ಭಾನುವಾರ, ಅಕ್ಟೋಬರ್ 31, 2010

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಮತ್ತು ಯಕ್ಷಗಾನ ಕಲಾವಿದರಿಗೆ ಅಭಿನಂದನೆಗಳು.

ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟವಾಗಿವೆ. ಜಾನಪದ ಕ್ಷೇತ್ರಕ್ಕೆ ಹತ್ತು ಪ್ರಶಸ್ತಿಗಳು, ಯಕ್ಷಗಾನಕ್ಕೆ ಐದು ಪ್ರಶಸ್ತಿಗಳು ಲಬಿಸಿವೆ. ಈ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ‘ಕನ್ನಡ ಜಾನಪದ’ ಬ್ಲಾಗ್ ಮೂಲಕ ಅಭಿನಂದನೆಗಳನ್ನು ತಿಳಿಸಲು ಸಂತೋಷವಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿಯ ಇತರೆ ವಿಭಾಗಗಳು ವಿವಾದಕ್ಕೆ ಗುರಿಯಾದಂತೆ ಜಾನಪದ ಕ್ಷೇತ್ರದ ಪ್ರಶಸ್ತಿಗಳು ವಿವಾದಕ್ಕೆ ಗುರಿಯಾದದ್ದು ಕಡಿಮೆ. ಕಾರಣ ಜಾನಪದ ಕ್ಷೇತ್ರದ ಕಲಾವಿದರು ಈ ಪ್ರಶಸ್ತಿಯನ್ನೂ ಮೀರಿಸುವ ಕಲಾ ಪ್ರತಿಭೆಯನ್ನು ಸಹಜವಾಗಿ ಪಡೆದಿರುತ್ತಾರೆ. ಅದರಲ್ಲೂ ಎಲ್ಲಾ ಜಾನಪದ ಕಲಾವಿದರಿಗೂ ರಾಜ್ಯೋತ್ಸವ ಪ್ರಶಸ್ತಿ ಒಲಿಯುತ್ತದೆ ಎಂದೇನೂ ಅಲ್ಲ. ಕೆಲವೊಮ್ಮೆ ಜಾನಪದ ಕಲಾವಿದರ ಸೋಗು ಹೊತ್ತ ಕೆಲವು ನಕಲಿ ಕಲಾವಿದರಿಗೂ ಪ್ರಶಸ್ತಿ ಲಭಿಸುವ ಪವಾಡಗಳೂ ಜರುಗುತ್ತವೆ. ಇದರಲ್ಲಿ ಇನ್ನೂ ಕೆಲವು ಅಂಶಗಳು ಪ್ರಭಾವ ಬೀರುವ ಸಾದ್ಯತೆ ಇದೆ. ಜಾನಪದ ವಿದ್ವಾಂಸರು ಗುರುತಿಸಿದ ಕಲಾವಿದರಿಗೆ ಪ್ರಶಸ್ತಿಗಳು ಲಭಿಸುವ ಸಾದ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಆಯಾ ಕಲಾವಿದರ ಜಾತಿಯೂ ಪ್ರಭಾವ ಬೀರುತ್ತದೆ.
ಹಾಗೆ ನೋಡಿದರೆ, ಯಕ್ಷಗಾನವೂ ಜಾನಪದ ಕಲೆಯೇ ಆಗಿದ್ದರೂ ಅದನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ಮೇಲ್ವರ್ಗದ ರಾಜಕಾರಣ ಇದ್ದೇ ಇದೆ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲಿಯೂ ಈ ರಾಜಕಾರಣ ಎದ್ದು ಕಾಣುತ್ತಿದೆ. ಕರ್ನಾಟಕದ ಜಾನಪದ ಕ್ಷೇತ್ರಕ್ಕೆ ಹತ್ತು ಪ್ರಶಸ್ತಿಗಳು ಲಬಿಸಿದರೆ, ಇದೇ ಜಾನಪದದ ಭಾಗವಾದ ಯಕ್ಷಗಾನಕ್ಕೆ ಐದು ಪ್ರಶಸ್ತಿಗಳು ಲಬಿಸಿವೆ. ಇದನ್ನು ನೋಡಿದರೆ ಜಾನಪದ ಕ್ಷೇತ್ರಕ್ಕಿಂತ ಯಕ್ಷಗಾನವೇ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಈ ರಾಜಕಾರಣ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯನ್ನು ಬೇರೆ ಬೇರೆಯಾಗಿ ಒಡೆಯುವುದರಲ್ಲಿಯೂ, ಪ್ರತ್ಯೇಕ ಯಕ್ಷಗಾನ ಅಕಾಡೆಮಿ ರಚನೆಯಾದದ್ದರ ಹಿಂದೆಯೂ ಇದೆ. ಇದನ್ನು ನೋಡಿದರೆ ಮೇಲ್ವರ್ಗದವರ ಜನಪದ ಕಲೆಗಳಿಗೆ ಸಿಕ್ಕ ಪ್ರಾಶಸ್ತ್ಯ ಕೆಳವರ್ಗದ ಮತ್ತು ಅಲ್ಪಸಂಖ್ಯಾತರ ಜನಪದ ಕಲೆಗಳಿಗೆ ಸಿಗುತ್ತಿಲ್ಲ ಎನ್ನುವುದು ವಿಷಾದನೀಯ.
ಕನ್ನಡ ಜಾನಪದ ಬ್ಲಾಗ್ ಆರಂಭವಾದ ಮೊದಲಿಗೆ ಮಂಜಮ್ಮ ಜೋಗತಿಯ ಬಗ್ಗೆ ಬರೆಯಲಾಗಿತ್ತು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರು ಬಳ್ಳಾರಿ ಜಿಲ್ಲೆಯನ್ನು ಪ್ರತಿನಿದಿಸಿದ್ದಾರೆ. ಇದು ಮಂಜಮ್ಮನ ಪ್ರತಿಭೆಗೆ ಸಂದ ಗೌರವ. ಈ ಬಾರಿ ಜಾನಪದ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರ ಪಟ್ಟಿ ಈ ಕೆಳಗಿನಂತಿದೆ.
ಜಾನಪದ
ಡಾ.ಶ್ರೀರಾಮ ಇಟ್ಟಣ್ಣವರ ಬಾಗಲಕೊಟೆ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್ ವಿಜಾಪುರ ಯುಗಧರ್ಮ ರಾಮಣ್ಣ ದಾವಣಗೆರೆ ಡಾ. ಜಿ.ವಿ. ದಾಸೇಗೌಡ ಮಂಡ್ಯ ಜಿ.ಪಿ.ಜಗದೀಶ ಚಿಕ್ಕಮಗಳೂರು ಮಲೆಯೂರು ಗುರುಸ್ವಾಮಿ ಚಾಮರಾಜನಗರ ಮಂಜವ್ವ ಜೋಗತಿ ಬಳ್ಳಾರಿ ಬೋವಿ ಜಯಮ್ಮ ಚಿತ್ರದುರ್ಗ ಸಂಬಣ್ಣಪುರವಂತರ ಗುಲ್ಬರ್ಗ ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ ಬೆಳಗಾವಿ
ಯಕ್ಷಗಾನ
ನೆಬ್ಬೂರು ನಾರಾಯಣ ಹೆಗಡೆ ಉ. ಕ.ಜಿಲ್ಲೆ ಭಾಸ್ಕರ ಕೊಗ್ಗ ಕಾಮತ ದ.ಕ.ಜಿಲ್ಲೆ ಕೆ.ವಿ.ರಮೇಶ್(ಯಕ್ಷಗಾನ ಬೊಂಬೆಯಾಟ) ಕಾಸರಗೋಡು ಬಲಿಪ ನಾರಾಯಣ ಭಾಗವತ ಕಾಸರಗೋಡು ಕೆ.ಗೋಪಾಲಕೃಷ್ಣ ಭಟ್ ಬಂಟ್ವಾಳ ಗೋಪಾಲಕೃಷ್ಣ ಕಾಸರಗೋಡು ಮತ್ತೊಮ್ಮೆ ಈ ಎಲ್ಲಾ ಕಲಾವಿದರಿಗೂ ವಿದ್ವಾಂಸರಿಗೂ ಅಭಿನಂದನೆಗಳು. ಈ ಪ್ರಶಸ್ತಿ ಕಲಾವಿದರಲ್ಲಿ ಹೊಸ ಚೈತನ್ಯವನ್ನು ಮೂಡಿಸಲಿ ಎಂದು ಆಶಿಸೋಣ.

