ಸೋಮವಾರ, ಮಾರ್ಚ್ 7, 2011

ಜನಪದ ಕಸುಬು-೧ ಚಳ್ಳಕೆರೆಯ ಕಂಬಳಿ ಉದ್ಯಮ

-ಅರುಣ್ ಜೋಳದಕೂಡ್ಲಿಗಿ


(ಗಾಂಧೀಜಿ ಜನಪದರ ವೃತ್ತಿಕಸಬುಗಳನ್ನೇ ಆಧರಿಸಿದ ಪುಟ್ಟ ಪುಟ್ಟ ಕೈಗಾರಿಗೆಗಳನ್ನು ಅಭಿವೃದ್ದಿ ಪಡಿಸುವ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ಕೊಟ್ಟರು. ಈ ಮೂಲಕ ಜನಸಾಮಾನ್ಯರು ಸ್ವಾವಲಂಬಿಗಳಾಗಿ ಬದುಕುವ ಕನಸು ಕಂಡಿದ್ದರು. ಆದರೆ ಇಂದು ಜನಪದರ ಕಸಬು ಕೆಲವು ಕಳೆದೇ ಹೋದವು. ಕಾರಣ ಅವುಗಳು ವರ್ತಮಾನದ ಜತೆ ಸಾವಯವ ಸಂಬಂಧ ಕಡಿದುಕೊಂಡು ಪರಕೀಯ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು. ಇಷ್ಟೆಲ್ಲದರ ನಡುವೆ ಇನ್ನೂ ಅನೇಕ ಜನಪದ ಕುಲಕಸಬುಗಳು ಜೀವಂತವಾಗಿವೆ. ಆದರೆ ಅವುಗಳು ಪಡೆದ ವ್ಯಾಪಕ ವಿಸ್ತಾರವನ್ನು ಕಡಿದುಕೊಂಡು ಒಂದು ಸಣ್ಣ ವಲಯದಲ್ಲಿ ಜೀವಿಸುತ್ತಿವೆಯಷ್ಟೆ. ಅದನ್ನು ಗುರುತಿಸಿ ಅದರ ವಲಯದ ವ್ಯಾಪ್ತಿಯನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಬೇಕಿದೆ. ಅಂತಹ ಜನಪದರ ಕಸಬುಗಳನ್ನು ಕನ್ನಡ ಜಾನಪದ ಬ್ಲಾಗ್ ನಲ್ಲಿ ಸರಣಿಯಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುವುದು. ಇಲ್ಲಿ ಮುಖ್ಯವಾಗಿ ಆಯಾ ಕಸಬು ಯಾವ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಅದನ್ನು ನಂಬಿದ ಜನರ ಬದುಕು ಹೇಗಿದೆ? ಈ ಕಸುಬಿಗೆ ಮರುಜೀವ ತುಂಬಲು ಅದನ್ನು ನಂಬಿದವರು ನಿರೀಕ್ಷಿಸುವುದೇನು? ಅದರ ಬಳಕೆಯ ವಲಯವನ್ನು ಹೆಚ್ಚಿಸಿ ಆಯಾ ಕಸಬಿಗೆ ಮರುಜೀವ ನೀಡುವ ಸಾದ್ಯತೆಗಳೇನು? ಮುಂತಾದ ಅಂಶಗಳನ್ನು ಈ ಸರಣಿಯ ಬರಹ ಒಳಗೊಂಡಿರುತ್ತದೆ)



ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದಲ್ಲಿ ಕಂಬಳಿ ನೇಯುವ ಜನಪದ ಕಸಬು ಜೀವಂತವಾಗಿದೆ. ಇಂದು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿಯೂ ಕಂಬಳಿ ನೇಯ್ಗೆ ಇದೆ. ಆದರೆ ಅದರ ಪ್ರಮಾಣ ಮೊದಲಿಗಿಂತ ಈಗ ಕಡಿಮೆಯಾಗುತ್ತಾ ಸಾಗುತ್ತಿದೆ. ಇದು ಮೂಲತಃ ಕುರಿಸಾಕಣೆಗೆ ಹೊಂದಿಕೊಂಡಂತಹ ಉಪಕಸಬು. ಕುರಿಯ ಕೂದಲನ್ನು ಕತ್ತರಿಸಿ, ಆ ಕೂದಲಿನಿಂದ ನೂಲು ತೆಗೆದು, ಆ ನೂಲಿನಿಂದ ಕಂಬಳಿ ನೇಯುವುದು, ಆ ಕಂಬಳಿಯನ್ನು ಮಾರಾಟ ಮಾಡುವುದು ನಡೆಯುತ್ತದೆ. ಇಂದು ಕುರಿ ಸಾಕಣೆಯ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಅದಕ್ಕೆ ಹೊಂದಿಕೊಂಡಂತಹ ಕಂಬಳಿ ನೇಯ್ಗೆಯೂ ಮೊದಲಿಗಿಂತ ಕಡಿಮೆಯಾಗಿದೆ. ಈ ನಡುವೆಯೂ ಚಳ್ಳಕೆರೆಯಲ್ಲಿ ಕಂಬಳಿ ಉದ್ಯಮ ಪ್ರತಿ ವಾರವೂ ಹತ್ತಾರು ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಉದ್ಯಮವನ್ನು ನಂಬಿ ಈ ಭಾಗದ ನೂರಾರು ಹಳ್ಳಿಗಳ ಜನರು ಕಂಬಳಿ ನೇಯುವ ಕುಲಕಸಬಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಒಂದು ನೋಟ ಇಲ್ಲಿದೆ.



ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿಸಂತೆ ನಡೆಯುತ್ತದೆ. ಇಲ್ಲಿಗೆ ಸುತ್ತಮುತ್ತಲ ಹಳ್ಳಿಗಳಿಂದ ಕುರಿಗಾರರು, ರೈತರು, ನೇಕಾರರು ತಾವು ನೇಯ್ದು ತಂದ ಕಂಬಳಿಗಳನ್ನು ಮಾರಾಟ ಮಾಡುತ್ತಾರೆ. ಕಂಬಳಿಯನ್ನು ಕೊಳ್ಳಲು ಆಂದ್ರ, ಮಹಾರಾಷ್ಟ್ರ, ಹಿಮಾಲಯ, ಕಾಶ್ಮೀರ ಭಾಗದಿಂದಲೂ ವ್ಯಾಪಾರಸ್ತರು ಬರುತ್ತಾರೆ. ವಿಪರ್ಯಾಸ ಅಂದರೆ ಕಂಬಳಿಯ ಬಳಕೆ ಈ ಭಾಗದಲ್ಲಿಯೇ ಕಡಿಮೆಯಾಗಿದೆ. ಹಿಮಾಲಯ ಕಾಶ್ಮೀರ ಮುಂತಾದ ಹಿಮ ಚಳಿ ಹೆಚ್ಚಿರುವ ಭಾಗದಲ್ಲಿ ಕಂಬಳಿಗೆ ದೊಡ್ಡ ಬೇಡಿಕೆ ಇದೆ.



ನೇಕಾರರು ಸಂತೆ ಕಂಬಳಿಯನ್ನು ಎರಡು ದಿನಕ್ಕೆ ಒಂದರಂತೆ ನೇಯ್ದರ, ನೈಸ್ ಕಂಬಳಿಯನ್ನು ವಾರಕ್ಕೆ ಒಂದರಂತೆ ನೇಯುತ್ತಾರೆ. ಒಂದು ಕಂಬಳಿಗೆ ೩೫೦ ರೂಪಾಯಿಗಳಿಂದ ಆರಂಭವಾಗಿ, ೨೦೦೦ ರೂಪಾಯಿಗಳ ತನಕ ತಾರಾವರಿ ಬೆಲೆ ಇದೆ .ಈ ಬೆಲೆಯು ಆಯಾ ಕಂಬಳಿಯ ಗುಣಮಟ್ಟ ಮತ್ತು ಕಂಬಳಿಗೆ ಬಳಸಿದ ಹುಣ್ಣೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ಸಂತೆ ಕಂಬಳಿ ಒರಟಾಗಿದ್ದರೆ, ನೈಸ್ ಕಂಬಳಿ ತುಂಬಾ ನಯವಾಗಿಯೂ ತೆಳ್ಳಗೂ ಇರುತ್ತದೆ. ಆಧುನಿಕ ಕಾಲಮಾನಕ್ಕೆ ಒಪ್ಪುವಂತೆ ನಯವಾದ ಕಂಬಳಿಯನ್ನು ನೇಯುವ ಬದಲಾವಣೆಯೂ ಈ ನೇಯ್ಗೆಯಲ್ಲಿ ಆಗಿದೆ. ಈ ಕಂಬಳಿ ಸಂತೆಯಲ್ಲಿ ಕೇವಲ ಕಂಬಳಿ ಮಾತ್ರ ಮಾರಾಟವಾಗುವುದಿಲ್ಲ, ಅದಕ್ಕೆ ಹೊಂದಿಕೊಂಡಂತೆ ಹುಣ್ಣೆ, ಮತ್ತು ಕಂಬಳಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಾಟವೂ ನಡೆಯುತ್ತದೆ.




