್ಪ

(ಗೋಣೆಪ್ಪ ತಮ್ಮ ಏಕತಾರಿಯೊಂದಿಗೆ)


-ಸಿದ್ದರಾಮ ಹಿರೇಮಠ, ಕೂಡ್ಲಿಗಿ.


ದಾಸರು ನಾಡಿನಾದ್ಯಂತ ಸಂಚರಿಸಿ ಕೀರ್ತನೆಗಳನ್ನು ಮನೆಮನೆಗೆ ತಲುಪಿಸಿದರು. ಶಿಶುನಾಳ ಶರೀಫರು ತತ್ವಪದಗಳನ್ನು ಹಾಡಿ ನಾಡಿನ ಜನತೆಯ್ಲಲಿ ಆಧ್ಯಾತ್ಮದ ಹೊಳಹನ್ನು ತುಂಬಿದರು. ಅದೇ ಪರಂಪರೆಯಲ್ಲಿ ಹಲವಾರು ಜನ ಜಾನಪದ ಕಲಾವಿದರು ತತ್ವಪದಗಳನ್ನು ನಾಡಿನಾದ್ಯಂತ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಅಪರೂಪದ ಕಲಾವಿದರಲ್ಲಿ ತಾಲೂಕಿನ ಹರಾಳು ಗ್ರಾಮದ ೭೫ರ ಹರೆಯದ ಜೋಗೇರ ಗೋಣೆಪ್ಪನೂ ಒಬ್ಬರು. ಏಕತಾರಿ ವಾದ್ಯವನ್ನು ಹಿಡಿದು ತತ್ವಪದಗಳನ್ನು ಹಾಡತೊಡಗಿದರೆ ಎಂತಹವರೂ ತಲೆದೂಗಲೇಬೇಕು. ತಾಲೂಕಿನಲ್ಲಿ ಏಕತಾರಿ ವಾದ್ಯದ ಮೂಲಕ ಹಾಡುವವರು ಇವರೊಬ್ಬರೇ ಎಂಬುದೂ ಗಮನಿಸಬೇಕಾದ ಅಂಶವಾಗಿದೆ.

ಹರಾಳು ಗ್ರಾಮ ತಾಲೂಕಿನ ಗಡಿಗ್ರಾಮಗಳಲ್ಲೊಂದು. ಅಲ್ಲಿನ ಅಡವಿಸ್ವಾಮಿ ಗೋಣೆಪ್ಪನವರ ತಂದೆಗೆ ಗುರುಗಳು. ಗೋಣೆಪ್ಪನವರಿಗೆ ತಂದೆಯೇ ಗುರುಗಳು. ೧೫ನೇ ವಯಸ್ಸಿನಿಂದಲೇ ತಂದೆಯೊಂದಿಗೆ ಬರಗಾಲದ ಸಂದರ್ಭದಲ್ಲಿ ಮನೆಗಳಿಗೆ ಭಿಕ್ಷೆಗೆ ಹೋಗಿ ಹಾಡಿಬರುತ್ತಿದ್ದರು. ತಂದೆ ಏಕತಾರಿ ಹಿಡಿದು ಹಾಡುತ್ತ ಹೊರಟರೆ ಮಗ ಗೋಣೆಪ್ಪ ಹಿಂದೆ ದಮ್ಮಡಿ ಬಾರಿಸುತ್ತ ಹೆಜ್ಜೆ ಹಾಕುತ್ತಿದ್ದರು. ಖಾಲಿ ಕುಂಬಳಕಾಯಿಗೆ ಬಿದಿರನ್ನು ಹೊಂದಿಸಿ, ತಂತಿಯನ್ನು ಬಿಗಿಮಾಡಿ, ನಾದದ ಜೊತೆಗೆ ಹಾಡತೊಡಗಿದರೆ ಕೇಳುವವರು ಮೈಮರೆಯಬೇಕು. ತಂದೆಯಿಂದಲೇ ತಾನು ಹಾಡುವುದನ್ನು ಕಲಿತೆ ಎನ್ನುವ ಗೋಣೆಪ್ಪನವರಿಗೆ ತಾನೊಬ್ಬ ಅತ್ಯುತ್ತಮ ಹಾಡುಗಾರನೆಂಬ ಗರ್ವ ಎಳ್ಳಷ್ಟೂ ಇಲ್ಲ.

(ಏಕತಾರಿ ನುಡಿಸಿ ತತ್ವಪದ ಹೇಳುವ ಕಲಾವಿದ ಹರಾಳು ಗೋಣೆಪ್ಪ)


ಕೇಳುಗರಿದ್ದರೆ ಸಾಕು ಎಲ್ಲಿ ಬೇಕಾದಲ್ಲಿ ಹಾಡಲು ತೊಡಗುತ್ತಾರೆ. ಮಡಿವಾಳಜ್ಜನವರು ರಚಿಸಿದ ‘ಅಗಸರೋ ನಾವು ಅಗಸರು’, ಶಿಶುನಾಳ ಶರೀಫರ ‘ಮುತ್ತಿನಂಥ ಮಾತಿದು ಕೇಳು ಗೆಳತಿ’, ಪುರಂದರದಾಸರ ‘ಆರೇನು ಮಾಡುವರು, ಆರಿಂದಲೇನಹುದು’, ಚಳ್ಳಗುರ್ಕಿ ಎರಿತಾತನವರ ‘ಎಂತಥ ಗುರುನಾಥನು ಭಾಳ ಅಂತ:ಕರಣುಳ್ಳಾತನು’, ಹೀಗೆ ಆದಿಮೂರ್ತಿ ಗುರುನಾಥ, ಗಂಗಾಧರಶಾಸ್ತ್ರಿಗಳು, ನಾಗಲಿಂಗಜ್ಜ, ಗುರು ಗೋವಿಂದಭಟ್ಟರು ರಚಿಸಿದ ತತ್ವಪದಗಳನ್ನು ಹಾಡುತ್ತಾರೆ. ವಚನಗಳನ್ನೂ ಹಾಡುವರಾದರೂ ಇವರಿಗೆ ಅತ್ಯಂತ ಇಷ್ಟವಾದವೆಂದರೆ ಶಿಶುನಾಳ ಶರೀಫರ, ದಾಸರ ಪದಗಳೇ.

ಗೋಣೆಪ್ಪ ತಾಲೂಕಿನಾದ್ಯಂತ ಸಂಚರಿಸಿ ಹಲವಾರು ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಹೂವಿನ ಹಡಗಲಿಯಲ್ಲಿ ದಿ.ಎಂ.ಪಿ.ಪ್ರಕಾಶ್ ಅವರು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೋಣೆಪ್ಪನವರ ಹಾಡುಗಾರಿಕೆ ಕೇಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಕೊಟ್ರಪ್ಪ ಇವರಿಗೆ ವೇದಿಕೆಯ ಅವಕಾಶ ಒದಗಿಸಿಕೊಟ್ಟರು. ಮುಂದೆ ಹಂಪಿ ಉತ್ಸವದವರೆಗೆ ಇವರ ಕಲೆಯ ಪ್ರದರ್ಶನ ಜರುಗಿತು. ಇಲಾಖೆಯ ವತಿಯಿಂದಲೇ ಏಕತಾರಿಯನ್ನು ಕೊಡಿಸಲಾಗಿದೆ ಎಂದು ಗೋಣೆಪ್ಪ ಹೇಳುತ್ತಾರೆ. ೨೦೦೫ರಲ್ಲಿ ಹೊಸಪೇಟೆಯಲ್ಲಿ ಜರುಗಿದ ಗುರುವಂದನಾ ಮಹೋತ್ಸವ, ೨೦೦೬ರಲ್ಲಿ ಸುವರ್ಣ ಸಂಸ್ಕೃತಿ ದಿಬ್ಬಣ, ದಾವಣಗೆರೆಯ ಜಿಲ್ಲಾ ಅಕ್ಷರದಾನ ಸಮಿತಿ, ಕೂಡ್ಲಿಗಿ ಪೊಲೀಸ್ ಉಪವಿಭಾಗ, ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘ, ೨೦೦೭ರಲ್ಲಿ ಬಳ್ಳಾರಿಯ ನೆಹರು ಯುವಕೇಂದ್ರ, ಕೊಟ್ಟೂರು ಕಲಾಕೇಂದ್ರಗಳ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ. ೨೦೧೧ರಲ್ಲಿ ಇವರಿಗೆ ಹಂಪಿ ಉತ್ಸವದಲ್ಲೂ ಅವಕಾಶ ದೊರೆತಿದೆ. ತಮ್ಮ ಕಲೆಗೆ ಅವಕಾಶ ದೊರೆಯಲಿಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಕೊಟ್ರಪ್ಪ ಹಾಗೂ ಕೂಡ್ಲಿಗಿ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡರೆಂದು ಗೋಣೆಪ್ಪ ಸ್ಮರಿಸುತ್ತಾರೆ.


ಒಂದನೇ ತರಗತಿಯನ್ನೂ ಪೂರ್ಣಗೊಳಿಸಲಾಗದ ಗೋಣೆಪ್ಪ ಅಕ್ಷರಗಳನ್ನು ಗುರುತಿಸುತ್ತಾರಷ್ಟೇ, ಆದರೆ ಕೇಳಿ ಕಲಿತದ್ದೇ ಬಹಳ. ಜೋಗೇರ ಜನಾಂಗದಲ್ಲಿಯೇ ಕೆಲವರು ಕಿನ್ನುರಿ ನುಡಿಸುತ್ತಾರೆ, ಇವರದು ಏಕತಾರಿ. ಒಂದೇ ತಂತಿಯನ್ನೇ ತಮ್ಮ ಸ್ವರಕ್ಕನುಗುಣವಾಗಿ ನಾದ ಹೊಂದಿಸಿಕೊಂಡು ಹಾಡುವುದು ಕಷ್ಟ ಎಂಬುದು ಗೋಣೆಪ್ಪನವರ ಹೇಳಿಕೆ. ಇದನ್ನು ಮುಂದುವರೆಸಿಕೊಂಡು ಹೋಗುವವರು ಅಥವಾ ಕಲಿಯುವವರು ಯಾರೂ ಇಲ್ಲವೆಂಬುದೇ ಇವರ ವ್ಯಥೆ. ಜಾನಪದ ಕಲೆಗಾರರ ಕಲೆ ಅಳಿವಿನಂಚಿನಲ್ಲಿದೆ, ಅದನ್ನು ಉಳಿಸುವ, ಅದರ ಬಗ್ಗೆ ಕಾಳಜಿ ವಹಿಸುವವರು ಯಾರೂ ಇಲ್ಲ ಎಂದು ಗೋಣೆಪ್ಪ ದು:ಖಿಸುತ್ತಾರೆ. ಗೋಣೆಪ್ಪನವರಿಗೆ ಇನ್ನೂ ಕಲಾವಿದರ ಮಾಸಾಶನ ದೊರೆತಿಲ್ಲ.

ತಾಲೂಕಿನ ಏಕಮಾತ್ರ ಏಕತಾರಿ ಕಲಾವಿದರಾದ ಗೋಣೆಪ್ಪನವರ ತತ್ವಪದಗಳನ್ನು ಕೇಳಬೇಕೆಂದರೆ ಮೊಬೈಲ್ ಸಂಖ್ಯೆ: ೮೯೭೦೨೧೫೪೧೦ಗೆ ಸಂಪರ್ಕಿಸಿ ಕಾರ್ಯಕ್ರಮ ಏರ್ಪಡಿಸಿದರೆ, ಹಿರಿಯ ಜೀವಕ್ಕೆ ಸಂತೋಷವೂ, ಸಹಾಯವೂ ಆಗುತ್ತದೆ.



ಗುರುವಾರ, ಆಗಸ್ಟ್ 11, 2011

ಫೋಕ್ ಯುನಿವರ್ಸಿಟಿ, ಲರ್ಗೊ, ಪ್ಲೊರಿಡಾ.




ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆದ ನಂತರ ಇದು ಜಗತ್ತಿನಲ್ಲಿಯೇ ಮೊದಲ ಪ್ರಯತ್ನ ಎನ್ನುವ ಹೆಗ್ಗಳಿಕೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಇದು ಜಗತ್ತಿನಲ್ಲಿ ಮೊದಲನೆಯದಲ್ಲ. ವಯಕ್ತಿಕ ನೆಲೆಯಲ್ಲಿ ಫೋಕ್ ಯುನಿವರ್ಸಿಟಿಯ ಪ್ರಯತ್ನ ೧೯೯೮ ರಲ್ಲಿ ಪ್ಲೊರಿಡಾದಲ್ಲಿ ನಡೆದಿದೆ. ಅದು ನಮ್ಮ ಕಲ್ಪನೆಯ ದೊಡ್ಡ ಗಾತ್ರದ ವಿಶ್ವವಿದ್ಯಾಲಯವಲ್ಲ. ಒಂದು ಕಾಲದ ದೇಸಿ ಸಂಗೀತವನ್ನು ಚಳವಳಿಯ ಹಾಗೆ ನಾಲ್ಕಾರು ಜನ ಅಭಿವೃದ್ಧಿ ಪಡಿಸಿ ಆ ದೇಶದ ಶಾಸ್ತ್ರೀಯ ಸಂಗೀತ ಪ್ರಕಾರಕ್ಕೆ ದೊಡ್ಡ ಸವಾಲಾಗುವಂತೆ ಬೆಳೆಸಲು ಫೋಕ್ ಯುನಿವರ್ಸಿಟಿಯನ್ನು ಬಳಸಿಕೊಂಡಿದ್ದಾರೆ. ಈ ಒಂದು ಯಶೋಗಾಥೆ ಇಲ್ಲಿದೆ.

    ಫ್ಲೊರಿಡಾ ಸೌಥ್ ಈಸ್ಟರ್ನ ಯುನಿಟೆಡ್ ಸ್ಟೇಟ್ಸನ ಒಂದು ಸ್ಟೇಟ್. ಇದು ಅಟ್ಲಾಂಟಿಕ್ ಮತ್ತು ಗಲ್ಫ ವಲಯದಲ್ಲಿ ಬರುತ್ತದೆ. ಇದರ ಒಂದು ಬದಿಗೆ ಅಟ್ಲಾಂಟಿಕ್ ಮಹಾಸಾಗರವಿದೆ. ಹದಿನೆಂಟು ಕೋಟಿ ಜನಸಂಖ್ಯೆ ಇರುವ ಇಲ್ಲಿ ವಿಶಿಷ್ಟ ಜನಪದವಿದೆ. ಇದರ ಪ್ರಭಾವದಿಂದ ಲರ್ಗೊ ನಗರದಲ್ಲಿ ಫೋಕ್ ಯುನಿವರ್ಸಿಟಿ ಹುಟ್ಟಲು ಕಾರಣವಾಗಿದೆ. ಈ ಯುನಿವರ್ಸಿಟಿ ಕೆಲವೇ ಕೆಲವು ಕನಸುಗಾರರ ಫಲ. ಮೈಕ್ ಟ್ವಿಟಿ, ಡೆವಿಡ್ ನಜ, ಜ್ಹಾನ್ ತ್ರಷರ್, ಮತ್ತು ಷೆರಿ ಈ ನಾಲ್ಕು ಜನರ ಪರಿಶ್ರಮದಿಂದ ಒಂದು ಫೋಕ್ ಯುನಿವರ್ಸಿಟಿ ರೂಪುಗೊಂಡಿದೆ. ಈ ತಂಡ ೧೯೯೦ ರಲ್ಲಿಯೇ ತಮ್ಮ ಕಾರ್ಯವನ್ನು ಹಮ್ಮಿಕೊಂಡಿದ್ದರೂ, ಆ ಸ್ವರೂಪ ೧೯೯೮ ರ ಹೊತ್ತಿಗೆ ಫೋಕ್ ಯುನಿವರ್ಸಿಟಿಯಾಗಿ ಹೊರಹೊಮ್ಮಿತು.


       ಅರವತ್ತು ಎಪ್ಪತ್ತರ ದಶಕದಲ್ಲಿ ಜುಮ್ಮಿ ಬಫೆಟ್ ಎಂಬುವವ ಜನಪದ ಸಂಗೀತದ ಲಯಗಳನ್ನು ರಾಕ್ ಸಂಗೀತದ ಲಯಗಳೊಂದಿಗೆ ಬೆರೆಸಿ ರವೀಂದ್ರ ಸಂಗೀತದ ತರಹ ತನ್ನದೇ ಆದ ಜುಮ್ಮಿ ಬಫೆಟ್ ಮ್ಯೂಜಿಕ್ ನ್ನು ಸೃಷ್ಟಿಸಿದ. ಇದನ್ನು ಜನಪ್ರಿಯಗೊಳಿಸಿ ಅದಕ್ಕೊಂದು ರಾಷ್ಟ್ರೀಯ ಸಂಗೀತದ ಆಯಾಮವನ್ನು ನೀಡಿದ್ದು ಫೋಕ್ ಯುನಿವರ್ಸಿಟಿ. ಇದರ ಪ್ರಭಾವದಿಂದಾಗಿ ಮೈಕ್ ಮುಂತಾದವರು ಜನಪದದ ಪ್ರಭಾವವನ್ನು ಬಳಸಿ ಲಿರಿಕ್ಸ ಬರೆದು ಅದನ್ನು ಗಿಟಾರ್ ಸಂಗೀತದೊಂದಿಗೆ ಅನ್ವಯಿಸಿ ಒಂದು ಬಗೆಯ ಫೋಕ್ ಮ್ಯೂಜಿಕ್ನ್ನು ಸೃಷ್ಟಿಸಿಕೊಂಡಿದ್ದಾರೆ. ಒಬ್ಬರಿಂದ ಆರಂಭವಾದ ಈ ಸಂಗೀತ ಈಗ ಒಂದು ವಿಶ್ವವಿದ್ಯಾಲಯದ ಸ್ವರೂಪದಲ್ಲಿ ಪ್ರದರ್ಶನ ಮಾಡಬಲ್ಲಷ್ಟು ಬೆಳೆದಿದೆ. ಮೈಕ್ ೫೦ ರ ದಶಕದ ಕೋಸ್ಟ ಲೈನರ್ಸ ಎಂಬ ಮ್ಯೂಜಿಕ್ ಮಾದರಿಯನ್ನು ತನ್ನ ಶಾಲಾ ದಿನಗಳಲ್ಲಿ ಕಲಿತು ಪ್ರದರ್ಶನ ಕೊಡುತ್ತಿದ್ದನು. ಆ ಸಂಗೀತದಲ್ಲಿಯೂ ಫೋಕ್ ಮ್ಯೂಜಿಕ್ನ ಎಳೆಗಳಿದ್ದವು. ಇದನ್ನೆ ಜ್ಹಾನ್ ಮತ್ತು ಅವನ ಹೆಂಡತಿ ಷೆರಿ ಎಕ್ಸಲ್ ಮ್ಯೂಜಿಕ್ ಶಾಲೆಯನ್ನು ತೆರೆದು ಎಲ್ಲಾ ವಯೋಮಾನದವರಿಗೂ ಕಲಿಸುವ, ಆ ಮೂಲಕ ಜನಪದ ಸಂಗೀತವೊಂದನ್ನು ಜನಪ್ರಿಯಗೊಳಿಸಲು ಹಗಲಿರುಳು ಶ್ರಮಿಸಿದರು.


       ಈ ಸಂಗೀತವನ್ನು ಇಂದು ಕಾಲೇಜ್ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿಯೂ, ಹೋಟೆಲ್ ಕಾರ್ಯಕ್ರಮಗಳಲ್ಲಿ, ಮದುವೆಗಳಲ್ಲಿ, ಓಪನಿಂಗ್ ಸೆರಮನಿಗಳಲ್ಲಿ, ಬಾರ್ಗಳಲ್ಲಿ, ಯುನಿವರ್ಸಿಟಿಗಳಲ್ಲಿ, ಖಾಸಗಿ ಸಂಗೀತ ಕಛೇರಿಗಳಲ್ಲಿ, ರೋಗಿಗಳ ರೋಗ ಉಪಶಮನಕ್ಕಾಗಿ ಆಸ್ಪತ್ರೆಗಳಲ್ಲಿ ಹೀಗೆ ಚಿಕ್ಕದು ದೊಡ್ಡದು ಎನ್ನದೆ ಇಡೀ ಫ್ಲೊರಿಡಾ ದೇಶದಾದ್ಯಂತ ಈ ಸಂಗೀತವನ್ನು ಜನಪ್ರಿಯಗೊಳಿಸಿದ್ದಾರೆ. ಇಂದು ಈ ಸಂಗೀತವನ್ನು ನಂಬಿದ ನೂರಾರು ಸಂಗೀತದ ತಂಡಗಳು ಹುಟ್ಟಿಕೊಂಡಿವೆ. ಈ ಸಂಗೀತಕ್ಕೆ ಈಗ ಅಂತರಾಷ್ಟ್ರೀಯ ಮನ್ನಣೆಗಳೂ ಸಿಗುತ್ತಿವೆ.