ಮಂಗಳವಾರ, ಅಕ್ಟೋಬರ್ 26, 2010

ಪ್ರೊ. ಅಂಬಳಿಕೆ ಹಿರಿಯಣ್ಣ ಅವರೊಂದಿಗೆ ಮಾತುಕತೆ

(ಈಚೆಗೆ ಜಾನಪದ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯನ್ನಾಗಿ ಮೈಸೂರು ವಿವಿಯ ಪ್ರೊ.ಅಂಬಳಿಕೆ ಹಿರಿಯಣ್ಣ ಅವರನ್ನು ನೇಮಿಸಲಾಗಿದೆ. ಪಶ್ಚಿಮದ ಜಾನಪದ ತಿಳುವಳಿಕೆಯನ್ನು ಕನ್ನಡಕ್ಕೆ ತಂದು ಇಲ್ಲಿನ ಆಲೋಚನೆಯ ನೆಲೆಗಳನ್ನು ವಿಸ್ತರಿಸಿದವರಲ್ಲಿ ಇವರು ಪ್ರಮುಖರು. ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸನ್ನು ಕುರಿತು ಕನ್ನಡ ಜಾನಪದ ಬ್ಲಾಗಿಗಾಗಿ ಅವರು ಮಾತನಾಡಿದ ಮಾತುಕತೆ ಇಲ್ಲಿದೆ.) ಅರುಣ್- ಸಾರ್, ನಮಸ್ಕಾರ. ನೀವು ಜಾನಪದ ವಿವಿ ಗೆ ವಿಶೇಷ ಅಧಿಕಾರಿಯಾಗಿದ್ದೀರಿ. ಅದಕ್ಕಾಗಿ ಅಭಿನಂದನೆಗಳು. ಕರ್ನಾಟಕ ಜಾನಪದದಲ್ಲಿ ಅಪಾರ ಕೆಲಸ ನಡೆದಿದೆ, ನಡೆಯಬೇಕಾದುದು ಬಹಳಷ್ಟಿದೆ. ಇಲ್ಲಿ ಜಾನಪದದ ಗ್ರಹಿಕೆ ಮತ್ತು ಅಧ್ಯಯನ ವಿಧಾನಗಳಲ್ಲಿ ಹಲವು ತೊಡಕುಗಳಿವೆ, ಹಾಗಾಗಿ ಈ ತನಕದ ಕನ್ನಡ ಜಾನಪದ ಅಧ್ಯಯನಗಳನ್ನು ಜಾನಪದ ವಿವಿ ಹೇಗೆ ಮುಂದುವರೆಸಲು ನೀವು ಬಯಸುತ್ತೀರಿ ? ಅಂಬಳಿಕೆ ಹಿರಿಯಣ್ಣ- ಹೌದು ಕನ್ನಡದ ಜಾನಪದ ಅಧ್ಯಯನದಲ್ಲಿ ಹೆಚ್ಚು ಕೆಲಸ ನಡೆದಿದೆ, ಅಂತೆಯೇ ನಡೆಯಬೇಕಾದುದು ಇದೆ. ಆದರೆ ಹಿಂದಿನ ಜಾನಪದ ಅಧ್ಯಯನಗಳ ತುರ್ತು ಬೇರೆಯೇ ಆಗಿತ್ತು, ಆ ಅನಿವಾರ್ಯತೆಗೆ ತಕ್ಕ ಹಾಗೆ ಅಧ್ಯಯನ ವಿಧಾನಗಳೂ ರೂಪುಗೊಂಡಿದ್ದವು. ಆದರೆ ಇಂದಿನ ಜಾನಪದ ಅಧ್ಯಯನದ ತುರ್ತು ಬೇರೆಯೇ ಆಗಿದೆ ಹಾಗಾಗಿ ಇದನ್ನು ಗಮನದಲ್ಲಿಟ್ಟುಕೂಂಡು ಈ ಕಾಲಕ್ಕೆ ಹೊಂದಿಕೆಯಾಗುವಂತಹ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ಹಿಂದೆ ಕೇವಲ ಜನಪದರ ಮೌಖಿಕ ಮತ್ತು ಬೌತಿಕ ಸಂಪತ್ತನ್ನು ಸಂಗ್ರಹಿಸಬೇಕು ಎನ್ನುವ ಜಾನಪದದ ಸಂರಕ್ಷಣೆಯ ಭಾವ ಪ್ರಭಾವಿ ಅಂಶವಾಗಿತ್ತು. ಅಷ್ಟಕ್ಕೂ ಅವುಗಳಲ್ಲಿ ಬಹುಪಾಲು ಮೇಲ್ಪದರದ ಅಧ್ಯಯನಗಳು. ಈಗ ಜಾನಪದ ಸಂಪೂರ್ಣ ಸರ್ವೇಕ್ಷಣೆ ಮಾಡುವ ಅಗತ್ಯವಿದೆ. ಮೂಲ ಜನಪದ ಕಲಾವಿದರನ್ನು ಗುರುತಿಸಬೇಕಿದೆ. ಅರುಣ್- ಕರ್ನಾಟಕದಲ್ಲಿ ಜಾನಪದ ಸ್ನಾತಕೋತ್ತರ ಪದವಿ ಪಡೆದ ಮತ್ತು ಜಾನಪದದಲ್ಲಿ ಸಂಶೋಧನೆ ಮಾಡಿದ ನಿರುದ್ಯೋಗಿಗಳಿದ್ದಾರೆ, ಇನ್ನೊಂದೆಡೆ ಅಪಾರ ಜಾನಪದ ಜ್ಞಾನವನ್ನಿಟ್ಟುಕೊಂಡ ಕಡು ಬಡವ ಜಾನಪದ ಕಲಾವಿದರಿದ್ದಾರೆ, ಹಾಗೆಯೇ ಕನ್ನಡದಲ್ಲಿ ಶ್ರೀಮಂತ ಜನಪದ ಸಾಹಿತ್ಯವಿದೆ ಅಂತೆಯೇ ಬಹುಪಾಲು ತೀರಾ ಬಡಕಲು ವಿಶ್ಲೇಷಣೆಗಳಿವೆ. ಒಂದೆಡೆ ಆಧುನಿಕತೆಗೆ ಒಗ್ಗಿಕೊಳ್ಳುತ್ತಾ ಸಹಜವಾಗಿ ದೇಸಿ ತಿಳುವಳಿಕೆಗೆ ಮರೆವು ಬಂದಿದೆ, ಇನ್ನೊಂದೆಡೆ ಜನಪದರು ಆಧುನಿಕತೆಯನ್ನೇ ತಮ್ಮ ಜ್ಞಾನಲೋಕಕ್ಕೆ ಒಗ್ಗಿಸಿಕೊಂಡು ಹೊಸ ಜಾನಪದವನ್ನು ಸೃಷ್ಟಿಸುತ್ತಿದ್ದಾರೆ. ಈ ಬಗೆಯ ವೈರುಧ್ಯಗಳನ್ನು ವಿವಿ ಹೇಗೆ ಅರ್ಥೈಸುತ್ತದೆ ? ಅಂಬಳಿಕೆ ಹಿರಿಯಣ್ಣ – ಈ ಬಗೆಯ ವೈರುದ್ಧ್ಯಗಳಿರುವುದು ನಿಜ. ಜಾನಪದದಲ್ಲಿ ಸಂಶೋಧನೆ ಮಾಡಿದವರು ಅವರವರ ಭಾಗದ ಜಾನಪದವನ್ನೋ, ಅಥವಾ ಯಾವುದಾದರೂ ಒಂದು ಜನಪದ ಸಂಗತಿಯನ್ನೋ ಕುರಿತು ಸಂಶೋಧನೆ ಮಾಡಿದ್ದಾರೆ. ಅವುಗಳಲ್ಲಿಯೂ ಸಹ ಮೇಲ್ಮಟ್ಟದ ಅಧ್ಯಯನಗಳೇ ಹೆಚ್ಚಾಗಿವೆ. ಜಾನಪದ ವಿವಿಯ ಮಿತಿಯಲ್ಲಿ ಇಂತವರಿಗೆ ಸಂಶೋಧನೆ ಮಾಡಲು ವಿಫುಲ ಅವಕಾಶಗಳನ್ನು ಒದಗಿಸುವ ಸಾಧ್ಯತೆ ಇದೆ. ಇನ್ನು ಜನಪದ ಕಲಾವಿದರಿಗೆ ನಮ್ಮಲ್ಲಿ ಗೌರವ ಕಡಿಮೆ. ಹಾಗಾಗಿ ಜನಪದ ಕಲಾವಿದರಿಗೆ ಗೌರವ ಸಿಗುವ ವಾತಾವರಣವನ್ನು ಜಾನಪದ ವಿವಿ ನಿರ್ಮಿಸಬೇಕಿದೆ. ಕಲಾವಿದರು ತಮ್ಮ ಕಲೆಯನ್ನೇ ನಂಬಿ ಬದುಕಬಹುದೆಂಬ ಆತ್ಮವಿಶ್ವಾಸವನ್ನು ವಿವಿ ಮೂಡಿಸಬೇಕಿದೆ. ಅರುಣ್ - ಸಾರ್ ಆಧುನಿಕವಾಗಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಇಂತಹ ಹೊತ್ತಲ್ಲಿ ಜಾಗತಿಕವಾಗಿ ಕನ್ನಡ ಜಾನಪದವನ್ನು ಲಭ್ಯವಾಗುವಂತೆ ಮಾಡಲು ವಿಪುಲ ಅವಕಾಶಗಳಿದೆ. ಹಾಗಾಗಿ ಇಪ್ಪತ್ತೊಂದನೇ ಶತಮಾನದ ಜಾನಪದದ ದಾಖಲೀಕರಣ ಹೇಗಿರಬೇಕು ? ಮತ್ತು ಅದನ್ನು ಜಾನಪದ ವಿವಿ ಹೇಗೆ ನಿರ್ವಹಿಸಬೇಕೆಂದು ಬಯಸುತ್ತೀರಿ ? ಅಂಬಳಿಕೆ ಹಿರಿಯಣ್ಣ - ಆಧುನಿಕವಾಗಿ ತಂತ್ರಜ್ಞಾನ ಬೆಳೆದಿದೆ. ಇದನ್ನು ಸಮರ್ಥವಾಗಿ ಇಂದಿನ ಜಾನಪದ ಅಧ್ಯಯನಗಳಲ್ಲಿ ಬಳಸಿಕೊಳ್ಳಬೇಕಿದೆ. ಮುಖ್ಯವಾಗಿ ಕನ್ನಡ ಜಾನಪದವನ್ನು ಇಂಗ್ಲೀಷಿಗೆ ಮತ್ತು ಭಾರತೀಯ ಇತರೆ ಭಾಷೆಗೆ ಅನುವಾದ ಮಾಡುವ ಅಗತ್ಯವಿದೆ. ಹಾಗಾಗಿ ಜಾನಪದ ವಿವಿಯಲ್ಲಿ ಭಾಷಾಂತರ ವಿಭಾಗವನ್ನು ತೆರೆಯುವ ಆಲೋಚನೆ ಇದೆ. ಅಂತೆಯೇ ಹೀಗೆ ಅನುವಾದವಾದ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಲಬ್ಯವಾಗುವಂತೆ ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ನಾವು ಕೇವಲ ಕನ್ನಡ ಕನ್ನಡ ಎನ್ನುತ್ತಾ ಕೂಪ ಮಂಡೂಕಗಳಾಗಿ ಕೂರುವ ಕಾಲ ಇದಲ್ಲ. ನಮ್ಮ ಜನಪದರ ತಿಳುವಳಿಕೆಯನ್ನು ಜಾಗತಿಕವಾಗಿ ವಿಸ್ತರಿಸಬೇಕಿದೆ. ಈಗ ಏಕಕಾಲದಲ್ಲಿ ಪಠ್ಯ,ವೀಡಿಯೋ, ಆಡಿಯೋ ಈ ಮೂರು ಮಾದ್ಯಮಗಳಲ್ಲಿ ಜಾನಪದ ಸಂಗ್ರಹ ಮಾಡಲು ಅವಕಾಶವಿದೆ. ಇದು ಹೊರಗಿನ ಅಧ್ಯಯನಕಾರರಿಗೆ ಹೆಚ್ಚು ಉಪಯುಕ್ತವಾಗಲಿದೆ. ಅರುಣ್- ಸಾರ್, 80ರ ದಶಕದಲ್ಲೇ ಸ್ಕ್ಯಂಡಿನೇವಿಯಾ, ಡೆನ್ಮಾರ್ಕ್ ಗಳಲ್ಲಿ ಬಹಳ ದೊಡ್ಡದಾಗಿ ಫೋಕ್ ಸ್ಕೂಲ್ ಮೂವ್ ಮೆಂಟ್ ಆರಂಭವಾಯಿತು. ಈ ಚಳವಳಿ ಮುಖ್ಯವಾಗಿ ಜಾನಪದ ಜ್ಞಾನವನ್ನು ಶಿಕ್ಷಣ ಮಾಧ್ಯಮವನ್ನಾಗಿ ಪರಿವರ್ತಿಸಿದವು. ಇದರಿಂದಾಗಿ ಅಲ್ಲಿ ಹೊಸ ತಲೆಮಾರುಗಳಲ್ಲಿ ಜಾನಪದ ಒಂದು ಜೀವನ ಕ್ರಮವಾಗಿ ಬದಲಾಗುತ್ತಿದೆ. ಇದು ಜಾಗತೀಕರಣಕ್ಕೆ ದೊಡ್ಡ ಪ್ರತಿರೋಧವಾಗಿ ಬೆಳೆದಿದೆ. ಹಾಗಾಗಿ ಕರ್ನಾಟಕದಲ್ಲಿ ಜಾನಪದವನ್ನು ಪ್ರಾಥಮಿಕ ಶಿಕ್ಷಣದಿಂದ ಪದವಿ ತರಗತಿಗಳಿಗೆ ಒಂದು ಪಠ್ಯವನ್ನಾಗಿ ಖಡ್ಡಾಯಗೊಳಿಸಿದರೆ, ಹೊಸ ತಲೆಮಾರುಗಳಲ್ಲಿ ಜಾನಪದ ಜ್ಞಾನ ಲೋಕ ಜೀವನ ಕ್ರಮವಾಗಿ ಬದಲಾಗಲು ಸಾಧ್ಯವಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಅಂಬಳಿಕೆ ಹಿರಿಯಣ್ಣ- ಜಾನಪದ ವಿವಿಯ ಮೊದಲ ಹಂತದ ಕೆಲಸದಲ್ಲಿ ಶೈಕ್ಷಣಿಕವಾಗಿ ಜಾನಪದವನ್ನು ಒಂದು ಕಡ್ದಾಯ ಪಠ್ಯವನ್ನಾಗಿಸುವುದು ಮುಖ್ಯವಾಗಿದೆ. ಹಾಗಾದಲ್ಲಿ ಆಯಾ ಭಾಗದ ಜನಪದ ಕಲೆಯನ್ನು ಪ್ರಾಯೋಗಿಕವಾಗಿಯೂ ಕಲಿಯುವ, ಆ ಮೂಲಕ ಹೊಸ ತಲೆಮಾರಿನಲ್ಲಿ ಜನಪದ ಕಲಾವಿದರನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಇದನ್ನು ವಿದ್ವಾಂಸರ ಸಮಿತಿ ರಚಿಸಿ ಈ ಬಗ್ಗೆ ಚರ್ಚಿಸಬೇಕಾಗಿದೆ. ಜಾನಪದವನ್ನು ಒಂದು ಪಠ್ಯವನ್ನಾಗಿ ಮಾಡಿದರೆ ಜಾನಪದವನ್ನು ಒಂದು ಶೈಕ್ಷಣಿಕ ಶಿಸ್ತಿನಲ್ಲಿ ಕಲಿಯುವವರ ಸಂಖ್ಯೆ ಹೆಚ್ಚುತ್ತದೆ, ಆಗ ಜನಪದ ವಿದ್ವಾಂಸ ಏಕಕಾಲದಲ್ಲಿ ಕಲಾವಿದನೂ ಆಗುತ್ತಾನೆ. ಕಲಿತವರು ಜಾನಪದ ಕಲೆಗಳನ್ನು ಪ್ರವೇಶಿಸುವುದರಿಂದ ಕಲೆ ಉಳಿಯುತ್ತದೆ. ಅಂತೆಯೇ ಜಾನಪದವನ್ನು ಕಲಿತವರ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಬಹುದು. ಅರುಣ್- ಸಾರ್, ಇಂದು ಜಾಗತಿಕವಾಗಿ ಜಾನಪದ ಅಧ್ಯಯನಗಳು ಆನ್ವಯಿಕ ಚಿಂತನೆಯಲ್ಲಿ ಬಹಳ ಮುಂದುವರಿದಿವೆ. ಹಾಗೆ ನೋಡಿದರೆ ಕರ್ನಾಟಕ ಜಾನಪದ ಅಧ್ಯಯನಗಳು ಕನಿಷ್ಟ ಅರ್ಧ ಶತಮಾನದಷ್ಟು ಹಿಂದಿವೆ. ಹೀಗಿರುವಾಗ ಜಾಗತಿಕ ಜಾನಪದ ಅಧ್ಯಯನದ ತಿಳುವಳಿಕೆಯನ್ನು ಕನ್ನಡಕ್ಕೆ ಹೇಗೆ ಅನ್ವಯಿಸಿಕೂಳ್ಳುತ್ತೀರಿ? ಅಂತೆಯೇ ಕನ್ನಡದಲ್ಲಿ ದೇಸಿ ಚಿಂತನಾ ವಿಧಾನ ಇನ್ನು ಗಟ್ಟಿಯಾಗಿ ನೆಲೆಗೊಳ್ಳಬೇಕಿದೆ ಈ ಎರಡೂ ವೈರುದ್ಯಗಳನ್ನು ಹೇಗೆ ಜಾನಪದ ವಿವಿಯಲ್ಲಿ ಸಮನ್ವಯಗೊಳಿಸುತ್ತೀರಿ ? ಅಂಬಳಿಕೆ ಹಿರಿಯಣ್ಣ- ಹೌದು ಫಿನ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಜಾನಪದವನ್ನು ಪ್ರವಾಸೋಧ್ಯಮದ ಅಭಿವೃದ್ಧಿಗೆ ಬಳಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತಹ ಕೆಲಸಗಳು ಪ್ರಯೋಗಗಳು ಕನ್ನಡದಲ್ಲಿಯೂ ಆಗಬೇಕಿದೆ. ಆದರೆ ಅಲ್ಲಿ ಜನಪದ ಕಲಾವಿದರಿಗೆ ಹೆಚ್ಚಿನ ಗೌರವವಿದೆ. ನಮ್ಮಲ್ಲಿ ಜನಪದ ಕಲಾವಿದರಿಗೆ ಗೌರವ ಕಡಿಮೆ. ಆನ್ವಯಿಕ ಜಾನಪದ ಕೇವಲ ಚಿಂತನೆಯ ಮಟ್ಟದಲ್ಲಿದ್ದರೆ ಸಾಲದು, ಅದು ಪ್ರಾಯೋಗಿಕ ಹಂತವನ್ನು ತಲುಪಬೇಕಿದೆ. ಜಾನಪದ ವಿವಿ ಈ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಅರುಣ್- ಕೊನೆಯದಾಗಿ ಒಂದು ಪ್ರಶ್ನೆ, ಸದ್ಯಕ್ಕೆ ಜಾನಪದ ವಿವಿ ಘೋಷಣೆಯಾದ ನಂತರದ ಬೆಳವಣಿಗೆಗಳೇನು ? ಅಂಬಳಿಕೆ ಹಿರಿಯಣ್ಣ- ಸದ್ಯಕ್ಕೆ ಪ್ರಾಥಮಿಕ ಕೆಲಸಗಳು ನಡೆಯುತ್ತಿವೆ. ಪಿಡಬ್ಲು.ಡಿ/ ಬಿ.ಬಿ.ಎಂ.ಪಿ ಯವರು ಬೆಂಗಳೂರಿನಲ್ಲಿ ಒಂದು ಕಛೇರಿಯನ್ನು ಶೋಧಿಸುತ್ತಿದ್ದಾರೆ. ಕೆಲವು ವಿವಿಯ ಮೊದಲ ಹಂತದ ಕೆಲಸಗಳು ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅರುಣ್ –ಈ ಮಾತುಕತೆಗಾಗಿ ಧನ್ಯವಾದಗಳು ಸಾರ್