ಕುರಿಗಾರಿಕೆ ಮತ್ತು ಕಂಬಳಿ ನೇಯ್ಗೆಯಲ್ಲಿ ಇಲ್ಲಿನ ಹಲವಾರು ಸಮುದಾಯಗಳು ಭಾಗಿಯಾಗಿವೆ. ಪ್ರಮುಖವಾಗಿ ಇದರಲ್ಲಿ ಕುರುಬರು, ಗೊಲ್ಲರು, ಬೇಡರು, ಒಕ್ಕಲಿಗರ ಸಮುದಾಯಗಳಿವೆ. ಉಣ್ಣೆ ತೆಗೆಯುವುದು, ಹುಣ್ಣೆಯನ್ನು ಸ್ವಚ್ಚಗೊಳಿಸುವುದು, ನೂಲು ತೆಗೆಯುವುದು, ನೇಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿ ದೆ. ಆದರೆ ಇದರ ಮಾರಾಟ, ವ್ಯವಹಾರದಲ್ಲಿ ಮಾತ್ರ ಮಹಿಳೆಯರ ಪಾತ್ರ ಶೂನ್ಯ. ಕಂಬಳಿಯ ವ್ಯಾಪಾರದಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ. ಕುರಿಯವರಿಂದ ನೇಕಾರರು ಕುರಿಯ ಹುಣ್ಣೆಯನ್ನು ಕತ್ತರಿಸಿಕೊಂಡು ಬಂದು, ಅದಕ್ಕೆ ಬದಲಿಯಾಗಿ ಕುರಿಯವರಿಗೆ ಕಂಬಳಿಯನ್ನು ಕೊಡುವ ಪದ್ದತಿ ಇದೆ. ಈಗೀಗ ಕುರಿಯ ಹುಣ್ಣೆ ಕತ್ತರಿಸಲು ಕುರಿಯವರೇ ನೇಕಾರರಿಗೆ ಒಂದು ಕುರಿಗೆ ಎರಡು ರೂಪಾಯಿಯನ್ನು ಈಗ ಕೊಡುತ್ತಾರೆ. ಸ್ವಚ್ಚಗೊಂಡ ಒಂದು ಮಣ ಹುಣ್ಣೆಗೆ ೩೫೦ ರಿಂದ ೪೦೦ ರೂಗಳವರೆಗೆ ಬೆಲೆ ಇದೆ.

ಈ ಕಂಬಳಿ ಉದ್ಯಮವನ್ನು ಆಧರಿಸಿಯೇ ಇಲ್ಲಿ ಸರಕಾರ ‘ಉಣ್ಣೆ ಉತ್ಪಾದನಾ ಮಾರಾಟ ಸಹಕಾರ ಮಹಾ ಮಂಡಳ’ ವನ್ನು ಸ್ಥಾಪಿಸಿದೆ. ಈ ಮಂಡಳಿ ನೇಕಾರರಿಗೆ ಹುಣ್ಣೆಯನ್ನು ಮಾರಾಟ ಮಾಡುತ್ತದೆ, ಅಂತೆಯೇ ಕಂಬಳಿಯನ್ನು ಕೊಳ್ಳುವ ಮತ್ತು ಮಾರುವ ಕೆಲಸಕ್ಕೆ ಸಹಕಾರವನ್ನೂ, ಕಂಬಳಿಗೆ ಪೂರಕವಾದ ಸಾಲ ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ ಅದು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನೇಕಾರರಿಗೆ ಸ್ಪಂದಿಸಿದಂತೆ ಕಾಣುವುದಿಲ್ಲ. ಇಲ್ಲಿ ಕಂಬಳಿಯನ್ನು ಆಧರಿಸಿದ ದೊಡ್ಡ ಆಚರಣ ಪರಂಪರೆಯೇ ಇದೆ. ಇದರಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಾದರೂ ಅದರ ಸಾಂಪ್ರದಾಯಿಕ ನಂಬಿಕೆಯ ಲೋಕದಲ್ಲಿ ಅಷ್ಟು ಬದಲಾವಣೆ ಆದಂತಿಲ್ಲ. ಈ ಕಂಬಳಿ ನೇಯ್ಗೆಯ ಉದ್ಯಮದಲ್ಲಿ ಯುವ ಜನತೆಯನ್ನು ಆಕರ್ಷಿಸುವಂತಹ ಗುಣ ಕಡಿಮೆ. ಅದರಲ್ಲೂ ವಿದ್ಯಾವಂತ ಯುವ ಜನತೆ ಈ ಕಂಬಳಿ ನೇಯ್ಗೆ ಉದ್ಯಮದ ಕಡೆ ಬರುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಅಥವಾ ನಗರಗಳತ್ತ ವಲಸೆ ಹೋಗುವ ಯುವಕರನ್ನು ಕಂಬಳಿ ಉದ್ಯಮದಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ಈ ಕಂಬಳಿ ಉದ್ಯಮವನ್ನು ಮತ್ತಷ್ಟು ಬೆಳೆಸುವ ಸಾಧ್ಯತೆಗಳಿವೆ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

nijakku nimma prayanta olleyadu. avaganege olagaada janapa kshetrada bagge nimma comitment mecchuvanthaddu. kulakasabugalige punarjiiva niiduvudu indina agatyavaagide.
-revayya, bangaluru

Dr. G V Anandamurthy ಹೇಳಿದರು...

Arun Jolad,
'Makkala Moharam' mattu 'Challakereya Kambali' kuritha nimma bareha nodi santhoshavayithu. janasmskruthiya bgegeina nimma kalaji mattu shradde nanu mecchuva nimmalina gunagalu.
Matte betiyaguthene.
Dr. G V Anandamurthy, Tumkur
emai- gvamurthy@gmail.com