    ಫೋಕ್ ಯುನಿವರ್ಸಿಟಿಯ ವೆಬ್ ಸೈಟ್ನ ಫೋಟೋ ಮತ್ತು ವೀಡಿಯೋ ಗ್ಯಾಲರಿಯನ್ನು ನೋಡುತ್ತಿದ್ದರೆ, ಈಗ ಫೋಕ್ ಯುನಿವರ್ಸಿಟಿ ಆ ದೇಶದ ಜನಪದ ಕಲೆಗಳನ್ನು, ಆಚರಣೆಗಳನ್ನು, ಜನ ಸಾಮಾನ್ಯರ ತಿಳುವಳಿಕೆಯ ಲೋಕವನ್ನೂ ಒಳಗೊಳ್ಳಲು ಸಾದ್ಯವಾಗಿದೆ ಅನ್ನಿಸುತ್ತದೆ. ಇದರ ಸ್ವರೂಪವನ್ನು ನೋಡಿದರೆ, ಇಲ್ಲಿ ಫೋಕ್ನ್ನು ಒಂದು ಸೈದ್ಧಾಂತಿಕ ತಿಳುವಳಿಕೆ ಎಂದು ಮಾತ್ರ ಭಾವಿಸದೆ, ಅದೊಂದು ಪ್ರಾಯೋಗಿಕ ಚಳವಳಿ ಎನ್ನುವ ಅರ್ಥದಲ್ಲಿ ಬೆಳೆಸಲು ಪ್ರಯತ್ನಿಸಿದಂತೆ ಕಾಣುತ್ತದೆ. ಹಾಗಾಗಿ ಫೋಕ್ ಯುನಿವರ್ಸಿಟಿಯ ವೆಬ್ಸೈಟ್ ನಲ್ಲಿ ಸೆಮಿನಾರುಗಳು ನಡೆದ ಬಗ್ಗೆ ಮಾಹಿತಿಯಾಗಲಿ, ಪುಸ್ತಕ ಪ್ರಕಟಣೆಯ ಸಂಗತಿಯಾಗಲಿ ಸಿಗುವುದಿಲ್ಲ. ಬದಲಾಗಿ ಎಲ್ಲೆಲ್ಲಿ ಫೋಕ್ ಮ್ಯೂಜಿಕ್ ಕಾರ್ಯಕ್ರಮಗಳಿವೆ, ಇದುವರೆಗೂ ಫೋಕ್ ಯುನಿವರ್ಸಿಟಿ ಎಲ್ಲೆಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದೆ ಮುಂತಾದವುಗಳ ಬಗ್ಗೆ ಫೋಟೋ ವಿಡಿಯೋಗಳು ದೊರೆಯುತ್ತವೆ. ಹಾಗಾಗಿ ಈ ಯುನಿವರ್ಸಿಟಿ ಸಿದ್ದಾಂತಕ್ಕಿಂತ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ರೂಪುಗೊಂಡದ್ದು.



     ಇಂದು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆಗಿದೆ, ಈ ವಿಶ್ವವಿದ್ಯಾಲಯವನ್ನು ರೂಪಿಸಲು ನಾವು ಫ್ಲೋರಿಡಾದ ಫೋಕ್ ಯುನಿವರ್ಸಿಟಿಯಿಂದಲೂ ಕಲಿಯುವುದಿದೆ. ಮುಖ್ಯವಾಗಿ ಸಿದ್ಧಾಂತಗಳನ್ನು ಮಾತ್ರ ರೂಪಿಸುವ ವಿವಿಯಾಗದೆ, ಪ್ರಾಯೋಗಿಕ ನೆಲೆಯಲ್ಲಿ ಯುನಿವರ್ಸಿಟಿಯನ್ನು ರೂಪಿಸುವ ಅಗತ್ಯವಿದೆ. ಹಾಗೆಯೆ ಜಾನಪದ ವಿಶ್ವವಿದ್ಯಾಲಯದ ಭವಿಷ್ಯದ ಅಧ್ಯಾಪಕರುಗಳು ಜಾನಪದ ಸಂಗತಿಗಳ ಪರವಾದ ರಾಜಕೀಯ ಮಾಡಲು ಹಗಲಿರುಳು ಶ್ರಮಿಸಬೇಕಿದೆ. ಮೈಕ್ ಒಳಗೊಂಡಂತೆ ನಾಲ್ಕಾರು ಜನ ಜನಪದ ಸಂಗೀತವನ್ನು ಇಂದು ಫ್ಲೊರಿಡಾ ದೇಶವೇ ಪರಿಭಾವಿಸುವಂತೆ ಮಾಡಿದ ಹಿನ್ನೆಲೆಯನ್ನು ಈ ನೆಲೆಯಲ್ಲಿ ನೋಡಬಹುದು. ಅಂದರೆ ಜಾಗತೀಕರಣದ ನೆಲೆಯಲ್ಲಿ ಹಿನ್ನೆಲೆಗೆ ಸರಿದ ಜನಪದ ಸಂಗೀತವನ್ನು, ಜನಪದ ವೈದ್ಯವನ್ನು, ಜನಪದ ಆಹಾರ ಪದ್ದತಿಯನ್ನು, ಜನಪದ ಬದುಕಿನ ಕ್ರಮವನ್ನು, ಜನಪದ ತಂತ್ರಜ್ಞಾನವನ್ನು, ಜನಪದ ಉತ್ಪಾದನಾ ವಿಧಾನವನ್ನು ಇಂದು ಹೊಸ ನೆಲೆಗಟ್ಟಿನಲ್ಲಿ ಪುನರುಜ್ಜೀವನಗೊಳಿಸಬೇಕಿದೆ. ಅಂತಹ ಕೆಲಸಕ್ಕೆ ಪ್ಲೊರಿಡಾ ಫೋಕ್ ಯುನಿವರ್ಸಿಟಿ ಒಂದು ತೋರು ಬೆರಳಾಗಲಿ ಎಂದು ಆಶಿಸಬಹುದು.
(ಇಲ್ಲಿ ಬಳಸಿರುವ ಫೋಟೋಗಳು ಫೋಕ್ ಯುನಿವರ್ಸಿಟಿಯ ವೆಬ್ ಸೈಟಿನಲ್ಲಿ ಇದ್ದವು)
ಸಂಪರ್ಕ: ವೆಬ್ ಸೈಟ್: http://www.folku.net
Email: FolkU@GigIt.com

ಬುಧವಾರ, ಆಗಸ್ಟ್ 10, 2011

ಜಾನಪದ ಅಧ್ಯಯನ ಕೇವಲ ಅಕಾಡೆಮಿಕ್ ಕಸರತ್ತು ಆಗದಿರಲಿ:ಕೋಟಗಾನಹಳ್ಳಿ ರಾಮಯ್ಯ




ಸಂದರ್ಶನ: ಹರ್ಷಕುಮಾರ್, ಕುಗ್ವೆ

೭೦ರ ದಶಕದಲ್ಲಿ ಕುಡಿಯೊಡೆದು ಹಬ್ಬಿದ ದಲಿತ ಚಳುವಳಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೋಟಗಾನಹಳ್ಳಿ ರಾಮಯ್ಯನವರು ತಮ್ಮದೇ ಶೈಲಿಯ ವಿಶಿಷ್ಟ ಚಿಂತನೆ, ಪ್ರಯೋಗಗಳಿಗೆ ಹೆಸರಾದವರು. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಇತ್ತಿಚೆಗ ನಡೆದ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಮಕಾಲೀನ ಸಂದರ್ಭದ ಹಲವಾರು ಬಿಕ್ಕಟ್ಟುಗಳ ಬಗೆಗೆ ಅವರು ನಡೆಸಿದ ಮಾತುಕತೆ.


ನಮ್ಮ ಕನ್ನಡ ಸಾಹಿತ್ಯ ಇಂದು ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ಭಾವಿಸುತ್ತೀರಿ?


ಇಂದು ಸಾಹಿತಿಗಳೆನಿಸಿಕೊಂಡವರು ಅದನ್ನು ಒಂದು ಮಾಹಿತಿಯಾಗಿ ಮಾತ್ರ ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ನೋಡುತ್ತಿಲ್ಲ. ಇವರಿಗೆ ಸಾಹಿತ್ಯ ರಚನೆ ಒಂದು ಚಟದ ಮಟ್ಟಕ್ಕೆ ಉಳಿದಿದೆಯೇ ಹೊರತು ಬದುಕಿಗೆ ಅನ್ವಯವಾಗುವ ನಿಟ್ಟಿನಲ್ಲಿ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಮೌಲಿಕ ಸಾಹಿತ್ಯ ರಚನೆಯಾಗಿದ್ದು ನನಗಂತೂ ಗೊತ್ತಿಲ್ಲ. ಬರೀ ಮಾತು, ಚರ್ಚೆ, ಹಾಗೂ ಜ್ಞಾನವನ್ನು ಹೆಚ್ಚಿಸಿಕೊಂಡರೆ ಉಪಯೋಗವಿಲ್ಲ. ಅಂಕ ಸಿಗಬಹುದು, ಪಿಎಚ್‌ಡಿ ಗೌರವ ಸಿಗಬಹುದಷ್ಟೆ. ಯಾವುದೇ ಸಾಹಿತ್ಯದ ಪ್ರಸ್ತುತತೆಯನ್ನು ನಿರ್ಧರಿಸುವುದು ಅದು ಆಯಾ ಕಾಲದಲ್ಲಿ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎನ್ನುವುದು. ಎಪ್ಪತ್ತರ ದಶಕದಲ್ಲಿ ಒಂದು ಅಂತಹ ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಅದಕ್ಕೊಂದು ಉದ್ದೇಶವಿತ್ತು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು. ಆದರೆ ಆ ಒತ್ತಡದ ಸ್ಥಿತಿ ಈಗ ಏರ್ಪಡುತ್ತಿಲ್ಲ. ಎಲ್ಲವೂ ವಿಭಜನೆಗೊಂಡು ಹೋಗುತ್ತಿದೆ. ಒಟ್ಟಾರೆಯಾಗಿ ನೋಡುತ್ತಿದ್ದ ದೃಷ್ಟಿಗಿಂತ ವ್ಯಕ್ತಿಗತ ನೆಲೆಯಲ್ಲಿ ಅವರವರದೇ ಆದ ಅನನ್ಯತೆಗಳಲ್ಲಿ ರಾಜಕಾರಣದ ಹುಡುಕಾಟದಲ್ಲಿದ್ದಾರೆ. ಒಬ್ಬೊಬ್ಬರೂ ಒಂದೊದು ರೀತಿ ನೋಡುತ್ತಾ ಅಂತಿಮವಾಗಿ ಎಲ್ಲಿ ತಲುಪಬೇಕೋ ಅಲ್ಲಿ ತಲುಪುವ ದಿಕ್ಕಿನಲ್ಲಿ ಸಂಘಟಿತ ರೀತಿಯಲ್ಲಿ ಚಲಿಸುತ್ತಿಲ್ಲ. ಹೀಗಾದಾಗ ರಾಜಕಾರಣ, ಸಂಸ್ಕೃತಿ, ಚಳವಳಿಗಳಲ್ಲಿ ಒಂದು ಪ್ರತಿರೋಧದ ನೆಲೆಯೆ ಇಲ್ಲವಾಗಿ ಬಿಡುತ್ತದೆ. ಅಂತಹ ಒಂದು ಶೂನ್ಯತೆಯನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಸಾಂಸ್ಕೃತಿಕ ಅಜೆಂಡಾಗಳೂ ಇದಕ್ಕೆ ಕಾರಣವಾಗಿವೆ. ಇದು ಮನುಷ್ಯನನ್ನು ವ್ಯಕ್ತಿಯಲ್ಲಿ ಕೊನೆಗೊಳಿಸುತ್ತಿದೆ. ವ್ಯಕ್ತಿ ಹಾಗೂ ಸಮಷ್ಟಿ ನಡುವಿನ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳಲು ನಾವು ಅಸಮರ್ಥರಾಗುತ್ತಿದ್ದೇವೆ. ನಮ್ಮ ಉಳಿವಿನ ಪ್ರಶ್ನೆಯನ್ನು ಕೇವಲ ವೈಯುಕ್ತಿಕ ನೆಲೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ದುರಂತ.

ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪಪ್ ಕಾವ್ಯಗಳಂತಹ ನಾಡಿನ ಮೌಖಿಕ ಕಾವ್ಯಗಳ ಪ್ರಾಮುಖ್ಯತೆಯನ್ನು ಹೇಗೆ ಗುರುತಿಸುತ್ತೀರಿ?


ಜನಪದರ ಸೃಷ್ಟಿಗಳಾಗಿರುವ ಮಹಾಕಾವ್ಯಗಳ ಕಡೆ ಗಮನ ಹರಿಸಬೇಕು ಎಂದು ಗೊತ್ತಾಗುತ್ತಿರುವುದು ಇರುವುದು ತೀರಾ ಇತ್ತೀಚೆಗೆ. ನಮ್ಮ ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಸಮಾಜಶಾಸ್ತ್ರೀಯ ಅಧ್ಯಯನಗಳು ಅಥವಾ ಜನಪದ ಆದ್ಯಯನಗಳು ಕಾಲಕಲಕ್ಕೆ ಬಿಕ್ಕಟ್ಟನ್ನು ಸೃಷ್ಟಿಸಿದಾಗ ಅವಕ್ಕೆ ಉತ್ತರಗಳನ್ನು ಹುಡುಕುವ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ ಶಾಸ್ತ್ರೀಯ ಆಕರಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತಿತ್ತು. ಈಗ ಈ ಕ್ರಮಕ್ಕೆ ಹೊರತಾಗಿ ಮೌಖಿಕವನ್ನು ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಯ್ತು. ಲಾಗಾಯ್ತಿನಿಂದಲೂ ನಮ್ಮ ಸಾಂಸ್ಕೃತಿಕ ಆಧ್ಯಯನದ ತಳಹದಿ ಯಾವಾಗಲೂ ಶಾಸ್ತ್ರೀಯವಾದದ್ದೇ. ನಂತರ ಈ ನೆಲಕ್ಕೆ ಸಂಬಂಧಿಸಿದ್ದನ್ನು ನೋಡಿದಾಗ ಮಲೆಮಾದೇಶ್ವರ, ಜುಂಜಪ್ಪ ಕಾವ್ಯ, ಅಥವಾ ಧರೆಗೆ ದೊಡ್ಡವರು ಕಾವ್ಯ, ಅಥವಾ ಜನಪದ ಮಹಾಭಾರತ, ಇತ್ಯಾದಿಗಳೆಲ್ಲಾ ಸಿಕ್ಕಿವೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿದ್ವಾಂಸರು ತಮ್ಮ ವೈಯುಕ್ತಿಕವಾದ ವರ್ಚಸ್ಸು, ಅಥವಾ ಡಾಕ್ಟರೇಟ್‌ಗಳಿಗಾಗಿ ಇವುಗಳನ್ನು ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ಅವುಗಳ ಸಾಧ್ಯತೆಯನ್ನು ನೋಡುವ ಪ್ರಯತ್ನ ಅಷ್ಟಾಗಿ ಇಲ್ಲ. ನಮ್ಮ ಪರಂಪರೆಯನ್ನು ಕಟ್ಟುವುದು ಅಥವಾ ಅರ್ಥಮಾಡಿಕೊಳ್ಳುವುದು ಎಂದರೆ ಇವನ್ನು ಶ್ರದ್ಧೆಯ ಮೂಲಕ ನೋಡುವ ಅಗತ್ಯ ಬೀಳುತ್ತದೆ. ನಮ್ಮ ಸಾಂಸ್ಕೃತಿಕ, ಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಇವುಗಳೇ ನಮಗಿರುವ ಪ್ರಮುಖ ಆಕರಗಳು. ಅವುಗಳ ಪ್ರತಿ ವಿವರಗಳನ್ನೂ ಸಹ ಬೇರೆ ಬೇರೆ ರೀತಿಯ ಜ್ಞಾನ ಶಿಸ್ತುಗಳ ಮೂಲಕ ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಪ್ರಯತ್ನಿಸುತ್ತಿಲ್ಲ.

ನಮ್ಮಲ್ಲಿ ಜನಪದ ಅಧ್ಯಯನ ಉತ್ತಮ ಮಟ್ಟದಲ್ಲಿ ಇದೆಯಲ್ಲಾ?


ಜನಪದ ಕುರಿತಂತೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೆಚ್ಚಿನ ಕೆಲಸ ಆಗಿಲ್ಲ ಎಂದು ಹೇಳುತ್ತಾರೆ. ಸಂಗ್ರಹ, ಸಂರಕ್ಷಣೆ ಹಾಗೂ ಮುಖ್ಯವಾಹಿನಿಗೆ ಅದನ್ನು ಮರುಪರಿಚಯ ಬಹಳ ದೊಡ್ಡ ಮಟ್ಟದಲ್ಲಿ ಆಗಿದೆ ಎನ್ನುತ್ತಾರೆ. ನಾನೂ ಸಹ ಗಮನಿಸಿದ್ದೇನೆ. ಸಂಖ್ಯೆಯ ಹಾಗೂ ಪ್ರಮಾಣದ ದೃಷ್ಟಿಯಿಂದ ಈ ಮಾತು ನಿಜ. ಆದರೆ ದೃಷ್ಟಿಕೋನದ ವಿಷಯಕ್ಕೆ ಬಂದರೆ ನಾನು ಗಮನಿಸಿರುವ ಯಾವುದೇ ಅಧ್ಯಯನದಲ್ಲಿ ಬಹಳ ಜವಾಬ್ದಾರಿಯುತ ಹುಡುಕಾಟ ಬಹಳ ಕಡಿಮೆ. ಅದು ತೀರಾ ಬೆರಳೆಣಿಕೆಯಷ್ಟಿದೆ. ಈ ಕಾವ್ಯಗಳು ನಮ್ಮ ಹಿಂದಿನ ಜನಪದರು ತಮ್ಮ ಉಳಿವಿಗೋಸ್ಕರ ತಾವೇ ಕಟ್ಟಿಕೊಂಡಿರುವ ಆಕರಗಳು. ’ಉಳಿವಿಗಾಗಿನ ಪಠ್ಯಗಳು’ ಎಂದು ನಾನವುಗಳನ್ನು ಕರೆಯುತ್ತೇನೆ. ನಮ್ಮ ಅಕಡೆಮಿಕ್ಸ್‌ನ ಮಿತಿಯಿಂದಾಗಿ ಅವು ಇಂದು ಬರೀ ಪಠ್ಯಗಳಾಗಿ ಕಾಣುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಸಬಾಲ್ಟರ್ನ್ ಅಧ್ಯಯನ ಎಂದು ಶುರುವಾಯ್ತು. ರಾಜ್ಯದಲ್ಲೂ ಬರಗೂರು ರಾಮಚಂದ್ರಪ್ಪ, ಹಂಪಿ ವಿವಿಗಳಂತಹ ಕಡೆ ಉಪಸಂಸ್ಕೃತಿಗಳ ಅಧ್ಯಯನ ಮುಂತಾಗಿ ಸಾಕಷ್ಟು ಕೃಷಿ ನಡೆಸುತ್ತಿದ್ದಾರೆ. ಆದರೆ ಈ ಸಾಕಷ್ಟು ಕೃಷಿಯಲ್ಲಿರುವ ತೊಡಕು ಏನಂದರೆ ಅವೂ ಕೂಡಾ ಒಂದು ರೀತಿ ಅಕಾಡೆಮಿಕ್ ಕಸರತ್ತಾಗಿ ನೋಡಲಾಗುತ್ತಿದೆ. ಅದು ಬಿಟ್ಟು ನಮ್ಮೆಲ್ಲರ ಉಳಿವಿಗೆ ಹಾಗೂ ಭವಿಷ್ಯರಾಜಕಾರಣಕ್ಕೆ ಇವುಗಳನ್ನು ನೋಡಬೇಕಾದ ದೃಷ್ಟಿಕೋನದ ಕೊರತೆ ಇದೆ. ಪರಿಣಾಮವಾಗಿ ಅವು ಮ್ಯೂಸಿಯಂನಲ್ಲಿಡುವ ಸ್ಮಾರಕಗಳಾಗಿ ಮಾತ್ರ ಆಗಿಬಿಡುತ್ತಿವೆ.

ಇತ್ತೀಚೆಗೆ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ತೀರಾ ಕಡಿಮೆ ಜನರು ಪಾಲ್ಗೊಂಡಿದ್ದರಲ್ಲಾ?
-

ಸಂಖ್ಯೆ ಮುಖ್ಯ ಅಲ್ಲ. ಅಂದು ದಲಿತ ಲೇಖಕ ಯುವಕರ ಸಂಘದ ಸಮಾವೇಶ ಭದ್ರಾವತಿಯಲ್ಲಿ ಮೊದಲ ಬಾರಿಗೆ ನಡೆದಾಗ ಅಬ್ಬಬ್ಬಾ ಎಂದರೆ ನೂರು ಜನ ಸೇರಿದ್ದರು ಅಷ್ಟೆ. ಆದರೆ ಅಷ್ಟು ಜನ ಸೇರಿಕೊಂಡು ಏನು ಮಾಡುತ್ತಾರೆ? ಏನು ಮಾತಾಡುತ್ತಾರೆ ಎಂಬುದು ಮುಖ್ಯ. ನನಗಂತೂ ಇವತ್ತಿನ ಈ ದಲಿತ ಸಾಹಿತ್ಯ, ಚಳವಳಿ ಬಗ್ಗೆ ಆಸಕ್ತಿಯೂ ಉಳಿದಿಲ್ಲ. ಅದರ ಬಗ್ಗೆ ಮಾತಾಡಲಿಕ್ಕೇ ಹೋಗಲ್ಲ. ಆ ಆಧ್ಯಾಯವನ್ನು ನನ್ನ ನೆನಪಿನಿಂದಲೇ ಅಳಿಸಿ ಹಾಕಿಬಿಡಬೇಕು ಎಂದುಕೊಂಡಿದೀನಿ. ನನ್ನ ಪ್ರಕಾರ ಇಲ್ಲಿ ಮಾಡ್ತಿರೋದೆಲ್ಲ ಶವಸಂಸ್ಕಾರಕ್ಕೆ ಸಮಾನವಾದದ್ದು. ದಲಿತ ಸಂಘಟನೆ ಎಂದೋ ಸತ್ತು ಹೋಗಿದೆ. ಅದಕ್ಕೆ ಶ್ರಾದ್ಧದ ಮೂಲಕ ಉಳಿಸೋಕೆ ನೋಡುತ್ತಿದ್ದಾರೆ. ಅದನ್ನು ಹೂತು ಹಾಕಿ ಅದರ ಸ್ಫೂರ್ತಿಯಲ್ಲಿ ಬೇರೆ ಬೇರೆಯದನ್ನು ನೋಡಬೇಕಾದ ತಾಕತ್ತಾಗಲೀ, ದೃಷ್ಟಿಕೋನವಾಗಲೀ ಅಥವಾ ಅದು ಮುಖ್ಯ ಎನ್ನುವ ಪ್ರಜ್ಞೆ ಅವರಿಗಿಲ್ಲ. ಹೀಗಾಗಿ ಪ್ರಜ್ಞಾ ಹೀನರ ಜೊತೆಗೆ ಒಡನಾಟ ಬೇಡ ಎಂದು ನಿಲ್ಲಿಸಿ ಬಿಟ್ಟಿದ್ದೇನೆ. ಅವರು ನನ್ನನ್ನೇ ಪ್ರಜ್ಞಾಹೀನ ಎಂದು ಪರಿಗಣಿಸಿದರೂ ಚಿಂತೆಯಿಲ್ಲ. ಬಹುಪಾಲು ದಲಿತ ಜಗತ್ತು ನನ್ನನ್ನು ದೂರ ಇಟ್ಟಿದೆ. ’ನೀವು ಮಾತಾಡಬಾರದು’ ಎಂದು ಆಜ್ಞೆ ಮಾಡಿದೆ. ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿರ ತಂಡ. ಉತ್ತರ ಭಾರತದಲ್ಲಿರುವ ಪಂಡಾಗಳಂತೆ ಇವರು ದುಡ್ಡು ವಸೂಲಿಗೆ ಇಳಿದಿರುವಂತವರು. ಈ ಬಗ್ಗೆ ನನ್ನನ್ನು ಹೆಚ್ಚು ಕೇಳದಿರುವುದು ಒಳ್ಳೆಯದು. ನನಗೆ ಬಹಳ ಜಿಗುಪ್ಸೆಯಾಗಿದೆ. ಅಂದಿನ ದಲಿತ ಚಳುವಳಿಯ ಪರಂಪರೆಯ ಮುಂದುವರಿಕೆಯಾಗಿ ಇಂದಿನ ಚಳವಳಿಗಾರರು ನನಗೆ ಕಾಣುತ್ತಿಲ್ಲ.