ಮಂಗಳವಾರ, ಅಕ್ಟೋಬರ್ 19, 2010

ಸಿದ್ಧ ದೈವಗಳ ಪಲ್ಲಕ್ಕಿ ಉತ್ಸವ

ಡಾ.ಚಂದ್ರಪ್ಪ ಸೊಬಟಿ ಕರ್ನಾಟಕದ ಜನಸಮುದಾಯಗಳಲ್ಲಿ ಸಾಂಸ್ಕೃತಿಕ ನಾಯಕರ ಆರಾಧನೆಯ ಹಲವು ಪರಂಪರೆಗಳಿವೆ. ಅದರಲ್ಲಿ ಕೆಲವು ಹೆಚ್ಚು ಪರಿಚಿತವಾಗದೆ ಆಯಾ ಭಾಗಗಳಲ್ಲಿ ಮಾತ್ರ ಜೀವಂತವಾಗಿವೆ. ಹಾಗೆ ಅಷ್ಟೇನು ಪರಿಚಿತವಲ್ಲದ ಕರ್ನಾಟಕ, ಆಂದ್ರ, ಮಹರಾಷ್ಟ್ರಗಳಲ್ಲಿ ಆರಾಧನೆಗೊಳ್ಳುವ ಸಾಂಸ್ಕೃತಿಕ ನಾಯಕರಲ್ಲಿ ಅಮೋಘಸಿದ್ಧನೂ ಒಬ್ಬ. ಈತ ಆಯಾ ಭಾಗದ ಜನರ ಚೈತನ್ಯದಾಯಕ ಸಂಗತಿಯಾಗಿದ್ದಾನೆ. ಹಾಗಾಗಿಯೇ ಈತನನ್ನು ಬೇಟಿಯಾಗುವ ಸಿದ್ಧ ದೈವಗಳ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಪಲ್ಲಕ್ಕಿಗಳು ಒಂದೆಡೆ ಸೇರುತ್ತವೆ. ಇದು ಹಲವು ಸಮುದಾಯಗಳ ಜೀವಂತಿಕೆಯ ನಿಜ ದರ್ಶನವನ್ನು ಮಾಡಿಸುತ್ತದೆ. ಅಮೋಘಸಿದ್ಧ ಹಾಲುಮತದ ಸಾಂಸ್ಕೃತಿಕ ವೀರರಲ್ಲಿ ಒಬ್ಬ. ಶೈವಸಿದ್ಧ ಪಂಥಕ್ಕೆ ಸೇರಿದ ಸಾಂಸ್ಕೃತಿಕ ನಾಯಕ. ಸೋಮಲಿಂಗ ಈತನ ಗುರು. ಮೂಲಗಳ ಪ್ರಕಾರ ಈತ ಹನ್ನೆರಡು-ಹದಿಮೂರನೆ ಶತಮಾನಕ್ಕೆ ಸೇರಿದ ವ್ಯಕ್ತಿ. 'ಸಿದ್ಧಸೋಮನಾಥ' ಎನ್ನುವ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾನೆ ಎನ್ನುವ ವಾದಗಳಿವೆ . ಅಮಕಸಿದ್ಧ. ಅಮೋಗಿಸಿದ್ಧ, ಅಮೋಗಿದೇವ, ಅಮಗೋಂಡ ಮುಂತಾದ ಹಲವು ಹೆಸರುಗಳು ಜನರಲ್ಲಿ ಜೀವಂತವಾಗಿವೆ. ಈತನನ್ನು ಪಶುಪಾಲನ ಸಮುದಾಯಗಳು ಕುಲದೈವವಾಗಿ ಆರಾಧಿಸುತ್ತವೆ. ಈತನ ಕ್ಷೇತ್ರ ಮುಮ್ಮೆಟ್ಟಿಗಿರಿ. ಇದು ಬಿಜಾಪುರದಿಂದ ಹನ್ನೆರಡು ಕಿಲೋ ಮೀಟರ್ ಅಂತರದಲ್ಲಿದೆ. ಅಮೋಘಸಿದ್ಧನ ವಂಶ ದೊಡ್ಡದು. ಈತನ ವಂಶದ ಬಗ್ಗೆ ಅನೇಕ ಕಥನಗಳು ಸಿಗುತ್ತವೆ. ಈತನ ವಂಶ ನೂರ ಒಂದರಿಂದ ನವಕೋಟಿಯಾಗಿ ಬೆಳೆಯಿತು ಅನ್ನುವ ರೋಚಕ ನಿರೂಪಣೆಗಳು ಡೊಳ್ಳಿನ ಹಾಡುಗಳಲ್ಲಿವೆ. ಕರ್ನಾಟಕ, ಆಂದ್ರ, ಮಹರಾಷ್ಟ್ರಗಳಲ್ಲಿ ಈತನ ವಂಶಸ್ಥರ, ಶಿಷ್ಯರ ಮಠಗಳಿವೆ. ಇದರಲ್ಲಿ ಶಿಸುಮಕ್ಕಳು, ಒಕ್ಕಲುಮಕ್ಕಳು, ಸಾಕುಮಕ್ಕಳು, ಧರ್ಮದ ಮಕ್ಕಳು, ಪುಣ್ಯದಮಕ್ಕಳು ಸೇರುತ್ತಾರೆ. ಅಂತೆಯೇ ಸೇವಕ ವರ್ಗ, ಸೋತು ಶರಣಾದ ದೈವಗಳು ಸೇರಿಕೊಳ್ಳುತ್ತವೆ. ಕೋಳಿ ಕೂಗಿದಲೆಲ್ಲಾ ಆಮೋಘಸಿದ್ಧನ ಗುಡಿಗಳಿವೆ ಎನ್ನುವ ಗಾದೆ ಜನಪದರಲ್ಲಿದೆ. ಈ ಆಚರಣೆಯಲ್ಲಿ ಮುಖ್ಯವಾಗಿ ಕುರುಬರು, ನಾಯಕರು, ಲಂಬಾಣಿಗರು, ಹೊಲೆಮಾದಿಗರು, ಲಿಂಗಾಯಿತರು ಮುಂತಾದ ತಳ ಸಮುದಾಯಗಳು ಪಾಲ್ಗೊಳ್ಳುತ್ತವೆ. ಇಂದಿಗೂ ಕೆಲವು ಕಡೆ ಮಾದಿಗ ಸಮುದಾಯ ಪೂಜೆ ಮಾಡುತ್ತಿರುವುದು ವಿಶೇಷವಾಗಿದೆ. ಅಮೋಘಸಿದ್ಧ ಲೋಕಕ್ಕೆ ಬಂದ ಕಥನಗಳು ಕುತೂಹಲಕರ. ಹಾಲುಮತಸ್ಥರು ಶಿವನ ಆರಾಧನೆಯನ್ನು ಮರೆತಾಗ ಅವರಲ್ಲಿ ಮತ್ತೆ ಶೈವಾರಾಧನೆಯ ಬೀಜ ಬಿತ್ತುತ್ತಾನೆ ಎನ್ನುವ ನಂಬಿಕೆಗಳಿವೆ. ಇದರ ಪಠ್ಯವೊಂದು ಡೊಳ್ಳಿನ ಹಾಡಿನಲ್ಲಿ ಹೀಗಿದೆ: ಬಾರೋ ಬಾರೋ ನಂದಿವಾನ ಮೂರು ಲೋಕದ ವಳಗವನೆ ಮೂರು ಲೋಕದ ವಳಗೇನೋ ಕರಿತಲೆ ಮಾನವರೆಂಬುವರು ಕರಿತಲೆ ಮಾನವರೆಂಬುವರು ಹಾಲುಮತದವರಿದ್ದಾರೆ ಹಾಲುಮತದವರೆಂಬುವರು ನಮ್ಮ ನಾಮ ನೋಡಿರಿ ನನ್ನ ನಾಮ ನೋಡಪ್ಪ ಮರೆತ ನಡದಾರಂದಾನ ನೀನೆ ಹೋಗಲಿಬೇಕಪ್ಪ, ಉದ್ಧಾರ ಮಾಡಲಿ ಬೇಕಲ್ಲಿ ದೇವರು ಪರಮೇಶೂರನೂ ಹಿಂಗೊಂದು ಲಾಲಿಸಿ ನುಡದಾನೊ.. ಹೀಗೆ ಕಾವ್ಯದಲ್ಲಿ ಹಲವು ಪಾಠಾಂತರಗಳು ಸಿಗುತ್ತವೆ. ಛಟ್ಟಿ ಅಮವಾಸ್ಯೆಯ ದಿನ ( ಸಾಮಾನ್ಯವಾಗಿ ಜನವರಿ, ಪೆಬ್ರವರಿ) 'ಪಲ್ಲಕ್ಕಿ ಉತ್ಸವ'ಕ್ಕೆ ಅಮೋಘಸಿದ್ಧನ ಶಿಷ್ಯ ವೃಂದದ ಪಲ್ಲಕ್ಕಿಗಳು ಬರುತ್ತವೆ. ಪಲ್ಲಕ್ಕಿಗಳು ಒಂದು ಕಡೆ ಸೇರುವುದಕ್ಕೆ 'ಬೇಟಿಯಾಗುವ ಆಚರಣೆ' ಎಂದು ಹೆಸರು. ಹೀಗೆ ದೇವರುಗಳು ಬೇಟಿಯಾಗುವ ಆಚರಣೆಗಳು ಜನಪದರಲ್ಲಿ ಹೆಚ್ಚಾಗಿವೆ. ಮೊಹರಂ ನಲ್ಲಿ ಹಸೇನ್ ಹುಸೇನರು ಬೇಟಿಯಾಗುವ ಆಚರಣೆ ಮನಮಿಡಿಯುವಂತಿರುತ್ತದೆ. ಕಷ್ಟ ಬಂದಾಗ, ಪರಸ್ಪರ ದ್ವೇಶ ಅಸೂಯೆಗಳು ಹೆಚ್ಚಾದಾಗ ಅವುಗಳಲ್ಲಿ ಸಾಮರಸ್ಯ ತರಲು ಈ ಬಗೆಯ ಬೇಟಿಯ ಆಚರಣೆಗಳು ಹುಟ್ಟಿಕೊಂಡಿರಬೇಕು. ಈ ಆಚರಣೆಯಲ್ಲಿ 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಸೇರುತ್ತವೆ. ಅರಕೇರಿಯ ಗುಡ್ಡದ ಕೆಳಗಿರುವ ಬಯಲು ಜಾಗ ಈ ಆಚರಣೆಗೆ ವೇದಿಕೆಯಾಗುತ್ತದೆ. ನೆರೆದ ಪಲ್ಲಕ್ಕಿಗಳು ಪರಸ್ಪರ ಅಪ್ಪಿಕೊಳ್ಳುತ್ತವೆ. ಈ ಸಂದರ್ಬದಲ್ಲಿ ದೇವರುಗಳೆಲ್ಲಾ ಜೀವತಳೆದಂತೆ ಭಾವಿಸಿ ಜನರು ಭಾವಾವೇಷಕ್ಕೆ ಒಳಗಾಗುತ್ತಾರೆ. ಇದರಲ್ಲಿ ಹೆಣ್ಣು ದೈವ, ಗಂಡು ದೈವ ಲಿಂಗದ ದೈವ, ಲಿಂಗೇತರ ದೈವ ಎನ್ನುವ ಬೇದಭಾವಗಳಿಲ್ಲದೆ ಸಮ್ಮಿಲನವಾಗುತ್ತವೆ. ಈ ಸಮ್ಮಿಲನ ಕದಡುತ್ತಿರುವ ಸಾಮಾಜಿಕ ಸಾಮರಸ್ಯವನ್ನು ಒಂದುಗೂಡಿಸುವ ರೂಪಕದಂತೆ ಕಾಣುತ್ತದೆ. ಅಂದರೆ ಪಲ್ಲಕ್ಕಿ ಹೊತ್ತವರು ಹಲಗೆ ಮತ್ತು ಡೊಳ್ಳಿನ ನಾದಕ್ಕೆ ಕುಣಿಯುತ್ತಾ, ಹಲವು ಪಲ್ಲಕ್ಕಿಗಳನ್ನು ಒಟ್ಟಿಗೆ ಸೇರಿಸುತ್ತಾರೆ. ಸುಮಾರು ಮೂರು ತಾಸುಗಳಿಗೂ ಹೆಚ್ಚು ಸಮಯ ನಡೆವ ಈ ಆಚರಣೆಯನ್ನು ನೋಡುವುದಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆಗೆ ಬಂದವರು ಆವರಣದ ಸುತ್ತ ಕೋಟೆಯಂತೆ ನಿಂತು ಉಘೇ ಉಘೇ ಎಂದು ಘೋಷಣೆ ಕೂಗುತ್ತಾರೆ. ಭಂಡಾರ, ಉತ್ತುತ್ತಿ, ಕುರಿಹುಣ್ಣಿ ಎಸೆಯುತ್ತಾರೆ. ಕ್ಷಣಾರ್ಧದಲ್ಲಿ ಆವರಣವೆಲ್ಲ ಭಂಡಾರಮಯವಾಗುತ್ತದೆ. ಸುಮಾರು ನಾಲ್ಕು ಟನ್ ಭಂಡಾರ ಖರ್ಚಾಗುತ್ತದೆ ಎಂದು ಭಂಡಾರ ವ್ಯಾಪಾರಿಗಳು ಹೇಳುತ್ತಾರೆ. ಸೇರಿದ ಜನರೆಲ್ಲಾ ಭಂಡಾರಮಯ. ಭಂಡಾರ ಆಕಾಶಕ್ಕೆ ಹಾರುತ್ತಿದ್ದರೆ, ಭಕ್ತರು ನಾವು ಹಾರಿಸಿದ ಭಂಡಾರ ಶಿವನ ಪಾದ ಸೇರುತ್ತದೆ ಎಂದು ಭಾವಿಸುತ್ತಾರೆ . ಈ ಆಚರಣೆ ಶೈವಾರಾಧನೆಯ ವಿಸ್ತರಣೆಯಂತೆ ಗೋಚರಿಸುತ್ತದೆ. ಈ ಇಡೀ ಆಚರಣೆ ಧಾರ್ಮಿಕ ಸಂಘರ್ಷ ಮತ್ತು ಸಮ್ಮಿಲನದ ಸಂಕೇತದಂತೆ ಕಾಣುತ್ತದೆ. ಈಗಲೂ ಹಲವು ಪಂಥ, ಜಾತಿ, ಪಂಗಡ, ಪ್ರದೇಶದ ಭಿನ್ನತೆಯನ್ನು ಮರೆತು ಈ ಆಚರಣೆಯಲ್ಲಿ ಜನರು ಭಾಗವಹಿಸುತ್ತಾರೆ. ಬಹುಶಃ ಜನರ ನಡುವೆ ಮತ್ತೆ ಮತ್ತೆ ಒಂದಾಗುವ, ಬೆರೆಯುವ, ಪರಂಪರೆಯನ್ನು ಈ ಆಚರಣೆ ಪ್ರತೀ ವರ್ಷವೂ ಜೀವಂತಗೊಳಿಸುತ್ತದೆ ಅನ್ನಿಸುತ್ತದೆ.

ಮಂಗಳವಾರ, ಅಕ್ಟೋಬರ್ 12, 2010

ಜಾನಪದ ಅಧ್ಯಯನಕಾರರಿಗೊಂದು ಉಪಯುಕ್ತ ಆಕರ ಗ್ರಂಥ

ಕರ್ನಾಟಕದಲ್ಲಿ ಜಾನಪದ ಅಧ್ಯಯನ ವಿಪುಲವಾಗಿ ನಡೆದಿದೆ. ಆದರೆ ಅದರೆಲ್ಲಾ ಮಾಹಿತಿ ಒಂದೇ ಕಡೆ ಸಿಗುವುದು ವಿರಳ. ಅಂತಹ ಕೊರತೆಯನ್ನು ಜಾನಪದ ಗ್ರಂಥ ಸೂಚಿಗಳು ತುಂಬುತ್ತವೆ. ವಿದ್ವತ್ ವಲಯದಲ್ಲಿ ಹೆಚ್ಚು ಮೌಲ್ಯಯುತವಲ್ಲದ ಈ ಗ್ರಂಥ ಸೂಚಿಗಳು ಮೂಲೆ ಸೇರಿದ ಮುರುಕಲು ಸೈಕಲ್ಲಿನಂತೆ ಗ್ರಂಥಾಲಯಗಳಲ್ಲಿ ಅನಾಥವಾಗಿರುತ್ತವೆ. ಆಯಾ ಕ್ಷೇತ್ರದಲ್ಲಿ ಗಂಭೀರವಾಗಿ ಅಧ್ಯಯನ ಮಾಡಹೊರಟವರಿಗೆ ಅಂತವುಗಳ ಮೌಲ್ಯ ತಿಳಿಯುತ್ತದೆ. ೧೯೭೪ ರಲ್ಲಿ ಹಾ.ಮ ನಾಯಕರು ಮೈಸೂರು ವಿವಿಯಿಂದ, ೨೦೦೦ ದಲ್ಲಿ ಟಿ.ಸಿ ಗುರುಪ್ರಸಾದ್ ಅವರು ಹಂಪಿ ವಿವಿಯಿಂದ ಪ್ರಕಟಿಸಿದ ಕನ್ನಡ ಜಾನಪದ ಗ್ರಂಥ ಸೂಚಿಗಳು ಈ ನೆಲೆಯಲ್ಲಿ ಉಪಯುಕ್ತವಾಗಿವೆ. ಇವುಗಳನ್ನು ಒಳಗೊಂಡಂತೆಯೂ ೨೦೦೪ ರಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ (fossils) ತಿರುವನಂತಪುರ ಅವರು ಪ್ರಕಟಿಸಿರುವ ‘ಸಂಕ್ಷಿಪ್ತ ವಿವರಣಾತ್ಮಕ ಕನ್ನಡ ಜಾನಪದ ಗ್ರಂಥಸೂಚಿ’ ಜಾನಪದ ಅಧ್ಯಯನಕಾರರಿಗೆ ತುಂಬಾ ಉಪಯುಕ್ತವಾಗಿದೆ. ಈ ಪುಸ್ತಕವನ್ನು ಕರ್ನಾಟಕ ವಿವಿಯ ಪ್ರೊ.ಹೆಚ್.ಎಮ್.ಮಹೇಶ್ವರಯ್ಯ ಅವರು ಸಂಪಾದಿಸಿದ್ದಾರೆ. ಇದು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ೧೯೬೮ ಕೃತಿಗಳ ಪುಟ್ಟ ಪರಿಚಯವನ್ನು ಒಳಗೊಂಡಿದೆ. ತುಂಬಾ ಜಾಗರೂಕತೆಯಿಂದ ಅಚ್ಚುಕಟ್ಟಾಗಿ ರೂಪಿಸಿರುವುದು ಇದರ ಹಿರಿಮೆ. ಇದರಲ್ಲಿ ಸಂಪಾದಕರ ಪರಿಶ್ರಮ ಎದ್ದು ಕಾಣುತ್ತದೆ. ಲೇಖಕರ ಹೆಸರುಗಳ ಅಕಾರಾಧಿಯಾಗಿ ಪುಸ್ತಕಗಳನ್ನು ಪರಿಚಯಿಸಲಾಗಿದೆ. ಅನುಬಂಧದಲ್ಲಿ ಪುಸ್ತಕಗಳ ಅಕಾರಾದಿಯೂ, ಮತ್ತು ವಿಷಯವಾರು ಸಂಖ್ಯಾ ವರ್ಗೀಕರಣವೂ ಇದೆ. ಈ ವರ್ಗೀಕರಣವೇ ಜಾನಪದದ ಯಾವ ಕ್ಷೇತ್ರದಲ್ಲಿ ಹೆಚ್ಚು ಕೆಲಸ ನಡೆದಿದೆ ಮತ್ತು ಯಾವ ಕ್ಷೇತ್ರ ಬರಡಾಗಿದೆ ಎಂಬುದನ್ನು ತೋರಿಸುತ್ತದೆ. ಈ ಕೃತಿ ಹೆಚ್ಚು ಜಾನಪದ ವಿದ್ವಾಂಸರಿಗೆ ಪರಿಚಯವಿದ್ದಂತಿಲ್ಲ. ಕಾರಣ ಗ್ರಂಥಸೂಚಿಯೆಂಬ ಅನಾದರವೂ ಇರಬಹುದು. ಹೊಸದಾಗಿ ಜಾನಪದದಲ್ಲಿ ಅಧ್ಯಯನ ಮಡುವವರಿಗಂತೂ ಇದು ಹೆಚ್ಚು ಉಪಕಾರಿಯಾಗಿದೆ . ಈ ಪುಸ್ತಕವನ್ನು ಸಿದ್ದಪಡಿಸಲು ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದ ರಾಜೇಶ್ವರಿ ಆರ್.ಕಮ್ಮಾರ್, ಸುಜಾತ ಎಸ್.ಪಿ, ಶೋಭ ಹೂಲಿಕಟ್ಟಿ, ಗೌರೀಶ್ ವಿ.ಪಾಟ್ನೆ, ಶಿವಾಜಿ ಕಾಂಬಳೆ, ಲೀನಾ ಎಸ್. ನಾಯ್ಕ ಇವರ ಶ್ರಮ ನಿಜಕ್ಕೂ ಮೆಚ್ಚುವಂತದ್ದು. ಇಲ್ಲಿ ಹೆಚ್ಚಾಗಿ ಪುಸ್ತಕ ಪರಿಚಯಕ್ಕೆ ಮೂಲ ಕೃತಿಗಳನ್ನು ಅವಲಂಬಿಸಿರುವುದಾಗಿ ಸಂಪಾದಕರು ಹೇಳಿಕೊಂಡಿದ್ದಾರೆ. ಇದು ಮೆಚ್ಚುವಂತಹ ವಿಷಯ. ಹಾಗೆಯೇ ಪ್ರಕಟಿತ ಕೃತಿಗಳಷ್ಟೇ ಅಲ್ಲದೆ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಅಪ್ರಕಟಿತ ಜಾನಪದ ಪಿಹೆಚ್.ಡಿ ಮತ್ತು ಎಂಫಿಲ್ ಸಂಶೋಧನ ಪ್ರಬಂಧಗಳನ್ನೂ ಒಳಗೊಂಡಿರುವುದು ಸೂಕ್ತವಾಗಿದೆ. ಮುಖ್ಯವಾಗಿ ಇಷ್ಟು ಜಾನಪದ ಕೃತಿಗಳನ್ನು ಅವಲೋಕಿಸಿ ಒಟ್ಟು ಕನ್ನಡ ಜಾನಪದ ಅಧ್ಯಯನಗಳನ್ನು ಕುರಿತು ಉತ್ತಮ ಒಳನೋಟವನ್ನು ಕೊಡಬಲ್ಲ ಪ್ರಸ್ಥಾವನೆಯನ್ನು ಬರೆಯುವ ಅಗತ್ಯವಿತ್ತು. ಆದರೆ ಈ ವಿಷಯದಲ್ಲಿ ಸಂಪಾದಕರು ಸೋತಿದ್ದಾರೆ. ಅಂತೆಯೇ ಕೆಲವೊಮ್ಮೆ ಹೀಗೆ ಜಾನಪದಕ್ಕೆ ಮಾತ್ರ ಮೀಸಲಾದ ಪುಸ್ತಕಗಳನ್ನು ಗೆರೆಕೊರೆದಂತೆ ವರ್ಗೀಕರಿಸಿ ವಿಭಾಗಿಸುವುದು ಅಪಾಯಕರವೆ. ಕಾರಣ ಜಾನಪದವಲ್ಲದ ಕೃತಿಗಳಲ್ಲೂ ಜಾನಪದದ ಬಗ್ಗೆ ಮಹತ್ವದ ಒಳನೋಟಗಳು ಇರಲಿಕ್ಕೆ ಸಾಧ್ಯವಿದೆ. ಡಿ.ಆರ್. ನಾಗರಾಜ್ ಅವರ ಕೃತಿಗಳು ಸಾಹಿತ್ಯ ವಿಮರ್ಶೆಯೇ ಆಗಿದ್ದರೂ ಅವರ ಒಟ್ಟೂ ಚಿಂತನೆ ದೇಶಿ ಆಲೋಚನೆಯನ್ನು ಕಟ್ಟುವುದಾಗಿತ್ತು. ಹಾಗೆಯೇ ಶಂಬಾ ಜೋಷಿಯವರ ಚಿಂತನೆ, ಕೆವಿಎನ್ ಬರೆಹ , ರಹಮತ್ ತರೀಕೆರೆಯವರ ಸಾಂಸ್ಕೃತಿಕ ಅಧ್ಯಯನಗಳನ್ನು ಉಲ್ಲೇಖಿಸಬಹುದು. ಇಂತಹ ಸಂದರ್ಬದಲ್ಲಿ ಕೃತಿ ಸೂಚಿಯ ಜೊತೆಗೇ ಬಿಡಿ ಬಿಡಿಯಾದ ಲೇಖನ ಸೂಚಿಯ ಅಗತ್ಯವೂ ಇದೆ. ಇಂತಹ ಕೆಲವು ಮಿತಿಗಳ ನಡುವೆ, ಜಾನಪದ ಅಭ್ಯಾಸಿಗಳಿಗೊಂದು ಉಪಯುಕ್ತ ಆಕರವಾಗಿದೆ. ೨೦೦೪ ರ ನಂತರದ ಜಾನಪದ ಪ್ರಕಟಣೆಗಳನ್ನು ಒಳಗೊಂಡು ಈ ಕೃತಿ ಮರು ಮುದ್ರಣವಾಗುವ ಅಗತ್ಯವಿದೆ. ಅಥವಾ ಈ ಪುಸ್ತಕದ ಮುಂದುವರಿದ ಭಾಗವೆಂತಾದರೂ ಪ್ರಕಟವಾಗಬೇಕಾಗಿದೆ.