ಇಂದು ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆಯಲ್ಲಾ?


-ಸಹಜ ಅದು. ನವ ಆರ್ಥಿಕತೆಯ ಕ್ರೌರ್ಯ ವ್ಯಕ್ತಗೊಳ್ಳುವುದು ಇಬ್ಬರ ಮೇಲೆ. ಒಂದು ಹೆಣ್ಣು ಮತ್ತೊಂದು ದಲಿತ. ಇಂದು ನವ ಆರ್ಥಿಕತೆ ಮತ್ತು ದಲಿತ ಚಳುವಳಿಯ ನಾಯಕತ್ವ ಕೈ ಕೈ ಹಿಡಿದುಕೊಂಡು ಹೋಗುತ್ತಿದೆ. ದಲಿತರ ಬಿಡುಗಡೆ ಅಥವಾ ದಲಿತರ ನೋವುಗಳಿಗೆ ಸ್ಪಂದಿಸುವ ಕಾರ್ಯ ಅವರ ಅಜೆಂಡಾದಲ್ಲಿ ಇಲ್ಲ. ನೀವು ಕೇಳುವ ಪ್ರಶ್ನೆಯನ್ನೂ ಒಳಗೊಂಡಂತೆ ನನಗೆ ತಕರಾರಿದೆ. ದೌರ್ಜನ್ಯ ಎಂದರೆ ಏನು? ಅದೇನು ದೈಹಿಕ ಹಿಂಸೆಯೋ, ಮಾನಸಿಕ ಹಿಂದೆಯೋ? ಇಂದು ಆನಂದ್ ತೇಲ್ತುಂಬ್ಡೆ, ಕಾಂಚಾ ಐಲಯ್ಯರಣತವರನ್ನೂ ಒಳಗೊಂಡಂತೆ ಅವರು ದಲಿತ ವಿಷಯವನ್ನು ನೋಡುವುದರಲ್ಲಿ ಮಿತಿಗಳಿವೆ. ಎಡಪಂಥೀಯರಿಗೆ ಈ ನೆಲವನ್ನು ನೋಡಲಿಕ್ಕೇ ಬರುವುದಿಲ್ಲ. ಮಾರ್ಕ್ಸ್‌ವಾದಿ ದೃಷಿಕೋನದಲ್ಲಿರುವ ಬೌದ್ಧಿಕ ದಾರಿದ್ರ್ಯವನ್ನು ನೀಗಿಕೊಂಡಿದ್ದರೆ ಇಂದಿನ ಈ ಬಿಕ್ಕಟ್ಟು ಇರುತ್ತಿರಲಿಲ್ಲ. ತಳಹದಿ, ಮೇಲ್‌ರಚನೆ ಎನ್ನುವುದನ್ನು ಇಂಡಿಯಾ ದೇಶಕ್ಕೆ ಅನ್ವಯಿಸಲಿಕ್ಕೆ ಆಗುವುದೇ ಇಲ್ಲ. ಅವರು ತಮ್ಮ ಪಾತ್ರವನ್ನು ಅರಿಯಾಗಿ ನಿರ್ವಹಿಸದ್ದರೆ ಇಷ್ಟೆಲ್ಲಾ ಯಾಕಿರುತ್ತಿತ್ತು?

ನಾಡಿನ ಸಮಕಾಲೀನ ಸಾಂಸ್ಕೃತಿಕ ಲೋಕಕ್ಕೆ ನೀವು ನಡೆಸುತ್ತಿರುವ ’ಆದಿಮ’ದ ಕೊಡುಗೆ ಏನು?


ಆದಿಮವನ್ನು ತುಂಬಾ ಆದರ್ಶವಾಗಿ ನೋಡುವ ಅಗತ್ಯ ಇಲ್ಲ. ಅದು ತನ್ನ ಅತ್ಯಂತ ಕಡಿಮೆ ಮಿತಿಯಲ್ಲೇ ನಮ್ಮ ನೆಲಪಠ್ಯಗಳನ್ನು ಆದರಿಸಿದರೆ ಒಂದು ತಿಳಿವಳಿಕೆ ಹೇಗೆ ವಿಸ್ತರಿಸಬಹುದು ಮತ್ತು ಅದೇ ಒಂದು ನಡೆಗೆ ಕಾರಣವಾಗಬಹುದಾ ಎಂಬ ಪ್ರಯೋಗದಲ್ಲಿದೆ. ಆ ಪ್ರಯೋಗ ಪರಿಪೂರ್ಣವಾಗಿ ಕೈಗೆ ಸಿಗುತ್ತದೆಯೋ ಇಲ್ಲವೋ ಎಂದು ಗೊತ್ತಿಲ್ಲ. ಆದರೆ ಈಗಿರುವಂತಹ ಎಲ್ಲ ಸಾಂಸ್ಕೃತಿಕ ನೆಲೆಗಟ್ಟುಗಳಿಗಿಂತಲೂ, ಇಲ್ಲಿ ಸ್ಥಾಪಿತವಾಗಿರುವ ಬೆಂಚ್ ಮಾರ್ಕ್‌ಗಳೇನಿವೆ- ಎನ್‌ಎಸ್‌ಡಿ, ನೀನಾಸಂ, ಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಹಿಪಾಕ್ರಸಿಗೆ ಬದಲಾಗಿ ಸ್ವಲ್ಪವಾದರೂ ಜೀವಂತ ನೆಲಪಠ್ಯಗಳೆಡೆ ಕಣ್ಣಾಡಿಸುವ ಪ್ರಯೋಗ ಇದು. ಮುಂದಿನ ದಿನಗಳಲ್ಲಿ ಅದನ್ನು ಬೇಕಾದಂತವರು ಬೇಕಾದ ರೀತಿಯಲ್ಲಿ ನೋಡಬಹುದು. ಅದು ಒಂದು ಮುಕ್ತವಾದಂತಹ ಜಾಗ. ಯಾರು ಬೇಕಾದರೂ ಇಲ್ಲಿ ಪ್ರಯೋಗ ನಡೆಸಬಹುದು.


ಪತ್ರಕರ್ತರಾಗಿ ಹಲವಾರು ವರ್ಷ ಕೆಲಸ ಮಾಡಿದ್ದೀರಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ತುಲನೆ ಮಾಡಿದಾಗ ಏನೆನ್ನಿಸುತ್ತದೆ?


ಇಂದು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎರಡೂ ಆರ್ಥಿಕ ಹಿತಾಸಕ್ತಿಗಳ ನಿರ್ದೇಶನದಲ್ಲಿರುವುದರಿಂದ ಅದರ ಎಲ್ಲ ಮೌಲ್ಯಗಳ ನೆಲೆಗಟ್ಟೂ ನಾಶವಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಗೆ ಪೂರಕವಾದ ಸಂವಹನವನ್ನು ಮಾತ್ರ ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಇಂದು ಮಾಧ್ಯಮದ ಒಟ್ಟಾರೆ ಹಿತಾಸಕ್ತಿ ಜನಪರವಾದದ್ದಾಗಿಲ್ಲ. ಅದೇನಿದ್ದರೂ ವ್ಯಾಪಾರಿ, ಬಂಡವಾಳಿಗರ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ ಜನರ ಮನಸ್ಸುಗಳನ್ನು ಸಂವಹನಕ್ಕೆ ಸಿದ್ಧಪಡಿಸುತ್ತಿವೆ. ಇಂತಹ ದಲ್ಲಾಳಿ ಕೆಲಸಕ್ಕೆ ಪತ್ರಿಕೋದ್ಯಮ ಎಂದು ಕರೆಯಬೇಕಾದ ಅಗತ್ಯ ಇಲ್ಲ. ಇವರು ಹೊಸ ಆರ್ಥಿಕತೆಯ ಮಧ್ಯವರ್ತಿಗಳಾಗಿದ್ದಾರೆ. ಮನುಷ್ಯನ ಮನಸ್ಸು ಮತ್ತು ಪಂಚೇಂದ್ರಿಯಗಳನ್ನು ಅದಕ್ಕೆ ಪೂರಕವಾಗಿ ಮಾರ್ಪಡಿಸುತ್ತಿದ್ದಾರೆ. ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ಜನರ ಮನಸ್ಸನ್ನು ಸಿದ್ಧಗೊಳಿಸುವುದು ಇಂದಿನ ಮಾಧ್ಯಮಗಳ ಉದ್ದೇಶ ಗುರಿಯಾಗಿದೆ. ಇಂದು ಸ್ಪರ್ಧೆ ಯಾವ ಮಟ್ಟಿಗೆ ಎಂದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಇವರ ಎಲ್ಲ ತಳಹದಿಗಳೂ ನಿರ್ನಾಮವಾಗುವುದು ಖಚಿತ. ಜನರ ಹಿತಾಸಕ್ತಿಯಾಗಲಿ, ಜನರ ಸಾವು ಬದುಕಿನ ಹೋರಾಟಗಳಾಗಲೀ, ಜನರ ಗುರುತುಗಳು ಅಳಿಸಿ ಹೋಗುತ್ತಿರುವುದಾಗಲೀ ಇವುಗಳಾವುದೂ ಮಾಧ್ಯಮಗಳಿಗೆ ಸುದ್ದಿಗಳಾಗಿ ಕಾಣಿಸುತ್ತಿಲ್ಲ. ಮಾರುಕಟ್ಟೆ ವಿಸ್ತರಣೆ ಏನಾದರೂ ಪ್ರೇರಣೆ ಇದ್ದರೆ ಮಾತ್ರ ಅದನ್ನು ಸುದ್ದಿಯಾಗಿ ಪರಿಗಣಿಸುತ್ತದೆ. ನಾವು ಪತ್ತಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿ, ಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಜೊತೆಗೆ ನಮ್ಮ ಸ್ಫೂರ್ತಿ ಎಲ್ಲವೂ ಅಂದಿನ ಚಾರಿತ್ರಿಕ ಹೋರಾಟಗಳಲ್ಲಿತ್ತು. ಆ ಕಾರಣಕ್ಕಾಗಿ ನಮ್ಮ ಹಿಂದೆ ಒಂದು ದೊಡ್ಡ ಭಿತ್ತಿ ಇತ್ತು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಒಂದು ಚೈತನ್ಯ ನೀಡುತ್ತಿತ್ತು. ಇಂದು ಜನಪರ ಪತ್ರಿಕೋದ್ಯಮ ಎನ್ನುವುದೇ ಇಲ್ಲ. ಸಂವಹನ ಎಂಬುದೇ ಇಲ್ಲ. ಈ ನೆಲಕ್ಕೆ ಅನ್ಯ ಎಂದು ಯಾವುದನ್ನೆಲ್ಲಾ ಕರೆಯಬಹುದೋ ಆ ಅನ್ಯ ಪ್ರೇರಣೆಗಳನ್ನು ಗರ್ಭದಲ್ಲಿರುವ ಶಿಶುವಿನ ಮನಸ್ಸಿನೊಳಗೂ ಹೋಗುವ ರೀತಿಯಲ್ಲಿ ಗುರಿಪಡಿಸಿಕೊಂಡಿದೆ. ಎಲ್ಲೋ ಕೆಲವು ಪತ್ರಕರ್ತರನ್ನು ಇದರಿಂದ ಹೊರಗಿಡಬಹುದಾದರೂ ಒಟ್ಟಾರೆ ಪತ್ರಿಕೋದ್ಯಮದ ಇಂಗಿತ ಹೀಗಿದೆ ಎಂದು ನನ್ನ ಅಭಿಪ್ರಾಯ.