ಸೋಮವಾರ, ಅಕ್ಟೋಬರ್ 11, 2010

ಜೋಗತಿ ಕಲೆಗೆ ಹೊಸ ಮೆರಗು ತಂದ ಮಂಜಮ್ಮ ಜೋಗತಿ

ಜನಪದ ಕಲೆಗಳನ್ನು ಅಭಿವ್ಯಕ್ತಿಸುವವರ ಜಾತಿ, ವರ್ಗ, ಲಿಂಗವನ್ನು ಆಧರಿಸಿ ಆಯಾ ಜನಪದ ಕಲೆಗಳಿಗೆ ಸಾಮಾಜಿಕ ದೃಷ್ಟಿಕೋನವೊಂದು ರೂಪುಗೊಳ್ಳುತ್ತದೆ. ಹಾಗಾಗಿ ಜನಪದ ಕಲೆಗಳನ್ನು ನೋಡುವ ಕ್ರಮದಲ್ಲೂ ಶ್ರೇಣಿಕರಣದ ಬಾವನೆಗಳು ಬೆರೆತಿವೆ. ಹಾಗೆ ಅಸ್ಪ್ರಶ್ಯ ಕಲೆಯಂತೆ ನೋಡುವ ಕಲೆಗಳಲ್ಲಿ ಜೋಗತಿ ಕಲೆಯೂ ಒಂದು. ಕೆಲವೊಮ್ಮೆ ಆಯಾ ಕಲೆಯನ್ನು ಅಭಿವ್ಯಕ್ತಿಸುವ ಕಲಾವಿದರು ತಮ್ಮ ಕಲೆಯಿಂದಾಗಿಯೇ ಆಯಾ ಕಲೆಯ ನೋಡುವ ಕ್ರಮವನ್ನು ಬದಲಿಸುವ ಸಾಧ್ಯತೆಗಳೂ ಇವೆ. ಯಡ್ರಾಮನಹಳ್ಳಿ ದೊಡ್ಡಬರಮಪ್ಪರಿಂದ ತೊಗಲುಗೊಂಬೆ ಕಲೆ, ಈರಮ್ಮನಿಂದ ಬುರ್ರಕಥಾ ಕಲೆಯನ್ನು ನೋಡುವ ಕ್ರಮದಲ್ಲಾದ ಬದಲಾವಣೆಗಳನ್ನು ಗಮನಿಸಬಹುದು. ಹಾಗೆ ನೋಡುವುದಾದರೆ ಅಷ್ಟೇನೂ ಗೌರವಯುತವಲ್ಲದ ಜನಪದ ಕಲೆಗಳಲ್ಲಿ ಜೋಗತಿ ಕಲೆಯೂ ಒಂದು. ಕಾರಣ ಈ ಕಲೆಯನ್ನು ಅಭಿವ್ಯಕ್ತಿಸುವವರು ಬಹುಪಾಲು ಗಂಡು ಜೋಗತಿಯರು (ಮಂಗಳಮುಖಿಯರು). ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕದಲ್ಲಿ ಹುಡುಗನಲ್ಲಿ ಹಾರ್ಮೋನ್ಸ್ ಉತ್ಪತ್ತಿಯಲ್ಲಾದ ಜೈವಿಕ ವ್ಯತ್ಯಯಗಳಾಗಿ ಹುಡುಗಿಯ ಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ಯಲ್ಲಮ್ಮನ ಪವಾಡ ಎಂದು ಭಾವಿಸಿ ಅಂತವರಿಗೆ ಯಲ್ಲಮ್ಮ ಅಥವಾ ಉಚ್ಚಂಗಮ್ಮ ದೇವಿಯ ಮುತ್ತುಕಟ್ಟಿಸಿ ಸೀರೆ ಉಡುಸಿ ಜೋಗತಿಯರನ್ನಾಗಿ ಮಾಡಲಾಗುತ್ತ್ತದೆ. ಇದರಲ್ಲಿ ಹೆಣ್ಣುಮಕ್ಕಳೂ ಮುತ್ತುಕಟ್ಟಿಸಿಕೊಂಡು ಜೋಗತಿಯಾಗುವ ಕ್ರಮವೂ ಇದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಇಂತಹ ಜೋಗತಿಯರ ಸಂಖ್ಯೆ ದೊಡ್ಡದು. ಇವರುಗಳು ಯಲ್ಲಮ್ಮನ ಹಾಡು ಹೇಳುತ್ತಾ, ಜಮದಗ್ನಿ ಋಷಿ ಮತ್ತು ಯಲ್ಲಮ್ಮನ ಜೀವನ ವೃತ್ತಾಂತನ್ನು ನಾಟಕ ಮಾಡುತ್ತಾ, ಚೌಟಕಿ ಬಾರಿಸುತ್ತಾ ಊರೂರು ಅಲೆದು ಭಿಕ್ಷೆ ಬೇಡುತ್ತಾರೆ. ಇಂತಹ ಜೋಗತಿ ಕಲೆಗೆ ಒಂದು ಗೌರವದ ಸ್ಥಾನ ತಂದವರಲ್ಲಿ ಕಾಳಮ್ಮ ಜೋಗತಿ ಮೊದಲಿಗರು. ಜೋಗತಿ ಕಲೆಗೆ ಜಾನಪದಶ್ರೀ ಪ್ರಶಸ್ತಿ ಪಡೆದ ಮೊದಲ ಜೋಗತಿಯೂ ಕೂಡ. ಕಾಳಮ್ಮನ ಶಿಷ್ಯೆ ಮಂಜಮ್ಮ ಜೋಗತಿ ಸಧ್ಯ ಜೋಗತಿ ಕಲೆಗೆ ಹೂಸ ಆಯಾಮವನ್ನು ನೀಡುತ್ತಿದ್ದಾರೆ. ಕರ್ನಾಟಕದಾಧ್ಯಂತ ಹಲವಾರು ಕಡೆಗಳಲ್ಲಿ ಮಂಜಮ್ಮ ಜೋಗತಿ ಕಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರೊಂದಿಗೆ ಒಂದು ದೊಡ್ಡ ತಂಡವೇ ಇದೆ. ಕಲೆಯನ್ನೇ ನಂಬಿ ಈ ತಂಡ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪುಟ್ಟದಾದ ಆಶ್ರಯ ಮನೆಯಲ್ಲಿ ವಾಸಿಸುತ್ತಿದೆ. ಗಂಡು ಜೋಗತಿಯರೆಂದರೆ ಮೂಗು ಮುರಿಯುವ ಮನಸ್ಥಿಯನ್ನು ಬದಲಾಯಿಸಿ ಗಂಡು ಜೋಗತಿಯರೂ ಕೂಡ ಕಲಾವಿದರು ಎನ್ನುವ ಹೊನ ನಂಬಿಕೆಯನ್ನು ಬಳ್ಳಾರಿ ಜಿಲ್ಲೆಯಾದ್ಯಾಂತ ಹುಟ್ಟಿಸುವತ್ತ ಮಂಜಮ್ಮನ ತಂಡ ಕ್ರಿಯಾಶೀಲವಾಗಿದೆ. ಅದೀಗ ರಾಜ್ಯವ್ಯಾಯೂ ಆಗಲಿದೆ. ಜೋಗತಿ ಕಲೆಯನ್ನು ಈ ಕಾಲಕ್ಕೆ ಅನ್ವಯಿಸಿ ಹೊಸ ರೂಪ ನೀಡಿ ಪ್ರದರ್ಶನ ನೀಡುವುದು ಮಂಜಮ್ಮನ ಹೊಸ ಸಾಧ್ಯತೆ. ಇದನ್ನು ಗುರುತಿಸಿ ಮಂಜಮ್ಮನಿಗೆ ಜಾನಪದ ಅಕಾಡೆಮಿ ಜಾನಪದಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸರಕಾರ ಆಯೋಜಿಸುವ ಜಾನಪದ ಜಾತ್ರೆಗಳಲ್ಲಿ ಮಂಜಮ್ಮನ ಜೋಗತಿ ಕಲೆ ತುಂಬಾ ಆಕರ್ಷಕವಾಗಿದೆ. ಇಷ್ಟೇ ಅಲ್ಲದೆ ಮಂಜಮ್ಮ ಕರ್ನಾಟಕದ ಜೋಗತಿ ಕಲೆಯನ್ನು ಮಹರಾಷ್ಟ್ರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಅವರಿಂದ ಗುರುತಿಸ್ಪಟ್ಟು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಅನೇಕರಿಗೆ ಜೋಗತಿ ಕಲೆಯ ತರಬೇತಿಯನ್ನು ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಜನಪದ ಕಲೆಗಳ ಹೊಸ ರೂಪಾಂತರಗಳನ್ನು ಗುರುತಿಸುವ ಮತ್ತು ಅವುಗಳ ಹೊಸ ಬಗೆಯ ರಾಜಕಾರಣವನ್ನು ಅರಿತುಕೊಳ್ಳುವ ಅಧ್ಯಯನಗಳು ನಡೆಯುತ್ತಿಲ್ಲ. ಮಂಜಮ್ಮ ಜೋಗತಿ ಕಲೆಯಲ್ಲಿ ಮಾಡಿರುವ ರೂಪಾಂತರಗಳನ್ನು ನೋಡಿದರೆ, ಅವು ಎಲ್ಲಿಯೂ ದಾಖಲಾಗಿಲ್ಲದಿರುವುದು ಕಂಡುಬರುತ್ತದೆ. ಅಂತಹ ಪ್ರಯತ್ನಗಳು ಈಗಷ್ಟೇ ನಡೆಯಬೇಕಿದೆ. ಮಂಜು ಮಂಜಮ್ಮನಾದ ಕಥಾನಕ ನಿಜಕ್ಕೂ ಹೊಸ ಅನುಭವ ಲೋಕವನ್ನು ತೆರೆದಿಡುತ್ತದೆ. ಅವರ ಬದುಕಿನ ಕಥನ ‘ನಡುವೆ ಸುಳಿವಾತ್ಮ’ ಪುಸ್ತಕ ರೂಪದಲ್ಲಿ ಸಿದ್ದಗೊಳ್ಳುತ್ತಿದೆ. ಮೇಲಿನ ಚಿತ್ರಗಳು ಮಂಜಮ್ಮ ಮತ್ತು ಅವರ ತಂಡದ ಕೆಲವು ಕ್ಷಣಗಳು.

ಗುರುವಾರ, ಅಕ್ಟೋಬರ್ 7, 2010

ಜಾನಪದ ವಿ.ವಿ ದೊಡ್ಡ ಮ್ಯೂಜಿಯಂ ಆಗದಿರಲಿ.

******* ಎಪ್ಪತ್ತರ ದಶಕದಿಂದಲೆ ಜೀಶಂಪ ಮೊದಲಾದವರಿಂದ ಹುಟ್ಟಿದ ಜಾನಪದ ವಿವಿ ಕನಸು ಸದ್ಯಕ್ಕೆ ನನಸಾಗಿದೆ. ಇದಕ್ಕಾಗಿ ಜಾನಪದ ಅಕಾಡೆಮಿಯ ಅದ್ಯಕ್ಷರಾದ ಗೊ.ರು.ಚ ಮೊದಲಾದ ಹಿರಿಯರು ಅವಿರತವಾಗಿ ಶ್ರಮಿಸಿದ್ದಾರೆ. ಈಗ ವಿಶೇಷ ಅಧಿಕಾರಿ0ುನ್ನು ನೇಮಕ ಮಾಡಿ ವಿವಿಗೆ ಚಾಲನೆ ನೀಡಲಾಗಿದೆ. ಈ ಹೊತ್ತಲ್ಲಿ ಹಿರಿ0ು ಜಾನಪದ ವಿದ್ವಾಂಸರು ವಿವಿ0ು ಸ್ವರೂಪದ ಬಗೆಗೆ ಹಲವು ವಿನ್ಯಾಸಗಳನ್ನು ಸೂಚಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ಮಹತ್ವದ ಒಳನೋಟಗಳೂ ಇವೆ. ಆದರೆ ಬಹುಪಾಲು ಅಭಿಪ್ರಾಯಗಳನ್ನು ನೋಡಿದರೆ ಜಾನಪದ ವಿವಿ0ುನ್ನು ದೊಡ್ಡದೊಂದು ಮ್ಯೂಜಿ0ುಂ ಮಾಡುವಂತೆ ಕಾಣುತ್ತಿದೆ. ಜಾನಪದ ಕ್ಷೇತ್ರಕ್ಕೆ ಹೊಸ ತಲೆಮಾರಿನ ಸಂಶೋಧಕರು ಹೆಚ್ಚಾಗಿ ಬರದಿರುವುದರಿಂದ ಹಿರಿಯ ಜಾನಪದ ವಿದ್ವಾಂಸರೆ ವಿವಿಯನ್ನು ಕಟ್ಟುವ ಬಗ್ಗೆ ಚಚರ್ೆ ಮಾಡುತ್ತಿರುವುದು ಅನಿವಾರ್ಯವೂ ಆಗಿದೆ. ಇದು ಜಾನಪದದ ಬಗ್ಗೆ ಹೊಸ ಆಲೋಚನೆಗಳನ್ನು ಇರಿಸಿಕೊಂಡ ಕೆಲವಾದರೂ ಹೊಸ ತಲೆಮಾರಿನ ಜಾನಪದ ವಿದ್ವಾಂಸರಿಗೆ ಆತಂಕದಂತೆ ಕಾಣುತ್ತಿದೆ. ಕನರ್ಾಟಕದಲ್ಲಿ ಜಾನಪದದ ಬಗ್ಗೆ ಅಪಾರ ಕೆಲಸ ನಡೆದಿದೆ. ನಡೆ0ುಬೇಕಾದುದು ಇನ್ನೂ ಬಹಳಷ್ಟಿದೆ. ಅದು ನಿರಂತರವಾಗಿ ಆಗಬೇಕಾದುದು. ಆ ಕಾರಣಕ್ಕೆ ಜಾನಪದ ವಿವಿ0ೊಂದರ ಅಗತ್ಯವಿತ್ತು. ಮೂಲಗಳ ಪ್ರಕಾರ ಜಾನಪದಕ್ಕಾಗಿ ಪ್ರತ್ಯೇಕ ವಿವಿ0ುು ಬೇರೆಲ್ಲಿ0ುೂ ಇಲ್ಲ, ಅದು ಕನರ್ಾಟಕದಲ್ಲಿ ಆಗಿರುವುದು ಚಾರಿತ್ರಿಕವಾಗಿ ಮುಖ್ಯ ಘಟನೆ. ಹಾಗಾಗಿ ಅಂತಹ ಜಾನಪದ ವಿವಿ0ುನ್ನು ತುಂಬಾ ವೈಜ್ಞಾನಿಕವಾಗಿ, ಸೂಕ್ಷ್ಮವಾಗಿ ರೂಪಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಈ ವಿವಿ0ುನ್ನು ದೂರದೃಷ್ಠಿಯಿಲ್ಲದೆ ರೂಪಿಸಿದ್ದಾದರೆ ಕನರ್ಾಟಕದ ಇತರ ವಿವಿಗಳಂತೆ0ೆು ಇದು ಒಂದು ಕಾಲಕ್ಕೆ ಜಡಗೊಂಡು ಸ್ಥಾವರವಾಗುವಲ್ಲಿ 0ಾವುದೇ ಅನುಮಾನವಿಲ್ಲ. ಕನರ್ಾಟಕದಲ್ಲಿ ನಡೆದ ಜಾನಪದ ಅಧ್ಯ0ುನಗಳು ಬಹುಪಾಲು ಸಂಗ್ರಹ ಮಾದರಿ0ುವು. ವಿಶ್ಲೇಷಣೆ0ು ದೃಷ್ಟಿಯಿಂದ ಅವು ಬಹುಪಾಲು ಅಸೂಕ್ಷ್ಮವಾದವುಗಳು. ಅವುಗಳು ಮಾಹಿತಿ ಸಂಗ್ರಹಣೆ0ುಲ್ಲೇ ಹೆಚ್ಚಿನ ಸಾಧನೆ ಮಾಡಿವೆ. ಅದು ಆರಂಭಿಕ ಕಾಲಘಟ್ಟದ ಅನಿವಾ0ರ್ುವೂ ಆಗಿತ್ತು. ಹಾಗಾಗಿ ಹಿರಿಯ ಜಾನಪದ ವಿದ್ವಾಂಸರನ್ನು ಗೌರವಿಸಬೇಕಿದೆ. ಬೆರಳೆಣಿಕೆ0ು ಕೆಲವು ವಿದ್ವಾಂಸರನ್ನು ಹೊರತುಪಡಿಸಿದರೆ ಬಹುಪಾಲು ಜಾನಪದ ವಿದ್ವಾಂಸರು ಜಾನಪದ ಎಂದರೆ ಮಾಹಿತಿ ಸಂಗ್ರಹ ಎನ್ನುವ ನಂಬಿಕೆಯಲ್ಲಿ ವಿಶ್ವಾಸವಿರಿಸಿದ್ದಾರೆ. ಹಾಗಾಗಿ ಇದೇ ಧೋರಣೆ ಜಾನಪದ ವಿವಿ ನಿಮರ್ಾಣದಲ್ಲೂ ಕೆಲಸ ಮಾಡುವ ಸಾದ್ಯತೆಯಿದೆ. ಹಾಗಾದಲ್ಲಿ ಕನರ್ಾಟಕದ ಜಾನಪದ ವಿದ್ವತ್ತಿನ ಮಿತಿ ಜಾನಪದ ವಿವಿ0ು ಮಿತಿ0ಾಗುತ್ತದೆ0ುಷ್ಟೆ. ನಮ್ಮ ಕಾಲಕ್ಕೆ ಹೊಂದಿಕೆ0ೆು ಆಗದ ಬಹುಪಾಲು ಜಾನಪದ ಕುರಿತ ವ್ಯಾಖ್ಯಾನಗಳು ಸಿದ್ಧಾಂತಗಳು ಈಗಲೂ ನಿ0ುಂತ್ರಿಸುತ್ತಿವೆ. ಅಷ್ಟಕ್ಕೂ ನಮ್ಮ ನಿತ್ಯದ ಬದುಕಿನ ಒಡಲೊಳಗಿಂದ ಹುಟ್ಟುವ ಜಾನಪದವನ್ನು ವಿವರಿಸಿಕೊಳ್ಳಲು ಪಾಶ್ಚ್ಯತ್ಯ ಜಾನಪದ ವ್ಯಾಖ್ಯಾನಗಳಿಗೆ ಮೊರೆ ಹೋಗುತ್ತಿರುವುದೊಂದು ವಿಪ0ರ್ಾಸ. ಜಾನಪದ ಎನ್ನುವುದು ನಿತ್ಯದ ಬದುಕಿನ ಒಡಲೊಳಗಿಂದಲೇ ರೂಪಾಂತರವನ್ನು ಪಡೆ0ುುತ್ತದೆ. ಆದರೆ ಈ ರೂಪಾಂತರ ಜಾನಪದ ವ್ಯಾಖ್ಯಾನಗಳ ಚೌಕಟ್ಟಿಗೆ ಹೊಂದುವುದಿಲ್ಲ. ಅಥವಾ ಹೊಸತನ್ನು ಗುರುತಿಸಲು ಜಾನಪದದ ಹಳೆ ವ್ಯಾಖ್ಯಾನಗಳಿಗೆ ಧಾರಣ ಶಕ್ತಿ ಸಾಲದು. ಹಾಗಾಗಿ ನಮ್ಮ ಕಾಲದ ಜಾನಪದವನ್ನು ವಿವರಿಸಿಕೊಳ್ಳಲು ನಮ್ಮ ಕಾಲದ ಒಳಗಿಂದಲೇ ಹೊಸ ದೃಷ್ಠಿಕೋನಗಳು ಹೊಸ ಕಾಣ್ಕೆಗಳು ಸಿದ್ದಗೊಳ್ಳಬೇಕಿದೆ. ಅಂತಹ ಕಾಣ್ಕೆಗಳು ಕನ್ನಡ ಜಾನಪದ ವಿದ್ವತ್ತಿನಲ್ಲಿ ಹೆಚ್ಚಾಗಿ ಕಾಣುತ್ತಿಲ್ಲ ಎನ್ನುವುದನ್ನು ಮನಗಾಣಬೇಕು. ಜಾನಪದದ ನಿಜವಾದ ವಿದ್ವತ್ತು ಶೈಕ್ಷಣಿಕವಾಗಿ ಪಠ್ಯದ ವಿಷಯವಾಗಿ ಜಾನಪದವನ್ನು ಕಲಿತ ವಿದ್ವಾಂಸರಲ್ಲಿಲ್ಲದೆ, ಜಾನಪದ ಕಲಾವಿದರಲ್ಲಿದೆ. ಹಾಗಾಗಿ ಅಪಾರ ದೇಸಿ ಜ್ಞಾನವಿರುವ ಕಲಾವಿದರನ್ನು ವಿದ್ವಾಂಸರನ್ನಾಗಿ ಗೌರವಿಸುವ ಹೊಸ ಮೌಲ್ಯ ಜಾನಪದ ವಿವಿಯಲ್ಲಿ ಮೊಳೆಯಬೇಕಿದೆ. ಈ ಮೇಲಿನ ಎಲ್ಲಾ ಎಚ್ಚರಗಳನ್ನು ಗಮನದಲ್ಲಿರಿಸಿಕೊಂಡೇ ಜಾನಪದ ವಿವಿ0ುನ್ನು ರೂಪಿಸಬೇಕಾಗಿದೆ. ಇಂದು ಬಹು ಶಿಸ್ತೀ0ು ಸಾಂಸ್ಕೃತಿಕ ಅಧ್ಯ0ುನದ ಮಾದರಿಗಳು ಹೆಚ್ಚು ಪ್ರಸ್ತುತ ಅನ್ನಿಸುತ್ತಿವೆ. ಈ ಮಾದರಿ0ುನ್ನು ಗಮನಿಸಿಯೇ ಜಾನಪದ ವಿವಿ0ು ತಾತ್ವಿಕ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಬೇಕಿದೆ. ಸದ್ಯಕ್ಕೆ ವಿಶ್ವವಿದ್ಯಾಲ0ುಗಳಲ್ಲಿರುವ ಜಾನಪದ ವಿಭಾಗಗಳು, ಜಾನಪದ ಅಕಾಡಮಿ, ರಾಮನಗರದ ಜಾನಪದ ಲೋಕ, ಉಡುಪಿ0ು ಆರ್. ಆರ್. ಸಿ ಮುಂತಾದವುಗಳು ಜಾನಪದ ವಿವಿಗೆ ಒಳ್ಳೆ0ು ಮಾದರಿಗಳಾಗಲಾರವು. ಕಾರಣ ಈ ಮೇಲೆ ಹೇಳಿದ ಮಿತಿಗಳೇ ಇವುಗಳಲ್ಲಿ ಢಾಳಾಗಿ ಕಾಣುತ್ತಿವೆ. ಕನರ್ಾಟಕ ವಿವಿ 0ುು ಪ್ರತಿ ವರ್ಷ ಆ0ೋಜಿಸುವ ಜಾನಪದ ಸಮ್ಮೇಳನಗಳು ಹೊಸ ವಾಗ್ವಾದಗಳನ್ನು ಹುಟ್ಟುಹಾಕಲಿಲ್ಲವಾದರೂ ಹೊಸ ಶಾಖೆಗಳ ಬಗ್ಗೆ ಗಮನಸೆಳೆದಿವೆ. ಇದೇ ಮಾತು ಹಂಪಿ ಕನ್ನಡ ವಿಶ್ವವಿದ್ಯಾಲ0ು ಆ0ೋಜಿಸುವ ದೇಶಿ ಸಮ್ಮೇಳನಕ್ಕೂ ಅನ್ವ0ುವಾಗುತ್ತದೆ. ಹಾಗಾಗಿ ಈಗಾಗಲೇ ಇತರೆ ವಿವಿಗಳ ಜಾನಪದ ವಿಭಾಗದ ಅಧ್ಯಾಪಕರನ್ನೆ ಜಾನಪದ ವಿವಿಗೆ ನೇಮಕ ಮಾಡದಿರುವುದು ಸೂಕ್ತ. ಜಾನಪದವನ್ನು ಮುಖ್ಯ ಶಿಸ್ತಾಗಿ ಸ್ನಾತಕೋತ್ತರ ಪದವಿ ಪಡೆದು ಜಾನಪದದಲ್ಲಿ ಸಂಶೋಧನೆ ಮಾಡಿದ ಕೆಲವಾದರೂ ಹೊಸ ತಲೆಮಾರಿನ ಯುವ ಜಾನಪದ ವಿದ್ವಾಂಸರಿಗೆ ವಿವಿ ಅವಕಾಶ ಕಲ್ಪಿಸಿದ್ದಾದರೆ, ಹೊಸತೇನನ್ನಾದರೂ ಕಟ್ಟಲು ಸಾಧ್ಯವಿದೆ. ಹಿರಿ0ು ಜಾನಪದ ವಿದ್ವಾಂಸರು ಸೂಚಿಸಿದಂತೆ ಈಗ ಲಭ್ಯವಿರುವ ಎಲ್ಲಾ ಜನಪದ ಕಲೆಗಳನ್ನು ಆಡಿ0ೋ ವೀಡಿ0ೋ ವ್ಯವಸ್ಥಿತ ದಾಖಲೀಕರಣ ಆಗಬೇಕಿದೆ. ಸಂಗ್ರಹಿಸಲು ಸಾದ್ಯವಿರುವುದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕಿದೆ. ಜಾನಪದ ವಸ್ತು ಸಾಮಗ್ರಿ0ುನ್ನು ರಕ್ಷಿಸಿಡುವ ಕೆಲಸವೂ ಆಗಬೇಕಿದೆ. ಆದರೆ ಅದು ಜಾನಪದ ವಿವಿ0ು ಆಂಶಿಕ ಭಾಗವಾಗಬೇಕೆ ವಿನಃ ಅದೇ ಪ್ರಧಾನವಾಗಬಾರದು. ಕಾರಣ ಜಾನಪದದ ಹೊಸ ನಡಿಗೆ0ುನ್ನು ಗುರುತಿಸಬೇಕು. ಸದ್ಯಕ್ಕೆ ರೂಪುಗೊಳ್ಳುತ್ತಿರುವ ನವ ಮೌಖಿಕತೆಯನ್ನು ಗುರುತಿಸುವಂತಾಗಬೇಕು, ವೈದಿಕ ಆಲೋಚನ ವಿನ್ಯಾಸಗಳನ್ನು ಮುರಿದು ಅವೈದಿಕ ಆಲೋಚನ ವಿನ್ಯಾಸಗಳನ್ನು ಹೊಸತಾಗಿ ಕಟ್ಟಬೇಕಿದೆ. ಸದ್ಯದ ಕನರ್ಾಟಕದಲ್ಲಿ ಹಿಂದೂ ಮೂಲಭೂತವಾದಿ ಆಲೋಚನ ವಿನ್ಯಾಸಗಳು ಗಟ್ಟಿ0ಾಗುತ್ತಿವೆ. ಈ ಒಟ್ಟು ಆಲೋಚನೆ0ುನ್ನೇ ಆಮೂಲಾಗ್ರವಾಗಿ ಬದಲಾಯಿಸಿ ದೇಸಿ ಚಿಂತನೆ0ು ಬೇರುಗಳು ಬಲವಾಗುವಂತೆ ನೀರು ಗೊಬ್ಬರ ಹಾಕುವ ಮಹತ್ವದ ಜವಾಬ್ದಾರಿ ಜಾನಪದ ವಿವಿ0ು ಮೇಲಿದೆ. ದೇಸಿ ಚಿಂತನೆ0ುನ್ನು ಗಟ್ಟಿ0ಾದ ಕನ್ನಡದ ಆಲೋಚನ ಮಾದರಿ0ಾಗಿ ರೂಪಿಸುವಲ್ಲಿ ಜಾನಪದ ವಿವಿ0ುು ದೊಡ್ಡ ಸವಾಲನ್ನು ಮೈಮೇಲೆ ಎಳೆದುಕೊಳ್ಳಬೇಕಿದೆ. ಇದಕ್ಕೆ ಹಂಪಿ ವಿವಿ0ುಲ್ಲಿ ರೂಪುಗೊಂಡ ದೇಸಿ ಚಿಂತನೆಯನ್ನು ಮಾದರಿ0ಾಗಿಟ್ಟುಕೊಳ್ಳಬಹುದು. ಆನ್ವಯಿಕ ಜಾನಪದದ ಆಲೋಚನೆ ಕನ್ನಡದಲ್ಲಿ ಗಟ್ಟಿ0ಾಗಿ ನೆಲೆಗೊಳ್ಳಬೇಕಾಗಿದೆ. ಈತನಕ ನಾವು ಜಾನಪದದಿಂದ ಜ್ಞಾನವನ್ನು ಪಡೆದದ್ದೇ ಆಗಿದೆ ಬದಲಾಗಿ ನಾವು ಸಾಹಿತ್ಯಿಕವಾಗಿ ಪಡೆದ 0ಾವುದೇ ಜ್ಞಾನ ಪರಂಪರೆ0ುನ್ನು ಜಾನಪದ ಲೋಕಕ್ಕೆ ಹಾಯಿಸಲಿಲ್ಲ. ಹಾಗಾಗಿ ಜನಪದರಲ್ಲಿ ಶೇಕ್ಸಪಿ0ುರ್, ಕುವೆಂಪುರಂತವರ ಒಂದು ನಾಟಕವೂ ಪುನರ್ಸೃಷ್ಠಿ0ಾಗಲಿಲ್ಲ. ಈ ಕುರಿತು ಹೊಸ ಆಲೋಚನೆ0ುನ್ನೇ ಹುಟ್ಟುಹಾಕುವ ಸಾದ್ಯತೆ ಇದೆ. ಇಂತಹ ಹೊಸ ಆಲೋಚನೆ0ು ತುಡಿತ ಇರುವ ಕೆಲವರನ್ನಾದರೂ ಜಾನಪದ ವಿವಿಗೆ ಆ0ೆ್ಕು0ಾದದ್ದಾದರೆ ಅಲ್ಲಿ ಹೊಸತೇನನ್ನಾದರೂ ಕಟ್ಟಲು ಸಾದ್ಯವಿದೆ.