ಚಳವಳಿಗಳು ಕ್ಷೀಣವಾಗಿರುವ ಇಂದಿನ ಸಾಮಾಜಿಕ ಸಂದರ್ಭ ತೀರಾ ನಿರಾಶದಾಯಕವಾಗಿದೆಯಲ್ಲಾ?


ನಮ್ಮ ಹಿಂದಿನ ಗುರುತುಗಳು ಅಳಿಸಿ ಹೋಗುತ್ತಿರುವ ವೇಗ ಅದೆಷ್ಟು ಭಯಾನಕವಾಗಿದೆ ಎಂದರೆ ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ. ನೆಲಗುರುತುಗಳು ಅಷ್ಟು ಕ್ಷಿಪ್ರಗತಿಯಲ್ಲಿ ಅಳಿಸಿ ಹೋಗುವಂತಹ ಕಾಲಘಟ್ಟದಲ್ಲಿ ಮುಂದಿನ ಭವಿಷ್ಯಕ್ಕೆ ಬೇಕಾದ ನೆಲನಿಷ್ಠ ರಾಜಕಾರಣವನ್ನು ಕಟ್ಟುವುದು ದುಸ್ತರವಾಗಿದೆ. ನಮ್ಮ ಕುರುಹುಗಳು ಮಹತ್ವದ್ದಾಗಿ ಕಾಣಿಸದಿದ್ದಾಗ ಅವು ಬರೀ ಸಂಪನ್ಮೂಲವಾಗಿ ಕಾಣಿಸತೊಡಗುತ್ತವೆ. ಹಾಗಾದಾಗ ಅವನ್ನು ದೋಚಬೇಕು, ಅದನ್ನು ವ್ಯಾಪಾರೀ ಹಿತಾಸಕ್ತಿಗೆ ಕೊಡಬೇಕು, ಅದರ ಮೂಲಕ ಲಾಭದ ಆರ್ಥಿಕತೆಯನ್ನು ಸೃಷ್ಟಿಸಬೇಕು ಎನ್ನುವುದನ್ನು ವಸಾಹತುಶಾಹಿ ಆಳ್ವಿಕೆ ನಮಗೆ ಹೇಳಿಕೊಟ್ಟಿದೆ. ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ. ನಾವು ಅದನ್ನು ಪ್ರಶ್ನೆಯನ್ನೇ ಹಾಕದೇ ಅದನ್ನು ಸಾರಾಸಗಟಾಗಿ ಒಪ್ಪೊಕೊಂಡು ಅದರ ಆಧಾರದ ಮೇಲೆ ನಮ್ಮ ಪ್ರಜ್ಞೆಯನ್ನು ರೂಪಿಸಿಕೊಂಡಿದ್ದೇವೆ. ಇಂತಹ ರೂಪಿತ ಪ್ರಜ್ಞೆಯಲ್ಲಿ ನೆಲದ ಸತ್ಯ ಗೋಚರಿಸುವುದಿಲ್ಲ. ಹೀಗಾಗಿ ನಮ್ಮ ಆಲೋಚನೆಗಳ ಚೌಕಟ್ಟಿನಲ್ಲೇ ಲೋಪವಿದೆ. ನಮ್ಮ ಬೌದ್ಧಿಕ ಮಟ್ಟದ ಈ ಬಿಕ್ಕಟ್ಟಿನಿಂದ ಹೊರಬರಬೇಕೆಂದರೆ ನಾವು ಡಿಲರ್ನಿಂಗ್, ಅಪವರ್ಗೀಕರಣಕ್ಕೆ ಒಳಗಾಗಬೇಕಾಗುತ್ತದೆ. ಅಥವಾ ಸಂಪೂರ್ಣ ಯೂಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಜಗತ್ತಿನಲ್ಲಿ ಈ ಬಗೆಯ ಪ್ರಕ್ರಿಯೆಗೆ ಒಳಗಾದ ಮಹಾನುಭಾವರಿದ್ದಾರೆ. ಉದಾಹರಣೆಗೆ ಗೂಗಿ ವಾ ಥಿಯಾಂಗೋನಂತವರು ಇಂಗ್ಲಿಷ್ ಬಿಟ್ಟು ಸ್ವಾಹಿಲಿಯಲ್ಲಿ ಬರೆಯಲು ಆರಂಭಿಸಿದ್ದು. ನಾಲಗೆಯನ್ನೇ ಕತ್ತರಿಸಿಕೊಂಡವರಿದ್ದಾರೆ. ಭಾರತದಲ್ಲಿ ಇಂತಹುದು ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ಭಾರತೀಯ ಚಿಂತನೆಯಲ್ಲೇ ಇಬ್ಬಂತಿತನವಿದೆ. ಅದರ ಚಿಂತನೆ ಒಂದಿರುತ್ತದೆ, ನಡೆ ಇನ್ನೊಂದು ಇರುತ್ತದೆ. ನಡೆಯಲ್ಲಿ ಒಪ್ಪಿಒತವಾದ್ದು ಚಿಂತನೆಯಲ್ಲಿರುವುದಿಲ್ಲ. ಚಿಂತನೆಯಲ್ಲಿ ಒಪ್ಪಿತವಾದದ್ದು ನಡೆಯಲ್ಲಿರುವುದಿಲ್ಲ. ಅದರಿಂದಾಗಿಯೇ ಇಷ್ಟೆಲ್ಲಾ ಎದ್ದು ಕಾಣುವ ಸಾಮಾಜಿಕ ಅಸಮಾನತೆಗಳು, ಭೇಧಗಳು ಕಣ್ಣಿಗೆ ಕಾಣುತ್ತಿದ್ದರೂ ಸಹ ಅವೆಲ್ಲಾ ಏನೂ ಅಲ್ಲ ಎನ್ನುವ ರೀತಿ ಇರುತ್ತೇವೆ. ಅಂತವು ನಡೆದಾಗ ಒಂದು ಘಟನೆಯ ಮಟ್ಟಿಗೆ ಮಾತ್ರ ನೋಡುತ್ತೇವೆ. ಕ್ರಿಕೆಟ್ ಪಂದ್ಯಕ್ಕೆ ಪ್ರತಿಕ್ರಿಯಿಸುತ್ತೇವಲ್ಲಾ ಹಾಗೆ. ಅಸಹಜವಾದದ್ದನ್ನೂ, ಕೊಳಕಾದದ್ದನ್ನೂ ಸಹಜ ಎನ್ನುವಂತೆ ಒಪ್ಪಿಕೊಂಡು, ನಮ್ಮ ಪ್ರಜ್ಞೆಗೆ ಒಗ್ಗಿಸಿಕೊಂಡು ಬಿಡುತ್ತಿದ್ದೇವೆ.

ಆದರೆ ಈ ಮಾತನ್ನು ಎಲ್ಲಾ ಕಾಲ ಸಂದರ್ಭಕ್ಕೂ ಅನ್ವಯಿಸಲು ಸಾಧ್ಯವೇ?


ಎಲ್ಲಾ ಸಂದರ್ಭದಲೂ ಹಾಗೆಂದು ಹೇಳಲಾಗಲ್ಲ. ಚರಿತ್ರೆ ಎಂತೆಂತಹ ಸಂದರ್ಭಗಳನ್ನು ಒಳಗೆ ಸೃಷ್ಟಿ ಮಾಡುತ್ತದೆ ಹೇಳಲಾಗಲ್ಲ. ಸಧ್ಯದ ಸ್ಥಿತಿಯಿರುವುದಂತೂ ಹಾಗೆಯೇ. ಇದರೊಳಗೆನೇ ಒಂದು ಸ್ಫೋಟ ಸಂಭವಿಸಬಹುದು.

ನಮ್ಮ ರಾಜಕೀಯ ಆಣೆ ಪ್ರಮಾಣದವರೆಗೆ ಬಂದು ಇಂತಿದೆಯಲ್ಲಾ?


ನನಗೆ ಕರ್ನಾಟಕದ ರಾಜಕೀಯದಷ್ಟು ಇಂದಿನ ಅಧೋಗತಿ ಎಂದೂ ಕಂಡಿಲ್ಲ. ಆ ಮಟ್ಟಿಗಿನ ಅಧಃಪತನವಾಗಿದೆ. ಅದು ಯಾವ ಪಕ್ಷವೇ ಇರಲಿ. ಒಂದೇ ಒಂದು ಕಣದಷ್ಟೂ ನಾಚಿಕೆ, ಮಾನ, ಮರ್ಯಾದೆ, ವಿವೇಕ, ತಿಳಿವಳಿಕೆ,ಈ ನೆಲದ ನೀರು ಕುಡಿದಿದ್ದೇವೆ, ಈ ನೆಲದ ಮಣ್ಣಿನಲ್ಲಿ ಬೆಳೆದಿರುವುದನ್ನು ತಿಂದಿದ್ದೇವೆ, ಈ ಗಾಳಿಯಲ್ಲಿ ಉಸಿರಾಡುತ್ತಿದ್ದೇವೆ, ಅದನ್ನೆಲ್ಲಾ ಶುದ್ದವಾಗಿಡುವುದು ನಮ್ಮ ಕತವ್ಯ ಎಂಬ ಸಾಮಾನ್ಯ ಜ್ಞಾನದ ಲವಲೇಶವೂ ಅವರ ಪ್ರಜ್ಞೆಯಲ್ಲಿ ಇಲ್ಲವೇ ಇಲ್ಲ. ಇಡೀ ಕರ್ನಾಟಕವನ್ನು ಎಷ್ಟು ಬೇಗ ಹರಾಜಿಗೆ ಹಾಕಿದರೆ, ಎಷ್ಟು ಬೇಗ ಮಾರಿಬಿಟ್ಟರೆ ಒಟ್ಟಾರೆಯಾಗಿ, ಅದರ ಮೂಲಕ ಸಿಗುವ ಲಾಭಗಳನ್ನು ತೆಗೆದುಕೊಂಡು ಹೋಗಿ ವೈಯುಕ್ತಿಕ ಬಂಡವಾಳ ಮಾಡಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿರುವ ರಾಜಕಾರಣ ಇದು. ಅತ್ಯಂತ ವಿಕೃತವಾದ ನಾಟಕಗಳು ವೇದಿಕೆ ಮೇಲೆ ನಡೆಯುತ್ತಿವೆ. ಇದು ನಿಜಕ್ಕೂ ಈ ನೆಲದ ಘನತೆಗೆ ಗೌರವ ತರುವಂತಾದ್ದಲ್ಲವೇ ಅಲ್ಲ. ಇನ್ನು ಈ ಮಠಾದೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಈ ಮಾತನ್ನು ಹೇಳಲೇಬೇಕಾಗುತ್ತದೆ. ಅವರು ಸಣ್ಣವರಿರಲೀ, ದೊಟ್ಟವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ಒಂದು ಪ್ರಜಾಪ್ರಭುತ್ವಕ್ಕೆ ಸಲಹೆ ಕೊಡಲು ಇವರ್ಯಾ್ರ್ರೀ? ಇವರೇನು ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಾ? ಇದೇನು ರಾಜಪ್ರಭುತ್ವವಾ, ಇವರೇರು ರಾಜಪುರೋಹಿತರಾ? ನಾವೇನು ಧರ್ಮ ಪ್ರಭುತ್ವ ಒಪ್ಪಿಕೊಂಡಿದ್ದೇವಾ? ಇವರು ಮಠಗಳನ್ನು ಕಟ್ಟಿಕೊಂಡಿರಬೇಕಷ್ಟೆ. ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲಿಕ್ಕೆ ಇವರಿಗೇನು ಹಕ್ಕಿದೆ? ಇದೆಲ್ಲಾ ಪ್ರಜಾಪ್ರಭುತ್ವಕ್ಕೇ ಮಾಡುವ ಅಪಮಾನ. ಒಂದು ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಲು ಇವರ್ಯಾ ರು? ಓಟು ಹಾಕಿದವನು ಸರ್ಟಿಫಿಕೇಟ್ ಕೊಡಬೇಕು. ಅದನ್ನು ಬಿಟ್ಟು ನೀವೇ ಒಂದು ಸರ್ಕಾರವನ್ನು ಪುರಸ್ಕರಿಸಲು ನೀವು ಯಾರು? ಎಂಬ ಪ್ರಶ್ನೆಯನ್ನು ಕೇಳಬೇಕು. ಅದನ್ನು ಕೇಳಿದರೆ ಜಾತಿಗಳು ಎದ್ದು ನಿಲ್ಲುತ್ತವೆ. ನಮ್ಮ ಜಾತಿ ಮಠಕ್ಕೆ ಯಾಕೆ ಕೇಳಿದ್ರಿ ಅಂತ. ಒಂದು ಜಾತಿಗೆ ಒಂದು ಮಠ ಸೀಮಿತವಾಗಿಯೆಂದಾದರೆ ಇನ್ನೇನು?

ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಶಿಕ್ಷಣ ಮತ್ತು ಭಾಷೆಯ ಮೇಲೆ ಯಾವ ಪರಿಣಾಮ ಬೀರಬಲ್ಲದು?


ಇಂದು ಶಿಕ್ಷಣ ಎನ್ನುವುದು ದೊಡ್ಡ ಅನೈತಿಕ ದಂದೆಯಾಗಿದೆ. ಅದು ಪೂರ್ತಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ, ಖಾಸಗಿ ವಲಯಗಳನ್ನು ಭದ್ರ ಮಾಡಲು ಬಳಕೆಯಾಗಿದೆ. ಇಂದು ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವುದರ ಪರಿಣಾಮವೆನೆಂದರೆ ಸರ್ಕಾರಿ ಶಾಲೆಯಲ್ಲಿ ನಾಲ್ಕಕ್ಷರ ಕಲಿಯುವ ಅವಕಾಶ ಕೂಡಾ ಕೈತಪ್ಪಿ ಹೋಗುತ್ತದೆ. ಇಂದು ಪ್ರಾಥಮಿಕ ಶಿಕ್ಷಣ ನೀಡುವ ಕರ್ತವ್ಯದಿಂದ ನುಣುಚಿಕೊಳ್ಳಲು ಏನು ಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಇಂದು ಶಾಲೆಗಳನ್ನು ಮುಚ್ಚುತ್ತಿರುವ ವೇಗ ಹಾಗೂ ಅಲ್ಲಿನ ಗುಣಮಟ್ಟ ನೋಡಿದರೆ ಅರ್ಥವಾಗುತ್ತದೆ. ಅಲ್ಲೆಲ್ಲಾ ಬಡವರ ಮಕ್ಕಳೇ ಇರುವುದು. ಅದರಲ್ಲಿ ದಲಿತರ ಸಂಖ್ಯೆ ಜಾಸ್ತಿ ಇರುತ್ತದೆ. ಕನ್ನಡದಲ್ಲೂ ಕಲಿಯುವ ಅವಕಾಶದಿಂದ ವಂಚಿಸಿದಾಗ ಅನಿವಾರ್ಯವಾಗಿ ದುಡ್ಡುಕೊಟ್ಟೇ ಶಿಕ್ಷಣ ಪಡೆಯಬೇಕು. ಯಾರಿಂದ ಸಾಧ್ಯ ಇದು? ಪ್ರಾಥಮಿಕ ಶಾಲೆಯ ನೀತಿಗಳನ್ನು ಮಾಡಲು ವಿಪ್ರೋಗೆ ಬಿಟ್ಟಿದ್ದಾರೆ. ಸರ್ಕಾರ ತಲುಪಿರುವ ಮಟ್ಟ ಇದು.

ಸೋಮವಾರ, ಆಗಸ್ಟ್ 8, 2011

ಬಡೆಲಡುಕಿನ ಸುಡುಗಾಡು ಸಿದ್ಧರು



ಸಿದ್ಧರಾಮ ಹಿರೇಮಠ, ಕೂಡ್ಲಿಗಿ


ಈಚೆಗೆ ಅಮರೇಶ ನುಗಡೋಣಿ ಅವರ ಸವಾರಿ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ‘ಕನಸೆಂಬೋ ಕುದುರೆಯನೇರಿ’ ಸಿನೆಮಾ ಮಾಡಿ ಗಮನಸೆಳೆದರು. ಅದು ಕಾಡುಸಿದ್ಧನೊಬ್ಬನ ಬದುಕಿನ ಮೂಲಕ ಈ ಕಾಲದ ವರ್ತಮಾನವನ್ನೂ, ಜನಪದ ಕಲೆಗಳನ್ನು ನಂಬಿ ಬದುಕುತ್ತಿರುವವರ ಬವಣೆಯನ್ನೂ ತುಂಬಾ ಶಕ್ತಿಯುತವಾಗಿ ಬಿಂಬಿಸಿತು. ಈ ಸಿನೆಮಾದ ಕೊನೆಗೆ ಕಾಡುಸಿದ್ದರವ ಕೃಷಿ ಮಾಡುವ ಮೂಲಕ ಬದುಕಿಗೆ ಇನ್ನೊಂದು ಸ್ಥಿತ್ಯಂತರ ಪಡೆಯುತ್ತಾನೆ. ಆದರೆ ಸಿದ್ದರಾಮ ಹಿರೇಮಠರು ಕಟ್ಟಿಕೊಡುವ ಕಾಡುಸಿದ್ಧರ ನಿಜ ಬದುಕಿನ ಚಿತ್ರದಲ್ಲಿ ವ್ಯವಸಾಯವನ್ನೂ ತಮ್ಮ ಸಿದ್ಧರ ವೇಷವನ್ನೂ ಜೊತೆ ಜೊತೆಗೆ ಒಯ್ಯುತ್ತಿದ್ದಾರೆ. ಕಾಡುಸಿದ್ಧರ ಮಕ್ಕಳು ಶಿಕ್ಷಣ ಕಲಿವ ಮೂಲಕ ಹೊಸ ಸ್ಥಿತ್ಯಂತರಕ್ಕೆ ಸಿದ್ದವಾಗುತ್ತಿದ್ದಾರೆ. ಕನ್ನಡ ಜಾನಪದ ಬ್ಲಾಗ್ ಗಾಗಿ ಈ ಬರೆಹ ಬರೆದ ಸಿದ್ಧರಾಮ ಹಿರೇಮಠರಿಗೆ ಧನ್ಯವಾದಗಳು-ಅರುಣ್

(ಗ್ರಾಮದ್ಲಲಿ ಸಂಚರಿಸುತ್ತಿರುವ ಸುಡುಗಾಡು ಸಿದ್ಧರು)


‘ಅಜ್ಜೆಜೆಜೆಜೆ ಎಲ್ಲಿ ಹೋತೋಗೊಂಬಿ?’ ‘ಅಲ್ಲೇ ನಿನ್ ಚೀಲದಾಗ ಇರಬೇಕ ನೋಡ’, ಅಜ್ಜೆಜ್ಜೆಜೆಜೆಜೆಜೆಜೆ... ಆ ಇಲ್ಲಲ್ಲೋ’ ’ಅದೇನ್ ಕೊಟ್ಟೂರಿಗೆ ಹೋತೇನ್ ನೋಡು’ ’ಅಜ್ಜೆಜ್ಜೆಜೆಜೆಜೆಜ್ ಇಲ್ಲೈತೆ ನೋಡು’ ಎಂದು ಚೀಲವನ್ನು ಅದುಮಿದಾಗ ‘ಕುಂಯ್’ ಎಂಬ ಶಬ್ದ ಬರುವುದು. ಮತ್ತೊಂದೆಡೆ ಅದುಮಿದಾಗಿ ಮತ್ತದೇ ’ಕುಂಯ್’ ಎಂಬ ಶಬ್ದ. ಇದು ಸುಡುಗಾಡು ಸಿದ್ಧರ ಕೈಚಳಕ ಆಟದ ಒಂದು ಭಾಗ. ಕೆಂಪು ವರ್ಣದ ವೇಷಭೂಷಣ ತೊಟ್ಟ ಇವರು ಹಳ್ಳಿಗಳಿಗೆ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಇದೇ ಇವರಿಗೆ ಹೊಟ್ಟೆಪಾಡಿನ ವೃತ್ತಿ.