ಕರ್ನಾಟಕದ ಜಾನಪದ ಜಗತ್ತಿನ ಹೊಸ ಪ್ರಕ್ರಿಯೆಗಳನ್ನು ಗುರುತಿಸುವ ಪ್ರಯತ್ನವೇ ಕನ್ನಡ ಜಾನಪದ ಬ್ಲಾಗ್.

ಇದು ಕನ್ನಡ ಜಾನಪದ ಕುರಿತ ಚಿಂತನೆ, ಚರ್ಚೆ ಸಂವಾದಕ್ಕಾಗಿರುವ ಒಂದು ತಾಣ. ಇಲ್ಲಿ ನಮ್ಮ ಕಾಲದಲ್ಲಿ ಹುಟ್ಟುವ ಹೊಸ ಜಾನಪದವನ್ನು ಗುರುತಿಸಲು ಪ್ರಯತ್ನಿಸಲಾಗುವುದು. ಜಾನಪದ ಅಂದರೆ ಅದು ಹಳ್ಳಿಯದು, ಅನಕ್ಷರಸ್ತರದು ಮುಂತಾದ ಸೀಮಿತ ವ್ಯಾಖ್ಯಾನಗಳನ್ನು ಬಿಟ್ಟು ಕೊಟ್ಟು ಅದು ನಿರಂತರ ಕ್ರಿಯಾಶೀಲವಾಗಿರುತ್ತದೆ ಎನ್ನುವ ನಂಬಿಕೆ ಇಲ್ಲಿ ಮುಖ್ಯವಾಗಿದೆ. ಹೊಸ ಕಾಲದ ಜತೆ ಜಾನಪದ ಹೊಸ ರೂಪದಲ್ಲಿ ಜೀವತಳೆಯುತ್ತಿರುತ್ತದೆ. ಅದನ್ನು ಗುರುತಿಸುವ ಮನಸ್ಸು ಈ ಕಾಲದ್ದಾಗಿರಬೇಕಷ್ಟೆ. ಹಾಗಾಗಿ ಕರ್ನಾಟಕದ ಜಾನಪದ ಜಗತ್ತಿನ ಹೊಸ ಪ್ರಕ್ರಿಯೆಗಳನ್ನು ಗುರುತಿಸುವ ಪ್ರಯತ್ನವೇ ಕನ್ನಡ ಜಾನಪದ ಬ್ಲಾಗ್. ಡಾ.ಅರುಣ್ ಜೋಳದ ಕೂಡ್ಲಿಗಿ