ಕೂಡ್ಲಿಗಿ ತಾಲೂಕಿನ ಬಡೆಲಡುಕು ಗ್ರಾಮದ್ಲಲಿರುವ ೬೩ರ ಹರೆಯದ ಮಹೇಶಪ್ಪ ಹಾಗೂ ೩೫ರ ಹರೆಯದ ಶಿವಣ್ಣ ತಲೆತಲಾಂತರದಿಂದಲೂ ಉಳಿಸಿಕೊಂಡು ಬಂದಿರುವ ಈ ಕಲೆಯನ್ನು ಇಂದಿಗೂ ಆಶ್ರಯಿಸಿದ್ದಾರೆ. ಇವರು ಸುಡುಗಾಡು ಸಿದ್ಧರು ಹೇಗಾದರೆಂಬುದೇ ಒಂದು ಐತಿಹ್ಯವಿದೆ. ಸತ್ಯಹರಿಶ್ಚಂದ್ರನು ಹಿಂದೊಮ್ಮೆ ಸ್ಮಶಾನವನ್ನು ಕಾಯುತ್ತಿದ್ದಾಗ, ಶಿವನು ಶನಿಯ ಬಾಧೆ ತಡೆಯಲಾರದೆ, ಸ್ಮಶಾನದಲ್ಲಿ ಕುಣಿಯನ್ನು ತೋಡಿಕೊಂಡು ಅವಿತನು. ಬೆನ್ನುಹತ್ತಿದ ಶನಿಯು ಶಿವನಿಗೆ ಅಡಗಿ ಕುಳಿತದ್ದಕ್ಕಾಗಿ ಹೀಯಾಳಿಸುತ್ತಾನೆ. ಆಗ ಶಿವನು ಕುಣಿಯಿಂದ ಸುಡುಗಾಡು ಸಿದ್ಧನ ರೂಪದಲ್ಲಿ ಮೇಲೆದ್ದು ನಿಂತನು. ಅಂದಿನಿಂದ ಸುಡುಗಾಡು ಸಿದ್ಧ ಜನಾಂಗದವರು ಗ್ರಾಮದ ಸ್ಮಶಾನವನ್ನು ಮಧ್ಯರಾತ್ರಿ ಕಾಯ್ದು, ಹಗಲಿನಲ್ಲಿ ಶಂಖ, ಗಂಟೆಯ ಧ್ವನಿ ಮಾಡುತ್ತ, ತಮ್ಮ ಕಾಣಿಕೆಯನ್ನು ಪಡೆಯುವ ಪರಂಪರೆ ಆರಂಭಗೊಂಡಿತು ಎಂದು ಹೇಳುತ್ತಾರೆ. ಹಿಂದಿನ ಸಂಪ್ರದಾಯದ ಪ್ರಕಾರ ಗ್ರಾಮದಲ್ಲಿ ಯಾರಾದರೂ ಸತ್ತಲ್ಲಿ ೩೦೧ ರೂ., ಕುರಿ, ಆಕಳನ್ನು ಕೊಡಬೇಕೆಂಬ ನಿಯಮವಿದೆ. ನಂತರ ಇವರು ೧೦೧ ದೇವರ ಧ್ಯಾನ ಮಾಡಿ ಹಾರೈಸಿ ಹೋಗುವರು.
(ತಮ್ಮ ಕಲೆಯನ್ನು ಪ್ರದರ್ಶಿಸುತ್ತಿರುವ ಸುಡುಗಾಡು ಸಿದ್ಧರು)

ಇಂದಿಗೂ ಈ ಸಿದ್ಧರು ತಮಗೆ ನಿಗದಿಪಡಿಸಿದ ಗ್ರಾಮಗಳಿಗೆ ಹೋಗಿ ರಾತ್ರಿ ಸ್ಮಶಾನದಲ್ಲಿ ಬಾವುಟ ಕಟ್ಟಿ, ವಸ್ತಿ ಮಾಡಿ, ಹಗಲು ಗ್ರಾಮದಲ್ಲಿ ಹಾಲಕ್ಕಿ ಶಕುನ ಹೇಳುತ್ತಾರೆ. ಒಂದು ಗ್ರಾಮದಲ್ಲಿ ೧೫ ದಿನವಿದ್ದು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಇವರು ಜನವರಿಯಿಂದ ಮೇ ತಿಂಗಳಿನವರೆಗೆ ಸಂಚಾರ ಮಾಡುತ್ತಾರೆ. ಉಳಿದ ದಿನಗಳು ಹೊಲಗಳಲ್ಲಿ ಕೂಲಿ ಮಾಡುತ್ತಾರೆ. ಮೈಮೇಲೆ ಕಾವಿಯನ್ನು ಹೋಲುವ ಪಂಚೆ, ಶಾಲು, ಕೊರಳಲ್ಲಿ ಹಲವಾರು ರುದ್ರಾಕ್ಷಿ ಹಾರಗಳು, ಮಣಿಸರಗಳು, ಲಿಂಗು ತಲೆಯ ಮೇಲೆ ರುಮಾಲು ಅದಕ್ಕೆ ಅಲಂಕಾರಿಕವಾಗಿ ಸಿಕ್ಕಿಸಿದ ನವಿಲುಗರಿ, ಕೈಯಲ್ಲಿ ಶಂಖ, ಗಂಟೆ, ಹಣೆಯಲ್ಲಿ ವೀಭೂತಿ, ಇದು ಇವರ ವೇಷಭೂಷಣ. ಇವರು ತೋರುವ ಆಟವೂ ಆಕರ್ಷಣೀಯವಾಗಿರುತ್ತದೆ. ಗ್ರಾಮದ ಮಧ್ಯದಲ್ಲಿ ತಮ್ಮ ಜೋಳಿಗೆಯೊಳಗಿನಿಂದ ವಿವಿಧ ವಸ್ತುಗಳನ್ನು ಮಾಯ ಮಾಡುವುದು, ಗೊಂಬೆಯನ್ನು ಕುಂಯ್ ಎನ್ನಿಸುವುದು. ವಿವಿಧ ಗಾತ್ರದ ನುಣುಪಾದ ಕಲ್ಲುಗಳನ್ನು ನುಂಗಿ ಮತ್ತೆ ಹೊರತರುವುದು, ಲಿಂಗು, ಬಸವಣ್ಣನ ಮೂರ್ತಿಯನ್ನು ಸೃಷ್ಟಿಸುವುದು ಹೀಗೆ ವಿವಿಧ ಆಟಗಳನ್ನು ತೋರುತ್ತಾರೆ. ಮಕ್ಕಳಿಗೆ ಹಾಗೂ ಹಿರಿಯರಿಗೂ ಆಕರ್ಷಣೀಯವೆನಿಸುವ ಇವರ ವೇಷ ಹಾಗೂ ಕೈಚಳಕದ ಆಟಗಳು ಇವರ ವೃತ್ತಿಗೆ ಗಾಂಭೀರ್ಯವನ್ನು ತಂದುಕೊಟ್ಟಿವೆ. ಆದರೆ ಪಾರಂಪರಿಕವಾಗಿ ಬಂದ ಈ ಕಲೆಯ ಬಗ್ಗೆ ಈಗ ಯಾರಲ್ಲೂ ಆಸಕ್ತಿ ಉಳಿದಿಲ್ಲ. ಮುಖ್ಯವಾಗಿ ಆ ಜನಾಂಗದಲ್ಲಿಯೇ ಉಳಿದಿಲ್ಲವಾದ್ದರಿಂದ ಈ ಕಲೆ ನಶಿಸುತ್ತಿದೆ ಎಂಬುದು ಜನಾಂಗದ ಮಹೇಶಪ್ಪನ ವ್ಯಥೆ.

(ಶಂಖ, ಗಂಟೆಗಳೊಡನೆ ಸಿದ್ಧಗೊಂಡಿರುವ ಸುಡುಗಾಡು ಸಿದ್ಧರು)

ಬಡೆಲಡುಕಿನಲ್ಲಿ ಈ ಜನಾಂಗದ ಸುಮಾರು ೨೦೦ ಮನೆಗಳಿವೆ. ಆದರೆ ಈ ಕಲೆಯನ್ನು ಆಶ್ರಯಿಸಿರುವುದು ಬೆರಳೆಣಿಕೆಯಷ್ಟು ಮಾತ್ರ. ಈ ಜನಾಂಗದಲ್ಲಿ ಕಡುಬಡವರಿದ್ದಾರೆ. ಗುಡಿಸಲುವಾಸಿಗಳಿದ್ದಾರೆ. ಈ ವೃತ್ತಿ ಇವರ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದರೂ ಇಂದಿನ ಯುವಕರು ಈ ಕಲೆಗೆ ವಿಮುಖರಾಗುತ್ತಿದ್ದಾರೆ. ಈ ಜನಾಂಗದವರು ಹೇಗೋ ಭಿಕ್ಷಾಟನೆ ಮಾಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ತಮ್ಮ ಕಲೆ ಮುಂದುವರಿಯಬೇಕೆಂಬ ಆಸೆ ಇವರಲ್ಲೂ ಇದೆ. ಆದರೆ ಕಲಿಯುವವರಿಲ್ಲ. ‘ಟಿವಿ, ಸಿನಿಮಾ ಬಂದಮ್ಯಾಲೆ ನಮ್ ಆಟ ಯಾರು ನೋಡ್ತಾರ?’ ಎಂದು ಜನಾಂಗದ ಜೆ.ಚಂದ್ರಪ್ಪ ಕೇಳುತ್ತಾರೆ. ‘ನಮ್ ಕಲೆ ಮುಂದುವರಕೊಂಡು ಹೋಗಬೇಕ್ರಿ, ಅದಕ್ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅವಕಾಶ ಮಾಡಿಕೊಡ್ಬೇಕು’ ಎಂದು ಗ್ರಾ.ಪಂ ಸದಸ್ಯ ಜೆ.ಹೊನ್ನೂರಪ್ಪ ಕಾಳಜಿ ವ್ಯಕ್ತಪಡಿಸುತ್ತಾರೆ. ‘ಹುಡುಗ್ರು ಕಲ್ಯಾಕ ಒಲ್ಲೆಂತಾವ, ಸರ್ಕಾರ ಇದನ್ನೂ ಒಂದು ಕಲೆ ಅಂತ ತಿಳ್ದು, ಪ್ರೋತ್ಸಾಹ ಕೊಡ್ಬೇಕ್ರಿ’ ಎಂದು ಕೆ.ನಾರಾಯಣಪ್ಪ ಹೇಳುತ್ತಾರೆ. ಸರ್ಕಾರದ ವಿವಿಧ ಇಲಾಖೆಗಳು ಇತ್ತ ಗಮನಹರಿಸಬೇಕಾಗಿದೆ.